ರೋಹಿಣಿ ಸಿಂಧೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಹಿಣಿ ಸಿಂಧೂರಿ
ಮೈಸೂರಿನಲ್ಲಿ ೨೦೨೧ರ ಮಹಿಳಾ ದಿನಾಚರಣೆಯ ಉದ್ಘಾಟನೆ ಮಾಡುತ್ತಿರುವ ರೋಹಿಣಿ ಸಿಂಧೂರಿ
ಹಾಲಿ
ಅಧಿಕಾರ ಸ್ವೀಕಾರ 
06-06-2021
ವೈಯಕ್ತಿಕ ಮಾಹಿತಿ
ಜನನ ರೋಹಿಣಿ ಸಿಂಧೂರಿ ದಾಸರಿ
ಮೇ ೩೦ ೧೯೮೪
ಆಂಧ್ರ ಪ್ರದೇಶ, ಭಾರತ
ವೃತ್ತಿ ನಾಗರಿಕ ಸೇವೆ

ರೋಹಿಣಿ ಸಿಂಧೂರಿ ಭಾರತದ ಐಎಎಸ್ ಅಧಿಕಾರಿ. ಪ್ರಸ್ತುತ ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಹಿಣಿ 2009 ರ ಕರ್ನಾಟಕ ಕೇಡರ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ.[೧]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ರೋಹಿಣಿ ಸಿಂಧೂರಿ ಮೇ ೩೦, ೧೯೮೪ ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಜನಿಸಿದರು. ಅವರು ಖಮ್ಮಂ ಜಿಲ್ಲೆಯ ಸತ್ತಪಳ್ಳಿ ತಾಲೂಕಿನ ರುದ್ರಾಕ್ಷಪಲ್ಲಿ ಗ್ರಾಮದವರು. ಇವರ ತಾಯಿ ಶ್ರೀಲಕ್ಷ್ಮಿ ರೆಡ್ಡಿ ಮತ್ತು ತಂದೆ ದಾಸರಿ ಜಯಪಲ್‌ ರೆಡ್ಡಿ. [೨]

ರೋಹಿಣಿ ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ಪೂರೈಸಿದರು. ಎಂಜಿನಿಯರಿಂಗ್ ನಂತರ ಉನ್ನತ ಅಧ್ಯಯನಕ್ಕಾಗಿ ರೋಹಿಣಿಯನ್ನು ವಿದೇಶಕ್ಕೆ ಕಳುಹಿಸಲು ಆಕೆಯ ಪೋಷಕರು ಬಯಸಿದ್ದರು. ಆದರೆ, ತನ್ನ ತಾಯಿ ಶ್ರೀಲಕ್ಷ್ಮೀ ರೆಡ್ಡಿಯವರ ಸೇವಾ ಚಟುವಟಿಕೆಗಳನ್ನು ನೋಡಿದ್ದ ರೋಹಿಣಿ ಅವರು, ತಾವೂ ಜನರಿಗೆ ಸೇವೆ ಸಲ್ಲಿಸಲು ಬಯಸಿದ್ದರು.[೩] ಹೀಗಾಗಿ, ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಹಿಮಾಯತ್ ನಗರದ ಆರ್. ಸಿ. ರೆಡ್ಡಿ ಕೋಚಿಂಗ್ ಸೆಂಟರ್‌ನ ಸಿವಿಲ್ ಸರ್ವಿಸ್ ತರಬೇತಿ ಕೇಂದ್ರಕ್ಕೆ ಸೇರಿದರು.[೪] ೨೦೦೯ ರ ಕೇಂದ್ರ ನಾಗರೀಕ ಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಅವರು ದೇಶಕ್ಕೆ ೪೩ ನೇ ಸ್ಥಾನ ಪಡೆದಿದ್ದರು.

ವೃತ್ತಿ ಜೀವನ[ಬದಲಾಯಿಸಿ]

