ರಾಧೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಧಿಕಾ, ರಾಧಾರಾಣಿ ಮತ್ತು ರಾಧಿಕಾ ರಾಣಿ ಎಂದೂ ಕರೆಯಲ್ಪಡುವ ರಾಧೆಯನ್ನು ಬಹುತೇಕ ಯಾವಾಗಲೂ ಕೃಷ್ಣನ ಪಕ್ಕದಲ್ಲಿ ಚಿತ್ರಿಸಲಾಗುತ್ತದೆ ಮತ್ತು ಪ್ರಮುಖವಾಗಿ ರಾಧೆಯನ್ನು ಮೂಲ ದೇವತೆ ಅಥವಾ ಶಕ್ತಿಯೆಂದು ಪರಿಗಣಿಸುವ ಇಂದಿನ ವಲ್ಲಭ ಹಾಗೂ ಗೌಡೀಯ ವೈಷ್ಣವ ಪಂಥಗಳ ದೇವತಾಶಾಸ್ತ್ರದಲ್ಲಿ ಚಿತ್ರಿಸಲಾಗಿದೆ. ನಿಂಬಾರ್ಕ ಸಂಪ್ರದಾಯದಲ್ಲಿ ರಾಧೆಯು ಪ್ರಧಾನ ಪೂಜಾ ದೇವತೆ ಕೂಡ ಆಗಿದ್ದಾಳೆ, ಏಕೆಂದರೆ ಈ ಸಂಪ್ರದಾಯದ ಸ್ಥಾಪಕ ನಿಂಬಾರ್ಕನು ರಾಧೆ ಹಾಗೂ ಕೃಷ್ಣ ಒಟ್ಟಾಗಿ ಪರಮ ಸತ್ಯವನ್ನು ನಿರ್ಮಿಸುತ್ತಾರೆ ಎಂದು ಘೋಷಿಸಿದನು.

ಕೃಷ್ಣ ಮತ್ತು ರಾಧೆ ಬಾಲ್ಯದಲ್ಲಿ ಸ್ನೇಹಿತರಾಗಿದ್ದರು. ವೃಂದಾವನದಲ್ಲಿ ರಾಸಲೀಲೆ ಮಾಡಿದ ಗೋಪಿಕೆಯರಲ್ಲಿ ರಾಧೆಯು ಒಬ್ಬಳಾಗಿದ್ದಳು. ಗೋಪಿಕೆಯರೆಲ್ಲರೂ ಕೃಷ್ಣನಿಗೆ ಹತ್ತಿರವಾಗಿದ್ದರೂ ರಾಧೆಯನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದ. ಕೃಷ್ಣ ಕೊಳಲನ್ನು ನುಡಿಸುವಾಗ ರಾಧೆ ಹಾಡುತ್ತಾ ನೃತ್ಯ ಮಾಡುತ್ತಿದ್ದಳು.ಆದರೆ ಈ ಪ್ರೀತಿಯು ಪ್ರೌಢತೆಗೆ ಹೋಗಲೇ ಇಲ್ಲ. ಯಾಕೆಂದರೆ 12ನೇ ವಯಸ್ಸಿನಲ್ಲಿ ಕೃಷ್ಣನು ವೃಂದಾವನವನ್ನು ಬಿಟ್ಟು ಗುರುಕುಲ ಸೇರಲು ಹೋದ ಮತ್ತು ಮಥುರಾದಲ್ಲಿದ್ದ ತನ್ನ ಮಾವ ಕಂಸನ ವಧಿಸಲು ಹೋದ.ಕೆಲವೊಂದು ಪುರಾಣಗಳಲ್ಲಿ ಇರುವಂತೆ ರಾಧೆಯ ಮದುವೆಯು ಅತ್ಯಂತ ಶ್ರೀಮಂತ ವ್ಯಕ್ತಿ ಅಭಿಮನ್ಯು ಜತೆ ನಡೆದಿದೆ ಎಂದು ಹೇಳಲಾಗಿದೆ. ಕೆಲವು ಪುರಾಣಗಳಲ್ಲಿ ರಾಧೆಯ ಪತಿಯ ಹೆಸರು ಚಂದ್ರಹಾಸ ಎಂದು ತಿಳಿದುಬರುತ್ತದೆ. ವೃಂದಾವನದಲ್ಲಿ ರಾಧಾ-ಕೃಷ್ಣನ ಮದುವೆಯು ತುಂಬಾ ಗೌಪ್ಯವಾಗಿ ನಡೆದಿತ್ತು ಮತ್ತು ಬ್ರಹ್ಮನು ಪೌರೋಹಿತ್ಯವನ್ನು ವಹಿಸಿದ್ದ ಎಂದು ಕೆಲವೊಂದು ಪುರಾಣಗಳು ಹೇಳುತ್ತವೆ. ಆದರೆ ಇದು ಪುರಾಣಗಳಲ್ಲಿ ಹೆಚ್ಚಿನ ಮಹತ್ವನ್ನು ಪಡೆದುಕೊಂಡಿಲ್ಲ.

