ಸಿ. ಕೆ. ಪ್ರಹಲಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿ. ಕೆ. ಪ್ರಹಲಾದ್
ವಿಶ್ವ ಆರ್ಥಿಕ ವೇದಿಕೆಯ ಭಾರತ ಆರ್ಥಿಕ ಶೃಂಗಸಭೆ ೨೦೦೯ರಲ್ಲಿ ನವೆಂಬರ್ ೮, ೨೦೦೯ರಂದು ಸಿ. ಕೆ. ಪ್ರಹಲಾದ್.
ಜನನಆಗಸ್ಟ್ ೮, ೧೯೪೧[೧]
ಮರಣApril 16, 2010(2010-04-16) (aged 68)[೨]
ರಾಷ್ಟ್ರೀಯತೆಭಾರತೀಯ
ಹಳೆ ವಿದ್ಯಾರ್ಥಿಲೊಯೊಲ ಕಾಲೇಜು, ಚೆನ್ನೈ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹ್ಮದಾಬಾದ್
ಹಾರ್ವರ್ಡ್ ಬಿಜಿನೆಸ್ ಸ್ಕೂಲ್
ಉದ್ಯೋಗಪ್ರಾಧ್ಯಾಪಕ
ಜೀವನ ಸಂಗಾತಿಗಾಯತ್ರಿ
ಮಕ್ಕಳುಮುರಳಿ ಕೃಷ್ಣ, ದೀಪ[೩]
ಜಾಲತಾಣwww.ckprahalad.com/

ಪ್ರೊ. ಕೊಯಂಬತ್ತೂರು ಕ್ರಿಷ್ಣರಾವ್ ಪ್ರಹಲಾದ್ (ಆಗಸ್ಟ್ ೮, ೧೯೪೧ - ಏಪ್ರಿಲ್ ೧೬, ೨೦೧೦)[೧] ಜಾಗತಿಕವಾಗಿ ಖ್ಯಾತ ಆಡಳಿತ ನಿರ್ವಹಣಾ ಗುರು, ಅಗಾಧವಾದ ಜ್ಞಾನ ಹಾಗೂ ಪಾಂಡಿತ್ಯವನ್ನು ಹೊಂದಿದ್ದರು. ಇವರು ಅಮೆರಿಕದ ಸ್ಯಾಂಡಿಯೋಗೊ ನಗರದ ರೋಸ್ ಸ್ಕೂಲ್ ಆಫ್ ಬಿಸಿನೆಸ್, ಯೂನಿವರ್ಸಿಟಿ ಆಫ್ ಮಿಚಿಗನ್ನಲ್ಲಿ ಉದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಡಳಿತ ನಿರ್ವಹಣೆಗೆ ನೆರವಾಗುವಂತಹ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಪ್ರಹ್ಲಾದ್ ಅವರು ಸಾಂಸ್ಥಿಕ ಅಭಿವೃದ್ಧಿ, ಆಡಳಿತ, ಅಧ್ಯಯನ, ಅಧ್ಯಾಪನ ಮತ್ತು ಆಡಳಿತ ಶಾಸ್ತ್ರದಲ್ಲಿನ ಸಂಶೋಧನಾ ಕ್ಷೇತ್ರಗಳಲ್ಲಿ ಮಾಡಿದ ಕೆಲಸ ಸ್ಮರಣೀಯವಾದದ್ದು. ಆಡಳಿತ ಶಾಸ್ತ್ರದಲ್ಲಿ ಪ್ರಖ್ಯಾತವಾಗಿರುವ ‘ಕೋರ್ ಕಾಂಪಿಟೆನ್ಸಿ ಮತ್ತು ಬಿ ಓ ಪಿ ಅಥವಾ ಬಾಟಮ್ ಆಫ್ ದಿ ಪಿರಮಿಡ್’ ತತ್ವಗಳ ಜನಕರೆಂದು ಅವರು ಜಗತ್ಪ್ರಸಿದ್ಧರು.

ಜನನ ಹಾಗೂ ಬಾಲ್ಯ[ಬದಲಾಯಿಸಿ]

