ಸಾವಂತ್‍ವಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾವಂತ್‍ವಾಡಿಯಲ್ಲಿ ಸೂರ್ಯಾಸ್ತ

ಸಾವಂತ್‍ವಾಡಿ ಕಲಾವಿದರ ಸೌಂದರ್ಯದ ನಾಡಾಗಿದೆ. ಇದು ಭಾರತದ ಮಧ್ಯ-ಪಶ್ಚಿಮ ಕರಾವಳಿಯಲ್ಲಿರುವ ಕೊಂಕಣ ಪ್ರದೇಶದ ಅವಿಭಾಜ್ಯ ಅಂಗವಾಗಿದೆ.

ಸಾವಂತ್‍ವಾಡಿಯ ಕರಾವಳಿಯು ವಿಶೇಷವಾಗಿ ಯುರೋಪಿಯನ್ನರಿಗೆ ಯುದ್ಧಾನುಕೂಲವಾಗಿ ಪ್ರಮುಖವಾಗಿತ್ತು.

ಸಾವಂತ್‍ವಾಡಿಯ ರಾಜ್ಯವು ಸಾವಂತ್ ಭೋಂಸ್ಲೆ ಅವರ ರಾಜಮನೆತನದಿಂದ ಆಳಲ್ಪಟ್ಟಿತು. ೧೭೫೫ - ೧೮೦೩ ರ ಅವಧಿಯಲ್ಲಿ ಖೇಮ್ ಸಾವಂತ್ III ರ ಆಳ್ವಿಕೆಯಲ್ಲಿ ನಿರ್ಮಿಸಲಾದ ಸಾವಂತ್‍ವಾಡಿಯ ಅರಮನೆಯು ನಗರದ ಹೆಮ್ಮೆಯಾಗಿದೆ.

ಇತಿಹಾಸ[ಬದಲಾಯಿಸಿ]

ಹದಿನೇಳನೇ ಶತಮಾನದ ಆರಂಭದಲ್ಲಿ ಸಾವಂತರು ಆದಿಲ್ ಶಾಹಿಯ ಆಳ್ವಿಕೆಯಲ್ಲಿ ದೇಶ್‍ಮುಖ್‍ನ ಆನುವಂಶಿಕ ಹಕ್ಕಿನ ಊಳಿಗಮಾನ್ಯ ಹಿಡುವಳಿದಾರರಾಗಿದ್ದರು. ಶಿವಾಜಿ ಅಡಿಯಲ್ಲಿ ಮರಾಠರು ಮತ್ತು ಗೋವಾದಲ್ಲಿ ಪೋರ್ಚುಗೀಸರು ಸಾವಂತ್‍ವಾಡಿಯೊಂದಿಗೆ ಸಂಪರ್ಕಕ್ಕೆ ಬಂದ ಇತರ ಎರಡು ಪ್ರಮುಖ ಶಕ್ತಿಗಳು.

ವಾಸ್ತುಶಾಸ್ತ್ರೀಯ ಲಕ್ಷಣಗಳು[ಬದಲಾಯಿಸಿ]

