ಭಗವಾನ್ ಆಧಿನಾಥ ಸ್ವಾಮಿ ಬಲ ಬಸದಿ ಹಿರಿಯಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವಾನ್ ಆದಿನಾಥ ಸ್ವಾಮಿ ಬಲ ಬಸದಿ ಹಿರಿಯಂಗಡಿ ಇದು ಕರ್ನಾಟಕದ ಬಸದಿಗಳಲ್ಲಿ ಒಂದಾಗಿದೆ.ಕಾರ್ಕಳದ ಪ್ರಸಿದ್ಧ ಶ್ರೀ ನೇಮಿನಾಥ ಬಸದಿಯ ಬಲಬದಿಗೆ ಭಗವಾನ್ ಶೃಇ ಆದಿನಾಥ ಸ್ವಾಮಿಯ ಬಸದಿಯಿದೆ.

ವಿನ್ಯಾಸ[ಬದಲಾಯಿಸಿ]

ಕಾರ್ಕಳದ ಪ್ರಸಿದ್ಧ ಶ್ರೀ ನೇಮಿನಾಥ ಬಸದಿಯ ಬಲಬದಿಗೆ ಭಗವಾನ್ ಆದಿನಾಥ ಸ್ವಾಮಿಯ ಬಸದಿಯಿದೆ. ಇದರ ಎದುರಿಗೆ ಜಗಲಿಯಲ್ಲಿ ಎರಡು ಅಲಂಕಾರಿಕ ಸ್ತಂಭಗಳಿವೆ. ಆ ಸ್ತಂಭಗಳಲ್ಲಿ ಎದುರಿಗೆ ಪದ್ಮಾವತಿ ದೇವಿಯ ಆಕೃತಿಯಿದೆ. ಬಲಬದಿಗೆ ಶ್ರೀ ರಾಮ ಮತ್ತು ಹನುಮಂತ ನಿಂತಿರುವ ಕೆತ್ತನೆಯನ್ನು ಕಾಣಬಹುದು. ಶ್ರೀ ರಾಮನ ಎಡಗೈಯಲ್ಲಿ ಧನಸ್ಸು ಮತ್ತು ಬಲಗೈಯಲ್ಲಿ ಬಾಣವಿದೆ. ಮುಂದೆ ಇದೆ ಕಂಬದ ಹಿಂಬದಿಯಲ್ಲಿ ಒಬ್ಬ ಯೋಧನ ಮತ್ತು ಎಡಬದಿಯಲ್ಲಿ ಸಿಂಹದ ಆಕೃತಿಯನ್ನು ಕೆತ್ತಲಾಗಿದೆ. ಕೆಳಗೆ ಚೌಕಾಕಾರದ ಕಂಬವು ಮೇಲೆ ಹೋದಂತೆ ವೃತ್ತಾಕಾರವನ್ನು ಹೊಂದುತ್ತದೆ. ಮೇಲೆ ಹೋಂದತೆ ಕಂಬದ ಸುತ್ತಲೂ ಅಶ್ವತ್ಥ ಎಲೆಯ ಅಲಂಕಾರಿಕ ಕೆತ್ತನೆಯಿದೆ.

ಎರಡನೇಯ ಕಂಬದ ಬಗ್ಗೆ ಹೇಳುವುದಾದರೆ ಅದರ ಬೋದಿಗೆ ಚೌಕಾಕಾರದಲ್ಲಿದೆ. ಕಮಲದ ಮೊಗ್ಗುಗಳ ಕೆತ್ತನೆಯನ್ನು ಇಲ್ಲಿ ಕಾಣಬಹುದು. ಮೊದಲ ಕಂಬದಂತೆ ಇಲ್ಲಿಯೂ ಸಹ ಮೇಲೆ ಹೋದಂತೆ ಕಂಬ ವೃತ್ತಾಕಾರವನ್ನು ಹೊಂದುತ್ತದೆ. ಈ ಕಂಬದ ಬದಿಯೊಂದರಲ್ಲಿ ಮಕರದ ಕೆತ್ತನೆಯನ್ನು ಕಾಣಬಹುದು. ಕಂಬದ ಇನ್ನೊಂದು ಭಾಗದಲ್ಲಿ ಯಾವುದೇ ಕೆತ್ತನೆಗಳಿಲ್ಲ. ಬಲಬದಿಗೆ ಅರಳಿದ ಕಮಲದ ಕೆತ್ತನೆಯಿದೆ. ಮತ್ತೊಂದು ಬದಿಗೆ ಯಂತ್ರದ ಆಕೃತಿಯನ್ನು ಕಾಣಬಹುದು. ಕಂಬದ ಇನ್ನೊಂದು ಬದಿಯಲ್ಲಿರುವ ಸಿಂಹ ಮತ್ತು ಹಂಸಗಳ ನಡುವೆ ಜಿನ ಬಿಂಬದ ಆಕೃತಿ, ಶಾಂತಿ ಮತ್ತು ಸಹಬಾಳ್ವೆಯನ್ನು ತಿಳಿಸುವಂತಿದೆ. ಕಂಬ ವೃತ್ತಾಕಾರವನ್ನು ಪಡೆದಾಗ ಕಮಲದ ಮೊಗ್ಗುಗಳನ್ನು ಹೊಂದಿರುವ ಬಳ್ಳಿ ಮತ್ತು ಹಂಸಗಳ ಅಲಂಕಾರಿಕ ಕೆತ್ತನೆಯನ್ನು ಕಾಣಬಹುದು.

