ವೃತ್ತಾಂತ ಪತ್ರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೃತ್ತಾಂತ ಪತ್ರಿಕೆ ಇದು ಒಂದು ಕನ್ನಡ ಪತ್ರಿಕೆ ೧೮೮೭ರಲ್ಲಿ ಮೈಸೂರಿನಿಂದ ಪ್ರಕಟವಾಗುತ್ತಿತ್ತು.

ಹಿನ್ನೆಲೆ[ಬದಲಾಯಿಸಿ]

1821ರಿಂದ ಕರ್ನಾಟಕದಲ್ಲಿ ಸೇವೆಯನ್ನು ಪ್ರಾರಂಭಿಸಿದ ವೆಸ್ಲಿಯನ್ ಮಿಶನ್ ಸಂಸ್ಥೆಯು 1836ರಲ್ಲಿ ಒಂದು ಮುದ್ರಣ ಸಂಸ್ಥೆಯನ್ನೂ ಪ್ರಾರಂಭಿಸಿತು. ಕನ್ನಡ ನಿಘಂಟು, ವ್ಯಾಕರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿದೇಶಿಯರಾದ ವಿಲಿಯಂ ರೀವ್, ಡ್ಯಾನಿಯೆಲ್ ಸ್ಯಾಂಡರ್ಸನ್, ಹೆರಾಲ್ಡ್ ಸ್ಪೆನ್ಸರ್, ಜೆ. ಗ್ಯಾರೆಟ್, ಜೆ .ಸ್ಟೀವನ್ಸನ್ ಮುಂತಾದವರ ಕೃತಿಗಳು ಮುದ್ರಣಗೊಂಡದ್ದು ಇದೇ ಮುದ್ರಣಾಲಯದಲ್ಲಿ.

ಪತ್ರಿಕೆ ಚರಿತ್ರೆ[ಬದಲಾಯಿಸಿ]

1887ರಲ್ಲಿ ಪ್ರಾರಂಭಗೊಂಡ “ವೃತ್ತಾಂತ ಪತ್ರಿಕೆ” 1941ರ ವರೆಗೆ ಮುಂದುವರೆದಿದೆ. ವಾರಕ್ಕೊಂದಾವರ್ತಿ ಪ್ರಕಟಗೊಳ್ಳುತ್ತಿದ್ದ ಈ ಪತ್ರಿಕೆಯ ಮೊದಲ ಬೆಲೆ ಒಂದು ದುಡ್ಡಾಗಿದ್ದು ಸುಮಾರು 1500 ಸಾವಿರ ಪ್ರತಿಗಳು ಮಾರಾವಾಗುತ್ತಿತ್ತು. ಪತ್ರಿಕೆ ನಿಂತು ಹೋಗುವ ಸಮಯಕ್ಕೆ ಇದರ ಬೆಲೆ 6 ಕಾಸು ಮತ್ತು ಸುಮಾರು 10,000 ಪ್ರತಿಗಳಷ್ಟು ಮಾರಾಟವಾಗುತ್ತಿತ್ತು. ಪ್ರಾರಂಭದಲ್ಲಿ 4 ಪುಟಗಳಷ್ಟಿದ್ದ ಪತ್ರಿಕೆ ಕೊನೆಯಲ್ಲಿ 10 ಪುಟಗಳೊಂದಿಗೆ ಪ್ರಕಟಗೊಳ್ಳುತ್ತಿತ್ತು. 54 ವರ್ಷಗಳ ಕಾಲ ನಿರಂತರ ಮುದ್ರಣಗೊಳ್ಲುತ್ತಿದ್ದ ಈ ಪತ್ರಿಕೆಯು ಪತ್ರಿಕೋದ್ಯಮ ಚರಿತ್ರೆಯಲ್ಲಿ ಮುಖ್ಯವಾಗಿ ಸೇರಬೇಕಾಗಿದ್ದ ಒಂದು ಪತ್ರಿಕೆಯಾದರೂ ಒಂದೆರಡು ಮಾತುಗಳಿಂದ ದಾಖಲಿಸುವ ಸ್ಥಾನವನ್ನು ಪಡೆದಿದೆ.

