ಸಿಂದಗಿ

Coordinates: 16°55′12″N 76°14′02″E / 16.92°N 76.234°E / 16.92; 76.234
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂದಗಿ
ನಗರ
ಸಿಂದಗಿ is located in Karnataka
ಸಿಂದಗಿ
ಸಿಂದಗಿ
Location in Karnataka, India
Coordinates: 16°55′12″N 76°14′02″E / 16.92°N 76.234°E / 16.92; 76.234
ದೇಶಭಾರತ
ರಾಜ್ಯಕರ್ನಾಟಕ
ಪ್ರದೇಶಬಯಲು ಸೀಮೆ
ಜಿಲ್ಲೆವಿಜಯಪುರ
Elevation
೫೦೦ m (೧,೬೦೦ ft)
Population
 (೨೦೧೧)
 • Total೪೦೦೦೦
ಭಾಷೆಗಳು
 • ಅಧಿಕೃತ ಭಾಷೆಕನ್ನಡ
Time zoneUTC+೫:೩೦ (ಐಎಸ್‌ಟಿ)
ಪಿನ್
೫೮೬೧೨೮
Area code+೯೧-೮೪೮೮
ISO 3166 codeIN-KA
Vehicle registrationಕೆಎ:೨೮
Websitekarnataka.gov.in
www.sindagitown.mrc.gov.in

ಸಿಂದಗಿ ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಸಿಂದಗಿ ಪಟ್ಟಣವು ವಿಜಯಪುರ - ಗುಲ್ಬರ್ಗಾ ರಾಷ್ಟ್ರಿಯ ಹೆದ್ದಾರಿ - ೨೧೮ ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೬೦ ಕಿ.ಮೀ. ದೂರದಲ್ಲಿದೆ.

ಈ ತಾಲ್ಲೂಕು ದಖನ್ ಪ್ರಸ್ಥಭೂಮಿಯ ಮಧ್ಯದಲ್ಲಿರುವ ಅರೆ ಒಣ ಪ್ರದೇಶ. ಉತ್ತರದಲ್ಲಿ ಭೀಮಾ ಮತ್ತು ದಕ್ಷಿಣದಲ್ಲಿ ಡೋಣಿ ನದಿಗಳ ನಡುವಿರುವ ಈ ತಾಲ್ಲೂಕಿನಲ್ಲಿ ವಿಸ್ತಾರ ಬಯಲುಗಳು ಮತ್ತು ಅಲ್ಲಲ್ಲಿ ಸಣ್ಣ ಗುಡ್ಡಗಳು ಇವೆ. ಕಡಿಮೆ ಪ್ರಮಾಣದ ಮಳೆ ಮತ್ತು ಹಿಂದಿನಿಂದಲೂ ವ್ಯಾಪಕ ಸಾಗುವಳಿಗೆ ಒಳಗಾಗದ ಈ ತಾಲ್ಲೂಕಿನಲ್ಲಿ ಸಸ್ಯ ಸಂಪತ್ತು ವಿರಳ. ಗುಡ್ಡ ಪ್ರದೇಶಗಳಲ್ಲಿ ಕುರುಚಲು ಕಾಡು ಕಂಡುಬರುತ್ತದೆ. ಭೀಮಾ ಮತ್ತು ಡೋಣಿ ನದಿಗಳನ್ನು ಸೇರುವ ಅನೇಕ ತೊರೆಗಳಿಂದ ಭೂಪ್ರದೇಶದಲ್ಲಿ ಅಲ್ಲಲ್ಲಿ ಉಂಟಾಗಿರುವ ಸಣ್ಣ ಕಣಿವೆಗಳು ವ್ಯವಸಾಯ ಯೋಗ್ಯ ಪ್ರದೇಶಗಳಾಗಿವೆ. ಭೀಮಾ ನದಿಯ ಸುತ್ತಲ ಪ್ರದೇಶ ಕಪ್ಪುಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಕಣಿವೆ ಪ್ರದೇಶಗಳ ಹೊರತು ಮಿಕ್ಕ ಪ್ರದೇಶಗಳಲ್ಲಿ ಅಲ್ಪ ಸಸ್ಯವರ್ಗದ ಬೋಳು ಬಯಲುಗಳಿವೆ. ಇಲ್ಲಿನ ಬಂಡೆಗಳು ಬೆಣಚುಕಲ್ಲು ವರ್ಗಕ್ಕೆ ಸೇರಿದವು.

ಭೀಮಾ ನದಿ ಈ ತಾಲ್ಲೂಕಿನ ಉತ್ತರದಲ್ಲಿ ಪೂರ್ವಾಭಿಮುಖವಾಗಿ, ಅನಂತರ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ಹರಿದು ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕನ್ನು ಬೇರ್ಪಡಿಸಿದೆ. ದಕ್ಷಿಣದಲ್ಲಿ ಡೋಣಿ ನದಿ ಪೂರ್ವಾಭಿಮುಖವಾಗಿ ಹರಿಯುವುದಲ್ಲದೆ ಸ್ವಲ್ಪದೂರ ಬಸವನ ಬಾಗೇವಾಡಿ ತಾಲ್ಲೂಕನ್ನು ಬೇರ್ಪಡಿಸಿದೆ. ಮುಂದೆ ಮತ್ತೆ ತಾಲ್ಲೂಕಿನ ಒಳಗೆ ಸ್ವಲ್ಪದೂರ ಹರಿದು ಅನಂತರ ಬಸವನ ಬಾಗೇವಾಡಿ ತಾಲ್ಲೂಕನ್ನು ಪ್ರವೇಶಿಸುವುದು. ಈ ನದಿಯ ಎಡದಂಡೆ ಪ್ರದೇಶ ಮತ್ತು ಭೀಮಾ ನದಿಯ ಬಲದಂಡೆ ಪ್ರದೇಶ ಸಿಂದಗಿ ತಾಲ್ಲೂಕಿಗೆ ಸೇರಿದ್ದು ದಂಡೆಯ ಜಮೀನುಗಳಿಗೆ ಪ್ರವಾಹ ಕಾಲದಲ್ಲಿ ಮೆಕ್ಕಲು ಮಣ್ಣು ತೂರುವುದರಿಂದ ವ್ಯವಸಾಯಕ್ಕೆ ಉತ್ತಮ ಪ್ರದೇಶವಾಗಿದ್ದು ಫಲವತ್ತಾಗಿವೆ. ಇವಲ್ಲದೆ ನಾವಲಿ ಮತ್ತು ಹೆಬ್ಬಾಲ ನದಿಗಳು ಈ ತಾಲ್ಲೂಕಿನಲ್ಲೆ ಹುಟ್ಟಿ ಭೀಮಾ ನದಿಯನ್ನು ಸೇರುವುವು.

ಈ ತಾಲ್ಲೂಕಿನಲ್ಲಿ ಮಳೆ ಕಡಿಮೆ. ವಾರ್ಷಿಕ ಸರಾಸರಿ ಮಳೆ ೬೭೫.೬೬ ಮಿ.ಮೀ. ಜೂನ್‍ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲ. ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಈಶಾನ್ಯ ಮಾರುತದಿಂದ ಸ್ವಲ್ಪ ಪ್ರಮಾಣದ ಮಳೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಮಳೆಯ ಪ್ರಮಾಣದಲ್ಲಿ ಅಧಿಕ ಏರಿಳಿತ ಕಂಡುಬರುತ್ತದೆ. ಈ ತಾಲ್ಲೂಕಿನ ಬೆಳೆಗಳಲ್ಲಿ ಜೋಳ, ಸಜ್ಜೆ, ಭತ್ತ, ಮೆಕ್ಕೆಜೋಳ, ನೆಲಗಡಲೆ, ಮೆಣಸಿನಕಾಯಿ ಮುಖ್ಯವಾದುವು. ಕಬ್ಬು, ಗೋಧಿ, ಹುರುಳಿ ಮತ್ತು ಕುಸುಬೆಯನ್ನೂ ಬೆಳೆಯುತ್ತಾರೆ. ಹತ್ತಿ ಇಲ್ಲಿನ ಮುಖ್ಯ ವಾಣಿಜ್ಯ ಬೆಳೆ.

