ಕರ್ನಾಟಕದ ಅಣೆಕಟ್ಟುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕದ ಒಂದು ಸುಂದರ ಅಣೆಕಟ್ಟೆ

ಪೀಠಿಕೆ[ಬದಲಾಯಿಸಿ]

ಅಣೆಕಟ್ಟುಗಳು ಎಂದರೆ ‘ಭವ್ಯ ಭಾರತ ನಿರ್ಮಾಣದ ದೇಗುಲಗಳಿದ್ದಂತೆ ಎಂದು ‘ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಹೇಳಿದ್ದರು. ಅವರ ಮಾತಿನಂತೆ ‘ಭಾರತದಲ್ಲಿ ಅದೆಷ್ಟೋ ಅಣೆಕಟ್ಟುಗಳು ನಿರ್ಮಾಣವಾಗಿವೆ. ಕರ್ನಾಟಕದಲ್ಲಿಯೂ ‘ಭಾರಿ ಸಂಖ್ಯೆಯಲ್ಲಿಯೇ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಇರುವ ದೊಡ್ಡ ಅಣೆಕಟ್ಟುಗಳ ಸಂಖ್ಯೆ 23. ಅವುಗಳಲ್ಲದೇ ಚಿಕ್ಕಪುಟ್ಟ ಅಣೆಕಟ್ಟುಗಳ ಸಂಖ್ಯೆಗಳೂ ಹಲವಷ್ಟಿವೆ. ಅವುಗಳಲ್ಲಿ ಕೆಲವು ಅಣೆಕಟ್ಟುಗಳ ಬಗ್ಗೆ ಕಿರು ನೋಟ.

ಕೃಷ್ಣರಾಜ ಸಾಗರ ಅಣೆಕಟ್ಟು[ಬದಲಾಯಿಸಿ]

ಭಾರತದ, ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ಇದು ‘ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸು. ಕಾವೇರಿ ನದಿಗೆ ಶ್ರೀರಂಗಪಟ್ಟಣದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 130 ಅಡಿ ಎತ್ತರವಾಗಿದೆ. ಕೆ ಆರ್ ಎಸ್ ಎಂದೇ ಹೆಸರಾಗಿರುವ ಈ ಅಣೆಕಟ್ಟು ಮಂಡ್ಯ, ಮೈಸೂರು ಜಿಲ್ಲೆಗಳ ಸಾವಿರಾರು ಎಕರೆಗೆ ನೀರುಣಿಸುತ್ತದೆ. ‘ಭಾರತ ಸ್ವತಂತ್ರವಾಗುವ ಮೊದಲೇ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಹಿಂದಿನ ತಲೆಮಾರಿನ ತಂತ್ರಜ್ಞರ ಯಶಸ್ವಿ ತಂತ್ರಜ್ಞಾನಕ್ಕೆ ಸಾಕ್ಷಿ. ಈ ಅಣೆಕಟ್ಟಿನ ಕೆಳ ಭಾಗದಲ್ಲಿ ನಿರ್ಮಿಸಲಾಗಿರುವ ಬೃಂದಾವನ ಉದ್ಯಾನವನವೂ ಅಷ್ಟೇ ಪ್ರಸಿದ್ಧಿ ಹೊಂದಿದ್ದು ವಿಶ್ವ ವಿಖ್ಯಾತಿ ಗಳಿಸಿದೆ.

ಲಿಂಗನ ಮಕ್ಕಿ ಅಣೆಕಟ್ಟು.[ಬದಲಾಯಿಸಿ]

ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.

ಸುಪಾ ಅಣೆಕಟ್ಟು[ಬದಲಾಯಿಸಿ]

ಕಾಳಿ ನದಿಗೆ ನಿರ್ಮಿಸಲಾಗಿರುವ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸುಪಾದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. 1101 ಮೀಟರ್ ಎತ್ತರ ಇರುವ ಸುಪಾ ಅಣೆಕಟ್ಟು 332 ಮೀಟರ್ ಉದ್ದವಾಗಿದೆ. ಅಣೆಕಟ್ಟನ್ನು 1985ರಂದು ಉದ್ಘಾಟಿಸಲಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ. ಕಾಳಿನದಿಗೆ ಕಟ್ಟಲಾಗಿರುವ ಹಲವಾರು ದೊಡ್ಡ ಅಣೆಕಟ್ಟುಗಳಲ್ಲಿ ಇದೂ ಒಂದು.