ಪತ್ರಿಕೆಯಲ್ಲಿರುವ ವಿಚಾರಗಳ ಶೈಲಿ[ಬದಲಾಯಿಸಿ]

ಹಿಂದೂಸ್ಥಾನದ ವಿಚಾರಗಳು, ಮಹಿಳೆಯರ ಪ್ರಪಂಚ, ಒಳದೇಶದ ವೃತ್ತಾಂತ, ಹಿಂದೂಸ್ಥಾನದ ರಾಜಕೀಯ ವಿಚಾರಗಳು,ಮೈಸೂರು ಗಜೆಟ್ ಸಂಗ್ರಹ, ವಿವಿಧ ಯುದ್ದ ವೃತ್ತಾಂತಗಳು, ಯುರೋಪಿನ ಯುದ್ದ ಸಮಾಚಾರ, ವಿದೇಶ ವರ್ತಮಾನಗಳು, ಮೈಸೂರು ದಿವಾನರ ಉಪನ್ಯಾಸ, ಮಹಾರಾಜರ ವಿವಾಹ ಮಂಟಪವು ಹೀಗೆ ವಿಬಿನ್ನ ರೀತಿಯಲ್ಲಿ ಓ ಪತ್ರಿಕೆಯು ಹೊರಬರುತ್ತಿತ್ತು. ಈ ಪತ್ರಿಕೆಗಳ ಸಂಗ್ರಹಗಳನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ಈ ಪತ್ರಿಕೆಯೊಂದರಲ್ಲೇ ನೂರಾರು ವಿಶಯಗಳ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬಹುದು. 54 ವರ್ಷಗಳ ಕಾಲ ಕರ್ನಾಟಕದಾತ್ಯಂತ ಪ್ರಸಾರದಲಿದ್ದ ವೃತ್ತಾಂತ ಪತ್ರಿಕೆ ಕೊನೆಗೊಳ್ಳುವ ಕಾರಣವನ್ನು ಕೊನೆ ಸಂಚಿಕೆಯಲ್ಲಿ ಹೀಗೆ ವಿವರಿಸಿದ್ದಾರೆ.

ನಮ್ಮ ಜೀವಮಾನದಲ್ಲಿ ನಾವು ಹಿಂದೆಂದೂ ಮಾಡದಿದ್ದ ಬಹುಶಃ ಅತ್ಯಂತ ಕಷ್ಟಕರವೆನಿಸಿದ ಕಾರ್ಯವನ್ನು ಅಂದರೆ ನಮ್ಮಿ “ವೃತ್ತಾಂತ ಪತ್ರಿಕೆ” ಯ ಈ ದಿನದ ಸಂಚಿಕೆಯೇ ಈ ಪತ್ರಿಕೆಯ ಕೊನೇ ಸಂಚಿಕೆಯೆಂಬುದನ್ನು ನಾವು ವಾಚಕರಿಗೆ ಶ್ರುತಪಡಿಸುವ ಕಾರ್ಯವನ್ನು ಇಂದೂ ಮಾಡಬೇಕಾಗಿದೆ. ನಾಲ್ಕುವರೆ ವರ್ಷಗಳ ಹಿಂದೆ ನಾವು ಈ ಪತ್ರಿಕೆಯ 50ನೇ ವಾರ್ಷಿಕೋತ್ಸವವನ್ನು ನಡೆಸಿದಾದ ಪ್ರಕಟಿಸಿದ ಈ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಹಿಂದೆ ಈ ಪತ್ರಿಕೆಯಲ್ಲಿ ಸಂಪಾದಕರಾಗಿದ್ದವರೊಬ್ಬರು ವೃತ್ತಾಂತ ಪತ್ರಿಕೆಯ ಸ್ಥಾಪಕರಾದ ಹೆನ್ರಿ ಹೇಗ್‍ರವರು ಈ 50ತ್ತನೇ ವರ್ಷೊತ್ಸವದ ಸಂಚಿಕೆಯನ್ನು ನೋಡಿದ್ದರೆ ಅವರು ಆಶ್ಚರ್ಯಚಕಿತರಾಗುತ್ತಿದ್ದರಲ್ಲದೆ ಅತ್ಯಂತ ಸಂತೋಷಭರಿತರೂ ಆಗುತ್ತಿದ್ದರೆಂದು ಬರೆದರು.ಆ ಮಹೋತ್ಸವದ ದಿನ ನಾವೆಲ್ಲರೂ ಈ ಪತ್ರಿಕೆಯು ಇನ್ನೂ ಐವತ್ತು ವರ್ಷಗಖ ಕಾಲ ಬಾಳಿ ಬೆಳೆದು ಮೈಸೂರು ಸಂಸ್ಥಾನದ ಪ್ರಜೆಗಳ ಸೇವೆಯನ್ನು ಮಾಡುವುದೆಂದೇ ನಿರೀಕ್ಷಿಸಿಕೊಂಡಿದ್ದೆವು. ಈಪತ್ರಿಕೆಯು ನಿಲ್ಲಬೇಕಾಗಿ ಬಂದುದಕ್ಕೆ ಇಂದಿನ ಯುದ್ದವೇ ಕಾರಣವಾಗಿರುತ್ತದೆ.

