ಗಣಪತರಾವ್ ಮಹಾರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ.ಸ.ಗಣಪತರಾವ ಮಹಾರಾಜ, ಶಾಂತಿ ಕುಟೀರ ಆಶ್ರಮ, ಕನ್ನೂರ

ಸಮರ್ಥ ಸದ್ಗುರು (ಸ.ಸ) ಶ್ರೀ ಗಣಪತರಾವ ಮಹಾರಾಜರು ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದ ಆಧ್ಯಾತ್ಮ ಗುರುಗಳಾಗಿದ್ದರು. ಮಹಾರಾಜರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದವರು.

ಜನನ[ಬದಲಾಯಿಸಿ]

ಶ್ರೀ ಗಣಪತರಾವ ಮಹಾರಾಜರು ಶ್ರೀ ದತ್ತಾತ್ರೆಯ ಭಕ್ತರಾದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದ ಸುಸಂಸ್ಕತ ಮನೆತನದ ಶಿವರಾಮ ಪಂತ ಹಾಗೂ ಸರಸ್ವತಿ ದಂಪತಿಯ ಐದು ಜನ ಪುತ್ರರಲ್ಲಿ ಮೂರನೇಯವರಾಗಿ 1909 ರಲ್ಲಿ ಭಾದ್ರಪದ ಶುದ್ದ ಚತುರ್ಥಿ(ಗಣೇಶ ಚತುರ್ಥಿ) ಯಂದು ಬೆಳಿಗ್ಗೆ 5 ಗಂಟೆಗೆ ಜನಿಸಿದರು. [೧]

ವಿದ್ಯಾಭ್ಯಾಸ[ಬದಲಾಯಿಸಿ]

ಮೆಟ್ರಿಕ್‌ವರೆಗೆ ವಿಜಯಪುರದ ಪಿ.ಡಿ.ಜೆ ಹೈಸ್ಕೂಲದಲ್ಲಿ ಓದಿದ ಇವರು ಆಧ್ಯಾತ್ಮಿಕ ಸಾಧನೆ ಮಾಡುತ್ತಲೇ ವಿದ್ಯಾಭ್ಯಾಸವನ್ನು ಮುಂದುವರೆಸಿ ಸಾಂಗ್ಲಿಯ ವೆಲ್ಲಿಂಗಟನ್ ಕಾಲೇಜ್, ಧಾರವಾಡದ ಕರ್ನಾಟಕ ಕಾಲೇಜ್ ಮತ್ತು 1932ರಲ್ಲಿ ಪುಣೆಯ ಫಗ್ರ್ಯೂಸನ್ ಕಾಲೇಜಿನಿಂದ ಬಿ.ಎಸ್‍.ಸಿ. ಪದವಿಯನ್ನು ಪಡೆದರು.

ಆಧ್ಯಾತ್ಮ[ಬದಲಾಯಿಸಿ]

ಬಾಲ್ಯದಲ್ಲೇ ಆಧ್ಯಾತ್ಮದ ಕಡೆಗೆ ಒಲವುಳ್ಳವರಾಗಿದ್ದ ಗಣಪತರಾವ್ ಮಹಾರಾಜರು ಚಿಕ್ಕ ದೇವರ ದರ್ಶನದ ಹಂಬಲವುಳ್ಳವರಾಗಿ ನಿತ್ಯವೂ ವಿಜಯಪುರದ ಶ್ರೀ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು. ತಮ್ಮ 13ನೇ ವಯಸ್ಸಿನಲ್ಲೇ ಗುರುಗಳಾದ ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪ್ರವಚನಗಳಿಂದ ಪ್ರಭಾವಿತರಾಗಿ ಅವರಿಂದ ಶಿಷ್ಯತ್ವ ಸ್ವೀಕರಿಸಿದರು. ಮನೆಯ ಬಾಗಿಲಿಗೆ ಬಂದ ನೌಕರಿಯನ್ನು ನಿರಾಕರಿಸಿ ಕನ್ನೂರಿನ ತಮ್ಮ ಸ್ವಂತ ಹೊಲದಲ್ಲಿಯೇ ಬಂದು ನೆಲೆಸಿ ಆಧ್ಯಾತ್ಮ ಸಾಧನೆಯನ್ನು ಮುಂದುವರಿಸಿದರು. ಅಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತ ಮೊದಲಿದ್ದ ಪುಟ್ಟ ಮನೆ ಬದಲಾಗುತ್ತ ಹೋಗಿ ಭಕ್ತರ ಆಶ್ರಮವಾಯಿತು. ಈಗ ಸುಮಾರು 2000 ಭಕ್ತರು ಕೂಡುವಂತಹ ದೊಡ್ಡ ಪ್ರವಚನ ಮಂದಿರ, ವಿಶಾಲ ಭೋಜನ ಶಾಲೆ, ಉಳಿದುಕೊಳ್ಳಲು ನೂರಕ್ಕೂ ಹೆಚ್ಚು ಕೋಣೆಗಳನ್ನು ಆಶ್ರಮವು ಹೊಂದಿದೆ.

