ರಾಮಚಂದ್ರದೇವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮಚಂದ್ರದೇವರ
ಜನನಮಾರ್ಚ್ ೨೨, ೧೯೪೮
ಕಲ್ಮಡ್ಕ
ವೃತ್ತಿಲೇಖಕರು
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕವನ, ಕಾದಂಬರಿ, ನಾಟಕ
ವಿಷಯಕನ್ನಡ ಸಾಹಿತ್ಯ
ಸಾಹಿತ್ಯ ಚಳುವಳಿನವೋದಯ

ರಾಮಚಂದ್ರದೇವ ( ಮಾರ್ಚ್ ೨೨, ೧೯೪೮) ಕನ್ನಡ ಸಾಹಿತ್ಯದಲ್ಲಿನ ಪ್ರಮುಖ ಬರಹಗಾರರು.

ಜೀವನ[ಬದಲಾಯಿಸಿ]

ಕನ್ನಡದ ಮಹತ್ವಪೂರ್ಣ ಬರಹಗಾರರಲ್ಲೊಬ್ಬರಾದ ಡಾ. ರಾಮಚಂದ್ರದೇವ ಮಾರ್ಚ್ ೨೨, ೧೯೪೮ರಲ್ಲಿ ಜನಿಸಿದರು.

ಅವರ ಪ್ರಾರಂಭಿಕ ವಿದ್ಯಾಭ್ಯಾಸ ಕಲ್ಮಡ್ಕ, ಬಾಳಿಲ, ಪಂಜ, ಪುತ್ತೂರುಗಳಲ್ಲಿ ನಡೆಯಿತು. ಮೈಸೂರಿನ ಮಹಾರಾಜಾ ಕಾಲೇಜಿನಿಂದ ಕನ್ನಡ, ಇಂಗ್ಲೀಷ್, ಭಾಷಾಶಾಸ್ತ್ರ, ಹಿಂದಿಗಳನ್ನು ಆಯ್ದುಕೊಂಡು ಬಿ.ಎ ಪದವಿ ಪಡೆದ ಅವರು, ಮಾನಸ ಗಂಗೋತ್ರಿಯಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ , ಬೆಂಗಳೂರು ವಿಶ್ವವಿದ್ಯಾಲಯದಿಂದ ಶೇಕ್ಸ್ಪಿಯರ್ ಅನುವಾದಗಳ ತೌಲನಿಕ ಅಧ್ಯಯನಕ್ಕಾಗಿ ಪಿ.ಎಚ್.ಡಿ ಪದವಿಯನ್ನೂ ಪಡೆದರು.

ಅಧ್ಯಾಪನ[ಬದಲಾಯಿಸಿ]

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ರಾಮಚಂದ್ರದೇವ ಅವರು ನಂತರದಲ್ಲಿ ನವದೆಹಲಿಯ ಅಮೇರಿಕನ್ ಎಂಬೆಸಿಗೆ ಸೇರಿದ ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ಸಿನಲ್ಲಿ ಗ್ರಂಥಪಾಲಕರಾಗಿದ್ದರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿಯೂ, ಸಂಸ್ಥೆಯ ಪ್ರಿಂಟರ್ಸ್ ಪ್ರಕಾಶನದ ಮುಖ್ಯಸ್ಥರಾಗಿಯೂ ಕೆಲವುಕಾಲ ಕಾರ್ಯನಿರ್ವಹಿಸಿದ ಅವರು ತಮ್ಮ ಬೋಧಿ ಟ್ರಸ್ಟ್ ನ ಕಾರ್ಯನಿರ್ವಹಣೆ, ಸಾಹಿತ್ಯಾಸಕ್ತಿಗಳ ಜೊತೆ ಜೊತೆಗೆ ಕೃಷಿಕರೂ ಆಗಿದ್ದಾರೆ.