ಸಾವಂತ್‍ವಾಡಿಯ ಅರಮನೆ ನಿಜವಾಗಿಯೂ ವಾಸ್ತುಶಿಲ್ಪದ ಮೇರುಕೃತಿಯಾಗಿದ್ದು ಇಂಗ್ಲಿಷ್ ಕಮಾನುಗಳನ್ನು ಸ್ಥಳೀಯ ಕೆಲಸಗಾರಿಕೆ ಮತ್ತು ರೋಮಾಂಚಕ ಕೆಂಪು ಲ್ಯಾಟರೈಟ್ ಕಲ್ಲುಗಳೊಂದಿಗೆ ವಿಲೀನಗೊಳಿಸುತ್ತದೆ. ಇಟ್ಟಿಗೆಗಳಿಂದ ಕೂಡಿದ ಕಂದು ಬಣ್ಣದ ಗೋಡೆಗಳು ಈ ಎರಡು ಅಂತಸ್ತಿನ ಅರಮನೆಯ ಸ್ಥಳೀಯತೆಯನ್ನು ಹೆಚ್ಚಿಸುತ್ತವೆ ಮತ್ತು ಇದನ್ನು ಸಾವಂತ್‍ವಾಡಿಯ ವಿಶಿಷ್ಟವಾದ, ತಪ್ಪಿಸಿಕೊಳ್ಳಲಾಗದಂತಹ ಪ್ರವಾಸಿ ಆಕರ್ಷಣೆಯನ್ನಾಗಿ ಮಾಡುತ್ತದೆ. ಅರಮನೆಯು ಮಧ್ಯದಲ್ಲಿ ಸುಂದರವಾದ ಮುಂಭಾಗದ ಚೌಕವನ್ನು ಹೊಂದಿದೆ, ಇದು ಒಂದು ನಿರ್ಮಲವಾದ ಹುಲ್ಲುಹಾಸಿನಿಂದ ಆವೃತವಾಗಿದೆ ಮತ್ತು ಎಲ್ಲಾ ನಾಲ್ಕು ಬದಿಗಳಲ್ಲಿ ಕೊಠಡಿಗಳಿಂದ ಸುತ್ತುವರೆದಿದೆ, ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಅರಮನೆಯ ಆಸುಪಾಸಿನಲ್ಲಿ ವಿಸ್ತಾರವಾದ ಉದ್ಯಾನಗಳು, ಮರಗಳು ಮತ್ತು ಈ ಭೂದೃಶ್ಯದ ಉದ್ಯಾನದ ಮಧ್ಯದಲ್ಲಿ ಸುಂದರವಾದ ಭವ್ಯವಾದ ರಚನೆಯನ್ನು ಒಳಗೊಂಡಿದೆ.

ಲೆಸ್ಟರ್ ಪ್ರವೇಶದ್ವಾರ[ಬದಲಾಯಿಸಿ]

೧೮೯೫ ರಲ್ಲಿ ನಿರ್ಮಿಸಲ್ಪಟ್ಟ ಲೆಸ್ಟರ್ ಪ್ರವೇಶದ್ವಾರದ ಮೂಲಕ ಅರಮನೆಯ ಪ್ರವೇಶ ಮಾಡಬೇಕು.

ಮೋತಿ ತಲಾವ್[ಬದಲಾಯಿಸಿ]

ಮೋತಿ ತಲಾವ್‌ಗೆ ಎದುರಾಗಿರುವ ತೆಂಗಿನ ತೋಟದೊಂದಿಗೆ ಅರಮನೆಯ ಆಯಕಟ್ಟಿನ ಸ್ಥಳವು ರಾಜರ ನಿವಾಸದ ಭವ್ಯವಾದ ಭಂಗಿಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಮಾನವ ನಿರ್ಮಿತ ಸರೋವರವನ್ನು ೧೮೭೪ ರಲ್ಲಿ ನಿರ್ಮಿಸಲಾಯಿತು. ಇದು ನರೇಂದ್ರ ಬೆಟ್ಟದ ಸುಂದರ ಪರಿದೃಶ್ಯಕ ನೋಟವನ್ನು ನೀಡುತ್ತದೆ.

