ಭಾರತೀಯ ರಿಸರ್ವ್ ಬ್ಯಾಂಕ್

Coordinates: 18°55′58″N 72°50′13″E / 18.932679°N 72.836933°E / 18.932679; 72.836933
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ರಿಸರ್ವ್ ಬ್ಯಾಂಕ್
Seal of the Reserve Bank of India
ಆರ್‌ಬಿಐನ ಮುದ್ರೆ
ಪ್ರಧಾನ ಕಚೇರಿಮುಂಬೈ, ಮಹಾರಾಷ್ಟ್ರ, ಭಾರತ
ಅಕ್ಷಾಂಶ ರೇಖಾಂಶ18°55′58″N 72°50′13″E / 18.932679°N 72.836933°E / 18.932679; 72.836933
ಸ್ಥಾಪಿಸಲಾಯಿತು1 ಏಪ್ರಿಲ್ 1935; 32487 ದಿನ ಗಳ ಹಿಂದೆ (1935-೦೪-01)
ಮಾಲೀಕತ್ವ೧೦೦% ಸರಕಾರಿ ಮಾಲಿಕತ್ವ[೧]
ಗವರ್ನರ್ಶಕ್ತಿಕಾಂತ್ ದಾಸ್[೨]
ಕೇಂದ್ರ ಬ್ಯಾಂಕ್ ಭಾರತ
ಚಲಾವಣೆಯ ನಾಣ್ಯಭಾರತದ ರೂಪಾಯಿ (₹)
ಮೀಸಲು೩೬,೧೨,೬೪೧ (ಯುಎಸ್$೮೦,೨೦೦.೬೩)[೩]
ಬ್ಯಾಂಕ್ ದರ೪.೦೦%[೪]
Interest on reserves೩.೩೫% (ಮಾರುಕಟ್ಟೆ ನಿರ್ಧರಿಸಲಾಗಿದೆ)[೫]
ಜಾಲತಾಣrbi.org.in
ಭಾರತೀಯ ರಿಸರ್ವ್ ಬ್ಯಾಂಕ್, ಮುಂಬಯಿ
ಭಾರತೀಯ ರಿಸರ್ವ್ ಬ್ಯಾಂಕ್ (ಹೊಸ ಕಟ್ಟಡ), ಮುಂಬಯಿ
ದೆಹಲಿಯ ಶಾಖೆ
ವಿತ್ತೀಯ ವಸ್ತುಸಂಗ್ರಾಹಾಲಯವಾಗಿ ಮುಂಬಯಿ ನ ಭಾರತೀಯ ರಿಸೆರ್ವ್ ಬ್ಯಾಂಕ್ ಕಛೇರಿ
ದೆಹಲಿಯ ಭಾರತೀಯ ರಿಸೆರ್ವ್ ಬ್ಯಾಂಕ್ ಶಾಖೆಯ ಮುಖ್ಯ ದ್ವಾರದಲ್ಲಿ 'ಕೃಷಿಯ ಮೂಲಕ ದೇಶದ ಸೌಭಾಗ್ಯ' ಎಂದು ಬಿಂಬಿಸುತ್ತಿರುವ ಯಕ್ಷಿಣಿ ಪ್ರತಿಮೆ.
ಕೋಲ್ಕತಾದ ರಿಸೆರ್ವ್ ಬ್ಯಾಂಕ್ ಕಛೇರಿಯ ಒಂದು ನೋಟ.
ಭಾರತದಲ್ಲಿ ಅತೀ ಹೆಚ್ಚು ಬಂಗಾರ ಸಂಗ್ರಹ ಹೊಂದಿರುವ ನಾಗ್ ಪುರದ ರಿಸೆರ್ವ್ ಬ್ಯಾಂಕ್ ಶಾಖೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆಂಗ್ಲ: Reserve Bank of India) ಭಾರತದ ಕೇಂದ್ರೀಯ ಬ್ಯಾಂಕ್. ಇದನ್ನು ಏಪ್ರಿಲ್ ೧ ೧೯೩೫ ರಂದು ಸ್ಥಾಪಿಸಲಾಯಿತು[೬].

ಆರಂಭ[ಬದಲಾಯಿಸಿ]

ರಿಸರ್ವ ಬ್ಯಾಂಕಿನ ಕೇಂದ್ರ ಕಛೇರಿಯನ್ನು ಮೊದಲಿಗೆ ಕೊಲ್ಕತ್ತದಲ್ಲಿ ಪ್ರಾರಂಭಿಸಿದರಾದರೂ ನಂತರ ೧೯೩೭ರಲ್ಲಿ ಮುಂಬಯಿಗೆ ಬದಲಾಯಿಸಲಾಯಿತು. ೧೯೪೯ರಿಂದ ಭಾರತ ಸರ್ಕಾರವು ಇದರ ಒಡೆತನವನ್ನು ಹೊಂದಿದೆ. ಶಕ್ತಿ ಕಾಂತ್ ದಾಸ್ ಬ್ಯಾಂಕ್‌ನ ಹಾಲಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಇದು ೨೨ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜರ್ವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ಆಗಿದೆ.

