ನಾ. ಡಿಸೋಜ

ವಿಕಿಪೀಡಿಯ ಇಂದ
(ನಾ.ಡಿಸೋಜಾ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾ. ಡಿಸೋಜ
ನಾ ಡಿಸೋಜ
ಜನನ ಜೂನ್ ೬, ೧೯೩೭
ಶಿವಮೊಗ್ಗ ಜಿಲ್ಲೆಯ ಸಾಗರ
ವೃತ್ತಿ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ

ನಾ. ಡಿಸೋಜ (ಜೂನ್ ೬, ೧೯೩೭) ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.

ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ, ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ.

ಪರಿವಿಡಿ

ಜೀವನ[ಬದಲಾಯಿಸಿ]

ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.

ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ನೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.

ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು (ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು.

ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು. ನಾ. ಡಿಸೋಜಅವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದರು.

ಕಥಾ ಲೋಕದಲ್ಲಿ[ಬದಲಾಯಿಸಿ]

ನಾ. ದಿಸೋಜರು ಮೊದಲಿಗೆ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದರು. ನಂತರ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು.

ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು ೧೯೬೪ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು ೪೦. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ.

ಇವರು ಪತ್ರಿಕೆಗಳಿಗೆ ಬರೆದ ಸಣ್ಣ ಕಥೆಗಳ ೯ ಸಂಕಲನಗಳಲ್ಲಿ ಸಂಕಲಿತಗೊಂಡಿದ್ದು, ಸಮಗ್ರ ಕಥೆಗಳ ೨ ಸಂಪುಟಗಳಲ್ಲಿ ಪ್ರಕಟವಾಗಿವೆ.

ಪ್ರಸಿದ್ಧ ಚಲನಚಿತ್ರಗಳಾದ ಕಥೆಗಳು[ಬದಲಾಯಿಸಿ]

ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿ ಉಳ್ಳ ‘ಮುಳುಗಡೆ’ ಕಾದಂಬರಿಯು ಸುಧಾ ಉಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ’, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನುರವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ. ಇವುಗಳಲ್ಲಿ `ಕಾಡಿನ ಬೆಂಕಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ , `ದ್ವೀಪ' ಚಿತ್ರ `ಸ್ವರ್ಣ ಕಮಲ~ ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ.

ದೂರದರ್ಶನ ಮಾಧ್ಯಮದಲ್ಲಿ ಸಹಾ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.

ಪಠ್ಯಪುಸ್ತಕಗಳಲ್ಲಿ[ಬದಲಾಯಿಸಿ]

‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದನ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.

ಮಕ್ಕಳ ಸಾಹಿತ್ಯದಲ್ಲಿ[ಬದಲಾಯಿಸಿ]

ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿರುವ ನಾ.ಡಿಸೋಜ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ 12 ಕೃತಿಗಳನ್ನು ಪ್ರಕಟಿಸಿದ್ದಾರೆ.

ಇತರ ಭಾಷೆಗಳಲ್ಲಿ[ಬದಲಾಯಿಸಿ]

ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ, ಪ್ರೀತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ, ತಿರುವು ಮುಂತಾದ ಕಾದಂಬರಿಗಳು ಕೊಂಕಣಿಗೆ, ಇಗರ್ಜಿ ಕಾದಂಬರಿ ಮತ್ತು ಬಾಲಗಂಧರ್ವ, ಏಸುಕ್ರಿಸ್ತ ಕೃತಿಗಳು ಇಂಗ್ಲಿಷ್‌ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿಯು ಹಿಂದಿ ಭಾಷೆಗೂ ಅನುವಾದಗೊಂಡಿದೆ.