ದರ್ಬಾರ್ ಹಾಲ್[ಬದಲಾಯಿಸಿ]

ಅರಮನೆಯ ದರ್ಬಾರ್ ಹಾಲ್‌ನ ಶಿಲಾನ್ಯಾಸವನ್ನು ಮುಂಬೈನ ಗೌರವಾನ್ವಿತ ಗವರ್ನರ್ ಸರ್ ಜೇಮ್ಸ್ ಫರ್ಗುಸನ್ ಅವರು ೨೧ ಮಾರ್ಚ್ ೧೮೮೧ ರಂದು ಸ್ಥಾಪಿಸಿದರು. ರಘುನಾಥ್ ಸಾವಂತ್ ಭೋಂಸ್ಲೆ ಅವರ ಆಳ್ವಿಕೆಯಲ್ಲಿ ಸಭಾಂಗಣವನ್ನು ಪೂರ್ಣಗೊಳಿಸಲಾಯಿತು. ದರ್ಬಾರ್ ಹಾಲ್ ನೆಲವನ್ನು ಹೂವನ್ನು ಹೋಲುವ ರೀತಿಯಲ್ಲಿ ಆಯಕಟ್ಟಿನ ರೀತಿಯಲ್ಲಿ ಜೋಡಿಸಲಾದ ಹಾಸುಬಿಲ್ಲೆಗಳಿಂದ ತುಂಬಲಾಗಿದೆ. ದರ್ಬಾರ್ ಹಾಲ್‌ನ ಮೇಲ್ಛಾವಣಿಯನ್ನು ಕೆತ್ತಿದ ಸ್ತುವಿನ ಫಲಕಗಳಿಂದ ಅಳವಡಿಸಲಾಗಿದೆ ಮತ್ತು ಹೂವಿನ ವಿನ್ಯಾಸಗಳನ್ನು ರೂಪಿಸಲು ಜೋಡಿಸಲಾಗಿದೆ.

ತಾಯಿಸಾಹೇಬ್ ವಾಡಾ[ಬದಲಾಯಿಸಿ]

ವಾಡಾಗಳು ಮಹಾರಾಷ್ಟ್ರದ ಶ್ರೀಮಂತ ಮತ್ತು ಗೌರವಾನ್ವಿತ ವಾಸ್ತುಶಾಸ್ತ್ರೀಯ ಪರಂಪರೆಯಾಗಿದ್ದು ಅವುಗಳ ಚತುರ್ಭುಜ ನಿರ್ಮಾಣಕ್ಕೆ ಮತ್ತು ಮಧ್ಯದಲ್ಲಿ ತೆರೆದ ಜಗುಲಿಗೆ ಹೆಸರುವಾಸಿಯಾಗಿವೆ. ಇವು ಮರಾಠರ ಹೆಮ್ಮೆ, ಧರ್ಮ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪ್ರಕ್ಷುಬ್ಧ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ತಾಯಿಸಾಹೇಬ್ ವಾಡಾವನ್ನು ರಘುನಾಥ್ ಸಾವಂತ್ ಭೋಂಸ್ಲೆ ೧೮೦೦ ರ ದಶಕದ ಮಧ್ಯಭಾಗದಲ್ಲಿ ತಮ್ಮ ಎರಡನೇ ಪತ್ನಿ ಯಮುನಾ ಬಾಯಿಗಾಗಿ ನಿರ್ಮಿಸಿದರು.

ಪರಂಪರೆ, ಕಲೆ ಮತ್ತು ಮೆರುಗು ಲೇಪಿತ ವಸ್ತುಗಳು[ಬದಲಾಯಿಸಿ]

ಐತಿಹಾಸಿಕವಾಗಿ, ೧೭ ಮತ್ತು ೧೮ ನೇ ಶತಮಾನಗಳಲ್ಲಿ ಆಂಧ್ರ ಮತ್ತು ತೆಲಂಗಾಣ ಪ್ರದೇಶಗಳಿಂದ ಹಲವಾರು ವಿದ್ವಾಂಸ ಬ್ರಾಹ್ಮಣರು ಖೇಮ್ ಸಾವಂತ್ III ರೊಂದಿಗೆ ಧರ್ಮಶಾಸ್ತ್ರದಲ್ಲಿ ಪ್ರವಚನಗಳನ್ನು ನಡೆಸಲು ಸಾವಂತ್‍ವಾಡಿಗೆ ಭೇಟಿ ನೀಡುತ್ತಿದ್ದರು. ಅವರು ತಮ್ಮೊಂದಿಗೆ ಗಂಜೀಫಾ ಮತ್ತು ಮೆರುಗು ಲೇಪಿತ ವಸ್ತುಗಳ ಕಲೆಯನ್ನು ಸಾವಂತ್‍ವಾಡಿಗೆ ಆ ಸಮಯದಲ್ಲಿ ತಂದರು.