ಇತಿಹಾಸ[ಬದಲಾಯಿಸಿ]

ಮೊದಲ ವಿಶ್ವಯುದ್ಧದ ನಂತರದ ಆರ್ಥಿಕ ತೊಂದರೆಗಳಿಗೆ ಸ್ಪಂದಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು 1 ಏಪ್ರಿಲ್ 1935 ರಂದು ಸ್ಥಾಪಿಸಲಾಯಿತು. ಈ ವಿಧಾನಸೂಚಿಗಳನ್ನು ಆರ್‌ಬಿಐ ಕಾಯ್ದೆ 1934 ಎಂದು ಅಂಗೀಕರಿಸಿದ ಕೇಂದ್ರ ವಿಧಾನಸಭೆಯು ಮಂಡಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪರಿಕಲ್ಪನೆ ಮಾಡಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ಅವರು "ರೂಪಾಯಿ ಸಮಸ್ಯೆ - ಅದರ ಮೂಲ ಮತ್ತು ಅದರ ಪರಿಹಾರ" ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಪ್ರಸ್ತುತಪಡಿಸಿದ ಮಾರ್ಗಸೂಚಿಗಳು, ಕಾರ್ಯ ಶೈಲಿ ಮತ್ತು ದೃಷ್ಟಿಕೋನಗಳ ಪ್ರಕಾರ ಆರ್‌ಬಿಐ ಅನ್ನು ಪರಿಕಲ್ಪನೆ ಮಾಡಲಾಗಿದೆ ಮತ್ತು ಹಿಲ್ಟನ್ ಯಂಗ್ ಆಯೋಗಕ್ಕೆ ಪ್ರಸ್ತುತಪಡಿಸಲಾಯಿತು.  ಹಿಲ್ಟನ್-ಯಂಗ್ ಕಮಿಷನ್ ಎಂದೂ ಕರೆಯಲ್ಪಡುವ 1926 ರ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್‌ನ ಶಿಫಾರಸುಗಳ ಆಧಾರದ ಮೇಲೆ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಆರ್‌ಬಿಐನ ಮುದ್ರೆಯ ಮೂಲ ಆಯ್ಕೆ ಈಸ್ಟ್ ಇಂಡಿಯಾ ಕಂಪನಿ ಡಬಲ್ ಮೊಹೂರ್, ಲಯನ್ ಮತ್ತು ಪಾಮ್ ಟ್ರೀನ ರೇಖಾಚಿತ್ರದೊಂದಿಗೆ. ಆದಾಗ್ಯೂ, ಸಿಂಹವನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿಯೊಂದಿಗೆ ಬದಲಾಯಿಸಲು ನಿರ್ಧರಿಸಲಾಯಿತು.  ಆರ್‌ಬಿಐನ ಮುನ್ನುಡಿ ಬ್ಯಾಂಕ್ ನೋಟುಗಳ ಸಮಸ್ಯೆಯನ್ನು ನಿಯಂತ್ರಿಸಲು, ಭಾರತದಲ್ಲಿ ವಿತ್ತೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮೀಸಲುಗಳನ್ನು ಇಟ್ಟುಕೊಳ್ಳಲು ಮತ್ತು ಸಾಮಾನ್ಯವಾಗಿ ದೇಶದ ಹಿತದೃಷ್ಟಿಯಿಂದ ಕರೆನ್ಸಿ ಮತ್ತು ಸಾಲ ವ್ಯವಸ್ಥೆಯನ್ನು ನಿರ್ವಹಿಸಲು ಅದರ ಮೂಲ ಕಾರ್ಯಗಳನ್ನು ವಿವರಿಸುತ್ತದೆ. ರಿಜರ್ವ್ ಬ್ಯಾಂಕನ್ನು ೧೯೩೪ರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ಯನ್ವಯ ಒಂದು ಖಾಸಗಿ ಷೇರುದಾರರ ಬ್ಯಾಂಕ್ ಆಗಿ ೧೯೩೫ ರ ಏಪ್ರಿಲ್ ೧ ರಂದು ಸ್ಥಾಪಿಸಲಾಯಿತು.[೭] ಸ್ವಾತಂತ್ಯ ನಂತರ ಸರ್ಕಾರಿ ಸ್ವಾಮ್ಯದ ಕೇಂದ್ರ ಬ್ಯಾಂಕ್ ಒಂದರ ಅವಶ್ಯಕತೆ ಬಿತ್ತಾದ್ದರಿಂದ ಸರ್ಕಾರ ರಿಜರ್ವ್ ಬ್ಯಾಂಕನ್ನು 1949 ರ ಜನವರಿ 1 ರಂದು ರಾಷ್ಟ್ರೀಕರಿಸಿ ಕೇಂದ್ರ ಬ್ಯಾಂಕನ್ನಾಗಿ ಪರಿವರ್ತಿಸಿತು. ಈ ಬ್ಯಾಂಕು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದ್ದು ಎಲ್ಲಾ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳ ನೇರ ನಿಯಂತ್ರಣ ಸಾಧಿಸುತ್ತಿದೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ.

ಸಂಪನ್ಮೂಲ[ಬದಲಾಯಿಸಿ]

ರಿಜರ್ವ್ ಬ್ಯಾಂಕು ರೂ. ೫ ಕೋಟಿ ಪಾವತಿಯಾದ ಬಂಡಾವಾಳ ಹೊಂದಿದೆ. ಈ ಬಂಡವಾಳವನ್ನು ಪೂರ್ತಿ ಪಾವತಿಯಾದ ರೂ. ೧೦೦ ರ ಮುಖಬೆಲೆಯ ೫ ಲಕ್ಷ ಷೇರುಗಳನ್ನಾಗಿ ವಿಭಜಿಸಲಾಗಿದೆ. ಎಲ್ಲಾ ಷೇರುಗಳನ್ನು ಕೇಂದ್ರ ಸರ್ಕಾರವೇ ಹೊಂದಿದೆ.

