ಹವಾಮಾನ ಬದಲಾವಣೆ ಮತ್ತು ಪ್ರಾಣಿಸಂಕುಲದ ಅಳಿವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಗತಿಕ ತಾಪಮಾನ[ಬದಲಾಯಿಸಿ]

  • ಪ್ರಪಂಚದಾದ್ಯಂತ ಭೂಮಿಯ ತಾಪಮಾನವು ಹೆಚ್ಚಾಗುತ್ತಿರುವುದರಿಂದ ವಾಯುಗುಣ ಬದಲಾಗುತ್ತಿದೆ. ವಾಯುಗುಣದ ಬದಲಾವಣೆಯ ದುಷ್ಪರಿಣಾಮಗಳ ಹಲವಾರು ಮುಖಗಳು ತೀವ್ರಗತಿಯಲ್ಲಿ ನಮಗೆ ಗೋಚರವಾಗುತ್ತಿವೆ. ಭೂಮಿಯ ತಾಪಮಾನ ಇದೇ ಮಟ್ಟದಲ್ಲಿ ಏರಿಕೆಯಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ 4 ಡಿಗ್ರಿಯಷ್ಟು ಹೆಚ್ಚಾಗುತ್ತದೆಂದು ವಿಜ್ಞಾನಿಗಳು ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಕುರಿತಾದ ಅಂತರ ರಾಷ್ಟ್ರೀಯ ಸಂಸ್ಥೆಯು ತಿಳಿಸಿದೆ. ಆದರೆ, ಉಷ್ಣಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದೂ ಕೂಡ ದುಸ್ತರ. ಈಗಾಗಲೇ ಅನೇಕ ಪ್ರಾಣಿಗಳ ವರ್ಗಗಳು ಅಳಿವು ಕಂಡಿವೆ ಮತ್ತೆ ಕೆಲವು ಅಳಿವಿನ ಅಂಚಿನಲ್ಲಿವೆಯೆಂದು ಸಂಶೋಧನೆಗಳು ಹೇಳುತ್ತಿವೆ.

ವನ್ಯಜೀವಿ ಸಂಕುಲ ಪೂರ್ಣ ನಿರ್ನಾಮದ ಭೀತಿ[ಬದಲಾಯಿಸಿ]