1993ರಲ್ಲಿ ಜಾತಿ, ಮತ, ಪಂಥ, ಪ್ರಾಂತ ಭಾವನೆಗಳಿಗೆ ಅತೀತವಾದ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನಾಧರಿಸಿದ ಭಾರತೀಯ ಸುರಾಜ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಹಲವೆಡೆಗಳಲ್ಲಿ ಸ್ಥಳೀಯ ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ವಿಚಾರವಂತರೊಡಗೂಡಿ ಸಮ್ಮೇಳನಗಳನ್ನು ಏರ್ಪಡಿಸಿದರು. ಹಳ್ಳಿಗಳ ಆಮೂಲಾಗ್ರ ಸುಧಾರಣೆಗಾಗಿ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡರು. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮ ತಳಹದಿಯ ಮೂಲಕ ನೀತಿಪಾಠ ನೀಡಬೇಕೆಂದು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ವಿಚಾರವನ್ನು ಬಿತ್ತಿದರು. ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಎಂದು ಸ್ವದೇಶಿ ಪ್ರಚಾರಕ್ಕೆ ಒತ್ತುಕೊಟ್ಟರು.

ತಮ್ಮ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರು 1936 ರಲ್ಲಿ ದೇಹತ್ಯಾಗ ಮಾಡಿದ ನಂತರ ಸದ್ಗುರುಗಳ ಕೃಪಾರ್ಶಿವಾದದಿಂದ 1942 ರಲ್ಲಿ ಗುರುಸ್ಥಾನದಲ್ಲಿ ಭೂಷಿತರಾಗಿ 1962 ರವರೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿಯೇ ಇದ್ದರು. ಶ್ರೀ ಸದ್ಗುರು ಗಣಪತರಾವ ಮಹಾರಾಜರ ಅಮೃತವಾಣಿಯು ಜನರಿಗೆ ಪ್ರಿಯವಾಗಿ ಕರ್ನಾಟಕ, ಮಹಾರಾಷ್ಟ್ರ ಭಾಗದ ಸಹಸ್ರ ಸಹಸ್ರ ಜನರು ಅವರ ಶಿಷ್ಯರಾದರು. ಶಿಷ್ಯರ ಸಾಧನಕ್ಕೆ ಪುಷ್ಠಿಯಾಗುವದಕ್ಕಾಗಿ ಸ್ವಾನುಭವದ ಗ್ರಂಥಗಳನ್ನು ಕನ್ನಡ, ಮರಾಠಿಯಲ್ಲಿ ರಚಿಸಿದರು. ಕೆಲವು ಗ್ರಂಥಗಳು ಹಿಂದಿ, ಇಂಗ್ಲೀಷ, ಭಾಷೆಗೆ ತುರ್ಜುಮೆಯಾದ್ದರಿಂದ ದೇಶ ವಿದೇಶದವರು ಸಹ ಕನ್ನೂರ ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ಆಜನ್ಮ ಬ್ರಹ್ಮಚಾರಿಗಳಾಗಿ, ಸ್ವಾನುಭವಿಗಳಾಗಿ ಶಿಷ್ಯರ ಕಲ್ಯಾಣ ಬಯಸುತ್ತ ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿದರು.[೨]

