ರಾಮ್ ತೇರಿ ಗಂಗಾ ಮೆಯ್ಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮ್ ತೇರಿ ಗಂಗಾ ಮೆಯ್ಲಿ
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನರಾಜ್ ಕಪೂರ್
ನಿರ್ಮಾಪಕರಣಧೀರ್ ಕಪೂರ್
ಲೇಖಕರಾಜ್ ಕಪೂರ್
ವಿ. ಪಿ. ಸಾಠೆ
ಕೆ. ಕೆ. ಸಿಂಗ್
ಜ್ಯೋತಿ ಸ್ವರೂಪ್
ಪಾತ್ರವರ್ಗಮಂದಾಕಿನಿ
ರಾಜೀವ ಕಪೂರ್
ಸಂಗೀತರವೀಂದ್ರ ಜೈನ್
ಛಾಯಾಗ್ರಹಣರಾಧು ಕರ್
ಸಂಕಲನರಾಜ್ ಕಪೂರ್
ವಿತರಕರುಆರ್. ಕೆ. ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
  • 16 ಆಗಸ್ಟ್ 1985 (1985-08-16)
ಅವಧಿ178 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಾಕ್ಸ್ ಆಫೀಸ್₹19 ಕೋಟಿ

ರಾಮ್ ತೇರಿ ಗಂಗಾ ಮೆಯ್ಲಿ (ಅನುವಾದ: ರಾಮ, ನಿನ್ನ ಗಂಗೆ ಅಪವಿತ್ರಳಾಗಿದ್ದಾಳೆ) ೧೯೮೫ರ ಒಂದು ಹಿಂದಿ ಚಲನಚಿತ್ರ. ಇದನ್ನು ನಟ ನಿರ್ದೇಶಕ ರಾಜ್ ಕಪೂರ್ ನಿರ್ದೇಶಿಸಿದ್ದಾರೆ. ಚಿತ್ರದ ಮುಖ್ಯಪಾತ್ರಗಳಲ್ಲಿ ಮಂದಾಕಿನಿ ಹಾಗೂ ರಾಜೀವ್ ಕಪೂರ್ ನಟಿಸಿದ್ದಾರೆ. ಈ ಚಲನಚಿತ್ರಕ್ಕಾಗಿ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.

ಮಂದಾಕಿನಿಯ ಸ್ತನ್ಯಪಾನ ಹಾಗೂ ಪಾರದರ್ಶಕ ಸೀರೆಯಲ್ಲಿ ಸ್ನಾನದ ದಿಟ್ಟ ದೃಶ್ಯಗಳಿಗಾಗಿ ಚಿತ್ರವು ಬಹಳ ವಿವಾದಾತ್ಮಕವಾಯಿತು. ಇದನ್ನು ಆಗ ಸಂಪ್ರದಾಯವಾದಿ ಭಾರತೀಯ ಸೆನ್ಸರ್ ಮಂಡಳಿಯು ಅನುಮತಿಸುತ್ತಿರಲಿಲ್ಲ. ಆದರೂ, ಇದು ಅ (ಅನಿರ್ಬಂಧಿತ) ವಯಸ್ಸಿನ ವರ್ಗೀಕರಣ ಪಡೆದಿತ್ತು. ಇದನ್ನು ನಂತರ ಅ/ವ ಎಂದು ತಿದ್ದುಪಡಿ ಮಾಡಲಾಯಿತು. ಇದು ರಾಜ್ ಕಪೂರ್ ನಿರ್ದೇಶನದ ಕೊನೆಯ ಚಿತ್ರವಾಗಿತ್ತು.

ರಾಮ್ ತೇರಿ ಗಂಗಾ ಮೆಯ್ಲಿ ಚಿತ್ರವನ್ನು ಭಾರತೀಯ ಸಿನಿಮಾದ 'ಸಾರ್ವಕಾಲಿಕ ಬ್ಲಾಕ್‍ಬಸ್ಟರ್‌ಗಳ' ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂಬೈಯಲ್ಲಿ ಈ ಚಿತ್ರವು ವಜ್ರ ಮಹೋತ್ಸವವನ್ನು ಆಚರಿಸಿತು ಮತ್ತು ಇತರ ಪ್ರಮುಖ ನಗರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಚಿತ್ರವು ಆ ವರ್ಷ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವಾಗಿತ್ತು.