  • ಡಬ್ಲ್ಯುಡಬ್ಲ್ಯುಎಫ್‌28 Oct, 2016(ಪಿಟಿಐ)
ಹೆಸರು ಪ್ರಾಣಿ
ಪ್ಲಾಟಿಪಸ್
ಕಾಂಗರೂ
ಆನೆ Loxodonta
ಕಡಲು ಹಸು Trichechus
ಮೊಲ Lepus
ಚಿರತೆ Leopardus pardalis
ಘೇಂಡಾ ಮೃಗ Diceros bicornis
ಸೀಲ್ Pinnipedia
ದೈತ್ಯಕಪಟ(ಬಾವಲಿ)
  • ಜಗತ್ತಿನಲ್ಲಿರುವ ವನ್ಯಜೀವಿಗಳ ಪ್ರಮಾಣ 2020ರ ಹೊತ್ತಿಗೆ ಮೂರನೇ ಎರಡರಷ್ಟು ಕಡಿಮೆ ಆಗಲಿದೆ ಎಂಬ ಆತಂಕಕಾರಿ ಅಂಶವನ್ನು ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌ (ಡಬ್ಲ್ಯುಡಬ್ಲ್ಯುಎಫ್‌) ಎಂಬ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ನವೀಕರಿಸಬಹುದಾದ ಸಂಪನ್ಮೂಲ ತಯಾರಿ ಮತ್ತು ಇಂಗಾಲದ ಡೈಆಕ್ಸೈಡ್‌ನಂತಹ ತ್ಯಾಜ್ಯಗಳನ್ನು ಹೀರಿಕೊಳ್ಳುವ ಸಾಮರ್ಥ್ಯದಲ್ಲಿ ಭಾರತಕ್ಕೆ ಐದನೇ ಸ್ಥಾನ ನೀಡಲಾಗಿದೆ.
  • ಭಾರತದಲ್ಲಿ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಪ್ರಮಾಣ ಕಡಿಮೆಯೇ ಇದೆ. ಆದರೆ ಹೆಚ್ಚುತ್ತಲೇ ಇರುವ ಜನಸಂಖ್ಯೆ ಮತ್ತು ಸಂಪತ್ತಿನ ಹೆಚ್ಚಳ ಮಾಲಿನ್ಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಜನಸಂಖ್ಯೆ ಮತ್ತು ಶ್ರೀಮಂತಿಕೆ ಎರಡೂ ಹೆಚ್ಚಾದಾಗ ಮಾಲಿನ್ಯವನ್ನು ನಿಯಂತ್ರಣದಲ್ಲಿ ಇರಿಸುವುದು ದೊಡ್ಡ ಸವಾಲು ಎಂದು ವರದಿಯಲ್ಲಿ ಹೇಳಲಾಗಿದೆ.
  • ಕಾಡಲಿರುವ ಆಹಾರದ ಕೊರತೆ
  • ಆಹಾರದ ಬೇಡಿಕೆ ಪ್ರಮಾಣ 2020ರ ಹೊತ್ತಿಗೆ 30–50% ಏರಿಕೆ
  • 2080–2100 ಹೊತ್ತಿಗೆ ಜಾಗತಿಕ ತಾಪಮಾನದಿಂದಾಗಿ ಭಾರತದಲ್ಲಿ ಆಹಾರ ಉತ್ಪಾದನೆ 10–40% ಕಡಿಮೆಯಾಗಲಿದೆ.
  • ಅಪಾಯದ ಕರೆಗಂಟೆ
  • ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರದ ಬೇಡಿಕೆ ಈಡೇರಿಸಲು ವನ್ಯಜೀವಿ ಆವಾಸಸ್ಥಾನ ನಾಶ ವನ್ಯಜೀವಿ ನಾಶವಾಗಲು ಮುಖ್ಯ ಕಾರಣ
  • ಮನುಷ್ಯ ಹಸ್ತಕ್ಷೇಪ ಇಲ್ಲದ ಸ್ಥಳವೇ ಇಲ್ಲದಂತಾಗಲಿದೆ
  • ವನ್ಯಜೀವಿಗಳ ಸಾಮೂಹಿಕ ನಿರ್ಮೂಲನದ ಭೀತಿ ಹತ್ತಿರದಲ್ಲೇ ಇದೆ
  • ಆಹಾರ ಉತ್ಪಾದನೆ ಮತ್ತು ಇಂಗಾಲದ ಡೈಆಕ್ಸೈಡ್‌ ಹೀರಿಕೊಳ್ಳುವ ಜಗತ್ತಿನ ಸಾಮರ್ಥ್ಯದ ಅರ್ಧದಷ್ಟನ್ನು ಹೊಂದಿರುವ ದೇಶಗಳು: ಬ್ರೆಜಿಲ್‌, ಚೀನಾ, ಅಮೆರಿಕ, ರಷ್ಯಾ, ಭಾರತ
  • ಆಹಾರ ಉತ್ಪಾದನೆ ಕಾಡು ನಾಶದ ಮುಖ್ಯ ಕಾರಣ
  • ಭೂಮಿಯ ಮೂರನೇ ಒಂದು ಭಾಗದಲ್ಲಿ ಕೃಷಿ ಚಟುವಟಿಕೆ ಇದೆ
  • 70% ರಷ್ಟು ನೀರು ಬೇಸಾಯಕ್ಕಾಗಿ ಬಳಕೆ
  • 21.3% ಭಾರತದಲ್ಲಿ ಅರಣ್ಯ ಮತ್ತು ಮರಗಳ ಪ್ರಮಾಣ (ಒಟ್ಟು ಭೂಪ್ರದೇಶದಲ್ಲಿ)
  • ಅತ್ಯಂತ ಕಡಿಮೆ ತಲಾ ಅರಣ್ಯ ಪ್ರದೇಶ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು
  • 33% ಅರಣ್ಯ ಬೆಳೆಸುವ ಗುರಿಯನ್ನು ಭಾರತ ಹೊಂದಿದೆ (ಒಟ್ಟು ಭೂಪ್ರದೇಶದಲ್ಲಿ)
  • 70% ಮೇಲ್ಮೈ ನೀರು ಕಲುಷಿತ ಅತಿ ಹೆಚ್ಚು ಜಲಸಂಪನ್ಮೂಲ ಹೊಂದಿರುವ ಹತ್ತು ದೇಶಗಳಲ್ಲಿ ಭಾರತವೂ ಒಂದು
  • 60% ಅಂತರ್ಜಲ ಒಂದು ದಶಕದೊಳಗೆ ಕಲುಷಿತವಾಗುವ ಭೀತಿ.[೧]

ಭಾರತದಲ್ಲಿ ವಿನಾಶದ ಅಂಚಿನಲ್ಲಿರುವ ಜೀವಿಗಳು[ಬದಲಾಯಿಸಿ]

ಜೀವಿಗಳು ಶೇಕಡಾ ವಿನಾಶದ ಅಂಚಿಗೆ ಪ್ರಾಣಿಯ ಚಿತ್ರ
ಸಸ್ತನಿಗಳು : 41%
ಹಕ್ಕಿಗಳು  : 7%
ಸರೀಸೃಪಗಳು : 46%
ಉಭಯ ಚರಗಳು : 57%
ಸಿಹಿನೀರಿನ ಮೀನುಗಳು : 70%
  • ಭಾರತದ 386 ಸಸ್ತನಿ ಪ್ರಬೇಧಗಳಲ್ಲಿ ಈಗಾಗಲೇ ನಾಲ್ಕು ಪ್ರಬೇಧಗಳು ನಿರ್ನಾವಾಗಿವೆ

[೨]

ಕಪ್ಪೆಗಳು ಮಾಯವಾಗುತ್ತಿವೆ[ಬದಲಾಯಿಸಿ]