ಪ್ರತಿಯೊಬ್ಬ ಮಾನವ ಎಲ್ಲಿಯೇ ಇದ್ದರೂ ಮತ್ತು ಎಂಥದ್ದೇ ಪರಿಸ್ಥಿತಿಯಲ್ಲಿ ಇದ್ದರೂ ಆನಂದದಿಂದ ಇರಬೇಕೆಂಬುದೇ ಅವನ ಇಚ್ಛೆ. ಇದನ್ನು ಸಾಧಿಸಲು ಎರಡು ಮಾರ್ಗಗಳು. ಒಂದು ಪ್ರಪಂಚ ಹಾಗೂ ಎರಡನೆಯದು ಪರಮಾರ್ಥ. ಹಲವರು ಐಷಾರಾಮಿ ವಸ್ತುಗಳನ್ನು ಸಂಪಾದಿಸಿ ಅವುಗಳಿಂದ ಸುಖ ಸಿಗುತ್ತದೆಂದು ಭಾವಿಸಿದ್ದಾರೆ. ಅಂದರೆ ಇರುವುದಕ್ಕೆ ದೊಡ್ಡಮನೆ (ಬಂಗಲೆ) ಶರೀರಕ್ಕೆ ಚೆನ್ನಾಗಿರುವ ಉಡುಪುಗಳನ್ನು ಒದಗಿಸುವುದು ಮತ್ತು ದೇಹಕ್ಕೆ ರುಚಿ ರುಚಿಯಾದ ತಿಂಡಿ ತಿನಿಸು ಕೊಡುವುದರಿಂದ ಸುಖ ಶಾಂತಿ ಪಡೆಯಬಹುದೆಂದು ಅವರ ನಂಬಿಕೆ.ಅಂದರೆ ಐಹಿಕ ಸುಖವೇ ನಿಜವಾದ ಸುಖವೆಂದು ತಿಳಿದು ಹಲವರು ಅವುಗಳ ಹಿಂದೆ ಬಿದ್ದಿದ್ದಾರೆ. ಅವುಗಳನ್ನು ಸಂಪಾದಿಸಲು ಮುಖ್ಯವಾಗಿ ದುಡ್ಡು ಬೇಕು. ಆದುದರಿಂದ ಎಲ್ಲರೂ ದುಡ್ಡಿನ ಸಂಪಾದನೆಯಲ್ಲಿಯೇ ನಿರತರಾಗಿದ್ದಾರೆ. ದುಡ್ಡಿನ ಅವಶ್ಯಕತೆ ಎಲ್ಲರಿಗೂ ಹಾಗೂ ಎಲ್ಲದಕ್ಕೂ ಇರುತ್ತದೆಂಬುದು ನಿಜವಿದ್ದರೂ ದುಡ್ಡೇ ಸರ್ವಸ್ವವಲ್ಲ.ಹಣ ಸಂಪಾದನೆಯಲ್ಲಿಯೇ ಮುಳುಗಿದವರು ಅದನ್ನು ಏತಕ್ಕಾಗಿ ಸಂಪಾದಿಸಬೇಕೆಂಬುದನ್ನೂ ಮರೆತು ಬಿಡುತ್ತಾರೆ. ದುಡ್ಡು ಸುಖದ ಸಾಧನೆಯಾಗಬಹುದಲ್ಲದೇ ಹೊರತು ಸುಖವನ್ನು ಕೊಡಲಾರದೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ದುಡ್ಡಿನಲ್ಲಿ ನಿಜವಾದ ಸುಖವಿಲ್ಲವೆಂಬುದು ಅರಿವಾಗುವಷ್ಟರಲ್ಲಿ ದೇಹಕ್ಕೆ ರೋಗ ಹಾಗೂ ಮುಪ್ಪು ಆವರಿಸುತ್ತದೆ ಮತ್ತು ಪರಮಾರ್ಥದೆಡೆ ಒಲವಾಗುತ್ತವೆ.

ಪರಮಾರ್ಥದಿಂದ ಅತ್ಯಂತ ದುಃಖ ನಿವೃತ್ತಿ ಹಾಗೂ ಪರಮಾನಂದ ಪ್ರಾಪ್ತಿಯಾಗುತ್ತದೆ. ಪರಮಾರ್ಥದಲ್ಲಿ ನಿಜವಾದ ಸುಖ ಮನಶ್ಶಾಂತಿ ದೊರೆಯುತ್ತದೆ. ಸಾಮಾನ್ಯವಾಗಿ ಎಲ್ಲರೂ ಸೇವಾ ವೃತ್ತಿ ಹೊಂದಿದ ಮೇಲೆ ಅಧ್ಯಾತ್ಮದೆಡೆ ಗಮನ ಹರಿಸಲು ಇಚ್ಚಿಸುತ್ತಾರೆ. ಆದರೆ ದೇಹಾರೋಗ್ಯ ಸರಿಯಿರುವಾಗಲೇ ಮತ್ತು ಸಾಕಷ್ಟು ಹಣವಿರುವಾಗಲೇ ಅಧ್ಯಾತ್ಮದೆಡೆ ಗಮನ ಕೊಡುವುದು ಶ್ರೇಯಸ್ಕರ. ಅಧ್ಯಾತ್ಮವು ವೃದ್ಧರಿಗೆ ಮಾತ್ರವಿರದೆ ತರುಣರಿಗೂ ಅವಶ್ಯವಿರುತ್ತದೆ.

