ಬೇಳೂರು ಸುದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಪತ್ರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಬ್ಲಾಗಿಂಗ್, ಮುಕ್ತಜ್ಞಾನ ಪ್ರಸರಣ, ಬರವಣಿಗೆ, ಸಮಾಜ ಸೇವೆ -ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬೇಳೂರು ಸುದರ್ಶನ ಅವರ ಕೊಡುಗೆಗಳು ಇವೆ.

ಜನನ[ಬದಲಾಯಿಸಿ]

೧೯೬೫ ಜುಲೈ ೧೪ರಂದು ಶಿವಮೊಗ್ಗ ಜಿಲ್ಲೆಯ ಬೇಳೂರಿನಲ್ಲಿ ಜನಿಸಿದರು. ಸುದರ್ಶನ ಚಿಕ್ಕಂದಿನಿಂದಲೇ ತಮ್ಮ ತಾತ ಮತ್ತು ತಂದೆಯವರು ಒಳ್ಳೆಯ ಉದ್ದೇಶಕ್ಕಾಗಿ ಸಮಾಜವನ್ನು ಎದುರು ಹಾಕಿಕೊಳ್ಳಲು ಹೆದರದೆ ತೋರಿದ ಪ್ರಗತಿಪರ ನಿಲುವುಗಳನ್ನು ಅಭಿಮಾನಿಸುತ್ತಾ ಬೆಳೆದವರು. ಬದುಕಿನಲ್ಲಿ ನೆಲೆಗಾಗಿ ಊರೂರು ಅಲೆಯಬೇಕಾದ ಪರಿಸ್ಥಿತಿಯಲ್ಲಿ ಸಾಗಿದರು.

ವೃತ್ತಿಜೀವನ[ಬದಲಾಯಿಸಿ]

ಸುದರ್ಶನ ಪತ್ರಿಕಾ ಸಂಪಾದನೆ, ಡಿ.ಟಿ.ಪಿ. ಮುದ್ರಣ ಮಾಧ್ಯಮದ ಎಲ್ಲ ಸ್ತರಗಳು,ಟಿ.ವಿ., ಸಾಂಸ್ಥಿಕ ಸಂವಹನ, ಕಂಪ್ಯೂಟರ್, ಮುಕ್ತಜ್ಞಾನ, ಬರವಣಿಗೆ, ರಾಸಾಯನಿಕಗಳು, ಹೀಗೆ ಅವರು ಕಲಿತ, ಕಲಿಸಿದ, ಅನುಭಾವಿಸಿದ ಕ್ಷೇತ್ರಗಳು.