ಬೋಧಿ ಟ್ರಸ್ಟ್[ಬದಲಾಯಿಸಿ]

ತಮ್ಮ ಊರಾದ ಕಲ್ಮಡ್ಕ ಎಂಬಲ್ಲಿ ಬೋಧಿ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರಕಟಣೆಗಳನ್ನೂ ಸಾಂಸ್ಕ್ರತಿಕ ಕಾಯಕಗಳನ್ನೂ ನಡೆಸುತ್ತಿರುವ ರಾಮಚಂದ್ರದೇವ ಅವರು ತಮ್ಮ ಪ್ರಖ್ಯಾತ ನಾಟಕಗಳಿಂದ, ಕಥೆ ಕವನಗಳಿಂದ, ರೂಪಾಂತರಗಳಿಂದ, ವಿಮರ್ಶೆಗಳಿಂದ, ಅಂಕಣಗಳಿಂದ ಮತ್ತು ವಿದ್ವತ್ಪೂರ್ಣ ಉಪನ್ಯಾಸಗಳಿಂದ ಕನ್ನಡ ಜನತೆಗೆ ಚಿರಪರಿಚಿತರು.

ಒಳನೋಟ[ಬದಲಾಯಿಸಿ]

ರಾಮಚಂದ್ರದೇವರ ಕುರಿತಾದ ಬರಹಗಳ ಬಗ್ಗೆ ನಾಡಿನಲ್ಲಿ ಗಣ್ಯರ ಮೆಚ್ಚುಗೆ ನಿರಂತರವಾಗಿ ಹರಿಯುತ್ತಿದೆ. ಕಥೆಗಾರರಾಗಿ ರಾಮಚಂದ್ರದೇವರು ಬರೆದಿರುವ ಬಹುತೇಕ ಕಥೆಗಳು ಅವರು ‘ಸಮಗ್ರ ಕಥೆಗಳು’ ಕಥಾಸಂಕಲನದಲ್ಲಿವೆ. ಅವರ ಕಥೆಗಳ ಕುರಿತಾಗಿ ಪ್ರೊಫೆಸರ್ ಹರಿಯಪ್ಪ ಪೇಜಾವರ ಅವರು ಹೇಳಿರುವ ಮಾತುಗಳು ಕಥೆಗಾರ ರಾಮಚಂದ್ರರ ಬಗ್ಗೆ ಹೆಚ್ಚಿನ ಬೆಳಕು ನೀಡುವಂತದ್ದಾಗಿದೆ.

