ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಸ್ಥಾಪನೆ2 ಅಕ್ಟೋಬರ್ 1913;
40345 ದಿನ ಗಳ ಹಿಂದೆ
 (1913-೧೦-02) as The Bank of Mysore Ltd. location = --
--,
--
ಪ್ರಮುಖ ವ್ಯಕ್ತಿ(ಗಳು)(), Chairman and Managing Director
ಉದ್ಯಮಬ್ಯಾಂಕ್
ಉತ್ಪನ್ನಸಾಲ
ಆದಾಯIncrease US$ () billion (2008)
ನಿವ್ವಳ ಆದಾಯIncrease US$ () billion (2008)
ಒಟ್ಟು ಆಸ್ತಿIncrease US$ () billion (2008)
ಉದ್ಯೋಗಿಗಳು()
ಜಾಲತಾಣwww.onlinesbm.com

ಮೈಸೂರು ಬ್ಯಾಂಕ್ ಇತಿಹಾಸ[ಬದಲಾಯಿಸಿ]

  • ಆರ್ಥಿಕ ಕ್ಷೇತ್ರದಲ್ಲಿ ಕನ್ನಡಿಗರ ಶ್ರಮಕ್ಕೆ ಸಂದ ಕೀರ್ತಿ ವರ್ಷದಿಂದ ವರ್ಷಕ್ಕೆ ಲಾಭದತ್ತ ಮುನ್ನುಗ್ಗುತ್ತ ಬೆಳೆದ ಬ್ಯಾಂಕ್ ಅದೇ ಮೈಸೂರು ಸಂಸ್ಥಾನದ ದಿವಾನರು ಸರ್ ಎಂ.ವಿಶ್ವೇಶ್ವರಯ್ಯರವರು ಹುಟ್ಟುಹಾಕಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಸ್ಥಾನದ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಆಗಷ್ಟೆ ಜಾಗತಿಕ ದೃಷ್ಟಿಕೋನ ಚಿಗುರೊಡಿಯುತ್ತಿದ್ದ ಕಾಲಘಟ್ಟದಲ್ಲಿ ಕನ್ನಡಿಗರಿಗಾಗಿ ಬ್ಯಾಂಕಿಂಗ್ ವ್ಯವಸ್ಥೆಯೊಂದನ್ನು ತರಬೇಕು ಎಂದು ತೀರ್ಮಾನಿಸಿ ಸಮಿತಿಯೊಂದನ್ನು ರಚಿಸಿದ್ದರು. ದೇಶದಲ್ಲಿ ಬ್ರಿಟಿಷರ ಆಡಳಿತ, ಅವರದೇ ಕಾನೂನು, ಅವರದೇ ಆರ್ಥಿಕ ನೀತಿ ಇದ್ದ ಕಾಲದಲ್ಲಿ ನಮ್ಮ ನೆಲದ ಆಶಯಗಳಿಗೆ ಪೂರಕವಾಗಿರುವ ಬ್ಯಾಂಕ್ ಒಂದನ್ನು ಚಾಲ್ತಿಗೆ ತರಬೇಕು ಬ್ಯಾಂಕ್ ವೊಂದು ಸೃಷ್ಟಿಯಾಗಬೇಕು ಮೈಸೂರು ಸಂಸ್ಥಾನದ ಅದೀನದಲ್ಲಿ ಎಂಬ ಮಹತ್ವಕಾಂಕ್ಷೆಯನ್ನು ಹೊಂದಿದ್ದರು.
  • ಸರ್.ಎಂ.ವಿಶ್ವೇಶ್ವರಯ್ಯ ನೇತೃತ್ವದ ಸಮಿತಿ ಮಹಾರಾಜರಿಗೆ ಶಿಫಾರಸು ಮಾಡಿತು. ಮಹಾರಾಜರು ಏನು ಯೋಚಿಸದೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಹಸಿರು ನಿಶಾನೆ ನೀಡಿದ್ದರು. ಇದರ ಫಲವಾಗಿಯೇ ದಿನಾಂಕ #2_ಅಕ್ಟೊಬರ್_1913 ರಂದು ದಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್ ಜನ್ಮತಾಳಿತು ಅದುವೆ ಮೈಸೂರು ಬ್ಯಾಂಕ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.
  • ಮೈಸೂರು ಅರಸರು ಸರ್.ಎಂ.ವಿಶ್ವೇಶ್ವರಯ್ಯ ನೇತೃತ್ವದ ಬ್ಯಾಂಕ್ ಸ್ಥಾಪನೆ ಜತೆಗೆ ವಾಣಿಜ್ಯವಾಗಿಯೂ ಆಲೋಚಿಸಿ ಬ್ಯಾಂಕ್ ನ ಬೆಳವಣೆಗೆಗೆ ಬೆಂಗಳೂರಿನ ಕೆಂಪೆಗೌಡ ರಸ್ತೆ ಮತ್ತು ಅವಿನ್ಯೂ ರಸ್ತೆಗೆ ಅಂಟುಕೊಂಡಿರುವ ಸ್ಥಳದಲ್ಲಿ ಪ್ರಧಾನ ಕಛೇರಿ ಸ್ಥಾಪಿಸಿದರು. ಸ್ವಲ್ಪ ವರ್ಷಗಳ ನಂತರ ಇದರ ಕೂಗಳತೆಯ ದೂರದಲ್ಲೆ ಈಗ ಬೆಂಗಳೂರಿನ ಅತಿ ಜನನಿಬಿಡ ಸ್ಥಳ ಮೈಸೂರು ಬ್ಯಾಂಕ್ ವೃತ್ತ(ಸರ್ಕಲ್) ಎಂದು ಹೆಸರಾಗಿರುವ ಸ್ಥಳದಲ್ಲಿ ಕೇಂದ್ರ ಕಛೇರಿಯ ಬೃಹತ್ ಕಟ್ಟಡ ನಿರ್ಮಾಣವಾಯಿತು.