ವಿದ್ಯಾರ್ಥಿ ಪಥ ಮಾಸಪತ್ರಿಕೆ ನಡೆಸಿದ ಬೇಳೂರು ಸುದರ್ಶನ ಕೊಳೆ ನೀರನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳ ಮೂಲಕ ಶುದ್ಧೀಕರಿಸುವ ತಂತ್ರಜ್ಞನಾಗಿ, ಟಿವಿ ಮಾರುವ ಹುಡುಗನಾಗಿ ಹೀಗೆ ಹಲವು ರೀತಿಯಲ್ಲಿ ಕೆಲಸಮಾಡಿದರು. ೧೯೯೧ರಲ್ಲಿ ಸಿರ್ಸಿಯಲ್ಲಿ ಧ್ಯೇಯನಿಷ್ಠ ಪತ್ರಕರ‍್ತ ಎಂಬ ಪತ್ರಿಕೆಯಲ್ಲಿ ತಮ್ಮ ಪತ್ರಿಕಾ ವೃತ್ತಿಯನ್ನು ಪ್ರಾರಂಭಿಸಿದರು. ಅಸೀಮಾ, ಹೊಸ ದಿಗಂತ, ವಿಕ್ರಮ, ಮಿತ್ರಮಾಧ್ಯಮ, ಮುಂತಾದೆಡೆಗಳಲ್ಲಿ ಪತ್ರಿಕಾ ಸಂಪಾದನೆ ವೃತ್ತಿ ನಡೆಯಿತು. ಟಿ.ವಿ. ಚಾನೆಲ್, ಬ್ಯಾಂಕ್ ಮತ್ತು ಕೈಗಾರಿಕಾ ಉದ್ಯಮಗಳಲ್ಲಿ ಕೂಡಾ ಅವರ ಸೇವೆ ಇದೆ.[೧] ಕನ್ನಡದ ಅಂತರಜಾಲ ಜ್ಞಾನಕೋಶವಾದ ‘ಕಣಜ’ದ ಅಭಿವೃದ್ಧಿಯಲ್ಲಿ ಬೇಳೂರು ಸುದರ್ಶನ ಪಾತ್ರ ಪ್ರಮುಖವಾದದ್ದು. ಕನ್ನಡದಲ್ಲಿ ಬ್ಲಾಗಿಂಗ್ ಆರಂಭಿಸಿದ ಪ್ರಥಮ ಪೀಳಿಗೆಯ ಪತ್ರಕರ್ತರಲ್ಲೊಬ್ಬರು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಕಂಪ್ಯೂಟರ್ ವಿಷಯಗಳ ಪುಸ್ತಕ ರಚನೆ, ತಾಂತ್ರಿಕ ಬರವಣಿಗೆ ಪುಸ್ತಕ ರಚನೆ, ಕನ್ನಡ ಪತ್ರಿಕೋದ್ಯಮಕ್ಕಾಗಿ ೫೦೦ಕ್ಕೂ ಹೆಚ್ಚು ಯುವ ಪತ್ರಿಕೋದ್ಯಮಿಗಳಿಗೆ ತರಬೇತಿ, ಹಲವಾರು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಮಾಧ್ಯಮ ಮತ್ತು ತಂತ್ರಜ್ಞಾನಗಳ ಸಲಹೆಗಾರ ಆಗಿ ಕೆಲಸ ಮಾಡಿದ್ದಾರೆ. ಪ್ರಸಕ್ತದಲ್ಲಿ ಭಾರತದ ಸಕಲ ಭಾರತೀಯ ಭಾಷೆಗಳ ಬೃಹತ್ ಮುಕ್ತಜ್ಞಾನ ಅಂತರಜಾಲ ತಾಣವಾದ ‘ಭಾರತವಾಣಿ’ಯ ಪ್ರಮುಖ ಸಲಹೆಗಾರರಲ್ಲೊಬ್ಬರಗಿದ್ದಾರೆ. ಮಿತ್ರ ಮಾಧ್ಯಮ ಟ್ರಸ್ಟ್ ಮೂಲಕ ಜನಪರ ಕಾರ‍್ಯಗಳನ್ನು ನಡೆಸುತಿದ್ದಾರೆ.

ಲೇಖನಗಳು[ಬದಲಾಯಿಸಿ]

ಆರುನೂರಕ್ಕೂ ಹೆಚ್ಚಿನ ಪತ್ರಿಕಾ ಲೇಖನಗಳು, ‘ಉರಿಯ ಸಿರಿ’ ಜೈವಿಕ ಇಂಧನ ಕುರಿತಾದ ಕೃತಿ, ‘ರ‍್ತಮಾನ ಬಿಸಿಲು’ ಕವನ ಸಂಕಲನ, ರಾಸಾಯನಿಕಗಳ ಕುರಿತಾದ ‘ನಾನೇಕೆ ವಿಷಮಯವಾಗಬೇಕು’,ಅನುವಾದಗಳಾದ ‘ರಜನೀಕಾಂತ್’ ಒಂದು ಖಚಿತ ಜೀವನಚರಿತ್ರೆ, ಜೆ.ಡಿ. ದೇಶಮುಖರ ಭಾಷಣಗಳು, ‘ಹುಲ್ಲಿನ ಸಾರು’ ಚೀನೀ ಲೇಖಕನ ಆತ್ಮಕಥೆ, ‘ಹಿಮದೊಡಲ ತಳಮಳ’ ಟಿಬೆಟಿಯನ್ ಭಿಕ್ಷುವಿನ ಸೆರೆಮನೆಯ ಕಥನ, ‘ಸ್ಕಲ್ ಮಂತ್ರ’ ಚೀನೀ ಟಿಬೆಟನ್ ರೋಚಕ ಕಾದಂಬರಿ, ಸರಸ್ವತೀ ನದಿಯಿಂದ ಸಿಂಧೂ ಲಿಪಿಯವರೆಗೆ ಮುಂತಾದವು.

ಪ್ರಶಸ್ತಿ[ಬದಲಾಯಿಸಿ]

‘ಉರಿಯ ಸಿರಿ’ ಕೃತಿಗೆ ಕರ‍್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ವಿಜ್ಞಾನ ಲೇಖಕ ಪುರಸ್ಕಾರ ಅವರಿಗೆ ಸಂದಿದೆ. ಬಾವೂರಾವ್ ದೇವರಸ್ ಟ್ರಸ್ಟಿನ ‘ರಾಷ್ಟ್ರೀಯ ಯುವ ಬರಹಗಾರ ಪುರಸ್ಕಾರ’ವೂ ದೊರಕಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.sallapa.com/2017/07/blog-post.html