ರಾಧೆ ಮತ್ತು ಕೃಷ್ಣನ ಪ್ರೀತಿಯು ದೈಹಿಕ ಸಂಬಂಧವನ್ನು ಮೀರಿದಾಗಿತ್ತು ಎನ್ನುವ ಸಂದೇಶವನ್ನು ಸಾರುತ್ತದೆ. ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಆದರೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅವರಿಬ್ಬರ ಪ್ರೀತಿಯಲ್ಲಿ ಯಾವುದೇ ದೈಹಿಕ ಆಕರ್ಷಣೆ ಇಲ್ಲದೆ ಇದ್ದ ಕಾರಣದಿಂದಾಗಿ ಪ್ರೀತಿಯು ತುಂಬಾ ಪವಿತ್ರವಾಗಿತ್ತು.ಇದು ನಿಷ್ಕಾಮ ಮಟ್ಟದ ಪ್ರೀತಿಯಾಗಿತ್ತು. ಕೃಷ್ಣನಿಗೆ ರಾಧೆಯ ಭಕ್ತಭಾವವೂ ಅಭೂತಪೂರ್ವಾಗಿತ್ತು. ಇದರಿಂದಾಗಿಯೇ 16008 ಮಂದಿ ಪತ್ನಿಯರಿದ್ದರೂ ಕೃಷ್ಣನಿಗೆ ಅತೀ ಮೆಚ್ಚಿನ ಸಖಿಯಾಗಿದ್ದವಳು ರಾಧೆ. ಮನೆಯಲ್ಲಿ ಪತ್ನಿಯಾಗಿ ಬರದಿದ್ದರೂ ರಾಧೆ ಮಾತ್ರ ಕೃಷ್ಣನ ಆತ್ಮ ಸಂಗಾತಿಯಾಗಿದ್ದಳು.

ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನಾವು ರಾಧಾ-ಕೃಷ್ಣರನ್ನು ಪೂಜಿಸುತ್ತೇವೆ. ರಾಧಾ-ಕೃಷ್ಣರ ಹೆಸರು ಜಗತ್ತು ಇರುವ ತನಕ ಅಜರಾಮರವಾಗಿರುತ್ತದೆ. ಇದರಿಂದಾಗಿಯೇ ರಾಧಾ-ಕೃಷ್ಣರ ಪ್ರೀತಿಯು ಯಾವತ್ತೂ ಪವಿತ್ರವೆಂದು ಭಾವಿಸಲಾಗುತ್ತಿದೆ.

