ಸವಿತಾ ಅಂಬೇಡ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸವಿತಾ ಭೀಮರಾವ್ ಅಂಬೇಡ್ಕರ್
Born
ಶಾರದಾ ಕೃಷ್ಣರಾವ್ ಕಬೀರ್

೨೭ನೇ ಜನವರಿ ೧೯೦೯
ದಾದರ್, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
(ಈಗ ಮುಂಬೈ,ಮಹಾರಾಷ್ಟ್ರ, ಭಾರತ)
Died೨೭ನೇ ಮೇ ೨೦೦೩ (ವಯಸ್ಸು ೯೪)
Nationalityಭಾರತೀಯ
Educationಎಂ.ಬಿ.ಬಿ.ಎಸ್
Alma materಗ್ರಾಂಟ್ ವೈದ್ಯಕೀಯ ಕಾಲೇಜ್, ಮುಂಬೈ, ಮಹಾರಾಷ್ಟ್ರ
Occupation(s)ಸಾಮಾಜಿಕ ಕಾರ್ಯಕರ್ತೆ, ವೈದ್ಯೆ
Known forಸಾಮಾಜಿಕ ಕಾರ್ಯ
Worksಡಾ.ಅಂಬೇಡ್ಕರಾಂಚ್ಯ ಸಹವಾಸತ್
Spouse(s)ಡಾ.ಬಿ.ಆರ್. ಅಂಬೇಡ್ಕರ್
(ಮದುವೆ. ೧೯೪೮ - ಸಾವು. ೧೯೫೬)

ಸವಿತಾ ಭೀಮರಾವ್ ಅಂಬೇಡ್ಕರ್ (೨೭ ಜನವರಿ ೧೯೦೯ - ೨೯ ಮೇ ೨೦೦೩), ಭಾರತದ ಒಬ್ಬ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ, ಭಾರತೀಯ ಸಂವಿಧಾನದ "ಸಂವಿಧಾನ ಶಿಲ್ಪಿ" ಡಾ.ಬಿ.ಆರ್. ಅಂಬೇಡ್ಕರ್‍ರವರ ಎರಡನೆಯ ಪತ್ನಿ. ಅಂಬೇಡ್ಕರ್ ವಾದಿಗಳು ಮತ್ತು ನವಬೌದ್ಧರು ಅವರನ್ನು ಮಾಯಿ ಅಥವಾ ಮಾಯಿಸಾಹೇಬ (ಮರಾಠಿ ಭಾಷೆಯಲ್ಲಿ ತಾಯಿ) ಎಂದು ಕರೆಯುತ್ತಾರೆ[೧].ಅವರು ಡಾ.ಬಿ.ಆರ್. ಅಂಬೇಡ್ಕರ್ರ ಹಲವು ಚಳುವಳಿಗಳಲ್ಲಿ ಮತ್ತು ಪುಸ್ತಕ ಬರವಣಿಗೆಯಲ್ಲಿ ಸಹಾಯ ಮಾಡಿದರು. ಅವುಗಳಲ್ಲಿ ಹಿಂದೂ ಕೋಡ್ ಬಿಲ್, ಬುದ್ಧ ಮತ್ತು ಅವನ ದಮ್ಮ ಮುಖ್ಯವಾದವು.[೨]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಮುಂಬೈಯ ಒಂದು ಮರಾಠಿ ಬ್ರಾಹ್ಮಣ ಪರಿವಾರದಲ್ಲಿ ಸವಿತಾರ ಜನನವು ೨೭ ಜನವರಿ ೧೯೦೯ ರಂದು ಆಯಿತು. ಅವರ ತಂದೆಯ ಹೆಸರು ಕೃಷ‍್ಣರಾವ್ ವಿನಾಯಕ್ ಕಬೀರ್ ಮತ್ತು ತಾಯಿ ಜಾನಕಿ. ಅವರ ಜನ್ಮನಾಮ ಶಾರದಾ ಕಬೀರ್. ಅವರ ಮೂಲ ಗ್ರಾಮ ದೋರ್ಸ. ಈಗಿನ ಮಹಾರಾಷ್ಟ್ರ ರಾಜ್ಯದ, ರತ್ನಗಿರಿ ಜಿಲ್ಲೆಯ, ರಾಜಪುರ್ ತಾಲೂಕಿನಲ್ಲಿದೆ. ಅಲ್ಲಿಂದ ಅವರ ತಂದೆ ಮುಂಬೈಗೆ ವಲಸೆ ಬಂದಿದ್ದರು.

