ಸಂಜುಕ್ತ ಪಾಣಿಗ್ರಾಹಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sanjukta Panigrahi
ಚಿತ್ರ:Sanjukta Panigrahi, (1944-1997).jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(೧೯೪೪-೦೮-೨೪)೨೪ ಆಗಸ್ಟ್ ೧೯೪೪
Berhampur, Ganjam District, Orissa
ನಿಧನ June 24, 1997(1997-06-24) (aged 52)
Bhubaneshwar, Orissa.
ವೃತ್ತಿ Indian classical dancer, choreographer
ವರ್ಷಗಳು ಸಕ್ರಿಯ 1950s- 1997
ಪತಿ/ಪತ್ನಿ Raghunath Panigrahi

ಸಂಜುಕ್ತ ಪಾಣಿಗ್ರಾಹಿ (೨೪ ಆಗಸ್ಟ್ ೧೯೪೪ – ೨೪ ಜೂನ್ ೧೯೯೭) [೧] ಭಾರತದ ನೃತ್ಯಗಾತಿಯಾಗಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಒಡಿಸ್ಸಿಯ ಅತೀಮುಖ್ಯ ಪ್ರತಿಪಾದಕಿ. ಸಂಜುಕ್ತ ಕಿರಿಯ ವಯಸ್ಸಿನಲ್ಲೇ ಈ ಪ್ರಾಚೀನ ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿ ಆ ನೃತ್ಯದ ಮಹಾ ಪುನಶ್ಚೇತನಕ್ಕೆ ಖಾತರಿ ನೀಡಿದ ಪ್ರಥಮ ಒರಿಯ ಬಾಲಕಿಯಾಗಿದ್ದರು.[೨][೩]

ನೃತ್ಯಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅವರ ಕೊಡುಗೆಯನ್ನು ಗುರುತಿಸಿ, ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ(೧೯೭೫ )ನೀಡಿ ಗೌರವಿಸಲಾಯಿತು. ಅವರು ೧೯೭೬ರಲ್ಲಿ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿಪುರಸ್ಕೃತರಾಗಿದ್ದಾರೆ.

ಭಾರತದ ವಿವಿಧ ಭಾಗಗಳಲ್ಲಿ ಒಡಿಸ್ಸಿ ಪ್ರದರ್ಶನಗಳನ್ನು ನೀಡಿದ್ದಲ್ಲದೇ, ವಿವಿಧ ರಾಷ್ಟ್ರಗಳಿಗೆ ಸರ್ಕಾರದ ಸಾಂಸ್ಕೃತಿಕ ನಿಯೋಗದ ಭಾಗವಾಗಿದ್ದಾರೆ. ಇವುಗಳಲ್ಲಿ ಅಮೇರಿಕಾ ಮತ್ತು ಫಿಲಿಪೈನ್ಸ್ (೧೯೬೯ ), ಯುನೈಟೆಡ್ ಕಿಂಗ್ಡಮ್ (ಬ್ರಿಟನ್)(೧೯೮೩ ), ಇಸ್ರೇಲ್, ಗ್ರೀಸ್‌ನ ಡೆಲ್ಫಿ ಅಂತಾರಾಷ್ಟ್ರೀಯ ಉತ್ಸವ(೧೯೮೯) ಸೇರಿವೆ. ಅವರು ಫ್ರಾನ್ಸ್‌ನಲ್ಲಿ ಕೂಡ ೧೧ ವಾರಗಳ ಕಾಲ ಪ್ರದರ್ಶನ ನೀಡಿದ್ದು, ಪ್ಯಾರಿಸ್‌ನ ಅಂತಾರಾಷ್ಟ್ರೀಯ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದಾರೆ.

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಅವರು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಬೆಹರಾಂಪುರದಲ್ಲಿ ಜನಿಸಿದರು. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಅಭಿರಾಂ ಮಿಶ್ರಾ ಮತ್ತು ಶಕುಂತಲಾ ಮಿಶ್ರಾ ಅವರಿಗೆ ಜನಿಸಿದರು.[೪]