೧೯೪೧ ನೇ ಇಸವಿಯಲ್ಲಿ, ಆಗಿನ ಮದ್ರಾಸ್ ನಗರದ ಒಂದು ಮಾಧ್ವ ಪರಿವಾರದ ೯ ಜನ ಸದಸ್ಯರಲ್ಲಿ ಒಬ್ಬರಾಗಿ ಜನಿಸಿದ ಪ್ರಹಲಾದರ ಮನೆಯ ಮಾತು ಕನ್ನಡ. ಅವರ ತಂದೆ ಕ್ರಿಷ್ಣರಾವ್‍ರವರು ಚೆನ್ನೈನ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದರು. ಅವರೊಬ್ಬ ಸಂಸ್ಕೃತದ ಪ್ರಕಾಂಡ ಪಂಡಿತರಲ್ಲೊಬ್ಬರು. ಪ್ರಹಲಾದ್ ಕೊಯಮತ್ತೂರಿನಲ್ಲಿ ಚೆನ್ನೈ ಲಾಯೊಲ ಕಾಲೇಜ್ ನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿ ಪದವಿಪಡೆದರು. ಬಿ.ಎಸ್.ಸಿ.ಪದವಿಯ ನಂತರ, ಪ್ರಹಲಾದ್ ತಮ್ಮ ೧೯ ನೇ ವಯಸ್ಸಿನಲ್ಲೇ ಒಬ್ಬ ಮ್ಯಾನೇಜರ್ ಸಹಾಯದಿಂದ, ಯೂನಿಯನ್ ಕಾರ್ಬೈಡ್ ಬ್ಯಾಟರಿ ಉತ್ಪಾದನೆಯ ಕಂಪೆನಿಯಲ್ಲಿ ನೌಕರಿಗೆ ಸೇರಿ ಸುಮಾರು ೪ ವರ್ಷ ದುಡಿದರು. 'ಯೂನಿಯನ್ ಕಾರ್ಬೈಡ್' ನಲ್ಲಿ ಮಾಡಿದ ಕೆಲಸ ಅವರ ಜೀವನದಲ್ಲಿ ಒಂದು ಮಹತ್ವದ ಘಟ್ಟವಾಗಿತ್ತೆಂದು ಅವರು ನೆನೆಸಿಕೊಳ್ಳುತ್ತಾರೆ. ಮುಂದೆ ಅವರು ಇಂಡಿಯ ಪಿಸ್ಟನ್ಸ್ ನಲ್ಲಿ ಸ್ವಲ್ಪ ಸಮಯ ಕೆಲಸಮಾಡಿ, ನಂತರ ಅಹ್ಮದಾಬಾದಿನ ಪ್ರತಿಷ್ಠಿತ ಐ. ಐ. ಎಮ್ ನಲ್ಲಿ ಸ್ನಾತಕೋತ್ತರ ಪದವಿ (ಎಮ್.ಬಿ.ಎ)ಪಡೆದು, ಹಿಂದೂಸ್ಥಾನ್ ಯೂನಿಲಿವರ್ ಸಹಿತ ಅನೇಕ ಪ್ರತಿಶ್ಠಿತ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದರು. ಅಹ್ಮದಾಬಾದ್ ನಲ್ಲಿ ಅವರ ಭಾವಿ ಪತ್ನಿ ಗಾಯಿತ್ರಿಯವರ ಪರಿಚಯವಾಯಿತು. ಅದು ಮುಂದೆ ಮದುವೆಗೆದಾರಿಯಾದದ್ದು, ೫ ವರ್ಷಗಳ ನಂತರ. ಮುರಳಿಕೃಷ್ಣ ಮತ್ತು ದೀಪ ಅವರ ಮುದ್ದಿನ ಮಕ್ಕಳು. ಮುಂದೆ, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮತ್ತೆರಡು ಪದವಿ ಗಳಿಸಿದರು. ಪ್ರಹ್ಲಾದರು ಹಾರ್ವರ್ಡ್ ವ್ಯಾಪಾರ ಶಾಲೆಯಲ್ಲಿ ಕೇವಲ ಎರಡೂವರೆ ವರ್ಷಗಳ ಕ್ಷಿಪ್ರ ಅವಧಿಯಲ್ಲಿ ‘ಬಹುರಾಷ್ಟ್ರೀಯ ಸಂಸ್ಥೆಗಳ ಆಡಳಿತ’ ಎಂಬ ವಿದ್ವತ್ಪೂರ್ಣ ಡಾಕ್ಟರೇಟ್ ಪ್ರಬಂಧ ಮಂಡಿಸಿದ ಕೀರ್ತಿಯನ್ನು ಮುಡಿಗೇರಿಸಿಕೊಂಡರು. ಅವರಿಗೆ 1975ರಲ್ಲಿ ಹಾರ್ವರ್ಡಿನ ಪ್ರತಿಷ್ಟಿತ ಡಿ.ಬಿ.ಎ. ಪದವಿ ಸಂದಿತು. ಜಗತ್ತಿನ ಅತಿಮಾನ್ಯತೆಪಡೆದ ನಿಯತಕಾಲಿಕಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದವು.

