ಕಲ್ಕತ್ತ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಕತ್ತ ವಿಶ್ವವಿದ್ಯಾಲಯ
কলকাতা বিশ্ববিদ্যালয়
ಧ್ಯೇಯAdvancement of Learning
ಪ್ರಕಾರಸಾರ್ವಜನಿಕ
ಸ್ಥಾಪನೆ1857
ಕುಲಪತಿಗಳುKeshari Nath Tripathi
Governor of West Bengal
ಉಪ-ಕುಲಪತಿಗಳುSuranjan Das[೧]
ವಿದ್ಯಾರ್ಥಿಗಳು22,520[೨]
ಪದವಿ ಶಿಕ್ಷಣ3,715 [೨]
ಸ್ನಾತಕೋತ್ತರ ಶಿಕ್ಷಣ15,750[೨]
ಸ್ಥಳಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ಆವರಣUrban, 136 affiliated colleges[೩]
ಮಾನ್ಯತೆಗಳುUGC, NAAC, AIU
ಜಾಲತಾಣwww.caluniv.ac.in
ಕಲ್ಕತ್ತ ಮೆಡಿಕಲ್ ಕಾಲೇಜು

ಕಲ್ಕತ್ತ ವಿಶ್ವವಿದ್ಯಾಲಯ ಆಧುನಿಕ ಭಾರತದ ಅತ್ಯಂತ ಹಳೆಯ ವಿಶ್ವವಿದ್ಯಾಲಯ. 1857ರಲ್ಲಿ ಕಲ್ಕತ್ತದಲ್ಲಿ ಸ್ಥಾಪಿತವಾಯಿತು. ಪಶ್ಚಿಮ ಬಂಗಾಲದ ರಾಜ್ಯಪಾಲರು ಇದರ ಕುಲಾಧಿಪತಿ (ಚಾನ್ಸಲರ್). ವಿಶ್ವವಿದ್ಯಾಲಯದ ವ್ಯಾಸಂಗ ಮತ್ತು ಆಡಳಿತ ವಿಚಾರಗಳಲ್ಲಿ ಕುಲಪತಿಗೆ (ವೈಸ್_ಚಾನ್ಸಲರ್) ನೆರವು ನೀಡಲು ಇಬ್ಬರು ಸಮ ಕುಲಪತಿಗಳು (ಪ್ರೊ_ವೈಸ್-ಚಾನ್ಸೆಲರ್ಸ್‌) ಮತ್ತು ರಿಜಿಸ್ಟ್ರಾರ್ ಇದ್ದಾರೆ. ಆಗ ಅಫಿಲಿಯೇಟ್ ಆದ ಕಾಲೇಜುಗಳ ಸಂಖ್ಯೆ 136 (2014); ವಿಶ್ವವಿದ್ಯಾಲಯದ ಕಾಲೇಜುಗಳು ೬. ಸ್ನಾತಕಪೂರ್ವ ವಿದ್ಯಾರ್ಥಿಗಳು 100,000, ಸ್ನಾತಕೋತ್ತರ 1,000 ವಿಶ್ವವಿದ್ಯಾಲಯದಲ್ಲಿ 18 ಸಂಶೋಧನ ಕೇಂದ್ರಗಳು, 710 ಉಪಾಧ್ಯಾಯರು, 3000 ಅಧ್ಯಾಪಕೇತರ ನೌಕರರು ಇದ್ದಾರೆ. 2001ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ‘ಪಂಚತಾರಾ’ ದರ್ಜೆ ದೊರಕಿದೆ.

ಇತಿಹಾಸ[ಬದಲಾಯಿಸಿ]