ಗೌರವಾನ್ವಿತ ಅಧ್ಯಯನಗಳು[ಬದಲಾಯಿಸಿ]

ನಾ.ಡಿಸೋಜರವರ ಸಾಹಿತ್ಯ ಕುರಿತು ಮದರಾಸು ವಿಶ್ವವಿದ್ಯಾಲಯದ ಶ್ರೀ ಪ್ರಕಾಶ್ ಸೈಮನ್‌ರವರು ‘ನಾ. ಡಿಸೋಜರವರ ೨೫ ಕಥೆಗಳು ಒಂದು ಅಧ್ಯಯನ’ ಕುರಿತು ಎಂ.ಫಿಲ್. ಪದವಿ (೧೯೯೫), ಮಧುರೆ ಕಾಮರಾಜ ವಿಶ್ವವಿದ್ಯಾಲಯದ ಎಂ.ಎಂ. ಮಂಜುನಾಥರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ – ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಎಂ.ಫಿಲ್. ಪದವಿ (೧೯೯೮), ಕುವೆಂಪು ವಿಶ್ವವಿದ್ಯಾಯದ ಟಿ.ಎಸ್. ಶೈಲಾರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳು’ ಮಹಾ ಪ್ರಬಂಧಕ್ಕೆ ಎಂ.ಫಿಲ್ ಪದವಿ (೨೦೦೧) ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಂಗಾ ಮೂಲಿಮನಿಯವರು ‘ನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ (೨೦೦೧) ಪಡೆದಿದ್ದಾರೆ.

ಕ್ರಿಯಾಶೀಲ ಕೊಡುಗೆಗಳು[ಬದಲಾಯಿಸಿ]

ನಾ. ಡಿಸೋಜ ಅವರು ಕರ್ನಾಟಕ ಸಾಹಿತ್ಯ ಅಕಾಡಮಿ, ಕೊಂಕಣಿ ಸಾಹಿತ್ಯ ಅಕಾಡಮಿ, ಪುಸ್ತಕ ಪ್ರಾಧಿಕಾರ, ಕುವೆಂಪು ವಿಶ್ವವಿದ್ಯಾಲಯದ ಸೆನೆಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್, ಕುವೆಂಪು ರಂಗ ಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ (1988, 1993, ), ಗುಲ್ವಾಡಿ ವೆಂಕಟಾವ್ ಪ್ರಶಸ್ತಿ (1988), ಸಂದೇಶ್ ಸಾಹಿತ್ಯ ಪ್ರಶಸ್ತಿ (1998), ನಿರಂಜನ ಸಾಹಿತ್ಯ ಪ್ರಶಸ್ತಿ (2003), ಆಳ್ವಾಸ್ ನುಡಿಸಿರಿ ಪ್ರಶಸ್ತಿ (2006), ವರ್ಧಮಾನ ಪ್ರಶಸ್ತಿ (2006), ಚಿತ್ರದುರ್ಗದ ಬೃಹನ್ಮಠದಿಂದ ಡಾ. ಶಿವಮೂರ್ತಿ ಮುರುಘ ಶರಣ ಪ್ರಶಸ್ತಿ (2011), ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾ (2011), ಮಾಸ್ತಿ ಪ್ರಶಸ್ತಿ (2012), ಭಟ್ಕಳ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (2006), ಮುಂಬಯಿಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ (2006), ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1997), ಮತ್ತು ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (2007) ಮುಂತಾದ ಗೌರವ, ಪ್ರಶಸ್ತಿಗಳಿಗೆ ಪ್ರಾತರಾಗಿರುವ ನಾ. ಡಿಸೋಜರವರಿಗೆ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಾ. ಡಿಸೋಜ’ (1993).

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ

ಪ್ರಶಸ್ತಿ ಹಾಗು ಪುರಸ್ಕಾರಗಳು:[ಬದಲಾಯಿಸಿ]

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೮, ೧೯೯೩)
  • ಗುಲ್ವಾಡಿ ವೆಂಕಟರಾವ ಪ್ರಶಸ್ತಿ ( ೧೯೮೮)
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೮)
  • ಮಂಗಳೂರು ಸಂದೇಶ ಪ್ರಶಸ್ತಿ (೧೯೯೮)
  • ನವದೆಹಲಿ ಕಳಾ ಪ್ರಶಸ್ತಿ (೧೯೯೮)
  • ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ (೨೦೦೩)