ಪ್ರತಿಷ್ಠಿತ ಪ್ರೊಫೆಸರ್[ಬದಲಾಯಿಸಿ]

ಹಾರ್ವರ್ಡಿನಿಂದ ಹಿಂದಿರುಗಿದ ಪ್ರಹ್ಲಾದರು ಅಹಮಾದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರೊಫೆಸರ್ ಆಗಿ ಬಂದು ಅತೀ ಕಡಿಮೆ ಅವಧಿಯಲ್ಲಿಯೇ ಅಲ್ಲಿಂದ ಅಮೆರಿಕಕ್ಕೆ ತೆರಳಿ, ಕೆಲವೇ ವರ್ಷಗಳಲ್ಲಿ ಮಿಚಿಗನ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ವಿಭಾಗದ ಪ್ರಮುಖ ಪ್ರಾಧ್ಯಾಪಕರಾಗಿ ರೂಪುಗೊಂಡರು. ೨೦೦೫ರ ವರ್ಷದಲ್ಲಿ ಪ್ರಹ್ಲಾದರಿಗೆ ಆ ವಿಶ್ವವಿದ್ಯಾಲಯವು ಅತ್ಯಂತ ಪ್ರತಿಷ್ಠಿತ ಪ್ರೊಫೆಸರ್ ಎಂಬ ಉಚ್ಚತಮ ಗೌರವವನ್ನು ನೀಡಿ ಗೌರವಿಸಿತು.

ಫಿಲಿಪ್ಸ್ ಸಂಸ್ಥೆಗೆ ಪುನರುತ್ಥಾನ[ಬದಲಾಯಿಸಿ]

ತೊಂಭತ್ತರ ದಶಕದಲ್ಲಿ ವಿಶ್ವದ ಪ್ರತಿಷ್ಠಿತ ಸಂಸ್ಥೆಯಾದ ‘ಫಿಲಿಪ್ಸ್’ ಅತ್ಯಂತ ತೊಂದರೆಗೆ ಸಿಲುಕಿದ್ದ ಪರಿಸ್ಥಿತಿಯಲ್ಲಿ ಜಾನ್ ಟಿಮ್ಮರ್ ಅವರಿಗೆ ಆ ಸಂಸ್ಥೆಯನ್ನು ಪುನರುತ್ಥಾನ ಗೊಳಿಸುವ ಬಗೆಗೆ ಪ್ರಹ್ಲಾದರು ಹಾಕಿಕೊಟ್ಟ ಯೋಜನೆ, ಫಿಲಿಪ್ಸ್ ಸಂಸ್ಥೆಯು ಅಪೂರ್ವ ರೀತಿಯಲ್ಲಿ ಪುನರುತ್ಥಾನಗೊಳ್ಳಲು ಸಹಾಯಕವಾಗಿ, ಪ್ರಹ್ಲಾದ್ ಅವರನ್ನು ಕೀರ್ತಿಶಿಖರಕ್ಕೇರಿಸಿತು. ಆ ಸಂದರ್ಭದಲ್ಲಿ ಅವರು ಎರಡು ಮೂರು ವರ್ಷಗಳ ಅವಧಿಯವರೆಗೆ ಫಿಲಿಪ್ಸ್ ಸಂಸ್ಥೆಯ ಪುನಃಶ್ಚೇತನಕ್ಕೆ ಹೆಗಲು ನೀಡಿದ್ದರು.

ಕಾರ್ಪೊರೇಟ್ ತಂತ್ರ[ಬದಲಾಯಿಸಿ]

ದಿ. ಪ್ರಹಲಾದ್ ನಿರ್ವಹಣಾ ತಂತ್ರಗಳ ಬಳಕೆ ಮತ್ತು ಅನುಷ್ಠಾನದ ವಿಷಯದಲ್ಲಿ ಕಾರ್ಪೊರೇಟ್ ತಂತ್ರದ ಅಳವಡಿಕೆ ವಿಷಯದಲ್ಲಿ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳೂ ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳ ಒಟ್ಟಾರೆ ನಿರ್ವಹಣಾ ವಿಷಯದಲ್ಲಿ ಸರಿಯಾದ ಮಾರ್ಗದರ್ಶನ ನೀಡಬಲ್ಲ ನಿರ್ವಹಣಾ ತಜ್ಞರಾಗಿದ್ದರು.