ಕಥಾವಸ್ತು[ಬದಲಾಯಿಸಿ]

ಗಂಗಾ ಗಂಗೋತ್ರಿಯಲ್ಲಿ ತನ್ನ ಸಹೋದರ ಕರಮ್‍ನೊಂದಿಗೆ ವಾಸಿಸುತ್ತಿರುತ್ತಾಳೆ. ಒಂದು ದಿನ ಅವಳು ಪವಿತ್ರ ಗಂಗಾ ನದಿಯ ಮೂಲವನ್ನು ಅಧ್ಯಯನಿಸಲು ಮತ್ತು ಗಾಲಿಕುರ್ಚಿಯನ್ನು ಬಳಸುವ ತನ್ನ ಅಜ್ಜಿಗಾಗಿ ಸ್ವಲ್ಪ ಪವಿತ್ರ ಜಲವನ್ನು ಪಡೆಯಲು ಕಲ್ಕತ್ತಾ ಮೂಲದ ಕಾಲೇಜ್ ಹುಡುಗರ ಗುಂಪಿನೊಂದಿಗೆ ಬಂದಿರುವ ನರೇಂದ್ರ ಸಹಾಯ್ ಎಂಬ ಯುವಕನ ನೆರವಿಗೆ ಬರುತ್ತಾಳೆ. ಇಬ್ಬರೂ ಒಬ್ಬರಿಗೊಬ್ಬರು ಆಕರ್ಷಿತರಾಗಿ, ಮುಂದಿನ ಪೌರ್ಣಮಿಯಂದು ಮದುವೆಯಾಗಿ ರಾತ್ರಿಯನ್ನು ಒಟ್ಟಾಗಿ ಕಳೆಯುತ್ತಾರೆ. ನರೇಂದ್ರನು ಹೊರಡುತ್ತಾನೆ ಆದರೆ ಬೇಗನೇ ಮರಳಿ ಬರುತ್ತೇನೆಂದು ಗಂಗಾಗೆ ಮಾತುಕೊಡುತ್ತಾನೆ. ತಿಂಗಳುಗಳು ಕಳೆದರೂ ಅವನು ವಾಪಸು ಬರುವುದಿಲ್ಲ. ಅವಳು ಗಂಡುಮಗುವಿಗೆ ಜನ್ಮನೀಡಿ ನರೇಂದ್ರನನ್ನು ಎದುರಿಸಲು ಮತ್ತು ತಮ್ಮ ಮಗನಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸಲು ಸಾಧ್ಯವಾದಷ್ಟು ಬೇಗ ಅಲಿಪೋರ್, ಕಲ್ಕತ್ತಾಗೆ ಪ್ರಯಾಣವನ್ನು ಆರಂಭಿಸುತ್ತಾಳೆ. ರಿಷಿಕೇಶ್‍ನಲ್ಲಿ, ಅವಳನ್ನು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನು ಶೋಷಿಸುತ್ತಾರೆ. ಅವರಿಂದ ತಪ್ಪಿಸಿಕೊಂಡು ಅವಳು ಒಂದು ಸ್ಮಶಾನದಲ್ಲಿ ಆಶ್ರಯ ಪಡೆಯುತ್ತಾಳೆ. ಬನಾರಸ್‌ನಲ್ಲಿ ಅವಳ ಮೇಲೆ ಒಬ್ಬ ಪಂಡಿತನು ಅತ್ಯಾಚಾರ ಮಾಡುತ್ತಾನೆ. ಪೋಲಿಸರು ಅವಳನ್ನು ಪಾರುಮಾಡಿ ಕಲ್ಕತ್ತಾಗೆ ಟಿಕೇಟ್ ಖರೀದಿಸಿ ಕೊಡುತ್ತಾರೆ. ದಾರಿಯಲ್ಲಿ ತನ್ನ ಮಗುವಿಗಾಗಿ ನೀರು