ಸಿಂಧೂರಿಯವರು ಕೇಂದ್ರ ನಾಗರೀಕ ಸೇವೆಗೆ ಆಯ್ಕೆಯಾದ ಮೊದಲಿಗೆ, ತುಮಕೂರಿನಲ್ಲಿ ಸಹಾಯಕ ಆಯುಕ್ತರಾಗಿ ಆಗಸ್ಟ್ ೨೯, ೨೦೧೧ ರಿಂದ ಆಗಸ್ಟ್ ೩೧, ೨೦೧೨ರ ವರೆಗೆ ಸೇವೆ ಸಲ್ಲಿಸಿದರು. ಅದೇ ಅವಧಿಯಲ್ಲಿ ತುಮಕೂರಿನ ನಗರಾಭಿವೃದ್ಧಿ ವಿಭಾಗದ ಉಸ್ತುವಾರಿ ಆಯುಕ್ತರಾಗಿದ್ದ ರೋಹಿಣಿ, ಡಿಸೆಂಬರ್ ೩೧, ೨೦೧೨ರ ವರೆಗೆ ಈ ಹುದ್ದೆಯಲ್ಲಿ ಮುಂದುವರೆದರು. ತೆರಿಗೆ ಸಂಗ್ರಹದ ಗಣಕೀಕರಣ, ನಿಗಮ ಭೂಮಿ ಸ್ವಾಧೀನ, ಜನನಿಬಿಡ ರಸ್ತೆಗಳಲ್ಲೂ ಯಶಸ್ವಿ ರಸ್ತೆ ಕಾಮಗಾರಿ ಇತ್ಯಾದಿ ಜನಪರ ಕಾರ್ಯಗಳಿಗೆ ಇಂದಿಗೂ ತುಮಕೂರಿನ ಜನತೆ ರೋಹಿಣಿಯವರನ್ನು ಸ್ಮರಿಸುತ್ತಾರೆ.

ನಂತರ ೨೦೧೩ರ ಆಗಸ್ಟ್ ೧೦ ರಿಂದ ೨೦೧೪ ರ ಮೇ ೩೧ ರವರೆಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಯಂ ಉದ್ಯೋಗ ಯೋಜನೆಯ (ಎಸ್‌ಇಪಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂದೆ ಅವರು ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.[೫]

ಮಂಡ್ಯ ಜಿಲ್ಲಾ ಪಂಚಾಯತ್ ಸಿ.ಇ.ಓ[ಬದಲಾಯಿಸಿ]

ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಮುಖ್ಯವಾಗಿ ಕಬ್ಬು ಮತ್ತು ಭತ್ತವನ್ನು ಬೆಳೆಯುವ ಬೆಳೆಯುತ್ತಾರೆ. ರೋಹಿಣಿ ಸಿಂಧೂರಿಯವರು, ಜಿಲ್ಲೆಯ ೧೦೦ ರೈತರನ್ನು ಗುರುತಿಸಿ, ಅವರಿಗೆ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ಶಿಕ್ಷಣ ನೀಡುವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಿದರು.[೬] ಕೃಷಿಕರಿಗೆ ಬ್ಯಾಂಕ್ ಗಳ ಜತೆಯೂ ಸಂಪರ್ಕವನ್ನು ಮಾಡಿಕೊಟ್ಟರು. ಅದಲ್ಲದೆ, ಅವರು ಜಿಲ್ಲೆಯಲ್ಲಿ ಅಧಿಕವಾಗಿದ್ದ ಸ್ತ್ರೀ ಭ್ರೂಣ ಹತ್ಯೆಯ ಬಗ್ಗೆ ಗಂಭೀರತೆಯನ್ನು ಅರಿತು, ಇಂತಹ ಘಟನೆಗಳನ್ನು ವರದಿ ಮಾಡುವಲ್ಲಿ ಮತ್ತು ಈ ಅಭ್ಯಾಸದ ವಿರುದ್ಧ ಪೋಷಕರಿಗೆ ಶಿಕ್ಷಣ ನೀಡುವಲ್ಲಿ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರನ್ನು ಸಂಘಟಿಸಿದರು.[೭]

ಮುಂಜಾನೆ[ಬದಲಾಯಿಸಿ]

೨೦೧೪ ರ ಒಂದೇ ವರ್ಷದಲ್ಲಿ ರೋಹಿಣಿಯವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.[೮] ಅತ್ಯಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವ ದೇಶದ ಟಾಪ್ ಮೂರು ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದಾಗಿತ್ತು.[೯][೧೦] ಜನರು ಶೌಚಾಲಯಗಳನ್ನು ಹೊಂದಿದ್ದಾರೋ ಇಲ್ಲವೋ ಎಂಬುವುದನ್ನು ಖಾತ್ರಿಪಡಿಸಲು, ಪ್ರತಿನಿತ್ಯ ಮುಂಜಾನೆ ಗ್ರಾಮಸ್ಥರನ್ನು ಭೇಟಿಯಾಗುತ್ತಿದ್ದರು. ಈ ಕಾರ್ಯಕ್ರಮವು 'ಮುಂಜಾನೆ' ಎಂದು ಕರೆಯಲ್ಪಟ್ಟಿದೆ ಮತ್ತು ಅದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿತು.[೧೧]

ಕೆ.ಎಫ್.ಸಿ.ಎಸ್.ಸಿ[ಬದಲಾಯಿಸಿ]