ಭಾರತದ ಜನಸಂಖ್ಯಾ ಸಮಸ್ಯೆಯ ಬಗ್ಗೆ ಅಭಿಪ್ರಾಯ[ಬದಲಾಯಿಸಿ]

ಡಾ.ಪ್ರಹಲಾದ್, ತಮ್ಮ ಅಪಾರ ಅನುಭವ ಮತ್ತು ಬುದ್ಧಿಮತ್ತೆಯಿಂದ ನುಡಿದ ಮಾತುಗಳು ಅರ್ತವತ್ತಾಗಿವೆ. "ಭಾರತ ತನ್ನ ಅತಿಯಾದ ಜನಸಂಖ್ಯಾ ಸ್ಪೋಟದಿಂದ(೧ ಬಿಲಿಯನ್)ಕಂಗೆಡಬೇಕಾಗಿಲ್ಲ". "ಭಾರತದ ನಿಜವಾದ 'ಚುನೌತಿ'(ಸಮಸ್ಯೆ),ಆ ಒಂದು ಬಿಲಿಯನ್ ಜನರು ಎಸೆಯಬಹುದಾದ ತ್ಯಾಜ್ಯವಸ್ತುಗಳ ನಿರ್ವಹಣೆಯ ಬಗ್ಗೆ ಕಾಳಜಿ" ಎಂದು ನುಡಿದಿದ್ದರು. ಇದನ್ನು ಅವರು ಒಂದು ದಶಕದ ಹಿಂದೆಯೇ ಮನಗಂಡಿದ್ದರು. ಭಾರತದಲ್ಲಿ ೧ ಕೋಟಿ ಕಂಪ್ಯೂಟರ್ ಸಾಕ್ಷರತೆಯೇನೋ ಆಗಿದೆ. ಈ ಸಂತೋಷದ ಹಿಂದೆ, ಆ ಕೋಟಿಜನರ ಕಂಪ್ಯೂಟರ್ ತ್ಯಾಜ್ಯವಸ್ತುಗಳ ನಿರ್ವಹಣೆಯ ಗತಿಏನು ಎನ್ನುವುದು, ಅವರ ಪ್ರಮುಖ ಚಿಂತನೆಯಾಗಿತ್ತು.

ಅಂತಃ ಸಾಮರ್ಥ್ಯಗಳು[ಬದಲಾಯಿಸಿ]

೧೯೯೦ ರ ದಶಕದಲ್ಲಿ ಡಾ. ಪ್ರಹಲಾದ್ ರವರು ಗ್ಯಾರಿ ಹೇಮಲ್ ರವರೊಂದಿಗೆ ಅಂತಃ ಸಾಮರ್ಥ್ಯಗಳ (core competencies) ವಿಷಯದಲ್ಲಿ ನಡೆಸಿದ ಆಳವಾದ ಅಧ್ಯಯನಕ್ಕೆ ಮೆಕೆನ್ ಜೀ ಪ್ರಶಸ್ತಿಲಭಿಸಿತ್ತು. ಈ ಅಧ್ಯಯನದ ಫಲಿತಾಂಶಗಳನ್ನೊಳಗೊಂಡ ಲೇಖನದ ಪ್ರತಿಗಳು ಜಗತ್ತಿನೆಲ್ಲೆಡೆ ಅಪಾರ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಡಾ. ಪ್ರಹಲಾದ್,ವಿವಿಧೀಕರಣಗೊಂಡ ಕಾರ್ಪೊರೇಟ್ ಸಂಸ್ಥೆಯನ್ನು (diversified Corporates) ಒಂದು ಮರವನ್ನಾಗಿ ಪರಿಗಣಿಸಿ, ಅದರ ಕಾಂಡ ಮತ್ತು ಇತರ ಪ್ರಮುಖ ಭಾಗಗಳನ್ನು ಮುಖ್ಯ ಉತ್ಪನ್ನಗಳಾಗಿ ಮತ್ತು ಕೊಂಬೆಗಳನ್ನು ವ್ಯವಹಾರ ಘಟಕಗಳನ್ನಾಗಿಪರಿಗಣಿಸಬೇಕೆಂದು ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಎಲ್ಲವನ್ನೂ ಬೆಳೆಸುವುದು ಮತ್ತು ಸ್ಥಿರತೆ ಒದಗಿಸುವುದು ಬೇರುಗಳ ವ್ಯೂಹದ ಅಂತಃ ಸತ್ವವೆಂದು ನಿರೂಪಿಸಿದ್ದಾರ‍ೆ.

'ಪಿರಮಿಡ್ ಬುಡದಲ್ಲಿ ಸೌಭಾಗ್ಯ' ವೆಂಬ ಕೃತಿ ರಚಿಸಿದ್ದಾರೆ[ಬದಲಾಯಿಸಿ]

'(Fortune at the bottom of the Pyramid),'ಪ್ರೊ. ಪ್ರಹಲಾದ್ ರಚಿಸಿದ ಪುಸ್ತಕವನ್ನು ಬಹುದೊಡ್ಡ ಕೊಡುಗೆಯೆಂದು ಪರಿಗಣಿಸಲಾಗಿದೆ. ಪುಸ್ತಕದಲ್ಲಿ ವಿವಿಧ ದೇಶಗಳಲ್ಲಿ ಬೃಹತ್ ಕಂಪೆನಿಗಳು ಬಡವರ ಸ್ಥಿತಿಗಳನ್ನು ಸುಧಾರಿಸುವಲ್ಲಿ ಹೇಗೆ ನೆರವಾಗಬಹುದೆಂಬ ವಿವರಣೆಕೊಡಲಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಪೈಪೋಟಿಯ ಸಾಮರ್ಥ್ಯದ ಮೇಲೆ ಲಕ್ಷ್ಯವನ್ನು ಕೇಂದ್ರೀಕರಿಸಬೇಕೆಂಬ, ಅಭಿಪ್ರಾಯವನ್ನು ಪ್ರಹಲಾದ್ ಮಂಡಿಸಿದ್ದಾರೆ.