ಈ ಪತ್ರಿಕೆಯ ಎರಡನೇ ಐವತ್ತು ವರ್ಷದ ಜೀವನವು ಪ್ರಾರಂಭವಾದಾಗ ಇದನ್ನು ನಾನಾ ಊರುಗಳಲ್ಲಿ ಹಂಚುವವರ ಮತ್ತು ವಾಚಕರ ಸಹಾಯದಿಂದ ಇದರ ಚಂದಾದಾರರ ಸಂಖ್ಯೆ ಎರಡು ವರ್ಷಗಳ ಅವಧಿಯಲ್ಲಿ ಶೇಕಡ ಮೂವತ್ತರಷ್ಟು ಹೆಚ್ಚಿತು. ಅಷ್ಟರಲ್ಲೇ ಯುದ್ದದ ಭೀತಿ ಪ್ರಪಂಚ ಅದ್ಯಂತದಲ್ಲೂ ಹಬ್ಬಿದ್ದುದರಿಂದ ಕಾಗದದ ಬೆಲೆ ಏರಿ ಹೋಯಿತು. ಅದರ ಪರಿಣಾಮವೇನಾಯಿತೆಂದರೆ ನಾವು ಪ್ರಕಟಿಸುತ್ತಿದ್ದ ಹೆಚ್ಚು ಪುಟಗಳಿಂದ ಕೂಡಿದ ಪ್ರತಿಯೊಂದು ಪತ್ರಿಕೆಯ ವಿಕ್ರಯದಿಂದಲೂ ನಮಗೆ ನಷ್ಟವೇ ಆಗಲು ಉಪಕ್ರಮವಾಯಿತು. ಇತ್ತೀಚಿನ ವರ್ಷಗಳಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹಿರಾತುಗಳ ಸಂಖ್ಯೆ ಹೆಚ್ಚಿದಾಗ್ಯೂ ಕಳೆದ ನಾಲ್ಕು ವರ್ಷಗಳಿಂದಲೂ ನಮಗೆ ವರ್ಷವರ್ಷವೂ ಆಗುತ್ತಿರುವ ನಷ್ಟ ಬಹಳ ದುಬಾರಿಯಾಗಿರುತ್ತದೆ. ಮೇಲಾಗಿ ಯುದ್ದಕ್ಕಾಗಿ ಅಪಾರವಾದ ಹಣ ಖರ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮೊದಲಿನಂತೆ ಇಂಗ್ಲಾಂಡಿನಲ್ಲಿರುವ ನಮ್ಮ ಮಿತ್ರರಿಂದ ನಾವು ದ್ರವ್ಯ ಸಹಾಯ ನೀರೀಕ್ಷಿಸುವುದು ನ್ಯಾಯವಾದುಯದಲ್ಲ. ಅವರ ಸಹಾಯವನ್ನು ಬಿಟ್ಟರೆ ನಮ್ಮೀ ಪತ್ರಿಕೆಯನ್ನು ಮುಂದುವರಿಸಲು ಪಾಶ್ಚಿಮಾತ್ಯ ದೇಶದಲ್ಲಾಗಲಿ ಹಿಂದೂಸ್ಥಾನದಲ್ಲಾಗಲಿ ನಮಗೆ ಸಹಾಯ ನೀಡುವವರಾರೂ ಇರುವುದಿಲ್ಲ. ನಮ್ಮ ಖರ್ಚುವೆಚ್ಚಗಳನ್ನು ಕಡಿಮೆಮಾಡಿ ನಮ್ಮ ಆಧಾಯವನ್ನು ಹೆಚ್ಚಿಸುವುದಕ್ಕಾಗಿ ನಮ್ಮ ಕೈಲಾದ ಪ್ರಯತ್ನಗಳನ್ನೆಲ್ಲವನ್ನೂ ಮಾಡಿದೆವು. ಈ ವಿಷಯದಲ್ಲಿ ನಮ್ಮಿಂದ ಮುಂದೇನನ್ನೂ ಮಾಡುವುದು ಸಾದ್ಯವೇ ಇಲ್ಲ. ನಮ್ಮೀ ಪತ್ರಿಕೆಯನ್ನು ನಡೆಸಲು ಈ ರೀತಿಯ ದ್ರವ್ಯದ ಅಭಾವವುಂಟಾದುದರಿಂದ ಮಿಶನ್ ಸಂಘದವರು ಈ ಪತ್ರಿಕೆಯ ಪ್ರಕಟಣೆಯನ್ನು ಈ ವರ್ಷದ ಕೊನೆಯಲ್ಲಿ ಅಂದರೆ ಈ ವಾರ ನಿಲ್ಲಿಸಿಬಿಡಲು ಅತ್ಯಂತ ವ್ಯಸನದಿಂದ ನಿರ್ಧರಿಸಲೇಬೇಕಾಯಿತು. “ವೃತ್ತಾಂತ ಪತ್ರಿಕೆ” ಯು ಯುದ್ದದಿಂದ ಮರಣಕ್ಕೀಡಾಯಿತೆಬುದರಲ್ಲಿ ಸಂದೇಹವಿಲ್ಲ.