ಅವರು ಚಿಕ್ಕ ಮಗುವಾಗಿದ್ದಾಗ, ತರಕಾರಿ ಕುಯ್ಯುವ ಅಥವಾ ಸೌದೆಯನ್ನು ಚೂರುಮಾಡುವ ಶಬ್ದ ಮುಂತಾದ ಯಾವುದೇ ಲಯಬದ್ಧ ಶಬ್ಬಕ್ಕೆ ಸಹಜಲಬ್ಧ ಜ್ಞಾನದಿಂದ ನೃತ್ಯ ಮಾಡುತ್ತಿದ್ದರು. ಅವರ ತಾಯಿ ಬಾರಿಪಾದಾ ಮೂಲದವರಾಗಿದ್ದು, ದೀರ್ಘಕಾಲದವರೆಗೆ ಚೌ ಜಾನಪದ ನೃತ್ಯವನ್ನು ಪೋಷಿಸುತ್ತಿದ್ದ ಕುಟುಂಬಕ್ಕೆ ಅವರು ಸೇರಿದ್ದಾರೆ. ಅವರು ತಮ್ಮ ಪುತ್ರಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿದರು ಮತ್ತು ಸಂಜುಕ್ತ ತಂದೆ ಅಭಿರಾಂ ಮಿಶ್ರಾ ಅವರ ಆರಂಭದ ವಿರೋಧದ ನಡುವೆಯೂ ಪುತ್ರಿಗೆ ಪ್ರೋತ್ಸಾಹ ನೀಡಿದರು. ತಂದೆಯ ವಿರೋಧಕ್ಕೆ ಕಾರಣವೇನೆಂದರೆ ಅಂದಿನ ದಿನಗಳಲ್ಲಿ ಈ ರೀತಿಯ ನೃತ್ಯವನ್ನು ಸಾಮಾನ್ಯವಾಗಿ ಮಹಾರಿಸ್ ಎಂದು ಕರೆಯುವ ದೇವಸ್ಥಾನದಲ್ಲಿ ಹಾಡುವ ಬಾಲಕಿಯರು ಪ್ರದರ್ಶಿಸುತ್ತಿದ್ದರು. ಪುರುಷ ನರ್ತಕರನ್ನು ಗೋತಿಪುಯಾಸ್ ಎಂದು ಕರೆಯುತ್ತಾರೆ. ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ದೇವದಾಸಿಯರಂತೆ ಈ ಬಾಲಕಿಯರು ಜೀವನ ಸಾಗಿಸುತ್ತಿದ್ದರು.

ತರಬೇತಿ[ಬದಲಾಯಿಸಿ]

ಅವರ ತಾಯಿಯ ಉಪಕ್ರಮದಿಂದ ನಾಲ್ಕು ವರ್ಷದ ವಯಸ್ಸಿನಲ್ಲೇ ಗುರು ಕೇಳುಚರಣ್ ಮೊಹಾಪಾತ್ರಾ ಅವರಿಂದ ಅವರು ನೃತ್ಯ ಕಲಿಯಲು ಆರಂಭಿಸಿದರು. ಅವರು ೧೯೫೦ -೫೩ರ ಸಂದರ್ಭದಲ್ಲಿ ಕ್ರಮವಾಗಿ ಮೂರು ವರ್ಷಗಳ ಕಾಲ ಬಿಸುಬಾ ಮಿಲನ್ ಅವರಿಂದ ಅತ್ಯುತ್ತಮ ಬಾಲ ಕಲಾವಿದೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರು ವರ್ಷ ವಯಸ್ಸಿನ ಬಾಲಕಿಯಾಗಿದ್ದಾಗ ಅವರು ನೀಡಿದ ಒಂದು ಪ್ರದರ್ಶನದಲ್ಲಿ ವೇದಿಕೆಯನ್ನು ಬಿಡಲು ನಿರಾಕರಿಸಿ, ನೃತ್ಯದ ವೇಳೆ ಮುಗಿದ ನಂತರವೂ ಚೈತನ್ಯಶಾಲಿಯಾಗಿ ಪ್ರದರ್ಶನ ಮುಂದುವರಿಸಿದರು. ಅವರ ತಾಯಿ ನೃತ್ಯ ನಿಲ್ಲಿಸೆಂದು ಕೂಗಿದ್ದಲ್ಲದೇ ಪುಸಲಾಯಿಸಿದರು. ಒಂಭತ್ತು ವರ್ಷ ವಯಸ್ಸಿನ ಬಾಲಕಿಯಾಗಿದ್ದಾಗ, ಕೊಲ್ಕತ್ತಾದ ಮಕ್ಕಳ ಲಿಟಲ್ ಥಿಯೇಟರ್‌ನ ವಾರ್ಷಿಕ ಉತ್ಸವದಲ್ಲಿ ಪ್ರದರ್ಶನ ನೀಡಿದರು.[೫]

ಅವರು ೧೯೫೨ರ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದರು. ಈ ಯಶಸ್ಸಿನಿಂದ ಪ್ರೋತ್ಸಾಹಿತರಾದ ಅವರ ತಂದೆತಾಯಿಗಳು ಚೆನ್ನೈನ ಕಲಾಕ್ಷೇತ್ರದಲ್ಲಿ ಉತ್ತಮ ನೃತ್ಯ ತರಬೇತಿ ಪಡೆಯುವ ಸಲುವಾಗಿ ಕಳುಹಿಸಲು ನಿರ್ಧರಿಸಿದರು. ಅಲ್ಲಿ ಅವರು ರುಕ್ಮಿಣಿ ದೇವಿ ಅರುಂಡೇಲ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪಾಠಗಳನ್ನು ಆರಂಭಿಸಿದರು.