ಸಿಂಧೂರಿಯವರು ೨೦೧೫ರ ಸೆಪ್ಟೆಂಬರ್ ೧೬ ರಿಂದ ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಲಿಮಿಟೆಡ್ (ಕೆಎಫ್‌ಸಿಎಸ್‌ಸಿ) ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಹಾಸನದ ಜಿಲ್ಲಾಧಿಕಾರಿ[ಬದಲಾಯಿಸಿ]

ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ಪ್ರತಿ ೧೨ ವಷ‍ಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರುತ್ತದೆ. ರೋಹಿಣಿ ಸಿಂಧೂರಿಯವರು ಹಾಸನದ ಜಿಲ್ಲಾಧಿಕಾರಿಯಾಗುವಾಗ, ಮಹಾಮಸ್ತಕಾಭಿಷೇಕಕ್ಕೆ ಕೇವಲ ೬ ತಿಂಗಳು ಬಾಕಿಯಿದ್ದವು. ಈ ಪ್ರತಿಷ್ಠಿತ ಸಮಾರಂಭಕ್ಕಾಗಿ ದೇಶಾದ್ಯಂತದಿಂದ ಬರುವ ಭಕ್ತಾದಿಗಳಿಗೆ ಯಾವುದೇ ಅಡಚಣೆ ಆಗದಂತೆ, ವ್ಯವಸ್ಥಾ ಕಾರ್ಯಗಳನ್ನು ಚುರುಕುಗೊಳಿಸುವಂತೆ ಇತರ ಅಧಿಕಾರಿಗಳಿಗೆ ಸೂಚನೆ ನೀಡಿದರು.[೧೨] ೨೫೦ ಕೋಟಿ ರೂಪಾಯಿ ವೆಚ್ಚದ ಕೆಲಸದ ಭಾಗವಾಗಿ ಸರ್ಕಾರವು ಟೆಂಡರ್ ಕರೆದಿತ್ತು. ಈ ಕೆಲಸವನ್ನೂ ಪಾರದರ್ಶಕವಾಗಿ ನಡೆಯುವಂತೆ ರೋಹಿಣಿ ಸಿಂಧೂರಿ ನೋಡಿಕೊಂಡರು. ಆದರೂ ಈ ಸಮಯ, ಸಚಿಮ ಮಂಜು ಮತ್ತು ಇವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು.

ಹಾಸನ ಜಿಲ್ಲೆಯ ಅಂದಿನ ಉಸ್ತುವಾರಿ ಸಚಿವ ಮಂಜು ಅವರು ರೋಹಿಣಿ ಸಿಂಧೂರಿಯವರ ಕಾರ್ಯ ವೈಖರಿಯನ್ನು ಇಷ್ಟಪಡಲಿಲ್ಲ. ೨೦೧೮ ರ ಪಟ್ಟಾಭಿಷೇಕಕ್ಕೆ ದೇಶಾದ್ಯಂತದ ೪೦ ಲಕ್ಷ ಭಕ್ತರು ಸೇರಿದ್ದರು. ಸಮಾರಂಭದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮಹಾಮಸ್ತಕಾಭಿಷೇಕ ಕೊನೆಗೊಂಡಿತು.

ಮಹಾಮಸ್ತಕಾಭಿಷೇಕ ಅಂತ್ಯದ ಬಳಿಕ ಸಚಿವರಿಂದ ತನ್ನ ಜಿಲ್ಲಾಧಿಕಾರಿ ಸ್ಥಾನಕ್ಕೆ ಕುತ್ತು ಬರುವುದೆಂದು ರೋಹಿಣಿಯವರಿಗೆ ಅರಿಯಿತು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧವೇ ಹೋರಾಡಿ ಗೆದ್ದರು. ಮಹಾಮಸ್ತಕಾಭಿಷೇಕದ ಬಳಿಕವೂ ಅವರನ್ನು ಹಾಸನದ ಜಿಲ್ಲಾಧಿಕಾರಿಯಾಗಿ ರೋಹಿಣಿಯವರೇ ಮುಂದುವರೆದರು.[೧೩]

ಹಾಸನ ಜಿಲ್ಲೆಯಲ್ಲಿ ಉತ್ತಮ ಎಸ್ ಎಸ್ ಎಲ್ ಸಿ ಫಲಿತಾಂಶ ಬರುವುದಕ್ಕೂ ಶ್ರಮ ವಹಿಸಿದ್ದರು. ರೋಹಿಣಿಯವರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವಾಗ ಟಾಪ್ ೧೦ ಜಿಲ್ಲೆಗಳಲ್ಲೂ ಇರದ ಹಾಸನ ಜಿಲ್ಲೆ, ೨೦೧೯ರ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಬಂದಿತ್ತು.[೧೪]

ಸ್ಪಂದನಾ[ಬದಲಾಯಿಸಿ]

