ನಿರ್ಮಲಾ ಕೇಸರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ನಿರ್ಮಲಾ ಕೇಸರಿ
  • ಜನನ ಸ್ಥಳ : ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಸೋಮನಹಳ್ಳಿ
  • ಜನನ -ಮರಣ : ದಿನಾಂಕ :ಸೆಪ್ಟೆಂಬರ್ 14, 1930 :: 5-2-2016
  • ವೃತ್ತಿ : ವೈದ್ಯರು - ಮಕ್ಕಳ ತಜ್ಞರು ಪ್ರಾಧ್ಯಾಪಕರು
  • ರಾಜ್ಯ : ಕರ್ನಾಟಕ
  • ರಾಷ್ಟ್ರೀಯತೆ : ಭಾರತೀಯ
  • ಪ್ರಶಸ್ತಿಗಳು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2005
  • ಇತರೆ ::ಡಾ ಪಿ.ಎಸ್ ಶಂಕರ್ ವೈದ್ಯ ಶ್ರೀ ಪ್ರಶಸ್ತಿ

ಡಾ.ನಿರ್ಮಲಾ ಕೇಸರಿ[ಬದಲಾಯಿಸಿ]

  • ನಿರ್ಮಲಾ ಕೇಸರಿಯವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ (ಸೆಪ್ಟೆಂಬರ್ 14, 1930).ಜನಿಸಿದರು. ಅವರ ತಂದೆ ಮಹದೇವ ಕೇಸರಿ, ತಾಯಿ ಪಾರ್ವತಿದೇವಿ.. ತಂದೆ ವೃತ್ತಿಯಲ್ಲಿ ವಕೀಲರು. , ಸ್ವಾತಂತ್ರ್ಯ ಹೋರಾಟಗಾರರು. ಅವರ ಸೋದರ ಸೋದರಿಯರು ಎಂ.ಡಿ.ಮಾಲತಿ, ಶೋಭಾ ಸದಾನಂದ, ಲೀಲಾ ಕೇಸರಿ, ಪ್ರಕಾಶ ಕೇಸರಿ, ಸುರೇಶ್ ಕೇಸರಿ. ವೈದ್ಯಕೀಯ ಚಿಕಿತ್ಸೆ ಸಿಗದೆ ಆರೇಳು ವರ್ಷದ ಅವರ ಸೋದರರಿಬ್ಬರು ಕಾಯಿಲೆಯಿಂದ ಸಾವನ್ನಪ್ಪಿದಾಗ, ಬಾಲಕಿ ನಿರ್ಮಲಾ ತೀವ್ರ ನೊಂದುಕೊಂಡರು. ಅದರ ಪರಿಣಾಮ ಅವರು ಭವಿಷ್ಯದಲ್ಲಿ ವೈದ್ಯೆಯಾಗಿ ಮಕ್ಕಳ ಸೇವೆ ಮಾಡಬೇಕೆಂಬ ದೃಢ ನಿರ್ಧಾರ ಕೈಗೊಂಡರು.
  • ಮುಂಬಯಿ ವಿಶ್ವವಿದ್ಯಾಲಯ ನಡೆಸಿದ ಇಂಟರ್ ಮಿಡಿಯೇಟ್ ( ಈಗಿನ 2 ವರ್ಷದ ಪಿ.ಯುಸಿ. ಬದಲಿಗೆ ಆಗ ಒಂದು ವರ್ಷದ ಇಂಟರ್ ಮಿಡಿಯೇಟ್ ಇತ್ತು) ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಲ್ಲಿ ಜೀವವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿದರು. ಅದಕ್ಕಾಗಿ ಅವರಿಗೆ ಸ್ಕಾಲರ್`ಷಿಷ್ ಸಿಕ್ಕಿತು. ಮುಂಬಯಿಯ ಗ್ರಾಂಟ್‌ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿತು. ತಂದೆ ಮಹದೇವ ಕೇಸರಿಯವರು ವೃತ್ತಿಯಲ್ಲಿ ವಕೀಲರಾದರೂ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯರಾಗಿದ್ದರಿಂದ ಅವರಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಕೊಡುವಷ್ಟು ಹೆಚ್ಚು ಹಣ ಇರಲಿಲ್ಲ.ನಿರ್ಮಲಾ ಅವರು ಸಂಬಂಧಿಕರಿಂದ ಸಹಾಯ ಪಡೆಯಲು ಇಷ್ಟಪಡದೆ ಸ್ವಂತ ದುಡಿದು ಓದು ಮುಂದುವರಿಸಲು ನಿರ್ಧರಿಸಿದರು. ವಿದೇಶಿಯರಿಗೆ ಹಿಂದಿ ಕಲಿಸಿದರು; ಸ್ವೆಟರ್ ಹೆಣೆದು ಮಾರಿದರು;, ಮುಂಬಯಿ ಅಕಾಶವಾಣಿಯಲ್ಲಿ ಕೆಲಕಾಲ ಉದ್ಘೋಷಕಿಯಾಗಿ ಕೆಲಸ ಮಾಡಿದರು. ಹೀಗೆ ಸ್ವಂತ ದುಡಿಮೆಯಿಂದ ಓದು ಮುಂದುವರಿಸಿ ಎಂಬಿಬಿಎಸ್ ಮುಗಿಸಿದರು.