ಮುನ್ನೋಟ ರೂಪಣೆ[ಬದಲಾಯಿಸಿ]

ಭಾರತದ ಆರ್ಥಿಕ ಪ್ರಗತಿಯ ಕುರಿತು ಅವರಿಗೆ ಬಹಳಷ್ಟು ವಿಶ್ವಾಸವಿತ್ತು. ಮುನ್ನೋಟವಿತ್ತು. ಭಾರತದ ಕೈಗಾರಿಕಾ ಒಕ್ಕೂಟವು ’ ೭೫ ರಲ್ಲಿ ಭಾರತ’ ಎಂಬ ಮುನ್ನೋಟ ’ದಾಖಲೆ ಪತ್ರ’ ಸಿದ್ಧಪಡಿಸಲು ಮುಂದಾದಾಗ ಅದರ ರೂಪಣೆಯಲ್ಲಿ ಪ್ರಮುಖಪಾತ್ರ ವಹಿಸಿದ್ದರು.(Vision Documents) ಭಾರತ ತಿರುಗಿ ಮೇಲೆದ್ದು ಹಣಕಾಸಿನ ಬಲದೊಂದಿಗೆ ತಾಂತ್ರಿಕ ಉತ್ಕೃಷಟೆಯೊಂದಿಗೆ ಜಗತ್ತಿನ ಬಲಿಷ್ಟ ಆರ್ಥಿಕ ಮತ್ತು ನೈತಿಕ ರಾಷ್ಟ್ರಗಳಲ್ಲೊಂದಾಗುವ ಪ್ರೊ. ಪ್ರಹಲಾದ್, ಪ್ರತಿಪಾದಿಸಿದ ನಿರ್ವಹಣಾ ತಂತ್ರಗಳು, ಸೂಚಿಸಿದ ಕಾರ್ಪೊರೇಟ್ ತಂತ್ರಗಳು ಮತ್ತು ಚಿಂತನೆಗಳು, ಇಂದಿಗೂ ಮಾರ್ಗದರ್ಶನ ಒದಗಿಸುತ್ತವೆ.’ದ ಪ್ರಹಲಾದ್ ನಿರ್ವಹಣಾ ತಂತ್ರ’ಗಳ ಬಳಕೆ ಔದ್ಯಮಿಕ ತಂತ್ರ (Corporate strategy) ದ ಅಳವಡಿಕೆ ಮತ್ತು ಅನುಷ್ಠಾನ ಅವರು ವಿಶೇಷ ಪ್ರಾವೀಣ್ಯತೆ ಹೊಂದಿದ ಕ್ಷೇತ್ರವಾಗಿತ್ತು. ’ಮೈಕ್ರೊ ಸಾಫ್ಟ್ ಕಾರ್ಪೊರೇಶನ್’ ಸೇರಿದಂತೆ ಜಗತ್ತಿನ ಅತಿದೊಡ್ಡ ೨೦೦ ಕಂಪೆನಿಗಳ ಮುಖ್ಯಸ್ಥರುಗಳಿಗೆ ಅವರು ಸಲಹೆ, ಮಾರ್ಗದರ್ಶನ ನೀಡಿದ್ದಾರೆ.

ಪ್ರಜಾ ಇನ್ಕಾರ್ಪೋರೇಷನ್[ಬದಲಾಯಿಸಿ]

ಪ್ರಹ್ಲಾದ್ ಅವರು ತಾವೇ ಹುಟ್ಟುಹಾಕಿದ್ದ ‘ಪ್ರಜಾ ಇನ್ಕಾರ್ಪೋರೆಶನ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಸಾಮಾನ್ಯ ಮನುಷ್ಯನಿಗೂ ಯಾವುದೇ ಅಡೆತಡೆಯಿಲ್ಲದೆ ಮಾಹಿತಿ ದೊರಕಬೇಕು ಎಂಬ ಧ್ಯೇಯದಿಂದ ಮೊದಲ್ಗೊಂಡು ಉತ್ತಮ ರೀತಿಯ ಸಾಂಸ್ಥಿಕ ಆಡಳಿತ ನಿರ್ವಹಣೆಗೆ ಹೊಸ ಹೊಸ ವಿಧಿವಿಧಾನಗಳನ್ನು ದೊರಕಿಸಿಕೊಡುವುದು ಈ ‘ಪ್ರಜಾ ಸಂಸ್ಥೆಯ’ ಪರಮಗುರಿಯಾಗಿತ್ತು. ಆ ಸಂಸ್ಥೆ ಕಾಲಾನಂತರದಲ್ಲಿ ಟಿಬ್ಕೋ ಸಂಸ್ಥೆಯ ಸ್ವಾಮ್ಯಕ್ಕೆ ಒಳಪಟ್ಟಿತು.

