ನೀಲಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀಲಾವರವು ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ಹಳ್ಳಿ. ಬ್ರಹ್ಮಾವರದಿಂದ ೭ ಕಿಲೋಮೀಟರ್ ದೂರದಲ್ಲಿ ನೀಲಾವರವಿದೆ ಮತ್ತು ಕುಂಜಾಲುವಿನಿಂದ ೩ ಕಿಲೋಮೀಟರ್ ದೂರದಲ್ಲಿದೆ. ಹೆಬ್ರಯಿಂದ ಬ್ರಹ್ಮಾವರಕ್ಕೆ ಬರುವ ರಸ್ತೆಯಲ್ಲಿ ನೀಲಾವರ ಸಿಗುತ್ತದೆ. ನೀಲವರ ಸರಿಸುಮಾರು ಉತ್ತರದಲ್ಲಿಅ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು ಗ್ರಾಮದ ನಡುವೆ ಇದೆ. ಮೂಲತಃ ಇದು ನೀರಾವರವಾಗಿತ್ತು, (ಅಂದರೆ ನೀರಿನಿಂದ ಆವೃತವಾಗಿರುವುದು ಎಂದು ಅರ್ಥ ನೀಡುತ್ತದೆ) ಆದರೆ ನಂತರದ ದಿನಗಳಲ್ಲಿ ಇದು ನೀಲಾವರವಾಗಿ ಮಾರ್ಪಟ್ಟಿತು.

ಮಹಿಷಾಮಾರ್ದಿನಿ, ಗಣಪತಿ, ಸುಬ್ರಹ್ಮಣ್ಯ, ಕಲ್ಲುಕುಟ್ಟಿಗ ಮತ್ತು ವೀರಭದ್ರ ನೀಲಾವರದ ಕೆಲವು ಪವಿತ್ರ ದೇವಾಲಯಗಳು. ನೀಲಾವರದಲ್ಲಿ ಉಡುಪಿಯ ಪೇಜಾವರ ಮಠದವರು ಗೋಶಾಲೆಯನ್ನು ನಿರ್ಮಿಸಿದ್ದಾರೆ.

ಪ್ರೇಕ್ಷಣಿಯ ಸ್ಥಳಗಳು[ಬದಲಾಯಿಸಿ]

ಶ್ರೀ ಮಹಿಷಮರ್ದಿನೀ ದೇವಸ್ಥಾನ[ಬದಲಾಯಿಸಿ]

ಶ್ರೀ ಮಹಿಷಮರ್ದಿನಿ ದೇವಸ್ಥಾನವು ಸೀತಾನದಿಯ ದಡದಲ್ಲಿದೆ.[೧] ಈ ದೇವಸ್ಥಾನವನ್ನು ಗಲವ ಮಹರ್ಷಿಯವರು ನಿರ್ಮಿಸಿದ್ದಾರೆ. ನೀಲಾವರದ ಇತಿಹಾಸವನ್ನು ನೀಲಾವರ ಕ್ಷೇತ್ರ ಪುರಾಣದಿಂದ ತಿಳಿಯಬಹುದಾಗಿದೆ. ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ನೆಡೆಯುತ್ತದೆ. ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಚೈತ್ರ ಪೌರ್ಣಿಮೆಯ ನಾಲ್ಕು ದಿನಗಳ ನಂತರದಲ್ಲಿ ನೆಡೆಯುತ್ತದೆ. ಚೈತ್ರ ಪೌರ್ಣಿಮೆ ಏಪ್ರಿಲ್ ತಿಂಗಳಲ್ಲಿ ಬರುತ್ತದೆ. ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.[೨]

ಪಂಚಮಿ ಕಾನನ[ಬದಲಾಯಿಸಿ]

ಪಂಚಮಿ ಕಾನನವು ಸೀತಾನದಿಯ ಪೂರ್ವದಲ್ಲಿದೆ. ಇದು ನಾಗದೇವರ ದೇವಸ್ಥಾನ. ವೃಶ್ಚಿಕ ಮಾಸದಲ್ಲಿ ತೀರ್ಥಸ್ನಾನವನ್ನು ಮಾಡಲಾಗುತ್ತದೆ. ತೀರ್ಥಸ್ನಾನ ಇಲ್ಲಿ ಪ್ರಸಿದ್ಧವಾಗಿದೆ. ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಬರುವವರು ಪಂಚಮಿ ಕಾನನಕ್ಕೂ ಬಂದು ದೇವರ ದರ್ಶನ ಮಾಡಬೇಕೆಂಬ ವಾಡಿಕೆ ಇದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಯಳ್ಳಂಪಳ್ಳಿ[ಬದಲಾಯಿಸಿ]