  • ಭರತಖಂಡದ ಇತಿಹಾಸದಲ್ಲಿ ಕಲ್ಕತ್ತಕ್ಕೆ ಎಷ್ಟು ಮಹತ್ತ್ವಪೂರ್ಣ ಸ್ಥಾನವಿದೆಯೋ ಅಷ್ಟೇ ಮಹತ್ತ್ವದ ಸ್ಥಾನ ಶೈಕ್ಷಣಿಕ ಇತಿಹಾಸದಲ್ಲೂ ಅದಕ್ಕೆ ದೊರೆತಿದೆ. ಭರತಖಂಡದಲ್ಲಿ ಉಚ್ಚ ಶಿಕ್ಷಣಕ್ಕೆ ನಾಂದಿಯನ್ನು ಹಾಡಿದ ಮೂರು ಮಹಾನಗರಗಳಲ್ಲಿ ಮೊದಲನೆಯದೂ, ಅಗ್ರಮಾನ್ಯವೂ ಆದದ್ದು ಕಲ್ಕತ್ತ; ಜಗತ್ತಿನ ಯಾವ ಮೂಲೆಯಿಂದಲೇ ಬಂದಿರಲಿ, ಹೊಸ ಬೆಳಕನ್ನು ಮುಕ್ತ-ಹೃದಯದಿಂದ ಸ್ವಾಗತಿಸುವ ಉದಾತ್ತಚೇತನದ ಪ್ರತೀಕವಾಗಿ, ಪ್ರೇರಣೆಯ ಸೆಲೆಯಾಗಿ ನಿಂತ ಬಂಗಾಳಿಗಳ ತವರು ಇದು. ಪಾಶ್ಚಾತ್ಯ ಪ್ರಪಂಚದಲ್ಲಿ ಫ್ರಾನ್ಸ್‌ ವೈಚಾರಿಕ ಕ್ರಾಂತಿಯ ಆಗರವಾಗಿದ್ದಂತೆ, ಭಾರತದಲ್ಲಿ ಕ್ರಾಂತಿಯ ಕೇಂದ್ರಬಿಂದುವಾಗಿ ಪರಿಣಮಿಸಿದ ಕೀರ್ತಿಯೂ ಈ ಮಹಾನಗರಕ್ಕೆ ಲಭ್ಯವಾಗಿದೆ.
  • ಭಾರತದ ಅತ್ಯಂತ ಜನನಿಬಿಡ ಮಹಾನಗರಗಳಲ್ಲಿ ಪ್ರಥಮಸ್ಥಾನ ಗಳಿಸಿರುವ ಈ ನಗರದಲ್ಲಿ ಭಾರತದ ಮೊಟ್ಟ ಮೊದಲನೆಯ ವಿಶ್ವವಿದ್ಯಾನಿಲಯವೂ ಸ್ಥಾಪನೆಗೊಂಡಿತೆಂಬ ಸಂಗತಿ ಈ ವೈಚಾರಿಕ ಹಿನ್ನೆಲೆಯಲ್ಲಿ ಆಶ್ಚರ್ಯದ ಸಂಗತಿಯಾಗಿ ಉಳಿಯುವ ಸಂಭವವಿಲ್ಲ. ಕ್ರಾಂತಿಯ ಅಧ್ವ ರ್ಯುವಾಗಿ, ಪ್ರತಿಭೆ ಪಾಂಡಿತ್ಯಗಳ ತವರಾಗಿ, ರಾಜಕೀಯ ಆರ್ಥಿಕ ಸಾಮಾಜಿಕ ಸಾಹಿತ್ಯಿಕ ಸಮಸ್ಯೆಗಳ ಬೀಡಾಗಿದ್ದೂ ಪರಿಹಾರಗಳನ್ನು ಕಂಡುಕೊಂಡ ಚೈತನ್ಯದ ನಾಡಾದ ಬಂಗಾಲದ ಈ ನಗರದಲ್ಲಿ ವಿಶ್ವವಿದ್ಯಾನಿಲಯದ ಸ್ಥಾಪನೆಯಾದದ್ದೂ ಅಸ್ತಿತ್ವವನ್ನೇ ತಲ್ಲಣ ಗೊಳಿಸುವ ಪರಿಸ್ಥಿತಿಗಳ ಎದುರಿನಲ್ಲೂ ಸ್ಥಾಯಿಯಾಗಿ, ಶಕ್ತಿಯ ನೆಲೆಯಾಗಿ ಉಳಿದುಕೊಂಡಿದ್ದೂ ಮಹತ್ತ್ವದ ಸಂಗತಿ.
  • ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಅವಧಿಗಳಲ್ಲಿ ಅನೇಕ ಬಗೆಯ ಅನಿರೀಕ್ಷಿತ ಆಘಾತಗಳಿಗೆ, ಪರೀಕ್ಷೆಗಳಿಗೆ ಗುರಿಯಾದರೂ ತನ್ನ ಸತ್ತ್ವವನ್ನು ಉಳಿಸಿ ಬೆಳೆಸಿಕೊಂಡ ಅಪೂರ್ವ ಇತಿಹಾಸವನ್ನುಳ್ಳ ವಿಶ್ವವಿದ್ಯಾನಿಲಯವಿದು. ಇದು ಅನೇಕ ವಿಕ್ರಮಗಳಿಗೆ ಉದಾಹರಣೆಯಾಗಿದೆ. ಹೀಗಾಗಿ, ಇದರ ಹಿನ್ನೆಲೆ, ಸ್ಥಾಪನೆಯ ಸಾಹಸ, ಸಂಘಟನೆಯ ಸಂಘರ್ಷ, ಸಾಧನೆಯ ಹಿರಿಮೆ-ಒಂದೊಂದೂ ಮಹತ್ತ್ವ ಪೂರ್ಣ ಸಂಗತಿಗಳಾಗಿವೆ. ಕಲ್ಕತ್ತ ವಿಶ್ವವಿದ್ಯಾಲಯದ ಸ್ಥಾಪನೆಯ ಇತಿಹಾಸ ೧೮೪೫ರಿಂದಲೇ ಪ್ರಾರಂಭವಾಗುತ್ತದೆ. ಕಲ್ಕತ್ತ ಸಾಧಿಸಿರುವ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಅಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು ಅಗತ್ಯವೂ ಯೋಗ್ಯವೂ ಮಾತ್ರವೇ ಅಲ್ಲ ಅದು ನ್ಯಾಯೋಚಿತ ಬೇಡಿಕೆ ಮತ್ತು ಅನಿವಾರ್ಯ ಸಂಗತಿ ಎಂಬುದಾಗಿ ಎಫ್, ಮಿಲ್ಲೆಟ್, ಜೇಮ್ಸ್‌ ಅಲೆಕ್ಸಾಂಡರ್, ಸಿ. ಸಿ. ಎಜರ್ ಟನ್, ರಸಮಯ ದತ್, ಪ್ರಸನ್ನ ಕುಮಾರ ಠಾಕೂರ್, ಎಫ್.ಜಿ. ಮೊವಾತ್ ಅವರನ್ನು ಒಳಗೊಂಡಿದ್ದ ಶಿಕ್ಷಣ ಸಮಿತಿ ಒತ್ತಿ ಹೇಳಿತು.
  • ಲಂಡನ್ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಕಲ್ಕತ್ತದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ಕರಡು ಯೋಜನೆಯನ್ನೂ ಅದು ಮುಂದಿರಿಸಿತು. ಕುಲಾಧಿಪತಿ, ಕುಲಪತಿ ಮತ್ತು ಗೌರವಾನ್ವಿತ ಸದಸ್ಯರ ಮಂಡಳಿಯನ್ನೊಳಗೊಂಡ ಈ ವಿಶ್ವವಿದ್ಯಾನಿಲಯದಲ್ಲಿ ಮಾನವಿಕ, ನ್ಯಾಯಶಾಸ್ತ್ರ, ವಿಜ್ಞಾನ ಮತ್ತು ಸಿವಿಲ್ ಎಂಜಿನಿಯರಿಂಗ್ ಹಾಗೂ ವೈದ್ಯ ಮತ್ತು ಶಸ್ತ್ರಚಿಕಿತ್ಸಾ ನಿಕಾಯಗಳಿರಬೇಕೆಂದೂ ಸೂಚಿಸಿತು. ವರ್ಷಕ್ಕೆ ಒಮ್ಮೆಯಾದರೂ ಪರೀಕ್ಷೆ ನಡೆಸಬೇಕೆಂದೂ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಪಡೆದ ಕಾಲೇಜುಗಳ ಅಭ್ಯರ್ಥಿಗಳು ಈ ವಿಭಾಗಗಳಲ್ಲಿನ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದೆಂದೂ, ಮಾನವಿಕ, ನ್ಯಾಯಶಾಸ್ತ್ರ ಮತ್ತು ವಿಜ್ಞಾನಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿರಬೇಕೆಂದೂ, ಆನರ್ಸ್ ಪದವಿಗಾಗಿ ವಿಶೇಷ ಪರೀಕ್ಷೆ ಇರಬೇಕೆಂದೂ ವೈದ್ಯಶಾಸ್ತ್ರ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಒಂದು ಪದವಿ ಪರೀಕ್ಷೆ (ವೈದ್ಯಶಾಸ್ತ್ರ), ಒಂದು ಡಿಪ್ಲೊಮಾ ಪರೀಕ್ಷೆ (ಶಸ್ತ್ರಚಿಕಿತ್ಸೆ) ಮತ್ತು ಆನರ್ಸ್ ಪದವಿಗಾಗಿ ವಿಶೇಷ ಪರೀಕ್ಷೆ ಇರಬೇಕೆಂದೂ ಎಂಜಿನಿಯರಿಂಗ್ ನಲ್ಲಿ ಒಂದು ಪದವಿ ಪರೀಕ್ಷೆ ಇರಬೇಕೆಂದೂ ಸೂಚಿಸಲಾಗಿತ್ತು.
  • ಹೀಗೆ ಮಾಡಿದಲ್ಲಿ, ಭಾರತೀಯ ಶಿಕ್ಷಣದ ಇತಿಹಾಸದಲ್ಲಿ ಅತ್ಯಂತ ಮಹತ್ತ್ವಪೂರ್ಣಶಕೆಯನ್ನು ತೆರೆದಂತಾಗುತ್ತದೆಂದೂ ಸಮಿತಿ ಅಭಿಪ್ರಾಯಪಟ್ಟಿತು. ಆದರೆ, ಈ ಯೋಜನೆಗೆ ಆಳರಸರ ರಾಜಧಾನಿಯಲ್ಲಿ ಉತ್ಸಾಹಪೂರ್ಣ ಸ್ವಾಗತ ದೊರೆಯಲಿಲ್ಲ. ಸದ್ಯಕ್ಕೆ ಕಲ್ಕತ್ತದಲ್ಲಿ ವಿಶ್ವವಿದ್ಯಾನಿಲಯ ವನ್ನು ತೆರೆಯುವುದು ಸಾಧ್ಯವಾಗುವುದಿಲ್ಲ ಎಂಬ ಅವರ ಉತ್ತರ ವಿಶ್ವವಿದ್ಯಾನಿಲಯ ಸ್ಥಾಪನೆಯ ಪ್ರಯತ್ನಕ್ಕೆ ತಣ್ಣೀರೆರಚಿತು. ಹೀಗೆ ಈ ಯೋಜನೆ ಹಿಂದೇಟು ಹೊಡೆಯಿತಾದರೂ ನಿಶ್ಚೇಷ್ಟಿತವಾಗಲಿಲ್ಲ. ಕೆಲವು ವರ್ಷಗಳ ಅನಂತರ ಕಂಪನಿಯ ಸನದನ್ನು ಪುನರ್ನವೀಕರಿಸುವ ಸಂದರ್ಭದಲ್ಲಿ ಈ ಯೋಜನೆಯನ್ನು ಪುನರುಚ್ಚರಿಸಲಾಯಿತು.
  • ೧೮೫೨ರಲ್ಲಿ ಆಗ ಶಿಕ್ಷಣ ಸಮಿತಿಯ ಅಧ್ಯಕ್ಷನಾಗಿದ್ದ ಸಿ. ಎಚ್. ಕ್ಯಾಮೆರಾನ್ ಲಾಡ್ರ್ಸ್‌ ಸಭೆಯ ಮುಂದೆ ಈ ಯೋಜನೆಯನ್ನು ಮತ್ತೆ ಮಂಡಿಸಿದ. ೧೮೫೩ರ ಏಪ್ರಿಲಿನಲ್ಲಿ ಬ್ರಿಟಿಷ್ ಇಂಡಿಯನ್ ಅಸೋಸಿಯೇಷನ್ ಮತ್ತು ಬಂಗಾಳ ಪ್ರಾಂತ್ಯ ನಿವಾಸಿಗಳ ಪರವಾಗಿ ರಾಜಾ ರಾಧಾಕಾಂತ ದೇವ್ ಮತ್ತಿತರ ಗಣ್ಯರು ಸಹಿಮಾಡಿದ ಮನವಿಪತ್ರವನ್ನು ಸಲ್ಲಿಸಲಾಯಿತು. ಲಾಡ್ರ್ಸ್‌ ಸಭೆಯ ಸೆಲೆಕ್ಟ್‌ ಸಮಿತಿಯ ಮುಂದೆ ೧೮೫೩ರಲ್ಲಿ ನೀಡಿದ ಸಾಕ್ಷ್ಯದಲ್ಲೂ ಈ ವಿಚಾರವನ್ನು ಪ್ರಬಲವಾಗಿ ಪ್ರತಿಪಾದಿಸಲಾಯಿತು. ಹೀಗೆ ಪ್ರತಿಪಾದಿಸಿದವರಲ್ಲಿ ಮುಖ್ಯರು ರೆವೆರೆಂಡ್ ಅಲೆಕ್ಸಾಂಡರ್ ಡಫ್, ಜಾನ್ ಕ್ಲರ್ಕ್ ಮಾರ್ಷ್ಮನ್ ಮತ್ತು ಸಿ. ಎಚ್. ಕ್ಯಾಮರಾನ್, ಬಹುಮಟ್ಟಿಗೆ ಲಂಡನ್ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ, ಸಾಕಷ್ಟು ಶಿಕ್ಷಣ ನಿರ್ಣಾಯಕಗಳನ್ನೊಳಗೊಂಡಂತೆ, ಸರ್ಕಾರಕ್ಕೆ ಅಷ್ಟೇನೂ ಹೆಚ್ಚಿನ ವೆಚ್ಚ ತಗುಲದಂತೆ ಕನಿಷ್ಠ ಪಕ್ಷ ಕೊಲ್ಕತೆಯಲ್ಲಿಯಾದರೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬಹುದು ಎಂದು ರೆವೆರೆಂಡ್ ಡಫ್ ವಾದಿಸಿದ.
  • ಲಂಡನ್ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ನಾಲ್ಕು ಪ್ರಾಂತ್ಯಗಳಲ್ಲಿಯೂ ಕನಿಷ್ಠ ಪಕ್ಷ ಒಂದರಂತೆ, ಆಗ್ರ, ಕಲ್ಕತ್ತ, ಮದರಾಸು ಮತ್ತು ಮುಂಬಯಿ ನಗರಗಳಲ್ಲಿ ಒಂದೊಂದು ವಿಶ್ವವಿದ್ಯಾನಿಲಯ ಇರಬೇಕು ಎಂದು ಮಾರ್ಷ್ಮನ್ ಒತ್ತಾಯಪಡಿಸಿದ.ಭಾರತದ ಜನ ವಿಶ್ವವಿದ್ಯಾನಿಲಯವನ್ನು ಪಡೆಯುವ ವಿಚಾರದಲ್ಲಿ ತುಂಬ ಆಸಕ್ತರಾಗಿದ್ದಾರೆಂದೂ ಅಗತ್ಯಕ್ಕೆ ತಕ್ಕಂತೆ ಅರ್ಹತೆ ಗಳಿಸಿಕೊಂಡಿದ್ದಾರೆಂದೂ ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ - ಅಂದರೆ ಬಂಗಾಳಿಯ ಕೇಂದ್ರವಾಗಿರುವ ಕಲ್ಕತ್ತ, ತಮಿಳಿನ ಕೇಂದ್ರವಾಗಿರುವ ಮದರಾಸು, ಮರಾಠಿಯ ಕೇಂದ್ರವಾಗಿರುವ [[ಮುಂಬಯಿ\\ ಮತ್ತು ಹಿಂದಿಯ ಕೇಂದ್ರವಾಗಿರುವ ಆಗ್ರ ನಗರಗಳಲ್ಲಿ - ಒಂದೊಂದು ವಿಶ್ವವಿದ್ಯಾನಿಲಯ ಇರಲೇಬೇಕೆಂದೂ ವಾದಿಸಿದ.