ಇತಿಹಾಸ ವಿವರ[ಬದಲಾಯಿಸಿ]

  • ಮೈಸೂರು ಬ್ಯಾಂಕ್ ಸ್ಥಾಪನೆಯಾದದ್ದು 103 ವರ್ಷಗಳ ಹಿಂದೆ ದಸರಾ ಮಹೋತ್ಸವದ ಸಂದರ್ಭದಲ್ಲಿ. 2ನೆಯ ಅಕ್ಟೋಬರ್ 1913ರಂದು ಬೆಂಗಳೂರಿನ ಅವೆನ್ಯೂ ರಸ್ತೆಯ ಸಣ್ಣ ಕಟ್ಟಡವೊಂದರಲ್ಲಿ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದಿತು. ಬ್ಯಾಂಕಿನ ಸ್ಥಾಪನೆಗೆ ಮೂಲ ಕಾರಣ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ಸರ್ಕಾರದ ದಿವಾನಸರ್ ಎಂ. ವಿಶ್ವೇಶ್ವರಯ್ಯನವರ ದಿಟ್ಟ ನಿರ್ಧಾರಗಳು.
  • ಮೈಸೂರು ರಾಜ್ಯ ಸರ್ಕಾರದ ಆಶ್ರಯದಲ್ಲಿ ಬ್ಯಾಂಕೊಂದರ ಸ್ಥಾಪನೆಯ ವಿಷಯ ಮೊದಲು ಮೊಳಕೆಯೊಡೆದದ್ದು 1911ರ ಜೂನ್ 10ರಂದು ನಡೆದ ಮೈಸೂರು ಆರ್ಥಿಕ ಸಮ್ಮೇಳನದ ಪ್ರಥಮ ಅಧಿವೇಶನದಲ್ಲಿ. ರಾಜ್ಯದ ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಮ್ಮೇಳನವು ಸರ್ಕಾರಿ ಪ್ರಾಯೋಜಿತ ಬ್ಯಾಂಕೊಂದರ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ ಎಂ.ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ‘ಬ್ಯಾಂಕಿಂಗ್ ಸಮಿತಿ’ಯನ್ನು ರಚಿಸಿತು.
  • ಆ ದಿನಗಳಲ್ಲಿ ದೇಶದ ಆರ್ಥಿಕ ವಾತಾವರಣ ಬ್ಯಾಂಕ್ ಸ್ಥಾಪನೆಗೆ ಪೂರಕವಾಗಿರಲಿಲ್ಲ. ಸ್ವಲ್ಪ ದಿನಗಳ ಹಿಂದಷ್ಟೇ ಬರ್ಮಾದಲ್ಲಿ (ಸದ್ಯದ ಮ್ಯಾನ್ಮಾರ್‌) ಸದೃಢ ಬ್ಯಾಂಕೊಂದು ನೆಲ ಕಚ್ಚಿ ದೇಶದ ಬಹುಭಾಗದ ವ್ಯಾಪಾರಿಗಳಲ್ಲಿ ತಲ್ಲಣ ಉಂಟುಮಾಡಿತ್ತು. ಆದರೆ ಆ ಸಂದರ್ಭದಲ್ಲಿಯೇ ‘ಸ್ವದೇಶೀ ಚಳವಳಿ’ ಸಹಾ ಬಲಗೊಂಡು ಸ್ವದೇಶೀ ಬ್ಯಾಂಕುಗಳ ಕಡೆ ಸಾರ್ವಜನಿಕರಲ್ಲಿ ಒಲವು ಮೂಡಲು ಶುರುವಾಗಿತ್ತು.
  • ಅಲ್ಲದೇ ಸ್ಥಳೀಯ ಲೇವಾದೇವಿಗಾರರ ಕಿರುಕುಳವೂ ಸಾಕಷ್ಟಿತ್ತು. 1906ರಲ್ಲಿ ಅಂದಿನ ಬರೋಡಾ ಮಹಾರಾಜರ ಕೃಪಾಶ್ರಯದಲ್ಲಿ ಸಾರ್ವಜನಿಕರ ಹೂಡಿಕೆಯೊಂದಿಗೆ ಪ್ರಾರಂಭವಾದ ‘ಬರೋಡಾ ಬ್ಯಾಂಕ್’ ಮೈಸೂರು ಮಹಾರಾಜರ ಸರ್ಕಾರಕ್ಕೆ ಪ್ರೇರಣೆ ನೀಡಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಸರ್ ಎಂ. ವಿಶ್ವೇಶ್ವರಯ್ಯನವರ ನೇತೃತ್ವದ ಬ್ಯಾಂಕಿಂಗ್ ಸಮಿತಿ 2ನೇ ಮೇ 1912ರಂದು ನಡೆಸಿದ ತನ್ನ ಸಭೆಯಲ್ಲಿ ರಾಜ್ಯದ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ನೆರವಿನಿಂದ ‘ಬ್ಯಾಂಕ್ ಆಫ್ ಮೈಸೂರು’ ಎಂಬ ಹೆಸರಿನ ಬ್ಯಾಂಕಿನ ಸ್ಥಾಪನೆಗೆ ಶಿಫಾರಸು ಮಾಡಿತು.
  • ಜೂನ್ 1912ರಲ್ಲಿ ನಡೆದ ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಈ ಶಿಫಾರಸುಗಳು ಅಂಗೀಕೃತವಾಗಿ, ನಂತರ 31ನೇ ಜನವರಿ 1913ರಂದು ಬ್ಯಾಂಕಿನ ಸ್ಥಾಪನೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಅಂಕಿತ ದೊರೆಯಿತು. 19ನೇ ಮೇ 1913ರಂದು ಕಂಪೆನಿಯಾಗಿ ನೋಂದಾವ ಣೆಗೊಂಡಿತು. ಇದಕ್ಕೆ ಸರಿಯಾಗಿ 103 ವರ್ಷಗಳ ನಂತರ ಅಂದರೆ 17ನೇ ಮೇ 2016ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕ ಮಂಡಳಿಯು ಬ್ಯಾಂಕನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಆರಂಭದ ದಿನಗಳಲ್ಲಿ ಬ್ಯಾಂಕಿನ ಷೇರು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದ ಕಾರಣ ಕೆಲವೇ ದಿನಗಳಲ್ಲಿ ಷೇರುಗಳು ನಿಗದಿಗಿಂತ ಹೆಚ್ಚಿನ ಬೇಡಿಕೆ ಕಂಡಿದ್ದವು. [೧]