ಪ್ರಪಂಚ ಹಾಗೂ ಪರಮಾರ್ಥಗಳು ಒಂದಕ್ಕೊಂದು ವಿರೋಧವಿರದೆ ಪೂರಕವಿರುತ್ತದೆ. ಶಾಂತಿ ಹಾಗೂ ಸಮಾಧಾನ ಪವಿತ್ರ ಹಿಮಾಲಯದಲ್ಲಷ್ಟೇ ಅಲ್ಲದೆ ಹೃದಯಾಂತಃಕರಣದಲ್ಲಿಯೂ ಇರುತ್ತದೆ. ಶಾಂತಿ ಹಾಗೂ ಸಮಾಧಾನ ಪಡೆಯುವುದಕ್ಕೆ ಪ್ರಪಂಚವನ್ನು ತೊರೆದು ಅರಣ್ಯಕ್ಕೆ ಹೋಗುವುದರ ಅವಶ್ಯಕತೆ ಇರುವುದಿಲ್ಲ. ಪ್ರಯಾಣಕ್ಕೆ ಹೇಗೆ ಕುದುರೆ ಹಾಗೂ ಥಡಿ ಎರಡೂ ಬೇಕೋ ಹಾಗೆಯೇ ನಿಜವಾದ ಸುಖ ದೊರಕಿಸುವುದಕ್ಕೆ ಪ್ರಪಂಚ ಹಾಗೂ ಪರಮಾರ್ಥಗಳು ಬೇಕು. ಥಡಿಯಿಲ್ಲದಿದ್ದರೂ ಪ್ರವಾಸ ಮಾಡಬಹುದು. ಆದರೆ ಕುದುರೆಯಿಲ್ಲದೇ ಮಾಡಲಾಗುವುದಿಲ್ಲ. ಆದುದರಿಂದ ಕುದುರೆಯ ಕಿಮ್ಮತ್ತು ಕುದುರೆ ಹಾಗೂ ಥಡಿಯ ಕಿಮ್ಮತ್ತು ಥಡಿಗೆ ಕೊಡಬೇಕು. ಅದರಂತೆ ಪ್ರಪಂಚ ಹಾಗೂ ಪರಮಾರ್ಥಕ್ಕೆ ಯೋಗ್ಯ ಬೆಲೆ ಕೊಡಬೇಕು. ಪರಮಾರ್ಥಕ್ಕೆ ಅಗ್ರಸ್ಥಾನ ನೀಡಬೇಕು. ಏಕೆಂದರೆ ಪರಮಾರ್ಥದಲ್ಲಿ ನಿಜವಾದ ಸುಖವಿರುತ್ತದೆ. ಪ್ರಪಂಚದಲ್ಲಿನ ಸುಖ ದುಃಖಮಿಶ್ರಿತ ಹಾಗೂ ಕ್ಷಣಿಕವಾಗಿರುತ್ತದೆ. ಆದರೆ ಪ್ರಪಂಚದಲ್ಲಿ ತ್ಯಾಗ ಮಾಡುವುದು ಅವಶ್ಯವಿರುವುದಿಲ್ಲ. ನಾವು ಎಷ್ಟೇ ಇಂದ್ರಿಯ ಸುಖ ಸಂಪಾದಿಸಿದರೂ, ತೃಪ್ತಿ ಸಮಾಧಾನ ಲಭಿಸುವುದಿಲ್ಲ. ಇನ್ನೂ ಬೇಕು ಬೇಕು ಎಂದೆನಿಸುತ್ತದೆ.

ಆದ್ದರಿಂದ ಇಂದ್ರಿಯ ಸುಖಕ್ಕೆ ಅತಿಯಾಗಿ ಬಲಿಯಾಗದೇ, ಪ್ರಾರಬ್ಧಾನುಕಾರವಾಗಿ ಬಂದ ವಿಷಯಗಳನ್ನು ಆನಂದದಿಂದ ಸ್ವೀಕರಿಸಬೇಕು ಮತ್ತು ಪ್ರಯತ್ನದಿಂದ ಪರಮಾರ್ಥ ಸಾಧಿಸಬೇಕು. ನಾವು ಎಲ್ಲಿಯೇ ಇದ್ದರೂ ಮತ್ತು ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ಆನಂದದಿಂದಿರುವುದನ್ನು ಮಾಡಿಕೊಳ್ಳಬೇಕು.[೩]

ಸಾಹಿತ್ಯ[ಬದಲಾಯಿಸಿ]

