ಮಾಧ್ಯಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮಾಧ್ಯಮ ಅಥವಾ ಸಮೂಹ ಮಾಧ್ಯಮ ಎಂದು ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಸಂಗೀತ, ನೃತ್ಯ, ನಾಟಕ, ಅಂತರಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹೀರಾತು, ಡಂಗುರ, ಸಿನಿಮಾ – ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಣಿಸಬಹುದು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು “ನಾಲ್ಕನೇ ಅಂಗ” (Fourth Estate) ಎಂದೂ ಕರೆಯುತ್ತಾರೆ.

ಮುದ್ರಣ ಮಾಧ್ಯಮ[ಬದಲಾಯಿಸಿ]

ಪತ್ರಿಕೆಗಳನ್ನು ಮುದ್ರಣ/ಲಿಖಿತ ಮಾಧ್ಯಮ ಎನ್ನಬಹುದು. ಕ್ರಿ.ಶ. ೧೮೪೩ರಲ್ಲಿ ಪ್ರಾರಂಭವಾದ ””ಮಂಗಳೂರು ಸಮಾಚಾರ”” ಕನ್ನಡದ ಮೊದಲ ಪತ್ರಿಕೆ. ಈಗ ಕನ್ನಡ ಮುದ್ರಣ ಮಾಧ್ಯಮ ಅಗಾಧವಾಗಿ ಬೆಳೆದು, ಒಂದು ಒಳ್ಳೆಯ ಮಟ್ಟಕ್ಕೆ ಬಂದು ನಿಂತಿದೆ. ಪತ್ರಿಕೆಗಳಲ್ಲಿ ಎರಡು ವಿಧಗಳಿವೆ.೧)ರಾಜ್ಯ ಮಟ್ಟದ ಸುದ್ಧಿಯನ್ನು ನೀಡುವ ಪತ್ರಿಕೆ, ೨)ರಾಷ್ಟ್ರಮಟ್ಟದ ವಿಷಯಗಳನ್ನು ಜನರಿಗೆ ತಲುಪಿಸುವ ಪತ್ರಿಕೆ.

ಸುದ್ದಿ ಪ್ರಧಾನ[ಬದಲಾಯಿಸಿ]

ಸುದ್ದಿ-ಸಮಾಚಾರಗಳನ್ನು ತಿಳಿಸುವ ಪತ್ರಿಕೆಗಳನ್ನು ಸುದ್ದಿ ಪ್ರಧಾನ ಪತ್ರಿಕೆಗಳೆನ್ನಬಹುದು. ಇವುಗಳು ಸಾಮನ್ಯವಾಗಿ ದೈನಿಕ, ಸಾಪ್ತಾಹಿಕ ಮತ್ತು ಪಾಕ್ಷಿಕವಾಗಿ ಪ್ರಕಟಣೆಗೊಳ್ಳುತ್ತವೆ.

ವಿಷಯ ಪ್ರಧಾನ[ಬದಲಾಯಿಸಿ]

ಸಿನಿಮಾ, ಕೃಷಿ, ಆಟೋಟ, ಆಧ್ಯಾತ್ಮ – ಹೀಗೆ ವಿವಿಧ ವಿಷಯಪ್ರಧಾನ ಸುದ್ದಿಗಳನ್ನು ಪ್ರಕಟಿಸುವ ಹಲವು ಪತ್ರಿಕೆಗಳು ಸಾಮಾನ್ಯವಾಗಿ ವಿಶೇಷ ಅಂಕಣಗಳಲ್ಲಿ- ಸಿನಿಮಾರಂಜನೆ, ಕೃಷಿಲೋಕ, ಕ್ರೀಡಾಪುರವಣೆ ಅಥವಾ ಇನ್ನೂ ವಿರಳವಾಗಿ ಪ್ರಕಟಣೆಗೊಳ್ಳುತ್ತವೆ.