ಮೊದಲ ಅಧ್ಯಕ್ಷ[ಬದಲಾಯಿಸಿ]

  • ಬ್ಯಾಂಕಿನ ಮೊದಲ ಅಧ್ಯಕ್ಷರಾಗಿ ಮಹಾರಾಜರಿಂದ ನೇಮಕವಾದವರು ಮೈಸೂರು ಸರ್ಕಾರದಲ್ಲಿ ದಕ್ಷ ಆಡಳಿತಗಾರರೆಂದು ಗುರುತಿಸಿಕೊಂಡು ನಿವೃತ್ತರಾಗಿದ್ದ ದಿವಾನ್ ಬಹದ್ದೂರ್ ಕೆ. ಪಿ. ಪುಟ್ಟಣ್ಣ ಚೆಟ್ಟಿ ಅವರು. ಇವರು ನಂತರ ನಿರಂತರವಾಗಿ ಷೇರುದಾರರಿಂದ ಆಯ್ಕೆ ಹೊಂದಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷರಾಗಿ ಮುಂದುವರಿದು ಬ್ಯಾಂಕಿಗೆ ದಕ್ಷ ಆಡಳಿತ ಮತ್ತು ಮಾರ್ಗದರ್ಶನ ನೀಡಿದರು.[೨]

ಭಾರತೀಯ ರಿಸರ್ವ್ ಬ್ಯಾಂಕ್‍ನ ಅಧೀನಕ್ಕೆ[ಬದಲಾಯಿಸಿ]

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಾಮಕರಣ;

  • ಸತತ ನೂರ ಹದಿಮೂರು ವರ್ಷಗಳ ಕಾಲ ಲಾಭದಲ್ಲಿ; 1913 ರಿಂದ 1953ರ ವರೆಗೆ ಒಂದು ವರ್ಷವು ನಷ್ಟವಾಗದೆ ಲಾಭದಲ್ಲೆ ಬೆಳೆದ ಬ್ಯಾಂಕ್ 1953ರಲ್ಲಿ ದಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್, ಮೈಸೂರು ಬ್ಯಾಂಕ್ ಆಗಿ ಪರಿವರ್ತನೆ ಗೊಂಡು, ಭಾರತೀಯ ರಿಸರ್ವ್ ಬ್ಯಾಂಕ್ ನ ಅಧೀನಕ್ಕೆ ಒಳಪಡಿಸಲಾಯಿತು ಮತ್ತು ಸರ್ಕಾರಿ ವ್ಯವಹಾರಗಳಿಗೆ ಬೊಕ್ಕಸವೆಂದು ಘೋಷಿಸಲಾಯಿತು.
  • 1960ರ ಮಾರ್ಚ್ ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(State Bank Of Mysore)ನ ಸಹವರ್ತಿ ಬ್ಯಾಂಕ್ ಆಗಿ ಪರಿವರ್ತಿನೆಯಾಯಿತು. ಸೇಟ್ ಬ್ಯಾಂಕ್ ಆಫ್ ಮೈಸೂರಿನ % 92.33 ರಷ್ಟು ಷೇರುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಹೊಂದಿದೆ. ಉಳಿದ %7.73 ರಷ್ಟು ಷೇರುಗಳನ್ನು ಖಾಸಗಿ ಷೇರುದಾರರು ಮತ್ತು ಇತರೆ ಸಂಘ ಸಂಸ್ಥೆಗಳು ಹೊಂದಿವೆ.