ಶಾರದಾರವರು ಒಳ್ಳೆಯ ವಿಧ್ಯಾರ್ಥಿನಿಯಾಗಿದ್ದರು. ಪುಣೆಯಲ್ಲಿ ಅವರ ಪ್ರಾರಂಭಿಕ ಶಿಕ್ಷಣವಾಯಿತು. ನಂತರ ೧೯೩೭ರಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಗ್ರಾಂಟ್ ವೈದ್ಯಕೀಯ ಕಾಲೇಜ್ ಮುಂಬೈನಲ್ಲಿ ಪಡೆದರು. ಪದವಿ ಮುಗಿದ ಮೇಲೆ ಗುಜರಾತ ರಾಜ್ಯದ ಒಂದು ದೊಡ್ಡ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ದೊರೆಯಿತು. ಆದರೆ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಮುಂಬೈಗೆ ಹಿಂತಿರುಗಿದರು.[೧][೩]

ಶಾರದಾರವರ ತಂದೆ ತಾಯಿಗೆ ೮ ಮಕ್ಕಳು. ಅವರಲ್ಲಿ ೬ ಮಕ್ಕಳು ಅಂತರ್ಜಾತೀಯ ವಿವಾಹವಾಗಿದ್ದರು. ಆಗಿನ ಸನ್ನಿವೇಶದಲ್ಲಿ ಮರಾಠಿ ಬ್ರಾಹ್ಮಣರಲ್ಲಿ ಇದೊಂದು ವಿಶೇಷ ವಿಶಯವಾಗಿತ್ತು. ಮುಂದೊಮ್ಮೆ ಇದರ ಬಗ್ಗೆ ಸವಿತಾರವರು "ನಮ್ಮ ಪರಿವಾರ ಅಂತರ್ಜಾತೀಯ ವಿವಾಹವನ್ನು ವಿರೋಧಿಸಲಿಲ್ಲ ಏಕೆಂದರೆ ಇಡೀ ಪರಿವಾರದಲ್ಲಿ ವಿದ್ಯಾವಂತರು ಮತ್ತು ಪ್ರಗತಿಪರರು ತುಂಬಿದ್ದರು." ಎಂದಿದ್ದರು [೪].

ವೃತ್ತಿ ಜೀವನ[ಬದಲಾಯಿಸಿ]

ಮಾಯಿಸಾಹೇಬ ಮತ್ತು ಬಾಬಾಸಾಹೇಬರು

ಎಸ್.ಎಮ್.ರಾವ್ ಎಂಬ ವೈದ್ಯರು ಮುಂಬೈಯ ವಿಲೆ ಪಾರ್ಲೆಯಲ್ಲಿ ಇದ್ದರು. ಇವರು ಡಾ| ಶಾರದಾ ಕಬೀರರ ಸಂಬಂಧಿಕರು ಮತ್ತು ಬಾಬಾಸಾಹೇಬ ಆಂಬೇಡ್ಕರರೊಂದಿಗೆ ಒಳ್ಳೆಯ ಸಂಬಂಧವನ್ನು ಹೋಂದಿದ್ದವರಾಗಿದ್ದರು. ಅಲ್ಲೆ ಇವರಿಬ್ಬರ ಮೊದಲು ಭೇಟಿಯಾಗಿದ್ದು. ಆಗ ಬಾಬಾಸಾಹೇಬರು ವೈಸ್ರಾಯ್ರ ಮಂತ್ರಿಮಂಡಲದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಬಾಬಾಸಾಹೇಬರ ಧೀಮಂತ ವ್ಯಕ್ತಿತ್ವವು ಡಾ| ಶಾರದಾರರನ್ನು ಆಕರ್ಷಿಸಿತು. ಡಾ|ಅಂಬೇಡ್ಕರರು ಒಬ್ಬ ಅಸಾಧಾರಣ ಮತ್ತು ಶ್ರೇಷ್ಠ ವ್ಯಕ್ತಿ ಎಂದು ಅವರ ಮೊದಲ ಭೇಟಿಯಲ್ಲೇ ಶಾರದಾರಿಗೆ ತಿಳಿಯಿತು. ಆ ಭೇಟಿಯಲ್ಲಿ ಬಾಬಾಸಾಹೇಬರು ಮಹಿಳೆಯರಿಗಾಗಿ ಇವರು ಮಾಡುತ್ತಿದ್ದ ಕಾರ್ಯವನ್ನು ಶ್ಲಾಘಿಸಿದರು. ಮೊದಲ ಭೇಟಿಯಲ್ಲೇ ಇವರಿಬ್ಬರು ಬೌದ್ಧ ಧರ್ಮದ ಬಗ್ಗೆ ಚರ್ಚಿಸಿದರು[೩][೫]