ಆಡಳಿತ[ಬದಲಾಯಿಸಿ]

  • ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
  • ರಿಜರ್ವ್ ಬ್ಯಾಂಕಿನ ಆಡಳಿತ ಮತ್ತು ಮೇಲ್ವಿಚಾರಣೆಯು ೨೧ಸದಸ್ಯರನ್ನೊಳಗೊಂಡ ಕೇಂದ್ರ ನಿರ್ದೇಶಕರ ಮಂಡಳಿಗೆ ಒಳಪಟ್ಟಿದೆ. ಈ ೨೧ನಿರ್ದೇಶಕರುಗಳಲ್ಲಿ ಒಬ್ಬ ಗೌರ್ನರ್, ನಾಲ್ವರು ಉಪ ಗೌರ್ನರ್ಗ್ ಗಳು, ಹಣಕಾಸು ಇಲಾಖೆಯ ಇಬ್ಬರು ನಿರ್ದೇಶಕರು, ವಿವಿಧ ಪ್ರಮುಖ ಕ್ಷೇತ್ರ ಗಳಿಂದ ಆಯ್ದು ಸರ್ಕಾರ ನಾಮಕರಣ ಮಾಡಿದ ಹತ್ತು ಮಂದಿ ನಿರ್ದೇಶಕರು ಹಾಗೂ ಕೋಲ್ಕತ್ತ, ಮುಂಬಯಿ, ಚೆನ್ನೈ ಮತ್ತು ದೆಹಲಿಯಲ್ಲಿರುವ ನಾಲ್ಕು ಪ್ರಾದೇಶಿಕ ಮಂಡಳಿಗಳ ನಾಲ್ಕು ಪ್ರತಿನಿಧಿಗಳಿರುತ್ತಾರೆ.
  • ಪ್ರಸ್ತುತ ಶಕ್ತಿ ಕಾಂತ್ ದಾಸ್ (25ನೇ ಗವರ್ನರ್,೧೧-೧೨-೨೦೧೮ ರಿಂದ) ರಿಜರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಾರೆ. ರಿಜರ್ವ್ ಬ್ಯಾಂಕ್ ನ ಕೇಂದ್ರ ಕಛೇರಿ ಮುಂಬಯಿನಲ್ಲಿದೆ. ಇದಲ್ಲದೆ ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬಯಿನಲ್ಲಿ ನಾಲ್ಕು ಸ್ಥಾನೀಯ ಕಛೇರಿಗಳನ್ನು ಹೊಂದಿದೆ. ಜೊತೆಗೆ ಬೆಂಗಳೂರು, ಹೈದರಾಬಾದ್, ಕಾನ್ ಪುರ್, ಲಕ್ನೋ ಮುಂತಾದೆಡೆ ಶಾಖೆಗಳನ್ನು ಹೊಂದಿದೆ.

ಆರ್.ಬಿ.ಐ. ನ ಕಾರ್ಯಗಳು[ಬದಲಾಯಿಸಿ]

ಭಾರತದ ರಿಜರ್ವ್ ಬ್ಯಾಂಕು ದೇಶದ ಕೇಂದ್ರ ಬ್ಯಾಂಕ್ ಆಗಿರುವುದರಿಂದ ಅದು ಇತರ ದೇಶಗಳ ಕೇಂದ್ರ ಬ್ಯಾಂಕುಗಳು ನಿರ್ವಹಿಸುವ ಪ್ರಾಥಮಿಕ ಮತ್ತು ಸಾಂಪ್ರದಾಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಸಾಮಾನ್ಯ ಕಾರ್ಯಗಳ ಜೊತೆಗೆ ಅದು ಕೆಲವು ಅಭಿವೃದ್ಧಿ ಪ್ರಧಾನ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತದೆ. ಆದ್ದರಿಂದ ರಿಜರ್ವ್ ಬ್ಯಾಂಕ್ ನ ಕಾರ್ಯಗಳನ್ನು ಒಟ್ಟಾರೆಯಾಗಿ

  1. ಸಾಂಪ್ರದಾಯಿಕ ಕಾರ್ಯಗಳು,
  2. ಅಭಿವೃದ್ಧಿ ಕಾರ್ಯಗಳು ಮತ್ತು
  3. ಇತರೆ ಕಾರ್ಯಗಳೆಂದು ಮೂರು ವರ್ಗಗಳಾಗಿ ವಿಂಗಡಿಸಬಹುದು.

ಸಾಂಪ್ರದಾಯಿಕ ಕಾರ್ಯಗಳು[ಬದಲಾಯಿಸಿ]

ರಿಜರ್ವ್ ಬ್ಯಾಂಕ್ ನಿರ್ವಹಿಸುತ್ತಿರುವ ಸಾಂಪ್ರದಾಯಿಕ ಕಾರ್ಯಗಳು ಈ ಕೆಳಗಿನಂತಿವೆ.

ನೋಟು ಚಲಾವಣೆ[ಬದಲಾಯಿಸಿ]

ರಿಜರ್ವ್ ಬ್ಯಾಂಕ್ ದೇಶದಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಪರಮಾಧಿಕಾರ ಹೊಂದಿದೆ. ಒಂದು ರೂಪಾಯಿಯನ್ನು ಹೊರತುಪಡಿಸಿ ಎರಡರಿಂದ ಎರಡು ಸಾವಿರದ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ. ನಾಣ್ಯಗಳು ಮತ್ತು ಒಂದು ರೂಪಾಯಿ ನೋಟನ್ನು ಕೇಂದ್ರದ ಹಣಕಾಸು ಸಚಿವಾಲಯ ಮುದ್ರಿಸುತ್ತದೆ.

ಸರ್ಕಾರದ ಬ್ಯಾಂಕು[ಬದಲಾಯಿಸಿ]

ರಿಸರ್ವ್ ಬ್ಯಾಂಕು ಸರ್ಕಾರದ ಬ್ಯಾಂಕ್ ಆಗಿ, ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಸಲಹೆಗಾರನಾಗಿ ರಿಜರ್ವ್ ಬ್ಯಾಂಕು ಎಲ್ಲಾ ಹಣಕಾಸಿನ ವಿಚಾರಗಳ ಮೇಲೆ ಸರ್ಕಾರಕ್ಕೆ ಸಲಹೆ ನೀಡುತ್ತದೆ.