ಪಡೆಯಲು ಇಳಿದಾಗ ಟ್ರೇನ್ ಹೊರಡುತ್ತದೆ. ಅವಳು ಮಣೀಲಾಲ್‍ ಎಂಬ ಕ್ರೂರಿಯ ಹಿಡಿತಕ್ಕೆ ಸಿಗುತ್ತಾಳೆ. ಅವನು ಕುರುಡನೆಂಬ ನಾಟಕಮಾಡಿ ಬನಾರಸ್ ಹತ್ತಿರದ ವೇಶ್ಯಾಗೃಹಕ್ಕೆ ಕರೆದೊಯ್ಯುತ್ತಾನೆ. ತನ್ನ ಮಗುವಿಗೆ ಆಹಾರ ನೀಡುವ ಸಲುವಾಗಿ ಅಲ್ಲಿರುವಂತೆ ಅವಳನ್ನು ಒತ್ತಾಯಿಸಲಾಗುತ್ತದೆ. ಇಲ್ಲಿ ಅವಳ ಪರಿಚಯ ಭಾಗವತ್ ಚೌಧರಿ ಎಂಬ ಬಲಿಷ್ಠ ರಾಜಕಾರಣಿಗೆ ಆಗುತ್ತದೆ. ಅವನು ಭಾರಿ ಹಣವನ್ನು ನೀಡಿ ಗಂಗಾಳನ್ನು ಕಲ್ಕತ್ತಾಗೆ ಕರೆದುಕೊಂಡು ಬರುವಂತೆ ಮಣಿಲಾಲ್‍ಗೆ ಹೇಳುತ್ತಾನೆ. ಅವಳನ್ನು ತನ್ನ ಮತ್ತು ಜೀವಾ ಸಹಾಯ್‍ನ ಉಪಪತ್ನಿಯಾಗಿ ಇಟ್ಟುಕೊಳ್ಳುವ ಉದ್ದೇಶ ಅವನಿಗೆ ಇರುತ್ತದೆ. ಆದರೆ ಭಾಗವತ್‍ನ ಮಗಳು ರಾಧಾ ನರೇಂದ್ರನ ಮದುಮಗಳಾಗುವವಳಿರುತ್ತಾಳೆ ಎಂದು, ಮತ್ತು ಜೀವಾ ನರೇಂದ್ರನ ತಂದೆ ಎಂದು, ಮತ್ತು ಶೀಘ್ರವೇ ತನ್ನ ಗಂಡನ ಮದುವೆಯಲ್ಲಿ ಹಾಡಿ ಕುಣಿಯುವಂತೆ ತನಗೆ ಹೇಳಲಾಗುವುದು ಎಂದು ಗಂಗಾಗೆ ಗೊತ್ತಿರುವುದಿಲ್ಲ. ಒಂದು ದೃಶ್ಯವು ಸೃಷ್ಟಿಯಾಗಿ ಮುಸುಕಿನಲ್ಲಿ ಕುಣಿಯುತ್ತಿರುವ ಹುಡುಗಿ ಗಂಗಾಳೇ ಎಂದು ನರೇನ್ ಗುರುತಿಸುತ್ತಾನೆ. ಅವನು ಆಗಲೇ ವಿವಾಹಿತನಾಗಿದ್ದೇನೆಂದು ಹೇಳಿ ಮದುವೆಯನ್ನು ನಿಲ್ಲಿಸುತ್ತಾನೆ. ಆದರೆ ಆ ಕಲುಷಿತ ಹುಡುಗಿಯನ್ನು ಬಿಟ್ಟು ಅವನು ರಾಧಾನನ್ನು ವಿವಾಹವಾಗಬೇಕೆಂದು ಅವನ ಕುಟುಂಬ ಹೇಳುತ್ತದೆ. ಆದರೆ, ಅವನು ಒಪ್ಪದೇ ಗಂಗಾ ಮತ್ತು ತನ್ನ ಮಗುವೊಂದಿಗೆ ತನ್ನ ಮನೆಯನ್ನು ತೊರೆಯುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