  • ಇಂಗ್ಲಿಷ್‌ನ ಕಪ್ಪೆ ಬೇಯಿಸುವ ಉಪಾಖ್ಯಾನ:
ಬೆಂಗಳೂರಿನಲ್ಲದ್ದ ಬಾರತದ ಮಂಡರಗಪ್ಪೆ. (Indian bullfrog sal)
  • ಉಭಯವಾಸಿಯಾಗಿರುವ ಕಪ್ಪೆ ಒಂದು ಶೀತರಕ್ತ ಪ್ರಾಣಿ. ವಾತಾವರಣದ ಉಷ್ಣತೆಗೆ ತಕ್ಕಂತೆ ತನ್ನ ದೇಹದ ಉಷ್ಣತೆಯನ್ನು ಹೊಂದಿಸಿಕೊಳ್ಳುತ್ತದೆ. ಕಪ್ಪೆ ಬೇಯಿಸುವ ಉಪಾಖ್ಯಾನಕ್ಕೆ ಆಧಾರವಾಗಿರುವುದು ಕಪ್ಪೆಯ ಈ ದೇಹಪ್ರಕೃತಿ. ಕಪ್ಪೆಯನ್ನು ನೀರು ತುಂಬಿದ ಬೋಗುಣಿಯೊಂದರಲ್ಲಿ ಹಾಕಿ ನಿಧಾನವಾಗಿ ನೀರನ್ನು ಬಿಸಿ ಮಾಡತೊಡಗಿದರೆ, ಅದು ತನ್ನ ದೇಹದ ಉಷ್ಣತೆಯನ್ನೂ ನೀರಿನ ಉಷ್ಣತೆಯೊಂದಿಗೆ ಏರಿಸಿಕೊಂಡು ನೀರು ಕುದಿಯುವ ಹೊತ್ತಿಗೆ ತನಗೆ ಅರಿವೇ ಇಲ್ಲದೆ ಪ್ರಾಣ ಕಳೆದುಕೊಳ್ಳುತ್ತದೆ ಎಂದು ಈ ಉಪಾಖ್ಯಾನ ಹೇಳುತ್ತದೆ. ಇದೊಂದು ಕೇವಲ ಉಪಮೆ ಮಾತ್ರ; ನಿಜವಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.
  • ಆದರೆ ಈ ಉಪಾಖ್ಯಾನ ಮತ್ತೊಂದು ಬಗೆಯಲ್ಲಿ ನಿಜವಾಗುತ್ತಿದೆ. ಕಪ್ಪೆಯ ಸಹಜ ಆವಾಸಗಳ ನೀರು ನಿಧಾನವಾಗಿ ಬಿಸಿಯಾಗುತ್ತಿದೆ. ಅದರ ಅರಿವೇ ಇಲ್ಲದೆ ಪ್ರಪಂಚಾದ್ಯಂತ ಕಪ್ಪೆಗಳು ಸಾಯುತ್ತಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕದ ಜಾರ್ಜಿಯಾದಲ್ಲಿರುವ ಅಟ್ಲಾಂಟಾ ಬಾಟಾನಿಕಲ್ ಗಾರ್ಡನ್‌ನಲ್ಲಿ ಇದ್ದ ‘ಟಫ್ಪೀ’ ಎಂಬ ಮರಗಪ್ಪೆ ಕೊನೆಯುಸಿರೆಳೆಯಿತು. ಸಾಮಾನ್ಯ ಕಪ್ಪೆಗಳಿಗಿಂತ ಭಿನ್ನವಾದ ಕಾಲುಗಳಿದ್ದ ಈ ಮರಗಪ್ಪೆ ತನ್ನ ಪ್ರಭೇದದ ಕೊನೆಯ ಕೊಂಡಿಯಾಗಿತ್ತು.
  • 2005ರಲ್ಲಿ ‘ರ್‍ಯಾಬ್ಸ್ ಫ್ರಾಗ್’ ಎಂದು ಕರೆಯಲಾಗುವ ಈ ಕಪ್ಪೆಗಳನ್ನು ಪತ್ತೆಹಚ್ಚುವ ಹೊತ್ತಿಗಾಗಲೇ, ಈ ಪ್ರಭೇದದ ಕಪ್ಪೆಗಳು ಬಹುತೇಕ ನಾಶವಾಗಿದ್ದವು. ಸಿಕ್ಕ ಕೆಲವನ್ನು ಅಟ್ಲಾಂಟಾಕ್ಕೆ ತಂದಿಟ್ಟು ಅವುಗಳ ವಂಶವನ್ನು ಮುಂದುವರಿಸುವ ಪ್ರಯತ್ನ ಮಾಡಲಾಯಿತು. 2009ರಲ್ಲಿ ಕೊನೆಯ ಹೆಣ್ಣು ಸತ್ತುಹೋಯಿತು. 2012ರಲ್ಲಿ ಒಂದು ಗಂಡು ಸತ್ತುಹೋಯಿತು. ಕೊನೆಗುಳಿದದ್ದು ಟಫ್ಫಿ ಎಂಬ ಗಂಡು ಮಾತ್ರ. ಸೆಪ್ಟೆಂಬರ್ 26ರಂದು ಇದರ ಸಾವಿನೊಂದಿಗೆ ಮರಗಪ್ಪೆಗಳ ಒಂದು ಪ್ರಭೇದವೇ ಕೊನೆಗೊಂಡಿತು.
  • ಟಪ್ಫಿ ಮತ್ತು ಅದರ ಜೊತೆಗಾರರನ್ನು ಬದುಕಿಸುವುದಕ್ಕೆ ವಿಜ್ಞಾನಿಗಳು ಬಹಳ ಕಷ್ಟಪಟ್ಟಿದ್ದರು. 2005ರಿಂದಲೂ ಈ ಕಪ್ಪೆಗಳ ಪುನರುಜ್ಜೀವನದ ಪ್ರಯತ್ನಗಳು ಜೀವವಿಜ್ಞಾನದ ನಿಯತಕಾಲಿಕಗಳಲ್ಲಿ ಗಮನಸೆಳೆಯುತ್ತಿದ್ದವು. ಈ ಎಲ್ಲಾ ಕಾರಣಗಳಿಂದ ಟಪ್ಫಿಯ ಸಾವು ಸುದ್ದಿಯಾಯಿತು. ಹೀಗೆ ಸುದ್ದಿಯೇ ಆಗದೆ ಸಾಯುತ್ತಿರುವ ಕಪ್ಪೆಗಳೂ ಇವೆ. ಎರಡು ವರ್ಷಗಳ ಹಿಂದೆ ‘ಭಾರತೀಯ ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ’ ಪ್ರಕಟಿಸಿದ ವರದಿಯ ಪ್ರಕಾರ, ಭಾರತದಲ್ಲಿರುವ ಕಪ್ಪೆ ಪ್ರಭೇದಗಳಲ್ಲಿ ಶೇಕಡಾ 20ರಷ್ಟು ಅಳಿವಿನ ಹಾದಿಯಲ್ಲಿವೆ ಎಂದು ಹೇಳಿತ್ತು.
ಕಾಣೆಯಾಗುತ್ತಿರುವ ಭಾರತದ ಬುಲ್ ಫ್ರಾಗ್' ಮೊಂಡರಗಪ್ಪೆ ಪಶ್ಚಿಮ ಘಟ್ಟದ್ದು