ಭಾರತೀಯ ಭ್ರಷ್ತಾಚಾರಕ್ಕೊಂದು ಕನ್ನಡಿ[ಬದಲಾಯಿಸಿ]

ಏಪ್ರಿಲ್ ೧೬, ೨೦೧೦ರಂದು ನಿಧನರಾಗುವುದಕ್ಕೆ ಕೆಲವು ತಿಂಗಳ ಹಿಂದೆ ಪ್ರಹ್ಲಾದರು ತಮ್ಮ ಉಪನ್ಯಾಸವೊಂದರಲ್ಲಿ, ಭಾರತದಲ್ಲಿ ತುಂಬಿರುವ ಭ್ರಷ್ಟಾಚಾರದ ಬಗೆಗೆ ಅವರು ಮಂಡಿಸಿದ ಮಾಹಿತಿ ಅತ್ಯಂತ ಗಮನ ಸೆಳೆಯುವಂತದ್ದಾಗಿದೆ.

ಭಾರತದಲ್ಲಿ ನಡೆದಿರುವ ಭ್ರಷ್ಟಾಚಾರದ ಒಟ್ಟು ಮೊತ್ತ ೨೫೦,೦೦೦ ಕೋಟಿ ರೂಪಾಯಿಗಳನ್ನೂ ಮೀರಬಹುದು ಮತ್ತು ಇದರಲ್ಲಿ ನಮ್ಮ ರಾಜಕಾರಣಿಗಳ ಮತ್ತು ಚುನಾವಣಾ ಪ್ರತಿನಿಧಿಗಳ ಪಾತ್ರ ಮಹತ್ವದ್ದು ಎಂದು ಸಿ.ಕೆ. ಪ್ರಹ್ಲಾದ್ ತಮ್ಮ ಉಪನ್ಯಾಸದಲ್ಲಿ ತಿಳಿಸಿದ್ದರು. ಚುನಾವಣಾ ಪ್ರಚಾರಗಳ ಸಂದರ್ಭಗಳಲ್ಲಿ ರಾಜಕಾರಣಿಗಳು ಹಣದ ಹೊಳೆ ಹರಿಸುತ್ತಾರೆ ಮತ್ತು ಗೆದ್ದ ನಂತರ ಅದನ್ನು ವಾಪಸ್ ಪಡೆಯಲು ಯತ್ನಿಸುತ್ತಾರೆ; ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಲು ಇದೇ ಮೂಲ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದರು. .

2009ರ ಲೋಕಸಭಾ ಚುನಾವಣೆಗಳಿಗೆ ಭಾರತವು ಸುಮಾರು ೧೦,೦೦೦ ಕೋಟಿ ರೂಪಾಯಿಗಳನ್ನು ವ್ಯಯಿಸಿತು. ಇಲ್ಲಿ ಚುನಾವಣಾ ಆಯೋಗವು ೧,೩೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, ೭೦೦ ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ವೆಚ್ಚ ಮಾಡಿದವು. ಉಳಿದ ೮,೦೦೦ ಕೋಟಿ ರೂಪಾಯಿಗಳು ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ವೆಚ್ಚವಾದವು. ರಾಜ್ಯಗಳ ಚುನಾವಣೆಗಳ ವೆಚ್ಚವನ್ನೂ ಇದಕ್ಕೆ ಸೇರಿಸಿದರೆ ಭಾರತದ ಚುನಾವಣಾ ವೆಚ್ಚವೇ 25,000 ಕೋಟಿ ರೂಪಾಯಿಗಳನ್ನು ದಾಟುತ್ತದೆ ಎಂದು ಪ್ರಹ್ಲಾದ್ ಅವರು ಈ ಸಂದರ್ಭದಲ್ಲಿ ಅಂಕಿ-ಅಂಶ ಸಮೇತವಾಗಿ ವಿವರಿಸಿದ್ದರು..