ಬ್ಯಾಂಕ್ ರಾಷ್ಟ್ರೀಕರಣ[ಬದಲಾಯಿಸಿ]

  • ಮೈಸೂರು ಬ್ಯಾಂಕ್‍ನ ವೈಶಿಷ್ಟವೆನೆಂದರೆ ಬ್ಯಾಂಕ್ ಸ್ಥಾಪನೆಗೊಂಡ 103 ವರ್ಷಗಳಿಂದಲೂ ಲಾಭದಲ್ಲಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಸ್ಥಾಪನೆಗೊಂಡ ಮೈಸೂರು ಬ್ಯಾಂಕ್ ರಿಸರ್ವ್ ಬ್ಯಾಂಕ್ ಅಧೀನಕ್ಕೆ ಒಳಗಾದ ದಿನದಿಂದ ರಾಷ್ರೀಕೃತ ಬ್ಯಾಂಕ್ (Nationalised bank) ಆಯಿತು. ರಾಷ್ಟ್ರೀಕೃತ ಬ್ಯಾಂಕ್ ಆದ ದಿನದಿಂದಲೂ ಕನ್ನಡತನಕ್ಕೆ ಯಾವುದೇ ಕುಂದು ಬರದಂತೆ ನಡೆದುಕೊಂಡ ಬಂದಿತ್ತು.
  • ಆದರೆ ಈಗ ಭಾರತೀಯ ಸ್ಟೇಟ್ ಬ್ಯಾಂಕ್ ನೊಂದಿಗೆ ವಿಲೀನಗೊಂಡಿದ್ದರಿಂದ ಕನ್ನಡತನವು ಮರೆಯಾಗುವುದು ದುಖಃದ ಸಂಗತಿ. ಭಾರತಕ್ಕೆ ಸ್ವಾತಂತ್ರ ಸಿಗುವ ಮುನ್ನ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಆಯಾ ರಾಜಮನೆತನಗಳು ಮೈಸೂರು ಬ್ಯಾಂಕ್ ಹುಟ್ಟಿಕೊಂಡಿದ್ದು ಗಮನಿಸಿ ನಮ್ಮ ರಾಜ್ಯದಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಬ್ಯಾಂಕ್ ಒಂದನ್ನು ಆರಂಭಿಸಬೇಕು ಎಂದು ಆಧುನಿಕ ಜಗತ್ತಿಗೆ ಒಗ್ಗುವ ಮನಸು ಮಾಡಿದರು.
  • ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್.ಎಂ.ವಿ. ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಿದ ನಂತರ ಇತರೆ ರಾಜ್ಯದ ರಾಜರು ಸ್ಪೂರ್ತಿ ಪಡೆದರು ಇದರಲ್ಲಿ ಎರಡನೇ ಬ್ಯಾಂಕ್ ಆಗಿ ಪಟಿಯಾಲದ ರಾಜ ಭೂಪೇಂದರ್ ಸಿಂಗ್ 1917 ರ ನವೆಂಬರ್ 17ರಂದು ಬ್ಯಾಂಕ್ ಆಫ್ ಪಟಿಯಾಲ ಸ್ಥಾಪಿಸಿದರು. ಮೂರನೆಯ ಬ್ಯಾಂಕ್ ಆಗಿ 1941ರಲ್ಲಿ ನಿಜಾಮರು ಬ್ಯಾಂಕ್ ಆಫ್ ಹೈದರಾಬಾದ್ ಎಂದು ಸ್ಥಾಪಿಸಿದರು.
  • ಆನಂತರ ರಾಜಸ್ಥಾನದ ಜೈಪುರ್ ಅರಸರ ನೇತೃತ್ವದಲ್ಲಿ 1943 ರಲ್ಲಿ ಸ್ಥಾಪಿಸಿದ ಬಿಕಾನೇರ್ ಮತ್ತು ಜೈಪುರ್ ಬ್ಯಾಂಕ್ ಗಳು ಪಟಿಯಾಲಾದ ಬ್ಯಾಂಕ್ ನಂತೆ ಕೃಷಿ ಕೇಂದ್ರಿತ ಬ್ಯಾಂಕ್ ಆಗಿದ್ದವು. ಇದರ ಬೆನ್ನಲ್ಲೆ ತಿರವಾಂಕೂರಿನ ದಿವಾನ ಸಿ.ಪಿ. ರಾಮಸ್ವಾಮಿ ಅಯ್ಯಾಂಗರ್ ಅವರು ತಿರುವಾಂಕೂರು ರಾಜರ ಸಹಕಾರ ಪಡೆದು 1945ರಲ್ಲಿ ಬ್ಯಾಂಕ್ ಆಫ್ ತಿರುವಾಂಕೂರ್ ಸ್ಥಾಪಿಸಿದರು.
  • ಈ ಎಲ್ಲ ಬ್ಯಾಂಕ್ ಹುಟ್ಟಿಗೆ ಮೂಲ ಕಾರಣರಾಗಿದ್ದು ದಿ ಮೈಸೂರು ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್. ಈ ಬ್ಯಾಂಕ್ ಗಳು 60ರ ದಶಕದಲ್ಲಿ ಏಕಕಾಲಕ್ಕೆ ಸ್ಟೇಟ್ ಬ್ಯಾಂಕ್ ಸ್ವರೂಪ ಪಡೆದುಕೊಂಡು ಆಯಾ ರಾಜ್ಯಗಳ ಸ್ಟೇಟ್ ಬ್ಯಾಂಕ್ ಗಳಾಗಿ, ಆಯಾ ರಾಜ್ಯಗಳ ಬೊಕ್ಕಸವನ್ನು ನಿರ್ವಹಿಸುವ ಮಟ್ಟಿಗೆ ಬೆಳೆದು ನಿಂತವು. ನಂತರ ಏಕಕಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳ ಜಾಲಕ್ಕೆ ಸೇರಿಕೊಂಡು ಎಸ್ ಬಿ ಐ ಅಧೀನಕ್ಕೆ ಒಳಪಟ್ಟವು. ಹೀಗೆ ಏಕಕಾಲಕ್ಕೆ ಉಗಮಗೊಂಡು ಬೆಳೆದು ಬಂದು, ಈಗ ದಿ.1-4-2017 ರಿಂದ ಭಾರತೀಯ ಬ್ಯಾಂಕ್‍ನಲ್ಲಿ / ಸ್ಟೇfಬ್ಯಾಂಕ ಆಫ್ ಇಂಡಿಯಾದಲ್ಲಿ ಈಗ ವಿಲೀನವಾಗಿವೆ.[೩]