ಸಾಹಿತ್ಯ ಪ್ರಧಾನ[ಬದಲಾಯಿಸಿ]

ಈ ಪ್ರಕಾರದ ಪತ್ರಿಕೆಗಳನ್ನು ವಿಷಯ ಪ್ರಧಾನ ಗುಂಪಿಗೆ ಸೇರಿಸಬಹುದಾದರೂ, ಕನ್ನಡದಲ್ಲಿ ಸಾಹಿತ್ಯಕ್ಕೆ ಒತ್ತು ಕೊಡುವ ಪತ್ರಿಕೆಗಳ ದೊಡ್ಡ ಗುಂಪೇ ಇದೆ. ಸಾಮಾನ್ಯವಾಗಿ ಸಾಪ್ತಾಹಿಕ ಅಥವಾ ವಾರದ ಅಂಕಣ ಪತ್ರಿಕೆಗಳಲ್ಲಿ ಇವು ಪ್ರಕಟಣೆಗೊಳ್ಳುತ್ತವೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರುವ ಲೇಖಕರೂ ಸೇರಿದಂತೆ ಇವತ್ತಿನ ಅನೇಕ ಪ್ರಮುಖ ಲೇಖಕರು ಈ ಪ್ರಕಾರದ ಪತ್ರಿಕೆಗಳಿಂದಲೇ ಜನಮನ ಗೆದ್ದಿದ್ದು. ಅವುಗಳಲ್ಲಿ ಪ್ರಜಾವಾಣಿ, ಸುಧಾ, ತರಂಗ, ದೀಪಾವಳಿ ವಿಶೇಷಾಂಕ, ಮಯೂರ, ಕಸ್ತೂರಿ, ತುಷಾರ, ಪ್ರಜಾಮತ ಇತ್ಯಾದಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿವೆ.

ಬಾನುಲಿ[ಬದಲಾಯಿಸಿ]

ಮೈಸೂರಿನಲ್ಲಿ ಕ್ರಿ.ಶ.೧೯೨೩ರಲ್ಲಿ ಭಾರತದ ಮೊದಲ ರೇಡಿಯೋ ಕೇಂದ್ರ ಹಾಗೂ ಕ್ರಿ.ಶ.೧೯೩೫ರಲ್ಲಿ ಕನ್ನಡದ ಮೊದಲ ಬಾನುಲಿ ಅಥವಾ ಆಕಾಶವಾಣಿ ಕೇಂದ್ರವು ಪ್ರಾರಂಭವಾದವು. ಈ ಮಾಧ್ಯಮವು ಸ್ವಾತಂತ್ರ್ಯದ ನಂತರ ಭಾರತದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆಯೆನ್ನಬಹುದು. ಸುದ್ದಿ, ಮನರಂಜನೆ, ಜನಪರ ಮಾಹಿತಿಯನ್ನಲ್ಲದೇ ಬಹಳಷ್ಟು ತುರ್ತುಪರಿಸ್ಥಿತಿಗಳಲ್ಲಿ ಮತ್ತು ಅವಘಡಗಳಲ್ಲಿ ಬಾನುಲಿಯು ಸೇವೆ ಸಲ್ಲಿಸಿದೆ. ಕ್ರಿ.ಶ.೧೯೯೦ರ ಈಚೆಗೆ ಖಾಸಗಿ ದೂರದರ್ಶನ ಸೇವೆಗಳ ಪ್ರಸಾರ ಜನಪ್ರಿಯಗೊಳ್ಳುತ್ತ ಬಂದಂತೆ ಈ ಸೇವೆಯು ತನ್ನ ಹೊಳಪನ್ನು ಕಳೆದುಕೊಳ್ಳುತ್ತ ಬಂದಿದೆ. ಇತ್ತೀಚೆಗೆ ಮನರಂಜನೆಗೆ ಮೀಸಲಾಗಿರುವ ಕೆಲವು ಖಾಸಗಿ ಬಾನುಲಿ ಸೇವೆಗಳು ಜನಪ್ರಿಯ ಗೊಳ್ಳುತ್ತ ಬಂದರೂ ಅವು ಕೇವಲ ವ್ಯಾವಹಾರಿಕವಾಗಿವೆ. ಕ್ರಿ.ಶ ೧೯೩೫ರಲ್ಲಿಯೇ ಕನ್ನಡ ಆಕಾಶವಾಣಿ ಪ್ರಾರಂಭಗೊಂಡಿದ್ದರೂ ಇಲ್ಲಿಯವರೆಗೂ ಕನ್ನಡದಲ್ಲಿ ಒಂದೇ ಒಂದು ಸಣ್ಣ ತರಂಗ ಬಾನುಲಿ ಕೇಂದ್ರವಿಲ್ಲ.