ಅವರು ಸ್ಪಂದನಾ, ಆನ್‌ಲೈನ್ ಗ್ರೀವೆಂಸ್ ರೆಡ್ರೆಸಲ್ ಸಿಸ್ಟಂ (ಕುಂದುಕೊರತೆಗಳ ಪರಿಹಾರ ವ್ಯವಸ್ಥೆ) ಅನ್ನು ಪ್ರಾರಂಭಿಸಿದರು.[೧೫] ೨೦೧೯ರ ಜನವರಿಯಲ್ಲಿ ಪ್ರಾರಂಭವಾದ ಸ್ಪಂದನಾ, ಇದನ್ನು ಜಾರಿಗೊಳಿಸಿದ ರಾಜ್ಯದ ಮೊದಲ ಜಿಲ್ಲೆಯಾಗಿತ್ತು. ಪೋರ್ಟಲ್ ಗೆ ಲಾಗಿನ್ ಆಗುವ ಮೂಲಕ ಜನರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು. ಈ ವ್ಯವಸ್ಥೆಯು ಪಾರದರ್ಶಕತೆಗೂ ಜನಪ್ರಿಯತೆಯನ್ನು ಗಳಿಸಿತ್ತು. ಆದ್ಯತೆಯ ಮೇಲೆ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನೂ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು

ಮೈಸೂರು ಜಿಲ್ಲಾಧಿಕಾರಿ[ಬದಲಾಯಿಸಿ]

೨೦೨೦ ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡರು. ಜೂನ್ ೨೦೨೧ ರ ವರೆಗೆ ಹುದ್ದೆಯಲ್ಲಿ ಮುಂದುವರೆದ ಅವರು, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಅವರೊಂದಿಗಿನ ವಿವಾದದ ಬಳಿಕ ಇಬ್ಬರನ್ನೂ ಮೈಸೂರಿನಿಂದ ವರ್ಗಾವಣೆ ಮಾಡಲಾಯಿತು.[೧೬]

ಧಾರ್ಮಿಕ ದತ್ತಿ ಇಲಾಖೆ[ಬದಲಾಯಿಸಿ]

ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಯಾದ ಬಳಿಕ, ಜೂನ್ ೨೦೨೧ರಿಂದ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೧೭]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2021-06-07. Retrieved 2021-06-07.
  2. "ಆರ್ಕೈವ್ ನಕಲು". Archived from the original on 2019-09-27. Retrieved 2021-06-07.
  3. https://www.thenewsminute.com/article/meet-rohini-ias-who-locked-karnataka-ministers-office-violating-poll-code-78834
  4. "ಆರ್ಕೈವ್ ನಕಲು". Archived from the original on 2019-09-27. Retrieved 2021-06-07.
  5. https://www.shethepeople.tv/news/who-is-rohini-sindhuri/
  6. https://www.thehindu.com/news/national/karnataka/farmers-told-to-adopt-integrated-farming-methods-to-enhance-productivity/article7472340.ece
  7. https://www.thehindu.com/news/national/karnataka/work-to-bring-down-female-infanticide/article6636381.ece
  8. https://timesofindia.indiatimes.com/city/bengaluru/Mandya-model-is-buzzword-for-clean-India-drive/articleshow/46361522.cms
  9. https://timesofindia.indiatimes.com/city/bengaluru/Mandya-model-is-buzzword-for-clean-India-drive/articleshow/46361522.cms
  10. https://bangaloremirror.indiatimes.com/bangalore/others/grama-panchayats-taluk-panchayats-toilets-Mandyas-feat-toilets-to-households-Sindhuri-Dasari-Mandya-Zilla-Panchayat/articleshow/45783435.cms
  11. https://www.thehindu.com/news/national/karnataka/farmers-told-to-adopt-integrated-farming-methods-to-enhance-productivity/article7472340.ece
  12. https://www.deccanherald.com/content/655365/shravanabelagola-ready-mahamastakabhisheka-month-end.html
  13. http://www.newindianexpress.com/states/karnataka/2018/jun/25/ias-officer-rohini-sindhuri-dasari-wins-battle-against-karnataka-government-1833380.html
  14. https://timesofindia.indiatimes.com/city/bengaluru/hassan-catapults-30-places-in-two-years-to-top-the-state/articleshow/69120744.cms
  15. https://www.deccanherald.com/content/651497/now-people-can-air-public.html
  16. https://kannada.oneindia.com/news/mysuru/mysuru-dc-rohini-sindhuri-and-commissioner-shilpa-nag-transferred-224339.html
  17. https://www.kannadaprabha.com/karnataka/2021/jun/05/late-night-twist-for-ias-feud-reigning-in-cm-bs-yediyurappa-transfers-both-rohini-sindhuri-and-shilpa-nag-out-of-mysuru-447581.html