  • ೧೮೫೩ರಲ್ಲಿ ಪಾರ್ಲಿಮೆಂಟಿಗೆ ಸಲ್ಲಿಸಿದ ವರದಿಯಲ್ಲಿ, ಪ್ರವರ್ಧಮಾನಕ್ಕೆ ತರಲು ಯೋಗ್ಯವಾದ ಎಷ್ಟು ಭಾಷೆಗಳು ಭಾರತದಲ್ಲಿವೆಯೋ ಅಷ್ಟು ಸಂಖ್ಯೆಯಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದು ಗ್ರೇಟ್ ಬ್ರಿಟನ್ ಭಾರತಕ್ಕೆ ಸಲ್ಲಿಸಬೇಕಾಗಿರುವ ಸ್ಪಷ್ಟಕರ ಕರ್ತವ್ಯವೆಂದು ತನಗೆ ತೋರು ತ್ತದೆ ಎಂದು ಉದ್ಘೋಷಿಸಿದ್ದು ಮಾತ್ರವಲ್ಲ, ಕಲ್ಕತ್ತ ವಿಶ್ವವಿದ್ಯಾನಿಲಯದ ಸ್ಥಾಪನೆ ಮತ್ತೊಂದು ಮಹತ್ತರವಾದ ಯೋಜನೆಯ ನಾಂದಿ ಮಾತ್ರವೆಂದೂ ಆಗ್ರ, ಚೆನ್ನೈ, ಮುಂಬಯಿ ಮತ್ತು ಕೊಲಂಬೋಗಳಲ್ಲಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯೊಂದಿಗೆ ಈ ಯೋಜನೆ ಪೂರ್ಣರೂಪ ಪಡೆಯ ಬೇಕೆಂದೂ ಭವಿಷ್ಯ ನುಡಿದ. ವೂಡ್ಸನ ೧೮೫೪ರ ಶೈಕ್ಷಣಿಕ ವರದಿಯಲ್ಲಿ ಡಫನ ಕೈವಾಡವೂ ಇತ್ತು.
  • ಭಾರತದಲ್ಲಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಗಾಗಿ ಆತ ತುಂಬ ಹೆಣಗಿದ. ಡಾಲ್ಹೌಸಿ ತನ್ನ ನಿರ್ದೇಶಕ ಮಂಡಲಿಯ ವರದಿಯನ್ನು ವಿಶ್ಲೇಷಿಸಿ ಶೈಕ್ಷಣಿಕ ಪ್ರಗತಿಯ ಸರ್ವೇಕ್ಷಣೆಯನ್ನೂ ಶೈಕ್ಷಣಿಕ ಸಂಸ್ಥೆಗಳಿಗೆ ಸಹಾಯಧನ ನೀಡಿಕೆಯ ಬಗ್ಗೆ ತನ್ನ ಅಭಿಪ್ರಾಯವನ್ನೂ ತಿಳಿಸಿದುದರ ಜೊತೆಗೆ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ವಿಚಾರವನ್ನೂ ಒತ್ತಿ ಹೇಳಿದ. ಪ್ರೆಸಿಡೆನ್ಸಿ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಡಾಲ್ಹೌಸಿ ಕೈಗೊಂಡಿದ್ದ ಕ್ರಮಗಳು ವಿಶ್ವವಿದ್ಯಾನಿಲಯದ ಯೋಜನೆಗೆ ಪುರಕವಾಗಿದ್ದುದನ್ನು ಕಂಡು ಅದಕ್ಕಾಗಿ ವೂಡ್ಸ್‌ ಡಾಲ್ಹೌಸಿಯನ್ನು ಅಭಿನಂದಿಸಿದ್ದೂ ಉಂಟು. ಆದರೆ ಕೆಳಮಟ್ಟದ ಪದವಿಯನ್ನು ನೀಡುವುದರಿಂದ ಯಾವ ಪುರುಷಾರ್ಥವೂ ಸಾಧಿಸುವುದಿಲ್ಲ ವೆಂದು ಡಾಲ್ಹೌಸಿ ಸೂಚಿಸಿದ್ದ; ಯುರೋಪಿನ ಪದವಿಗಳನ್ನು ಆಮದು ಮಾಡಿಕೊಳ್ಳುವುದೂ ಆತನಿಗೆ ಹಿಡಿಸಿರಲಿಲ್ಲ.
  • ಭಾರತ ಸರ್ಕಾರ ವಿಶ್ವವಿದ್ಯಾನಿಲಯದ ಕಾಯಿದೆಗನುಗುಣವಾಗಿ ಮುಂದುವರಿಯದೆ, ಹೆಚ್ಚಿನ ಸೂಚನೆಗಳಿಗೆ ಕಾಯಲು ನಿರ್ಧರಿಸಿತು. ಈ ಮಧ್ಯೆ ಶೈಕ್ಷಣಿಕ ವರದಿಯ ಸಲಹೆಗನುಗುಣವಾಗಿ ಯೋಜನೆಯ ರೂಪರೇಷೆಗಳನ್ನು ಸಿದ್ಧಪಡಿಸಲು ಸರ್ ಜೇಮ್ಸ್‌ ಕೋಲ್ವಿಲ್ಲನ ಅಧ್ಯಕ್ಷತೆಯಲ್ಲಿ ಸಮಿತಿ ಯೊಂದನ್ನು ನೇಮಕ ಮಾಡಿತು. ಶಾಸನ ಸಭೆಯಲ್ಲಿ ಕಾಯಿದೆಗಳು ಮಂಜೂರಾದ ತರುಣದಲ್ಲಿಯೇ ಸೆನೆಟ್ ಸಭೆ ವಿವರಗಳನ್ನು ಚರ್ಚಿಸುವಂತಿರಬೇಕೆಂಬ ದೃಷ್ಟಿಯಿಂದ ಹೀಗೆ ಮಾಡಲಾಯಿತು. ಚೆನ್ನೈ ಮತ್ತು ಮುಂಬಯಿ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಕಾರ್ಯವನ್ನೂ ಕೊಲ್ಕತದ ಸಮಿತಿಗೇ ವಹಿಸಲಾಯಿತು. ಮುಖ್ಯಾಂಶಗಳಲ್ಲಿ ಈ ಮೂರೂ ವಿಶ್ವವಿದ್ಯಾನಿಲಯಗಳ ಸ್ವರೂಪ ಒಂದೇ ರೀತಿಯದಾಗಿರಬೇಕೆಂಬ ಉದ್ದೇಶದಿಂದ ಹೀಗೆ ಮಾಡಲಾಯಿತು. ಈ ಸಮಿತಿಯನ್ನು ಮೂರು ಉಪಸಮಿತಿಗಳಾಗಿ ವಿಭಾಗಿಸಲಾಯಿತು.
  • ಒಂದು ಉಪಸಮಿತಿ ವಿಶ್ವವಿದ್ಯಾನಿಲಯ ಕರಡು ಮಸೂದೆಯನ್ನೂ ಎರಡನೆಯದು ಮಾನವಿಕಗಳಲ್ಲಿ ಪರೀಕ್ಷೆ ಹಾಗೂ ಪದವಿ ನೀಡಿಕೆಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನೂ ಉಳಿದದ್ದು ವೈದ್ಯಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗಗಳಿಗೆ ಸಂಬಂಧಿಸಿದ ಇದೇ ಬಗೆಯ ಕಾರ್ಯವನ್ನೂ ನಿರ್ವಹಿಸಿದುವು. ಈ ಉಪಸಮಿತಿಗಳಲ್ಲಿ ಮಾನವಿಕ ಉಪಸಮಿತಿ ಮಾಡಿದ ಕೆಲವು ಶಿಫಾರಸುಗಳು ಗಮನಾರ್ಹವಾಗಿವೆ. ಮೆಟ್ರಿಕ್ಯುಲೇಶನ್ ಶಬ್ದ ಅಷ್ಟು ಚೆನ್ನಾಗಿಲ್ಲದಿದ್ದುದರಿಂದ ಎಂಟ್ರೆನ್ಸ್‌ (ಪ್ರವೇಶ) ಪರೀಕ್ಷೆಯೆಂಬ ಶಬ್ದವನ್ನು ಬಳಸಬಹುದೆಂದೂ ಪದವಿಗಳಿಗೆ ದೇಶೀಯ ಸಮಾನಾರ್ಥಕ ಶಬ್ದಗಳನ್ನು ರೂಢಿಸುವುದಕ್ಕೆ ಬದಲಾಗಿ ಸಾರ್ವತ್ರಿಕ ಮಾನ್ಯತೆ ಮತ್ತು ಚಲಾವಣೆಗಳನ್ನು ಪಡೆದಿದ್ದ ಬಿ.ಎ., ಎಂ.ಎ., ಮುಂತಾದವನ್ನು ಹಾಗೆಯೇ ಇರಿಸಿಕೊಳ್ಳಬೇಕೆಂದೂ ಅಂಗಸಂಸ್ಥೆಯಾಗುವ ಅರ್ಹತೆಗಳನ್ನು ಪುರೈಸುವಂಥ ಸಂಸ್ಥೆಗಳನ್ನು ಮಾನ್ಯ ಮಾಡಿ ಸ್ನಾತಕ ಹಂತದವರೆಗಿನ ಶಿಕ್ಷಣವನ್ನು ನೀಡಲು ಅವಕಾಶ ಮಾಡಿಕೊಡಬಹುದೆಂದೂ ಶಿಫಾರಸು ಮಾಡಿತು.
  • ೧೮೫೬ರ ಆಗಸ್ಟ್‌ ತಿಂಗಳಿನಲ್ಲಿ ಈ ಸಮಿತಿ ತನ್ನ ಪೂರ್ವಭಾವಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಕಲ್ಕತ್ತ ವಿಶ್ವವಿದ್ಯಾನಿಲಯದ ಸೂಕ್ತ ತಿದ್ದುಪಡಿಗಳೊಂದಿಗೆ ಮುಂಬಯಿ ಮತ್ತು ಮದರಾಸು ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಡುವ ಕರಡು ಮಸೂದೆ ಗವರ್ನರ್-ಜನರಲನ ಅಧ್ಯಕ್ಷತೆಯಲ್ಲಿದ್ದ ಸಮಿತಿಯ ಅನುಮೋದನೆ ಪಡೆದುಕೊಂಡಿತು. ಶಾಸನಸಭೆಯಲ್ಲಿ ಮಸೂದೆಯ ಅನುಮೋದನೆಯನ್ನು ಕಾಯ್ದು, ಭಾರತದ ಗವರ್ನರ್-ಜನರಲ್ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿರುತ್ತಾನೆಂದು ಘೋಷಿಸಲಾಯಿತು. ಸರ್ ಜೇಮ್ಸ್‌ ವಿಲಿಯಂ ಕೋಲ್ವಿಲ್ಲನನ್ನು ಮೊಟ್ಟಮೊದಲ ಕುಲಪತಿಯಾಗಿ ನೇಮಿಸಲಾಯಿತು. ೧೮೫೭ರ ವಿಶ್ವವಿದ್ಯಾನಿಲಯದ ಮಸೂದೆಗೆ ಶಾಸನ ಸಭೆಯ ಒಪ್ಪಿಗೆ ಪಡೆಯಲಾಯಿತು. ೧೮೫೭ರ ಜನವರಿ ೨೪ರಂದು ಅದಕ್ಕೆ ಗವರ್ನರ್-ಜನರಲರ ಒಪ್ಪಿಗೆಯೂ ಸಿಕ್ಕಿತು.
  • ಈ ಮೊದಲೇ ಹೇಳಿದಂತೆ, ವಿಶ್ವವಿದ್ಯಾನಿಲಯ ಕಾಯಿದೆ ಅನುಮೋದಿತವಾಗು ವುದಕ್ಕಿಂತ ಮುಂಚಿತವಾಗಿಯೇ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿತ್ತು. ಮೊದಲ ಸೆನೆಟ್ ಸಭೆ ನಡೆದದ್ದು ೧೮೫೭ರ ಜನವರಿ ೩ರಂದು. ಕರ್ನಲ್ ಡಬ್ಲ್ಯು. ಗ್ರಾಪೆಲನನ್ನು ರಿಜಿಸ್ಟ್ರಾರ್ ಆಗಿ ಎರಡು ವರ್ಷ ಗಳ ಅವಧಿಯವರೆಗೆ ಸೆನೆಟ್ ನೇಮಕ ಮಾಡಿತು. ಸೆನೆಟನ್ನು ಮಾನವಿಕ, ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ ಮತ್ತು ಸಿವಿಲ್ ಎಂಜಿನಿಯರಿಂಗ್ - ಎಂದು ನಾಲ್ಕು ಶಿಕ್ಷಣ ನಿಕಾಯಗಳಾಗಿ ವಿಭಾಗಿಸಲಾಯಿತು. ೧೮೫೮ಕ್ಕೆ ಮೊದಲು ಸಿಂಡಿಕೇಟ್ ಸಭೆ ರೂಪುಗೊಳ್ಳಲಿಲ್ಲ. ಅಲ್ಲಿಯವರೆಗೆ ತಾತ್ಕಾಲಿಕ ಸಮಿತಿಯೊಂದು ಅದರ ಕಾರ್ಯಗಳನ್ನು ನಿರ್ವಹಿಸಿದಂತೆ ಕಾಣುತ್ತದೆ. ೧೮೫೭ರಲ್ಲಿ ಈ ಸಮಿತಿ ಹನ್ನೆರಡು ಬಾರಿ ಸಭೇ ಸೇರಿ ಈ ಮೊದಲು ಉಪಸಮಿತಿಗಳು ರೂಪಿಸಿದ್ದ ನಿಯಮಾವಳಿಯನ್ನು ಪರಿಶೀಲಿಸಿತು.
  • ವಿಶ್ವವಿದ್ಯಾಲಯದ ಸ್ಥಾಪನೆ ಅನುಮೋದಿತವಾದ ಕೂಡಲೇ ಮಾನ್ಯತೆಗಾಗಿ ಕಾಲೇಜುಗಳು ಅರ್ಜಿಗಳನ್ನು ಸಲ್ಲಿಸತೊಡಗಿದವು. ಶಿಕ್ಷಣೇತರ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ಲಕ್ನೋದ ವೀಕ್ಷಣಾಲಯವೂ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತೆಂಬ ಸಂಗತಿ ಕುತೂಹಲಕಾರಿಯಾಗಿದೆ. ಆದರೆ ನಿಯಮಾವಳಿಯಲ್ಲಿ ಅವಕಾಶವಿಲ್ಲದೆ ಇದ್ದುದರಿಂದ ಅದಕ್ಕೆ ಮಾನ್ಯತೆ ನೀಡಲು ಸಾಧ್ಯವಾಗದೆ ಹೋದುದಕ್ಕಾಗಿ ವಿಶ್ವವಿದ್ಯಾನಿಲಯ ವಿಷಾದ ವ್ಯಕ್ತಪಡಿಸಿತು. ವಿಶ್ವವಿದ್ಯಾನಿಲಯ ಸ್ಥಾಪನೆಯೇನೋ ಆಗಿದ್ದರೂ ಅದಕ್ಕೆ ತನ್ನದೇ ಆದ ನೆಲೆಯಿರಲಿಲ್ಲ. ಆಡಳಿತ ಕಾರ್ಯಾಲಯವಾಗಲಿ ಪರೀಕ್ಷೆ ಗಳನ್ನು ಮತ್ತು ಘಟಿಕೋತ್ಸವಗಳನ್ನು ಏರ್ಪಡಿಸಲು ಅಗತ್ಯವಾದ ಸಭಾಭವನವಾಗಲೀ ಇರಲಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಡೇರೆಗಳಲ್ಲಿ, ನಗರದ ಬೇರೆ ಬೇರೆ ಮೂಲೆಗಳಲ್ಲಿ ಚದುರಿದ್ದ ಚಿಕ್ಕಪುಟ್ಟ ಭವನಗಳಲ್ಲಿ ಪರೀಕ್ಷೆಗಳನ್ನು ನಡೆಸುವಂಥ ಸ್ಥಿತಿ ಏರ್ಪಟ್ಟಿತು. ಸ್ಥಳದ ಈ ತೊಂದರೆಯ ಜೊತೆಗೆ ಸೇರಿಕೊಂಡ ಇತರ ಸಮಸ್ಯೆಗಳೆಂದರೆ ಧಾರ್ಮಿಕ ಶಿಕ್ಷಣ ಮತ್ತು ಶಿಕ್ಷಣ ಮಾಧ್ಯಮ. ಶಿಕ್ಷಣ ಕ್ರಮದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕೊಡದೆ ಇದ್ದುದು ಹಲವು ಧರ್ಮೀಯರ ಅದರಲ್ಲೂ ಕ್ರೈಸ್ತರ ಅಸಹನೆಗೆ ಕಾರಣವಾಯಿತು.