ಮೊದಲ ಕಂಬದಲ್ಲಿ ಕಾಣಿಸುವ ಶ್ರೀ ರಾಮ ಮತ್ತು ಹನುಮಂತನ ಕೆತ್ತನೆಯು ಸರ್ವಧರ್ಮ ಸಮಭಾವದ ಪ್ರತೀಕವಾಗಿದೆ. ಈ ಆದಿನಾಥ ಸ್ವಾಮಿ ಬಸದಿಯ ಪೂರ್ವ ದಿಕ್ಕಿನಲ್ಲಿ ಶಿಲಾಶಾಸನವೊಂದನ್ನು ಕಾಣಬಹುದು. ಇದು “ಸ್ವಸ್ಥಿ ಶ್ರೀ ಜಯಾಭ್ಯುಧಯ ಶಕವರುಷ ೧೩೭೯ನೆಯ ಈಶ್ವರ ಸಂವತ್ಸರದ ಕಾರ್ತಿಕ ಶುದ್ಧ ಪಾಡ್ಯ ಬುಧವಾರದಂದು ಶ್ರೀ ಮತ್ಕುಂಡಕುಂದಾನ್ವಯ ಪನಶೋಕಾವಲೀಶ್ವರ ದೇಶಿಗಣಾಗ್ರಗಣ್ಯರುಮಪ್ಪ ಶ್ರೀ ಮನ್ಮಲಧಾರಿ ಲಲಿತಕೀರ್ತಿ ಭಟ್ಟಾರಕ ದೇವರುಗಳ ಶಿಷ್ಯ ಶ್ರೀ ಮದನಭಿನವ ಪಾಂಡ್ಯದೇವ ಒಡೆಯರು ಪೃಥ್ವಿರಾಜ್ಯಂಗೇಯುತ್ತಮಿರಲು”... ಸಂಜರ ಸೆಟ್ಟಿ ಎಂಬಾತನು ನೇಮಿನಾಥ ಸ್ವಾಮಿಯ ಚೈತ್ಯಾಲಯದಲ್ಲಿ ಅರಸನ ಹೆಸರಲ್ಲಿ ಮಾಡಿಸುವ ಸೇವೆಗಳಿಗಾಗಿ ಕೊಟ್ಟ ದಾನಗಳನ್ನು ವಿವರಿಸುತ್ತದೆ. ಇದೊಂದು ಶಿಲಾಮಯ ಬಸದಿ.

ಆವರಣ[ಬದಲಾಯಿಸಿ]