ಕೇವಲ ಒಂದು ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ನಡೆಯುವ ಭ್ರಷ್ಟಾಚಾರ ೨೫,೦೦೦ ಕೋಟಿಗಳನ್ನು ಮೀರುತ್ತದೆ ಎನ್ನುವಾಗ, ಇದುವರೆಗೆ ನಡೆದಿರುವ ನಡೆದಿರುವ ಭ್ರಷ್ಟಾಚಾರದ ಮೊತ್ತ ೨೫೦,೦೦೦ ಕೋಟಿ ರೂಪಾಯಿಗಳನ್ನೂ ಮೀರಬಹುದು ಎಂಬುದು ಅವರ ಅಂದಾಜಾಗಿತ್ತು. ಖಾಸಗಿ ಕಂಪನಿಗಳು ಅಥವಾ ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ನಿಧಿಗಳನ್ನು ನೀಡುವ ಮತ್ತೊಂದು ಅರ್ಥವೆಂದರೆ ಅದನ್ನು ಸಮರ್ಥವಾಗಿ ವಾಪಸ್ ಪಡೆಯುತ್ತೇವೆ ಎಂಬ ಭರವಸೆ. ಇದು ಒಂದು ರೀತಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಚುನಾವಣೆಗಳಲ್ಲಿ ಹಣ ಹೂಡಿಕೆ ಮಾಡುವುದು. ಹೂಡಿಕೆದಾರರು ಕನಿಷ್ಠ ತಾವು ಹಾಕಿದ ಮೊತ್ತದ 10ರಷ್ಟು ಪಾಲನ್ನು ಪಡೆಯದೆ ಬಿಡುವುದಿಲ್ಲ ಎಂದು ಅವರು ವಿವರಿಸುವ ಮೂಲಕ ಭ್ರಷ್ಟಾಚಾರ ಎಲ್ಲಿಂದ, ಹೇಗೆ ಹುಟ್ಟುತ್ತದೆ ಎಂಬುದನ್ನು ಪ್ರಹ್ಲಾದ್ ಮನೋಜ್ಞವಾಗಿ ವಿವರಿಸಿದ್ದರು.

ವಿದ್ಯಾರ್ಹತೆಗಳು[ಬದಲಾಯಿಸಿ]

  • ೧೯೬೦ ರಲ್ಲಿ, ' ಬಿ. ಎಸ್. ಸಿ' (ಲೊಯೊಲ ಕಾಲೇಜ್, ಯೂನಿವರ್ಸಿಟಿ ಆಫ್ ಮೆಡ್ರಾಸ್)
  • ೧೯೬೬ ರಲ್ಲಿ, ' ಪಿ. ಜಿ. ಡಿಪ್ಲೊಮ', ಇನ್ ಬಿಝಿನೆಸ್ ಅಡ್ಮಿನಿಸ್ಟ್ರೇಶನ್, ಐ. ಐ. ಎಮ್. ಅಹ್ಮೆದಾಬಾದ್,ನಿಂದ
  • ೧೯೭೫ ರಲ್ಲಿ, ' ಡಾಕ್ಟರ್ ಆಫ್ ಬಿಝಿನೆಸ್ ಅಡ್ಮಿನಿಸ್ಟ್ರೇಶನ್' ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಿಂದ
  • ೧೯೭೬-೭೭ ರಲ್ಲಿ, ಐ. ಐ. ಎಮ್ ಅಹ್ಮದಾಬಾದ್,
  • ೧೯೭೭ ರ ನಂತರವೂ ಯೂನಿವರ್ಸಿಟಿ ಆಫ್ ಮಿಚಿಗನ್,ನಲ್ಲಿ "ಯೂನಿವರ್ಸಿಟಿ ಆಫ್ ರಾಸ್ ಸ್ಕೂಲ್ ಆಫ್ ಬಿಜಿನೆಸ್" 'ಪ್ರೊಫೆಸರ್ ಆಫ್ ಕಾರ್ಪೊರೇಟ್ ಸ್ಟ್ರಾಟೆಜಿ',ವಿಭಾಗದಲ್ಲಿ ದುಡಿಯುತ್ತಿದ್ದರು.

ಡಾ. ಪ್ರಹಲಾದ್ ಬರೆದ ಪ್ರಮುಖ ಪುಸ್ತಕಗಳು[ಬದಲಾಯಿಸಿ]

  • ೨೦೦೪ ರಲ್ಲಿ, 'The Fortune of the bottom of the pyramid' : 'Eradicating poverty Through Profit',
  • ೨೦೦೪ ರಲ್ಲಿ, 'The Future of Competition Co creating value with Customers', with Venkat Ramaswamy
  • ೧೯೯೪ ರಲ್ಲಿ, 'Competing for the future', with Gary Hamel

ಪ್ರತಿಷ್ಠಿತ ಉದ್ಯಮ ಕ್ಷೇತ್ರಗಳಲ್ಲಿ ಸಲಹೆ,ಮಾರ್ಗದರ್ಶನ[ಬದಲಾಯಿಸಿ]