ತುಂಗಭದ್ರಾ ಅಣೆಕಟ್ಟು[ಬದಲಾಯಿಸಿ]

2441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ.ಇದನ್ನು "ಪಂಪ ಸಾಗರ" ಎಂಬ ಮತ್ತೊಂದು ಹೆಸರಿನಿಂದ ಕರೆಯುತ್ತಾರೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗಭದ್ರ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಬಿರುಬಿಸಿಲಿನ ಬಯಲುಸೀಮೆಯ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯೆನಿಸಿದೆ. ಆದರೆ ಇಂದು ಈ ಆಣೆಕಟ್ಟಿನ ಕಾಲು ಭಾಗ ಹೂಳಿನಿಂದ ತುಂಬಿದೆ. ಹೀಗಾಗಿ ನೀರಿನ ಶೇಖರಣೆಯ ಪ್ರಮಾಣ ಕಡಿಮೆಯಾಗಿದ್ದು. ಈ ಭಾಗದ ರೈತರಲ್ಲಿ ಆತಂಕ ಉಂಟುಮಾಡಿದೆ. ಈ ನಿಟ್ಟಿನಲ್ಲಿ ಪ್ರಭುತ್ವ ಮಹತ್ವದ ಹೆಜ್ಜೆ ಇಟ್ಟು ಬರದ ನಾಡಿನ ಜನರ ಬಾಯಾರಿಕೆಯನ್ನು ನೀಗಿಸಬೇಕಿದೆ. ಹಾಗೆಯೇ ಅನೇಕ ಕಾರ್ಖಾನೆಗಳಿಂದ ಹೊರ ಸೂಸುವ ಕಲುಷಿತ ನೀರು ಈ ಆಣೆಕಟ್ಟಿನ ನೀರನ್ನು ಸೇರುವುದರಿಂದ ಕಳೆದ ನಾಲ್ಕೈದು ವರ್ಷಗಳಿಂದ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದಾಗಿ ಈ ಭಾಗದ ಲಕ್ಷಾಂತರ ಜನರ ಆರೋಗ್ಯ ಹದಗೆಡುತ್ತಿದೆ. ಪಾನಕ್ಕೆ ತುಂಗಾ ನೀರೇ ಶ್ರೇಷ್ಠವೆಂದು ಕರೆಯಿಸಿಕೊಂಡ ನೀರು ಇಂದು ಕುಡಿಯಲಿಕ್ಕೂ ಯೋಗ್ಯವಿಲ್ಲದಂತಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಜನರು ಜಾಗೃತಗೊಳ್ಳಬೇಕು ಮತ್ತು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಬಡತನದ ಬೇಗೆಯಲ್ಲಿ ಬದುಕುತ್ತಿರುವ ಈ ಭಾಗದ ಜನರ ಆರೋಗ್ಯ ರಕ್ಷಣೆಯ ಬಗೆಗೆ ಮತ್ತಷ್ಟು ಗಮನಹರಿಸಬೇಕಿದೆ. ಹಾಗೆಯೇ ಜನರೂ ಸಹ ನೀರನ್ನು ಕಲುಷಿತಗೊಳಿಸದೆ ಶುದ್ಧವಾಗಿಡಬೇಕು.

ಕೊಡಸಳ್ಳಿ ಅಣೆಕಟ್ಟು[ಬದಲಾಯಿಸಿ]

ಕಾಳಿನದಿಗೆ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಬಳಿ ನಿರ್ಮಿಸಲಾಗಿರುವ ಈ ಅಣೆಕಟ್ಟನ್ನು 1997ರಲ್ಲಿ ಉದ್ಘಾಟಿಸಲಾಯಿತು. ವಿದ್ಯುತ್ ಉತ್ಪಾದನೆಯ ಉದ್ದೇಶದಿಂದಲೇ ನಿರ್ಮಾಣಗೊಂಡ ಅಣೆಕಟ್ಟು ಇದಾಗಿದೆ. ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಕಾಡಿನ ನಾಶದ ವಿರುದ್ಧ ಹಲವು ಹೋರಾಟಗಳು ನಡೆದಿದ್ದವು.