ಮುಂದಿನ ಆರು ವರ್ಷಗಳ ಕಾಲ ಅವರು ಅಲ್ಲಿ ಉಳಿದರು ಮತ್ತು ತರುವಾಯ ಕಥಕ್ಕಳಿಯನ್ನು ಎರಡನೇ ವಿಷಯವಾಗಿ ಮಾಡಿಕೊಂಡು ಭರತನಾಟ್ಯಂನಲ್ಲಿ 'ನೃತ್ಯಪ್ರವೀಣ್' ಡಿಪ್ಲೋಮಾದಲ್ಲಿ ಪದವಿಯನ್ನು ಗಳಿಸಿದರು. ಅದಾದ ನಂತರ, 'ಕಲಾಕ್ಷೇತ್ರ ಬ್ಯಾಲೆಟ್ ಟ್ರೂಪ್' ಸದಸ್ಯೆಯಾಗಿ ಅವರು ಭಾರತ ಮತ್ತು ವಿದೇಶದ ಅನೇಕ ಸ್ಥಳಗಳಲ್ಲಿ ಪ್ರವಾಸ ಮಾಡಿದರು.

೧೪ವರ್ಷ ವಯಸ್ಸಾಗಿದ್ದಾಗ ಅವರು ಒಡಿಶಾಗೆ ವಾಪಸು ಬಂದರು. ಒಡಿಶಾ ರಾಜ್ಯ ಸರ್ಕಾರ ಅವರಿಗೆ ಮುಂಬೈನ ಭಾರತೀಯ ವಿದ್ಯಾ ಭವನ್‌ನಲ್ಲಿ ಗುರು ಹಜಾರಿಲಾಲ್ ಅವರಿಂದ ಕಥಕ್ ನೃತ್ಯಕಲಿಯಲು ವಿದ್ಯಾರ್ಥಿವೇತನವನ್ನು ನೀಡಿತು. ಆದಾಗ್ಯೂ, ಅವರು ಕೋರ್ಸ್ ತ್ಯಜಿಸಿದರು ಮತ್ತು ಒಡಿಸ್ಸಿ ನೃತ್ಯದಲ್ಲಿ ಗಮನ ಕೇಂದ್ರೀಕರಿಸಲು ಒಡಿಶಾಗೆ ಹಿಂತಿರುಗಿದರು.

ವೃತ್ತಿಜೀವನ[ಬದಲಾಯಿಸಿ]

ಎಲ್ಲಕ್ಕಿಂತ ಹೆಚ್ಚಾಗಿ ಜೀವನ ನಡೆಸುವುದಕ್ಕೆ ಸಂಬಂಧಿಸಿದಂತೆ ಆರಂಭಿಕ ವರ್ಷಗಳು ಸಂಜುಕ್ತ ಮತ್ತು ಅವರ ಪತಿಗೆ ಸವಾಲಾಗಿತ್ತು. ೧೯೬೬ರಲ್ಲಿ ಅವರ ಗುರು ಕೇಳುಚರಣ್ ಮಹಾಪಾತ್ರ ಅವರಿಗೆ ಸಂಗೀತ ನಾಟಕ್ ಅಕಾಡೆಮಿ ಪ್ರಶಸ್ತಿ ನೀಡಿ ಪುರಸ್ಕರಿಸಿದಾಗ ಪರಿಸ್ಥಿತಿ ಸುಧಾರಿಸಿತು. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜುಕ್ತ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿದರು. ಅವರ ನೃತ್ಯಪ್ರದರ್ಶನದಿಂದ ಪ್ರೇಕ್ಷಕರು ಪುಳಕಿತರಾದರು. ಹೀಗೆ ಅವರು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಗುರುತು ಮೂಡಿಸಿದರು ಮತ್ತು ಆ ಹಂತದಿಂದ ಹಿಂತಿರುಗಿ ನೋಡಲಿಲ್ಲ.