ವಿದೇಶದಲ್ಲಿ[ಬದಲಾಯಿಸಿ]

  • ಎಂಬಿಬಿಎಸ್ ಮುಗಿಸಿದ ನಂತರ ಒಂದು ವರ್ಷದಲ್ಲಿ ಅಮೆರಿಕದಲ್ಲಿ ಸಂಶೋಧನೆ ಮಾಡಲು ಅವಕಾಶ ಸಿಕ್ಕಿತು. ಅಲ್ಲಿ ಅವರು ಆರು ವರ್ಷ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರು.. ನಂತರ ಇಂಗ್ಲೆಂಡ್‌ನಲ್ಲಿ ಐದು ವರ್ಷ ಹೆಚ್ಚಿನ ಸಂಶೋಧನೆ ನಡೆಸಿದರು. ಹೀಗೆ ಶಿಶುರೋಗ ಕ್ಷೇತ್ರದಲ್ಲಿ ಅತ್ಯುನ್ನತ ಪದವಿಗಳನ್ನು ಪಡೆದರು.

ತಾಯಿನಾಡಿನಲ್ಲಿ ಸೇವೆ[ಬದಲಾಯಿಸಿ]

  • ಅವರು ವಿದೇಶದಲ್ಲಿ ವೃತ್ತಿ ಆರಂಭಿಸುವ ಬದಲು ಭಾರತದಲ್ಲಿ ಅದರಲ್ಲೂ ತಾಯಿನಾಡಿನಲ್ಲಿ ಸೇವೆ ಮಾಡಲು ಬಯಸಿದರು. ಅವರು ವಿವಾಹ ಮಾಡಿಕೊಳ್ಳಲಿಲ್ಲ. ಬದಲು ತಾವು ಹುಟ್ಟಿದ ನಾಡಿನಲ್ಲಿ ಬಡ ಮಕ್ಕಳ ಸೇವೆಮಾಡಲು ನಿಶ್ದಚಯಿಸಿದರು . ಅವರು 1967 ರಲ್ಲಿ ದಾವಣಗೆರೆಗೆ ಬಂದವರು ಜೆಜೆಎಂ ವೈದ್ಯಕೀಯ ಕಾಲೇಜ್`ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ನಂತರ ಅದೇ ಕಾಲೇಜಿನ ಮಕ್ಕಳವೈದ್ಯ ವಿಭಾಗವನ್ನು ಆರಂಭಿಸಿದರು ಹೀಗೆ ಅವರು ಆ ವಿಭಾಗದ ಸ್ಥಾಪಕರೂ ಮತ್ತು ಮುಖ್ಯಸ್ಥರೂ ಆದರು.