ಆಲಮಟ್ಟಿ ಅಣೆಕಟ್ಟು[ಬದಲಾಯಿಸಿ]

ಜುಲೈ2005ರಲ್ಲಿ ಉದ್ಘಾಟನೆಯಾದ ಆಲಮಟ್ಟಿ ಅಣೆಕಟ್ಟು ಸಮುದ್ರ ಮಟ್ಟದಿಂದ 509 ಮೀಟರ್ ಎತ್ತರವಾಗಿದೆ. ಇದನ್ನು ಈಗ ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ 519 ಮೀಟರ್ಗೆ ಏರಿಸಲಾಗುತ್ತಿದೆ. ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಈ ಅಣೆಕಟ್ಟು ನಿರಾವರಿ ಹಾಗೂ ವಿದ್ಯುತ್ ಉತ್ಪಾದನೆ ಈ ಎರಡೂ ಉದ್ದೇಶ ಹೊಂದಿದೆ. ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1565.15 ಮೀಟರ್ ಉದ್ದವಾಗಿದೆ. 42.19 ಟಿಎಂಸಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ.

ಸಮಾರೋಪ[ಬದಲಾಯಿಸಿ]

ಇವು ಕರ್ನಾಟಕದ ಪ್ರಮುಖ ಅಣೆಕಟ್ಟುಗಳು. ಇವಲ್ಲದೆ ಭದ್ರಾ ಅಣೆಕಟ್ಟು, ನಾರಾಯಣಪುರ(ಬಸವಸಾಗರ),ಕಬಿನಿ, ಹಾರಂಗಿ, ಗಾಜನೂರು, ಕದ್ರಾ, ಬಾಚಣಕಿ, ಗೋರೂರು, ಹಿಡಕಲ್, ಕಣ್ವ, ಲಕ್ಕವಳ್ಳಿ, ಮಾರ್ಕೋನಹಳ್ಳಿ, ಸಾತನೂರು, ವಾಣಿವಿಲಾಸ ಸಾಗರ ಮುಂತಾದ ಹಲವು ಮಧ್ಯಮ ಗಾತ್ರದ ಅಣೆಕಟ್ಟುಗಳಿವೆ. ಅದಲ್ಲದೆ ನೂರಕ್ಕೂ ಹೆಚ್ಚಿನ ಚಿಕ್ಕಪುಟ್ಟ ಅಣೆಕಟ್ಟುಗಳಿವೆ. ಇವುಗಳ ಜೊತೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೂರಾರು ಚಿಕ್ಕ ಪುಟ್ಟ ಅಣೆಕಟ್ಟುಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಇವುಗಳ ವಿರುದ್ಧ ಪರಿಸರವಾದಿಗಳು ಹೋರಾಟ ಪ್ರಾರಂಭಿಸಿದ್ದಾರೆ. ಕನ್ನಡ ನಾಡಿಗೆ ವಿದ್ಯುತ್ತಿನ ಜೊತೆಗೆ ಬೆಳೆಗಳಿಗೆ ನೀರನ್ನೂ ನೀಡುತ್ತಿರುವ ಈ ಅಣೆಕಟ್ಟುಗಳು ಭವ್ಯ ಭಾರತದ ದೇಗುಲಗಳೇ ಹೌದು.

ಜಲಾಶಯಗಳಲ್ಲಿ ನೀರು ಮತ್ತು ಹೂಳು[ಬದಲಾಯಿಸಿ]

ಕುಡಿಯುವ ನೀರು, ನೀರಾವರಿ, ವಿದ್ಯುತ್‌ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಲಾಗಿರುವ ರಾಜ್ಯದ ಪ್ರಮುಖ ಜಲಾಶಯಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅವುಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿವೆ. ತುಂಗಭದ್ರಾ ಜಲಾಶಯದಲ್ಲಿ ಶೇಖರವಾಗಿರುವ ಭಾರಿ ಪ್ರಮಾಣದ ಹೂಳನ್ನು ತೆಗೆಯುವ ಬಗ್ಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದೆ.

