ಟಿ. ಎಸ್. ಸತ್ಯವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಸತ್ಯವತಿ,
ಚಿತ್ರ:Dr. TSS.jpg
ಜನನ
ಸತ್ಯವತಿ

30th June 1954
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಸಂಸ್ಕೃತದಲ್ಲಿ ಎಂ.ಎ, ಎಂ.ಫಿಲ್, ಮತ್ತು ಪಿಎಚ್.ಡಿ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಶಿಕ್ಷಣ [ಸಾಕ್ಷ್ಯಾಧಾರ ಬೇಕಾಗಿದೆ]
ಉದ್ಯೋಗಸಂಗೀತ ವಿದ್ವಾಂಸರು
ಪೋಷಕರುಟಿ.ಎಸ್.ಶ್ರೀನಿವಾಸಮೂರ್ತಿ, ಮತ್ತು ರಂಗಲಕ್ಷ್ಮಿ

ಗಾನಕಲಾಶ್ರೀ ಡಾ.ಟಿ.ಎಸ್.ಸತ್ಯವತಿ ಯವರು ಕರ್ನಾಟಕ ಸಂಗೀತ, ಸಂಸ್ಕೃತ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದಾರೆ.

ಬಾಲ್ಯ ಹಾಗೂ ಪ್ರಾರಂಭಿಕ ಜೀವನ[ಬದಲಾಯಿಸಿ]

ಸತ್ಯವತಿ, ಯವರು ೩೦ ಜೂನ್, ೧೯೫೪ ರಲ್ಲಿ [ಸಾಕ್ಷ್ಯಾಧಾರ ಬೇಕಾಗಿದೆ] ಟಿ.ಎಸ್.ಶ್ರೀನಿವಾಸಮೂರ್ತಿ ಮತ್ತು ರಂಗಲಕ್ಷ್ಮಿ ಅವರ ಪುತ್ರಿಯಾಗಿ[ಸಾಕ್ಷ್ಯಾಧಾರ ಬೇಕಾಗಿದೆ] ಜನಿಸಿದರು. ಅವರು ಸಂಗೀತ ವಿದ್ವಾಂಸರಲ್ಲದೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿ ಸಂಸ್ಕೃತದಲ್ಲಿ ಎಂ.ಎ; ಎಂ.ಫಿಲ್, ಮತ್ತು ಪಿಎಚ್.ಡಿ. ಸಾಧನೆಗಳನ್ನು ಮಾಡಿದ್ದಾರೆ. ನಂತರ, ಅವರು, 'ಬೆಂಗಳೂರಿನ ವಿದ್ಯಾವರ್ಧಕ ಸಂಘದ ಮಹಿಳಾ ಪ್ರಥಮ ದರ್ಜೆ ಕಾಲೇಜಿ'ನಲ್ಲಿ ಕಳೆದ ಮೂರು ದಶಕಗಳಿಂದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕಲಾಶ್ರೀ, ವಿದುಷಿ ವಸಂತ ಮಾಧವಿಯವರಿಂದಲೂ ಮತ್ತು ಪದ್ಮಭೂಷಣ ಆರ್. ಕೆ.ಶ್ರೀಕಂಠನ್ ರವರಿಂದಲೂ ಸಂಗೀತ ಗಾಯನ ಶಿಕ್ಷಣವನ್ನು ಪಡೆದರು. ಮುಂದುವರೆದು, ಸಂಗೀತ ಕಲಾರತ್ನ ಬಿ.ವಿ.ಕೆ ಶಾಸ್ತ್ರಿ ಅವರಿಂದ ಸಂಗೀತ ಶಾಸ್ತ್ರ ಶಿಕ್ಷಣವನ್ನೂ ಮತ್ತು ಸಂಗೀತ ಕಲಾ ರತ್ನ ವಿದ್ವಾನ್ ಬೆಂಗಳೂರು ಕೆ.ವೆಂಕಟರಾಮ್ ಅವರಿಂದ ಮೃದಂಗವಾದನವನ್ನೂ ಅಭ್ಯಾಸ ಮಾಡಿದ್ದಾರೆ.

ವೃತ್ತಿ[ಬದಲಾಯಿಸಿ]

ವಿಶ್ವದಾದ್ಯಂತ ಸಂಗೀತ[ಬದಲಾಯಿಸಿ]