ನಮ್ಮೀ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸುವುದು ನಮಗೂ ನಮ್ಮ ವಾಚಕರಿಗೂ ಅತ್ಯಂತ ದುಃಖಕರವಾದ ವಿಷಯವಾದಾಗ್ಯೂ ಇಷ್ಟು ವರ್ಷಕಾಲ ಈ ಸಂಸ್ಥಾನದ ಪ್ರಜೆಗಳಿಗೆ ಇದರ ಮೂಲಕಕ ಸೇವೆಯನ್ನು ಸಲ್ಲಿಸಲು ನಮಗೆ ಅವಕಾಶ ದೊರೆತುದಕ್ಕಾಗಿ ನಾವು ಅತ್ಯಣತ ಕೃತಜ್ಞರಾಗಿದ್ದೇವೆ. ಈ ಪತ್ರಿಕೆಯ ಸಂಪಾದಕರಾಗಿದ್ದವರ ಪೈಕಿ ಅತ್ಯಂತ ದಕ್ಷರಾದ ಥಾಮ್ಸನ್‍ರವರು ಸುಮಾರು 40 ವರ್ಷಗಳ ಹಿಂದೆ ನಮ್ಮೀ ಪತ್ರಿಕೆಯ ವಿಷಯದಲ್ಲಿ ಈ ರೀತಿ ಬರೆದಿದ್ದರು. “ಕ್ರೈಸ್ರ ವರ್ತಮಾನ ಪತ್ರಿಕೆಯು ತನ್ನದೇ ಆದ ಉದಾತ್ತ ಧ್ಯೇಯಗಳನ್ನು ಪರಿಪಾಲಿಸಬೇಕು. ಇದು ಜನತೆಯ ನ್ಯಾಯಬದ್ದವಾದ ಕುಂದುಕೊರತೆಗಳ ಪರವಾಗಿ ನಿರ್ಭೀತಿಯಿಂದ ವಾದಿಸುವುದಕ್ಕೆ ಹೆದರುವುದಿಲ್ಲ. ಅಲ್ಲದೆ ಸರ್ಕಾರವು ನಿಷ್ಕಾರಣವಾಗಿ ದೂಷಣೆಗೆ ಗುರಿಯಾಗಿದ್ದಾಗ ಅದನ್ನು ಪ್ರತಿಭಟಿಸದೆ ಆಲಸ್ಯದಿಂದಿರುವುದೂ ಇಲ್ಲ. ಮಾನಾಪಗಳಲ್ಲಿಯೂ ಕೀರ್ತಿ ಅಪಕೀರ್ತಿಗಳಲ್ಲಿಯೂ ಕ್ರೈಸ್ತರ ವರ್ತಮಾನ ಪತ್ರಿಕೆಯು ತಾನು ಜನರ ನೈಜ್ಯವಾದ ಹಿತಮಿತ್ರನೆಂಬುದನ್ನು ಸ್ಥಾಪಿಸಿಕೊಳ್ಳಬೇಕು. “ವೃತ್ತಾಂತ ಪತ್ರಿಕೆ”ಯು ಮೈಸೂರು ಸರ್ಕಾರದ ಮಿತ್ರ ಪಕ್ಷಕ್ಕೆ ಸೇರಿದುದೆಂದು ಜನರು ಒಂದು ನಾರಿ ಅಪೀಕ್ಷಿಸಿದ್ದಾರೆ. ಮತ್ತೊಂದು ಬಾರಿ ಇದು ಬ್ರಿಟಿಷರಿಗೆ ಸಂಬಂಧಪಟ್ಟದ್ದೆಲ್ಲವನ್ನೂ ಸುಮ್ಮನೆ ಸ್ತುತಿಸುವ ಹೊಗಳುಬಟನೆಂದು ಹೇಳಿದ್ದಾರೆ. ಅದಾಗ್ಯೂ ಈ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯು ಸತ್ಯವಾದುದೇ ಆಗಿರಬೇಕೆಂಬ ನಂಬಿಕೆ ಜನರಲ್ಲಿ ಹರಡಿರುತ್ತದೆ”.