ಗಂಜೀಫಾ[ಬದಲಾಯಿಸಿ]

ಗಂಜೀಫಾ ಇಸ್ಪೀಟೆಲೆಗಳಾಗಿದ್ದು ಮತ್ತು ಪರ್ಷಿಯಾದಲ್ಲಿ ಅದರ ಮೂಲವನ್ನು ಹೊಂದಿವೆ. ಇದನ್ನು ೧೬ ನೇ ಶತಮಾನದಲ್ಲಿ ಮೊಘಲರು ಭಾರತಕ್ಕೆ ತಂದರು. ಮೊಘಲರ ಕಾಲದಲ್ಲಿ ಸೂಫಿ ಸಂತರ ಮೂಲಕ ಗಂಜೀಫಾ ಎಲೆಗಳು ಬಂದಿವೆ ಎಂದು ನಂಬಲಾಗಿದೆ.

ಆಸ್ಥಾನಗಳಲ್ಲಿ, ಗಂಜೀಫಾ ಎಲೆ ಆಟವನ್ನು ದರ್ಬಾರ್ ಕಲಾಂ ಎಂದು ಕರೆಯಲಾಗುತ್ತಿತ್ತು ಮತ್ತು ದಂತ, ಆಮೆ ಚಿಪ್ಪು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಬಳಸಲಾಗುತ್ತಿತ್ತು. ಅದೇ ಸಮಯದಲ್ಲಿ, ಇದು ಜನಸಾಮಾನ್ಯರಲ್ಲಿ ಪ್ರಸಿದ್ಧಿ ಪಡೆದಿದ್ದರಿಂದ, ಇದನ್ನು ಬಜಾರ್ ಕಲಾಂ ಎಂದು ಕರೆಯಲಾಯಿತು. ಬಜಾರ್ ಕಲಾಂ ಎಲ್ಲರಿಗೂ ಕೈಗೆಟುಕುವ ತಾಳೆ ಎಲೆ, ಗಟ್ಟಿಯಾದ ಬಟ್ಟೆ, ಪೇಸ್ಟ್ ಬೋರ್ಡ್‌ಗಳು ಮುಂತಾದ ಅಗ್ಗದ ವಸ್ತುಗಳಿಂದ ತಯಾರಿಸಲ್ಪಡುತ್ತಿದ್ದವು.

ಎಲೆಗಳು ವೃತ್ತಾಕಾರದ, ಆಯತಾಕಾರದ ಮತ್ತು ಅಂಡಾಕಾರದ ಆಕಾರದಲ್ಲಿರುತ್ತವೆ ಮತ್ತು ಕುಶಲಕರ್ಮಿಗಳಿಂದ ಕೈಯಿಂದ ಮಾಡಲ್ಪಟ್ಟಿರುತ್ತವೆ. ಆರಂಭದಲ್ಲಿ ಎಲೆಗಳಲ್ಲಿ ಪರ್ಷಿಯನ್ ಲಕ್ಷಣಗಳು ಮತ್ತು ಅಕ್ಷರಗಳಿದ್ದವು, ಆದರೆ ನಂತರ ಅವುಗಳಿಗೆ ಹೆಚ್ಚು ಭಾರತೀಯ ಸ್ಪರ್ಶವನ್ನು ನೀಡಲು ರಾಜಮನೆತನದವರು ಕುಶಲಕರ್ಮಿಗಳಿಗೆ ಸ್ಥಳೀಯ ವಿನ್ಯಾಸಗಳನ್ನು ಅಳವಡಿಸಲು ಹೇಳಿದರು ಮತ್ತು ರಾಮಾಯಣ, ದಶಾವತಾರ ಮತ್ತು ರಾಶಿಗಳ ಅನೇಕ ಆಕೃತಿಗಳು ಬಂದವು.

