ಸತ್ಪ್ರೇಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತ್ಪ್ರೇಮ್
ಜನ್ಮ(೧೯೨೩-೧೦-೩೦)೩೦ ಅಕ್ಟೋಬರ್ ೧೯೨೩
ಜನ್ಮ ಸ್ಥಳಪ್ಯಾರಿಸ್, ಫ್ರಾನ್ಸ್
ಜನ್ಮ ನಾಮಬರ್ನಾರ್ಡ್ ಎಂಜಿಂಗರ್
ಮರಣ9 April 2007(2007-04-09) (aged 83)
ಮರಣ ಸ್ಥಳನಂದಗ್ರಾಮ್, ಭಾರತ
ತತ್ತ್ವಶಾಸ್ತ್ರಅತೀತ ಮಾನಸ ಯೋಗ
ಉಕ್ತಿಮಾನವನ ನಂತರ ಯಾರು? ಆದರೆ ಪ್ರಶ್ನೆಯೆಂದರೆ, ಮಾನವನ ಅನಂತರ ಹೇಗೆ ಎಂಬುದು

ಸತ್ಪ್ರೇಮ್ ಹೆಸರಾಂತ ಆಧ್ಯಾತ್ಮ ಗುರುಗಳಾದ ಶ್ರೀ ಅರವಿಂದಾಶ್ರಮದ ಶ್ರೀ ಮಾತೆ ಯವರ ಪ್ರಮುಖ ಶಿಷ್ಯರುಗಳಲ್ಲೊಬ್ಬರು ಇವರು ಶ್ರೀ ಮಾತೆಯವರ ಕಾರ್ಯಸೂಚಿಯೆಂದು ಪ್ರಸಿದ್ಧವಾದ 'ಮದರ್ಸ್ ಅಜೆಂಡಾ' ದ ಸಂಕಲಕಾರರು ಮತ್ತು ಸಂಪಾದಕರು

ಜೀವನ[ಬದಲಾಯಿಸಿ]

ಸತ್ಪ್ರೇಮ್ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಹುಟ್ಟಿದರು. ತಮ್ಮ ಬಾಲ್ಯವನ್ನು ಪ್ರಾನ್ಸ್ ದೇಶದ ಸಮುದ್ರ ತೀರದಲ್ಲಿದ್ದ ಬ್ರಿಟನಿ ಪ್ರಾಂತ್ಯದಲ್ಲಿ ಕಳೆದರು. ಎರಡನೆ ಮಹಾಯುದ್ಧದ ಸಮಯದಲ್ಲಿ ಫ್ರೆಂಚ್ ಪ್ರತಿರೋಧದಲ್ಲಿ ಭಾಗವಹಿಸಿದ್ದು, ಈ ಕಾರ್ಯಗಳಿಗಾಗಿ ಜರ್ಮನ್ ನಾಟ್ಸಿಗಳ ಗುಪ್ತಚಾರಿ ದಳವಾದ ಗೆಸ್ತಾಪೋದಿಂದ ಬಂಧಿತರಾಗಿ ಯುದ್ಧ ಕೈದಿಯಾಗಿ ಪಾಶವೀಯತೆಗೆ ಕುಖ್ಯಾತವಾಗಿದ್ದ 'ಕೇಂದ್ರೀಕರಣ ಶಿಬಿರ'ಗಳಲ್ಲಿ ಒಂದೂವರೆ ವರ್ಷ ಕೋಟಳೆಗಳನ್ನೆದುರಿಸಿದರು. ಈ ಅನುಭವಗಳಿಂದ ವಿಚ್ಛಿನ್ನರಾದ ಅವರು ಯುದ್ಧಾನಂತರ ಬಿಡುಗಡೆ ಹೊಂದಿದಾಗ ಉತ್ತರ ಈಜಿಪ್ಟ್ ಗೆ ಪ್ರವಾಸ ಹೋದರು ಮತ್ತು ನಂತರ ಭಾರತಕ್ಕೆ ಬಂದು ಪುದುಚೇರಿಯಲ್ಲಿನ ಫ್ರೆಂಚ್ ಸರಕಾರಕ್ಕಾಗಿ ಕೆಲಸಮಾಡತೊಡಗಿದರು. ಈ ಸಮಯದಲ್ಲಿ ಅವರು ಶ್ರೀ ಅರವಿಂದರು ಮತ್ತು ಶ್ರೀ ಮಾತೆಯವರ ವಾಙ್ಮಯದ ಪರಿಚಯ ಪಡೆದುಕೊಂಡು ಪ್ರಭಾವಿತರಾದರು (ಅವರನ್ನೊಮ್ಮೆ, ಆಶ್ರಮದ 'ದರ್ಶನ' ಕಾರ್ಯಕ್ರಮದ ಸಂದರ್ಭದಲ್ಲಿ ಕಂಡಿದ್ದರು ಕೂಡ). ಇದಾದ ಸ್ವಲ್ಪ ಕಾಲದ ನಂತರ ಅವರು ಮತ್ತೊಮ್ಮೆ ಪ್ರಪಂಚ ಪ್ರವಾಸವನ್ನು ಕೈಗೊಂಡು ಬ್ರಜಿಲ್, ಆಫ್ರಿಕ, ಮತ್ತು ಅಮೆಜಾನ್ ನ ಗೊಂಡಾರಣ್ಯಗಳಲ್ಲಿ ಜೀವನ ನಡೆಸಿದರು. ೧೯೫೩ರಲ್ಲಿ ಅವರು ಪುದುಚೇರಿಗೆ ಹಿಂದಿರುಗಿ ಶ್ರೀ ಮಾತೆಯವರ ಆಶ್ರಯದಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದರು. ಶ್ರೀ ಮಾತೆಯವರೇ ಇವರಿಗೆ ಸತ್ಪ್ರೇಮ್ ಎಂಬ ಹೆಸರನ್ನು ಕೊಟ್ಟದ್ದು. ಶ್ರೀ ಮಾತೆಯವರ ದೇಹಾಂತದ ನಂತರ ಅವರು ನಂದಗ್ರಾಮಕ್ಕೆ ತೆರಳಿ ಅಲ್ಲಿಯೇ ತಮ್ಮ ಜೀವನದ ಕಡೆಯವರೆಗೂ ನೆಲೆಸಿದರು.