  • ನರೇಂದ್ರ "ನರೇನ್" ಸಹಾಯ್ ಪಾತ್ರದಲ್ಲಿ ರಾಜೀವ ಕಪೂರ್
  • ಗಂಗಾ ಪಾತ್ರದಲ್ಲಿ ಮಂದಾಕಿನಿ
  • ರಾಧಾ ಬಿ. ಚೌಧರಿ ಪಾತ್ರದಲ್ಲಿ ದಿವ್ಯಾ ರಾಣಾ
  • ದಾದಿಮಾ ಪಾತ್ರದಲ್ಲಿ ಸುಷ್ಮಾ ಸೇಠ್
  • ಕುಂಜ್ ಬಿಹಾರಿ ಪಾತ್ರದಲ್ಲಿ ಸಯೀದ್ ಜಾಫ಼್ರಿ
  • ಜೀವಾ ಸಹಾಯ್ ಪಾತ್ರದಲ್ಲಿ ಕುಲ್‍ಭೂಷಣ್ ಖರ್ಬಂದಾ
  • ಭಾಗವತ್ ಚೌಧರಿ ಪಾತ್ರದಲ್ಲಿ ರಜ಼ಾ ಮುರಾದ್
  • ಶ್ರೀಮತಿ ಸಹಾಯ್ ಪಾತ್ರದಲ್ಲಿ ಗೀತಾ ಸಿದ್ಧಾರ್ಥ್
  • ಪ್ರೊಫ಼ೆಸರ್ ಪಾತ್ರದಲ್ಲಿ ತ್ರಿಲೋಕ್ ಕಪೂರ್
  • ಮಣೀಲಾಲ್ ಪಾತ್ರದಲ್ಲಿ ಕ್ರಿಶನ್ ಧವನ್
  • ಪೋಸ್ಟ್‌ಬಾಬು ಪಾತ್ರದಲ್ಲಿ ವಿಶ್ವ ಮೆಹ್ರಾ
  • ತಾಜೇಶ್ವರಿ ಬಾಯಿ ಪಾತ್ರದಲ್ಲಿ ಉರ್ಮಿಳಾ ಭಟ್
  • ಬ್ರಿಜ್ ಕಿಶೋರ್ ಪಾತ್ರದಲ್ಲಿ ಎ. ಕೆ. ಹಂಗಲ್
  • ನರೇನ್‍ನ ಸಹ ವಿದ್ಯಾರ್ಥಿಯಾಗಿ ಗೌತಮ್ ಸರೀನ್
  • ನರೇನ್‍ನ ಸಹ ವಿದ್ಯಾರ್ಥಿಯಾಗಿ ಮಾಂಟಿ ನಾಥ್
  • ಚಮನ್‍ಲಾಲ್ ಪಾತ್ರದಲ್ಲಿ ಕಮಲ್‍ದೀಪ್
  • ಕರಮ್ ಸಿಂಗ್ ಪಾತ್ರದಲ್ಲಿ ಟಾಮ್ ಆಲ್ಟರ್

ಸಾಂಸ್ಕೃತಿಕ ಪರೋಕ್ಷ ಪ್ರಸ್ತಾಪಗಳು[ಬದಲಾಯಿಸಿ]

ಫಿಲಿಪ್ ಲಟ್ಗನ್‌ಡಾರ್ಫ಼್ ಪ್ರಕಾರ,[೧] ಈ ಚಿತ್ರವು ಸಾಂಕೇತಿಕ ನಿರೂಪಣೆಯಾಗಿದ್ದು ಶಾಸ್ತ್ರೀಯ ಮತ್ತು ಕಾಲ್ಪನಿಕ ಕಥನ, ಸೂಕ್ಷ್ಮ-ಸೂಚ್ಯ ರಾಜಕೀಯ ಹಾಗೂ ಸಾಮಾಜಿಕ ವರ್ಣನೆಯನ್ನು (ಇಲ್ಲಿ ರಾಜಕಾರಣಿಗಳು ಮತ್ತು ಬಂಡವಾಳಶಾಹಿಗಳ ಭ್ರಷ್ಟಾಚಾರವನ್ನು ಖಂಡಿಸಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಹುಟ್ಟುತ್ತಲಿರುವ ಪಾರಿಸರಿಕ ಉಪಕ್ರಮಗಳನ್ನು ಬೆಂಬಲಿಸುತ್ತದೆ) ಸಂಶ್ಲೇಷಿಸುತ್ತದೆ. ಕಥನವು ಮೊಟ್ಟಮೊದಲು ಮಹಾಭಾರತ ಮಹಾಕಾವ್ಯದಲ್ಲಿ ಕಾಣಿಸಿಕೊಂಡ ಮತ್ತು ನಂತರ ಸುಮಾರು ಆರು ನೂರು ವರ್ಷಗಳ ಬಳಿಕ ಕವಿ ಕಾಳಿದಾಸನಿಂದ ಬದಲಾಯಿಸಲ್ಪಟ್ಟ ಅಭಿಜ್ಞಾನ ಶಾಕುಂತಲಮ್ ಕಥೆಯನ್ನು ಪುನಃ ಹೇಳುತ್ತದೆ.