ಏತನ್ಮಧ್ಯೆ ಅವರ ಪತಿ ಕೂಡ ಅತ್ಯುತ್ತಮ ಗಾಯಕರಾದರು ಮತ್ತು ಅವರ ನೃತ್ಯಪ್ರದರ್ಶನಗಳಿಗೆ ಸಂಗೀತ ನೀಡಲು ಆರಂಭಿಸಿದರು. ಮುಂಬರುವ ದಶಕಗಳಲ್ಲಿ, ಸಂಜುಕ್ತಾ-ರಘುನಾಥ್‌ದ್ವಯರು ಪ್ರೇಕ್ಷಕರನ್ನು ತಮ್ಮ ಪ್ರದರ್ಶನದ ಮೂಲಕ ಪುಳಕಿತಗೊಳಿಸಿದರಲ್ಲದೇ ಯಾಮಿನಿ-ಜ್ಯೋತಿಸ್ಮತಿ ದ್ವಯರನ್ನು ಕೂಡ ಮೀರಿಸಿದರು ಮತ್ತು ಜಂಟಿಯಾಗಿ ೧೯೭೬ರಲ್ಲಿ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.

ಸಂಜುಕ್ತ ಗುರು ಕೇಳುಚರಣ್ ಮಹಾಪಾತ್ರ ಅವರ ಮಹಾ ಶಿಷ್ಯೆಯಾಗಿ ಹೆಸರು ಪಡೆದರು ಮತ್ತು ಅವರು ಭಾರತದ ಉದ್ದಗಲಕ್ಕೂ ಸಂಚರಿಸಿ, ಒಟ್ಟಿಗೆ ಪ್ರದರ್ಶನ ನೀಡಿದರು ಹಾಗು ಬಹುಮಟ್ಟಿಗೆ ಕ್ಷೀಣಿಸಿದ್ದ ಒಡಿಸ್ಸಿಯ ನೃತ್ಯಸ್ವರೂಪವನ್ನು ಜನಪ್ರಿಯಗೊಳಿಸಿದರು. ಇದರಿಂದಾಗಿ ಇಂದು ಇವರಿಬ್ಬರನ್ನೂ ನೃತ್ಯಸ್ವರೂಪದ ಸಮಾನ ಪುನರುಜ್ಜೀವಕರು ಎಂದು ಪರಿಗಣಿಸಲಾಗಿದೆ.[೬]

ನೃತ್ಯ ಶೈಲಿ[ಬದಲಾಯಿಸಿ]

ಸಂಜುಕ್ತ ಪಾಣಿಗ್ರಾಹಿ ಇಟಲಿಯ ಬೊಲೊಗ್ನಾದ ಮಾನವಶಾಸ್ತ್ರದ ಅಂತಾರಾಷ್ಟ್ರೀಯ ನಾಟಕ ಶಾಲೆಯಲ್ಲಿ ೧೯೮೬, ೧೯೯೦ ಮತ್ತು ೧೯೯೨ರಲ್ಲಿ ಸ್ವಲ್ಪ ಕಾಲ ಕಳೆದು ಸಣ್ಣ ಕೋರ್ಸ್‌ಗಳಲ್ಲಿ ಬೋಧನೆ ನೀಡಿದರು ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಒಡಿಸ್ಸಿ ನೃತ್ಯ ಪ್ರದರ್ಶಿಸುವ ಮೂಲಕ ಅದರ ಜಾಗತಿಕ ಜನಪ್ರಿಯತೆಯನ್ನು ಹೆಚ್ಚಿಸಿದರು.[೭]

ಸಂಜುಕ್ತ ಅವರ ಶ್ರೇಷ್ಠತೆಯು 'ನೃತ್ತಾ' ಅಥವಾ ಶುದ್ಧ ನೃತ್ಯವಾಗಿದ್ದು, ಅದರಲ್ಲಿ ಅವರು ಮಹೋನ್ನತ ಪ್ರದರ್ಶನ ನೀಡಿದರು. ಸಂಗೀತಗಾರ ಪತಿ ಅವರಿಗೆ ದೊಡ್ಡ ಅನುಕೂಲವಾಗಿದ್ದು, ಪತಿಯ ಸತತ ಉಪಸ್ಥಿತಿಯು ಈ ಪ್ರಕಾರದಲ್ಲಿ ಅವರ ಸಾಮರ್ಥ್ಯವನ್ನು ಕೌಶಲ್ಯದಿಂದ ನಿರ್ವಹಿಸಲು ನೆರವಾಯಿತು. 'ಅಭಿನಯ'ದಲ್ಲಿ ಅವರು ಜಾತ್ರಾ(ಜನಪ್ರಿಯ ಜನಪದ ನಾಟಕದ ಸ್ವರೂಪ) ಮತ್ತು ಭಾವಾತಿರೇಕದ ನಾಟಕದತ್ತ ಹೆಚ್ಚು ಸಲ ತಿರುಗಿಲ್ಲ ಎಂದು ಅಭಿಜ್ಞರು ಮತ್ತು ವಿಮರ್ಶಕರು ಒಪ್ಪಿಕೊಂಡಿದ್ದಾರೆ.