ವಿಲೀನ ಪರಿಣಾಮ[ಬದಲಾಯಿಸಿ]

  • 5 Apr, 2017;
  • ಕನ್ನಡಿಗರಲ್ಲಿ ‘ನಮ್ಮ ಬ್ಯಾಂಕ್’, ‘ಮೈ ಬ್ಯಾಂಕ್’, ‘ಮೈಸೂರು ಬ್ಯಾಂಕ್’ ಎಂದೇ ಜನಜನಿತವಾಗಿದ್ದ, ನೂರಾ ಮೂರು ವರುಷಗಳಿಗೂ ಹೆಚ್ಚಿನ ಇತಿಹಾಸ ಹೊತ್ತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 31ನೇ ಮಾರ್ಚ್ 2017ರಂದು ತನ್ನ ಕೊನೆಯ ದಿನದ ವಹಿವಾಟನ್ನು ನಡೆಸಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನವಾಗಿದೆ. ನೋಡನೋಡುತ್ತಿದ್ದಂತೆಯೇ ಶತಮಾನದಿಂದ ರಾರಾಜಿಸುತ್ತಿದ್ದ ಮೈಸೂರು ಬ್ಯಾಂಕಿನ ನಾಮಫಲಕಗಳು ಕೆಳಗಿಳಿದವು.
  • ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಮೈಸೂರಿನ ಒಂದು ಕೋಟಿಯಷ್ಟು ಗ್ರಾಹಕರು ಭಾರತೀಯ ಸ್ಟೇಟ್ ಬ್ಯಾಂಕಿನ ಗ್ರಾಹಕರಾಗಿ ಪರಿವರ್ತನೆಗೊಂಡರು. ಸುಮಾರು 1.35 ಲಕ್ಷ ಕೋಟಿ ವಹಿವಾಟು ಹೊಂದಿದ್ದ ಮೈಸೂರು ಬ್ಯಾಂಕಿನ ಎಲ್ಲಾ ಬಗೆಯ ಠೇವಣಿ ಖಾತೆಗಳು, ಗೃಹ ಸಾಲ, ಆಭರಣ ಸಾಲ, ಕೃಷಿ ಸಾಲ, ವ್ಯಾಪಾರ-ಕೈಗಾರಿಕಾ ಸಾಲ ಸೇರಿದಂತೆ ವಿವಿಧ ಬಗೆಯ ಮುಂಗಡ ಖಾತೆಗಳು, ಎಟಿಎಂಗಳು ಮಾತ್ರವಲ್ಲದೆ ಬ್ಯಾಂಕಿನ 1000ಕ್ಕೂ ಹೆಚ್ಚಿನ ಶಾಖೆ-ಕಚೇರಿಗಳು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬ್ಯಾಂಕಿನ ಬೆಂಗಳೂರು ಶಾಖೆಯ ಬೃಹತ್‌ ಕಲ್ಲಿನ ಕಟ್ಟಡ, ಐವತ್ತು ವರ್ಷಗಳ ಹಿಂದಿನ ಅತ್ಯಾಕರ್ಷಕ ಬಹುಮಹಡಿಯ ಪ್ರಧಾನ ಕಚೇರಿ, ನಾಡಿನ ವಿವಿಧೆಡೆಗಳಲ್ಲಿ ಹೊಂದಿರುವ ನೂರಾರು ಸ್ವಂತ ಕಟ್ಟಡಗಳು ಮತ್ತು ನಿವೇಶನ ಗಳು ಹಾಗೂ ಬ್ಯಾಂಕಿನ ಆಸ್ತಿಪಾಸ್ತಿ-ಸಾಲ ನೀಡಿಕೆಗೆ ಸಂಬಂಧಿಸಿದ ಸಂಪೂರ್ಣ ದಸ್ತಾವೇಜುಗಳು, ಕಂಪ್ಯೂಟರೀಕೃತ ದಾಖಲೆಗಳು, ಎಲ್ಲಾ ಹಳೆಯ ಕಡತಗಳು ಅಂದು ಭಾರತೀಯ ಸ್ಟೇಟ್ ಬ್ಯಾಂಕಿನ ಸುಪರ್ದಿಗೆ ಸೇರಿತು.
  • ಮೈಸೂರು ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹತ್ತು ಸಾವಿರದಷ್ಟು ಸಿಬ್ಬಂದಿ ಸಹಾ ಅಂದು ದೇಶದ ಅತಿ ದೊಡ್ಡ ಬ್ಯಾಂಕ್ ಆದ ಎಸ್.ಬಿ.ಐ.ನ ಹಾಜರಾತಿ ಪುಸ್ತಕದಲ್ಲಿ ದಾಖಲಾದರು. ಈ ಪರಿವರ್ತನೆಯ ಪ್ರಕ್ರಿಯೆಗೆ ಭಾವನಾ ತ್ಮಕವಾಗಿ ಸ್ಪಂದಿಸಲು ಹಿಂದೇಟು ಹಾಕುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ವಿಶೇಷ ಸ್ವಯಂ ನಿವೃತ್ತಿ ಯೋಜನೆಯೊಂದನ್ನು ಸಹಾ ಘೋಷಿಸಲಾಯಿತು.