ಕ್ರೈಸ್ತರ ಅಸಹನೆ[ಬದಲಾಯಿಸಿ]

  • ಶಿಕ್ಷಣ ಮಾಧ್ಯಮವನ್ನು ಕುರಿತು ತೀವ್ರ ಹೋರಾಟವೇ ನಡೆದು ಇಂಗ್ಲೀಷ್ ಮಾಧ್ಯಮದ ಪರವಾಗಿಯೇ ಬಹುಮತ ಬಿದ್ದಿತಾದರೂ ಮಾತೃಭಾಷಾ ಮಾಧ್ಯಮಕ್ಕೆ ಸಾಧ್ಯವಾದಷ್ಟು ಬೇಗ ಅವಕಾಶಗಳನ್ನೊದಗಿಸಿಕೊಡಬೇಕೆಂಬ ಸಂಗತಿ ವಿವೇಕಿಗಳಾದ, ಸುದೂರದೃಷ್ಟಿಯನ್ನುಳ್ಳ ಕೆಲವಾದರೂ ಶಿಕ್ಷಣತಜ್ಞರ ಮನಸ್ಸಿಗೆ ಮುಟ್ಟಿತು. ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಆರು ತಿಂಗಳು ಕಳೆಯುವುದರ ಒಳಗಾಗಿಯೇ ಭಾರತದ, ಅದರಲ್ಲಿಯೂ ಉತ್ತರ ಭಾರತದ ಬಹುಭಾಗವನ್ನು ಅಲ್ಲೋಲಕಲ್ಲೋಲಗೊಳಿಸಿದ ಬಂಡಾಯ ನಡೆಯಿತು.
  • ಬಂಡಾಯದ ಕೇಂದ್ರಗಳಿಂದ ಕಲ್ಕತ್ತ ಭೌಗೋಳಿಕವಾಗಿ ದೂರವಿದ್ದಿತೆಂಬುದು ನಿಜವಾದರೂ ಅದರ ಪರೋಕ್ಷ ಪರಿಣಾಮ ಇಲ್ಲಿಯೂ ಕಂಡುಬಂತು. ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ ಇರುವ ನಿಮ್ಮ ಜನರಿಗೆ ಶಿಕ್ಷಣ ಕೊಡಿ. ೧೮೫೭ರ ದಂಗೆ ಮತ್ತೆಂದೂ ತಲೆಯೆತ್ತ ಲಾರದು ಎಂದು ವಿಶ್ವವಿದ್ಯಾಲಯ ಕುಲಪತಿ ೧೮೬೦ರ ಘಟಿಕೋತ್ಸವದಲ್ಲಿ ಘೋಷಿಸಿದ್ದು ಈ ಬಗೆಯ ಪರೋಕ್ಷ ಪರಿಣಾಮಕ್ಕೆ ಉದಾಹರಣೆಯಾಗಿದೆ. ಮುಂದೆ ಬಂದ ಕುಲಾಧಿಪತಿಗಳೂ ಕುಲಪತಿಗಳೂ ಇದೇ ಧಾಟಿಯನ್ನು ಮುಂದುವರಿಸಿದರು. ಆದರೆ, ಈ ಶಿಕ್ಷಣ ಪಡೆದ ಒಂದೆರಡು ತಲೆಮಾರುಗಳ ಯುವಜನಾಂಗವೇ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಗೋರಿಯನ್ನು ತೋಡುವ ಕಾರ್ಯಕ್ಕೆ ಮೊದಲಿಟ್ಟಿತು ಎಂಬುದು ಅವರ ಅರಿವಿಗೆ ಆಗ ಗೋಚರಿಸಲಿಲ್ಲ.

ಮೊಟ್ಟಮೊದಲ ಘಟಿಕೋತ್ಸವ[ಬದಲಾಯಿಸಿ]