ಸಂಗೀತಗಾರ ಪತಿಯ ಜತೆ ಸೇರಿಕೊಂಡು, ಸಂಜುಕ್ತ ಒಡಿಸ್ಸಿ ನೃತ್ಯದ ಶ್ರೀಮಂತ ಭಂಡಾರವನ್ನು ಬಿಟ್ಟು ಹೋಗಿದ್ದಾರೆ. ಇವುಗಳಲ್ಲಿ ಆಧುನಿಕ ಮತ್ತು ಶಾಸ್ತ್ರೀಯ ಎರಡೂ ಇದ್ದು,ಜಯದೇವರ ಗೀತ ಗೋವಿಂದದಿಂದ ಸುರ್‌ದಾಸ್ಅವರ ಪದಬಾಲಿಗಳನ್ನು ಆಧರಿಸಿದ ಸಾಂಪ್ರದಾಯಿಕ ಸಂಖ್ಯೆಗಳವರೆಗೆ, ತುಳಸಿದಾಸರ ರಾಮಚರಿತಮಾನಸದ ಚೌಪಾಯಿಗಳರೆಗೆ, ವಿದ್ಯಾಪತಿ ಮತ್ತು ರವೀಂದ್ರನಾಥ ಠಾಗೋರ್ಅವರ ಹಾಡುಗಳವರೆಗೆ ಗಮನಾರ್ಹ ಪ್ರದರ್ಶನ, ನಾವೀನ್ಯದ 'ಯುಗ್ಮ-ದ್ವಂದ್ವ':ಪಂಡಿತ ಓಂಕಾರ್ ನಾಥ್ ಠಾಕುರ್ ಅವರ ಶಿಷ್ಯರಾದ ಉತ್ಕಲ ಸಂಗೀತ್ ಮಹಾವಿದ್ಯಾಲಯದ ಪಂಡಿತ್ ದಾಮೋದರ್ ಹೋತಾ ಸಂಯೋಜನೆಯ ರಾಗ ಬಾಗೇಶ್ವರಿಯಲ್ಲಿ ನೃತ್ಯಗಾರ ಮತ್ತು ಸಂಗೀತಗಾರನ ನಡುವೆ ಸಣ್ಣ ಜುಗಲ್‌ಬಂಧಿ ಒಳಗೊಂಡಿದ್ದವು. ಭವ್ಯ 'ಮೋಕ್ಷ ಮಂಗಳಂ' ಅವರ ವೈಯಕ್ತಿಕ ಶೈಲಿಯಾಗಿತ್ತು. ಅದನ್ನು ಅವರು ತಮ್ಮ ಪ್ರದರ್ಶನಗಳನ್ನು ಅತೀ ಸೂಕ್ಷ್ಮ ಲಕ್ಷ್ಯದೊಂದಿಗೆ ಮುಗಿಸಲು ಬಳಸುತ್ತಿದ್ದರು.[೮]

ಹೆಸರಾಂತ ನೃತ್ಯ ವಿಮರ್ಶಕ ಡಾ.ಸುನಿಲ್ ಕೊಥಾರಿ ಅವರ ಪದಗಳಲ್ಲಿ, ಸಂಜುಕ್ತ ಭರತನಾಟ್ಯವನ್ನು ತ್ಯಜಿಸಿದರು ಮತ್ತು ಒಡಿಸ್ಸಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟು ಈ ಪ್ರಕಾರದ ನೃತ್ಯದಲ್ಲಿ ತಮ್ಮ ಶೈಲಿಯನ್ನು ಮೂಡಿಸಿದರು.[೯]

ನಂತರದ ವರ್ಷಗಳು[ಬದಲಾಯಿಸಿ]

ಅವರು ಅನೇಕ ರಾಜ್ಯದ ಸಮಾರಂಭಗಳಲ್ಲಿ ತಮ್ಮ ಪ್ರದರ್ಶನಗಳನ್ನು ಮುಂದುವರಿಸಿದರು. ಅವರ ಪ್ರವರ್ತಕ ಪ್ರಯತ್ನಗಳಿಂದ ಅವರು ಬಹುಮಟ್ಟಿಗೆ ಮರೆತುಹೋದ ಒಡಿಸ್ಸಿ ಶೈಲಿಯ ನೃತ್ಯವನ್ನು ಭಾರತದ ನೃತ್ಯಭಂಡಾರದಲ್ಲಿ ಮುಖ್ಯವಾದ ಸ್ಥಾನಕ್ಕೆ ತಂದರು.