ಸತ್ಯವತಿಯವರು ಕೇವಲ ಎರಡು ವರ್ಷದ ಮಗುವಾಗಿರುವಾಗಲೇ ಮೈಸೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿಯವರ ಸಮ್ಮುಖದಲ್ಲಿ ಗಾಯನಕ್ಕಾಗಿ ಪ್ರಶಂಸೆ ಪಡೆದ ಬಾಲ ಪ್ರತಿಭೆ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ 'ಕರ್ನಾಟಕ ಗಾನಕಲಾ ಪರಿಷತ್ತಿ'ನಲ್ಲಿ ಅವರು ಮೊದಲ ಸಭಾಕಛೇರಿ ನಡೆಸಿದರು. ದೇಶದ ವಿವಿಧ ವೇದಿಕೆಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದರ ಜೊತೆಗೆ ಅವರು 'ಸಾರ್ಕ್ ಶೃಂಗ ಸಭೆ ೧೯೮೫', 'ಅಕ್ಕ ವಿಶ್ವ ಸಮ್ಮೇಳನ ೨೦೧೦' ಸೇರಿದಂತೆ ವಿವಿಧ ರಾಷ್ಟ್ರಗಳ ಹಲವಾರು ವೇದಿಕೆಗಳಲ್ಲೂ ತಮ್ಮ ಸಂಗೀತ ರಸದೌತಣವನ್ನು ಅವರು ಶ್ರೋತೃಗಳಿಗೆ ನೀಡಿದ್ದಾರೆ.

ವೈವಿಧ್ಯಪೂರ್ಣ ಸಾಧನೆ[ಬದಲಾಯಿಸಿ]

ಗಾಯನ ಕಾರ್ಯಕ್ರಮಗಳಷ್ಟೇ ಅಲ್ಲದೆ ಸತ್ಯವತಿಯವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನು ನಿರ್ವಹಿಸಿದ್ದಾರೆ. ಮೈಸೂರ್ ಅಸೋಸಿಯೇಷನ್, ಮುಂಬೈನಲ್ಲಿ ಪ್ರಾತ್ಯಕ್ಷಿಕೆಗಳ ಸಹಿತ ಸಂಗೀತ ಕಾರ್ಯಾಗಾರವನ್ನು ನಡೆಸಿ ಹಲವಾರು ಯುವಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ಅನೇಕ ವಾಗ್ಗೇಯಕಾರರು, ದಾಸರು, ಕವಿಗಳ ಕುರಿತಾಗಿ ಪ್ರತ್ಯೇಕವಾಗಿ ಅವರು ನಡೆಸಿಕೊಡುತ್ತಿರುವ ವಿಶೇಷ ಕಾರ್ಯಗಾರಗಳು ವಿಶ್ವದಾದ್ಯಂತ ಪ್ರಶಂಸೆ ಪಡೆದಿವೆ. ಅತ್ಯಂತ ಕ್ಲಿಷ್ಟವಾದ “ರಾಗಮಾಲಿಕಾ ತಾಳಾವಧಾನ” ಪಲ್ಲವಿಗಳ ರಚನೆ, ಗಾಯನ ಮತ್ತು ಪ್ರಾತ್ಯಕ್ಷಿಕೆಗಳನ್ನು ಅವರು ನಿರ್ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳ ನಿರ್ದೇಶನ ಮಾಡಿದ್ದಾರೆ. ದಕ್ಷ ಯಜ್ಞ, ಗೀತ ಗೋವಿಂದ, ಅಭಿಜ್ಞಾನ ಶಾಕುಂತಲ ಮುಂತಾದ ನೃತ್ಯ ರೂಪಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯವತಿಯವರ ಅನೇಕ ಧ್ವನಿ ಸುರಳಿಗಳು ಬಿಡುಗಡೆಯಾಗಿವೆ. ಅನೇಕ ವಿದ್ವತ್ ಪೂರ್ಣ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಹಲವಾರು ವಿದಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರು ಕಲಾವಿದರಾಗಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಅನೇಕ ವೇದಿಕೆಗಳಿಂದ ಕಾರ್ಯಕ್ರಮಗಳನ್ನು ನೀಡುತ್ತಿರುವ ಹದಿನೈದಕ್ಕೂ ಹೆಚ್ಚು ಮಂದಿ ಅವರ ಶಿಷ್ಯರು ನಾಡಿಗೆ ಹೆಮ್ಮೆ ತಂದಿದ್ದಾರೆ.

ಬೆಂಗಳೂರು ಶಾಖೆಯ ಭಾರತೀಯ ವಿದ್ಯಾಭವನ[ಬದಲಾಯಿಸಿ]