ಈ ತಾಲ್ಲೂಕು ಕೈಗಾರಿಕೆಯಲ್ಲಿ ಅಷ್ಟಾಗಿ ಮುಂದುವರಿದಿಲ್ಲ. ಹತ್ತಿ ಬೆಳೆಯುವ ಈ ಪ್ರದೇಶದಲ್ಲಿ ಹತ್ತಿ ಆಧರಿಸಿದ ಕೈಗಾರಿಕೆಗಳೇ ಹೆಚ್ಚು. ತಾಲ್ಲೂಕಿನಲ್ಲಿ ಹತ್ತಿ ಹದಮಾಡುವ ಎರಡು ಕಾರ್ಖಾನೆಗಳಿವೆ. ಕೈಮಗ್ಗಗಳು, ಯಂತ್ರ ಮಗ್ಗಗಳೂ ಇವೆ. ಇವುಗಳಲ್ಲದೆ ಮರ, ಚರ್ಮದ ಕೆಲಸಗಳ ಉದ್ಯಮಗಳಿವೆ. ಮಡಕೆ ಮಾಡುವುದು, ಪಾತ್ರೆ ತಯಾರಿಕೆ, ಗಾಡಿ ಕಟ್ಟುವುದು, ಕಬ್ಬಿಣದ ಕೆಲಸ ಮೊದಲಾದವು ಇತರ ಗೃಹ ಕೈಗಾರಿಕೆಗಳು.

ಈ ತಾಲ್ಲೂಕಿನಲ್ಲಿ ಕೆಲವು ಪ್ರಾಚೀನ ದೇವಾಲಯಗಳೂ ಐತಿಹಾಸಿಕ ಸ್ಥಳಗಳು ಇವೆ. ಅವುಗಳಲ್ಲಿ ಆಲಮೇಲ ಗ್ರಾಮ ಕಳಚುರಿ ರಾಜ ಬಿಜ್ಜಳನ ಕಾಲದಲ್ಲಿ ಸ್ಥಾಪನೆಯಾದದ್ದೆಂದು ತಿಳಿದುಬರುತ್ತದೆ. ಇಲ್ಲಿನ ರಾಮದೇವ ದೇವಾಲಯದಲ್ಲಿ ಅಮೃತಶಿಲೆಯ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ. ಹಿಪ್ಪರಗಿ ಪ್ರಸಿದ್ಧ ವಚನಕಾರ ಮಡಿವಾಳ ಮಾಚಯ್ಯನ ಊರು. ಇಲ್ಲಿ ಜಮದಗ್ನಿ ಋಷಿಯಿಂದ ಸ್ಥಾಪಿತವಾದದ್ದೆನ್ನಲಾದ ಕಾಳಮೇಶ್ವರ ದೇವಾಲಯದಲ್ಲಿ ಲಿಂಗವಿದೆ. ಇಲ್ಲಿ ಕಾರ್ತೀಕದಲ್ಲಿ ಕಾಳಮೇಶ್ವರ ಜಾತ್ರೆ ನಡೆಯುತ್ತದೆ. ಚಟ್ಟರ್ಕಿ, ದೇವಗಾಂವ, ಕೊರವಾರ, ಗೊಲ್ಲಗೇರಿಗಳಲ್ಲಿ ಹಳೆಯ ದೇವಾಲಯಗಳಿವೆ. ಕೊರವಾರದಲ್ಲಿ ಚೈತ್ರಮಾಸದಲ್ಲಿ ರಥೋತ್ಸವ ನಡೆಯುತ್ತದೆ.

ಸಿಂದಗಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಿಜಾಪುರದ ಈಶಾನ್ಯಕ್ಕೆ ೬೦ ಕಿ.ಮೀ ದೂರದಲ್ಲೂ ಇಂಡಿಗೆ ಆಗ್ನೇಯದಲ್ಲಿ ೫೦ ಕಿ.ಮೀ ದೂರದಲ್ಲೂ ಇದೆ. ೨೦೧೧ ರ ಭಾರತದ ಜನಗಣತಿಯ ಪ್ರಕಾರ ಸಿಂದಗಿಯು ೫೩,೨೧೩ ಜನಸಂಖ್ಯೆಯನ್ನು ಹೊಂದಿತ್ತು.[೧]

ಈ ಊರನ್ನು ೧೨೦೦ ರಲ್ಲಿ ಸಿಂದ ಬಲ್ಲಾಳನೆಂಬುವ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಇದಕ್ಕೆ ಹಿಂದೆ ಸಿಂದಪುರವೆಂದು ಹೆಸರಿತ್ತು. ಊರ ದಕ್ಷಿಣಕ್ಕಿರುವ ಸಂಗಮೇಶ್ವರ ದೇವಾಲಯ ಪ್ರಸಿದ್ಥವಾದುದು. ಈ ದೇವಾಲಯದ ಆವರಣದಲ್ಲಿ ಭ್ರಮರಾಂಬಿಕ ದೇವತೆಯ ಗುಡಿ ಇದೆ. ಈ ಊರಿನ ಇನ್ನೊಂದು ಆಕರ್ಷಕ ಸ್ಥಳ ಜಕ್ಕಪ್ಪಯ್ಯನ ಮಠ. ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಊರಲ್ಲಿ ನೀಲಗಂಗಮ್ಮ (ಭಾಗೀರಥಿ) ದೇವಾಲಯವಿದೆ.

ಚರಿತ್ರೆ[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ನಕಾಶೆ

ದೇವರನಾವದಗಿ[ಬದಲಾಯಿಸಿ]

ಸಿಂದಗಿ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ದೇವರನಾವದಗಿ ಗ್ರಾಮ ಕೂಡ ಒಂದು. ಇದು ಭೀಮಾ ನದಿಯಿಂದ ೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಮುಖ್ಯ ಆಕರ್ಷಣೆ ಮಲ್ಲಿಕಾರ್ಜುನ ದೇವಾಲಯ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪಡಖೇ ಈ ದೇವಾಲಯದಲ್ಲೇ ಸೆರೆ ಸಿಕ್ಕರು.

ಸಿಂದಗಿ ನಗರದಲ್ಲಿ ಐತಿಹಾಸಿಕ ದೇವಸ್ಥಾನವಾದ ಶ್ರೀ ಸಂಗಮೇಶ್ವರ ದೇವಸ್ಥಾನವಿದೆ.[೨] ಇದು ಶಾಸನಗಳ ಪ್ರಕಾರ ೧೨ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿವೆ. ಮುಖ್ಯ ದೇವಾಲಯದ ಪ್ರವೇಶ ದ್ವಾರಗಳು ಒಂದು ಪೂರ್ವಾಭಿಮುಖ ಇನ್ನೊಂದು ಉತ್ತರಾಭಿಮುಖವಾಗಿವೆ. ಪೂರ್ವಭಿಮುಖ ಪ್ರವೇಶ ದ್ವಾರದ ಮುಂದೆ ಬೃಹತ್ ದೀಪಗಂಬ ಅಥವಾ ಮಾಲಗಂಬ ಇದೆ. ದ್ವಾರ ಪ್ರವೇಶದ ನಂತರ ವಿಶಾಲವಾದ ಪ್ರಾಂಗಣ ಒಳಗೊಂಡಿದೆ. ಅಲ್ಲಿ ಪೂರ್ವ ದ್ವಾರದ ಎಡಕ್ಕೆ ಶಾಖಾಂಭರಿ ಮಂಟಪ, ಪಶ್ಚಿಮಕ್ಕೆ ಕಾಳಿಕಾ ಮಾತಾ, ದಕ್ಷಿಣದಲ್ಲಿ ಉತ್ತಾರಾಭಿಮುಖವಾಗಿ ಗಣಪತಿ ಮಂಟಪ ಇದೆ. ಮಧ್ಯದಲ್ಲಿ ವಿಶಾಲವಾದ ಗೋಪುರ ಒಳಗೊಂಡ ಶೈವ ಧರ್ಮೀಯ ವಿಶಾಲ ಹಾಗೂ ಪ್ರಾಂಗಣ ಒಳಗೊಂಡ ಸುಂದರ ಶಿವಲಿಂಗವನ್ನು ಹೊಂದಿದೆ. ಇದರ ಹಿಂದುಗಡೆ ತಾಯಿ ಬೌರಮ್ಮ ದೇವಿಯ ಅಮೃತ ಶಿಲೆಯ ನಿಂತ ಸುಂದರವಾದಂತಹ ವಿಗ್ರಹವಿದೆ.