ಸುಮಾರು ನಾಲ್ಕು ದಶಕಗಳವರೆಗೆ ಅವರು ಒಡಿಸ್ಸಿಯ ಅನಭಿಷಿಕ್ತ ಪ್ರಮುಖ ನೃತ್ಯಗಾತಿಯಾಗಿ ಉಳಿದರು. ಅವರು ೧೯೯೭ರ ಜೂನ್ ೨೪ರಂದು ೫೮ನೇ ವರ್ಷ ವಯಸ್ಸಿನಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟರು. ಕೊನೆಯ ವರ್ಷಗಳವರೆಗೆ, ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೂ ,ಅನೇಕ ವರ್ಷಗಳವರೆಗೆ ದೈಹಿಕ ಚೈತನ್ಯ ಅವಕಾಶ ನೀಡುವ ತನಕ ನೃತ್ಯದ ಸುವಾಸನೆಯನ್ನು ಹರಡಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಚೆನ್ನೈನ ಕಲಾಕ್ಷೇತ್ರದಲ್ಲಿ ಅವರಿಗಿಂತ ಹತ್ತು ವರ್ಷಗಳಷ್ಟು ಹಿರಿಯವರಾದ ರಘುನಾಥ್ ಪಾಣಿಗ್ರಾಹಿ ಅವರನ್ನು ಪ್ರೇಮಿಸಿದರು. ಗೀತ ಗೋವಿಂದ ದ ಉತ್ತಮ ಗಾಯಕರಾದ ಅವರು ಚೆನ್ನೈನಲ್ಲಿ ಚಲನಚಿತ್ರ ಸಂಗೀತದ ಭರವಸೆಯ ವೃತ್ತಿಜೀವನವನ್ನು ತ್ಯಜಿಸಿ, ಸಂಜುಕ್ತರ ಪ್ರದರ್ಶನಗಳಲ್ಲಿ ಗಾಯಕರಾಗುವ ಮೂಲಕ ಅವರಿಗೆ ಬೆಂಬಲವಾಗಿ ನಿಂತರು.[೧೦] ಅವರು ೧೬ ವರ್ಷ ವಯಸ್ಸಿನಲ್ಲಿದ್ದಾಗ, ಅವರು ವಿವಾಹವಾದರು ಮತ್ತು ಕಾಲಕ್ರಮೇಣ ಇಬ್ಬರು ಪುತ್ರರಿಗೆ ಜನ್ಮನೀಡಿದರು.[೩]

ಪರಂಪರೆ[ಬದಲಾಯಿಸಿ]

ಸಂಜುಕ್ತ ಅನೇಕ ನೃತ್ಯನೈಪುಣ್ಯದ ವಿದ್ಯಾರ್ಥಿಗಳನ್ನು ಬಿಟ್ಟುಹೋಗಿದ್ದಾರೆ. ಅವರಲ್ಲಿ ನೃತ್ಯಾಲಯ ದ ನಿರ್ದೇಶಕಿ ಡಾ.ಚಿತ್ರಾ ಕೃಷ್ಣಮೂರ್ತಿ(ಪೊಟೊಮ್ಯಾಕ್ ಒಡಿಸ್ಸಿ ಶಾಲೆ)ಮತ್ತು ಆಸ್ಟ್ರೇಲಿಯದಲ್ಲಿ ಅವರ ನಿಷ್ಠ ಶಿಷ್ಯೆ ಮೆಲ್ಬೋರ್ನ್ ನಿವಾಸಿ ಜೊಯೊತಿದಾಸ್ ಅವರು ಸಂಜುಕ್ತಾರ ಒಡಿಸ್ಸಿ ಶೈಲಿಯ ನೃತ್ಯಪ್ರವಾಹವನ್ನು ಕಾಯ್ದುಕೊಳ್ಳುವುದಕ್ಕೆ ಮುಡಿಪಾದ ಭಾರತೀಯ ಶಾಸ್ತ್ರೀಯ ನೃತ್ಯಗಳ ಕಲಾಮಂದಿರ್ ಶಾಲೆಯ ಕಲಾತ್ಮಕ ನಿರ್ದೇಶಕಿ ಮತ್ತು ಶಿಕ್ಷಕಿಯಾಗಿದ್ದರು. ಸಂಜುಕ್ತ ಪಾಣಿಗ್ರಾಹಿ ಅವರನ್ನು ಗುರು ಕೇಳುಚರಮ್ ಮಹಾಪಾತ್ರಾ ಅವರ ಕಲೆಯ ಅವತಾರ ಎಂದು ಪರಿಗಣಿಸಲಾಗಿದೆ.