ಅರ್ಬುದ ಮತ್ತು ಪುಣ್ಯಕೋಟಿ, ಕನ್ನಡದ ಕಥೆಗಳ ಸಂದರ್ಭದಲ್ಲೇ ಒಂದು ಹೊಸಬಗೆಯ ಕಥೆ. ಅವನ, ಅವಳ, ನಿರೂಪಕನ ವಾಯ್ಸುಗಳನ್ನು ಭೂತ ವರ್ತಮಾನಗಳನ್ನು ತುಂಡುಗಡಿಯದಂತೆ ಒಂದೇ ಬಿಂದುವಿನಲ್ಲಿ ಸಂಧಿಸುವ ಬಗೆ ಕನ್ನಡದ ಕಥಾಜಗತ್ತಿಗೇ ಹೊಸತು ಅನ್ನಿಸುತ್ತದೆ. ಅರ್ಬುದ ಹೆಸರು ಹರಡಿಕೊಳ್ಳುವ ಹಿಂಸೆಯ ಕ್ಯಾನ್ಸರಿನ ಪ್ರತೀಕವಾಗುತ್ತ ಸತ್ಯ ತಲೆಕೆಳಗಾದ, ಹಿಂಸೆ ಭ್ರಷ್ಟಾಚಾರ ವಿಜೃಂಭಿಸುವ, ಮನುಷ್ಯನ ಅಂತರ್ವಾಣಿಗೆ (ಪುಣ್ಯಕೋಟಿಯ ಅಂಬಾದನಿ) ಕುರುಡಾಗುವ ಅಬ್ಬರದ ಸದ್ದಿನ ಬೇಬಲ್ ಗೋಪುರದ ಶಿಖರವೇರುತ್ತಿರುವ ಸ್ಥಿತಿಯ ಮಧ್ಯೆಯೂ ಮತ್ತೆ ಅಂತರ್ವಾಣಿ --ಮನುಷ್ಯ ಸಂಬಂಧಕ್ಕೆ ಹಪಹಪಿಸುವ (ಪೋಸ್ಟ್, ಫೋನ್, ಮೊಬೈಲ್ ಮುಂತಾದ ಆಧುನಿಕ ಸಂಪರ್ಕ ಮಾಧ್ಯಮಗಳ ರೂಪಕದ ಜತೆ) ಮೂಲಕ ಕಥೆ ಕೊನೆಯಾಗುವುದು ಬದುಕಿನ ಬಗ್ಗೆ ಆಶೆ ಹುಟ್ಟಿಸುವಂತಿದೆ. ಇಡೀ ಕಥೆ ಆಧುನಿಕೋತ್ತರ ರಚನೆಯಾಗಿ ಕಾಣಿಸುತ್ತದೆ. ಬರೆವಣಿಗೆ ಎಲ್ಲೂ ತುಂಡುಗಡಿಯದೆ ನಿಲುಗಡೆ ಆಯ್ತು ಅನ್ನಿಸಿದಾಗಲೂ ಮತ್ತೆ ("ಅರೆ, ಮತ್ತೆ ರಿಂಗಾಗ್ತಿದೆ", ಅಂದರೆ ಮನುಷ್ಯನ—ಸಂಬಂಧಕ್ಕೆ ಹಪಹಪಿಸುವ--ಪಾಡು--) ಮುಂದುವರಿಯುವ ಸೂಚನೆಯಂತಿದೆ. ಇಡಿಯ ಕಥೆಯ ಶೈಲಿಯೇ ಬದುಕಿನ ಅರಾಜಕ, ಹಿಂಸ್ರ, ಗದ್ದಲದ ಬೇಬಲ್ ಗೋಪುರದ ಅಭಿನಯದಂತಿದೆ. ಭಾಷೆಯ ಜೀವಂತ ಬಳಕೆಯ ಬಗ್ಗೆ, ಶಬ್ದಸೂತಕವನ್ನು ಮೀರುವ ಹಂಬಲಕ್ಕೆ ಭಾಷ್ಯ ಬರೆದಂತಿದೆ ಈ ಕಥೆ. ಆಧುನಿಕ ರಾಜಕೀಯ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ (ಸತ್ಯವನ್ನೇ ಹೇಳಬೇಕಾದ ಮಾಧ್ಯಮಗಳಲ್ಲಿ ಕೂಡ) ಬೇರಿಳಿದ ಭ್ರಷ್ಟಾಚಾರ, ಹಿಂಸಾನಂದದ ಬಗೆಗೂ ಟೀಕೆ ಬರೆದಂತಿದೆ. ಒಟ್ಟಿನಲ್ಲಿ ಇದು ಕಥೆಯಲ್ಲ; ಒಂದು ಆಧುನಿಕ ಕಾವ್ಯವೇ ಆಗಿದೆ.