ಸ್ಮಾರಕ ಭವನ[ಬದಲಾಯಿಸಿ]

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸೇನಾನಿಗಾಗಿ ಶ್ರಮಿಸಿದಂತಹ ಪ್ರಮುಖರಲ್ಲಿ ಶ್ರೀಯುತರಾದಂತಹ ರಮಾನಂದ ತೀರ್ಥರ ಜನ್ಮಸ್ಥಳವಾಗಿದೆ. ಇವರ ಸ್ಮರಣಾರ್ಥ ಇವರ ಮನೆಯನ್ನು ಸ್ಮಾರಕ ಭವನವಾಗಿ ಬದಲಾಯಿಸಲಾಗಿದೆ.

ಶ್ರೀ ಬಸವೇಶ್ವರ ಪುತ್ಥಳಿ[ಬದಲಾಯಿಸಿ]

ಸಿಂದಗಿ ನಗರವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿ ನಿಮಗೆ ಭಾರತದಲ್ಲಿಯೆ ಅತಿ ಎತ್ತರವಾದ, ಕಾಯಕವೇ ಕೈಲಾಸ ಎಂದು ಹೇಳಿದ ೧೨ ನೇ ಶತಮಾನದ ಸಮಾಜ ಸೇವಕರು ಹಾಗೂ ವೀರಶೈವ ಮತದ ಸ್ಠಾಪಕರು ಆದಂತಹ ಶ್ರೀ ಬಸವೇಶ್ವರ ಅವರ ಸುಂದರವಾದಂತಹ ಪುತ್ಥಳಿಯನ್ನು ಸ್ಠಾಪಿಸಲಾಗಿದೆ.

ಸಿಂದಗಿಯು ತಾಲ್ಲೂಕು ಸ್ಥಳವಾಗಿದೆ. ಇದು ವಿಜಯಪುರದಿಂದ ಪೂರ್ವಕ್ಕೆ ೬೦ ಕಿ.ಮೀ. ದೂರದಲ್ಲಿದೆ [೩] ಸಿಂದಗಿಯನ್ನು ಕ್ರಿ.ಶ. ೧೨೦೦ ರಲ್ಲಿ ಸಿಂದು ಬಲ್ಲಾಳ ಎಂಬ ಸಾಮಂತ ಅರಸನು ಕಟ್ಟಿದನೆಂಬ ಪ್ರತೀತಿ ಇದೆ. ಆದ್ದರಿಂದ ಈ ಊರಿಗೆ ಸಿಂದಗಿ ಎಂಬ ಹೆಸರು ಬಂದಿದೆ. ಇಲ್ಲಿರುವ ಸಂಗಮೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದೆ. ದೇವಾಲಯದ ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರ ಭಾಗವಿದೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕು ಸ್ತಂಭಗಳಿವೆ. ಗೋಡೆಗಳಲ್ಲಿ ದೇವ ಕೋಷ್ಠಗಳಿರುತ್ತವೆ. ಬಿಡಿ ಲಿಂಗ, ವೇಣುಗೋಪಾಲ, ವಿಷ್ಣು ಅಥವಾ ನಾರಾಯಣ, ಭಕ್ತ ದಂಪತಿಗಳು ಮೊದಲಾದ ಬಿಡಿ ಶಿಲ್ಪಗಳು ಕಂಡುಬರುತ್ತವೆ.

ದೇವಾಲಯದ ಎದುರಿಗೆ ತೆರೆದ ಮಂಟಪದಲ್ಲಿ ಶಿವಲಿಂಗಗಳೂ, ಎರಡು ನಂದಿಗಳು, ಮಹಿಷ ಮರ್ಧಿನಿಯರ ಶಿಲಾಕೃತಿಗಳಿವೆ. ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. ಪ್ರಾಂಗಣದಲ್ಲಿ ಮೂರು ಜನ ಯತಿಗಳು, ಪಾರ್ವತಿ, ಭೈರವ ಮೊದಲಾದ ವಿಜಯನಗರೋತ್ತರ ಶೈಲಿಯ ಬೃಹತ್ ಶಿಲ್ಪಗಳಿವೆ. ಪ್ರತಿ ವರ್ಷ ಸಂಕ್ರಮಣಕ್ಕೆ ಈ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ದೇವಾಲಯದ ಒಳ ಪ್ರಾಕಾರವು ವಿಶಾಲವಾಗಿದೆ. ಪ್ರದಕ್ಷಿಣಾ ಪಥದ ಬಲಭಾಗದಲ್ಲಿ ಪ್ರತ್ಯೇಕವಾದ ಭ್ರಮರಾಂಬಿಕಾ ದೇವಾಲಯವಿದೆ. ನರಸಿಂಹ ಮತ್ತು ಬನಶಂಕರಿಯ ಚಿಕ್ಕ ಗುಡಿಗಳು ಇರುತ್ತವೆ. ಅನೇಕ ಬಿಡಿ ವಿಗ್ರಹಗಳು ಈ ದೇವಾಲಯದಲ್ಲಿ ಇರುತ್ತವೆ.

ಭೌಗೋಳಿಕ[ಬದಲಾಯಿಸಿ]

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿ ತಾಲ್ಲೂಕಿನ ಉತ್ತರಕ್ಕೆ ಗುಲ್ಬರ್ಗಾ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು ಮತ್ತು ವಿಜಯಪುರ ತಾಲ್ಲೂಕು, ದಕ್ಷಿಣಕ್ಕೆ ಮುದ್ದೇಬಿಹಾಳ ತಾಲ್ಲೂಕು ಮತ್ತು ಪೂರ್ವಕ್ಕೆ ಗುಲ್ಬರ್ಗಾ ತಾಲ್ಲೂಕುಗಳಿವೆ. ಈ ತಾಲ್ಲೂಕಿನ ವಿಸ್ತೀರ್ಣ ೨೨೨೫ ಚ.ಕಿ.ಮೀ ಮತ್ತು ವಾರ್ಷಿಕ ಮಳೆ ೫೯ ಸೆಂ.ಮೀ. ಇದೆ. ಸಿಂದಗಿ ತಾಲ್ಲೂಕು ೧೪೩ ಹಳ್ಳಿಗಳು, ೪೦ ಗ್ರಾಮ ಪಂಚಾಯತಗಳು, ಮತ್ತು ೩ ಹೋಬಳಿಗಳನ್ನೊಳಗೊಂಡಿದೆ.[೪]

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ದೇವರ ಹಿಪ್ಪರಗಿ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಹವಾಮಾನ[ಬದಲಾಯಿಸಿ]

ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ (ಎಪ್ರೀಲ್‌ನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸ್‍ವರೆಗೆ (ಡಿಸೆಂಬರ‍್‌ನಲ್ಲಿ) ಉಷ್ಣತೆ ದಾಖಲಾಗಿದೆ.[೫]

ಉಷ್ಣತೆ[ಬದಲಾಯಿಸಿ]

  • ಬೇಸಿಗೆ ಕಾಲ - ೩೫ °C - ೪೨ °C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು ಮಳೆಗಾಲ - ೧೮ °C - ೨೮°C ಡಿಗ್ರಿ ಸೆಲ್ಸಿಯಸ್

ಮಳೆ[ಬದಲಾಯಿಸಿ]

ಪ್ರತಿ ವರ್ಷ ಮಳೆ ೩೦೦ - ೬೦೦ ಮಿ.ಮೀ ಗಳಷ್ಟು ಆಗಿರುತ್ತದೆ.