ಸಂಜುಕ್ತ ಪಾಣಿಗ್ರಾಹಿ ಪ್ರಶಸ್ತಿಗಳು[ಬದಲಾಯಿಸಿ]

ಅವರ ಸಾವಿನ ನಂತರ,ಅವರ ಪತಿ ರಘುನಾಥ್ ಪಾಣಿಗ್ರಾಹಿ ಅವರ ಹೆಸರಿನಲ್ಲಿ ಸಂಜುಕ್ತ ಪಾಣಿಗ್ರಾಹಿ ಸ್ಮಾರಕ ಟ್ರಸ್ಟ್ ಎಂಬ ಟ್ರಸ್ಟೊಂದನ್ನು ೧೯೯೯ರಲ್ಲಿ ಸ್ಥಾಪಿಸಿದರು. ಇದು ಒಡಿಸ್ಸಿ ಶೈಲಿಯ ಉದ್ದೇಶಕ್ಕೆ ಉತ್ತೇಜನ ನೀಡುವುದಾಗಿತ್ತು. ೨೦೦೧ರಿಂದೀಚೆಗೆ ಅವರ ಜನ್ಮ ವಾರ್ಷಿಕೋತ್ಸವದ ಪ್ರತೀ ವರ್ಷ ಅರಳುತ್ತಿರುವ ನೃತ್ಯಗಾರರಿಗೆ ಟ್ರಸ್ಟ್ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಒಡಿಸ್ಸಿ ನೃತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಪರಿಣತಿ ಸಾಧಿಸಿದವರಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ.[೧೧][೧೨]

ಉಲ್ಲೇಖಗಳು/ಆಧಾರ[ಬದಲಾಯಿಸಿ]

  • “ನನಗೆ ಇಬ್ಬರು ಗುರುಗಳಿದ್ದಾರೆ, ಪ್ರತಿಯೊಬ್ಬರೂ ವಿರುದ್ಧ ದೃಷ್ಟಿಕೋನವನ್ನು ಹೊಂದಿದ್ದರು. ರುಕ್ಮಿಣಿ ದೇವಿ ಅರುಂಡೇಲ್ ತಂತ್ರಕ್ಕೆ ಒತ್ತುನೀಡುತ್ತಿದ್ದರು. ಆದರೆ ಗುರು ಕೇಳುಚರಣ್ ಮೊಹಾಪಾತ್ರ ತಂತ್ರವನ್ನು ಮರೆಯುವ ಬಗ್ಗೆ ಒತ್ತಾಯಿಸುತ್ತಿದ್ದರು. ನನಗೆ ಗೊಂದಲವಾಗಿತ್ತು. ಬಹಳ ಕಾಲದ ನಂತರ, ಕಾರ್ಯನಿಷ್ಠೆ ಮತ್ತು ಕಠಿಣ ದುಡಿಮೆಯಿಂದ ತಂತ್ರವು ತಾನೇತಾನಾಗಿ ಅನುಸರಿಸುತ್ತದೆ ಎಂದು ಅರಿವಾಯಿತು.” ಎಂದು ತಮ್ಮ ಶಿಷ್ಯೆ ಜೊಯೊತಿದಾಸ್ ಅವರಿಗೆ ಹೇಳಿದ್ದರು.
  • "ಶಕ್ತಿ [. . .] ಅದು ಪುರುಷ ಅಥವಾ ಸ್ತ್ರೀ ಎರಡೂ ಅಲ್ಲ [. . .]. ಪುರುಷ ಅಥವಾ ಸ್ತ್ರೀ ಯಾವುದೇ ಪ್ರದರ್ಶಕ ಚೈತನ್ಯ ಸೃಷ್ಟಿಸುವ ಸದಾ ಶಕ್ತಿಯಾಗಿದೆ."
[೧೩]

ಸಂಜುಕ್ತ ಪಾಣಿಗ್ರಾಹಿ ಕುರಿತ ಚಿತ್ರಗಳು[ಬದಲಾಯಿಸಿ]

  • ದೇವರುಗಳ ಜತೆ ಮುಖಾಮುಖಿ: ಸಂಜುಕ್ತ ಪಾಣಿಗ್ರಾಹಿ ಜತೆ ಒಡಿಶಾ ನೃತ್ಯ ೧೯೯೯ [೧೪]

ಇವನ್ನೂ ನೋಡಿ[ಬದಲಾಯಿಸಿ]