  • ವಿಶ್ವವಿದ್ಯಾಲಯದ ಮೊಟ್ಟಮೊದಲ ಘಟಿಕೋತ್ಸವ ನಡೆದದ್ದು ೧೮೫೮ರ ಡಿಸೆಂಬರ್ ೧೧ರಂದು. ಆಯಾ ಕಾಲೇಜುಗಳ ಅಧಿಕೃತ ಅಧಿಕಾರಿಗಳು ಅಭ್ಯರ್ಥಿಗಳನ್ನು ಒಪ್ಪಿಸಿಕೊಟ್ಟ ಬಳಿಕ ಅವರನ್ನು ಪದವಿಗಳಿಗಾಗಿ ಸ್ವೀಕರಿಸಲಾಗುತ್ತಿತ್ತು. ಈ ಸ್ವೀಕರಣಾ ನಂತರ, ಈ ಉದ್ದೇಶಕ್ಕಾಗಿಯೇ ಮೀಸಲಾಗಿ ಇಡಲಾಗಿದ್ದ ರಿಜಿಸ್ಟರಿನಲ್ಲಿ ಅಭ್ಯರ್ಥಿಯ ಹಸ್ತಾಕ್ಷರವನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ಸಮಾರಂಭದ ಕಾರ್ಯಕಲಾಪಗಳೆಲ್ಲ ಇಂಗ್ಲಿಷಿನಲ್ಲಿಯೇ ನಡೆಯುತ್ತಿದ್ದವು. ಮುಂದೆ ಘಟಿಕೋತ್ಸವದ ಅನುಷ್ಠಾನ ವಿಧಿಗಳಲ್ಲಿ, ಶಬ್ಧಗಳ ಬಳಕೆಯಲ್ಲಿ ಅನೇಕ ಪರಿವರ್ತನೆಗಳಾದವು. ಘಟಿಕೋ ತ್ಸವದಲ್ಲಿ ವಿವಿಧ ಪದವಿಗಳ ಅಭ್ಯರ್ಥಿಗಳು ಧರಿಸಬೇಕಾದ ಮೇಲುಡುಪು (ಗೌನ್) ಮತ್ತು ಲಾಂಛನ ವಸ್ತು (ಹುಡ್) ಹಾಗೂ ಶಿರೋರ್ಷಗಳಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ತರಲಾಯಿತು.
  • ಇಷ್ಟಾದರೂ, ಗೌರವ ಪದವಿಗಳನ್ನು ನೀಡುವ ಅಧಿಕಾರ ವಿಶ್ವವಿದ್ಯಾಲಯಕ್ಕೆ ದೊರೆತಿರಲಿಲ್ಲ. ಈ ದಿಕ್ಕಿನಲ್ಲಿ ಹಲವಾರು ಸಲಹೆಗಳು ಬಂದಿದ್ದರೂ ಅವು ಕಾರ್ಯಗತವಾಗಿರಲಿಲ್ಲ. ೧೮೭೫-೭೬ರಲ್ಲಿ ವೇಲ್ಸಿನ ರಾಜಕುಮಾರ ಆಲ್ಬರ್ಟ್ಎಡ್ವರ್ಡ್ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವನಿಗೆ ಗೌರವ ಪದವಿ ಕೊಡಬೇಕೆಂದು ಸರ್ಕಾರ ಸೂಚಿಸಿದಾಗ ತರಾತುರಿಯಲ್ಲಿ ಸಿದ್ಧತೆಗಳು ನಡೆದುವು. ಗೌರವ ಪದವಿಗಳನ್ನು ನೀಡುವ ಅಧಿಕಾರಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ವಿಧಾನ ಮಂಡಲದಲ್ಲಿ ಅಂಗೀಕರಿಸಲಾಯಿತು. ಗವರ್ನರ್-ಜನರಲನ ಒಪ್ಪಿಗೆಯೂ ದೊರೆಯಿತು. ೧೮೭೬ರ ಜನವರಿ ೩ರಂದು ನಡೆದ ವಿಶೇಷ ಘಟಿಕೋತ್ಸವದಲ್ಲಿ ಮೊದಲ ಗೌರವ ಪದವಿಯನ್ನು - ಡಾಕ್ಟರ್ ಆಫ್ ಲಾಸ್ - ವೇಲ್ಸ್‌ನ ರಾಜಕುಮಾರನಿಗೆ ನೀಡಲಾಯಿತು. ವಿಶ್ವವಿದ್ಯಾಲಯದ ಗೌರವ ಪದವಿಗಳ ಖಾತೆ ತೆರೆದದ್ದು ಹೀಗೆ.
  • ೧೮೮೩ರಿಂದ ೧೯೦೪ರ ವರೆಗಿನದು ಸಂಘಟನೆಯ ಅವಧಿ. ದಿನೇದಿನೇ ಹೆಚ್ಚುತ್ತಿದ್ದ ಉಚ್ಚ ಶಿಕ್ಷಣದ ಬೇಡಿಕೆಯನ್ನು ಈಡೇರಿಸಲು ಪ್ರಯತ್ನ ನಡೆದದ್ದು ಈ ಕಾಲದಲ್ಲಿ. ಮಾತೃಭಾಷೆಗೆ ಸೂಕ್ತ ಪ್ರಾಧಾನ್ಯ ನೀಡಲೂ ಪ್ರಯತ್ನ ನಡೆಯಿತು. ೧೮೯೧ರ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮೊಟ್ಟಮೊದಲ ಭಾರತೀಯ ಕುಲಪತಿ ಗುರುದಾಸ ಬ್ಯಾನರ್ಜಿಯ ಈ ಮಾತುಗಳು ಈ ದೃಷ್ಟಿಯಿಂದ ಗಮನಾರ್ಹವಾಗಿವೆ: ಸಾಹಿತ್ಯ ಸಮೃದ್ಧವಾಗಿರುವ ಭಾರತೀಯ ಭಾಷೆಗಳ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬೇಕಾದದ್ದು ಅಪೇಕ್ಷಣೀಯ ಮಾತ್ರವಲ್ಲ, ಅಗತ್ಯವೂ ಹೌದು. ಅವನ್ನು ಸಾಕಿ ಬೆಳೆಸಿರುವ ಪ್ರಾಚೀನ ಭಾಷೆಗಳ ಜೊತೆಗೆ ಅವನ್ನೂ ಪರೀಕ್ಷೆಯ ಕಡ್ಡಾಯ ವಿಷಯವಾಗಿಸಬೇಕು. ಕೇವಲ ಅಂಧ ಅಭಿಮಾನದಿಂದ, ಭಾಷಾವ್ಯಾಮೋಹದಿಂದ ಆತ ಈ ಮಾತನ್ನಾಡಲಿಲ್ಲವೆಂಬುದಕ್ಕೆ ಆತನ ಮುಂದಿನ ಮಾತುಗಳೇ ಸಾಕ್ಷಿಯಾಗಿವೆ:
  • ದೇಶಭಾಷೆಗಳ ಮೂಲಕ ಜ್ಞಾನ ಪ್ರಸಾರವಾದ ಹೊರತು ರಾಷ್ಟ್ರದ ರೂಪದಲ್ಲಿ ನಾವು ಯಾವುದೇ ಪರಿಪೂರ್ಣವಾದ, ವ್ಯಾಪಕವಾದ ಸಂಸ್ಕೃತಿಯನ್ನು ಪಡೆಯಲಾರೆವು ಎಂದು ನಾನು ದೃಢವಾಗಿ ನಂಬಿದ್ದೇನೆ. ಹಿಂದಿನ ಪಾಠವನ್ನು ಗಮನಿಸಿ ಅಸಂಖ್ಯಾತ ಆಧುನಿಕ ಭಾಷೆಗಳ ಮಾಧ್ಯಮದ ಮೂಲಕ ಜ್ಞಾನದ ಬೆಳಕು ಹರಿದು ಬರುವವರೆಗೆ ಮಧ್ಯಯುಗದ ಯುರೋಪನ್ನು ಕವಿದುಕೊಂಡಿದ್ದ ಕತ್ತಲೆ ಸಂಪೂರ್ಣವಾಗಿ ದೂರವಾಗಲಿಲ್ಲ. ಭಾರತದಲ್ಲಿಯೂ ಅಷ್ಟೆ. ಉಪಲಬ್ದ ಸ್ಪಷ್ಟತರ ಮಾಧ್ಯಮಗಳಲ್ಲೊಂದರ ಮೂಲಕ ನಮ್ಮ ಸಮಾಜದ ಉಚ್ಚಸ್ತರದ ಮೇಲೆ ಜ್ಞಾನದ ಕೃಪಾದೃಷ್ಟಿ ಬಿದ್ದಿದೆಯಾದರೂ ಜ್ಞಾನದ ಬೆಳಕು ದೇಶಭಾಷೆಗಳ ಮೂಲಕ ಜನಸಾಮಾನ್ಯರನ್ನು ತಲುಪುವವರೆಗೆ ಸುತ್ತಲೂ ಕವಿದಿರುವ ಅಜ್ಞಾನದ ಮುಸುಕು ತೊಲಗಿ ಬೆಳಗಲಾರದು.

ಬಂಗಾಳಿ ಮಾಧ್ಯಮವನ್ನು ಜಾರಿಗೆ ತಂದುದರ ಫಲ[ಬದಲಾಯಿಸಿ]