ಜನ್ಮಾಷ್ಟಮಿ ಬಗ್ಗೆ ಹಲವಾರು ಕಥೆಗಳಿವೆ. ಕಂಸನ ಬಂಧನದಲ್ಲಿದ್ದ ವಾಸುದೇವ ಮತ್ತು ದೇವಕಿಯ ಪುತ್ರನೇ ಕೃಷ್ಣ. ಶ್ರೀಕೃಷ್ಣನ ಲೀಲೆಗಳನ್ನು ವಿವರಿಸುವುದು ಅಸಾಧ್ಯ. ಇಂತಹ ಲೀಲೆಗಳಲ್ಲಿ ಒಂದಾಗಿರುವುದು ರಾಧಾ-ಕೃಷ್ಣರ ಪ್ರೇಮಕಥೆ. ರಾಧಾ-ಕೃಷ್ಣರ ಪ್ರೀತಿಯು ಇಂದಿಗೂ ನಿಷ್ಕಾಮ ಪ್ರೀತಿಗೆ ಒಂದು ಅದ್ಭುತ ಉದಾಹಣೆಯಾಗಿದೆ. ಈಗಲೂ ಪ್ರೀತಿಸುವವರಿಗೆ ರಾಧಾ-ಕೃಷ್ಣನ ಪ್ರೀತಿಯು ಪ್ರೇರಣೆಯಾಗಿದೆ. ರಾಧಾ-ಕೃಷ್ಣ ಪ್ರೇಮಕಥೆ ಬಗ್ಗೆ ಇರುವ ಪುರಾಣಗಳ ಬಗ್ಗೆ ತಿಳಿದುಕೊಳ್ಳ. ಮಹಾಭಾರತದ ಕಾಲದಲ್ಲೂ ಜಾತಿ ಎನ್ನುವುದು ತಿಳಿದುಬರುತ್ತದೆ. ಯಾಕೆಂದರೆ ಕೃಷ್ಣನು ರಾಜವಂಶಸ್ಥನಾದರೆ ಅದೇ ರಾಧೆಯು ದನಕಾಯುವ ಸಮುದಾಯಕ್ಕೆ ಸೇರಿದಾಕೆ. ಲಕ್ಷ್ಮಿ ದೇವಿಯವರಿಂದ ವರವನ್ನು ಪಡೆದು ಆಕೆಯ ಪುತ್ರಿಯಾಗಿ ಜನಿಸಿದ ರಾಧೆ ವೃಷಭಾನು ಗುರ್ಜರ್ ಸಮುದಾಯಕ್ಕೆ ಸೇರಿದಾಕೆ. ಆದರೆ ಕೃಷ್ಣ ಗೋಕುಲದ ರಾಜನಾಗಿದ್ದವ. ಇದರಿಂದ ರಾಧೆಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಕರೆಯಬಹುದಾಗಿದೆ

ಜಗದೇಕ ಒಡೆಯ ಶ್ರೀಕೃಷ್ಣ ಪರಮಾತ್ಮನ ಹುಟ್ಟುಹಬ್ಬವನ್ನು ಆಚರಿಸಲು, ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ.

ಜನ್ಮಾಷ್ಟಮಿಯ ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ.

ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ನಾವು ರಾಧಾ-ಕೃಷ್ಣರನ್ನು ಪೂಜಿಸುತ್ತೇವೆ. ರಾಧಾ-ಕೃಷ್ಣರ ಹೆಸರು ಜಗತ್ತು ಇರುವ ತನಕ ಅಜರಾಮರವಾಗಿರುತ್ತದೆ. ಇದರಿಂದಾಗಿಯೇ ರಾಧಾ-ಕೃಷ್ಣರ ಪ್ರೀತಿಯು ಯಾವತ್ತೂ ಪವಿತ್ರವೆಂದು ಭಾವಿಸಲಾಗುತ್ತಿದೆ. ರಾಧೆ ಮತ್ತು ಕೃಷ್ಣನ ಪ್ರೀತಿಯು ದೈಹಿಕ ಸಂಬಂಧವನ್ನು ಮೀರಿದಾಗಿತ್ತು ಎನ್ನುವ ಸಂದೇಶವನ್ನು ಸಾರುತ್ತದೆ. ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ. ಮೇಲಿನದು ಸ್ವಂತ ಅಭಿಪ್ರಾಯಗಳನ್ನು ಹೊಂದಿದೆ

ರಾಧೆ ಭಾಗವತದಲ್ಲಿ[ಬದಲಾಯಿಸಿ]

(ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)