ಇವರಿಬ್ಬರ ಎರಡನೆಯ ಭೇಟಿ ಡಾ|ಮಾವಳಂಕರರ ಚಿಕಿತ್ಸಾಲಯದಲ್ಲಿ ಆಯಿತು. ಆಗ ಸಂವಿಧಾನ ರಚನೆಯಲ್ಲಿ ತೊಡಗಿದ್ದ ಬಾಬಾಸಾಹೇಬರು, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕಾಲುಗಂಟು ನೋವಿನಿಂದ ಬಳಲುತ್ತಿದ್ದರು. ಆ ಕಾರಣಕ್ಕೆ ಮುಂಬೈಗೆ ಬಂದಿದ್ಧರು. ಈ ಚಿಕಿತ್ಸೆಯ ಸಮಯದಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಹೆಚ್ಚು ಅರಿತುಕೊಂಡರು. ಸಾಹಿತ್ಯ, ಸಮಾಜ, ಧರ್ಮ ಇವುಗಳ ಬಗ್ಗೆ ಇಬ್ಬರಲ್ಲೂ ಚರ್ಚೆಯಾಗುತ್ತಿತ್ತು. ೧೯೩೫ರಲ್ಲಿ ಬಾಬಾಸಾಹೇಬರ ಪತ್ನಿ, ರಮಾಬಾಯಿ ಅಂಬೇಡ್ಕರರು ನಿಧನರಾಗಿದ್ದರು. ಆನಂತರ ಬಾಬಾಸಾಹೇಬರು ಮತ್ತೆ ಮದುಮದುವೆಯಾಗಿರಲಿಲ್ಲ. ಬಾಬಾಸಾಹೇಬರು ತಮ್ಮನ್ನು ನೋಡಿಕೊಳ್ಳುಲು ಒಬ್ಬರಿದ್ದರೆ ಒಳಿತೆಂದು ಮತ್ತು ಇವರಿಬ್ಬರ ಆಸಕ್ತಿಗಳು ಹೊಂದುತ್ತಿದ್ದ ಕಾರಣ ೧೯೪೮ರಲ್ಲಿ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದರು[೧][೩][೬].

ಮದುವೆ[ಬದಲಾಯಿಸಿ]

ಸವಿತಾ ಅಂಬೇಡ್ಕರ್

೧೫ನೇ ಎಪ್ರಿಲ್ ೧೯೪೮ರಂದು ಇಬ್ಬರು ದಹಲಿಯಲ್ಲಿ ರಿಜಿಸ್ಟರ್ಡ ಮದುವೆಯಾದರು (ಸಿವಿಲ್ ಮದುವೆ). ಆಗ ಶಾರದಾರವರಿಗೆ ೩೯ ವರ್ಷ ಮತ್ತು ಬಾಬಾಸಾಹೇಬರಿಗೆ ೫೭ ವರ್ಷ. ಶಾರದಾರವರ ತಮ್ಮ ಈ ಮದುವೆಗೆ ಸಾಕ್ಷಿಯಾಗಿದ್ದರು. ಮದುವೆಯ ತರುವಾಯ ಶಾರದಾರವರು ತಮ್ಮ ಹೆಸರನ್ನು ಸವಿತಾ ಎಂದು ಬದಲಾಯಿಸಿಕೊಂಡರು. ಆಗಿನ ಗೌವರ್ನರ್ ಜೆನರಲ್ ಅಗಿದ್ದಂತ ಸಿ. ರಾಜಗೋಪಾಲಚಾರಿ ನವ ದಂಪತಿಗಳನ್ನು ಸ್ನೇಹ ಭೋಜನಕ್ಕೆ ತಮ್ಮ ಅಧಿಕೃತ ನಿವಾಸಕ್ಕೆ ಕರೆದು ಸತ್ಕರಿಸಿದರು[೩][೭].

ಮದುವೆಯಾದ ಮೇಲೆ ಸವಿತಾರವರು ತಮ್ಮ ಪತಿಯ ಸೇವೆಯಲ್ಲಿ ತಲ್ಲೀನರಾದರು. ಬಾಬಾಸಾಹೇಬರಿಗೆ ಅವರ ಕಡೆಗಾಲದವರೆಗೂ ಈ ಸೇವೆಯನ್ನು ಮುಂದುವರೆಸಿದರು. ಈ ನಿಷ್ಕಲ್ಮಷ ಸೇವೆಯನ್ನು ತಮ್ಮ ಕೃತಿಯಲ್ಲಿ ಅಂಬೇಡ್ಕರರು ನೆನೆದಿದ್ದಾರೆ[೧][೮].