ಬ್ಯಾಂಕುಗಳ ಬ್ಯಾಂಕು[ಬದಲಾಯಿಸಿ]

ರಿಸರ್ವ್ ಬ್ಯಾಂಕು ಬ್ಯಾಂಕುಗಳ ಬ್ಯಾಂಕ್ ಆಗಿ ಕೆಲಸ ಮಾಡುತ್ತಿದೆ. ೧೯೪೯ ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯ ಪ್ರಕಾರ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕ್ ನೊಡನೆ ತಮ್ನ್ಮ ಠೇವಣಿಗಳ ಒಂದಂಶವನ್ನು ಕಾಯ್ದಿರಿಸಿದ ಹಣವಾಗಿ ಇಟ್ಟಿರಬೇಕು.

ಸಾಲ ನಿಯಂತ್ರಣ[ಬದಲಾಯಿಸಿ]

ಪ್ರಮಾಣಾತ್ಮಕ ಮತ್ತು ಗುಣಾತ್ಮಕ ನಿಯಂತ್ರಣಗಳನ್ನು ರಿಜರ್ವ್ ಬ್ಯಾಂಕು ಸಾಲ ಮನ್ನಾ ಮಾಡಲು ಉಪಯೋಗಿಸುತ್ತದೆ.

ಹಣದ ಪೇಟೆಯ ನೇತಾರ[ಬದಲಾಯಿಸಿ]

ರಿಜರ್ವ್ ಬ್ಯಾಂಕು ಭಾರತದ ಹಣದ ಮಾರುಕಟ್ಟೆಯ ನೇತಾರನಾಗಿದೆ. ಅದು ಹಣದ ಮಾರುಕಟ್ಟೆಯ ವಿವಿಧ ಅಂಗಾಂಗಗಳಾದ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳನ್ನುನಿಯಂತ್ರಿಸುವ ಪೂರ್ಣ ಅಧಿಕಾರ ಹೊಂದಿದೆ.

ವಿದೇಶಿ ವಿನಿಮಯ ಪಾಲಕ[ಬದಲಾಯಿಸಿ]

ರಿಜರ್ವ್ ಬ್ಯಾಂಕ್ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತದೆ.

ಕಟ್ಟಕಡೆಯ ಸಾಲದಾತ[ಬದಲಾಯಿಸಿ]

ರಿಜರ್ವ್ ಬ್ಯಾಂಕು ವಾಣಿಜ್ಯ ಬ್ಯಾಂಕ್ ಗಳಿಗೆ ಕಟ್ಟ ಕಡೆಯ ಸಾಲದಾತನಾಗಿ ಕಾರ್ಯನಿರ್ವಹಿಸುತ್ತದೆ.

ತಿರುವೆ ಮನೆ[ಬದಲಾಯಿಸಿ]

ರಿಜರ್ವ್ ಬ್ಯಾಂಕು ವಾಣಿಜ್ಯ ಬ್ಯಾಂಕ್ ಗಳಿಗೆ ತಿರುವೆ ಮನೆಯಾಗಿ ಕಾರ್ಯನಿರ್ವಹಿಸುತ್ತದೆ.

ಅಭಿವೃದ್ಧಿ /ಪ್ರವರ್ತನ ಕಾರ್ಯಗಳು[ಬದಲಾಯಿಸಿ]

ಅಭಿವೃದ್ಧಿ ಕಾರ್ಯಗಳು ಕೆಳಗಿನಂತಿವೆ

ಕೃಷಿ ಹಣಕಾಸು[ಬದಲಾಯಿಸಿ]

ರಿಸರ್ವ್ ಬ್ಯಾಂಕು ಕೃಷಿ ಕ್ಷೇತ್ರಕ್ಕೆ ಹಣಕಾಸನ್ನು ಒದಗಿಸುವುದಕ್ಕಾಗಿ ಒಂದು ಬೇರೆಯೇ ಆದ ಕೃಷಿ ವಿಭಾಗವನ್ನು ಹೊಂದಿದೆ. ನಬಾರ್ಡ್ ಬ್ಯಾಂಕು, ಗ್ರಾಮೀಣಾಭಿವೃದ್ಧಿ ಬ್ಯಾಂಕು ಮತ್ತು ರಾಜ್ಯ ಸರ್ಕಾರಿ ಬ್ಯಾಂಕುಗಳ ಮೂಲಕ ಪರೋಕ್ಷವಾಗಿ ಹಣಕಾಸು ಪೂರೈಸುತ್ತಿದೆ.

ಕೈಗಾರಿಕಾ ಹಣಕಾಸು[ಬದಲಾಯಿಸಿ]

ರಿಜರ್ವ್ ಬ್ಯಾಂಕು ಕೈಗಾರಿಕಾ ಅಭಿವೃದ್ಧಿಯಲ್ಲೂ ಸಹ ವಿಶೇಷ ಆಸಕ್ತಿ ವಹಿಸಿದೆ. ಕೈಗಾರಿಕಾ ಹಣಕಾಸು ಸಂಸ್ಥೆಗಳಾದ ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್, ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್, ಇಂಡಸ್ಟ್ರಿಯಲ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವು.