ಅದರ ಪಟ್ಟಿ ಕೆಳಗೆ ಕೊಟ್ಟಿದೆ
ಕ್ರಮ ಸಂಖ್ಯೆ ಜಲಾಶಯ ನೀರಿನ ಸಂಗ್ರಹ ಸಾಮರ್ಥ್ಯ ತುಂಬಿರುವ ಹೂಳು
. . ಟಿ.ಎಂ.ಸಿ.ಗಳಲ್ಲಿ ಟಿ.ಎಂ.ಸಿ.ಗಳಲ್ಲಿ
1 ತುಂಗಭದ್ರಾ 100.855 31.616
2 ಆಲಮಟ್ಟಿ 32.315 10.157
3 ಕೃಷ್ಣರಾಜ ಸಾಗರ 49.452 5.309
4 ಮಲಪ್ರಭಾ 37.73 2.744
5 ಹೇಮಾವತಿ 37.103 2.689
6 ಭದ್ರಾ 71.535 2.125
7 ಹಾರಂಗಿ 8.50 0.833
8 ಕಬಿನಿ 19.52 0.814
9 ವಾಟೆಹೊಳೆ 1.50 0.235
10 ಮಾರ್ಕೋನಹಳ್ಳಿ 2.401 0.136
11 ಹಿಪ್ಪರಗಿ 6.00 0.126
12 ತೀತಾ 0.242 0.005

[೧]

ಹೆಚ್ಚಿನ ವಿವರ: ಕರ್ನಾಟಕ ನದಿಗಳ ಸಾಮರ್ಥ್ಯ:[ಬದಲಾಯಿಸಿ]

ಕಲಬುರ್ಗಿ ಜಿಲ್ಲೆಯ ನದಿಗಳು[ಬದಲಾಯಿಸಿ]

  • ಕಲಬುರ್ಗಿ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿಗಳು ೨೦೨೦ರಲ್ಲಿ ತುಂಬಿ ಹರಿಯುತ್ತಿವೆ. 5 ವರ್ಷದ ಬಳಿಕ ಎಲ್ಲ 6 ಜಲಾಶಯಗಳು 2020 ಆಗಸ್ಟ್‍ನಲ್ಲಿ ಭರ್ತಿಯಾದವು. ಬೆಣ್ಣೆತೊರಾ, ಅಮರ್ಜಾ, ಸೊನ್ನ ಭೀಮಾ ಬ್ಯಾರೇಜ್, ಚಂದ್ರಂಪಳ್ಳಿ, ಗಂಡೋರಿ ನಾಲಾ ಮತ್ತು ನಾಗರಾಳ ಜಲಾಶಯಗಳು ೨೦೨೦ ಆಗಸ್ಡ್ 12 ರ ಸಮಯಕ್ಕೆ ಭರ್ತಿಯಾದವು. 2020 ಆಗಸ್ಟ್‍ನಲ್ಲಿ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ಜೀವನಾಡಿ ಭೀಮಾನದಿಯು ತುಂಬಿ ಹರಿಯಿತು. ಇದರಿಂದ ಅಫಜಲಪೂರ, ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ಹಲವು ಕೆರೆಗಳು ಭರ್ತಿಯಾದವು.

ಭದ್ರಾ ಜಲಾಶಯ[ಬದಲಾಯಿಸಿ]

ಚಿಕ್ಕಮಗಳೂರು–ಶಿವಮೊಗ್ಗ ಜಿಲ್ಲೆ ಭಾಗದ ಲಕ್ಕವಳ್ಳಿ ಬಳಿ ಭದ್ರಾ ನದಿಗೆ 1964ರಲ್ಲಿ ಅಣೆಕಟ್ಟೆ ಕಟ್ಟಲಾಗಿದೆ. 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ, 186 ಅಡಿ ಎತ್ತರದ ಜಲಾಶಯ. ಮಲೆನಾಡು–ಬಯಲು ಸೀಮೆಯ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 1.82 ಲಕ್ಷ ಹೆಕ್ಟೇರ್ ಜಮೀನುಗಳಿಗೆ ನೀರುಣಿಸುತ್ತದೆ. ಜತೆಗೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಈ ಜಲಾಶಯವೇ ಆಧಾರ.