  • ಇಷ್ಟಾದರೂ ಜನತೆ ಎಚ್ಚತ್ತುಕೊಳ್ಳಲು ಸಾಕಷ್ಟು ಕಾಲವೇ ಹಿಡಿಯಿತು. ೧೯೪೦ರಲ್ಲಿ ಮೆಟ್ರಿಕ್ಯುಲೇಶನ್ ಹಂತದಲ್ಲಿ ಬಂಗಾಳಿ ಮಾಧ್ಯಮವನ್ನು ಜಾರಿಗೆ ತಂದುದರ ಫಲವಾಗಿ ಭಾಷಾ ಪಠ್ಯಪುಸ್ತಕಗಳ ಬೇಡಿಕೆ ಹೆಚ್ಚಿತು. ಪರಿಭಾಷಾ ಸಮಿತಿ ಹಲವು ಪಾರಿಭಾಷಿಕ ಶಬ್ದಕೋಶಗಳನ್ನು ಹೊರ ತಂದಿತು. ಸಮಿತಿ ಪರಿಷ್ಕರಿಸಿದ ಬಂಗಾಳಿ ಕಾಗುಣಿತ ವ್ಯವಸ್ಥೆಯನ್ನು ರವೀಂದ್ರರೂ, ಶರಶ್ಚಂದ್ರರೂ ಒಪ್ಪಿಕೊಂಡರು. ಶ್ಯಾಮಪ್ರಸಾದ ಮುಖರ್ಜಿಯವರು ಬಂಗಾಳಿ ಪಠ್ಯಪುಸ್ತಕಗಳನ್ನು ಹೊರತರುವ ಯೋಜನೆಯನ್ನು ಜಾರಿಗೆ ಕೊಟ್ಟರು. ಖ್ಯಾತ ವಿದ್ವಾಂಸರು ಮಾನವಿಕ ಮತ್ತು ವಿಜ್ಞಾನ ಗಳನ್ನು ಕುರಿತು ಸಮರ್ಥ ರೀತಿಯಲ್ಲಿ ಗ್ರಂಥಗಳನ್ನು ಬರೆದುಕೊಟ್ಟರು. ಓದುಗರ ಪ್ರತಿಕ್ರಿಯೆಯೂ ಉತ್ತಮವಾಗಿಯೇ ಇತ್ತು. ಬಂಗಾಳಿಯನ್ನು ಶಾಲೆಯ ಆವರಣದ ಹೊರಕ್ಕೂ ತರುವ ಪ್ರಯತ್ನ ನಡೆಯಿತಾದರೂ ಪ್ರಗತಿ ಗಮನಾರ್ಹವಾಗಿರಲಿಲ್ಲ.
  • ಒಂದು ದಶಕದ ಅನಂತರ, ೧೯೪೭ರಲ್ಲಿ, ಈ ವಿಶ್ವವಿದ್ಯಾನಿಲಯದ ಮೊಟ್ಟಮೊದಲನೆಯ ಭಾರತೀಯ ಕುಲಾಧಿಪತಿಯಾದ ಸಿ. ರಾಜಗೋಪಾಲಚಾರಿ ಅವರು ಘಟಿಕೋತ್ಸವ ಭಾಷಣದಲ್ಲಿ ದೇಶಭಾಷೆಗಳನ್ನು ಉನ್ನತ ಶಿಕ್ಷಣದ ಮಾಧ್ಯಮವನ್ನಾಗಿಸುವ ಅಗತ್ಯವನ್ನು ಒತ್ತಿ ಹೇಳಿದರು.೧೯೪೮ರಲ್ಲಿ ಕುಲಪತಿಯಾಗಿ ನೇಮಕಗೊಂಡ ಪ್ರಮಥನಾಥ ಬ್ಯಾನರ್ಜಿಯವರು, ಬಿ.ಎ., ಬಿ.ಎಸ್.ಸಿ., ಬಿ.ಕಾಂ. ಪರೀಕ್ಷೆಗಳಲ್ಲಿಯೇ ಉತ್ತರಿಸುವ ಸೌಲಭ್ಯವನ್ನು ಒದಗಿಸಿಕೊಟ್ಟರು. ಬಂಗಾಳಿ ಭಾಷೆಯಲ್ಲಿ ಬರೆದ ಪ್ರಬಂಧಕ್ಕೆ ಪಿಎಚ್.ಡಿ. ಪ್ರಶಸ್ತಿಯನ್ನು ನೀಡುವುದರ ಮೂಲಕ ಬಂಗಾಳಿ ಭಾಷೆಗೆ ವಿಶ್ವವಿದ್ಯಾಲಯ ಅತ್ಯುತ್ಕೃಷ್ಟ ಸ್ಥಾನ ಒದಗಿಸಿತು. ರವೀಂದ್ರರು ಬಂಗಾಳಿಯಲ್ಲೇ ಘಟಿಕೋತ್ಸವ ಭಾಷಣ ಮಾಡಿ ಮತ್ತೊಂದು ಹೊಸ ಹೆಜ್ಜೆಯನ್ನಿಟ್ಟರು. ವಿಶ್ವವಿದ್ಯಾಲಯ ಸ್ಥಾಪನೆಯ ಕಾಯಿದೆಯಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡಲು ಅವಕಾಶವಿರಲಿಲ್ಲ.
  • ೧೮೭೫ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಈ ವಿಷಯದ ಬಗ್ಗೆ ಪತ್ರ ಬರೆದಾಗ ಅದನ್ನು ದಾಖಲು ಮಾಡಿಕೊಳ್ಳಲಾಯಿತೇ ಹೊರತು, ಅದಕ್ಕೆ ಉತ್ತರ ಕೊಡಲಿಲ್ಲ. ಆದರೆ, ಕೆಲವೇ ತಿಂಗಳುಗಳ ಅನಂತರ ಚಂದ್ರಮುಖಿ ಬಸು ಎಂಬ ವಿದ್ಯಾರ್ಥಿನಿ ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಕೋರಿ ಅಭ್ಯರ್ಥನ ಪತ್ರವನ್ನು ಸಲ್ಲಿಸಿದಾಗ ವಿಶ್ವವಿದ್ಯಾಲಯ ಈ ಸಮಸ್ಯೆಯನ್ನು ನೇರವಾಗಿ ಎದುರಿಸಬೇಕಾಗಿ ಬಂತು. ಅಂದು ಮಹಿಳೆಯರಿಗೆ ಕಾಲೇಜ್ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಸಮಾಜದಲ್ಲಿ ಕ್ರಾಂತಿಕಾರಕವಾದ, ಅತ್ಯಂತ ಸೂಕ್ಷ್ಮ ಪ್ರಶ್ನೆ ಯಾಗಿತ್ತು. ಆದರೆ ಕುಲಪತಿಯ ದೂರದೃಷ್ಟಿ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿತು. ಸೂಕ್ತ ತಿದ್ದುಪಡಿಗಳೊಡನೆ ಮಹಿಳೆಯರ ಶಿಕ್ಷಣಕ್ಕೂ ಮಹಿಳಾಮೇಲ್ವಿಚಾರಕರ ನೇತೃತ್ವದಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕೂ ಅವಕಾಶ ಮಾಡಿಕೊಡಲಾಯಿತು.
  • ಆ ವರ್ಷ ಚಂದ್ರಮುಖಿಗೆ ಪ್ರವೇಶ ಪರೀಕ್ಷೆಗೆ ಅವಕಾಶ ಕೊಟ್ಟಿದ್ದು ಮಾತ್ರವಲ್ಲದೆ ೧೮೭೯ರಲ್ಲಿ ಎಫ್.ಎ. ಪರೀಕ್ಷೆಗೆ ಕೂಡಲೂ ಅನುಮತಿ ನೀಡಲಾಯಿತು. ೧೮೮೨ರ ಘಟಿಕೋತ್ಸವ ಈ ದೃಷ್ಟಿಯಿಂದ ಗಮನಾರ್ಹವಾದುದು. ಚಂದ್ರಮುಖಿ ಬಸು ಮತ್ತು ಕಾದಂಬಿನಿ ಗಂಗೂಲಿ ಎಂಬ ವಿದ್ಯಾರ್ಥಿನಿಯರು ಆ ವರ್ಷದ ಘಟಿಕೋತ್ಸದಲ್ಲಿ ಪದವಿಗಳನ್ನು ಪಡೆದರು. ಕುಲಪತಿಗಳ ಘಟಿಕೋತ್ಸವ ಭಾಷಣ ಮಹಿಳೆಯರ ಹಕ್ಕು ಮತ್ತು ಪುರುಷರ ಕರ್ತವ್ಯದ ಉಲ್ಲೇಖವನ್ನು ಒಳಗೊಂಡಿದ್ದುದು ಸಹಜವಾಗಿಯೇ ಇತ್ತು. ವಿಶ್ವವಿದ್ಯಾಲಯ ಸ್ಥಾಪನೆಯ ೧೮೫೭ರ ಕಾಯಿದೆಯನ್ನು ಪರಿಷ್ಕ ರಿಸುವ ವಿಚಾರ ೧೮೯೦ರಲ್ಲಿಯೇ ಬಂದಿತ್ತು. ಆದರೆ, ಅಂಥ ಅಗತ್ಯವೇನೂ ಇಲ್ಲವೆಂಬ ನೆಪವನ್ನೊಡ್ಡಿ ಸರ್ಕಾರ ತಿದ್ದುಪಡಿಯ ಸಲಹೆಗಳನ್ನು ತಳ್ಳಿಹಾಕಿತ್ತು.
  • ೧೮೯೯ರಲ್ಲಿ ಸರ್ಕಾರ ಈ ಉದ್ದೇಶಕ್ಕಾಗಿ ಮಸೂದೆಯೊಂದನ್ನು ಅಂಗೀಕರಿಸಿತು. ಎರಡು ವರ್ಷಗಳ ಅನಂತರ ಅಂದರೆ ೧೯೦೧ರಲ್ಲಿ, ಸಿಮ್ಲಾದಲ್ಲಿ ಶಿಕ್ಷಣತಜ್ಞರ ಸಮ್ಮೇಳನವೊಂದನ್ನು ಕರೆಯಲಾಯಿತು. ಆದರೆ ಇವರೆಲ್ಲ ಐರೋಪ್ಯರೇ ಆಗಿದ್ದುದರಿಂದ ಈ ಸಮ್ಮೇಳನ ತಪ್ಪುಕಲ್ಪನೆಗೂ ಹತಾಶೆಗೂ ಪುರ್ವಾಗ್ರಹಕ್ಕೂ ಎಡೆಮಾಡಿಕೊಟ್ಟಿತು. ಇದರ ಬೆನ್ನ ಹಿಂದೆಯೇ ೧೯೦೨ರಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಆಯೋಗವನ್ನು ಸ್ಥಾಪಿಸಲಾಯಿತು. ಅಲ್ಲಿಯೂ ಭಾರತೀಯರಿಗೆ ಪ್ರಾತಿನಿಧ್ಯವಿಲ್ಲವೆಂಬ ಕೂಗೆದ್ದಾಗ ಗುರುದಾಸ ಬ್ಯಾನರ್ಜಿಯನ್ನು ಆಯೋಗಕ್ಕೆ ಕಡೆಯ ಘಳಿಗೆಯಲ್ಲಿ ಸೇರಿಸಿಕೊಳ್ಳಲಾಯಿತು. ಈ ಆಯೋಗ ಮಾಡಿದ ಅತ್ಯಂತ ಗಮನಾರ್ಹವಾದ ಶಿಫಾರಸೆಂದರೆ, ವಿಶ್ವವಿದ್ಯಾನಿಲಯ ಕೇವಲ ಪರೀಕ್ಷಾಮಂಡಳಿಯಾಗಿ ಉಳಿಯಬಾರದು ಎಂಬುದು. ಇದು ಮುಂದಿನ ಅನೇಕ ಸುಧಾರಣೆಗಳಿಗೆ ನಾಂದಿಯಾಯಿತು.

ಭೌಗೋಳಿಕ ವ್ಯಾಪ್ತಿ[ಬದಲಾಯಿಸಿ]

  • ೧೯೦೪ರ ವಿಶ್ವವಿದ್ಯಾನಿಲಯಗಳ ಕಾಯಿದೆಗನುಗುಣವಾಗಿ ಕಲ್ಕತ್ತ ವಿಶ್ವವಿದ್ಯಾಲಯದ ಭೌಗೋಳಿಕ ವ್ಯಾಪ್ತಿ ಸಂಕುಚಿತವಾಯಿತು. ಈ ಮೊದಲು ಮುಂಬಯಿ ಮತ್ತು ಮದರಾಸು (ಇಂದಿನ ತಮಿಳುನಾಡು) ಪ್ರಾಂತ್ಯಗಳನ್ನುಳಿದು, ಭಾರತಾದ್ಯಂತ, ಮಯನ್ಮಾರ್ ಮತ್ತು ಶ್ರೀಲಂಕಾದಲ್ಲಿದ್ದ ಕಾಲೇಜುಗಳೂ ಶಾಲೆಗಳೂ ಕಲ್ಕತ್ತ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದುವು. ೧೯೦೪ರ ವರೆಗೆ ಅದು ಬಹುಮಟ್ಟಿಗೆ ಪರೀಕ್ಷಾ ಮಂಡಲಿಯಾಗಿ ಮಾತ್ರ ಕಾರ್ಯನಿರ್ವಹಿಸಿತು. ೧೯೦೪ರ ಅನಂತರ ಶಿಕ್ಷಣದ ಹೊಣೆಯೂ ಇದಕ್ಕೆ ಸೇರಿತು. ೧೯೧೭ರ ಕಲ್ಕತ್ತ ವಿಶ್ವವಿದ್ಯಾಲಯ ಆಯೋಗ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಗಳ ಸುಧಾರಣೆಯತ್ತ ಗಮನ ಕೊಟ್ಟಿತು.
  • ಒತ್ತಡವನ್ನು ತಪ್ಪಿಸುವ ಸಲುವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಸುಧಾರಣೆಯನ್ನು ಜಾರಿಗೆ ತರಲು ಮತ್ತಷ್ಟು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಬೇಕೆಂದು ಶಿಫಾರಸು ಮಾಡಲಾಯಿತು. ಈ ಅವಧಿಯಲ್ಲಿ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಯ ಕನಸನ್ನು ನನಸಾಗಿಸಿದ ಶ್ರೇಯಸ್ಸು ಅಶುತೋಷ್ ಮುಖರ್ಜಿಯದು. ವಿಶ್ವವಿದ್ಯಾಲಯ ಎದುರಿಸಬೇಕಾಗಿ ಬಂದ ಸಮಸ್ಯೆಗಳಲ್ಲಿ ಎರಡನೆಯ ಮಹಾ ಯುದ್ಧವೂ ಒಂದು. ಇದರ ಪರಿಣಾಮವಾಗಿ ಸುಮಾರು ಒಂದು ದಶಕದ ಕಾಲ ಪ್ರಗತಿ ಕುಂಠಿತವಾಯಿತು. ಬಂಗಾಳದ ಭೀಕರಕ್ಷಾಮ ಇದು ಎದುರಿಸಿದ ಎರಡನೆಯ ಸಮಸ್ಯೆ.