ಮೆರುಗು ಲೇಪಿತ ವಸ್ತುಗಳು[ಬದಲಾಯಿಸಿ]

ಈ ಕುಶಲಕರ್ಮ ಮತ್ತು ಕುಶಲಕರ್ಮಿಗಳ ಸಮುದಾಯವಾದ ಚಿಟಾರಿಗಳು ಸಾವಂತ್‍ವಾಡಿಯ ಆಡಳಿತಗಾರರ ಆಶ್ರಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಿದವು. ೧೮ ನೇ ಮತ್ತು ೧೯ ನೇ ಶತಮಾನಗಳಲ್ಲಿ, ಸಾವಂತ್‍ವಾಡಿಯಲ್ಲಿ ಈ ಕುಶಲಕರ್ಮದ ವಿವಿಧ ಶಾಲೆಗಳನ್ನು ಪ್ರಾರಂಭಿಸಲಾಯಿತು. ಗಂಜೀಫಾ ಎಲೆಗಳನ್ನು ಕಾಗದದಿಂದ ತಯಾರಿಸಲಾಗಿದ್ದು, ಅವುಗಳನ್ನು ಹುಣಸೆ ಬೀಜದ ಪುಡಿ ಮತ್ತು ಎಣ್ಣೆಯ ಮಿಶ್ರಣದಿಂದ ಆವರಿಸಲಾಗುತ್ತದೆ. ನಂತರ ಮೆರುಗೆಣ್ಣೆಯಿಂದ ಲೇಪಿಸಲಾಗುತ್ತದೆ. ಪ್ರಸ್ತುತ, ಹೂವಿನ ಅಂಚುಗಳು ಮತ್ತು ವಿನ್ಯಾಸಗಳು ಮತ್ತು ಪೌರಾಣಿಕ ವ್ಯಕ್ತಿಗಳ ವರ್ಣಚಿತ್ರವನ್ನು ನೀರು-ಆಧಾರಿತ ಟೆಂಪೆರಾ ಬಣ್ಣಗಳಿಂದ ಮಾಡಲಾಗುತ್ತದೆ ಮತ್ತು ನಂತರ ಅವುಗಳ ಬಣ್ಣ ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ವರ್ಧಿಸಲು ಮೆರುಗೆಣ್ಣೆಯನ್ನು ಲೇಪಿಸಲಾಗುತ್ತದೆ.

ಸಾವಂತ್‍ವಾಡಿ ವಸ್ತುಸಂಗ್ರಹಾಲಯ[ಬದಲಾಯಿಸಿ]

ಸಾವಂತ್‍ವಾಡಿ ಅರಮನೆಯು ಅದರ ಕೆಲವು ಕೋಣೆಗಳಲ್ಲಿ ವಸ್ತುಸಂಗ್ರಹಾಲಯವನ್ನು ಸಹ ಹೊಂದಿದೆ. ಇದನ್ನು ಮುಖ್ಯವಾಗಿ ರಾಜಮನೆತನದವರಿಗೆ ಮತ್ತು ಗಂಜೀಫಾ- ಸಾವಂತವಾಡಿಯ ಕಲೆಗೆ ಸಮರ್ಪಿಸಲಾಗಿದೆ.

ಈ ವಸ್ತುಸಂಗ್ರಹಾಲಯವನ್ನು ೨೦೦೫ ರಲ್ಲಿ ರಾಜಮಾತಾ ಸತ್ವಶಿಲಾದೇವಿ ಭೋಂಸ್ಲೆ ಅವರು ತೆರೆದರು.


ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]