ಕೃಷ್ಣನ ಪ್ರಿಯ ಸಖಿ. ಈಕೆಯ ತಂದೆ ವೃಷಭಾನು, ತಾಯಿ ಕಳಾವತಿ. ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ಇವಳ ಹುಟ್ಟಿನ ಬಗ್ಗೆ ಹಲವು ಕಥೆಗಳಿವೆ. ಕೃಷ್ಣನ ಮತ್ತು ಈಕೆಯ ಸಂಬಂಧವನ್ನು ಭಕ್ತಿಪರಾಕಾಷ್ಠತೆಯ ಪವಿತ್ರ ಸಂಬಂಧವೆಂದು ಪುರಾಣಗಳಲ್ಲಿ ನಿರೂಪಿಸಲಾಗಿದೆ. ಅಯಾನ ಎಂಬಾತನೊಡನೆ ಮದುವೆಯಾದ ರಾಧೆಯು ಕೃಷ್ಣನೊಂದಿಗೆ ಬೆಳೆಸಿದ ಸಂಬಂಧ ನೈತಿಕವೇ ಅನೈತಿಕವೇ ಎಂಬ ಜಿಜ್ಞಾಸೆ ಎಂದಿನಿಂದಲೂ ನಡೆದಿದೆ. ಒಂದು ಪುರಾಣದ ಪ್ರಕಾರ ರಾಧೆ ಪೂರ್ವಜನ್ಮದಲ್ಲಿ ಸುಗಣಿ ಎಂಬ ರಾಮನ ದಾಸಿಯಾಗಿದ್ದಳು. ಆಗ ಶ್ರೀರಾಮನ ಬಾಯ್ದಂಬುಲಕ್ಕೆ ಕೈನೀಡಿದುದರಿಂದ ಮೆಚ್ಚಿದ ರಾಮ ಒಂದು ವರ ಕೇಳು ಎಂದ. ಆಗ ಆಕೆ ರಾಮನ ಅಂಗಸುಖವನ್ನು ಅಪೇಕ್ಷಿಸಿದಳು. ಮುಂದಿನ ಜನ್ಮದಲ್ಲಿ ನೀನು ರಾಧೆಯಾಗಿ ಹುಟ್ಟು, ನಾನು ಕೃಷ್ಣನಾಗಿ ನಿನ್ನನ್ನು ಸಂತೋಷಪಡಿಸುತ್ತೇನೆ ಎಂದು ರಾಮ ಹೇಳಿದ. ಬ್ರಹ್ಮವೈವರ್ತ ಪುರಾಣದಲ್ಲಿ ರಾಧೆ ದೇವಿಯ ಸ್ಥಾನದಲ್ಲಿದ್ದಾಳೆ. ಈ ಪುರಾಣದ ಪ್ರಕಾರ ಕೃಷ್ಣ ತಾನೇ ಇಬ್ಬಾಗವಾಗಿ ಒಂದು ಭಾಗ ಹೆಣ್ಣಾಗಿಯೂ ಮತ್ತೊಂದು ಗಂಡಾಗಿಯೂ ರೂಪಗೊಂಡು ಬಹಳ ವರ್ಷಕಾಲ ದಾಂಪತ್ಯ ನಡೆಸಿದ. ಹೆಣ್ಣಿನ ದೇಹದಿಂದ ಬಂದ ಬೆವರು ಗಾಳಿಯಾಗಿ, ಸಮುದ್ರವಾಗಿ ಸೃಷ್ಟಿಯಾಯಿತು. ಆಕೆ ಒಂದು ಚಿನ್ನದ ಮೊಟ್ಟೆಯಿಟ್ಟಳು; ಇದೇ ಬ್ರಹ್ಮಾಂಡ. ಬಹಳ ವರ್ಷಗಳ ಕಾಲ ಇದು ನೀರಿನಲ್ಲಿ ತೇಲುತ್ತಿತ್ತು. ಅನಂತರ ಮೊಟ್ಟೆ ಒಡೆದು ಅದರಿಂದ ವಿಷ್ಣು ಹೊರಬಂದ. ಹೀಗಾಗಿ ಈಕೆ ವಿಷ್ಣುವಿನ ತಾಯಿ(ಮಹಾವಿಷ್ಣುಮಾತೃ, ಮಹಾವಿಷ್ಣುಧಾತೃ). ಪ್ರಪಂಚಕ್ಕೆ ತಾಯಿ (ಜಗನ್ಮಾತೃ, ಜಗದಾಂಬಿಕೆ) ಮತ್ತು ಎಲ್ಲರ ತಾಯಿ(ಸರ್ವಮಾತೃ) ಎಂದು