ವಿದಾಯ ನಂತರ[ಬದಲಾಯಿಸಿ]

  • ಜೂನ್ 1912ರಲ್ಲಿ ನಡೆದ ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಈ ಶಿಫಾರಸುಗಳು ಅಂಗೀಕೃತವಾಗಿ, ನಂತರ 31ನೇ ಜನವರಿ 1913ರಂದು ಬ್ಯಾಂಕಿನ ಸ್ಥಾಪನೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಅಂಕಿತ ದೊರೆಯಿತು. 19ನೇ ಮೇ 1913ರಂದು ಕಂಪೆನಿಯಾಗಿ ನೋಂದಾವ ಣೆಗೊಂಡಿತು.
  • ಇದಕ್ಕೆ ಸರಿಯಾಗಿ 103 ವರ್ಷಗಳ ನಂತರ ಅಂದರೆ 17ನೇ ಮೇ 2016ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕ ಮಂಡಳಿಯು ಬ್ಯಾಂಕನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಆರಂಭದ ದಿನಗಳಲ್ಲಿ ಬ್ಯಾಂಕಿನ ಷೇರು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದ ಕಾರಣ ಕೆಲವೇ ದಿನಗಳಲ್ಲಿ ಷೇರುಗಳು ನಿಗದಿಗಿಂತ ಹೆಚ್ಚಿನ ಬೇಡಿಕೆ ಕಂಡಿದ್ದವು. ತನ್ನ ಪ್ರಾರಂಭಿಕ ವರ್ಷ 1913ರಿಂದ 2016ರವರೆಗಿನ ಎಲ್ಲಾ 103 ವರುಷಗಳೂ ಸತತವಾಗಿ ಲಾಭ ಗಳಿಸಿರುವುದು ಮೈಸೂರು ಬ್ಯಾಂಕಿನ ಪ್ರಮುಖ ಹೆಗ್ಗಳಿಕೆಯಾಗಿದೆ.

ಶತಮಾನೋತ್ಸವ[ಬದಲಾಯಿಸಿ]

  • 2013ರಲ್ಲಿ ದೇಶಾದ್ಯಂತ ತನ್ನ ಜನ್ಮ ಶತಮಾನೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ಬ್ಯಾಂಕು, ಈ ಸವಿನೆನೆಪಿನಲ್ಲಿ 5ನೇ ಡಿಸೆಂಬರ್ 2013ರಂದು ಒಂದೇ ದಿನ ದೇಶಾದ್ಯಂತ 100 ಶಾಖೆಗಳನ್ನು ತೆರೆದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದಿತ್ತು.
  • ಛಾಪಾ ಕಾಗದ ವಿತರಣೆ:
  • ತೆಲಗಿ ಛಾಪಾ ಕಾಗದದ ಹಗರಣದ ಕಾರಣಕ್ಕೆ ರಾಜ್ಯದಲ್ಲಿ ಛಾಪಾ ಕಾಗದದ ಮಾರಾಟ ನಿಲ್ಲಿಸಿದಾಗ, ಛಾಪಾ ಕಾಗದ ವಿತರಣೆಗೂ ಬ್ಯಾಂಕ್ ಮುಂದಾಗಿತ್ತು.

ಏಕ ವ್ಯಕ್ತಿ ಬ್ಯಾಂಕ್ ಶಾಖೆ[ಬದಲಾಯಿಸಿ]

  • ದೇಶದ ಮೊದಲ ‘ಏಕ ವ್ಯಕ್ತಿ ಬ್ಯಾಂಕ್ ಶಾಖೆ’ ಪ್ರಾರಂಭಿಸಿದ ಕೀರ್ತಿ ಮೈಸೂರು ಬ್ಯಾಂಕಿನದು. 2ನೇ ಸೆಪ್ಟೆಂಬರ್ 1965ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂನಲ್ಲಿ ಪ್ರಾರಂಭವಾದ ಈ ಶಾಖೆಯನ್ನು ಉದ್ಘಾಟಿಸಿದವರು ರಾಜ್ಯದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು.
  • ಗ್ರಾಮೀಣ ಜನರಲ್ಲಿ ಬ್ಯಾಂಕ್ ವಹಿವಾಟಿನ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಪ್ರಾರಂಭವಾದ ಈ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರ ಹೊರತಾಗಿ ಬೇರೆ ಯಾವುದೇ ಸಿಬ್ಬಂದಿಯೂ ಇರುತ್ತಿರಲ್ಲಿಲ್ಲ. ಶಾಖಾ ವ್ಯವಸ್ಥಾಪಕರೇ ಗುಮಾಸ್ತರ ಕೆಲಸಗಳನ್ನೂ ನಿರ್ವಹಿಸುತ್ತಾ, ಗ್ರಾಮೀಣ ಭಾಗದ ರೈತರಿಗೆ ಸೂಕ್ತ ಸಾಲ ಸೌಲಭ್ಯ, ಸಲಹೆ-ಮಾರ್ಗದರ್ಶನಗಳನ್ನೂ ನೀಡುತ್ತಿದ್ದರು.