  • ಭಾರತಿಯ ವಿದ್ಯಾ ಭವನವು ಸತ್ಯವತಿ ಅವರ “ಚತುಃಷಷ್ಟಿ ಕಲೆ” ಗ್ರಂಥವನ್ನು ಪ್ರಕಟಿಸಿದೆ. [೧]
  • 'ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ'.
  • 'ಇಂದಿರಾಗಾಂಧೀ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ 'ಸಂಸ್ಕೃತ–ಸಂಸ್ಕೃತಿ ಸರಣಿ ಕಾರ್ಯಕ್ರಮ ನಿರ್ವಹಣೆ' ಮಾಡಿದ್ದಾರೆ.
  • 'ಇಂಡಿಯಾ ಫೌಂಡೆಶನ್ ಫಾರ್ ದಿ ಆರ್ಟ್ಸ್ ಪ್ರಾಯೋಜನೆ'ಯಲ್ಲಿ ‘ಅನನ್ಯ’ ಸಂಸ್ಥೆಗಾಗಿ ೨೧ ಕಂತುಗಳಲ್ಲಿ “ಹಾಡು ಹಕ್ಕಿ” – ಮಕ್ಕಳಿಗಾಗಿ ಶಾಸ್ತ್ರೀಯ ಸಂಗೀತಾಭಿರುಚಿ ಕಾರ್ಯಕ್ರಮದ ನಿರ್ದೇಶನ ಹಾಗೂ ನಿರ್ವಹಣೆ ಮಾಡಿದ್ದಾರೆ.'

ಜವಾಬ್ದಾರಿ ನಿರ್ವಹಣೆ[ಬದಲಾಯಿಸಿ]

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಈ ಮಹಾನ್ ಸಂಗೀತ, ಸಂಸ್ಕೃತ ಮತ್ತು ಸಂಸ್ಕೃತಿ ಸಾಧಕರಾದ ಡಾ.ಟಿ.ಎಸ್.ಸತ್ಯವತಿ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು :

ವರ್ಷ ೨೦೧೫ ರಲ್ಲಿ[ಬದಲಾಯಿಸಿ]

ಡಾ.ಟಿ.ಎಸ್.ಸತ್ಯವತಿ,ಯವರು, ಮುಂಬಯಿ ನಗರದ ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ ಏಪ್ರಿಲ್,೩, ೨೦೧೫ ರಂದು, ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. [೩]

ವರ್ಷ ೨೦೨೩ ರಲ್ಲಿ[ಬದಲಾಯಿಸಿ]

ಮೈಸೂರು ಅಸೋಸಿಯೇಷನ್ ನ ಬಂಗಾರದ ಹಬ್ಬದ ದತ್ತಿ ಉಪನ್ಯಾಸದ ಆಹ್ವಾನಿತ ಉಪನ್ಯಾಸಕಿಯಾಗಿ ಭಾರತೀಯ ಸಂಗೀತದ ಬೇರು, ಬೆಳವಣಿಗೆ ಮತ್ತು ಮೂಲಗುರಿಯ ಬಗ್ಗೆ ವಿಸ್ತೃತವಾಗಿ ಮಾತಾಡಿದರು. (೪, ಫೆಬ್ರವರಿ, ಮತ್ತು ೫ ಫೆಬ್ರವರಿ, ೨೦೨೩ ರ ದಿನಗಳಂದು) "ಔಚಿತ್ಯವು ಸಂಪೂರ್ಣ ಸೌಂದರ್ಯಕ್ಕೆ ಹೇತುವಾಗುತ್ತದೆ"-ಡಾ.ಟಿ.ಎಸ್.ಸತ್ಯವತಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಮತ್ತು ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ-೨೦೨೩,ಕರ್ನಾಟಕ ಮಲ್ಲ, ೧೧, ಫೆಬ್ರವರಿ, ೨೦೨೩

ಕರ್ನಾಟಕ ಸಂಗೀತದ ಮೇರುಗಾಯಕಿ, ಸಂಸ್ಕೃತ ಪಾರಂಗತೆ, ಡಾ. ಟಿ.ಎಸ್.ಸತ್ಯವತಿಯವರು, ವರ್ಷ ೨೦೨೩ ರ ಮೈಸೂರು ಅಸೋಸಿಯೇಷನ್ ನ ಬಂಗಾರದ ಹಬ್ಬದ ದತ್ತಿ ಉಪನ್ಯಾಸಕಿಯಾಗಿ ಆಗಮಿಸಿದ್ದರು. ಅವರನ್ನು ಮೈಸೂರು ಅಸೋಸಿಯೇಷನ್ ಮತ್ತು ಮುಂಬಯಿ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕರು ಗೌರವಿಸಿದರು

ಉಲ್ಲೇಖಗಳು[ಬದಲಾಯಿಸಿ]

  1. "'Bangalore International Centre,'Lecture demonstration on 'The niceties and nuances of Karnatak Classical Music' by Dr.T.S.Satyavathi, Prof.in Sanskrit. Mrs.Geetha rao presided over the event, 22nd, Sept, 2007". Archived from the original on 2016-03-07. Retrieved 2015-01-04.
  2. The Hindu,Tech talk December 1, 2013
  3. 'ಕರ್ನಾಟಕ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ೧೦ ನೇ ಸಾಹಿತ್ಯ ಸಮಾವೇಶದ ಅಂಗವಾಗಿ ಡಾ.ಸತ್ಯವತಿಯವರ ಶಾಸ್ತ್ರೀಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು'

ಬಾಹ್ಯ ಸಂಪರ್ಕಗಳು[ಬದಲಾಯಿಸಿ]