1972ರಲ್ಲಿ ಭಾರತದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಲವು ವನ್ಯಜೀವಿ ಪ್ರಭೇದಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದೇ ದಶಕದಲ್ಲಿ ಪ್ರಾರಂಭವಾದ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಕರ್ನಾಟಕದಲ್ಲೂ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸ್ಥಾಪಿತಗೊಂಡವು.
ಇದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿಯಿಂದ ರಾಜ್ಯದಲ್ಲಿ 286 ಜನ ಜೀವ ಕಳೆದುಕೊಂಡಿದ್ದಾರೆ. ಈಗ ಸಹಿಷ್ಣುತೆಯಿಂದಿದ್ದ ಅರಣ್ಯದಂಚಿನ ಸಹನೆ ಕಳೆದುಕೊಂಡ ಜನ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಮಂಜಸವಾದ ಉತ್ತರವಿಲ್ಲದಿದ್ದರೆ ಇವುಗಳ ಸಂರಕ್ಷಣೆಗೆ ಬೆಂಬಲ ಸಿಗುವುದು ಇನ್ನೂ ಕಠಿಣವಾಗುತ್ತದೆ
ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖವಾದ ಕಾರ್ಯನೀತಿಯೆಂದರೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ. ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಘೋಷಣೆಯಾಗಿದ್ದು ರಂಗನತಿಟ್ಟು ವನ್ಯಜೀವಿಧಾಮ. ಇದನ್ನು ಬಿಟ್ಟರೆ ಇನ್ನೆಲ್ಲ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳು ರಾಜ್ಯದಲ್ಲಿ ಸ್ಥಾಪಿತವಾಗಿರುವುದು 70ರ ದಶಕದ ನಂತರ.
ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಕರ್ನಾಟಕಕ್ಕೆ ಮದ್ರಾಸ್ ಮತ್ತು ಮುಂಬಯಿ ಪ್ರಾಂತ್ಯಗಳಿಂದ, ಕೊಡಗು ರಾಜ್ಯ ಹಾಗೂ ಇನ್ನಿತರ ಪ್ರದೇಶಗಳ ಅರಣ್ಯಗಳು ರಾಜ್ಯಕ್ಕೆ ಸೇರಿಕೊಂಡವು.
ದೇಶದಲ್ಲಿ 1970ರ ನಂತರ ಆದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಅತೀ ದೊಡ್ಡ ವಿಸ್ತರಣಾ ಕಾರ್ಯ ನಡೆದ್ದದ್ದು ಸ್ವಾತಂತ್ಯ್ರ ಪೂರ್ವದಲ್ಲಿ ಕೇವಲ ಒಂದೇ ಒಂದು ವನ್ಯಜೀವಿಧಾಮವಿದ್ದ ರಾಜ್ಯದಲ್ಲಿ ಇಂದು 29 ವನ್ಯಜೀವಿಧಾಮಗಳು, 5 ರಾಷ್ಟ್ರೀಯ ಉದ್ಯಾನಗಳು, 8 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು ಒಂದು ಸಮುದಾಯ ಮೀಸಲು ಪ್ರದೇಶಗಳಿವೆ.[೧]