ಬೌದ್ಧ ಧರ್ಮಕ್ಕೆ ಮತಾಂತರ[ಬದಲಾಯಿಸಿ]

ಇದನ್ನು ಕೂಡ ನೋಡಬಹುದು ದಲಿತ ಬೌದ್ಧ ಚಲುವಳಿ, ನವಬೌದ್ಧರು

ಬಾಬಾಸಾಹೆಬರು ಮತ್ತು ಮಾಯಿ, ಬುದ್ಧನ ಪ್ರತಿಮೆಯೊಂದಿಗೆ, ೧೪ ಅಕ್ಟೋಬರ್ ೧೯೫೬, ನಾಗಪುರ, ಧರ್ಮದೀಕ್ಷಾ ಸಮಾರಂಭದಲ್ಲಿ

೧೪ ಅಕ್ಟೋಬರ್ ೧೯೫೬, ಅಶೋಕ ವಿಜಯ ದಶಮಿಯ ದಿನ (ಈ ದಿನ ಸಾಮ್ರಾಟ್ ಅಶೋಕ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ), ಸವಿತಾ ಅಂಬೇಡ್ಕರರು ತಮ್ಮ ಪತಿಯೊಂದಿಗೆ ನಾಗಪುರದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಬರ್ಮಾದ ಬೌದ್ಧ ಭಿಕ್ಕು ಮಹಾಸ್ತವಿರ್ ಬೌದ್ಧ ಧರ್ಮದ ಸಾಂಪ್ರದಾಯಿಕ ದೀಕ್ಷೆ ನೀಡಿದರು. ಇದನ್ನು ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ ೫,೦೦,೦೦೦ಕ್ಕೂ ಹೆಚ್ಚಿನ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ಬೆಳಗ್ಗೆ ೦೯ಕ್ಕೆ ಸರಿಯಾಗಿ ಶುರುವಾದ ದೀಕ್ಷಾ ಕಾರ್ಯಕ್ರಮದಲ್ಲಿ ಸವಿತಾ ಅಂಬೇಡ್ಕರರು ದೀಕ್ಷೆ ಸ್ವೀಕರಿಸಿದ ಮೊದಲ ಮಹಿಳೆಯಾಗಿದ್ದರು[೯].

ಆರೋಪ ಮತ್ತು ವಿರೋಧಾಭಾಸಗಳು[ಬದಲಾಯಿಸಿ]

ದಿಲ್ಲಿಯ ಅಧಿಕೃತ ನಿವಾಸಕ್ಕೆ ಅಂಬೇಡ್ಕರರ ಅನುಯಾಯಿಗಳು, ಗೆಳೆಯರು ಬರುತ್ತಿದ್ದರು. ಆದರೆ ಬಾಬಾಸಾಹೇಬರ ಖಾಯಿಲೆಯ ಕಾರಣ ಬಂದವರಿಗೆ ಬಾಬಾಸಾಹೇಬರ ಭೇಟಿಗೆ ಅವಕಾಶ ಸಿಗುತ್ತಿರಲಿಲ್ಲ. ಇದು ಕೆಲ ಹಿಂಬಾಲಕರಿಗೆ ಬೇಸರ ಮೂಡಿಸಿತ್ತು. ಸವಿತಾ ಅಂಬೇಡ್ಕರರು, ಬಾಬಾಸಾಹೇಬರ ಪತ್ನಿ ಮತ್ತು ವೈದ್ಯ ಎಂಬ ಎರಡೂ ಪಾತ್ರಗಳನ್ನು ದಕ್ಷವಾಗಿ ನಿರ್ವಹಿಸುತ್ತಿದ್ದರು.[೧೦]
ಅಂಬೇಡ್ಕರರ ನಿಧನದ ನಂತರ ಕೆಲ ಅಂಬೇಡ್ಕರವಾದಿಗಳು ಅವರ ಸಾವಿಗೆ ಸವಿತಾ ಅಂಬೇಡ್ಕರರೇ ಕಾರಣ ಎಂದು ಆರೋಪಿಸಿದರು. ಅವರು ಮೂಲತಃ ಬ್ರಾಹ್ಮಣರಾದ ಕಾರಣ ಅವರನ್ನು ದಲಿತ ಚಳುವಳಿಯಿಂದ ದೂರ ಮಾಡಲಾಯಿತು. ತತ್ಕಾಲೀನ ಪ್ರಧಾನಿ ಜವಾಹರ‌ಲಾಲ್ ನೆಹರುರವರು ಅಂಬೇಡ್ಕರರ ಸಾವಿನ ಬಗ್ಗೆ ತನಿಖೆಗೆ ಒಂದು ಸಮಿತಿ ರಚಿಸಿದರು. ಈ ತನಿಖಾ ಸಮಿತಿ ಕೂಲಂಕೂಷವಾಗಿ ಎಲ್ಲಾ ಮಾಹಿತಿಗಳನ್ನು ಪರಾಂಬರಿಸಿ, ಸವಿತಾ ಅಂಬೇಡ್ಕರರನ್ನು ಈ ಆರೋಪದಿಣದ ಮುಕ್ತಗೊಳಿಸಿತು. ಸವಿತಾರವರು ೧೯೭೨ರವರೆಗೂ ದೆಹಲಿಯ ಬಳಿಯ ಮೆಹರೌಲಿಯ ಅಂಬೇಡ್ಕರರ ತೋಟದ ಮನೆಯಲ್ಲಿ ವಾಸಿಸಿದರು [೧].