ಮಕ್ಕಳ ಸೇವೆ[ಬದಲಾಯಿಸಿ]

  • ರಾಜ್ಯದಲ್ಲಿ ಮೊದಲ ಬಾರಿಗೆ ‘ಗ್ರಾಮೀಣ ಪ್ರದೇಶಗಳಲ್ಲಿ ಪೋಲಿಯೊ, ದಡಾರ, ಸಿಡುಬು ಮಕ್ಕಳಿಗೆ ರೋಗದ ಬಾಧೆ ತಪ್ಪಿಸಲು ಲಸಿಕೆ ಹಾಕುವ ಕಾgರ್ಯಕ್ರಮ ಆರಂಭಿಸಿದರು. ಅದನ್ನು ನಂತರ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ವಿಸ್ತರಿಸು ಕಾಲೇಜಿನಲ್ಲಿ ಕೆಲಸ ಮಾಡುತ್ತಲೇ ಸಂಶೋಧನಾ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಮಾಡುವಂತೆ ಅವರು ಹುರಿದುಂಬಿಸುತ್ತಿದ್ದರಂತೆ. ಹಾಗೆಂದು ಅವರ ಶಿಷ್ಯ ಹಾಗೂ ಮಕ್ಕಳ ತಜ್ಞ ಡಾ.ಬಾಣಾಪುರಮಠ ಹೇಳುತ್ತಾರೆ.

ಯೋಜನೆ[ಬದಲಾಯಿಸಿ]

  • ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರಗಳನ್ನು ದಾವಣಗೆರೆಯಲ್ಲಿ ಅವರ ಒತ್ತಾಸೆ ಪರಿಶ್ರಮದಿಂದ ಆರಂಭಿಸಲಾಯಿತು. 1994ರಲ್ಲಿ ಆರಂಭವಾದ ಈ ಸಂಶೋಧನಾ ಕೇಂದ್ರಕ್ಕೆ ಡಾ.ನಿರ್ಮಲಾ ಅವರೇ ಮೊದಲ ನಿರ್ದೇಶಕಿ. ಅವರು. ತಮ್ಮ ಇಡೀ ಜೀವನವನ್ನು ಮಕ್ಕಳ ಸೇವೆಗಾಗಿಯೇ ಮುಡಿಪಿಟ್ಟಿದ್ದರು.
  • ಡಾ.ನಿರ್ಮಲಾ ಕೇಸರಿ ಅವರು, ತಮ್ಮ ಕೊನೆಯ ದಿನಗಳಲ್ಲಿ ಮರೆವು ಮತ್ತು ವಯೋಸಹಜ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಂತಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜ ಸೇವೆಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು 2005 ರಲ್ಲಿ ನೀಡಲಾಯಿತು. ಇದಲ್ಲದೆ ಅವರಿಗೆ ಹಲವು ಗೌರವ, ಸನ್ಮಾನಗಳು ಸಂದಿವೆ'
  • ರಾಜ್ಯೋತ್ಸವ ಪ್ರಶಸ್ತಿ : ಡಾ.ನಿರ್ಮಲಾ ಕೇಸರಿ ಸಂಕೀರ್ಣ 2005 (ಕ್ರ.ಸಂ.1614 118)[೧] Archived 2016-03-22 ವೇಬ್ಯಾಕ್ ಮೆಷಿನ್ ನಲ್ಲಿ.

ದೈವಾಧೀನ[ಬದಲಾಯಿಸಿ]

  • ಹಿರಿಯ, ಮಕ್ಕಳ ತಜ್ಞೆಯಾದ ಡಾ.ನಿರ್ಮಲಾ ಕೇಸರಿ (86)ಯವರು ಶುಕ್ರವಾರ ೫-೨-೨೦೧೬ ರಂದು ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ನಿಧನರಾದರು.
  • ನಾಲ್ಕು ವರ್ಷಗಳಿಂದ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಈಗ ಒಬ್ಬ ಸೋದರ, ಇಬ್ಬರು ಸೋದರಿಯರು ಇದ್ದಾರೆ. ತೋಳಹುಣಸೆಯ ದಾವಣಗೆರೆ ವಿ.ವಿ. ಎದುರಿನ ‘ಕೇಸರಿವನ’ದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳನ್ನು ಕೈಗೊಂಡು ಅದನ್ನು ಅನುಷ್ಠಾನಗೊಳಿಸಿದ್ದರು.

ಉಲ್ಲೇಖ[ಬದಲಾಯಿಸಿ]