ಅಂತಿಮ ಗೀತ ದೃಶ್ಯಾವಳಿಯಾದ "ಏಕ್ ರಾಧಾ ಏಕ್ ಮೀರಾ" ಚಲನಚಿತ್ರೋದ್ಯಮ ಮತ್ತು ವಾಸ್ತವದೊಂದಿಗೆ ರಾಜ್ ಕಪೂರ್‌‌ರ ವೈಯಕ್ತಿಕ ಅನುಭವಗಳನ್ನು ತರುತ್ತದೆ. ಈ ಗೀತ ದೃಶ್ಯಾವಳಿಯು ಕಥೆಯ ಪರಾಕಾಷ್ಠೆಯಾಗಿದೆ.

ಚಿತ್ರವು ಹಿಟ್ ಆಯಿತು ಮತ್ತು ಮಂದಾಕಿನಿಯವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ನಾಮನಿರ್ದೇಶನವನ್ನು ತಂದುಕೊಟ್ಟಿತು.[೨] ಎರಡು ದೃಶ್ಯಗಳ ಕಾರಣ ಚಿತ್ರವು ವಿವಾದವನ್ನೂ ಸೃಷ್ಟಿಸಿತು: ಒಂದರಲ್ಲಿ ಮಂದಾಕಿನಿ ಕೇವಲ ಒಂದು ತೆಳುವಾದ ಬಿಳಿ ಸೀರೆಯನ್ನು ಉಟ್ಟಿಕೊಂಡು ಜಲಪಾತದ ಕೆಳಗೆ ಸ್ನಾನಮಾಡುತ್ತಾಳೆ (ಅದರ ಮೂಲಕ ಅವಳ ಸ್ತನಗಳು ಸ್ಪಷ್ಟವಾಗಿ ಕಾಣಿಸುತ್ತವೆ). ಮತ್ತೊಂದರಲ್ಲಿ ಅವಳು ಒಂದು ಮಗುವಿಗೆ ಸ್ತನ್ಯಪಾನ ಮಾಡಿಸುವುದನ್ನು ತೋರಿಸಲಾಗಿದೆ. ಆ ದೃಶ್ಯಗಳು ಅಶ್ಲೀಲ ಮತ್ತು ಶೋಷಣಾಮಯವಾಗಿದ್ದವು, ಮತ್ತು ನಗ್ನತೆಯ ವಿರುದ್ಧ ಸೆನ್ಸರ್ ಮಂಡಳಿಯ ಕಟ್ಟುನಿಟ್ಟಾದ ನಿಯಮಗಳಿಂದ ತಪ್ಪಿಸಿಕೊಳ್ಳಲು ಅವನ್ನು ಬಳಸಲಾಯಿತು ಎಂದು ಕೆಲವು ವಿಮರ್ಶಕರು ಪ್ರತಿಪಾದಿಸುತ್ತಾರೆ. ಅವು ಸದಭಿರುಚಿಯಿಳ್ಳವಾಗಿದ್ದವೆಂದು ಹೇಳಿ ಕಪೂರ್ ಆ ದೃಶ್ಯಗಳ ಸೇರಿಕೆಯನ್ನು ಸಮರ್ಥಿಸಿಕೊಂಡರು.