  • 2019 ವರ್ಷದ ಆಗಸ್ಟ್ ಕೊನೆಯಲ್ಲಿ ಈ ಜಲಾಶಯ ಭರ್ತಿಯಾಗಿತ್ತು. 2014ರಲ್ಲಿ ಭರ್ತಿಯಾಗಿದ್ದ ಜಲಾಶಯ ಮತ್ತೆ ತುಂಬಿದ್ದು 2018ರಲ್ಲಿ. 2020ರ ವರ್ಷದಲ್ಲಿ ಆಗಸ್ಟ್‍ನಲ್ಲಿ 178.6 ಅಡಿಗೆ ತಲುಪಿತು. 71.53 ಟಿಎಂಸಿ ಅಡಿ: ಸಂಗ್ರಹ ಸಾಮರ್ಥ್ಯ; 186 ಅಡಿ: ಗರಿಷ್ಠ ಮಟ್ಟ.

ಕಾವೇರಿ ಕಣಿವೆಯ ‘ಹಾರಂಗಿ’ಜಲಾಶಯ[ಬದಲಾಯಿಸಿ]

  • ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಹಾರಂಗಿಯೂ ಒಂದು. . 2020 ರಲ್ಲಿ ಜುಲೈ 17ರಂದೇ ಜಲಾಶಯ ಭರ್ತಿ ಆಯಿತು. 2019ರಲ್ಲಿ ಮತ್ತು 2018ರಲ್ಲಿ ಜುಲೈ ತಂಗಳಲ್ಲೇ ಜಲಾಶಯ ತುಂಬಿತ್ತು. ಇದು ಕೊಡಗು ಸೇರಿದಂತೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ 1,34,895 ಎಕರೆ ಪ್ರದೇಶಕ್ಕೆ ನೀರು ಪೂರೈಸುತ್ತದೆ. ಜಲಾಶಯದ ನೀರನ್ನು ಬಳಸಿಕೊಂಡು ‘ಎನರ್ಜಿ ಡೆವಲಪ್‌ಮೆಂಟ್ ಕಂಪೆನಿ’ (ಇ.ಡಿ.ಸಿ.ಎಲ್) ವಿದ್ಯುತ್‌ ಉತ್ಪಾದಿಸುತ್ತಿದೆ. ಸರ್ಕಾರದೊಂದಿಗೆ ಇಡಿಸಿಎಲ್‌ 30 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಅದು 1998ರಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿತ್ತು.
  • 2,859 ಅಡಿ: ಗರಿಷ್ಠ ಮಟ್ಟ
  • 2,858.18 ಅಡಿ: ಈಗಿನ ಸಂಗ್ರಹ
  • 8.5 ಟಿಎಂಸಿ ಅಡಿ: ನೀರು ಸಂಗ್ರಹ ಸಾಮರ್ಥ್ಯ

ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯ ಜಲಾಶಯ[ಬದಲಾಯಿಸಿ]

  • ಇದು ಶರಾವತಿ ನದಿಗೆ 1964ರಲ್ಲಿ ನಿರ್ಮಿಸಿದ ಜಲಾಶಯವು. 59.13ಮೀ ಎತ್ತರ, 2,749ಮೀ ಉದ್ದ ಇರುವ ಅಣೆಕಟ್ಟೆಯನ್ನು ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಯಿತು. ಈ ಜಲಾಶಯ1,992 ಚದರ ಕಿ.ಮೀ ಜಲಾನಯನ ಪ್ರದೇಶ ಹೊಂದಿದೆ. ಅದು 44.35 ಕೋಟಿ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಜಲಾಶಯದ ನೀರು ಬಳಸಿಕೊಂಡು ಮಹಾತ್ಮ ಗಾಂಧಿ, ಶರಾವತಿ, ಲಿಂಗನಮಕ್ಕಿ ಮತ್ತು ಗೇರುಸೊಪ್ಪ ಘಟಕಗಳಲ್ಲಿ ಒಟ್ಟು 1,469.8 ಮೆಗಾವಾಟ್‌ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ಜಲಾಶಯ ಸಮುದ್ರ ಮಟ್ಟದಿಂದ 1,819 ಅಡಿ ಗರಿಷ್ಠಮಟ್ಟ ಇದೆ. ಅದು ಭರ್ತಿಯಾದ ನಂತರ ಹೊರಗೆ ಹರಿಸುವ ನೀರು ಕಾರ್ಗಲ್‌ ಜಲಾಶಯದ ಮೂಲಕ ಜೋಗ ಜಲಪಾತದಿಂದ ಧುಮ್ಮಿಕ್ಕುವ ಮನಮೋಹಕ ದೃಶ್ಯ ವಿಶ್ವ ಪ್ರಸಿದ್ಧವಾಗಿದೆ. ವರ್ಷ 2019 ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ವರ್ಷ 1,799 ಅಡಿಗೆ ತಲುಪಿದೆ. 2020