78 ಪ್ರಭೇದಗಳು ಅಪಾಯದಲ್ಲಿವೆ[ಬದಲಾಯಿಸಿ]

  • ಭಾರತದಲ್ಲಿ 340 ಪ್ರಭೇದದ ಕಪ್ಪೆಗಳಿವೆ. ಇವುಗಳಲ್ಲಿ 78 ಪ್ರಭೇದಗಳು ಅಪಾಯದಂಚಿನಲ್ಲಿವೆ. ಇವುಗಳಲ್ಲಿ 17 ಪ್ರಭೇದಗಳಂತೂ ತೀವ್ರ ಸಂಕಷ್ಟದಲ್ಲಿವೆ ಎಂದು ವರದಿ ಬೊಟ್ಟು ಮಾಡಿ ತೋರಿಸಿತ್ತು. ಉಳಿದಂತೆ 32 ಅಳಿವಿನಂಚಿನಲ್ಲಿದ್ದರೆ, 22 ಪ್ರಭೇದಗಳು ಅಳಿವಿನಂಚಿನ ಪ್ರಭೇದಗಳಾಗುವ ಹಾದಿಯಲ್ಲಿವೆ.
  • ಕಪ್ಪೆಗಳು ಅಳಿವಿನಂಚಿಗೆ ಸಾಗುತ್ತಿರುವುದು ನಿನ್ನೆ ಮೊನ್ನೆಯ ಸಂಗತಿಯೇನೂ ಅಲ್ಲ. 1980ರಿಂದಲೇ ಕಪ್ಪೆ ಪ್ರಭೇದಗಳ ಅಳಿವು ತೀವ್ರಗೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 1989ರಲ್ಲಿ ನಡೆದ ಮೊದಲ ಉರಗಶಾಸ್ತ್ರ (ಸರೀಸೃಪ ಶಾಸ್ತ್ರ) ಕಾಂಗ್ರೆಸ್‌ನಲ್ಲಿಯೇ ವಿಜ್ಞಾನಿಗಳು ಕಪ್ಪೆಗಳ ಕೆಲವು ಪ್ರಭೇದಗಳನ್ನು ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ ಎನ್ನಲಾರಂಭಿಸಿದ್ದರು. ಇದು ಕೇವಲ ಒಂದು ದೇಶದ ಪ್ರಶ್ನೆಯೇನೂ ಆಗಿರಲಿಲ್ಲ. ಅಮೆರಿಕ, ಆಸ್ಟ್ರೇಲಿಯಾ, ಕೋಸ್ಟರಿಕಾ, ಭಾರತ – ಹೀಗೆ ವಿಶ್ವದ ಎಲ್ಲೆಡೆಯ ಸರೀಸೃಪ ತಜ್ಞರು ಕಪ್ಪೆ ಪ್ರಭೇದಗಳು ಕಾಣೆಯಾಗುತ್ತಿರುವುದನ್ನು ಹೇಳುತ್ತಿದ್ದರು. 2004ರಲ್ಲಿ ಪ್ರಪಂಚದ ಉಭಯವಾಸಿಗಳ ದೊಡ್ಡದೊಂದು ಪಟ್ಟಿಯನ್ನೇ ರೂಪಿಸಲಾಯಿತು. ಸುಮಾರು 5000 ಪ್ರಭೇದಗಳ ಈ ಪಟ್ಟಿಯಲ್ಲಿ ಶೇಕಡಾ 30ರಷ್ಟು ಅಳಿವಿನಂಚಿಗೆ ಸಾಗುತ್ತಿವೆ ಎಂಬ ವಿಷಯ ಆಗಲೇ ಮೊದಲು ಅರಿವಾದದ್ದು. ಈ ಲೆಕ್ಕಾಚಾರಗಳಿಂದಾಗಿ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚು ವೇಗವಾಗಿ ಉಭಯವಾಸಿಗಳು ಅಳಿಯುತ್ತಿವೆ ಎಂಬ ವಾಸ್ತವವೂ ಬೆಳಕಿಗೆ ಬಂತು.