ಸದಸ್ಯತ್ವಗಳು[ಬದಲಾಯಿಸಿ]

  • ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಿನೇಟ ಸದಸ್ಯ (೧೯೯೩-೯೫ ; ೧೯೯೬-೯೮)
  • ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ (೧೯೯೫)
  • ಪುಸ್ತಕ ಪ್ರಾಧಿಕಾರ ಸದಸ್ಯ (೧೯೯೫)
  • ಕುವೆಂಪು ವಿಶ್ವವಿದ್ಯಾಲಯ ಸಿನೇಟ್ ಸದಸ್ಯ (೧೯೯೬-೯೮)
  • ಶಿವಮೊಗ್ಗಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್ ಸದಸ್ಯ (೧೯೯೬-೯೯)

ನಾ ಡಿಸೋಜ ರಚಿಸಿರುವ ಕೃತಿಗಳು[ಬದಲಾಯಿಸಿ]

ಕಾದಂಬರಿ ೧. ಅಜ್ಞಾತ ೨. ಆಸರೆ ೩. ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು ೪. ಇಗರ್ಜಿಯ ಸುತ್ತಲಿನ ಮನೆಗಳು ೫. ಈ ನೆಲ ಈ ಜಲ ೬. ಒಂದು ಜಲಪಾತದ ಸುತ್ತ ೭. ಒಡ್ಡು ೮. ಕಾಡಿನ ಬೆಂಕಿ ೯. ಕುಂಜಾಲು ಕಣಿವೆಯ ಕೆಂಪು ಹೂವು ೧೦. ಕೆಂಪು ತ್ರಿಕೋನ ೧೧. ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ ೧೨. ಕ್ರಯ ವಿಕ್ರಯ ೧೩. ಗಾಂಧಿ ಬಂದರು ೧೪. ಜೀವ ಕಳೆಯ ಮಹಾಸತಿ ೧೫. ಜೀವಕಳೆ ೧೬. ದುರ್ಗವೆಂಬ ವ್ಯೂಹ ೧೭. ದ್ವೀಪ ೧೮. ನಡುವೆ ನಿಂತ ಜನ ೧೯. ನೀರಮ್ಮ ವ್ಯಾಧಿ ಪುರಾಣ ೨೦. ನೆಲೆ ೨೧. ಪ್ರಜ್ಞಾಬಲಿ ೨೨. ಪ್ರೀತಿಯೆಂಬ ಚುಂಬಕ ೨೩. ಪ್ರೀತಿಯೊಂದೇ ಸಾಲದೇ? ೨೪. ಬಂಜೆ ಬೆಂಕಿ ೨೫. ಮಂಜಿನ ಕಾನು ೨೬. ಮಾನವ ೨೭. ಮುಳುಗಡೆ ೨೮. ವಿಷವರ್ತುಲ ೨೯. ವಿಷಾನಿಲ ೩೦. ವೀರಭದ್ರ ನಾಯಕ ೩೧. ಶಿವನ ಡಂಗುರ ೩೨. ಸುವಾಸಿನಿ

ಐತಿಹಾಸಿಕ ಕಾದಂಬರಿ ೧. ಇಕ್ಕೇರಿಯಲ್ಲಿ ಕ್ರಾಂತಿ ೨. ಚೆನ್ನಿ ಚೆನ್ನಮ್ಮ ಚೆನ್ನಮ್ಮಾಜಿ ೩. ರಾಗ ವಿರಾಗ ೪. ಶೃಂಗೇರಿಯಲ್ಲಿ ಶಾಂತಿ


ಕಥಾಸಂಕಲನ ೧. ಇಪ್ಪತ್ತೈದು ಕಥೆಗಳು ೧೯೮೯ ೨. ಗಿಳಿಯೇ ಓ ಗಿಳಿಯೇ ೩. ನಿನ್ನುದ್ಧಾರವೆಷ್ಟಾಯ್ತು ೪. ಪ್ರಜ್ಞಾ ಎಂಬ ನದಿ ೫. ಸಣ್ಣಕಥೆ ೧೯೮೭ ೬. ಸ್ವರ್ಗದ ಬಾಗಿಲಲ್ಲೂ ನರಕ