ಕಾವೇರಿ ಕಣಿವೆಯ ಜಲಾಶಯಗಳು[ಬದಲಾಯಿಸಿ]

  • ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು 2020 ರಲ್ಲಿ ಭರ್ತಿಯಾದವು. 2020 ಆಗಸ್ಟ್ 15 ಸಮಯಕ್ಕೆ ಜಲಾಶಯ ಗರಿಷ್ಠ ಮಟ್ಟ (124.80 ಅಡಿ ತಲುಪಿದೆ. 2019 ಆ.15 ರಂದೇ ಕೆಆರ್‌ಎಸ್‌ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. ಜಲಾಶಯದಿಂದ 11.5 ಲಕ್ಷ ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಡುತ್ತದೆ. ಜೊತೆಗೆ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ತಮಿಳುನಾಡಿಗೆ ಜೂನ್‌ 1ರಿಂದ ಇಲ್ಲಿಯವರೆಗೆ 63 ಟಿಎಂಸಿ ಅಡಿ ನೀರು ಹರಿದು ಹೋಗಿದೆ.ಕಬಿನಿ ಭರ್ತಿ:
  • ಎಚ್‌.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 2,284 ಅಡಿ ಎತ್ತರದ ಈ ಜಲಾಶಯದಲ್ಲಿ 2020 ಆಗಸ್ಟ್ 15 ಸಮಯಕ್ಕೆ 2,283.25 ಅಡಿ ನೀರಿನ ಸಂಗ್ರಹವಿತ್ತು. 19.52 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ 18.87 ಟಿಎಂಸಿ ಅಡಿ ನೀರು ಇತ್ತು.
  • ಈ ಜಲಾಶಯವು ಎಡದಂಡೆ ನಾಲೆ ವ್ಯಾಪ್ತಿಯಲ್ಲಿ 2,910 ಎಕರೆ, ಬಲದಂಡೆ ನಾಲೆ ವ್ಯಾಪ್ತಿಯಲ್ಲಿ 1.05 ಲಕ್ಷ ಎಕರೆ ಪ್ರದೇಶ ಒಳಗೊಂಡಿದೆ. ಜೊತೆಗೆ ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗೆ ನೀರು ಹರಿಸಲಾಗುತ್ತದೆ.

ಹೇಮಾವತಿ ಜಲಾಶಯ[ಬದಲಾಯಿಸಿ]

  • ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯವು ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಹೇಮಾವತಿ ಜಲಾನಯನ ಪ್ರದೇಶದಲ್ಲಿ 2020 ರಲ್ಲಿ ಉತ್ತಮವಾಗಿ ಮಳೆಯಾಗಿ ಜಲಾಶಯ ಆಗಸ್ಟ್‍ನಲ್ಲಿ ಭರ್ತಿಯಾಯಿತು.,ಹೆಚ್ಚಿನ ನೀರನ್ನು 6 ಕ್ರಸ್ಟ್‌ ಗೇಟ್‌ಗಳ ಮೂಲಕ 15 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿ ಬಿಡಲಾಯಿತು.
  • ಹಾಸನದ 1,07,480 ಎಕರೆ, ಮಂಡ್ಯದ 2,27,920 ಎಕರೆ, ತುಮಕೂರು 3,14,000 ಎಕರೆ ಹಾಗೂ ಮೈಸೂರು ಜಿಲ್ಲೆಯಲ್ಲಿ 5,600 ಎಕರೆ ಅಚ್ಚುಕಟ್ಟು ಪ್ರದೇಶ ಒಳಗೊಂಡಿದೆ. ತುಮಕೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಅಚ್ಚುಕಟ್ಟು ಹೊಂದಿದೆ. ಜೊತೆಗೆ 24 ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವುದು.
  • ಹೇಮಾವತಿ ಜಲಾಶಯವು 2018- 2019- 2020 ವರ್ಷಗಳಲ್ಲಿ ನಿರಂತರವಾಗಿ ತುಂಬಿದೆ.
  • 37.103 ಟಿಎಂಸಿ ಅಡಿ: ಸಂಗ್ರಹ ಸಾಮರ್ಥ್ಯ.
  • 36.64 ಟಿಎಂಸಿ ಅಡಿ: 2020 ಆಗಸ್ಟ್‍ನಲ್ಲಿ ಸಂಗ್ರಹ.