ಅಂಬೇಡ್ಕರರ ನಿಧನದ ನಂತರ ಜವಾಹರ‌ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಸವಿತಾ ಅಂಬೇಡ್ಕರರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸಿದರು. ಕಾಂಗ್ರೆಸ್ಸಿನ ಸಹಾಯ ಪಡೆದುಕೊಂಡು ರಾಜ್ಯಸಭೆಯ ಸದಸ್ಯಳಾದರೆ ಅದು ಅಂಬೇಡ್ಕರರು ಜೀವನ ಪರ್ಯಂತ ನಂಬಿದ್ದ ಸಿದ್ಧಾಂತಗಳಿಗೆ ದ್ರೋಹಬಗೆದು ಅವುಗಳಿಗೆ ತಿಲಾಂಜಲಿ ಇಟ್ಟಂತಾಗುತ್ತದೆಂದು ಸವಿತಾ ಅಂಬೇಡ್ಕರರು ಇದನ್ನು ಸ್ವೀಕರಿಸಲಿಲ್ಲ

ದಲಿತ ಚಳುವಳಿಗೆ ಮರು ಪ್ರವೇಶ[ಬದಲಾಯಿಸಿ]

ಅವರನ್ನು ರಿಪಬ್ಲಿಕನ್ ಪಾರ್ಟಿ ಆಫ ಇಂಡಿಯಾದ ನಾಯಕರಾದ ರಾಮದಾಸ್ ಅಠಾವಳೆ ಮತ್ತು ಗಂಗಾಧರ ಗಧೆಯವರು ಅಂಬೇಡ್ಕರವಾದಿ ಚಳುವಳಿಯ ಮುಖ್ಯಪ್ರವಾಹಕ್ಕೆ ಮರುಳಿ ಕರೆತಂದರು. ದಲಿತ್ ಪಾಂಥರ್ಸ ಪಕ್ಷದ ಯುವ ಕಾರ್ಯಕರ್ತರು ಅವರನ್ನು 'ಮಾಯಿ' ಎಂದು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ರಿಡ್ಡಲ್ಸ ಇನ್ ಹಿಂದುಯಿಸಂ ಪುಸ್ತಕದಲ್ಲಿ ಇವರ ಪಾತ್ರದಿಂದ ದಲಿತರಲ್ಲಿ ಇವರ ಬಗ್ಗೆಯಿದ್ದ ತಪ್ಪು ತಿಳುವಳಿಕೆ ದೂರವಾಗಿ ಗೌರವ ಹೆಚ್ಚಾಯಿತು. ನಂತರ ಅವರು ವಯೋಸಹಜ ಕಾರಣದಿಂದ ದಲಿತ ಚಳುವಳಿಯಿಂದ ದೂರವಾದರು[೧].

೧೯೯೦ರಲ್ಲಿ ಬಾಬಾಸಾಹೇಬ ಅಂಬೇಡ್ಕರರ ಜನ್ಮಶತಾಬ್ಧಿ ಆಚರಣೆಯ ಸಮಯದಲ್ಲಿ, ಬಾಬಾಸಾಹೇಬರಿಗೆ ಭಾರತದ ಆತ್ಯುಚ್ಚ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು, ಮರಣೋಪರಾಂತ, ತತ್ಕಾಲೀನ ರಾಷ್ಟ್ರಪತಿ ಆರ್ ವೆಂಕಟರಾಮನ್‍ರವರು, ರಾಷ್ಟ್ರಪತಿ ಭವನದಲ್ಲಿ ೧೪ ಎಪ್ರಿಲ್ ೧೯೯೦ರಂದು ಸವಿತಾ ಅಂಬೇಡ್ಕರರಿಗೆ ನೀಡಿದರು[೩][೧೧].

ನಿಧನ[ಬದಲಾಯಿಸಿ]

ತಮ್ಮ ಪತಿಯ ಸಾವಿನ ನಂತರ ಸವಿತಾ ಅಂಬೇಡ್ಕರರು ಏಕಾಂಗಿಯಾದರು. ಕೆಲವು ವರ್ಷಗಳ ತರುವಾಯ ಅವರು ದಲಿತ ಚಳುವಳಿಯೊಡನೆ ಸ್ವಲ್ಪ ಸಮಯ ಗುರುತಿಸಿಕೊಂಡರು. ೧೯ ಎಪ್ರಿಲ್ ೨೦೦೩ ರಂದು ಅವರಿಗೆ ಉಸಿರಾಟದ ತೊಂದರೆಯುಂಟಾಗಿ, ಮುಂಬೈಯ ಜೆ.ಜೆ ಆಸ್ಪತ್ರೆಗೆ ಸೇರಿಸಲಾಯಿತು. ೨೯ ಮೇ ೨೦೦೩ರಂದು ತಮ್ಮ ೯೪ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು[೧][೧೨].

ಬರವಣಿಗೆ[ಬದಲಾಯಿಸಿ]

ಅವರು ಡಾ.ಅಂಬೇಡ್ಕರಾಂಚ್ಯ ಸಹವಾಸತ್ ಎಂಬ ಒಂದು ಆತ್ಮಚರಿತ್ರೆ ಬರೆದಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಎಂಬ ಚಲನಚಿತ್ರಕ್ಕೆ ಕೊಡುಗೆ ನೀಡಿದ್ದಾರೆ. ಚಲನಚಿತ್ರದಲ್ಲಿ ಮೃಣಾಲ್ ಕುಲ್ಕರ್ಣಿಯವರು ಸವಿತಾ ಅಂಬೇಡ್ಕರರ ಪಾತ್ರವನ್ನು ನಿರ್ವಹಿಸಿದ್ದಾರೆ[೧೩].

ಕೊಡುಗೆ[ಬದಲಾಯಿಸಿ]

ಸವಿತಾ ಅಂಬೇಡ್ಕರರ ಬಗ್ಗೆ ಗಣ್ಯರ ಹೇಳಿಕೆಗಳು[ಬದಲಾಯಿಸಿ]

  • ಆಗಿನ ಭಾರತದ ರಾಷ್ತ್ರಪತಿಗಳಾಗಿದ್ದ ಡಾ| ಎ.ಪಿ.ಜೆ.ಅಬ್ದುಲ್ ಕಲಾಂರವರು ಸವಿತಾ ಅಂಬೇಡ್ಕರರ ನೆನಪಿನಲ್ಲಿ ಹೀಗೆ ಹೇಳಿದರು. "ಶ್ರೀಮತಿ ಅಂಬೇಡ್ಕರರು ಸಮರ್ಪಣೆ ಮತ್ತು ತ್ಯಾಗದ ಸಂಕೇತವಾಗಿದ್ದರು. ಡಾ.ಬಿ.ಆರ್. ಅಂಬೇಡ್ಕರರೊಂದಿಗೆ ಕೂಡಿ ಅವರು ಉಪೇಕ್ಷಿತರ ಏಳ್ಗೆಗಾಗಿ ದುಡಿದರು"[೧೪].
  • ಆಗಿನ ಭಾರತದ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿರವರು "ಭಾರತದ ಸಂವಿಧಾನ ರಚನೆಯಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದ ಬಾಬಾಸಾಹೇಬರ ಸ್ಪೂರ್ತಿಯಸೆಲೆಯಾಗಿದ್ದವರು ಸವಿತಾರವರು. ಅವರೊಬ್ಬ ದೊಡ್ಡ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಸಮಾಜದ ಉಪೇಕ್ಷಿತರ ಏಳ್ಗೆಗಾಗಿ ಅವರು ಸಮರ್ಪಿತರಾಗಿದ್ದರು" ಎಂದು ಹೇಳಿದರು[೧೪].
  • ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ "ಮಾಯಿಯವರ ಉಪಸ್ಥಿತಿ ಮತ್ತು ಮಾರ್ಗದರ್ಶನವನ್ನು ಎಲ್ಲರೂ ಪ್ರೀತಿಯಿಂದ ನೆನಪಿಸಿಕೊಳ್ಳುವರು" ಎಂದು ಹೇಳಿದರು[೧೪].
  • ಆಗಿನ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಸತ್ಯನಾರಾಯಣ ಜತಿಯ "ಡಾ| ಸವಿತಾ ಅಂಬೇಡ್ಕರರು ಬಹಳ ಸಮರ್ಪಣೆಯೊಂದಿಗೆ ಬಾಬಾಸಾಹೇಬರಿಗೆ ಸೇವೆ ಸಲ್ಲಿಸಿದ್ದಾರೆ. ಅವರ ಈ ತ್ಯಾಗವನ್ನು ಹಲುವು ಕಾಲ ನೆನಪಿಸಿಕೊಳ್ಳಲಾಗುವುದು ಮತ್ತು ಇದು ಮುಂದಿನ ಪೀಳಿಗೆಗೆ ಒಂದು ಸ್ಪೂರ್ತಿಯಸೆಲೆಯಾಗಿದೆ" ಎಂದು ಹೇಳಿದರು[೧೫].
  • ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ "ಅವರು (ಸವಿತಾ) ಅಧಿಕಾರಕ್ಕಿಂತ ಸಾಮಾಜಿಕ ಚಳುವಳಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದರು" ಎಂದು ಹೇಳಿದರು[೧೪].
  • ಗೋಪಿನಾಥ ಮುಂಡೆ "ಸವಿತಾರವರು ತ್ಯಾಗದ ಒಂದು ಒಳ್ಳೆಯ ಉದಾಹರಣೆಯಾಗಿದ್ದರು ಮತ್ತು ಕಡೆಗಾಲದವರೆಗೂ ತಮ್ಮ ದಿವಂಗತ ಪತಿಯ ಧ್ಯೇಯಾದರ್ಶಗಳಿಗೆ ಪೂರಕವಾಗಿ ಜೀವಿಸಿದರು" ಎಂದು ಹೇಳಿದರು[೧೫].