ಅಮೆರಿಕದ ಹಳದಿ ಕಾಲಿನ ಕಪ್ಪೆ ಅಳಿದಿದೆ[ಬದಲಾಯಿಸಿ]

  • ಅಮೆರಿಕದ ಸಿಯೆರಾ ನೆವಾಡ ಪರ್ವತ ಪ್ರದೇಶದಲ್ಲಿರುವ ‘ಯೋಸ್ಮೈಟ್ ರಾಷ್ಟ್ರೀಯ ಉದ್ಯಾನವನ’ದಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಹಳದಿ ಕಾಲಿನ ಕಪ್ಪೆಗಳು ಈಗ ಹುಡುಕಿದರೂ ಸಿಗುವುದಿಲ್ಲ. ಇಡೀ ನೇವಾಡ ಪರ್ವತ ಪ್ರದೇಶದ ಕಾಡು ಇದ್ದಕ್ಕಿದ್ದಂತೆಯೇ ಇಲ್ಲವಾದರೆ ಹೇಗಿರಬಹುದೋ ಹಾಗಿದೆ ಈ ಕಪ್ಪೆಗಳ ಅಳಿವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಕಪ್ಪೆಗಳಿಗೆ ಮಾರಕವಾಗಿ ಪರಿಣಮಿಸಿದ್ದು Batrachochytrium dendrobatidis ಎಂಬ ಫಂಗಸ್‌ನಿಂದ ಬರುವ ರೋಗ. ವಿಶ್ವವ್ಯಾಪಿಯಾಗಿ ಈ ಫಂಗಸ್‌ನಿಂದ ಬರುವ ರೋಗ ಕಪ್ಪೆಗಳನ್ನು ನಿರ್ವಂಶ ಮಾಡುತ್ತಿದೆ ಎನ್ನಲಾಗುತ್ತಿದೆ.
  • ಕಪ್ಪೆಗಳಂಥ ಉಭಯವಾಸಿಗಳ ಚರ್ಮಕ್ಕೆ ಈ ಫಂಗಸ್ ಅಂಟಿಕೊಳ್ಳುತ್ತದೆ. ಉಭಯವಾಸಿಗಳ ಮಟ್ಟಿಗೆ ಚರ್ಮ ಎಂದರೆ ಕೇವಲ ದೇಹದ ಹೊರಾವರಣವಷ್ಟೇ ಅಲ್ಲ; ಅದು ಅವುಗಳ ಉಸಿರಾಟ ಮತ್ತು ವಿಸರ್ಜನಾಂಗವೂ ಹೌದು. ಮನುಷ್ಯನ ಶ್ವಾಸಕೋಶ ಮತ್ತು ಮೂತ್ರಜನಕಾಂಗ ಮತ್ತು ಚರ್ಮಕ್ಕೆ ಒಟ್ಟಿಗೆ ಕಾಯಿಲೆಯೊಂದು ಬಾಧಿಸಿದರೆ ಏನಾಗಬಹುದೋ ಅದು ಕಪ್ಪೆಗಳಿಗೂ ಆಗುತ್ತದೆ.
  • ಕಪ್ಪೆಗಳು ಅಳಿಯುವುದು ಎಂದರೆ ಮನುಷ್ಯನ ಅಳಿವಿಗೆ ಬರೆಯುತ್ತಿರುವ ಮುನ್ನುಡಿಯಂತೆ. ‘ಕಪ್ಪೆಯಿರುವ ಬೋಗುಣಿಯನ್ನು ಬಿಸಿ ಮಾಡುತ್ತಿದ್ದೇನೆ’ ಎಂಬ ಭ್ರಮೆಯಲ್ಲಿ ಮನುಷ್ಯನಿದ್ದಾನೆ. ಮನುಷ್ಯನೂ ಇದೇ ಬೋಗುಣಿಯಲ್ಲೇ ವಾಸವಾಗಿದ್ದಾನೆ. ಕಪ್ಪೆಯ ಸಾವು ಮನುಷ್ಯನ ಅಳಿವಿಗೆ ಸಂಬಂಧಿಸಿದ ಮುನ್ನೆಚ್ಚರಿಕೆಯಷ್ಟೇ.[೩]

ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ[ಬದಲಾಯಿಸಿ]

  • 6 Nov, 2016
  • ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಮಿತಿಮೀರಿದ್ದು ಮುಂದಿನ ಮೂರು ದಿನಗಳ ಕಾಲ ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಾಯುಮಾಲಿನ್ಯ ಪ್ರಮಾಣ ತಗ್ಗಿಸುವ ಕ್ರಮಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾನುವಾರ ತುರ್ತು ಸಭೆ ನಡೆಸಿದರು.
  • ವಾಯುಮಾಲಿನ್ಯ ಮಟ್ಟ ತಗ್ಗಿಸಲು ತೆಗೆದುಕೊಂಡ ಕ್ರಮಗಳು:
  • ದೆಹಲಿಯಲ್ಲಿ ಮುಂದಿನ 5 ದಿನಗಳ ಕಾಲ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಕೆಡವುವ ಕಾರ್ಯಗಳ ನಿಷೇಧ
  • ಮುಂದಿನ 10 ದಿನಗಳ ಕಾಲ ಡೀಸೆಲ್‌ ಜನರೇಟರ್‌ ಸ್ಥಗಿತ
  • ನವೆಂಬರ್‌ 10 ರಿಂದ ದೆಹಲಿಯ ರಸ್ತೆಗಳ ವ್ಯಾಕ್ಯೂಮ್‌ ಕ್ಲೀನಿಂಗ್‌
  • ದೆಹಲಿಯ ರಸ್ತೆಗಳಲ್ಲಿ ದೂಳು ಏಳದಂತೆ ಸೋಮವಾರದಿಂದ ನೀರು ಎರೆಚುವುದು
  • ಅಗತ್ಯಬಿದ್ದರೆ ಸಮ- ಬೆಸ ಸಂಚಾರ ವ್ಯವಸ್ಥೆ ಜಾರಿಗೆ[೪]