  • Member of the Board/AdvisoryBoard of NCR Corporation,
  • 'Hindustan Uniliver Ltd';
  • 'Micro soft, India'
  • 'Indus Entrepreneurs'
  • 'TVS Capital Funds'
  • 'The World resources institute'.
  • Chairman and founder of 'The Next Practice'.
  • "TVS Capital Funds" ನ, ಸಿ.ಎಮ್.ಡಿ,'ಗೋಪಾಲ ಸ್ರೀನಿವಾಸನ್, 'ಪ್ರೊ. ಪ್ರಹಲಾದ್ ರವರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಕಂಪೆನಿಯು ಇಂದಿನ ಸ್ಥಾನಮಾನವನ್ನು ಗಳಿಸಲು ಸಹಕಾರಿಯಾಯಿತು' ,ಎಂದು ನೆನೆಸಿಕೊಂಡರು. ಪ್ರೊ. ಪ್ರಹಲಾದ್, 'ಕಂಪೆನಿಯ ಬೋರ್ಡ್ ಆಫ್ ಡೈರೆಕ್ಟರ್ಸ್' ಗಳಲ್ಲಿ ಪ್ರಮುಖರಾಗಿದ್ದರು. 'TVS Shriram Growth Fund', ನ ಪ್ರಾರಂಭದ ದಿನಗಳಿಂದಲೂ ಅದು ಪ್ರೊ. ಪ್ರಹಲಾದ್ ರವರ ಮಾರ್ಗದರ್ಶನ ಪಡೆಯುತ್ತಾ ಬಂದಿದೆ. ಒಬ್ಬ ದಾರ್ಶನಿಕನನ್ನು ಕಂಪೆನಿ ಕಳೆದುಕೊಂಡಿದೆ," ಎಂದರು.

ಪ್ರಶಸ್ತಿ ಮತ್ತು ಗೌರವಗಳು[ಬದಲಾಯಿಸಿ]

  • ೨೦೦೫ ರಲ್ಲಿ, 'ಡಾಕ್ಟರೇಟ್ ಇನ್ ಎಕೊನಾಮಿಕ್ಸ್' (ಲಂಡನ್ ವಿ. ವಿ. ದ ಇಂಜಿನಿಯರಿಂಗ್ ಸ್ಟೀವನ್ಸ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನೊಲೊಜಿ)ಯಿಂದ
  • ೨೦೦೪ ರ 'ಎಕೊನೊಮಿಕ್ ಟೈಮ್ಸ್ ಗ್ಲೊಬಲ್ ಇಂಡಿಯನ್'
  • ೨೦೦೯ ರಲ್ಲಿ,' ಪದ್ಮ ಭೂಷಣ್' ಮತ್ತು 'ಪ್ರವಾಸಿ ಭಾರತಿಯ ಸಮ್ಮಾನ್',
  • ೨೦೦೯ ರಲ್ಲಿ, 'ವಿಶ್ವದ ೫೦ ಅತ್ಯಂತ ಪ್ರಭಾವೀ ಬಿಸಿನೆಸ್ ಥಿಂಕರ್ ಪ್ರಶಸ್ತಿ'

ಮರಣ[ಬದಲಾಯಿಸಿ]

೬೯ ವರ್ಷ ಪ್ರಾಯದ ಡಾ. ಪ್ರಹಲಾದ್ ಸ್ವಲ್ಪ ಸಮಯದಿಂದ ಅಸ್ವಸ್ತರಾಗಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ೨೦೧೦ರ ಏಪ್ರಿಲ್ ೧೬ ರಂದು ಅವರ ವಾಸಸ್ಥಳ, ಅಮೆರಿಕದ ಸ್ಯಾಂಡಿಯಾಗೊ ನಗರದಲ್ಲಿ ನಿಧನರಾದರು. ಪತ್ನಿ ಗಾಯಿತ್ರಿ, ಮಗ ಮುರುಳಿಕೃಷ್ಣ ಮತ್ತು ಮಗಳು ದೀಪಾ ರನ್ನು ಬಿಟ್ಟು ಅಗಲಿದ್ದಾರೆ.

ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Notable Alumni: ಡಾ. ಸಿ ಕೆ ಪ್ರಹಲಾದ್ Archived 2008-06-22 ವೇಬ್ಯಾಕ್ ಮೆಷಿನ್ ನಲ್ಲಿ.. IIMA USA Chapter.
  2. Stern, Stefan (April 19, 2010). "Manifesto writer for business survival". Financial Times.
  3. http://www.deccanherald.com/content/64381/management-guru-c-k-prahalad.html

[[೧]]