ಪ್ರಶಸ್ತಿಗಳು[ಬದಲಾಯಿಸಿ]

ಈ ಚಿತ್ರವು ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿತು.

  • ಅತ್ಯುತ್ತಮ ಚಲನಚಿತ್ರ
  • ಅತ್ಯುತ್ತಮ ಕಲಾ ನಿರ್ದೇಶಕ – ಸುರೇಶ್ ಸಾವಂತ್
  • ಅತ್ಯುತ್ತಮ ನಿರ್ದೇಶಕ – ರಾಜ್ ಕಪೂರ್
  • ಅತ್ಯುತ್ತಮ ಸಂಕಲನಕಾರ – ರಾಜ್ ಕಪೂರ್[೩]
  • ಅತ್ಯುತ್ತಮ ಸಂಗೀತ ನಿರ್ದೇಶಕ – ರವೀಂದ್ರ ಜೈನ್

ಹಾಡುಗಳು[ಬದಲಾಯಿಸಿ]

ಈ ಚಿತ್ರಕ್ಕೆ ದಿವಂಗತ ರವೀಂದ್ರ ಜೈನ್ ಸಂಗೀತ ನೀಡಿದರು. ಅವರು ಈ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕನ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

  1. "ಏಕ್ ದುಖಿಯಾರಿ ಕಹೆ" – ಲತಾ ಮಂಗೇಶ್ಕರ್
  2. "ಏಕ್ ರಾಧಾ ಏಕ್ ಮೀರಾ" – ಲತಾ ಮಂಗೇಶ್ಕರ್
  3. "ಹುಸ್ನ್ ಪಹಾಡೋಂ ಕಾ" – ಲತಾ ಮಂಗೇಶ್ಕರ್, ಸುರೇಶ್ ವಾಡ್ಕರ್
  4. "ರಾಮ್ ತೇರಿ ಗಂಗಾ ಮೈಲಿ ಹೋ ಗಯಿ" – ಭಾಗ 1 – ಸುರೇಶ್ ವಾಡ್ಕರ್
  5. "ಸುನ್ ಸಾಯ್ಬಾ ಸುನ್ ಪ್ಯಾರ್ ಕಿ ಧುನ್ ಮೆಯ್ನೆ ತುಝೆ ಚುನ್ ಲಿಯಾ" – ಲತಾ ಮಂಗೇಶ್ಕರ್; ಸಾಹಿತ್ಯ – ಹಸ್ರತ್ ಜೈಪುರಿ
  6. "ತುಝೆ ಬುಲಾಯೆ ಯೇ ಮೇರಿ ಬಾಹೇಂ" – ಲತಾ ಮಂಗೇಶ್ಕರ್
  7. "ಯಾರಾ ಓ ಯಾರಾ" – ಲತಾ ಮಂಗೇಶ್ಕರ್, ಸುರೇಶ್ ವಾಡ್ಕರ್
  8. "ರಾಮ್ ತೇರಿ ಗಂಗಾ ಮೈಲಿ ಹೋ ಗಯಿ" – ಭಾಗ 2 – ಸುರೇಶ್ ವಾಡ್ಕರ್
  9. "ಮೈ ಹಿ ಮೈ ಹ್ಞೂ - ಸುರೇಶ್ ವಾಡ್ಕರ್; ಸಾಹಿತ್ಯ – ಆಮಿರ್ ಕಜ಼ಲ್‍ಬಷ್

ಉಲ್ಲೇಖಗಳು[ಬದಲಾಯಿಸಿ]

  1. Philip Lutgendorf. "Ram teri Ganga Maili". University of Iowa, South Asian Studies Program. Archived from the original on 28 December 2011. Retrieved 19 December 2011.
  2. "Filmfare Awards" (PDF). p. 71. Archived from the original (PDF) on 12 ಜೂನ್ 2009. Retrieved 14 September 2008.
  3. "Best Editor Award". Official Listings, Indiatimes. Archived from the original on 29 ಏಪ್ರಿಲ್ 2014. Retrieved 29 April 2014.

ಹೊರಗಿನ ಕೊಂಡಿಗಳು[ಬದಲಾಯಿಸಿ]