ಇತರ ಕಾರ್ಯಗಳು[ಬದಲಾಯಿಸಿ]

ಇತರ ಕಾರ್ಯಗಳು ಈ ಕೆಳಗಿನಂತಿವೆ

ಸಂಶೋಧನಾ ಕಾರ್ಯಗಳು[ಬದಲಾಯಿಸಿ]

ರಿಜರ್ವ್ ಬ್ಯಾಂಕು ಆರ್ಥಿಕ ವ್ಯವಸ್ಥೆಯ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಸಂಗ್ರಹಿಸಿ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ.

ವಿಶೇಷ ಕಾರ್ಯಗಳು[ಬದಲಾಯಿಸಿ]

ಬ್ಯಾಂಕಿಂಗ್ ಸಂಸ್ಥೆಗಳ ನೌಕರರಿಗೆ ತರಬೇತಿ ನೀಡುತ್ತದೆ. ರಿಜರ್ವ್ ಬ್ಯಾಂಕು ದೇಶದ ಕೇಂದ್ರದ ಬ್ಯಾಂಕಾಗಿ ಸಾಲ ನೀಡಿಕೆ, ಕೃಷಿ, ಕೈಗಾರಿಕಾ ಮುಂತಾದ ಕ್ಷೇತ್ರಗಳ ಸಮಸ್ಯೆಗಳ ಅಧ್ಯಯನ ನಡೆಸಿ ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಸೂಚಿಸುತ್ತದೆ. ಹೀಗೆ ರಿಜರ್ವ್ ಬ್ಯಾಂಕು ದೇಶದ ಕೇಂದ್ರ ಬ್ಯಾಂಕಾಗಿ ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಪ್ರಸ್ತುತ ಹಣಕಾಸಿನ ಸಚಿವರಾಗಿ ನಿರ್ಮಲಾ ಸೀತಾರಾಮನ್ ಕಾರ್ಯನಿರ್ವಹಿಸುತ್ತಿದ್ದಾರೆ.

ಹಣಕಾಸು ನೀತಿ[ಬದಲಾಯಿಸಿ]

ಕೇಂದ್ರ ಬ್ಯಾಂಕು ಅನುಸರಿಸುವ ನೀತಿಗೆ "ಕೇಂದ್ರ ಬ್ಯಾಂಕಿನ ನೀತಿ" ಹಣಕಾಸಿನ ನೀತಿ ಎಂದು ಕರೆಯುತ್ತಾರೆ. ಇನ್ನೂ ವಿವರವಾಗಿ ಅರ್ಥೈಸಬೇಕೆಂದರೆ ಚಲಾವಣೆಯಲ್ಲಿ ಇರುವ ಹಣದ ನಿಯಂತ್ರಣ ಮತ್ತು ಹಣಕ್ಕೆ ಸಂಬಂಧಿಸಿದ ವ್ಯವಸ್ಥೆಯ ನಿರ್ವಹಣೆಗೆ ಕೇಂದ್ರ ಬ್ಯಾಂಕ್ ರೂಪಿಸಿ ಜಾರಿಗೆ ತರುವ ನೀತಿಗೆ "ಹಣಕಾಸಿನ ನೀತಿ" ಎಂದು ಹೆಸರು. ಹಣಕಾಸಿನ ನೀತಿಯು ಕೇಂದ್ರ ಬ್ಯಾಂಕ್ ಮುದ್ರಿಸಿ ಚಲಾವಣೆಗೆ ತರುವ ಹಣದ ಗಾತ್ರ, ವಾಣಿಜ್ಯ ಬ್ಯಾಂಕುಗಳ ಸಾಲದ ನಿರ್ಮಾಣದ ಹಾಗೂ ಬಡ್ಡಿ ದರದ ಅಂಶಗಳಿಗೆ ಸಂಬಂಧಿಸಿರುತ್ತದೆ.

ಹಣಕಾಸಿನ ನೀತಿಯ ಉದ್ದೇಶಗಳು[ಬದಲಾಯಿಸಿ]

ಹಣಕಾಸಿನ ನೀತಿಯು ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೇಂದ್ರ ಬ್ಯಾಂಕಿನ ಹಣಕಾಸಿನ ನೀತಿಯ ಉದ್ದೇಶವು ಬೇರೆ ಬೇರೆಯಾಗಿರುವುದು ಕಂಡುಬರುತ್ತದೆ. ಈ ಉದ್ದೇಶವು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಗಳನ್ನವಲಂಭಿಸಿರುತ್ತದೆ. ಹಣಕಾಸಿನ ನೀತಿಯನ್ನು ರೂಪಿಸುವಾಗ ಕೇಂದ್ರ ಬ್ಯಾಂಕು ಹೊಂದಿದ ಪ್ರಮುಖ ಉದ್ದೇಶಗಳನ್ನು ಐದು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

  1. ತಟಸ್ಥ ಹಣದ ನೀತಿ
  2. ಸ್ಥಿರವಾದ ವಿದೇಶಿ ವಿನಿಮಯದ ನೀತಿ
  3. ಆಂತರಿಕ ಬೆಲೆಗಳ ಸ್ಥಿರತೆ
  4. ಪೂರ್ಣೋದ್ಯೋಗ
  5. ಆರ್ಥಿಕ ಬೆಳವಣಿಗೆ

ಹಣಕಾಸು ನೀತಿ ಮತ್ತು ಬೆಲೆ ಹಣದುಬ್ಬರದ ನೀತಿ[ಬದಲಾಯಿಸಿ]