ಗಾಳಿ[ಬದಲಾಯಿಸಿ]

ಗಾಳಿ ವೇಗ ೧೮.೨ ಕಿ.ಮೀ/ಗಂ (ಜೂನ್), ೧೯.೬ ಕಿ.ಮೀ/ಗಂ (ಜುಲೈ) ಹಾಗೂ ೧೭.೫ ಕಿ.ಮೀ/ಗಂ (ಅಗಸ್ಟ್) ಇರುತ್ತದೆ.

ಮಳೆ ಮಾಪನ ಕೇಂದ್ರಗಳು[ಬದಲಾಯಿಸಿ]

ಆಲಮೇಲ, ದೇವರಹಿಪ್ಪರಗಿ, ರಾಮನಳ್ಳಿ, ಸಸಬಾಳ, ಕಡ್ಲೇವಾಡ, ಕೊಂಡಗೂಳಿ ಇಲ್ಲಿ ಮಳೆ ಮಾಪನ ಕೇಂದ್ರಗಳಿವೆ.

ಸಾಂಸ್ಕೃತಿಕ[ಬದಲಾಯಿಸಿ]

ಇಲ್ಲಿನ ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.

ಭಾಷೆಗಳು[ಬದಲಾಯಿಸಿ]

ಇಲ್ಲಿನ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ.

ಆಹಾರ (ಖಾದ್ಯ)[ಬದಲಾಯಿಸಿ]

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಧಾರ್ಮಿಕ ಕೇಂದ್ರಗಳು[ಬದಲಾಯಿಸಿ]

ದೇವಾಲಯಗಳು[ಬದಲಾಯಿಸಿ]

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಸಂಗಮೇಶ್ವರ ದೇವಸ್ಥಾನವೂ ಇದೆ. ಇಲ್ಲಿ ೨೦೦ ವರ್ಷ ಇತಿಹಾಸ ಇರುವ ವಿರಕ್ತಮಠವೂ ಇದೆ.

  • ಆಲಮೇಲ - ಬಿಜ್ಜಳ ರಾಜ ಕಲಾಚಾರಿಯು ೧೧೫೭ - ೧೧೬೭ ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ.
  • ಅಥರ್ಗಾ - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶ್ರೀ ರೇವಣಸಿದ್ದರ ದೇವಾಲಯವಿದೆ.
  • ಹಿರೇರೂಗಿ - ಶ್ರೀ ಜಟ್ಟಿಂಗೇಶ್ವರ ದೇವಾಲಯವಿದೆ.

ಮಸೀದಿಗಳು[ಬದಲಾಯಿಸಿ]

ಇಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿಗಳು ಇವೆ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ (ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಸಂಸ್ಕೃತಿ[ಬದಲಾಯಿಸಿ]

ಲಂಬಾಣಿ ಜನಾಂಗದ ಮಹಿಳೆ
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು (ಪಟಕ) ಧರಿಸುತ್ತಾರೆ. ಮಹಿಳೆಯರು ಇಳಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಇಲ್ಲಿನ ಲಂಬಾಣಿ ಜನಾಂಗವು ವಿಶೇಷವಾಗಿದೆ.

ಕಲೆ[ಬದಲಾಯಿಸಿ]

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಆರ್ಥಿಕತೆ[ಬದಲಾಯಿಸಿ]

ಆರ್ಥಿಕ ವ್ಯವಸ್ಥೆ ಮಧ್ಯಮಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.

ವ್ಯಾಪಾರ[ಬದಲಾಯಿಸಿ]

ಸಿಂದಗಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಆಲಮೇಲ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.

ಕೃಷಿ[ಬದಲಾಯಿಸಿ]

ಕೃಷಿ ಸಿಂದಗಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಭೀಮಾ ನದಿ ಮತ್ತು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.

ನೀರಾವರಿ[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ಕೂಡಿದೆ. ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗ[ಬದಲಾಯಿಸಿ]

ಫಲವತ್ತಾದ ಭೂಮಿ ಇರುವುದರಿಂದ ಸುಮಾರು ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು[ಬದಲಾಯಿಸಿ]

ಆಹಾರ ಬೆಳೆಗಳು[ಬದಲಾಯಿಸಿ]

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ ಮತ್ತು ಹೆಸರು ಇತ್ಯಾದಿ.

ವಾಣಿಜ್ಯ ಬೆಳೆಗಳು[ಬದಲಾಯಿಸಿ]

ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ, ಮಾವು, ಬಾಳೆ, ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು[ಬದಲಾಯಿಸಿ]

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೂಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತ್ತಂಬರಿ ಇತ್ಯಾದಿ.

ಸಸ್ಯಗಳು[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿಗಳು[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಸಾಕ್ಷರತೆ[ಬದಲಾಯಿಸಿ]

ಸಾಕ್ಷರತೆಯು ೨೦೧೧ ವರ್ಷದ ಪ್ರಕಾರ ೬೭%. ಅದರಲ್ಲಿ ೭೭% ಪುರುಷರು ಹಾಗೂ ೫೬% ಮಹಿಳೆಯರು ಸಾಕ್ಷರತೆ ಹೊಂದಿದ್ದಾರೆ.[೬]

ಶಿಕ್ಷಣ[ಬದಲಾಯಿಸಿ]

ಪ್ರಮುಖ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸಿಂದಗಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಸಿಂದಗಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಸಿಂದಗಿ
  • ಸರಕಾರಿ ಉರ್ದು ಪ್ರೌಡ ಶಾಲೆ, ಸಿಂದಗಿ
  • ಲಯನ್ಸ್ ಶಾಲೆ, ಸಿಂದಗಿ
  • ಆರ್.ಡಿ.ಪಾಟೀಲ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
  • ಎಚ್.ಜಿ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
  • ಅಂಜುಮನ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸಿಂದಗಿ
  • ಶ್ರೀ ಜಗದಂಬಾ ಕಲಾ ಮತ್ತು ವಿಜ್ಣಾನ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ, ಸಿಂದಗಿ
  • ಜೆ.ಪಿ.ಪೋರವಾಲ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
  • ಜೆ.ಪಿ.ಪೋರವಾಲ್ ಬಿ.ಸಿ.ಎ. ಮಹಾವಿದ್ಯಾಲಯ, ಸಿಂದಗಿ
  • ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ, ಸಿಂದಗಿ
  • ಜೆ.ಜೆ ಕಲಾ ಮಹಾವಿದ್ಯಾಲಯ, ಕಲಕೇರಿ, ಸಿಂದಗಿ
  • ಶ್ರೀ ಸಿದ್ರಾಮೇಶ್ವರ ಕಲಾ ಮಹಾವಿದ್ಯಾಲಯ, ಮೊರಟಗಿ, ಸಿಂದಗಿ
  • ಶ್ರೀ ನೂರೊಂದೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಲೋಣಿ, ಸಿಂದಗಿ
  • ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಲಚ್ಯಾಣ, ಸಿಂದಗಿ
  • ಇಂದಿರಾ ಕೈಗಾರಿಕಾ ತರಬೇತಿ ಕೇಂದ್ರ, ಲೋಣಿ, ಸಿಂದಗಿ
  • ಗ್ರಾಮೀಣ ವಿದ್ಯಾಭಿವೃದ್ದಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಆಲಮೇಲ, ಸಿಂದಗಿ
  • ಸಿಂದಗಿ ತಾಲ್ಲೂಕಾ ಗಂಗಮತಸ್ಥರ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಸಿಂದಗಿ
  • ಶ್ರೀ ಫೂಲಸಿಂಗ್ ನಾರಾಯಣ ಚವ್ಹಾಣ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ, ಸಿಂದಗಿ
  • ಶ್ರೀ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ
  • ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ
  • ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಬಿ. ಎಸ್. ಡಬ್ಲ್ಯೂ ಮತ್ತು ಬಿ. ಕಾಂ ಮಹಿಳಾ ಮಹಾವಿದ್ಯಾಲಯ, ಸಿಂದಗಿ
  • ಶ್ರೀ ಪದ್ಮರಾಜ ಸ್ವತಂತ್ರ ಮಹಿಳಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜ್, ಸಿಂದಗಿ