ಕನ್ನಡ ಬಳಕೆ[ಬದಲಾಯಿಸಿ]

  • ತನ್ನ ದಿನ ನಿತ್ಯದ ವಹಿವಾಟಿನಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ ಬೆಳವಣಿಗೆಗೆ ಮೈಸೂರು ಬ್ಯಾಂಕು ಬಹಳ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದೆ. ಕಂಪ್ಯೂಟರ್ ಕುರಿತ ಪಾರಿಭಾಷಿಕ ಪದಗಳ ಕಿರುಹೊತ್ತಗೆಯೊಂದನ್ನು ಹೊರತಂದ ಹೆಗ್ಗಳಿಕೆ ಮೈಸೂರು ಬ್ಯಾಂಕಿನದು. 1980ರಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು ಬ್ಯಾಂಕ್ ಕನ್ನಡ ಬಳಗ ಹಲವಾರು ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ನಿರಂತರ ಗಮನ ಹರಿಸಿದೆ.
  • 1983ರಲ್ಲಿ ಕರ್ನಾಟಕಕ್ಕೇ ಪ್ರತ್ಯೇಕ ಸ್ಟೇಟ್ ಬ್ಯಾಂಕ್ ನೇಮಕಾತಿ ಮಂಡಳಿ ರಚಿಸಲು ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ಕನ್ನಡ ಬಳಗ ಯಶಸ್ವಿಯಾದುದು ಉಲ್ಲೇಖಾರ್ಹ. ಅಲ್ಲದೆ ಬ್ಯಾಂಕಿನ ಅನೇಕ ಉದ್ಯೋಗಿಗಳು ನಾಡಿನ ರಂಗಭೂಮಿ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಗಳಿಸಿದ್ದಾರೆ.

ವೈಶಿಷ್ಟ್ಯಗಳು[ಬದಲಾಯಿಸಿ]

  1. ರಾಜ್ಯದ ಪ್ರಥಮ ಸರ್ಕಾರಿ ಸ್ವಾಮ್ಯದ ಬ್ಯಾಂಕು
  2. ರಾಜ್ಯದಲ್ಲಿ ಮೊದಲ ಬಾರಿಗೆ ಬ್ಯಾಂಕಿನಲ್ಲಿ ಚೆಕ್ಕುಗಳ ಬಳಕೆಗೆ ಅವಕಾಶ ಕಲ್ಪಿಸಿದ ಬ್ಯಾಂಕು
  3. ರೈತರಿಗೆ ಬೆಳೆ ಸಾಲ ಪರಿಚಯಿಸಿದ ಹೆಗ್ಗಳಿಕೆ
  4. ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಅರಿವು ಮೂಡಿಸಲು ಬ್ಯಾಂಕಿನ ಸಿಬ್ಬಂದಿ ಕಲಾವಿದರಿಂದಲೇ ಹರಿಕಥೆ, ಬೀದಿ ನಾಟಕ, ಸೂತ್ರದ ಗೊಂಬೆಯಾಟ ಪ್ರದರ್ಶನ
  5. ದೇಶದ ಮೊದಲ ಸಂಪೂರ್ಣ ಗಣಕೀಕೃತ ಬ್ಯಾಂಕ್‌

25 ವರ್ಷಗಳ ಹಿಂದಿನ ಭವಿಷ್ಯ[ಬದಲಾಯಿಸಿ]

  • ‘ಮುಂದೊಂದು ದಿನ ನಿಮ್ಮ ಬ್ಯಾಂಕ್‌ ಗಾಳಿಯಲ್ಲಿ ಕಣ್ಮರೆಯಾಗಲಿದೆ’ (Vanishing in thin air..) –25 ವರ್ಷಗಳ ಹಿಂದೆ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಆಡಿದ್ದ ಮಾತು ಕೊನೆಗೂ ನಿಜವಾಗಿದೆ. ಭಾರತವು ಜಾಗತೀಕರಣಕ್ಕೆ ತೆರೆದುಕೊಂಡ ಆರಂಭಿಕ ವರ್ಷಗಳಲ್ಲಿಯೇ ಇಂತಹದೊಂದು ಭವಿಷ್ಯ ನುಡಿಯಲಾಗಿತ್ತು.
  • ಮನಮೋಹನ್‌ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದಾಗ ಬ್ಯಾಂಕ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಸಿನ್ಹಾ ಅವರನ್ನು ಜಾಗತಿಕ ಬ್ಯಾಂಕಿಂಗ್‌ ವ್ಯವಸ್ಥೆಯ ಅಧ್ಯಯನಕ್ಕೆ ವಿದೇಶಕ್ಕೆ ಕಳಿಸಲಾಗಿತ್ತು. ವಿದೇಶದಿಂದ ಮರಳಿದ ಅವರು, ಬ್ಯಾಂಕ್‌ನ ನಿರ್ದೇಶಕ ಮಂಡಳಿಯಲ್ಲಿ ಮಾತನಾಡುತ್ತ ಈ ಅನಿಸಿಕೆ ವ್ಯಕ್ತಪಡಿಸಿದ್ದರು. "ವಿಶ್ವದಾದ್ಯಂತ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ಆ ಗಾಳಿ ಮುಂದೊಂದು ದಿನ ನಮ್ಮಲ್ಲೂ ಜೋರಾಗಿ ಬೀಸಬಹುದು.
  • ಎಸ್‌ಬಿಎಂ ಕೂಡ ಅಸ್ತಿತ್ವ ಕಳೆದುಕೊಳ್ಳಬಹುದು’ ಎಂದು ಅವರು ಭವಿಷ್ಯ ನುಡಿದಿದ್ದರು. ಉನ್ನತ ಅಧಿಕಾರಿಯ ಈ ಮಾತು ಅರಗಿಸಿಕೊಳ್ಳದ ಬ್ಯಾಂಕ್‌ನ ನೌಕರರು ಇಂತಹ ಹೇಳಿಕೆ ವಾಪಸ್‌ ಪಡೆಯಲು ಪಟ್ಟು ಹಿಡಿದು ಅವರಿಂದ ಕ್ಷಮೆ ಯಾಚಿಸುವಲ್ಲಿಯೂ ಸಫಲರಾಗಿದ್ದರು.