ಯಳ್ಳಂಪಳ್ಳಿಗೆ ಹಿಂದೆ ಯಜ್ಞಂಪಳ್ಳಿ ಎಂದು ಕರೆಯುತ್ತಿದ್ದರು. ಯಜ್ಞಂಪಳ್ಳಿ ಎಂದರೆ ಯಜ್ಞ ಅಥವಾ ಯಾಗವನ್ನು ಮಾಡುವ ಹಳ್ಳಿ ಎಂಬ ಅರ್ಥವನ್ನು ನೀಡುತ್ತದೆ. ಈ ದೇವಸ್ಥಾನದಲ್ಲಿರುವ ರಬ್ಬರ್ ತೋಟದಲ್ಲಿ ಯಜ್ಞ ಕುಂಡ ಮತ್ತು ಯಜ್ಞ ವೇದಿಕೆಗಳನ್ನು ಕಾಣಬಹುದು. ದೇವಸ್ಥಾನದ ನವೀಕರನದ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನವನ್ನು ನಿರ್ಮಿಸಲಾಯಿತು. "ಗಲವ ಮಹರ್ಷಿಯವರು ಮಹಾಲಿಂಗೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿರುತ್ತಾರೆ" ಮತ್ತು "ಶ್ರಾವಣ ಮಾಸ ಮತ್ತು ಶಿವರಾತ್ರಿ ಹಬ್ಬಗಳಂದು ವಿಶೇಷ ಪೂಜೆಗಳು ನೆಡೆಯುತ್ತದೆ" ಎಂದು ಇಲ್ಲಿನ ಜ್ಯೋತಿಷಿಯವರಾದ ವಿಶ್ವೇಶ್ವರ ಅಡಿಗರವರು ಹೇಳುತ್ತಾರೆ.

ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಯಳ್ಳ೦ಪಳ್ಳಿ[ಬದಲಾಯಿಸಿ]

ಶ್ರೀ ವಿಷ್ಣುಮೂರ್ತಿ ದೇವಸ್ಥಾನವು, ಯಳ್ಳಂಪಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ನೀಲಾವರದ ಶ್ರೀ ಮಹಿಷಮರ್ದಿನೀ ದೇವಸ್ಥಾನಗಳ ನಡುವೆ ಇದೆ. ಇಲ್ಲಿನ ದೇವರ ವಿಗ್ರಹವು ನಾಲ್ಕು ಕೈಗಳಿಂದ ನಿಂತ ಭಂಗಿಯಲ್ಲಿದೆ.[೩] ಈ ದೇವರ ಮೂರ್ತಿಯು ೮೦೦ ವರ್ಷ ಹಳೆಯ ಮೂರ್ತಿಯಾಗಿದೆ. ಇಲ್ಲಿಂದ ನೀಲಾವರ, ಕುಂಜಾಲ್ ಮತ್ತು ಪೆತ್ರಿಗೆ ಹೋಗುವ ರಸ್ತೆ ಸಿಗುತ್ತದೆ. ದೇವಸ್ಥಾನದ ಸುತ್ತವು ಭತ್ತದ ಗದ್ದೆ ಇದೆ.

ನೀಲಾವರ ಗೋಶಾಲೆ[ಬದಲಾಯಿಸಿ]

ಪೇಜಾವರ ಮಠದ ಸ್ವಾಮಿಜಿಗಳ ಕಡೆಯಿಂದ, ನೀಲಾವರದಲ್ಲಿ ಗೋಶಾಲೆಯನ್ನು ನಿರ್ಮಿಸಲಾಯಿತು.[೪] ಬೀದಿಯಲ್ಲಿರುವ ಮತ್ತು ವಯಸ್ಸಾದ ಹಸುಗಳಿಗೆ ಉಪಯೋಗವಾಗುವುದಕ್ಕೆ ಗೋಶಾಲೆಯನ್ನು ನಿರ್ಮಾಣ ಮಾಡಿದರು. ಈ ಗೋಶಾಲೆಯಲ್ಲಿ ೮೦೦ಕ್ಕೂ ಹೆಚ್ಚಿನ ಗೋವುಗಳಿಗೆ ಆಶ್ರಯನ್ನು ನೀಡಲಾಗಿದೆ. ೨೦೧೩ರಲ್ಲಿ ಸರೋವರ ಎಂಬ ಕೆರೆಯನ್ನು ನಿರ್ಮಿಸಲಾಯಿತು. ಕೆರೆಯ ಮಧ್ಯದಲ್ಲಿ ಶ್ರೀ ಕೃಷ್ಣನ ದೇವಾಲಯವನ್ನು ಕಟ್ಟಿದರು.