ಥಾಮ್ಸನ್‍ರವರು ಯಾವ ಉದಾತ್ತ ಧ್ಯೇಯಗಳನ್ನಿಟ್ಟುಕೊಂಡು ಈ ಪತ್ರಿಕೆಯನ್ನು ನಡೆಸುತ್ತಿದ್ದರೋ ಅದೇ ಧ್ಯೇಯಗಳನ್ನು ಈ ಪತ್ರಿಕೆಯ ಐವತ್ತು ವರ್ಷಗಳ ಜೀವಾವದಿಯಲ್ಲಿ ಅದರ ಇತರ ಸಂಪಾದಕರೂ ಸಹ ಅನುಸಿರಿಸಿಕೊಂಡು ನಾವು ದೃಡವಾಗಿ ಹೇಳುತ್ತೇವೆ. ಮುಖ್ಯವಾಗಿ ದೇಶದಲ್ಲೆಲ್ಲಾ ಸುಳ್ಳು ಸುದ್ದಿಗಳೂ ಉತ್ಪ್ರೇಕ್ಷಿತ ಸಮಾಚಾರಗಳೂ ವಾಯುವೇಗದಿಂದ ಹಬ್ಬುತ್ತಿರುವು ಯುದ್ದಕಾಲದಲ್ಲಿ ನಾವು ವಾಸ್ತವಾಂಶಗಳನ್ನೇ ಹೊರತು ಮತ್ತೇನನ್ನೂ ಪ್ರಕಟಿಸದಂತೆ ಪ್ರಯತ್ನ ಪಟ್ಟಿರುತ್ತೇವೆ. ದೇವರು ನಮ್ಮ ಪಕ್ಷದಲ್ಲಿದ್ದರೆ ನಮಗೆ ಸೋಲಾಗುವುದು ಕೇವಲ ಅಸಾದ್ಯವೆಂದು ಭರವಸೆ ಕೊಡುವುದರ ಮೂಲಕ ಜನಗಳ ಮನಸ್ಸನ್ನು ಸ್ತಿಮಿತಕ್ಕೆ ತರಲು ಪ್ರಯತ್ನಪಟ್ಟಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ನಾವು “ವೃತ್ತಾಂತ ಪತ್ರಿಕೆ” ಯನ್ನು ಒಂದು ಕಡೆ ಪ್ರಗತಿ ಮನೋಭಾವವುಳ್ಳ ರಾಜಕೀಯ ಪಕ್ಷದವರಿಗೂ ಸಂಸ್ಥಾನದ ಸರಕಾರಕ್ಕೂ , ಮತ್ತೊಂದು ಕಡೆ ರಾಷ್ಟ್ರನಾಯಕರಿಗೂ ಬ್ರಿಟಿಷ್ ಸರ್ಕಾರಕ್ಕೂ ಸ್ನೇಹ ಸೌಹಾರ್ಧವನ್ನು ಬೆಳೆಸುವ ಸಾಧನವನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದೇವೆ. ಪ್ರಚಲಿತ ವಿಷಯಗಳನ್ನು ಕುರಿತು ಮಹಾಜನರೇ ನ್ಯಾಯಬದ್ಧವಾದ ತೀರ್ಮಾನಕ್ಕೆ ಬರಲು ಆಯಾ ವಾರದ ಸುದ್ದಿಗಳನ್ನು ಖರಾರಾಗಿಯೂ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆಯೂ ಪ್ರಕಟಿಸುವುದೇ ನಮ್ಮ ಧ್ಯೇಯವಾಗಿದ್ದಿತು. ನಮ್ಮ ವಾಚಕರು ಇದುವರೆಗೆ ನಮಗೆ ಕೊಟ್ಟಿರುವ ಪ್ರೋತ್ಸಾಹಕ್ಕಾಗಿಯೂ ತೋರಿರುವ ಸಹತಾಪಕ್ಕಾಗಿಯೂ ನಾವು ಅವರೆಲ್ಲರಿಗೂ ಹೃತ್ಪೂರ್ವಕ ವಾದ ವಂದನೆಗಳನ್ನರ್ಪಿಸುತ್ತೇವೆ.