ಭಾರತೀಯ ಸ್ಟೇಟ್ ಬ್ಯಾಂಕು[ಬದಲಾಯಿಸಿ]

  • ಇಂದು ಬ್ಯಾಂಕಿನ ಬಂಡವಾಳದ ಶೇ 92.33ರಷ್ಟು ಷೇರುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕು ತನ್ನ ಸುಪರ್ದಿಯಲ್ಲಿರಿಸಿಕೊಂಡಿದ್ದರೆ ಉಳಿದ ಶೇ 7.67 ಭಾಗ ಖಾಸಗಿಯವರದು. ವಿಲೀನದ ನಂತರ ಹಾಲಿ ಷೇರುದಾರರಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ರೂ.10 ಮುಖ ಬೆಲೆಯ 10 ಷೇರುಗಳಿಗೆ ಪ್ರತಿಯಾಗಿ ಭಾರತೀಯ ಸ್ಟೇಟ್ ಬ್ಯಾಂಕಿನ ರೂ.1 ಮುಖ ಬೆಲೆಯ 22 ಷೇರುಗಳನ್ನು ನೀಡಲಾಗುವುದೆಂದು ಘೋಷಿಸಲಾಗಿದೆ.

‘ನೆನಪು’ - ಮ್ಯೂಸಿಯಂ[ಬದಲಾಯಿಸಿ]

  • ಬ್ಯಾಂಕಿನ ನೆನಪುಗಳನ್ನು ಶಾಶ್ವತವಾಗಿ ಉಳಿಸುವಂತಹ ಒಂದು ಮ್ಯೂಸಿಯಂ ನಿರ್ಮಿಸಬೇಕೆಂಬ ಕಲ್ಪನೆಯನ್ನು ಸಾಕಾರಗಳಿಸಲಾಗಿದೆ. ಬೆಂಗಳೂರು ಶಾಖೆಯ ಪಾರಂಪರಿಕ ಕಟ್ಟಡದ ಆವರಣದಲ್ಲಿರುವ ಲಕ್ಷ್ಮೀ ವಿಗ್ರಹದ ಸುತ್ತಲಿನ ಆರು ಕೋಣೆಗಳು ಹಾಗೂ ಮುಂಭಾಗದ ವಿಶಾಲ ಹಜಾರದಲ್ಲಿ, ಮೈಸೂರು ಬ್ಯಾಂಕಿನ ಸಾಧನೆಗಳ ಸಂಗಮ, ಪರಂಪರೆಯ ಅಂಗಣ ‘ನೆನಪು’ ಮ್ಯೂಸಿಯಂ ಜನ್ಮ ತಳೆದಿದೆ.[೪]

ನೋಡಿ[ಬದಲಾಯಿಸಿ]

ಭಾರತದ ಬ್ಯಾಂಕುಗಳ ಪಟ್ಟಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಇತಿಹಾಸದ ಪುಟ ಸೇರಿದ ಮೈಸೂರು ಬ್ಯಾಂಕ್". Archived from the original on 2017-04-05. Retrieved 2017-04-05.
  2. "ಇತಿಹಾಸದ ಪುಟ ಸೇರಿದ ಮೈಸೂರು ಬ್ಯಾಂಕ್;5 Apr, 2017". Archived from the original on 2017-04-05. Retrieved 2017-04-05.
  3. ವಿಲೀನ ಪ್ರಕ್ರಿಯೆ;ವಿಶ್ವದ 50 ಬ್ಯಾಂಕ್‌ಗಳ ಪಟ್ಟಿಗೆ ಎಸ್‌ಬಿಐ;ಪ್ರಜಾವಾಣಿ ವಾರ್ತೆ;2 Apr, 2017
  4. "ಇತಿಹಾಸದ ಪುಟ ಸೇರಿದ ಮೈಸೂರು ಬ್ಯಾಂಕ್;5 Apr, 2017". Archived from the original on 2017-04-05. Retrieved 2017-04-05.