ನೀಲಾವರ ಅಣೆಕಟ್ಟು[ಬದಲಾಯಿಸಿ]

ಸೀತಾನದಿಗೆ ಅಡಲಾಗಿ ಒಂದು ಅಣೆಕಟ್ಟು ಕಟ್ಟಲಾಗಿದೆ. ಇದು ನೀಲಾವರದ ಪಶ್ಚಿಮದಲ್ಲಿ ಇದೆ.

ಬಾವಲಿ ಕುದ್ರು[ಬದಲಾಯಿಸಿ]

ಬಾವಲಿ ಕುದ್ರುವು ಸೀತಾನದಿಯ ಮಧ್ಯದಲ್ಲಿ ಬರುವ ಒಂದು ದ್ವೀಪ. ಇಲ್ಲಿ ಬಾವಲಿಗಳು ವಾಸಿಸುತ್ತವೆ. ದ್ವೀಪಕ್ಕೆ ಸ್ಥಳಿಯ ದೋಣಿಗಳ ಮೂಲಕ ತಲುಪಬಹುದು. ಈ ದ್ವೀಪದಲ್ಲಿ ಕೆಲವು ಕ್ರೈಸ್ತ ಕುಟುಂಬದ ಜನರು ವಾಸಿಸುತ್ತಿದ್ದಾರೆ. ಇತ್ತಿಚೆಗಷ್ಟೇ ಬಾವಲಿ ಕುದ್ರುವಿನಿಂದ ನೀಲಾವರಕ್ಕೆ ಸೇತುವೆಯನ್ನು ನಿರ್ಮಿಸಲಾಯಿತು.[೫]

ಸಂತ ಪಾವ್ಲರ ದೇವಾಲಯ[ಬದಲಾಯಿಸಿ]

ಸಂತ ಪಾಮ್ಲರ ದೇವಾಲಯವು ಕ್ರೈಸ್ತರ ಪ್ರಾರ್ಥನಾ ಮಂದಿರ.[೬]

ಯಕ್ಷಗಾನ ಬಯಲಾಟ ಮೇಳ[ಬದಲಾಯಿಸಿ]

೨೦೧೦ರಲ್ಲಿ ನೀಲಾವರದ ಮಹಿಷಮರ್ದಿನಿ ದೇವಸ್ಥಾನದ ಕಾರ್ಯನಿರ್ವಾಹಣಾ ಕಛೇರಿಯ ಕಡೆಯಿಂದ " ದಶಾವತಾರ ಯಕ್ಷಗಾನ ಬಯಲಾಟ ಮೇಳ" ಆರಂಭವಾಯಿತು. ಯಕ್ಷಗಾನ ತಂಡದಲ್ಲಿ ೪೦ ಜನ ಕಲಾವಿದರಿದ್ದರು. ಮೇಳವು ನವೆಂಬರ್ ತಿಂಗಳಲ್ಲಿ ಪ್ರವಾಸವನ್ನು ಕೈಗೊಳ್ಳುತ್ತಿತ್ತು. ಈ ಪ್ರವಾಸದ ಮೇಲ್ವಿಚಾರಣೆಯನ್ನು ನಿರ್ವಾಹಕರು ಮತ್ತು ಭಾಗವತರು ನೋಡಿಕೊಳ್ಳುತ್ತಿದರು. ಆರು ತಿಂಗಳ ಪ್ರವಾಸವು ಮೇ ತಿಂಗಳಿನಲ್ಲಿ ಮುಕ್ತಾಯವಾಗುತ್ತಿತ್ತು. ಹಳ್ಳಿಯಿಂದ ಹಳ್ಳಿಗಳಿಗೆ ಪ್ರವಾಸವನ್ನು ಮಾಡಿ ಪ್ರತೀ ಹಳ್ಳಿಯಲ್ಲೂ ಒಂದೊಂದು ಯಕ್ಷಗಾನ ಪ್ರಸಂಗವನ್ನು ಪ್ರದರ್ಶನ ಮಾಡುತ್ತಿದ್ದರು. ಯಕ್ಷಗಾನ ಅಭಿಮಾನಿಗಳು ಮತ್ತು ಆಸಕ್ತರು ಮೇಳವನ್ನು ಮನೆಗೆ ಕರೆಸಿಕೊಂಡು, ಪ್ರಸಂಗವನ್ನು ಏರ್ಪಡಿಸುತ್ತಿದ್ದರು. ಆ ದಿನದ ಊಟ ಮತ್ತು ವಸತಿಯನ್ನು ಎಲ್ಲಾ ಕಲಾವಿದರಿಗೆ ನೀಡಲಾಗುತ್ತಿತ್ತು. ಪ್ರತೀ ಹಳ್ಳಿಯಲ್ಲೂ ಬೇರೆ - ಬೇರೆ ಪ್ರಸಂಗವನ್ನು ಪ್ರದರ್ಶಿಸುತ್ತಿದ್ದರು.