ಕವಿಗಳು[ಬದಲಾಯಿಸಿ]

ಸಂಗೀತಗಾರರು[ಬದಲಾಯಿಸಿ]

  • ರವೀಂದ್ರ ಹಂದಿಗನೂರ

ರಾಜಕೀಯ[ಬದಲಾಯಿಸಿ]

ಸಿಂದಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ೮ ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರದಲ್ಲಿ ೧,೦೭,೪೦೭ ಪುರುಷರು, ೯೯,೭೭೩ ಮಹಿಳೆಯರು ಸೇರಿ ಒಟ್ಟು ೨,೦೭,೧೮೦ ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ[ಬದಲಾಯಿಸಿ]

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳನ್ನು ಹೊಂದಿದೆ.

ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ರಮಾನಂದ ತೀರ್ಥರು, ಬಸವಪ್ರಿಯ ಎಂ.ಎಂ. ಕಲಬುರ್ಗಿ, ರಂಗರತ್ನ ಹಂದಿಗನೂರು ಸಿದ್ರಾಮಪ್ಪ ಹೀಗೆ ಹತ್ತು ಹಲವು ಪ್ರತಿಭೆಗಳಿಗೆ ಜನ್ಮನೀಡಿದ ಸಿಂದಗಿ ಭೀಮಾ ತೀರದ ಸಮೃದ್ಧ ನೀರಾವರಿ ನೆಲ. ಗುಂಡಿನ ಸದ್ದು, ರಕ್ತದ ಕೋಡಿ ಹರಿಸುವ ಮೂಲಕ ಭೀಮಾ ತೀರ ಬೇರೆಯೇ ದೃಷ್ಟಿಕೋನಕ್ಕೆ ಕಾರಣವಾಗಿದೆ.

ಸಿಂದಗಿ ಕ್ಷೇತ್ರದಿಂದ ೨ ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ ೩ ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾ.ಪಂ, ಜಿ.ಪಂ) ಸದಸ್ಯರಾಗಿ ಆಯ್ಕೆಯಾದವರು. ೧೯೮೭ ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. ೧೯೯೫ ರಲ್ಲಿ ತಾ.ಪಂ ಸದಸ್ಯ, ೨೦೦೦ ದಲ್ಲಿ ಆಲಮೇಲ ಜಿ.ಪಂ ಕ್ಷೇತ್ರದಿಂದ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರು. ೨೦೦೪ ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. ೨೦೦೮ ರಲ್ಲಿ ಸಿಂದಗಿ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. ೨೦೧೩ ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ೨ ನೇ ಬಾರಿ ಶಾಸಕರಾದರು.

ವಿಜಯಪುರ ಜಿಲ್ಲೆಯ ವಿಶಿಷ್ಟ ವಿಧಾನಸಭಾ ಕ್ಷೇತ್ರ ಸಿಂದಗಿ. ೧೩ ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ೭ ವಿಜಯ ಕಂಡಿದ್ದರೂ, ತಲಾ ಒಂದು ಬಾರಿ ಜನತಾ ಪಕ್ಷ, ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಿ ಹಾಗೂ ಹ್ಯಾಟ್ರಿಕ್‌ ಬಾರಿಸಿರುವ ಬಿಜೆಪಿ ಮೂಲಕ ಕಾಂಗ್ರೆಸ್ಸೇತರ ಭದ್ರಕೋಟೆಯೂ ಎನಿಸಿದೆ. ಒಂದು ಬಾರಿ ಗೆದ್ದವರನ್ನು ಮತ್ತೆ ಗೆಲ್ಲಿಸದ ಕ್ಷೇತ್ರ ಎನಿಸಿದ್ದರೂ, ಸೋತವರನ್ನು ಅನುಕಂಪದಿಂದ ಎರಡನೇ ಸ್ಪರ್ಧೆಯಲ್ಲಿ ಗೆಲ್ಲಿಸಿದ ಇತಿಹಾಸ ಹೊಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಅವಧಿಗೆ ಗೆದ್ದವರನ್ನು ಮತ್ತೆ ಗೆಲ್ಲಿಸಿದ ಉದಾಹರಣೆ ಇರಲಿಲ್ಲ. ಈ ಕಾರಣಕ್ಕೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಹಾಗೂ ಈ ಬಾರಿ ಸ್ಪರ್ಧಾಕಾಂಕ್ಷಿ ಮಾಜಿ ಸಚಿವ ಎಂ.ಸಿ. ಮನಗೂಳಿ ಸತತ ನಾಲ್ಕು ಬಾರಿ ಸೋಲು ಕಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಶರಣಪ್ಪ ಸುಣಗಾರ ಸತತ ಮೂರು ಸೋಲು ಕಂಡಿದ್ದಾರೆ. ಆದರೆ ಕಳೆದ ಬಾರಿ ಬಿಜೆಪಿಯಿಂದ ಎರಡು ಬಾರಿ ಗೆದ್ದಿರುವ ರಮೇಶ ಭೂಸನೂರ ಹೊಸ ದಾಖಲೆ ಬರೆದಿದ್ದಾರೆ. ಮತ್ತೂಂದೆಡೆ ಬಿಜೆಪಿ ಸತತ ಮೂರು ಗೆದ್ದಿದೆ. ಭೂಸನೂರ ಅವರಿಗಿಂತ ಮೊದಲು ೨೦೦೪ ರಲ್ಲಿ ಅಶೋಕ ಶಾಬಾದಿ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದ್ದರು. ಇಲ್ಲಿ ಚುನಾವಣಾ ತಜ್ಞರ ಎಲ್ಲ ಸಮೀಕ್ಷೆಗಳನ್ನು ತಲೆ ಕೆಳಗಾಗುವಂತೆ ಫಲಿತಾಂಶ ಬರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಮತದಾರ ತನ್ನ ಜಾಣ ನಡೆಯಿಂದ ನಿರಂತರ ತಾನೇ ಗೆಲ್ಲುತ್ತಿದ್ದಾನೆ.[೭]

೧೯೮೯ ರ ಚುನಾವಣೆಯಲ್ಲಿ ಸೋತಿದ್ದ ಎಂ.ಸಿ.ಮನಗೂಳಿ ಅವರನ್ನು ೧೯೯೪ ರಲ್ಲಿ ಜನತಾ ದಳದಿಂದ ಗೆಲ್ಲಿಸಿದ ಮತದಾರ ಮೊದಲ ಬಾರಿ ಶಾಸಕರಾದರೂ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಆ ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಮನಗೂಳಿ ಅವರಿಗೆ ಕ್ಷೇತ್ರದ ಮತದಾರ ಮಾತ್ರ ಅನುಕಂಪ ತೋರಿಲ್ಲ.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

  • ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿಎಸ್‌ನ ಎಂ.ಸಿ.ಮನಗೂಳಿ ೨ ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ.
  • ೨೦೦೪ ರಿಂದ ೨೦೧೩ ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು.
  • ಎಂ.ಸಿ.ಮನಗೂಳಿಯವರು ೭ ಸಲ ಸ್ಪರ್ಧಿಸಿ ೧೯೯೪ ಮತ್ತು ೨೦೧೮ ರಲ್ಲಿ ೨ ಬಾರಿ ಆಯ್ಕೆಯಾಗಿದ್ದರು.
  • ೧೯೯೪ ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಸಚಿವರಾಗಿದ್ದರು.
  • ೨೦೧೮ ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು.