ಮಿತಿ ಮೀರಿದ ಹೊಗೆ[ಬದಲಾಯಿಸಿ]

  • ದಟ್ಟ ಹೊಗೆ ಆವರಿಸಿ, ವಾಯು ಮಾಲಿನ್ಯದ ಪ್ರಮಾಣ ಇನ್ನೂ ಹೆಚ್ಚುತ್ತಲೇ ಇರುವುದರಿಂದ ಇಲ್ಲಿನ ಶಾಲೆಗಳಿಗೆ ಇನ್ನೂ ಮೂರು ದಿನ ರಜೆ ಘೋಷಿಸಲಾಗಿದೆ. ಭಾನುವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ‘ದಟ್ಟಹೊಗೆಯ ದುಷ್ಪರಿಣಾಮಗಳಿಗೆ ಮಕ್ಕಳು ಸುಲಭವಾಗಿ ತುತ್ತಾಗುವುದರಿಂದ ಶಾಲೆಗಳಿಗೆ ಶನಿವಾರ ರಜೆ ನೀಡಲಾಗಿತ್ತು. ಈಗ ರಜೆಯನ್ನು ಬುಧವಾರದವರೆಗೂ ವಿಸ್ತರಿಸಲಾಗಿದೆ. ಮಕ್ಕಳು ಮನೆಯ ಒಳಗೇ ಇರುವಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
  • ‘ರಾಜಧಾನಿಯಲ್ಲಿ ಐದು ದಿನಗಳ ಕಾಲ ಎಲ್ಲಾ ಸ್ವರೂಪದ ನಿರ್ಮಾಣ ಕಾಮಗಾರಿಯ ಮೇಲೆ ನಿಷೇಧ ಹೇರಲಾಗಿದೆ. ಜತೆಗೆ ಯಾವುದೇ ಸ್ವರೂಪದ ತ್ಯಾಜ್ಯ ಸುಡುವುದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
  • ಕಾಣದ ತಾಜ್‌ ಮಹಲ್
  • ಆಗ್ರಾದಲ್ಲೂ ದಟ್ಟ ಹೊಗೆ ಮತ್ತು ಮಂಜು ಆವರಿಸಿರುವುದರಿಂದ ತಾಜ್‌ ಮಹಲ್ ಕಾಣದಂತಾಗಿದೆ. ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಲ್ಲಿ ಈ ಪ್ರೇಮ ಸ್ಮಾರಕಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ.

ತಾಜ್‌ ಮಹಲ್ ಗೋಚರಿಸದ ಕಾರಣ ಬೇಸರದಿಂದ ಹಿಂದಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರಿಹಾರ ಕ್ರಮ[ಬದಲಾಯಿಸಿ]

  • ಧೂಳಿನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಎಲ್ಲಾ ರಸ್ತೆಗಳ ಮೇಲೆ ನೀರು ಸಿಂಪಡಿಸಲಾಗುತ್ತದೆ. ‘ಸಮ ಮತ್ತು ಬೆಸ ನೋಂದಣಿ ಸಂಖ್ಯೆಯ ವಾಹನಗಳ ದಿನ ಬಿಟ್ಟು ದಿನ ಸಂಚಾರ’ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡುವ ಚಿಂತನೆ ಸರ್ಕಾರಕ್ಕಿದೆ. ತಜ್ಞರ ಅಭಿಪ್ರಾಯದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
  • ಕೃತಕ ಮಳೆ; ಕೇಂದ್ರದ ಜತೆ ಚರ್ಚೆ: ‘ವಾತಾವರಣದಲ್ಲಿ ಧೂಳು ಹೆಚ್ಚಿದ್ದಾಗ ಮಳೆ ಬಂದರೆ, ಧೂಳಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಮೋಡ ಬಿತ್ತನೆ ತಂತ್ರಜ್ಞಾನದ ಮೂಲಕ ಕೃತಕ ಮಳೆ ಬರಿಸಲು ಸಾಧ್ಯವೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
  • ಭದ್ರತಾ ಸಿಬ್ಬಂದಿಗೆ ಮುಖಗವಸು: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ನಿಲ್ದಾಣಗಳು ಮತ್ತು ಸರ್ಕಾರಿ ಕಚೇರಿ ಕಟ್ಟಡಗಳ ಭದ್ರತೆಗೆ ನಿಯೋಜನೆ ಆಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸುಮಾರು ಏಳು ಸಾವಿರ ಯೋಧರಿಗೆ ಮುಖಗವಸು ನೀಡಲು ತೀರ್ಮಾನಿಸಲಾಗಿದೆ.