ಜನ[ಬದಲಾಯಿಸಿ]

ನೀಲವರ ಜನಸಂಖ್ಯೆಯು ಹಿಂದೂಗಳು ಮತ್ತು ಕ್ರೈಸ್ತರಿಂದ ಕೂಡಿದೆ ಮತ್ತು ಎಲ್ಲರೂ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ.

ಭಾಷೆ[ಬದಲಾಯಿಸಿ]

ಕುಂದ ಕನ್ನಡ, ತುಳು, ಕೊಂಕಣಿ ನೀಲವರದಲ್ಲಿ ಜನರು ಮಾತನಾಡುತ್ತಾರೆ. ಕುಂದ ಕನ್ನಡ ಸಂವಹನದ ಮುಖ್ಯ ಭಾಷೆ.

ಕಸುಬು[ಬದಲಾಯಿಸಿ]

ಇಲ್ಲಿನ ಜನರ ಮುಖ್ಯ ಉದ್ಯೋಗವು ಕೃಷಿಗೆ ಸಂಬಂಧಿಸಿದೆ. ಭತ್ತ, ತೆಂಗಿನಕಾಯಿ, ಅಡಿಕೆ ಮರ, ತರಕಾರಿಗಳನ್ನು ಬೆಳೆಯುತ್ತಾರೆ .

ಮಾರ್ಗ[ಬದಲಾಯಿಸಿ]

  • ಉಡುಪಿಯಿಂದ ನೀಲಾವರಕ್ಕೆ ಬಸ್ಸಿನ ಸೌಲಭ್ಯವಿದೆ. ಉಡುಪಿಯಿಂದ ನೀಲಾವರಕ್ಕೆ ೨೦ ಕಿಲೋಮೀಟರ್ ಅಂತರವಿದೆ.
  • ಸೀತಾನದಿಯ ಇನ್ನೊಂದು ಬದಿಯಲ್ಲಿರುವ ಬಾರ್ಕೂರು, ಬಂಡಿಮಠ ಮತ್ತು ಕುರಾಡಿಯಿಂದ ಜಲಮಾರ್ಗವಾಗಿ ದೋಣಿಗಳ ಸಹಾಯದಿಂದ ತಲುಪಬಹುದು.
  • ಟ್ಯಾಕ್ಸಿ ಮತ್ತು ಆಟೋಗಳಲ್ಲಿ ಬಾರ್ಕೂರಿನಿಂದ ನೀಲಾವರಕ್ಕೆ ಹೋಗಬಹುದು.
  • ಮಟಪಾಡಿಯಿಂದ ೭ ಕಿಲೋಮೀಟರ್ ಅಂತರವಿದೆ. ಹಾಗಾಗಿ ದ್ವಿಚಕ್ರ ವಾಹನ ಬಳಸಿ ನೀಲಾವರಕ್ಕೆ ತೆರಳಬಹುದು.
  • ಬಾರ್ಕೂರಿನಿಂದ ನೀಲಾವರಕ್ಕೆ ೭ ಕಿಲೋಮೀಟರ್ ಅಂತರವಿದೆ. ಬಾರ್ಕೂರಿನಲ್ಲಿ ರೈಲ್ವೆ ನಿಲ್ದಾಣವಿದೆ (ಇದು ಸ್ಥಳೀಯ ರೈಲುಗಳಿಗೆ). ಜೊತೆಗೆ ಉಡುಪಿಯ ಇಂದ್ರಾಳಿಯಲ್ಲೂ ರೈಲು ನಿಲ್ದಾಣವಿದೆ (ಇದು ಕೆಲವು ಪ್ರಮುಖ ರೈಲುಗಳಿಗೆ).
  • ನೀಲಾವರದಿಂದ ೭೫ ಕಿಲೋಮೀಟರ್ ದೂರದಲ್ಲಿ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ನೀಲಾವರ&oldid=1056193" ಇಂದ ಪಡೆಯಲ್ಪಟ್ಟಿದೆ