ಖ್ಯಾತಳಾಗಿದ್ದಾಳೆ. ಈ ಪುರಾಣದ ಪ್ರಕಾರ ರಾಧಾಕೃಷ್ಣ ಗಂಡ-ಹೆಂಡತಿ ಅಥವಾ ದೇವ ಮತ್ತು ದೇವಿಯಾಗಿದ್ದಾರೆ. ವೃಷಭಾನು ಯಜ್ಞವೊಂದಕ್ಕೆ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದಾಗ ರಾಧೆ ಭೂಮಿಕನ್ಯೆಯಾಗಿ ದೊರೆತಳು. ಮಹಾವಿಷ್ಣು ಕೃಷ್ಣನಾಗಿ ಹುಟ್ಟುವಾಗ ತನ್ನ ಸೇವಕರನ್ನು ಭೂಮಿಯ ಮೇಲೆ ಹುಟ್ಟುವಂತೆ ಹೇಳಿದ. ಆಗ ಕೃಷ್ಣನ ಪ್ರೀತಿಪಾತ್ರಳಾದ ರಾಧೆ ಭಾದ್ರಪದ ಮಾಸದ, ಜ್ಯೇಷ್ಠನಕ್ಷತ್ರದಲ್ಲಿ ಶುಕ್ಲಾಷ್ಟಮಿಯ ಬೆಳಗ್ಗೆ ಗೋಕುಲದಲ್ಲಿ ಹುಟ್ಟಿದಳು. ಹೀಗೆ ವಿವಿಧ ರೀತಿಯ ವ್ಯಾಖ್ಯಾನಗಳು ಈಕೆಯ ಹುಟ್ಟಿನ ಬಗ್ಗೆ ದೊರೆಯುತ್ತವೆ.
ಭಾಗವತದ ಪ್ರಕಾರ ಕೃಷ್ಣನೊಂದಿಗೆ ಸ್ನೇಹದಿಂದ ಇದ್ದ ಗೋಕುಲದ ಸ್ತ್ರೀಯರಲ್ಲಿ ರಾಧೆಯೂ ಒಬ್ಬಳು. ಹನ್ನೆರಡನೆಯ ಶತಮಾನದ ಕವಿ ಜಯದೇವ ತನ್ನ ಗೀತಗೋವಿಂದದಲ್ಲಿ ರಾಧಕೃಷ್ಣರ ಸಂಬಂಧವನ್ನು ವಿಶೇಷವಾಗಿ ಚಿತ್ರಿಸಿದ್ದಾನೆ. ಈ ಕಾವ್ಯದ ಅನಂತರದಲ್ಲಿ ಇವರಿಬ್ಬರ ವಿಚಾರ ಹೆಚ್ಚು ಜನಪ್ರಿಯವಾಯಿತೆಂದು ಕಾಣುತ್ತದೆ. ಕೃಷ್ಣ ಹದಿಹರೆಯದವನಾಗಿದ್ದಾಗ ಆತನಿಗೆ ರಾಧೆಯೊಂದಿಗೆ ಸಂಬಂಧ ಬೆಳೆಯುತ್ತದೆ. ಗೀತಗೋವಿಂದದಲ್ಲಿ ರಾಧೆಯ ಸ್ವಂತವಿಚಾರಗಳು ತಿಳಿದುಬರುವುದಿಲ್ಲ. ಆದರೆ ಈಕೆಗೆ ಬೇರೊಬ್ಬನೊಂದಿಗೆ ಮದುವೆಯಾಗಿತ್ತು ಎಂಬ ವಿಚಾರ ತಿಳಿಯುತ್ತದೆ.
ವಿದ್ಯಾಪತಿ, ಚಂಡಿದಾಸರ ಕಾವ್ಯಗಳಲ್ಲಿ ರಾಧೆಗೆ ಮದುವೆಯಾಗಿದ್ದ, ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದ ವಿವರಗಳು ದೊರೆಯುತ್ತವೆ. ವಿದ್ಯಾಪತಿ ಚಿತ್ರಿಸಿರುವ ರಾಧೆ ಶ್ರೀಮಂತಳು, ಗೌರವಸ್ಥ ಕುಟುಂಬಕ್ಕೆ ಸೇರಿದವಳು; ಕೃಷ್ಣ ಸಾಮಾನ್ಯ ಗೋಕುಲವಾಸಿ. ಕೃಷ್ಣನ ಪ್ರೀತಿಗಾಗಿ ಈಕೆ ತನ್ನ ಅಂತಸ್ತು ಮತ್ತು ಗೌರವಗಳನ್ನು ತ್ಯಜಿಸುವಳು. ಚಂಡಿದಾಸನ ಪದ್ಯಗಳಲ್ಲಿ ಈಕೆ ಅಯಾನ ಎಂಬಾತನ ಹೆಂಡತಿಯಾಗಿದ್ದಳು; ಕೃಷ್ಣನೊಂದಿಗೆ ಪ್ರೇಮದಲ್ಲಿ ತೊಡಗಿದ್ದಳು ಎಂಬ ವರ್ಣನೆ ಬರುತ್ತದೆ.
16ನೆಯ ಶತಮಾನದಲ್ಲಿ ಬಂಗಾಲದಲ್ಲಿ ವೈಷ್ಣವ ಪಂಥ, ಚೈತನ್ಯ ಪಂಥಗಳು ಪ್ರಾರಂಭವಾದವು. ಚೈತನ್ಯ ಪಂಥದ ಮುಖ್ಯವ್ಯಕ್ತಿ ಚೈತನ್ಯ. ಈತನ ಪದ್ಯಗಳಲ್ಲಿ ಭಕ್ತನೇ ರಾಧೆಯಾಗಿ ಕೃಷ್ಣನಲ್ಲಿ ತನ್ನನ್ನು ಅರ್ಪಿಸಿಕೊಳ್ಳುವನು. ಈ ತತ್ತ್ವದ ಪ್ರಕಾರ ಒಬ್ಬ ಭಕ್ತ ದೇವನಲ್ಲಿ ಇಡುವ ಭಕ್ತಿ ಮತ್ತು ಶ್ರದ್ಧೆ ವಿವಿಧ ರೀತಿಗಳದ್ದಾಗಿರುತ್ತದೆ. ಭಕ್ತನಿಗೆ ಭಗವಂತ ಪೋಷಕನಾಗಿ, ಗುರುವಾಗಿ ಮತ್ತು ಪ್ರೇಮಿಯಾಗಿ ಕಂಡುಬರುವನು. ಆದರೆ ಪ್ರೇಮಿಯಾಗಿ ಕಾಣುವ ಭಾವವೇ ಹೆಚ್ಚು ಆಪ್ತವಾದದ್ದು. ಹೀಗಾಗಿ ಚೈತನ್ಯ ಪಂಥದ ಧೋರಣೆಗಳ ಹಿನ್ನೆಲೆಯಲ್ಲಿ ರಚಿತವಾದ ಪದ್ಯ, ಸಾಹಿತ್ಯ ಎಲ್ಲದರಲ್ಲೂ ರಾಧೆಯ ಪಾತ್ರಮುಖ್ಯವಾಗಿ ಕಂಡು ಬರುತ್ತದೆ. ಈ ಪಂಥದಲ್ಲಿ ರಾಧೆ ಭಕ್ತಿಗೆ ಪ್ರತಿಮೆಯಾಗಿದ್ದಾಳೆ. ಮಹಾಭಾರತದಲ್ಲಿ ಬರುವ ಕರ್ಣನ ಸಾಕುತಾಯಿಯ ಹೆಸರೂ ರಾಧೆ. ಕರ್ಣನನ್ನು ರಾಧೇಯಾ ಎಂದು ಕರೆಯುವುದುಂಟು. ಈಕೆಯ ಬಗ್ಗೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ.

[೧] [೨]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://kn.wikisource.org/s/2ud ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಧೆ
  2. ಭಾಗವತ ಹತ್ತನೇ ಸ್ಕಂದ
"https://kn.wikipedia.org/w/index.php?title=ರಾಧೆ&oldid=1163661" ಇಂದ ಪಡೆಯಲ್ಪಟ್ಟಿದೆ