ಇನ್ನು ಬೇತಾಳ ಕಥೆ. ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುವುದು ಕನ್ನಡಕ್ಕೇನೂ ಹೊಸದಲ್ಲ. ಟಾಗೋರ್ ಈ ತಂತ್ರವನ್ನು ಬಹಳ ಚೆನ್ನಾಗಿಯೇ ನಿರ್ವಹಿಸಿದರು ಅನ್ನಿಸುತ್ತದೆ. ನಡುವೆ ನವ್ಯದ ಮತ್ತಿನಲ್ಲಿ ಈ ತಂತ್ರ ಮೂಲೆಗೆ ಬಿದ್ದಿದ್ದು ಇದೀಗ ಮತ್ತೆ ಮುಂಚೂಣಿಗೆ ಬರುತ್ತಿರುವುದಕ್ಕೆ ಸಾಕ್ಷಿ ಈ ಕತೆ. ಇದೂ ಒಂದು ಆಧುನಿಕ ಕತೆಯೇ. ದಿವ್ಯ ಭವ್ಯ ಎಂದೆಲ್ಲ ಮತ್ತೆ ಪರಂಪರೆಗೇ ಜೋತುಬಿದ್ದ ನಮ್ಮ ಹಿರಿಯ ಬರೆಹಗಾರರ ಮಧ್ಯೆ ರಾಮಚಂದ್ರ ದೇವ ಅವರು ಪೂರ್ವ ಪಶ್ಚಿಮವನ್ನು ಬೆಸೆಯುವ ಮೂಲಕ ಬೇತಾಳಸ್ಥಿತಿಯನ್ನು ಮೀರಲೆತ್ನಿಸುವ ಪಾತ್ರಗಳನ್ನು ಸೃಷ್ಟಿಸಿರುವುದು ಕುತೂಹಲಕಾರಿಯಾಗಿದೆ. ದೇಹ ಮನಸ್ಸನ್ನು ಬೆಸೆಯಲೆತ್ನಿಸುವ, ಕೆಡಹುವ ಹಿಂಸೆಗಿಂತ ಪ್ರಜ್ಞಾಪೂರ್ವಕವಾಗಿ ನಾಗರಿಕತೆಯನ್ನು ಕಟ್ಟುವ, ಎಲ್ಲವನ್ನೂ ಸಮಾನ ನೆಲೆಯಲ್ಲಿ ನೋಡಬೇಕೆನ್ನುವ, ಅಂಚಿನಲ್ಲಿರುವವರ ಬೇತಾಳ ಸ್ಥಿತಿಯನ್ನು ನಿವಾರಿಸಲೆತ್ನಿಸುವ, ಭಾಷೆಯನ್ನು ಸೃಷ್ಟಿಗಾಗಿ, ವಿವೇಚನೆಗಾಗಿ, ಸಂಬಂಧಕ್ಕಾಗಿ ಬಳಸಿಕೊಳ್ಳುವ ಕಾಳಜಿ, ಬದುಕು ಸಾವು ಮುಖ ಮುಖವಾಡದ ಪ್ರೇತಸ್ಥಿತಿ, ಈ ಪ್ರೇತಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸುವ ಸಮಾಜದ ಕಾನೂನು--ಹೀಗೆ ಈ ಎಲ್ಲ ಇವೊತ್ತಿನ ದಿನಮಾನದ ಕಾಳಜಿಗಳನ್ನು ತೆಕ್ಕೆಗೆ ತೆಗೆದುಕೊಂಡ ಈ ಕತೆಯ ಬೀಸು ದೊಡ್ಡದು. ವರದಿ, ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುತ್ತ—ರಾಮಚಂದ್ರ ದೇವ ಅವರು objectivityಯನ್ನು ಸಾಧಿಸುವುದರಿಂದ ಕಥೆಯ ಆಶಯ ಹೆಚ್ಚು ಗಟ್ಟಿಮುಟ್ಟಾಗಿದೆ. ಕಥೆ ಕೂಡಾ ಬೇತಾಳ ಕತೆಯ ತಂತ್ರವನ್ನು ಅಳವಡಿಸಿಕೊಂಡಿದೆ.--(ಮುಖ್ಯವಾಗಿ ತುಕ್ಕಪ್ಪಯ್ಯ).

ಜೀವಪಕ್ಷಿಯ ಕತೆ ಮತ್ತೆ ಓದಿದೆ. ಅವೊತ್ತು ಓದಿ ಪಟ್ಟ ಬೆರಗು ಖುಷಿ ಮತ್ತೆ ಮರುಕೊಳಿಸಿತು. "ಮೂಗೇಲ" ಕಾಫ್ಕಾನ "ಮೆಟಾಮೊರ್ಫೊಸಿಸ್" ನ್ನು ನೆನಪಿಸುತ್ತದೆ ನಿಜ. ಆದರೆ ಅದು ಅಂತಿಮವಾಗಿ ರಾಮಚಂದ್ರದೇವ ಅವರ, ಕನ್ನಡದ್ದೇ ಆಗಿದೆ.