  • ಸಮಗ್ರ ವೆಚ್ಚವನ್ನು ಕಡಿತ ಗೊಳಿಸುವ ಮೂಲಕ ಹಣದುಬ್ಬರದ ವಿರುದ್ಧ ಸೆಣೆಸಲು ಹಣಕಾಸು ನೀತಿಯು ಒಂದು ಪರಿಣಾಮಕಾರಿ ಅಸ್ತ್ರ ಎಂದು ಪರಿಗಣಿಸಲಾಗಿದೆ. ದೇಶವೊಂದರ ಕೇಂದ್ರ ಬ್ಯಾಂಕು ಸಾಲವನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳನ್ನು ಹಣಕಾಸು ನೀತಿ ಎನ್ನಲಾಗುತ್ತದೆ. ಭಾರತೀಯ ರಿಜರ್ವ್ ಬ್ಯಾಂಕು ನಮ್ಮ ಕೇಂದ್ರ ಬ್ಯಾಂಕ್ ಆಗಿರುವುದರಿಂದ ಅದಕ್ಕೆ ದೇಶದ ಹಣಕಾಸು ನೀತಿಯನ್ನು ನಿರೂಪಿಸುವ ಅಧಿಕಾರ ನೀಡಲಾಗಿದೆ.
  • ಆರ್.ಬಿ.ಐ ನ ಹಣಕಾಸು ನೀತಿಯು ಸರ್ಕಾರದ ಆರ್ಥಿಕ ಧೋರಣೆಯ ಎರಡು ಗುರಿಗಳಿಗೆ ಮೊದಲನೇ ಪಂಚವಾರ್ಷಿಕ ಯೋಜನೆಯ ಕಾಲದಿಂದಲೂ ಆದ್ಯತೆ ನೀಡುತ್ತಾ ಬಂದಿದೆ. ಅವುಗಳೆಂದರೆ -
  1. ರಾಷ್ಟ್ರೀಯ ಆದಾಯ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಲು ದೇಶದ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸುವುದು, ಮತ್ತು
  2. ಆರ್ಥಿಕತೆಯಲ್ಲಿನ ಹಣದುಬ್ಬರದ ಒತ್ತಡವನ್ನು ನಿಯಂತ್ರಿಸುವುದು ಮತ್ತು ಕಡಿಮೆ ಗೊಳಿಸುವುದು, ಆದ್ದರಿಂದ, ಆರ್.ಬಿ.ಐ ಅನುಸರಿಸುತ್ತಿರುವ ಹಣಕಾಸು ನೀತಿಯನ್ನು ನಿಯಂತ್ರಿತ ಹಣಕಾಸು ವಿಸ್ತರಣೆ ಎನ್ನಲಾಗುತ್ತದೆ.

ಇದು "ಆರ್ಥಿಕ ಬೆಳವಣಿಗೆ ಸಾಕಷ್ಟು ಹಣಕಾಸು ಪೂರೈಸುವ ಮತ್ತು ಅದೇ ವೇಳೆಯಲ್ಲಿ ನ್ಯಾಯಯುತ ಬೆಲೆ ಸ್ಥಿರತೆಯನ್ನು ಸಾಧಿಸುವ ಒಂದು ನೀತಿಯಾಗಿದೆ."

ಬೆಲೆ ಹಣ ದುಬ್ಬರದ ನಿಯಂತ್ರಣ[ಬದಲಾಯಿಸಿ]

ಆರ್.ಬಿ.ಐ ಕಾಯಿದೆ [೧೯೩೪] ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ೧೯೪೯ ರ ಪ್ರಕಾರ ಸಾಲ ಪ್ರಮಾಣದ ನಿಯಂತ್ರಣ ಮತ್ತು ಬೆಲೆ ನಿಯಂತ್ರಣಕ್ಕಾಗಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಭಾರತೀಯ ರಿಜರ್ವ್ ಬ್ಯಾಂಕ್ ಗೆ ಅಧಿಕಾರ ನೀಡಲಾಗಿದೆ. ಸಾಲದ ನಿಯಂತ್ರಿತ ವಿಸ್ತರಣೆ ಉದ್ದೇಶದ ಸಾಧನವಾಗಿ ಆರ್.ಬಿ.ಐ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಸಾಲ ನಿಯಂತ್ರಣ ವಿಧಾನಗಳನ್ನು ಅನುಸರಿಸುತ್ತಿದೆ.

ಪರಿಮಾಣಾತ್ಮಕ ಅಥವಾ ಸಾಮಾನ್ಯ ನಿಯಂತ್ರಣಗಳು[ಬದಲಾಯಿಸಿ]

ರಿಜರ್ವ್ ಬ್ಯಾಂಕು ಬ್ಯಾಂಕು ಬಡ್ಡಿದರ, ತೆರೆದ ಮಾರುಕಟ್ಟೆ ಕಾರ್ಯಾಚರಣೆ, ನಗದು ಮೀಸಲು ಅನುಪಾತ, ಶಾಸನಬದ್ಧ ದ್ರವ್ಯತೆ ಅನುಪಾತ ಮುಂತಾದ ಪರಿಮಾಣಾತ್ಮಕ ವಿಧಾನಗಳನ್ನು ಬಳಸಿಕೊಳ್ಳುತ್ತಿದೆ.

ಬ್ಯಾಂಕು ದರ ನೀತಿ[ಬದಲಾಯಿಸಿ]

ಭಾರತೀಯ ರಿಜರ್ವ್ ಬ್ಯಾಂಕು ಕಾಯ್ದೆಯು ಬ್ಯಾಂಕುದರವನ್ನು ಈ ಕಾಯಿದೆಯಡಿ ಕೊಳ್ಳಲು ಅರ್ಹವಿರುವ ವಿನಿಮಯ ಹುಂಡಿಗಳು ಅಥವಾ ಇತರ ವಾಣಿಜ್ಯ ಕಾಗದಗಳನ್ನು ಅದು (ಆರ್.ಬಿ.ಐ) ಕೊಳ್ಳಲು ಅಥವಾ ವಟಾಯಿಸಲು ತಯಾರಿರುವ ಒಂದು ನಿರ್ಧಿಷ್ಟ ದರ ಎಂದು ವ್ಯಾಖ್ಯಾನಿಸಿದೆ. ೨೦೧೧ ರ ಮಾರ್ಚ್ ೧೭ ರ ವೇಳೆಗೆ ಬ್ಯಾಂಕ್ ದರವನ್ನು ಶೇ ೬.೭೫ ರಲ್ಲಿ ಉಳಿಸಲಾಯಿತು.