ನಿಯಂತ್ರಣ ಕ್ರಮಗಳು[ಬದಲಾಯಿಸಿ]

  • ಐದು ದಿನ ನಿರ್ಮಾಣ ಕಾಮಗಾರಿ ನಿಷೇಧ: ಸಂಪುಟ ತೀರ್ಮಾನ
  • ಧೂಳು ನಿಯಂತ್ರಿಸಲು ಕೃತಕ ಮಳೆ ಬರಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ
  • ಬದರಪುರ ವಿದ್ಯುತ್‌ ಸ್ಥಾವರದ ಹಾರುಬೂದಿ ಮಾಲಿನ್ಯ ಹೆಚ್ಚಲು ಒಂದು ಕಾರಣ
  • ಮುಂದಿನ 10 ದಿನ ವಿದ್ಯುತ್‌ ಸ್ಥಾವರ ಬಂದ್‌, ಹಾರು ಬೂದಿ ಮೇಲೆ ನೀರು ಚಿಮುಕಿಸಲು ಕ್ರಮ
  • ಸರಿ ಬೆಸ ನೋಂದಣಿ ಸಂಖ್ಯೆ ವಾಹನಗಳಿಗೆ ದಿನ ಬಿಟ್ಟು ದಿನ ಸಂಚಾರಕ್ಕೆ ಅವಕಾಶ ಯೋಜನೆ ಪುನರಾರಂಭಕ್ಕೆ ಚಿಂತನೆ
  • ಡೀಸೆಲ್‌ ಜನರೇಟರ್‌ಗಳಿಂದಾಗುವ ಮಾಲಿನ್ಯ ತಪ್ಪಿಸಲು ಅನಧಿಕೃತ ಕಾಲನಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ನಿರ್ಧಾರ[೫]

ಪರಿಹಾರ ಕ್ರಮಗಳು[ಬದಲಾಯಿಸಿ]

ಅಳಿವಿನತ್ತ 200 ಕ್ಕೂ ಹೆಚ್ಚು ಪಕ್ಷಿಗಳು[ಬದಲಾಯಿಸಿ]

ಬ್ರೆಜಿಲ್‌ನ ಅಟ್ಲಾಂಟಿಕ್‌ ಅರಣ್ಯ, ಕೇಂದ್ರ ಅಮೆರಿಕ, ಕೊಲಂಬಿಯಾದ ಪಶ್ಚಿಮ ಬೆಟ್ಟಸಾಲುಗಳು, ಸುಮಾತ್ರಾ, ಮಡಗಾಸ್ಕರ್ ಮತ್ತು ಆಗ್ನೇಯ ಏಷ್ಯಾದಲ್ಲಿ ಬದಲಾಗುತ್ತಿರುವ ಭೂ ಪ್ರದೇಶ ಮತ್ತು ಇದರಿಂದಾಗಿ 600 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ಆವಾಸಸ್ಥಾನಗಳಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಅವರು ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ ದೂರ ಸಂವೇದಿ ದತ್ತಾಂಶವನ್ನು ಅವರು ಬಳಸಿಕೊಂಡಿದ್ದಾರೆ.

ಒಟ್ಟು 600 ಪ್ರಭೇದಗಳ ಪೈಕಿ 108 ಪಕ್ಷಿಗಳು ಐಯುಸಿಎನ್‌ನ ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿಜ್ಞಾನಿಗಳು ಈ ಅಧ್ಯಯನದಲ್ಲಿ ಹೊಸದಾಗಿ 210 ಪಕ್ಷಿಗಳ ಸಂತತಿ ನಾಶವಾಗುವ ಸ್ಥಿತಿಗೆ ತಲುಪಿರುವುದನ್ನು ವಿಷ್ಲೇಶಿಸಿದ್ದಾರೆ. ಇವುಗಳಲ್ಲಿ 189 ಪಕ್ಷಿ ಪ್ರಭೇದಗಳನ್ನು ಅಪಾಯದ ಅಂಚಿನಲ್ಲಿವೆ ಎಂದು ವರ್ಗೀಕರಣ ಮಾಡಬೇಕು ಎಂದು ಅವರು ಹೇಳಿದ್ದಾರೆ.[೬]

ದೆಹಲಿಯಲ್ಲಿ ಕೆಂಡದ ಉಷ್ಣೋಗ್ರತೆ: ಉತ್ತರಭಾರತದಲ್ಲಿ 44 ಮಂದಿ ಸಾವು[ಬದಲಾಯಿಸಿ]

  • ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶ ಏರಿಕೆಯಿಂದ 8 ಜೂನ್, 2017 ದೆಹಲಿ ಕೆಂಡವಾಗಿತ್ತು; ಉಷ್ಣೋಗ್ರತೆಗೆ ಉತ್ತರ ಭಾರತ ಆ ಒಂದು ವಾರ ತತ್ತರಿಸಿತು.
  • ಮಹಾನಗರದ ಕೆಲ ಭಾಗಗಳಲ್ಲಿ ಉಷ್ಣೋಗ್ರತೆ 47 ಡಿಗ್ರಿ ಸೆಲ್ಸಿಯಸ್‌ಗೆ ಜಿಗಿದಿತ್ತು. ರೋಹಿಣಿಯ ರಾಣಿಬಾಗ್ ಬಳಿ ಬಿಸಿಲಿನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಆಕಸ್ಮಿಕವಾಗಿ ಹೊಕ್ಕ ಆರು ವರ್ಷದ ಬಾಲಕ ಸೋನು ಹೊರಬರಲಾಗದೆ ಉಷ್ಣೋಗ್ರತೆ ಕಾರಣ ಅಲ್ಲಿಯೇ ಉಸಿರು ಕಟ್ಟಿ ಮೃತಪಟ್ಟ ದಾರುಣ ಘಟನೆ ಜರುಗಿತು. ಉತ್ತರಪ್ರದೇಶದ ನಾನಾ ಭಾಗಗಳಲ್ಲಿ ಆ ದಿನದ 24 ತಾಸುಗಳಲ್ಲಿ ಉಷ್ಣೋಗ್ರತೆಗೆ ಹತ್ತು ಮಂದಿ ಬಲಿಯಾದರು. ಒಡಿಶಾದಲ್ಲಿ 34 ಮಂದಿ ಅಸುನೀಗಿದರು.
  • ಅದೇ ಸಮಯ ನೆರೆಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನೂರ್ ಪುರ್ಥಲ್ ಮತ್ತ ಭಕ್ಕರ್ 52 ಡಿಗ್ರಿ ಸೆಲ್ಶಿಯಸ್, ಖೈಬರ್ ಪಖ್ತೂನ್ ನ ಡೇರಾ ಇಸ್ಮಾಯಿಲ್ ಖಾನ್ ಹಾಗೂ ಸಿಬ್ಬಿ 51 ಡಿಗ್ರಿ ಸೆಲ್ಶಿಯಸ್, ಸರ್ಗೋಧ ಮತ್ತು ರಿಸಾಲ್ಪುರ್ 50 ಡಿಗ್ರಿ ಸೆಲ್ಸಿಯಸ್‌ ಝಳದಲ್ಲಿ ಬಸವಳಿದರು.
  • ದೆಹಲಿಗೆ ಅಂಟಿಕೊಂಡಿರುವ ಉತ್ತರಪ್ರದೇಶದ ನೋಯ್ಡಾ, ಘಾಜಿಯಾ­ಬಾದ್, ಹರಿಯಾಣದ ಗುಡಗಾಂವ್ ಸೇರಿರುವ ರಾಷ್ಟ್ರೀಯ ರಾಜಧಾನಿ ಕ್ಷೇತ್ರದ ಸರಾಸರಿ 44.6 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಸ್ಥಿರಗೊಂಡಿತು. ಗರಿಷ್ಠ ಉಷ್ಣೋಗ್ರತೆಯ ಜೊತೆಗೆ ಕನಿಷ್ಠ ಉಷ್ಣಾಂಶವು 33.6 ಸೆಲ್ಸಿಯಸ್‌ಗೆ ಏರಿದ್ದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಆ ದಿನಗಳಲ್ಲಿ ಮಧ್ಯಾಹ್ನದ ವೇಳೆಯಲ್ಲಿ ರಾಜಧಾನಿಯಲ್ಲಿ ಜನ-ವಾಹನ ಸಂಚಾರ ಅತಿ ವಿರಳವಾದವು.
  • ಕಾರಣ:ಮಿತಿ ಮೀರಿದ ಕಲ್ಲು ಮತ್ತು ಕಾಂಕ್ರೀಟ್ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಈ ಕಟ್ಟಡಗಳು ಹಗಲಿನಲ್ಲಿ ಹೀರಿ ಹಿಡಿದಿರಿಸಿಕೊಳ್ಳುವ ಉಷ್ಣಾಂಶದ ಬಿಡುಗಡೆಗೆ ದೀರ್ಘ ಸಮಯ ಹಿಡಿಯುತ್ತಿರುವುದು ಇದಕ್ಕೆ ಕಾರಣವೆಂದು ಅಧ್ಯಯನಗಳು ತಿಳಿಸಿವೆ. [೭]

ನೋಡಿ[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ವನ್ಯಜೀವಿ ಸಂಕುಲ ಪೂರ್ಣ ನಿರ್ನಾಮದ ಭೀತಿ..
  2. World on track to lose two-thirds of wild animals by 2020, major report warns
  3. "ಕಪ್ಪೆಗಳು ವಟಗುಟ್ಟುತ್ತಿಲ್ಲ! ಕೇಳಿಸಿಕೊಳ್ಳಲೇಬೇಕಿದೆ...;ಅಮ್ಮಿ ನಲ್ಲೂರು;6 Nov, 2016". Archived from the original on 2016-11-06. Retrieved 2016-11-07.
  4. ತುರ್ತು ಸಭೆಮಿತಿಮೀರಿದ ವಾಯುಮಾಲಿನ್ಯ: ದೆಹಲಿಯಲ್ಲಿ ಇನ್ನೂ 3 ದಿನ ಶಾಲೆಗಳಿಗೆ ರಜೆ;6 Nov, 2016
  5. ಮಾಲಿನ್ಯಕ್ಕೆ ಕಂಗೆಟ್ಟ ದೆಹಲಿ;7 Nov, 2016
  6. ತೀವ್ರ ಅಪಾಯಅಳಿವಿನತ್ತ 200ಕ್ಕೂ ಹೆಚ್ಚು ಪಕ್ಷಿಗಳು;16 Nov, 2016
  7. ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶ ಏರಿಕೆ; ದೆಹಲಿ ಕೆಂಡವಾಗಿದೆ; ಉಷ್ಣೋಗ್ರತೆಗೆ ತತ್ತರಿಸಿದ ಉತ್ತರ ಭಾರತ;ಪ್ರಜಾವಾಣಿ ವಾರ್ತೆ;8 ಜೂನ್, 2017