  • ನೃತ್ಯ ಭಂಗಿಯಲ್ಲಿ ಭಾರತೀಯ ಮಹಿಳೆಯರು

ಉಲ್ಲೇಖಗಳು[ಬದಲಾಯಿಸಿ]

  1. "ಸಂಜುಕ್ತ ಎಟ್ ಒಡಿಸಿವಿಲಾಸ್". Archived from the original on 2016-03-04. Retrieved 2011-01-24.
  2. ಸಂಜುಕ್ತ: ದಿ ಡ್ಯಾನ್ಸ್‌ಯೂಸ್ ಹೂ ರಿವೈವ್ಡ್ ಒಡಿಸ್ಸಿ ಇಂಡಿಯನ್ ಎಕ್ಸ್‌ಪ್ರೆಸ್ , ಜೂನ್ ೨೫, ೧೯೯೭.
  3. ೩.೦ ೩.೧ ಸಂಜುಕ್ತ ಪಾಣಿಗ್ರಾಹಿ, ಇಂಡಿಯನ್ ಡ್ಯಾನ್ಸರ್, 65 ನ್ಯೂಯಾರ್ಕ್ ಟೈಮ್ಸ್ , ಜುಲೈ ೬, ೧೯೯೭.
  4. Publications, Europa (2003). The International Who's Who 2004. Routledge. p. 1281. ISBN 1857432177.
  5. ಸಂಜುಕ್ತ ಪಾಣಿಗ್ರಾಹಿ ಮ್ಯಾಪ್ಸ್ಆಫ್ಇಂಡಿಯ .
  6. ಕೇಳುಚರಣ್ ಮಹಾಪಾತ್ರ ಪ್ರೊಫೈಲ್
  7. "ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಥಿಯೇಟರ್ ಆಂಥ್ರೊಪೊಲಜಿ". Archived from the original on 2007-07-02. Retrieved 2011-01-24.
  8. ಒಡಿಸ್ಸಿ ಡ್ಯಾನ್ಸ್ Archived 2009-04-10 ವೇಬ್ಯಾಕ್ ಮೆಷಿನ್ ನಲ್ಲಿ. ಒಡಿಸ್ಸಿ ನೃತ್ಯ, ಒಡಿಶಾಸರ್ಕಾರ .
  9. ಒಬಿಚುಯರಿ ಬೈ ಡಾ. ಸುನಿಲ್ ಕೊಥಾರಿ[ಶಾಶ್ವತವಾಗಿ ಮಡಿದ ಕೊಂಡಿ]
  10. ಒಡಿಸ್ಸಿ ಎಟ್ ದಿ ಕ್ರಾಸ್‌ರೋಡ್ಸ್ Archived 2007-05-21 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು ,ಮೇ ೧೩, ೨೦೦೭.
  11. ಫರ್ಸ್ಟ್ ಸಂಜುಕ್ತ ಪಾಣಿಗ್ರಾಹಿ ಅವಾರ್ಡ್ ಟೈಮ್ಸ್ ಆಫ್ ಇಂಡಿಯ , ಆಗಸ್ಟ್ ೨೫, ೨೦೦೧.
  12. ಸಂಜುಕ್ತ ಪಾಣಿಗ್ರಾಹಿ ಅವಾರ್ಡ್ಸ್narthaki.com .
  13. ದಿ ಜರ್ನಲ್ ಆಫ್ ರಿಲಿಜಿಯನ್ ಎಂಡ್ ಥಿಯೇಟರ್, 2004
  14. ಎನ್‌ಕೌಂಡರ್ ವಿತ್ ದಿ ಗಾಡ್ಸ್ ವಿತ್ ಸಂಜುಕ್ತ ಪಾಣಿಗ್ರಾಹಿ Archived 2016-03-17 ವೇಬ್ಯಾಕ್ ಮೆಷಿನ್ ನಲ್ಲಿ. ಅವಧಿ ೩೦ ನಿಮಿಷಗಳುರಾಟನ್ ಟೊಮೇಟೊಸ್ .
  • ಇಂದ್ರಾ ಗುಪ್ತಾ, ಇಂಡಿಯಾ`ಸ್ ಮೋಸ್ಟ್ ಇಲ್ಲ್ಯುಸ್ಟ್ರಿಯಸ್ ವುಮೆನ್ ನಿವ್ ಡೆಲ್ಲಿ: ಐಕಾನ್ ಪಬ್ಲಿಕೇಶನ್ಸ್, ೨೦೦೩. ISBN ೮೧-೮೮೦೮೬-೧೯-೩

ಬಾಹ್ಯ ಕೊಂಡಿಗಳು[ಬದಲಾಯಿಸಿ]

ವಿಡಿಯೊ ಕೊಂಡಿಗಳು