ತೆರೆದ ಮಾರುಕಟ್ಟೆ ಕಾರ್ಯಾಚರಣೆ[ಬದಲಾಯಿಸಿ]

ಆರ್.ಬಿ.ಐ ವ್ಯಾಖ್ಯಾನಿಸಿರುವ ಪ್ರಕಾರ ತೆರೆದ ಮಾರುಕಟ್ಟೆ ಕಾರ್ಯಾಚರಣೆ ಎಂದರೆ "ವಿದೇಶಿ ವಿನಿಮಯ, ಚಿನ್ನ, ಸರ್ಕಾರಿ ಭದ್ರತೆಗಳು ಮತ್ತು ಕಂಪನಿಗಳ ಷೇರುಗಳು ಸೇರಿದಂತೆ ವೈವಿಧ್ಯಮಯ ಆಸ್ತಿಗಳನ್ನು ಕೇಂದ್ರ ಬ್ಯಾಂಕು ಮಾರಾಟಮಾಡುವ ಮತ್ತು ಕೊಳ್ಳುವ ವ್ಯಾಪಕ ಕ್ರಿಯೆಯಾಗಿದೆ.

ಚಲ ಮೀಸಲು ಅಗತ್ಯತೆಗಳು[ಬದಲಾಯಿಸಿ]

ಸಾಲ ನಿಯಂತ್ರಣ ಮಾಡಲು ರಿಜರ್ವ್ ಬ್ಯಾಂಕು ಚಲ ಮೀಸಲು ಅಗತ್ಯಗಳ ವಿಧಾನವನ್ನು ಅನುಸರಿಸುತ್ತದೆ. ಕಾನೂನಿನ ಪ್ರಕಾರ ಪ್ರತಿಯೊಂದು ಬ್ಯಾಂಕು ತನ್ನ ಒಟ್ಟು ಠೇವಣಿಗಳ ಕೆಲವೊಂದು ಭಾಗಗಳನ್ನು ಮೀಸಲು ನಿಧಿ ರೂಪದಲ್ಲಿ ತನ್ನಲ್ಲಿ ಮತ್ತು ಸ್ವಲ್ಪ ಭಾಗವನ್ನು ರಿಜರ್ವ್ ಬ್ಯಾಂಕ್ ನಲ್ಲಿ ಇಡಬೇಕಾಗುತ್ತದೆ. ಈ ಮೀಸಲು ಅಗತ್ಯಗಳಲ್ಲಿ ಎರಡು ವಿಧಾನಗಳಿವೆ.

ನಗದು ಮೀಸಲು ಅನುಪಾತ[ಬದಲಾಯಿಸಿ]

ಮತ್ತು

ಶಾಸನಬದ್ಧ ದ್ರವ್ಯತಾ ಅನುಪಾತ[ಬದಲಾಯಿಸಿ]

ನಗದು ಮೀಸಲು ಅನುಪಾತ[ಬದಲಾಯಿಸಿ]

ನಗದು ಮೀಸಲು ಅನುಪಾತ ಎಂದರೆ ವಾಣಿಜ್ಯ ಬ್ಯಾಂಕು ತನ್ನ ಒಟ್ಟು ಠೇವಣಿಗಳ ಒಂದು ಭಾಗವನ್ನು ರಿಜರ್ವ್ ಬ್ಯಾಂಕಿನೊಂದಿಗೆ ನಗದು ಮೀಸಲು ರೂಪದಲ್ಲಿ ಇಡುವುದಾಗಿದೆ. ೨೦೧೦ ರ ಏಪ್ರಿಲ್ ೨೦ ವೇಳೆಗೆ ನಗದು ಮೀಸಲು ಅನುಪಾತವನ್ನು ಶೇಕಡ ೬ ರಲ್ಲಿ ಆರ್.ಬಿ.ಐ ನಿರ್ಧರಿಸಿದೆ.

ಶಾಸನಬದ್ಧ ದ್ರವ್ಯತಾ ಅನುಪಾತ[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳ ಒಂದು ಭಾಗವನ್ನು ತಮ್ಮಲ್ಲಿಯೇ ನಗದು ಮೀಸಲು ರೂಪದಲ್ಲಿ ಇಟ್ಟು ಕೊಳ್ಳುವುದನ್ನು ಶಾಸನಬದ್ಧ ದ್ರವ್ಯತಾ ಅನುಪಾತ ಎನ್ನಲಾಗುತ್ತದೆ.

ಆಯ್ದ ಸಾಲ ನಿಯಂತ್ರಣಗಳು[ಬದಲಾಯಿಸಿ]

ಆಯ್ದ ಆಥವಾ ಗುಣಾತ್ಮಕ ಸಾಲ ನಿಯಂತ್ರಣಗಳು ಸಾಮಾನ್ಯ ಅಥವಾ ಪರಿಮಾಣಾತ್ಮಕ ಸಾಲ ನಿಯಂತ್ರಣಗಳಿಗೆ ಪೂರಕ ನೀತಿಯಲ್ಲಿ ಉಪಯುಕ್ತವಾಗಿರುತ್ತವೆ ಎಂದು ಭಾವಿಸಲಾಗಿದೆ. ಈ ನಿಯಂತ್ರಣಗಳನ್ನು ರಿಜರ್ವ್ ಬ್ಯಾಂಕು ಮೊಟ್ಟ ಮೊದಲಬಾರಿಗೆ ೧೯೫೬ ರಲ್ಲಿ ಪರಿಚಯಿಸಿತು.