ಸವಿತಾ ಅಂಬೇಡ್ಕರರ ಬಗ್ಗೆ ಪುಸ್ತಕ[ಬದಲಾಯಿಸಿ]

  • ಬಾಬಾಸಾಹೇಬಾಂಚಿ ಸವಾಲಿ: ಡಾ.ಸವಿತಾ ಅಂಬೇಡ್ಕರ್ (ಮಾಯಿಸಾಹೇಬ) (ಬಾಬಾಸಾಹೇಬರ ನೆರಳು : ಡಾ.ಸವಿತಾ ಅಂಬೇಡ್ಕರ್ (ಮಾಯಿಸಾಹೇಬ)) - ಪ್ರೊಫೆಸರ್ ಕಿರ್ತಿಲತಾ ರಾಮಭಾವು ಪೆಠಕರ್ - ೨೦೧೬
  • ಡಾ. ಬಾಬಾಸಾಹೇಬ ಅಂಬೇಡ್ಕರಾಂಚ್ಯ ಸವಾಲಿಚ ಸಂಘರ್ಷ (ಡಾ. ಬಾಬಾಸಾಹೇಬ ಅಂಬೇಡ್ಕರರ ನೆರಳಿನ ಸಂಘರ್ಷ) - ವಿಜಯ್ ಸುಖದೆವೆ
  • ಡಾ. ಮಾಯಿಸಾಹೇಬ ಅಂಬೇಡ್ಕರಾಂಚ್ಯ ಸಹವಾಸತ್ (ಡಾ. ಮಾಯಿಸಾಹೇಬ ಅಂಬೇಡ್ಕರರ ಸಂಘದಲ್ಲಿ) - ವ್ಯಶಾಲಿ ಭಾಲೆರಾವ್ [೧೬]
  • ಡಾ. ಮಾಯಿಸಾಹೇಬ ಅಂಬೇಡ್ಕರ್ - ವಾಲ್ಮಿಕ ಅಹಿರೆ
  • ದಿ ಗ್ರೇಟ್ ಸಾಕ್ರಿಫೈಸ್ ಆಫ್ ಮಾಯಿಸಾಹೇಬ ಅಂಬೇಡ್ಕರ್ (ಮಾಯಿಸಾಹೇಬ ಅಂಬೇಡ್ಕರ್ ರ ಮಹಾನ್ ತ್ಯಾಗ) - ಪ್ರೊಫೆಸರ್ ಪಿ.ವಿ.ಸುಖದೆವೆ
  • ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ - ಪ್ರೊಫೆಸರ್ ಪಿ.ವಿ.ಸುಖದೆವೆ
  • ಮಾಯಿಸಾಹೇಬ ಚರಿತ್ರ ಅಣಿ ಕಾರ್ಯ (ಮಾಯಿಸಾಹೇಬರ ಚರಿತ್ರ ಮತ್ತು ಕಾರ್ಯ)
  • ಮಹಾಮಾನವಾಚಿ ಸಂಜೀವನಿ (ಮಹಾಮಾನವನ ಸಂಜೀವನಿ)