ಜನಪ್ರತಿನಿಧಿಗಳ ವಿವರ[ಬದಲಾಯಿಸಿ]

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಸಿಂದಗಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
೨೦೧೮ ಸಿಂದಗಿ ವಿಧಾನಸಭಾ ಕ್ಷೇತ್ರ ಎಂ.ಸಿ.ಮನಗೂಳಿ ಜೆ.ಡಿ.ಎಸ್. ೭೦೮೬೫ ರಮೇಶ ಭೂಸನೂರ ಬಿ.ಜೆ.ಪಿ ೬೧೫೬೦
೨೦೧೩ ಸಿಂದಗಿ ವಿಧಾನಸಭಾ ಕ್ಷೇತ್ರ ರಮೇಶ ಭೂಸನೂರ ಬಿ.ಜೆ.ಪಿ ೩೭೮೩೪ ಎಂ.ಸಿ.ಮನಗೂಳಿ ಜೆ.ಡಿ.ಎಸ್. ೩೭೦೮೨
೨೦೦೮ ಸಿಂದಗಿ ವಿಧಾನಸಭಾ ಕ್ಷೇತ್ರ ರಮೇಶ ಭೂಸನೂರ ಬಿ.ಜೆ.ಪಿ ೩೫೨೨೭ ಎಂ.ಸಿ.ಮನಗೂಳಿ ಜೆ.ಡಿ.ಎಸ್. ೨೦೪೬೬
೨೦೦೪ ಸಿಂದಗಿ ವಿಧಾನಸಭಾ ಕ್ಷೇತ್ರ ಅಶೋಕ ಶಾಬಾದಿ ಬಿ.ಜೆ.ಪಿ ೩೮೮೫೩ ಎಂ.ಸಿ.ಮನಗೂಳಿ ಜೆ.ಡಿ.ಎಸ್. ೨೯೮೦೩
೧೯೯೯ ಸಿಂದಗಿ ವಿಧಾನಸಭಾ ಕ್ಷೇತ್ರ ಶರಣಪ್ಪ ಸುಣಗಾರ ಕಾಂಗ್ರೇಸ್ ೩೦೪೩೨ ಎಂ.ಸಿ.ಮನಗೂಳಿ ಸ್ವತಂತ್ರ ೧೯೬೭೫
೧೯೯೪ ಸಿಂದಗಿ ವಿಧಾನಸಭಾ ಕ್ಷೇತ್ರ ಎಂ.ಸಿ.ಮನಗೂಳಿ ಜೆ.ಡಿ ೪೫೩೫೬ ಡಾ.ರಾಯಗೊಂಡಪ್ಪ ಚೌಧರಿ ಕಾಂಗ್ರೇಸ್ ೧೭೧೩೭
೧೯೮೯ ಸಿಂದಗಿ ವಿಧಾನಸಭಾ ಕ್ಷೇತ್ರ ಡಾ.ರಾಯಗೊಂಡಪ್ಪ ಚೌಧರಿ ಕಾಂಗ್ರೇಸ್ ೨೯೭೯೮ ಎಂ.ಸಿ.ಮನಗೂಳಿ ಜೆ.ಎನ್.ಪಿ ೨೧೧೬೯
೧೯೮೫ ಸಿಂದಗಿ ವಿಧಾನಸಭಾ ಕ್ಷೇತ್ರ ಮಲ್ಲನಗೌಡ ಬಿರಾದಾರ ಜೆ.ಎನ್.ಪಿ ೩೧೪೮೩ ತಿಪ್ಪಣ್ಣ ಅಗಸರ ಕಾಂಗ್ರೇಸ್ ೧೭೫೬೪
೧೯೮೩ ಸಿಂದಗಿ ವಿಧಾನಸಭಾ ಕ್ಷೇತ್ರ ನಿಂಗನಗೌಡ ಪಾಟೀಲ ಕಾಂಗ್ರೇಸ್ ೨೫೭೭೮ ಮಲ್ಲನಗೌಡ ಬಿರಾದಾರ ಜೆ.ಎನ್.ಪಿ ೧೮೭೮೮
೧೯೭೮ ಸಿಂದಗಿ ವಿಧಾನಸಭಾ ಕ್ಷೇತ್ರ ಮಹಿಬೂಬಸಾಬ್ ಬೆಕಿನಾಳಕರ ಕಾಂಗ್ರೇಸ್(ಐ) ೧೯೫೯೨ ಶಂಕರಗೌಡ ಪಾಟೀಲ ಜೆ.ಎನ್.ಪಿ ೧೮೨೬೮
ಸಿಂದಗಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
೧೯೭೨ ಸಿಂದಗಿ ವಿಧಾನಸಭಾ ಕ್ಷೇತ್ರ ಎಸ್.ವಾಯ್.ಪಾಟೀಲ ಎನ್.ಸಿ.ಓ ೧೭೫೧೬ ಮಹಿಬೂಬಸಾಬ್ ಬೆಕಿನಾಳಕರ ಕಾಂಗ್ರೇಸ್ ೧೬೫೩೮
೧೯೬೭ ಸಿಂದಗಿ ವಿಧಾನಸಭಾ ಕ್ಷೇತ್ರ ಸಿ.ಎಮ್.ದೇಸಾಯಿ ಕಾಂಗ್ರೇಸ್ ೧೬೬೬೮ ಎಸ್.ವಾಯ್.ಪಾಟೀಲ ಸ್ವತಂತ್ರ ೧೩೨೯೮
೧೯೬೨ ಸಿಂದಗಿ ವಿಧಾನಸಭಾ ಕ್ಷೇತ್ರ ಸಿ.ಎಮ್.ದೇಸಾಯಿ ಕಾಂಗ್ರೇಸ್ ೧೪೦೧೨ ಸಿದ್ದಪ್ಪ ರಡ್ಡೆವಾಡಗಿ ಎಸ್.ಡಬ್ಲೂ.ಎ ೭೪೩೨
೧೯೫೭ ಸಿಂದಗಿ ವಿಧಾನಸಭಾ ಕ್ಷೇತ್ರ ಎಸ್.ವಾಯ್.ಪಾಟೀಲ ಕಾಂಗ್ರೇಸ್ ೧೦೧೪೯ ಗೋವಿಂದಪ್ಪ ಕೊಣ್ಣೂರ ಸ್ವತಂತ್ರ ೭೭೩೯
ಸಿಂದಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
೧೯೫೧ ಸಿಂದಗಿ ವಿಧಾನಸಭಾ ಕ್ಷೇತ್ರ ಜಟ್ಟೆಪ್ಪ ಕಬಾಡಿ ಕಾಂಗ್ರೇಸ್ ೩೦೨೩೧ ಬಬುರಾಮ್ ಹುಜರೆ ಎಸ್.ಸಿ.ಎಫ್ ೫೪೫೭

ಆರೋಗ್ಯ[ಬದಲಾಯಿಸಿ]

ಸಿಂದಗಿ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಸಿಂದಗಿ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಲಕೇರಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೊರವಾರ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮೊರಟಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಡ್ಲೇವಾಡ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಗೊಲಗೇರಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ

ಬ್ಯಾಂಕ್‍ಗಳು[ಬದಲಾಯಿಸಿ]

  • ಯೂನಿಯನ್ ಬ್ಯಾಂಕ್, ಸಿಂದಗಿ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಸಿಂದಗಿ
  • ಡಿ.ಸಿ.ಸಿ. ಬ್ಯಾಂಕ್, ಸಿಂದಗಿ
  • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್, ಸಿಂದಗಿ
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂದಗಿ
  • ಸಿಂಡಿಕೇಟ್ ಬ್ಯಾಂಕ್, ಸಿಂದಗಿ
  • ಕಾರ್ಪೋರೇಶನ್ ಬ್ಯಾಂಕ್, ಸಿಂದಗಿ
  • ಕೆನರಾ ಬ್ಯಾಂಕ್, ಸಿಂದಗಿ
  • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂದಗಿ
  • ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ಬಿಜಾಪುರ
  • ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ಬಿಜಾಪುರ
  • ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ಬಿಜಾಪುರ
  • ಆಲಮೇಲ ಅರ್ಬನ್ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ಬಿಜಾಪುರ

ಖಜಾನೆ ಕಚೇರಿಗಳು[ಬದಲಾಯಿಸಿ]

ಸಿಂದಗಿಯಲ್ಲಿ ಖಜಾನೆ ಕಚೇರಿಯೂ ಇದೆ.