ನೋಟುಗಳ ಅಮಾನ್ಯ[ಬದಲಾಯಿಸಿ]

  • ಭಾರತ ಪ್ರಧಾನಿ ನರೇಂದ್ರ ಮೋದಿಯವರು ದಿ.8 ನವೆಂಬರ್ 2016 ರಿಂದ 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ಒಂದು ಅನಿಗದಿತ ನೇರ ಪ್ರಸಾರ ಭಾಷಣದಲ್ಲಿ ಮಹಾತ್ಮ ಗಾಂಧಿ ಸರಣಿಯ ಎಲ್ಲಾ ₹500 ಮತ್ತು ₹1000 ಬ್ಯಾಂಕ್ ನೋಟುಗಳ ಪರಿಚಲನೆ ಅಮಾನ್ಯವಾಗಿದೆ ಎಂದು ಘೋಷಿಸಿ ಈ ಪ್ರಕಟಣೆ ಮಾಡಲ್ಪಟ್ಟಿತು. ಹಳೆಯ ಬ್ಯಾಂಕ್‍ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ₹500 ಮತ್ತು ₹2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು

ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ ಎಂದು ದೂರಿ ಆರ್‌ಬಿಐ ನೌಕರರು ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಪತ್ರ ಬರೆದಿದ್ದಾರೆ.

  • ಸಚಿವಾಲಯದ ಅಧಿಕಾರಿ
  • ನೋಟುಗಳ ಮುದ್ರಣ, ಸಾಗಾಟ ಕೆಲಸಗಳ ಉಸ್ತುವಾರಿಗೆ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರನ್ನು ನಿಯೋಜಿಸಿರುವುದಕ್ಕೆ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
  • ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ‘ಆರ್‌ಬಿಐನ ಸ್ವಾಯತ್ತ ಸ್ಥಾನವನ್ನು ಗೌರವಿಸುತ್ತೇವೆ’ ಎಂಬ ಸಮಜಾಯಿಷಿ ನೀಡಿದೆ.
  • ನೌಕರರ ಪತ್ರ: ನೋಟು ರದ್ದತಿಯ ನಂತರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣ ಆರ್‌ಬಿಐನ ಪ್ರತಿಷ್ಠೆ ಸರಿಪಡಿಸಲಾಗಷ್ಟು ಹಾಳಾಗಿದೆ. ನೋಟು ಮುದ್ರಣ, ಅದನ್ನು ಚಲಾವಣೆಗೆ ಬಿಡುವ ಕೆಲಸ ಆರ್‌ಬಿಐನದ್ದು. ಈ ಕೆಲಸಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿಯನ್ನು ನೇಮಿಸಿದ್ದು, ಆರ್‌ಬಿಐನ ಅಧಿಕಾರ ಕಿತ್ತುಕೊಳ್ಳುವುದಕ್ಕೆ ಸಮ ಎಂದು ಗವರ್ನರ್‌ಗೆ ಬರೆದ ಪತ್ರದಲ್ಲಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ‘ದಶಕಗಳ ಪ್ರಯತ್ನದ ಫಲವಾಗಿ ಆರ್‌ಬಿಐ ಉತ್ತಮ ಹೆಸರು ಸಂಪಾದಿಸಿತ್ತು. ಇದಕ್ಕೆ ಸಂಸ್ಥೆಯ ಸಿಬ್ಬಂದಿಯ ಕೆಲಸ ಹಾಗೂ ನ್ಯಾಯಯುತವಾಗಿ ರೂಪಿಸಿದ ನೀತಿಗಳು ಕಾರಣ. ಆದರೆ ಅವೆಲ್ಲವೂ ಕ್ಷಣಮಾತ್ರದಲ್ಲಿ ಪುಡಿಪುಡಿಯಾಗಿವೆ. ಇದರಿಂದ ನಮಗೆ ನೋವಾಗಿದೆ’ ಎಂದು ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರ ಸಂಯುಕ್ತ ವೇದಿಕೆ ಬರೆದ ಪತ್ರದಲ್ಲಿ ಹೇಳಲಾಗಿದೆ.[೮]

ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://d-nb.info/1138787981/34
  2. "Shaktikanta Das is new Guv of RBI". United News of India. 11 December 2018. Retrieved 11 December 2018.
  3. Reporter, B. S. (14 March 2020). "India's forex reserves at fresh record high of US$ 487.24 billion as on 06 March 2020". Business Standard India.
  4. Reserve Bank of India – India's Central Bank Archived 2008-02-18 ವೇಬ್ಯಾಕ್ ಮೆಷಿನ್ ನಲ್ಲಿ.. Rbi.org.in.
  5. "Reserve Bank of India – India's Central Bank". rbi.org.in. Archived from the original on 2008-02-18. Retrieved 2020-05-25.
  6. http://rbidocs.rbi.org.in/rdocs/Publications/PDFs/ RBIA1934 170510. pdf, Reserve Bank of India Act, 1934
  7. http://rbidocs.rbi.org.in/rdocs/Publications/PDFs/RBIAM_230609.pdf, RESERVE BANK OF INDIA ACT, 1934
  8. "'ಕೇಂದ್ರದಿಂದ ಆರ್‌ಬಿಐ ಸ್ವಾತಂತ್ರ್ಯ ಹರಣ';ಪಿಟಿಐ;15 Jan, 2017". Archived from the original on 2017-01-15. Retrieved 2017-01-15.