ಜಾನಪದ ೧. ಚಿತ್ತಾರ ೨. ಹೂವ ಚೆಲ್ಲುತ ಬಾ


ನಾಟಕ ೧. ತಬ್ಬಲಿ ೨. ದೇವರಿಗೇ ದಿಕ್ಕು ೩. ದ್ವೀಪ ೪. ಬೆತ್ತಲೆ ಸೇವೆ ೫. ಭೂತದ ಎದುರು ಬೇತಾಳ


ಮಕ್ಕಳ ಪುಸ್ತಕಗಳು ೧. ಭೂತ (ನಾಟಕ) ೨. ಮುಂದೇನು? (ನಾಟಕ) ೩. ಗೇರಸೊಪ್ಪೆ ೪. ಕದಂಬ ಮಯೂರಶರ್ಮ ೫. ಬಾಲಗಂಧರ್ವ ೬. ಪುಲಿನ ಬಿಹಾರಿದಾಸ್ ೭. ಸದಾಶಿವ ಬ್ರಹ್ಮೇಂದ್ರ ೮. ಶರಾವತಿ ೯. ಸಂಗೀತಪುರ ೧೦. ಸೊರಬ ೧೧. ಬೆಳಕಿನೊಡನೆ ಬಂತು ನೆನಪು ೧೨. ಹಕ್ಕಿಗಳಿಗೆ ಬಂತು ಬಣ್ಣ ೧೩. ನೇತ್ರಾಣಿ ಗುಡ್ಡಕ್ಕೆ ಯಾತ್ರೆ ೧೪. ದಂತ ಮತ್ತು ಗಂಧ ೧೫. ಆನೆ ಬಂತೊಂದಾನೆ ೧೬. ಆನೆ ಹುಡುಗ ಅಬ್ದುಲ್ಲಾ ೧೭. ಗೋಡೆ ಬೇಡ ೧೮. ಕಾಡಾನೆಯ ಕೊಲೆ ೧೯. ಗೋಪಿಯ ಗೊಂಬೆ ೨೦. ಕೋಳಿ ಅನಂತ

ರೇಡಿಯೋ ನಾಟಕಗಳು ೧. ಭುವಿಗೆ ಬಂದ ಬೆಳಕು ೨. ರೂಪದರ್ಶಿ ೩. ಹಿಪ್ಪಿ ಮತ್ತು ಅಜ್ಜಿ ೪. ಮಲೆನಾಡಿನ ಮದಕರಿ ೫. ಊರಾಳು ಅರಮನೆಗೆ ಜನ ಬಂದರು ೬. ಬೆಳಗಾಗಿ ನಾನೆದ್ದು ೭. ಹಳೆಯ ಬಳಗಕ್ಕೆ ಜೈ (ಮಕ್ಕಳ ನಾಟಕ)


ಕಿರುಕಾದಂಬರಿ ೧. ತಿರುಗೋಡಿನ ರೈತ ಮಕ್ಕಳು ೨. ಗುಡಿಗಾರರು ೩. ತಿರುವುಗಳು ೪. ಹಕ್ಕಿ ಹಾರಿತು ೫. ನಾಯಕ ೬. ಜಾತ್ರೆಯಲ್ಲಿ ಕಂಡವಳು ೭. ಸುರಂಗ ೮. ಶರಾವತಿ ಎಂಬ ಮಾನಿನಿ ೯. ಮಹಾಸತಿ ೧೦. ಇತಿಹಾಸದ ಕಪ್ಪು ಚುಕ್ಕೆ ೧೧. ಎರಡು ರಾತ್ರಿ ಒಂದು ಹಗಲು

"http://kn.wikipedia.org/w/index.php?title=ನಾ._ಡಿಸೋಜ&oldid=331791" ಇಂದ ಪಡೆಯಲ್ಪಟ್ಟಿದೆ