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "ಡಾ.ಬಿ.ಆರ್.ಅಂಬೇಡ್ಕರ್ ರ ಹಿಂದಿನ ಮಹಿಳೆ - ನಮ್ಮ ಮಹಿಳೆಯರಿಗೆ ಇತಿಹಾಸದ ಪುಟಗಳಲ್ಲಿ ಸರಿಯಾದ ಸ್ಥಾನ ದೊರೆತಿಲ್ಲ. Women's Web: For Women Who Do". www.womensweb.in. www.womensweb.in. Archived from the original on 3 ಮೇ 2020. Retrieved 3 May 2020.{{cite web}}: CS1 maint: bot: original URL status unknown (link)
  2. "Pritchett, Frances". www.columbia.edu. www.columbia.edu. Archived from the original on 16 ಸೆಪ್ಟೆಂಬರ್ 2019. Retrieved 3 May 2020.{{cite web}}: CS1 maint: bot: original URL status unknown (link).
  3. ೩.೦ ೩.೧ ೩.೨ ೩.೩ ೩.೪ "ಡಾ.ಸವಿತಾ ಅಂಬೇಡ್ಕರರಿಗೆ ಜೀವನದಲ್ಲಿ ಅಂಬೇಡ್ಕರ‌‌ವರನ್ನು ಬಿಟ್ಟರೆ ಬೇರೆ ಏನು ಮಹತ್ವಪೂರ್ಣವಾದದ್ದು ಇರಲಿಲ್ಲ. ಹಿಂದಿಯಲ್ಲಿ". www.forwardpress.in. www.forwardpress.in. Archived from the original on 3 ಮೇ 2020. Retrieved 3 May 2020.{{cite web}}: CS1 maint: bot: original URL status unknown (link)
  4. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೧೭.
  5. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೧೭-೧೮
  6. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೧೯
  7. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೩೦
  8. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೩೩
  9. ನಾಗಪುರವನ್ನು ಏಕೆ ಆಯ್ಕೆ ಮಾಡಲಾಯಿತು?
  10. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೫೭
  11. ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೫೦
  12. "ಮಾಯಿ ಅಂಬೆಡ್ಕರ‍ರು ತೀರಿ ಹೋದರು". timesofindia.indiatimes.com. timesofindia. Archived from the original on 2020-05-03. Retrieved 2020-05-05.{{cite web}}: CS1 maint: bot: original URL status unknown (link)
  13. "ಅಂಬೇಡ್ಕರ‌‌ರ ಪತ್ನಿ ಇಂದು ತೀರಿ ಹೋದರು". www.rediff.com. www.rediff.com. Archived from the original on 3 ಮೇ 2020. Retrieved 3 May 2020.{{cite web}}: CS1 maint: bot: original URL status unknown (link)
  14. ೧೪.೦ ೧೪.೧ ೧೪.೨ ೧೪.೩ "ರಾಷ್ತ್ರಪತಿ, ಪ್ರಧಾನಿ ಸವಿತಾ ಅಂಬೆಡ್ಕರ‍ರ ಸಾವಿಗೆ ಸಂತಾಪ ಸೂಚಿಸಿದರು". zeenews.india.com. zeenews.india.com. Archived from the original on 2020-05-03. Retrieved 2020-05-05.{{cite web}}: CS1 maint: bot: original URL status unknown (link)
  15. ೧೫.೦ ೧೫.೧ "ರಾಷ್ತ್ರಪತಿ, ಪ್ರಧಾನಿ ಸವಿತಾ ಅಂಬೆಡ್ಕರ‍ರ ಸಾವಿಗೆ ಸಂತಾಪ ಸೂಚಿಸಿದರು. ವಿ.ಸೂ. ಇದನ್ನು ತೆರೆಯಲು ದಿ ಹಿಂದುವಿನಲ್ಲಿ ನಿಮ್ಮ ಖಾತೆ ಇರಬೇಕು". www.thehindu.com. www.thehindu.com. Retrieved 3 May 2020.
  16. https://www.bookganga.com/eBooks/Books/Details/4691565523749693623

ಹೊರಗಿನ ಕೊಂಡಿಗಳು[ಬದಲಾಯಿಸಿ]