ರಿಸಾರ್ಟ್, ಜೀವಪಕ್ಷಿ, ಅರ್ಬುದ ಮತ್ತು ಪುಣ್ಯಕೋಟಿ, ಬೇತಾಳ ಕಥೆ ಬರೆದ ಮೇಲೆ--ಮತ್ತೆ ಇನ್ನು ಯಾವ ಕಥೆ ಬರೆಯದಿದ್ದರೂ ಪರವಾ ಇಲ್ಲ, ರಾಮಚಂದ್ರದೇವ ಅವರು ನಮ್ಮ ನಡುವಿನ ಮಹತ್ತ್ವದ ಕಥೆಗಾರರಾಗಿಯೇ ಉಳಿಯುತ್ತಾರೆ.. ಇಂಥಾ ಕತೆಗಳನ್ನು ಓದಿದಾಗ ಬದುಕಿದ್ದು ಸಾರ್ಥಕ ಅನ್ನಿಸುತ್ತದೆ.

ರಾಮಚಂದ್ರದೇವ ಅವರು ಶೆಕ್ಸ್ಪಿಯರ್ ನಾಟಕಮಾಲೆಗಾಗಿ ಬರೆದ ಹ್ಯಾಮ್ಲೆಟ್; ಅಶ್ವತ್ಥಾಮ, ಹುಲಿಯ ಕಥೆ, ದಂಗೆ, ಪುಟ್ಟಿಯ ಪಯಣ, ಸುದರ್ಶನ, ಡಾಗ್ ಶೋ, ಜರಾಸಂಧ ಮುಂತಾದ ನಾಟಕಗಳು ವಿದ್ವಾಂಸರ ಮೆಚ್ಚುಗೆ ಪಡೆದಿವೆ. ಅನೇಕ ಪ್ರಯೋಗಗಳನ್ನೂ ಕಂಡಿವೆ. ರಾಮಚಂದ್ರದೇವ ಅವರು ಅನೇಕ ಕವನಗಳನ್ನೂ ಬರೆದಿದ್ದು, ಏಳುಶತಕೋಟಿ ಪ್ರೇತಗಳನ್ನು ಕುರಿತ ‘ಪ್ರೇತಲೋಕ’ ಎಂಬ ಸುದೀರ್ಘ ಕವನವೂ ಸೇರಿದಂತೆ ಅವರ ಐದು ಪ್ರಮುಖ ಕವನಗಳು ಒಂದು ಕವನಸಂಕಲನವಾಗಿ ಹೊರಹೊಮ್ಮಿದೆ. ‘ಮಾತನಾಡುವ ಮರ’, ‘ಇಂದ್ರಪ್ರಸ್ಥ ಮತ್ತು ಇತರ ಕವನಗಳು’ ರಾಮಚಂದ್ರದೇವ ಅವರ ಇತರ ಪ್ರಸಿದ್ಧ ಕವನ ಸಂಕಲನಗಳು.

ಮುಚ್ಚು ಮತ್ತು ಇತರ ಲೇಖನಗಳು, ವಡ್ಡಾರಾಧನೆ, ಮಹಾಭಾರತ, ಶಿವರಾಮಕಾರಂತ ಇವೇ ಮುಂತಾದ ವೈವಿಧ್ಯಪೂರ್ಣ ಲೇಖನಗಳನ್ನೂ ರಾಮಚಂದ್ರದೇವ ಬರೆದಿದ್ದಾರೆ.

ರಾಮಚಂದ್ರದೇವ ಅವರ ಮತ್ತೊಂದು ಮಹತ್ವದ ಕೃತಿ ‘ಶೇಕ್ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ’. ಈ ಕೃತಿಯ ಕುರಿತಂತೆ ಡಾ. ಯು. ಆರ್ ಅನಂತಮೂರ್ತಿ ಹೇಳುತ್ತಾರೆ: "ನನಗೆ ತಿಳಿದಂತೆ ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದುವರೆಗೆ ಪ್ರಕಟವಾಗಿಲ್ಲ ಮತ್ತು ಇದು ತೌಲನಿಕ ವಿಮರ್ಶೆಗೆ ನೀಡಿದ ಹೊಸ ಕೊಡುಗೆಯಾಗಿದೆ."

ಬರಹಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  1. ಐದು ಕವನಗಳು
  2. ಮಾತಾಡುವ ಮರ
  3. ಇಂದ್ರಪ್ರಸ್ಥ
  4. ಸಮಗ್ರ ಕಾವ್ಯ, ಸಂಪುಟ ೧
  5. ಸಮಗ್ರ ಕಾವ್ಯ, ಸಂಪುಟ ೨

ನಾಟಕಗಳು[ಬದಲಾಯಿಸಿ]

  1. ಸಮಗ್ರ ನಾಟಕಗಳು, ಸಂಪುಟ ೧
  2. ಸಮಗ್ರ ನಾಟಕಗಳು, ಸಂಪುಟ ೨
  3. ಸಮಗ್ರ ನಾಟಕಗಳು, ಸಂಪುಟ ೩
  4. ಸಮಗ್ರ ನಾಟಕಗಳು, ಸಂಪುಟ ೪
  5. ರಥಮುಸಲ
  6. ಕುದುರೆ ಬಂತು ಕುದುರೆ
  7. Collected Plays, volume 1
  8. Collected Plays, volume 2
  9. Collected Plays, volume 3

ಕಥೆ/ ಕಿರು ಕಾದಂಬರಿಗಳು[ಬದಲಾಯಿಸಿ]

  1. ಸಮಗ್ರ ಕಥೆಗಳು, ಸಂಪುಟ ೧
  2. ಸಮಗ್ರ ಕಥೆಗಳು, ಸಂಪುಟ ೨
  3. ಸಮಗ್ರ ಕಥೆಗಳು, ಸಂಪುಟ ೩
  4. ಮೂಗೇಲ ಮತ್ತು ಇತರ ಕಥೆಗಳು
  5. ದಂಗೆಯ ಪ್ರಕರಣ

ಗದ್ಯ[ಬದಲಾಯಿಸಿ]

  1. ಶೇಕ್‌ಸ್ಪಿಯರ್: ಎರಡು ಸಂಸ್ಕೃತಿಗಳಲ್ಲಿ
  2. ದೇವಲೋಕ ಪರಲೋಕ (ಆತ್ಮಕಥನ)
  3. ಮುಚ್ಚು ಮತ್ತು ಇತರ ಲೇಖನಗಳು.
  4. ಮಾತುಕತೆ

ಅನುವಾದ[ಬದಲಾಯಿಸಿ]

  1. ಸಮಗ್ರ ಅನುವಾದ, ಸಂಪುಟ ೧
  2. ಸಮಗ್ರ ಅನುವಾದ, ಸಂಪುಟ ೨
  3. ಶೇಕ್‌ಸ್ಪಿಯರ್‌ನ ಸಾನೆಟ್ಟುಗಳು (ಸಮಗ್ರ ಅನುವಾದ, ಸಂಪುಟ ೩)
  4. ಮ್ಯಾಕ್‌ಬೆತ್
  5. ಹ್ಯಾಮ್ಲೆಟ್
  6. ಗಾಡೋ ಬರವಿಗಾಗಿ
  7. ಅಪರಂಜಿ
  8. ಮಗ್ಗದವರು
  9. ಖುಷಿ ದಿನಗಳು
  10. ಕೊನೆ ಆಟ

ಸಂಪಾದಿತ[ಬದಲಾಯಿಸಿ]

  1. ಕಾರಂತರ ಕಾದಂಬರಿಗಳನ್ನು ಕುರಿತು
  2. ಗುಜರಾಥಿ ಸಾಹಿತ್ಯ
  3. ಶಾಂತಿನಾಥ ದೇಸಾಯಿ ವಾಚಿಕೆ

ಮಾಹಿತಿ ಆಧಾರ[ಬದಲಾಯಿಸಿ]

ಚುಕುಬುಕು ಚುಕುಬುಕು ಪುಟ[ಶಾಶ್ವತವಾಗಿ ಮಡಿದ ಕೊಂಡಿ]