ಕನ್ನಡ ಪತ್ರಿಕೋದ್ಯಮ ಚರಿತ್ರೆಯನ್ನು ಆರಂಭ, ಮದ್ಯಕಾಲೀನ, ಆಧುನಿಕ ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ ಅದ್ಯಯನ ಮಾಡ ಬಹುದು. ಆಧುನಿಕ ವಿಭಾಗದ ಪತ್ರಿಕೆಗಳು ತಂತ್ರಜ್ಞಾನವನ್ನು ಬಳಸಿಕೊಂಡು ಮುದ್ರಣಗೊಂಡು ತಂತ್ರಜ್ಜಾನದ ಮೂಲಕವೇ ದಾಖಲೀಕರಗೊಂಡಿದೆ. ಆದರೆ ಮೊದಲ ಎರಡು ವಿಭಾಗಗಳ ಪತ್ರಿಕೆಗಳ ಪತ್ರಿಕೆಯ ಸ್ವರೂಪ, ಚರಿತ್ರೆಗಳನ್ನು ಅಭ್ಯಸಿಸಲು ಬೆರಳೆಣಿಕೆಯ ಪತ್ರಿಕೆಗಳು ಮಾತ್ರ ಸಿಗುತ್ತವೆ. ಯಾಕಂದರೆ ನಮ್ಮಲ್ಲಿ ದಾಖಲೀಕರಣ ಮಾಡುವ ಹವ್ಯಾಸವೇ ಇಲ್ಲವೋ ಎಂಬಂತಿದೆ. ಹಲವು ಪತ್ರಿಕೆಗಳ ಸಮಗ್ರ ಸಂಶೋಧನೆ ನಡೆದು ಹಲವು ಕೃತಿಗಳಾಗಿವೆ. ಕನ್ನಡ ಪತ್ರಿಕಾ ಸೂಚಿಯೇ ಡಾ ಹಾವನೂರರಿಂದ ಸಂಗ್ರಹಗೊಂಡು ಪ್ರಕಟಗೊಂಡು ಇಷ್ಟು ಪತ್ರಿಕೆಗಳು ನಮ್ಮ ಕನ್ನಡದ್ದಾ ಎಂದೆಣಿಸುತ್ತದೆ. ಇಂತ ಕಾರ್ಯಗಳನ್ನು ಮಾಡಬೇಕಾದರೆ ನಮ್ಮಲ್ಲಿ ದಾಖಲೀಕರಣದ ಮನಸ್ಸು ಮೂಡಿ ಬರಬೇಕು. ಇದಕ್ಕಾಗಿ ಪತ್ರಿಕಾ ಅಕಾಡೆಮಿ, ವಿಶ್ವವಿದ್ಯಾಲಯಗಳು ಮುಂದೆ ಬರಬೇಕಾಗಿದೆ. ಮೊದಲಿನದ್ದೆಲ್ಲ ಬೇಡ ಈಗ ಮಾಡುವುದೇ ಸರಿ, ಈಗ ಹೊಸ ಯುಗ ಅನ್ನುವವರೂ ಇದ್ದಾರೆ. ಹೊಸ ಯುಗ ಸರಿ ಆದರೆ ಸಂಶೋಧನೆ ಮಾಡಬೇಕಾದರೆ ಹಳೆಯದು ಬೇಕೆಬೇಕು. ಆಗ ಮಾತ್ರ ಹಳೆಯದಿದ್ದರೆ ಮಾತ್ರ ಹೊಸತು ಸಾದ್ಯ ಎನ್ನುವ ಅರಿವು ನಮಗಾಗುತ್ತದೆ. ಅದ್ದರಿಂದ ಹಳೆಯ ಪತ್ರಿಕಾ ಸಾಹಿತ್ಯದ ಚರಿತ್ರೆಯ ದಾಖಲೀಕರಣಕ್ಕೆ ನಾವೆಲ್ಲ ಕೈ ಜೋಡಿಸೋಣ.

ಉಲ್ಲೇಖ[ಬದಲಾಯಿಸಿ]