ಇದನ್ನು ಕಾರ್ಕಳದ ದಾನಾಶಾಲಾ ಮಠದವರು ನಡೆಸುತ್ತಿದ್ದಾರೆ. ಇದರ ಇಂದ್ರರ ಹೆಸರು ಶೃಇ ನಾಗಕುಮಾರ ಇಂದ್ರ ಈ ಬಸದಿಯನ್ನು ೮೦೦ ವರ್ಷಗಳಷ್ಟು ಹಿಂದೆ ಕಟ್ಟಿಸಿದ್ದು. ಬಸದಿ ಇತ್ತೀಚೆಗೆ ೨೦೧೨ ರಲ್ಲಿ ಜೀರ್ಣೋದ್ದಾರಗೊಂಡಿದೆ. ಇಲ್ಲಿ ನಡೆದ ವಿಶೇಷ ಘಟನೆ ಎಂದರೆ ೨೦೧೫ರಲ್ಲಿ ಇಲ್ಲಿಯ ಜಿನ ಬಿಂಬ ಕಳವಾಗಿತ್ತು ಕ್ಷೇತ್ರಪಾಲ ಮತ್ತು ಬೂತಗಳಿಗೆ ಹರಕೆ ಹೇಳಿಕೊಂಡಾಗ ಒಂದು ತಿಂಗಳಿನಲ್ಲಿ ಪುನಃ ಸಿಕ್ಕಿತ್ತು. ಈ ಬಸದಿಗೆ ಮೇಗಿನನೆಲೆ ಇಲ್ಲ ಇಲ್ಲಿಯ ೯ ಬಸದಿಗಳಿಗೆ ಒಂದೇ ಮಾನಸ್ತಂಭವಿದೆ. ಇಲ್ಲಿ ಆಚಾರ್ಯ ವಿಶ್ವನಂದಿ ಮುನಿಗಳು ತಮ್ಮ ಚಾತುರ್ಮಾಸ ನಡೆಸಿದ್ದರು ಎಂದು ಹೇಳುತ್ತಾರೆ. ಈ ಬಸದಿಗೆ ದ್ವಾರ ಪಾಲಕರ ಕಲ್ಲಿನ ಮೂರ್ತಿಗಳು ಅಥವಾ ಚಿತ್ರಗಳು ಇಲ್ಲ. ಆದರೆ ಗೋಡೆಗಳ ಮೇಲೆ ಕಲಶದ ಕೆತ್ತನೆಗಳಿವೆ. ಇಲ್ಲಿನ ಪ್ರಾರ್ಥಾನ ಮಂಟಪದಲ್ಲಿ ಎರಡು ಕಲ್ಲುಗಳಿವೆ. ಇಲ್ಲಿರುವ ಕೆತ್ತನೆಗಳು ಸರ್ವಧರ್ಮ ಸಮಾಭಾವದ ಸಂದೇಶವನ್ನು ಸಾರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಜಯಘಂಟೆ ಹಾಗೂ ಜಾಗಟೆಗಳನ್ನು ತೂಗುಹಾಕಲಾಗಿದೆ ಇಲ್ಲಿ ತೀರ್ಥಂಕರ ಮಂಟಪಗಳಿಲ್ಲ ಇಲ್ಲಿನ ಗಂಧಕುಟಿವು ಗರ್ಭಗುಡಿಯಲ್ಲಿದೆ ಇದರ ಬಳಿಯಲ್ಲಿ ಗಣಧರಪಾದ, ಶ್ರುತ ಬ್ರಹ್ಮ ದೇವರು ಇತ್ಯಾದಿ ಮೂರ್ತಿಗಳಿಲ್ಲ. ಇಲ್ಲಿ ಗೋಮೂಖ ಯಕ್ಷ ಮತ್ತು ಚಕ್ರೇಶ್ವರಿ ಯಕ್ಷಿಯನ್ನು ಪೂಜಿಲಾಗುತ್ತದೆ. ಇಲ್ಲಿ ಮಾತೆ ಪದ್ಮಾವತಿ ದೇವಿಯ ಮೂರ್ತಿ ಇಲ್ಲ ಇಲ್ಲಿನ ಜಿನಬಿಂಬದ ಕಂಚಿನ ಪೀಠದ ಮೇಲೆ ಅಸ್ಪಷ್ಟ ಬರವಣಿಗೆ ಇದೆ.ಇಲ್ಲಿ ಮೂಲ ನಾಯಕ ಶ್ರೀ ಆದಿನಾಥ ಸ್ವಾಮಿಯ ಮೂರ್ತಿಯನ್ನು ಪಂಚಲೋಹದಿಂದ ತಯಾರಿಲಾಗಿದೆ. ಪಾದದಿಂದ ಅಳೆದರೆ ಮೂರ್ತಿ ಮೂರುವರೆ ಅಡಿ ಎತ್ತರ ಇದೆ. ಪೀಠದಿಂದ ಅಳೆದರೆ ನಾಲ್ಕು ಅಡಿ ಎತ್ತರ ಇದೆ. ದಿನವೂ ಮೂಲ ನಾಯಕನಿಗೆಜಲಾಭಿಷೇಕ ಮಾಡಲಾಗುತ್ತದೆ. ದನವೂ ಬೆಳಗ್ಗೆ ಮಾತ್ರ ಪೂಜೆ ನಡೆಯುತ್ತದೆ. ಇಲ್ಲಿ ನೋಂಪು, ಜೀವದಯಾಷ್ಟಮಿ, ದಶಲಕ್ಷಣಪರ್ವ, ರಥೋತ್ಸವ ಇತ್ಯಾದಿಗಳನ್ನು ನಡೆಸುವುದಿಲ್ಲ.ಈ ಬಸದಿಯ ಅಂಗಳದಲ್ಲಿ ಬೇರೆಯೇ ಕ್ಷೇತ್ರ ಪಾಲನ ಸನ್ನಿದಿಯಿಲ್ಲ. ಬಸದಿಗೆ ನೀರಿಗಾಗಿ ಒಂದು ಬಾವಿ ಮಾತ್ರ ಇದೆ. [೧]ಭಗವಾನ್ ಆದಿನಾಥ ಸ್ವಾಮಿ ಬಲ ಬಸದಿ ಹಿರಿಯಂಗಡಿ

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೨ ed.). ಮಂಜುಶ್ರೀ ಪ್ರಿಂಟರ್ಸ್. p. ೩೨-೩೩.