ಶಿಷ್ಯರಿಗೆ ಆಧ್ಯಾತ್ಮ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಕೊಡುವ ವಿಚಾರದಿಂದ ಆಧ್ಯಾತ್ಮ ಭಾಂಡಾರವನ್ನು ಸದ್ಗುರುಗಳು ಸ್ಥಾಪಿಸಿದರು. ಇದರ ಮೂಲಕ ಎಲ್ಲ ವರ್ಗದ ಸಾಧಕರಿಗೂ ಸಹಾಯವಾಗುವಂತಹ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಅವತಾರ ಸಮಾಪ್ತಿಯ ಮುನ್ನ ಆಧ್ಯಾತ್ಮ ಕ್ಷೇತ್ರದಲ್ಲಿ ಅತ್ಯುತ್ತಮವೆನಿಸಿರುವ ಮೇರುಕೃತಿ ಸುಲಭ ಆತ್ಮಜ್ಞಾನವನ್ನು ರಚಿಸಿ ತಮ್ಮ ನಿರಂತರ ಅಸ್ತಿತ್ವವೇ ಈ ಗ್ರಂಥದ ಸ್ವರೂಪ ಎಂದು ಸಾರಿದ್ದಾರೆ.

ಸಪ್ತಾಹ[ಬದಲಾಯಿಸಿ]

ಆಶ್ರಮದಲ್ಲಿ ಪ್ರತಿ ವರ್ಷ ಗಣೇಶ ಚೌತಿ, ದತ್ತ ಜಯಂತಿ ಹಾಗೂ ಯುಗಾದಿ ಸಪ್ತಾಹಗಳು ನಡೆಯುತ್ತವೆ. ಗಣೇಶ ಚತುರ್ಥಿಯಂದು ಜನಿಸಿದ ಸದ್ಗುರುಗಳ ಜನ್ಮೋತ್ಸವವನ್ನು ಜ್ಞಾನಸತ್ರದ ರೂಪದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನಿಧನ[ಬದಲಾಯಿಸಿ]

ಯಾವದೇ ಭೇದಭಾವವಿಲ್ಲದೇ ಎಲ್ಲ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂತರೆಲ್ಲರಿಗೂ ಬಹು ಆತ್ಮೀಯರಾಗಿದ್ದ ಶ್ರೀ ಗಣಪತರಾವ್ ಮಹಾರಾಜರು ಅಗಷ್ಟ್ 18, 2004ರಲ್ಲಿ ಭಾದ್ರಪದ ಶಷ್ಠಿಯಂದು ತಮ್ಮ ಇಚ್ಚೆಯಂತೆ ದೇಹತ್ಯಾಗ ಮಾಡಿದರು.

ಸಂದೇಶ[ಬದಲಾಯಿಸಿ]

ನೀವೆಲ್ಲ ಮೂಲತಃ ಆನಂದಸ್ವರೂಪರೇ ಇದ್ದೀರಿ, ಆನಂದದಿಂದ ಬಾಳಿ ಬದುಕಿರಿ, ಎಲ್ಲರ ಮೇಲೆ ಪ್ರೇಮ ಮಾಡಿರಿ, ಆನಂದದ ಮೂಲಾಧಾರದಿಂದಲೇ ಸಹಜಸ್ಥಿತಿ ಹೊಂದಿರಿ ಎಂದು ಸಂದೇಶ ನೀಡಿದವರು ನಡೆದಾಡುವ ದೇವರೆಂದೆನಿಸಿದ್ದ ವಿಜಯಪುರ ತಾಲಲ್ಲೂಕಿನ ಸುಕ್ಷೇತ್ರ ಕನ್ನೂರ ಶಾಂತಿಕುಟೀರ ಆಶ್ರಮದ ಸ್ಥಾಪಕರಾದ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರು.

ಉಲ್ಲೇಖಗಳು[ಬದಲಾಯಿಸಿ]

  1. https://kannadamma.net/2015/09/%E0%B2%95%E0%B2%A8%E0%B3%8D%E0%B2%A8%E0%B3%82%E0%B2%B0-%E0%B2%97%E0%B2%A3%E0%B2%AA%E0%B2%A4%E0%B2%B0%E0%B2%BE%E0%B2%B5%E0%B3%8D-%E0%B2%AE%E0%B2%B9%E0%B2%BE%E0%B2%B0%E0%B2%BE%E0%B2%9C%E0%B2%B0/[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2009-07-12. Retrieved 2018-07-27.
  3. http://www.kannadaprabha.com/astrology/%E0%B2%AD%E0%B3%8B%E0%B2%97%E0%B2%AE%E0%B2%82%E0%B2%A1%E0%B2%B2/15202.html[ಶಾಶ್ವತವಾಗಿ ಮಡಿದ ಕೊಂಡಿ]