ಪಟ್ಟಣ ಪಂಚಾಯತಿಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು[ಬದಲಾಯಿಸಿ]

ಆಲಮೇಲ, ಅಸ್ಕಿ, ಬಾಗಲೂರ, ಬಳಗಾನೂರ, ಬೊಮ್ಮನಹಳ್ಳಿ, ಬಂದಾಳ, ಬೆಕಿನಾಳ, ಬ್ಯಾಕೋಡ, ಚಾಂದಕವಠೆ, ಚಟ್ಟರಕಿ, ಚಿಕ್ಕರೂಗಿ, ದೇವರಹಿಪ್ಪರಗಿ, ದೇವಣಗಾಂವ, ದೇವರನಾವದಗಿ, ಗಬಸಾವಳಗಿ, ಗೋಲಗೇರಿ, ಗುಬ್ಬೇವಾಡ, ಹಂದಿಗನೂರ, ಹರನಾಳ, ಹಿಟ್ನಳ್ಳಿ , ಹೊನ್ನಳ್ಳಿ, ಹುಣಶ್ಯಾಳ, ಜಲವಾಡ, ಕಡಣಿ, ಕಲಕೇರಿ, ಕನ್ನೊಳ್ಳಿ, ಕೆರುಟಗಿ, ಕೊಕಟನೂರ, ಕೊಂಡಗೂಳಿ, ಕೋರಹಳ್ಳಿ, ಕೊರವಾರ, ಮಲಘಾಣ, ಮಣ್ಣೂರ, ಮೊರಟಗಿ, ಮುಳಸಾವಳಗಿ, ರಾಂಪೂರ, ಸುಂಗಠಾಣ, ಯರಗಲ್ಲ ಬಿ.ಕೆ., ಯಲಗೋಡ, ಯಂಕಂಚಿ, ನಾಗಾವಿ ಬಿ.ಕೆ., ಕಕ್ಕಳಮೇಲಿ, ಗುತ್ತರಗಿ, ರಾಮನಳ್ಳಿ.

ಸಿಂದಗಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು[ಬದಲಾಯಿಸಿ]

ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ಇಲ್ಲಿ ನೆಮ್ಮದಿ ಕೇಂದ್ರಗಳಿವೆ.

ನಾಡ ಕಚೇರಿಗಳು[ಬದಲಾಯಿಸಿ]

ದೇವರ ಹಿಪ್ಪರಗಿ, ಆಲಮೇಲ ಇಲ್ಲಿ ಸಿಂದಗಿ ತಾಲ್ಲೂಕಿನ ನಾಡ ಕಚೇರಿಗಳಿವೆ.

ಕಂದಾಯ ಕಚೇರಿಗಳು[ಬದಲಾಯಿಸಿ]

ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ಇಲ್ಲಿ ಕಂದಾಯ ಕಚೇರಿಗಳಿವೆ.

ತಾಲ್ಲೂಕು ಪಂಚಾಯತಿಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು ೩೦ ತಾಲ್ಲೂಕು ಪಂಚಾಯತಿ ಚುನಾವಣಾ ಕ್ಷೇತ್ರಗಳಿವೆ.[೮]

ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು[ಬದಲಾಯಿಸಿ]

ಜಿಲ್ಲಾ ಪಂಚಾಯತ[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಉಚಿತ ಪ್ರಸಾದನಿಲಯಗಳು[ಬದಲಾಯಿಸಿ]

ಸಿಂದಗಿ, ಆಲಮೇಲ, ಬಳಗಾನೂರ, ಮಲಘಾಣ, ಬಿ.ಬಿ.ಇಂಗಳಗಿ, ಅಸ್ಕಿ, ಕಲಕೇರಿ, ದೇವರಹಿಪ್ಪರಗಿ, ಮುಳಸಾವಳಗಿ, ಹಿಟ್ನಳ್ಳಿ, ಜಾಲವಾದ ಇಲ್ಲಿ ಉಚಿತ ಪ್ರಸಾದನಿಲಯಗಳಿವೆ.

ದೂರವಾಣಿ ಸಂಕೇತಗಳು[ಬದಲಾಯಿಸಿ]

ದೂರವಾಣಿ ವಿನಿಮಯ ಕೇಂದ್ರಗಳು[ಬದಲಾಯಿಸಿ]

ಆಲಮೇಲ, ಬಾಗಲೂರ, ದೇವರಹಿಪ್ಪರಗಿ, ದೇವಣಗಾಂವ, ಗೊಲಗೇರಿ, ಹೊನ್ನಳ್ಳಿ, ಜಲವಾಡ, ಕಲಕೇರಿ, ಕನ್ನೊಳ್ಳಿ, ಕೊರವಾರ, ಮೊರಟಗಿ, ರಾಂಪುರ, ಸಿಂದಗಿ, ಯರಗಲ್ಲ ಬಿ.ಕೆ., ಯಂಕಂಚಿ ಇಲ್ಲಿ ದೂರವಾಣಿ ವಿನಿಮಯ ಕೇಂದ್ರಗಳಿವೆ.

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು[ಬದಲಾಯಿಸಿ]

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)[ಬದಲಾಯಿಸಿ]

ಆಲಗೂರ, ಆಲಮೇಲ, ಅಸಂತಾಪುರ, ಅಸ್ಕಿ, ಬಬಲೇಶ್ವರ, ಬಾಗಲೂರ, ಬಂಟನೂರ, ಬಿ.ಬಿ.ಇಂಗಳಗಿ, ಬಿಂಜಳಭಾವಿ, ಬೊಮ್ಮನಹಳ್ಳಿ, ಬೊಮ್ಮನಜೋಗಿ, ಬೊರಗಿ, ಬ್ಯಾಕೋಡ, ಬೆಕಿನಾಳ, ಚಾಂದಕವಟೆ, ಚಟ್ಟರಕಿ, ಚಿಕ್ಕ ರೂಗಿ, ಚಿಕ್ಕ ಸಿಂದಗಿ, ದೇವಣಗಾಂವ, ದೇವರಹಿಪ್ಪರಗಿ, ದೇವರನಾವದಗಿ, ಗಬಸಾವಳಗಿ, ಗಣಿಹಾರ, ಗೋಲಗೇರಿ, ಗುಂಡಗಿ, ಗುತ್ತರಗಿ, ಗುಬ್ಬೇವಾಡ, ಹಂದಿಗನೂರ, ಹಲಗುಣಕಿ, ಹಿಕ್ಕನಗುತ್ತಿ, ಹಿಟ್ಟಿನಹಳ್ಳಿ, ಜಲವಾಡ, ಕಡಣಿ, ಕಲಕೇರಿ, ಕನ್ನೊಳ್ಳಿ, ಖೈನೂರ, ಕೊಂಡಗೂಳಿ, ಕೊರಹಳ್ಳಿ, ಕೊರವಾರ,ಮಾಡಬಾಳ, ಮಣ್ಣೂರ, ಮೊರಟಗಿ, ಮುಳಸಾವಳಗಿ, ಮಲಘಾಣ, ಓತಿಹಾಳ, ಪಡಗಾನೂರ, ಸಿಂದಗಿ, ಸೋಮಜಾಳ, ಸುಂಗಠಾಣ, ಸುರಗಿಹಳ್ಳಿ, ತಿಳಗೂಳ, ಯಲಗೋಡ, ಯಂಕಂಚಿ, ಯರಗಲ್ಲ ಬಿ.ಕೆ., ಯರಗಲ ಕೆ.ಡಿ. ಈ ಸ್ಥಳಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ.

ಕೆರೆಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಕೆರೆಗಳು[ಬದಲಾಯಿಸಿ]

ಕಡ್ಲೇವಾಡ, ದೇವೂರ-ಹಾಳಯರನಾಳ, ಕುದರಗೊಂಡ, ಹುಣಶ್ಯಾಳ, ಬೂದಿಹಾಳ, ಅಸ್ಕಿ, ಯಕ್ಕಂಚಿ, ಇಂಗಳಗಿ, ಪುರದಾಳ, ಬೊಮ್ಮನಜೋಗಿ.

ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು[ಬದಲಾಯಿಸಿ]

ದೇವರಹಿಪ್ಪರಗಿ-೧, ದೇವರಹಿಪ್ಪರಗಿ-೨, ದೇವರಹಿಪ್ಪರಗಿ-೩, ಮುಳಸಾವಳಗಿ, ಚಿಕ್ಕ ರೂಗಿ, ಪಡಗಾನೂರ-೧, ಪಡಗಾನೂರ ರಾಮತೀರ್ಥ, ಗುಬ್ಬೆವಾಡ - ಸಾಸಬಾಳ, ಮಣ್ಣೂರ.

ಕಾಲುವೆಗಳು[ಬದಲಾಯಿಸಿ]

  • ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
  • ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
  • ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
  • ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.

ಕೃಷಿ ಮಾರುಕಟ್ಟೆಗಳು[ಬದಲಾಯಿಸಿ]

  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿಂದಗಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ದೇವರ ಹಿಪ್ಪರಗಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮೊರಟಗಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆಲಮೇಲ

ರೈತ ಸಂಪರ್ಕ ಕೇಂದ್ರಗಳು[ಬದಲಾಯಿಸಿ]

ಆಲಮೇಲ, ದೇವರಹಿಪ್ಪರಗಿ ಇಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ.

ಹಾಲು ಉತ್ಪಾದಕ ಘಟಕಗಳು[ಬದಲಾಯಿಸಿ]

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ೧೦೦ ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು[ಬದಲಾಯಿಸಿ]

ಆಲಮೇಲ, ಪಡಗಾನೂರ, ಯಂಕ್ಕಂಚಿ, ತಾರಾಪುರ, ಮೊರಟಗಿ, ಮಂಗಳೂರ, ಮಲಘಾಣ, ಖಾನಾಪುರ, ದೇವನಗಾಂವ, ಚಿಕ್ಕಸಿಂದಗಿ, ಬೂದಿಹಾಳ, ಬ್ಯಾಕೋಡ, ಆಹೇರಿ, ಕೊರಳ್ಳಿ.

ಆರಕ್ಷಕ (ಪೋಲಿಸ್) ಠಾಣೆ[ಬದಲಾಯಿಸಿ]

ಸಿಂದಗಿ ನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು[ಬದಲಾಯಿಸಿ]

ಸಕ್ಕರೆ ಕಾರ್ಖಾನೆಗಳು[ಬದಲಾಯಿಸಿ]

ಪ್ರಾಥಮಿಕ ಆರೋಗ್ಯ ಕೇಂದ್ರಗಳು[ಬದಲಾಯಿಸಿ]

ಆಲಮೇಲ, ಕಲಕೇರಿ, ದೇವರಹಿಪ್ಪರಗಿ, ಮೊರಟಗಿ, ಯಂಕಂಚಿ, ಅಸ್ಕಿ, ಬಳಗಾನೂರ, ಚಾಂದಕವಠೆ, ಕೊರವಾರ, ಮಲಘಾಣ, ಗೊಲಗೇರಿ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ಪಶು ಆಸ್ಪತ್ರೆಗಳು[ಬದಲಾಯಿಸಿ]

ಪಶು ಚಿಕಿತ್ಸಾಲಯಗಳು[ಬದಲಾಯಿಸಿ]

ಕೊರವಾರ, ಮೊರಟಗಿ, ಯಂಕಂಚಿ, ಕಲಕೇರಿ, ಕನ್ನೊಳ್ಳಿ, ಹೊನ್ನಳ್ಳಿ, ದೇವಣಗಾಂವ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು[ಬದಲಾಯಿಸಿ]

ಸುಂಗಠಾಣ, ಗುಬ್ಬೇವಾಡ, ಗುಟ್ಟರಗಿ, ಕಕ್ಕಳಮೇಲಿ, ದೇವರನಾವದಗಿ, ಮಲಘಾಣ, ಮುಳಸಾವಳಗಿ, ಯಲಗೋಡ, ಅಸ್ಕಿ, ಕೊಂಡಗೂಳಿ, ಗೊಲಗೇರಿ, ತಿಳಗೋಳ.

ನ್ಯಾಯಾಲಯಗಳು[ಬದಲಾಯಿಸಿ]

  • ತಾಲೂಕು ಸಿವಿಲ್ ನ್ಯಾಯಾಲಯ, ಸಿಂದಗಿ

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು[ಬದಲಾಯಿಸಿ]

ರಾಷ್ಟ್ರೀಯ ಹೆದ್ದಾರಿ - ೨೧೮ => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟೆ (ಗದ್ದನಕೇರಿ ಕ್ರಾಸ್) - ಬೀಳಗಿ (ಕ್ರಾಸ್) - ವಿಜಯಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮ್ನಾಬಾದ್.

ರಾಜ್ಯ ಹೆದ್ದಾರಿ - ೧೬ => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್.

ರಾಜ್ಯ ಹೆದ್ದಾರಿ - ೪೧ => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.

ರಾಜ್ಯ ಹೆದ್ದಾರಿ - ೧೨೪ => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಸರಕಾರಿ ವಾಹನ ನಿಲ್ದಾಣಗಳು[ಬದಲಾಯಿಸಿ]

ದೇವರ ಹಿಪ್ಪರಗಿ, ಆಲಮೇಲ, ಕಲಕೇರಿ ಇಲ್ಲಿ ಸರಕಾರಿ ವಾಹನ ನಿಲ್ದಾಣಗಳಿವೆ.

ಚಿತ್ರ ಮಂದಿರಗಳು[ಬದಲಾಯಿಸಿ]

  • ಪ್ರಶಾಂತ ಚಿತ್ರ ಮಂದಿರ
  • ವಿನಾಯಕ ಚಿತ್ರ ಮಂದಿರ
  • ಆನಂದ ಚಿತ್ರ ಮಂದಿರ

ದಿಕ್ಕುಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
  2. https://indiasthan.com/place/karnataka/2632115/
  3. https://www.onefivenine.com/india/villages/Bijapur-District/Sindagi/Sindagi
  4. https://bagalkot.nic.in/%E0%B2%B8%E0%B2%BF%E0%B2%82%E0%B2%A6%E0%B2%97%E0%B2%BF-%E0%B2%A4%E0%B2%BE%E0%B2%B2%E0%B3%8D%E0%B2%B2%E0%B3%82%E0%B2%95-2/
  5. https://www.accuweather.com/kn/in/sindgi/193346/weather-forecast/193346#google_vignette
  6. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
  7. https://www.prajavani.net/district/vijayapura/karntaka-assembly-election-2023-assembly-constituency-ground-report-politics-bjp-congress-jds-1031010.html
  8. https://vijayapura.nic.in/en/document/taluk-panchayat-sindagi-2021-22/
  9. https://www.onefivenine.com/india/villages/Bijapur-District/Sindagi/Sindagi
  10. https://www.onefivenine.com/india/villages/Bijapur-District/Sindagi/Sindagi
"https://kn.wikipedia.org/w/index.php?title=ಸಿಂದಗಿ&oldid=1178940" ಇಂದ ಪಡೆಯಲ್ಪಟ್ಟಿದೆ