ಸ್ವಾತಂತ್ರ್ಯ ಸಂಗ್ರಾಮದ ಅಂಗವಾಗಿ ನಡೆದ ತೀವ್ರ ಚಳವಳಿಗಳ ಅವಧಿಯಲ್ಲಿ ಇತರ ವಿಶ್ವವಿದ್ಯಾನಿಲಯಗಳಂತೆ ಕಲ್ಕತ್ತ ವಿಶ್ವವಿದ್ಯಾಲಯವೂ ಅಸಂಖ್ಯಾತ ಎಡರುತೊಡರುಗಳನ್ನು ಅನುಭವಿಸಬೇಕಾಗಿ ಬಂತು.

  • ದೇಶವಿಭಜನೆಯ ಅಭಿಶಾಪದೊಂದಿಗೆ ಎರಗಿದ ಮತೀಯ ಕ್ರೌರ್ಯ ಮತ್ತು ಹಿಂಸಾಚಾರಗಳ ಹೊಡೆತವೂ ತಟ್ಟಿತು. ಪಾಕಿಸ್ತಾನದಿಂದ ಕಾಲ್ತೆಗೆದು ಬಂದ ನಿರಾಶ್ರಿತರ ತಂಡೋಪತಂಡಗಳು ವಿಶ್ವವಿದ್ಯಾಲಯ ಮತ್ತು ಅದರ ಅಂಗಸಂಸ್ಥೆಗಳ ಆರ್ಥಿಕತೆಯ ಮೇಲೆ ದುಷ್ಟರಿಣಾಮ ಬೀರಿದುವು. ಶೈಕ್ಷಣಿಕ ವ್ಯವಸ್ಥೆಯೇ ತಲೆಕೆಳಗಾಗುವಂಥ ಪರಿಸ್ಥಿತಿ ಏರ್ಪಟ್ಟಿತು. ಬೆಳಕು ಹರಿಯುವುದರ ಒಳಗಾಗಿ ಮೂರನೆಯ ಎರಡರಷ್ಟು ಶಾಲಾ ಕಾಲೇಜುಗಳನ್ನು ಅದು ಕಳೆದುಕೊಂಡಿತು. ಅಂದರೆ ಅವೆಲ್ಲ ಪಾಕಿಸ್ತಾನಕ್ಕೆ ಸೇರಿಹೋಗಿದ್ದವು. ಈ ಎಲ್ಲ ಆಘಾತಗಳನ್ನೂ ಸಹಿಸಿಕೊಳ್ಳುವ ಹೊತ್ತಿಗೆ ೧೯೫೧ರ ದ್ವಿತೀಯಕ ಶಿಕ್ಷಣ ಕಾಯಿದೆ (ಸೆಕೆಂಡರಿ ಎಜುಕೇಷನ್ ಆಕ್ಟ್‌) ಜಾರಿಗೆ ಬಂದದ್ದರಿಂದ ಆ ಶಿಕ್ಷಣ ವ್ಯವಸ್ಥೆಯ ಮೇಲಿದ್ದ ಹತೋಟಿಯನ್ನೂ ಬಿಟ್ಟು ಕೊಡಬೇಕಾಗಿ ಬಂತು.
  • ಅಸ್ಸಾಮಿನಲ್ಲಿ ಗುಹಾವಟಿ ವಿಶ್ವವಿದ್ಯಾಲಯ ಪ್ರಾರಂಭವಾದ್ದರಿಂದ ಆ ಪ್ರಾಂತ್ಯದಲ್ಲಿದ್ದ ಶಾಲಾಕಾಲೇಜುಗಳ ಮೇಲಿನ ಹತೋಟಿ ತಪ್ಪಿತು.ಇತರ ಪ್ರಾಂತ್ಯಗಳಲ್ಲೂ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಾಗತೊಡಗಿದ್ದರಿಂದ ಆರ್ಥಿಕ ಮತ್ತು ಆಡಳಿತ ಪುನವರ್ಯ್‌ವಸ್ಥೆ ಅತ್ಯಂತ ಅನಿವಾರ್ಯ ವಾಯಿತು. ಈ ದೃಷ್ಟಿಯಿಂದ ರಚಿಸಲಾದ ೧೯೫೦ರ ಕಲ್ಕತ್ತ ವಿಶ್ವವಿದ್ಯಾಲಯ ಮಸೂದೆಯನ್ನು ಶಾಸನಸಭೆ ಅನುಮೋದಿಸಿತು. ೧೯೫೪ರಿಂದ ಇದು ಜಾರಿಗೆ ಬಂತು. ಡೋಲಾಯಮಾನವಾಗಿದ್ದ ಪರಿಸ್ಥಿತಿ ಶಾಂತವಾಗಿ ಮತ್ತೆ ಸುವ್ಯವಸ್ಥೆಯತ್ತ ಅದು ಹೆಜ್ಜೆ ಹಾಕತೊಡಗಿತು.

ಮೂಲಭೂತ ಸೌಕರ್ಯ[ಬದಲಾಯಿಸಿ]

  • ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಕಟ್ಟಡ ‘ಸೆನೆಟ್ ಭವನ’ ದೊರೆತದ್ದು ಅದು ಪ್ರಾರಂಭವಾದ ಹದಿನಾರು ವರ್ಷಗಳ ಅನಂತರ (೧೮೭೩). ಅಷ್ಟೇ ಅಲ್ಲ, ಪೂರ್ಣ ಕಾಲದ ಉದ್ಯೋಗಿಯಾಗಿ ರಿಜಿಸ್ಟ್ರಾರ್ ಒಬ್ಬರು ನೇಮಕಗೊಂಡದ್ದು ೧೯೦೩ರಿಂದ ಈಚೆಗೆ. ಈ ಕಾರಣದಿಂದಾಗಿಯೂ ಆರ್ಥಿಕ ಅಡಚಣೆಗಳಿಂದಾಗಿಯೂ ಸುವ್ಯವಸ್ಥಿತ ರೀತಿಯಲ್ಲಿ ವಿಶ್ವವಿದ್ಯಾಲಯದ ಗ್ರಂಥ ಭಂಡಾರವನ್ನು ಬೆಳಸಲು ಸಾಧ್ಯವಾಗಲಿಲ್ಲ. ೧೮೬೯-೭೦ರಲ್ಲಿ ಜಯಕಿಶನ್ ಮುಖರ್ಜಿ ಗ್ರಂಥಭಂಡಾರಕ್ಕೆಂದೇ ೫,೦೦೦ ರೂ.ಗಳನ್ನು ದಾನವಾಗಿ ಕೊಟ್ಟ ಬಳಿಕ ಈ ಕಾರ್ಯಕ್ಕೆ ಚಾಲನೆ ದೊರೆಯಿತು. ಆದರೂ ೧೮೭೩-೭೪ರಲ್ಲಿ ವಿಶ್ವವಿದ್ಯಾಲಯ ತನ್ನ ಹೆಚ್ಚುವರಿ ಆಯವ್ಯಯದಿಂದ ಮತ್ತಷ್ಟು ಹಣವನ್ನು ನೀಡುವವರೆಗೆ ಈ ಕಾರ್ಯ ಮುಂದುವರಿಯಲಿಲ್ಲ.
  • ಮುಂದೆ ದಾನ ರೂಪದಲ್ಲಿಯೂ ಗ್ರಂಥಗಳು ದೊರತುವು. ಇಂದು ಇದು ಕೇಂದ್ರ ಗ್ರಂಥ ಭಂಡಾರ ಮತ್ತು ಇತರ ವಿಭಾಗ ಗ್ರಂಥ ಭಂಡಾರಗಳನ್ನೊಳಗೊಂಡ ಸಮೃದ್ಧಸ್ಥಿತಿ ತಲಪಿದೆ. ೧೮೬೩ರ ಘಟಿಕೋತ್ಸವದಲ್ಲಿ ಕುಲಪತಿ ಮಾಡಿಕೊಂಡ ಮನವಿಯ ಮೇರೆಗೆ ದತ್ತಿಗಳ ಹೊಳೆ ಹರಿಯತೊಡಗಿತು. ಮುಂಬಯಿಯ ಪಾರ್ಸಿ ಶ್ರೀಮಂತ ಪ್ರೇಮಚಂದ ರಾಯಚಂದ ಯಾವುದೇ ನಿರ್ಬಂಧ ವಿಧಿಸದೆ ಎರಡು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟರು. ೧೮೬೯ರಲ್ಲಿ ಠಾಕೂರ್ ನ್ಯಾಯಶಾಸ್ತ್ರ ಪೀಠದ ಸ್ಥಾಪನೆಗಾಗಿ ಪ್ರಸನ್ನ ಕುಮಾರ ಠಾಕೂರ್ ಮಾಹೆಯಾನ ಒಂದು ಸಾವಿರ ರೂಪಾಯಿಗಳ ನಿರಂತರ ಕೊಡುಗೆಯ ವ್ಯವಸ್ಥೆಯನ್ನುಳ್ಳ ಉಯಿಲನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು.
  • ಮುಂದೆ ವಿಜಯನಗರಂ ಮಹಾರಾಜ, ಈಶ್ವರ ಚಂದ್ರ ಬೋಸ್, ಅಲೆಕ್ಸಾಂಡರ್ ಡಫ್ ಸ್ಮಾರಕನಿಧಿ, ಹರಿಶ್ಚಂದ್ರ ಚೌಧುರಿ, ಮಹಾರಾಜ ನೀಲ ಮಣಿಸಿಂಗದೇವ ಬಹಾದುರ್ ಮತ್ತಿತರ ವ್ಯಕ್ತಿಗಳು, ಸಂಸ್ಥೆಗಳು ನೀಡಿದ ಕೊಡುಗೆಗಳು ವಿದ್ಯಾರ್ಥಿವೇತನಗಳನ್ನು, ಬಹುಮಾನಗಳನ್ನು, ಪದಕಗಳನ್ನು, ಪ್ರಾಧ್ಯಾಪಕ ಪೀಠಗಳನ್ನು ಸ್ಥಾಪಿಸಲು ನೆರವಾದುವು. ಇಂಥ ಅಸಂಖ್ಯಾತ ಉದಾರ ಕೊಡುಗೆಗಳಿಂದಾಗಿ ಇಂದು ಕಲ್ಕತ್ತ ವಿಶ್ವವಿದ್ಯಾಲಯ ಭಾರತದಲ್ಲಿಯೇ ಅತ್ಯಂತ ಸಮೃದ್ಧ ದತ್ತಿನಿಧಿಯನ್ನುಳ್ಳ ವಿಶ್ವವಿದ್ಯಾನಿಲಯವಾಗಿದೆ. ಕಲ್ಕತ್ತ ವಿಶ್ವವಿದ್ಯಾಲಯ ಇಂದು ಬಹುಪಾಲು ಎಲ್ಲ ವಿಜ್ಞಾನ ಶಾಖೆಗಳಲ್ಲೂ ಅಧ್ಯಯನ ಸೌಲಭ್ಯ ಕಲ್ಪಿಸಿದೆ. ಸೈನಿಕ ವಿಜ್ಞಾನಕ್ಕೂ ಪದವಿ ಶಿಕ್ಷಣದ ಹಂತದಲ್ಲಿ ಸ್ಥಾನ ದೊರೆಯಿತು. ಆನ್ವಯಿಕ ವಿಜ್ಞಾನ ಶಾಖೆಗಳ ಆಶ್ರಯದಲ್ಲಿ ಸೋಪ್ ಟೆಕ್ನಾಲಜಿಯಂಥ ವಿಭಾಗಗಳನ್ನು ಸ್ಥಾಪಿಸಲಾಯಿತು.
  • ಗ್ರಂಥಾಲಯ ಶಾಸ್ತ್ರ, ಪತ್ರಿಕೋದ್ಯಮ, ನಗರ ಯೋಜನೆ, ಪ್ರಾದೇಶಿಕ ಯೋಜನೆ, ಪಥ್ಯಶಾಸ್ತ್ರದಂಥ ವಿಷಯಗಳಲ್ಲೂ ಡಿಪ್ಲೊಮಾ ತರಗತಿಗಳನ್ನು ತೆರೆಯಲಾಯಿತು. ಸಂಸ್ಕೃತ, ಪಾಳಿ, ಅಸ್ಸಾಮಿ, ಒರಿಯಾ, ಹಿಂದಿ, ಉರ್ದೂ, ಬಂಗಾಳಿ, ಅರಾಬಿಕ್, ಪರ್ಷಿಯನ್, ಇಂಗ್ಲಿಷ್, ಫ್ರೆಂಚ್, ಜರ್ಮನ್, ಗ್ರೀಕ್, ಲ್ಯಾಟಿನ್, ಹಿಬ್ರೂ, ಸಿರಿಯಾಕ್, ತೌಲನಿಕ ಭಾಷಾವಿಜ್ಞಾನ, ತತ್ತ್ವಶಾಸ್ತ್ರ, ಇತಿಹಾಸ, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಇಸ್ಲಾಮಿನ ಇತಿಹಾಸ ಮತ್ತು ಚರಿತ್ರೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಶಿಕ್ಷಣಶಾಸ್ತ್ರ, ವಾಣಿಜ್ಯಶಾಸ್ತ್ರ_ಇವೇ ಮೊದಲಾದ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ಸೌಲಭ್ಯವಿದೆ. ಶುದ್ಧ ಮತ್ತು ಆನ್ವಯಿಕ ವಿಜ್ಞಾನ ವಿಭಾಗಗಳು ವಿಜ್ಞಾನಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುತ್ತವೆ.
  • ರೇಡಿಯೋ_ಫಿಸಿಕ್ಸ್‌, ಎಲೆಕ್ಟ್ರಾನಿಕ್ಸ್‌ನಂಥ ವಿಜ್ಞಾನಶಾಖೆಗಳು ಸ್ವತಂತ್ರ ವಿಭಾಗಗಳಾಗಿ ಕಾರ್ಯೋನ್ಮುಖವಾಗುವ ಹಂತ ತಲಪುತ್ತಿವೆ. ಈ ವಿಶ್ವವಿದ್ಯಾನಿಲಯ ಹೇಗೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಇವೆಲ್ಲ ದಿಕ್ಸೂಚಿಗಳಾಗಿವೆ. ಈ ವಿಶ್ವವಿದ್ಯಾನಿಲಯದ ಇತಿಹಾಸ ಕುತೂಹಲ ಕರವಾಗಿದೆ, ಸಾಹಸಯಾತ್ರೆ ಪ್ರಶಂಸನೀಯವಾಗಿದೆ ಎಂದೆನಿಸದೆ ಇರದು. ಬಂಗಾಳದ ಇತಿಹಾಸದ ಪುಟಗಳನ್ನು ಅಲಂಕರಿಸಿರುವ ಬಂಕಿಮಚಂದ್ರ ಚಟರ್ಜಿ, ಹೇಮಚಂದ್ರ ಬಂದ್ಯೋಪಾಧ್ಯಾಯ, ಗುರುದಾಸ ಬ್ಯಾನರ್ಜಿ, ಚಂದರ್ ಕುಮಾರ್ ಡೇ, ಸುರೇಂದ್ರನಾಥ ಬ್ಯಾನ ರ್ಜಿ, ಆನಂದಮೋಹನ ಬೋಸ್, ಕಾಲೀಚರಣ ಬ್ಯಾನರ್ಜಿ_ಮುಂತಾದವರು ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂಬುದು ಅದಕ್ಕೆ ಹೆಮ್ಮೆಯ ವಿಷಯ.
  • ಇವರಲ್ಲಿ ಕೆಲವರಾದರೂ ಭಾರತೀಯ ಇತಿಹಾಸ ಮತ್ತು ಸಾಹಿತ್ಯೇತಿಹಾಸಗಳಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಾಚ್ಯ ಮತ್ತು ಪಾಶ್ಚಾತ್ಯ ಶಿಕ್ಷಣಗಳ ಸಂಗಮವೆಂದು ವಿಮರ್ಶಕರು ಈ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಹಿರಿಮೆಯನ್ನು ಹೊಗಳಿದ್ದಾರೆ. ಕರ್ಜ಼ನನ ಕ್ರಮಗಳಿಗೆ ಜನತೆ ತೋರಿದ ವಿರೋಧ ವಂತೂ ವಿಶ್ವವಿದ್ಯಾಲಯದ ವಿಚಾರದಲ್ಲಿ ಜನತೆ ಹೇಗೆ ಆಸಕ್ತಿ ತಳೆಯತೊಡಗಿತು ಎಂಬುದಕ್ಕೆ ಉದಾಹರಣೆಯಾಗಿದೆ. ಈ ಪ್ರಸಂಗದಲ್ಲಿ, ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅದರ ಭವಿಷ್ಯ ರಾಷ್ಟ್ರೀಯ ಮಹತ್ತ್ವದ ಪ್ರಶ್ನೆಯಾಗಿ ಪರಿಣಮಿಸಿತು. ಉಚ್ಚ ಶಿಕ್ಷಣವನ್ನು ಶ್ರೀ ಸಾಮಾನ್ಯನ ಮನೆಯ ಬಾಗಿಲ ಬಳಿಗೆ ತಂದು ಕೊಡುವ, ಅದನ್ನು ರಾಷ್ಟ್ರೀಯ ಸಂಸ್ಕೃತಿಯ ಜೀವಂತ ಮಾಧ್ಯಮವಾಗಿಸುವ ಮಹಾಪ್ರಯತ್ನದಲ್ಲಿ ಅಶುತೋಷ್ ಮುಖರ್ಜಿ ಬಹುಮಟ್ಟಿಗೆ ಯಶಸ್ವಿಯಾದದ್ದೂ ವಿಶ್ವವಿದ್ಯಾಲಯದ ಸಾಫಲ್ಯಕ್ಕೆ ಸಾಕ್ಷಿಯಾಗಿದೆ.

ಸುಧಾರಣೆಗಳು[ಬದಲಾಯಿಸಿ]

ಇತರ ವಿಶ್ವವಿದ್ಯಾನಿಲಯಗಳ ಮೇಲೆ ಆಗಿರುವಂತೆ ಕಲ್ಕತ್ತ ವಿಶ್ವವಿದ್ಯಾಲಯದ ಮೇಲೂ ಈಚಿನ ಶಿಕ್ಷಣ ಆಯೋಗಗಳ ಸಲಹೆ_ಸೂಚನೆಗಳ, ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಸುಧಾರಣೆಗಳ ಪರಿಣಾಮ ಆಗಿದೆ. ಸ್ನಾತಕೋತ್ತರ ಅಧ್ಯಯನ ಮತ್ತು ಸಂಸೋಧನೆಗಳಲ್ಲಿ ಅದರ ಪ್ರಗತಿ ಗಮನಾರ್ಹವಾಗಿದೆ. ರಾಷ್ಟೀಯ ಪ್ರಾಧ್ಯಾಪಕರಾಗಿ ಹೆಸರಿಸಲಾಗಿರುವ ಅನೇಕ ಮಹನೀಯರು ಈ ವಿಶ್ವವಿದ್ಯಾನಿಲಯಕ್ಕೆ ಸೇರಿದವರು ಎಂಬುದು ಇದಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಸ್ಥಾನಮಾನ[ಬದಲಾಯಿಸಿ]

  • ಸಾಮಾಜಿಕ ಕ್ಷೇತ್ರವನ್ನು ವ್ಯಾಪಿಸಿರುವ ಕೆಲವು ಪಿಡುಗುಗಳು ಶೈಕ್ಷಣಿಕ ಕ್ಷೇತ್ರವನ್ನೂ ಪ್ರವೇಶಿಸಿರುವುದರಿಂದ ಈಚೆಗೆ ಇಲ್ಲಿಯ ಶಿಕ್ಷಣಕ್ಷೇತ್ರದ ನೈತಿಕ ಅಡಿಪಾಯ ಕಂಪಿಸತೊಡಗಿದೆ; ಅಭದ್ರತೆಯ ಭಾವನೆ ಬೆಳೆಯತೊಡಗಿದೆ. ಈಚಿನ ಕೆಲವು ಬೆಳೆವಣಿಗೆಗಳು ವಿಶ್ವವಿದ್ಯಾಲಯದ ಕೀರ್ತಿಗೆ ಎರವಾಗತೊಡಗಿವೆ. ಇದು ಸಮಾಜ ವಿಜ್ಞಾನಿಗಳನ್ನೂ ಶಿಕ್ಷಣತಜ್ಞರನ್ನೂ ಕಳವಳಕ್ಕೀಡು ಮಾಡಿರುವ ಸಂಗತಿ.
  • ಇಷ್ಟಾದರೂ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಮಾನ್ಯವಾಗಿಯೇ ಉಳಿದುಕೊಂಡು ಬರುತ್ತಿರುವುದು ಇದರ ಅಂತಃಸತ್ವದ, ಚೈತನ್ಯದ ದ್ಯೋತಕವಾಗಿದೆ. ಇತ್ತೀಚಿಗಿನ ಸಮೀಕ್ಷೆಯಂತೆ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಈ ವಿಶ್ವವಿದ್ಯಾಲಯ ೬೦೦+ ಗುಂಪಿನಲ್ಲಿದೆ.ಏಷಿಯಾ ಖಂಡದ ವಿಶ್ವವಿದ್ಯಾಲಯಗಳಲ್ಲಿ ೧೪೩ನೆಯ ಸ್ಥಾನದಲ್ಲಿದೆ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಮೂರನೆಯ ಸ್ಥಾನದಲ್ಲಿದೆ. .[೪]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]