ವಾಙ್ಮಯ[ಬದಲಾಯಿಸಿ]

ಸತ್ಪ್ರೇಮ್ ಶ್ರೀ ಅರವಿಂದರ ಮತ್ತು ಶ್ರೀ ಮಾತೆಯವರ ವಿಷಯಕ ಅನೇಕ ಕೃತಿಗಳನ್ನು ರಚಿಸಿದರು. ಶ್ರೀ ಅರವಿಂದರ ಜೀವನ ಮತ್ತು ಯೋಗದ ವಿಷಯದ ಪುಸ್ತಕವಾದ 'ಶ್ರೀ ಅರವಿಂದರು ಅಥವಾ ಪ್ರಜ್ಙೆಯ ಸಾಹಸ' ವನ್ನು ಮತ್ತು 'ಅತೀತ ಮಾನುಷತೆಯೆಡೆಗೆ' ಎಂಬ ಪ್ರಬಂಧವನ್ನು ಶ್ರೀ ಮಾತೆಯವರ ಮಾರ್ಗದರ್ಶನದಡಿ ಬರೆದರು. ಅದಲ್ಲದೆ, ಶ್ರೀ ಮಾತೆಯವರೊಡನೆ ನಡೆಸಿದ್ದ ಸಂಭಾಷಣೆಗಳ ಧ್ವನಿಸುರುಳಿಗಳನ್ನು ಸಂಕಲಿಸಿ ಸಂಪಾದಿಸಿ 'ಮದರ್ಸ್ ಅಜೆಂಡಾ' ಎಂಬ ೧೩ ಸಂಪುಟ ಶ್ರೇಣಿಯಾಗಿ ಪ್ರಕಟಿಸಿದರು. ಮತ್ತು ಅವರು ಶ್ರೀ ಮಾತೆಯವರ ಜೀವನ ಮತ್ತು ಸಾಧನೆಗಳ ಕಥೆಯನ್ನು ಮೂರು ಸಂಪುಟಗಳಲ್ಲಿ ಸಂಗ್ರಹಿಸಿದರು. ತಮ್ಮದೇ ಆದ ಯೋಗ ಸಾಧನೆಯ ವಿಷಯವಾಗಿಯೂ ಕೆಲವು ಗ್ರಂಥಗಳನ್ನು ಬರೆದಿರುವರು: 'ಪೃಥ್ವಿಯ ಬಂಡಾಯ', ವಿಕಸನ -೨, ಮಣಿಯದವನೊಬ್ಬನ ಪತ್ರಗಳು (ಆತ್ಮಕಥನಾತ್ಮಕ ಪ್ರತ್ರಗಳ ಸಂಕಲನ), ಭವಿಷ್ಯದ್ದರ್ಶನದ ಕಥೆಗಳು (ಯೋಗ ಸಾಧನೆಯ ಟಿಪ್ಪಣಿಗಳು).

ಅವರು ಕೆಲವು ಕಥೆ-ಕಾದಂಬರಿಗಳನ್ನೂ ಕೂಡ ರಚಿಸಿರುವರು: 'ಪೃಥ್ವಿಶರೀರೋದ್ಭೂತ ಅಥವಾ ಸಂನ್ಯಾಸಿ', 'ವಲಸಿಗ' (ಗ್ರಿಂಗೋ), ಕೀಲಿ ಕಥೆಗಳು, ಇತ್ಯಾದಿ.