ಹವ್ಯಾಸಿ ರೇಡಿಯೋ[ಬದಲಾಯಿಸಿ]

ಕರ್ನಾಟಕದಲ್ಲಿ ಹವ್ಯಾಸಿ ರೇಡಿಯೋ ಉಪಯೋಗಿಸುವ ಸಾಕಷ್ಟು ಆಸಕ್ತರಿದ್ದಾರೆ. ಇದು ತರಬೇತಿ ಹಾಗೂ ಪರವಾನಿಗೆ ಪಡೆದ ಹವ್ಯಾಸಿಗಳು ರೇಡಿಯೋ ತರಂಗಗಳ ಮೂಲಕ ಒಂದು ಜಾಲವನ್ನು ಏರ್ಪಡಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳುವ ಒಂದು ಹವ್ಯಾಸ. ಕೆಲವು ನೈಸರ್ಗಿಕ ವಿಕೋಪಗಳಲ್ಲಿ ಈ ಹವ್ಯಾಸಿಗಳು ಪರಿಹಾರ ತಂಡಗಳಿಗೆ ಉತ್ತಮ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ.

ದೂರದರ್ಶನ[ಬದಲಾಯಿಸಿ]

ಇದೊಂದು ಅತ್ಯಂತ ಪರಿಣಾಮಕಾರಿ ದೃಶ್ಯ ಮಾಧ್ಯಮ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದೆ.

ಸರಕಾರಿ ಒಡೆತನದ ವಾಹಿನಿಗಳು[ಬದಲಾಯಿಸಿ]

೧೫ನೇ ಸೆಪ್ಟಂಬರ್ ೧೯೫೯ರಲ್ಲಿ ದೆಹಲಿಯಲ್ಲಿ ಮೊದಲ ದೂರದರ್ಶನ ಕೇಂದ್ರ ಪ್ರಾರಂಭವಾಯಿತು. ೧೯೮೨ರಲ್ಲಿ ದೂರದರ್ಶನವನ್ನು ರಾಷ್ಟ್ರೀಯ ಪ್ರಸಾರಕವೆಂದು ನೇಮಿಸಲಾಯಿತು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ವಿಶೇಷ ಆಸಕ್ತಿಯೊಂದಿಗೆ ಅಲ್ಪ-ಶಕ್ತಿ ಪ್ರಸಾರಣ ಕೇಂದ್ರಗಳನ್ನು ಸ್ಥಾಪಿಸುವುದರೊಂದಿಗೆ ದೂರದರ್ಶನವು ಅತೀ ವೇಗವಾಗಿ ಜವರಿಗೆ ತಲುಪಲಾರಂಭಿಸಿತು. ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಸೀಮಿತವಾಗಿದ್ದ ದೂರದರ್ಶನ ಕ್ರಮೇಣ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಕಾರ್ಯಾರಂಭ ಮಾಡಿದೆ.

ಇತರೆ ಮಾಧ್ಯಮಗಳು[ಬದಲಾಯಿಸಿ]

  1. ಜಂಗಮವಾಣಿ
  2. ಮೊಗಹೊತ್ತಿಗೆ
  3. ಟ್ವಿಟರ್
  4. ವಾಟ್ಸ್ ಆಪ್
  5. ಮುಖ ಪುಸ್ತಕ - ಇತ್ಯಾದಿ
"https://kn.wikipedia.org/w/index.php?title=ಮಾಧ್ಯಮ&oldid=1204259" ಇಂದ ಪಡೆಯಲ್ಪಟ್ಟಿದೆ