ತುಂಗಭದ್ರಾ ಜಲಾಶಯ[ಬದಲಾಯಿಸಿ]

  • ತುಂಗಭದ್ರಾ ಜಲಾಶಯವು ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಇದೆ. ಇದರಿಂದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 3 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೆ ಒಳಪಟ್ಟಿದೆ. ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗಿರುವುದರಿಂದ ಜಲಾಶಯ 2020 ರಲ್ಲಿ ತುಂಬಿತು.

ಬಸವಸಾಗರ ಜಲಾಶಯ[ಬದಲಾಯಿಸಿ]

  • ಬಸವಸಾಗರ ಜಲಾಶಯವನ್ನು ಯಾದಗಿರಿ ಜಿಲ್ಲೆಯ ನಾರಾಯಣಪುರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ 2020 ಆಗಸ್ಟ್ ನಲ್ಲಿ ಭರ್ತಿಯಾಗಿದೆ. ಇದರ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತದೆ.
  • ಮೂರು ವರ್ಷಗಳಿಂದ ಜಲಾಶಯ ಭರ್ತಿಯಾಗುತ್ತಿದ್ದು, 2020 ಆಗಸ್ಟ್ 7ರಂದು ಭರ್ತಿಯಾಗಿದೆ. 27 ಗೇಟುಗಳ ಮೂಲಕ ನೀರು ಹರಿಸಲಾಯಿತು.
  • 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ಕೃಷ್ಣಾ ನದಿಯು ಯಾದಗಿರಿ, ವಿಜಯಪುರ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ಜೀವನದಿಯಾಗಿದೆ.

ತುಂಗಭದ್ರಾ ಜಲಾಶಯ (75ರ ವರ್ಷ)[ಬದಲಾಯಿಸಿ]

  • ಹೊಸಪೇಟೆಗೆ ಸಮೀಪದ ತುಂಗಭದ್ರಾ ಜಲಾಶಯ 2020 ರಲ್ಲಿ 75 ವರ್ಷ ಪೂರ್ಣಗೊಳಿಸಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಅವಿಭಜಿತ ಆಂಧ್ರ ಪ್ರದೇಶದ ಕಡಪ, ಕರ್ನೂಲು, ಅನಂತಪುರ ಹಾಗೂ ಮೆಹಬೂಬ್‌ ನಗರದ ಜೀವನಾಡಿಯಾಗಿರುವ ಈ ಅಣೆಕಟ್ಟೆ ಒಟ್ಟು 5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ. 127 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ.
  • ಒಟ್ಟು 33 ಕ್ರಸ್ಟ್ ಗೇಟ್‌ಗಳನ್ನು ಒಳಗೊಂಡಿದೆ. ಕಾಲುವೆಗಳು 250 ಕಿ.ಮೀ ವರೆಗೆ ವಿಸ್ತರಿಸಿವೆ. ಪ್ರತಿ ವರ್ಷ ಈ ಕಾಲುವೆಗಳನ್ನು ಹಂತ ಹಂತವಾಗಿ ದುರಸ್ತಿಗೊಳಿಸಲಾಗುತ್ತಿದೆ. ವರ್ಷ 2019 ರಲ್ಲಿ ಉಪಗ್ರಹದಿಂದ ಸಮೀಕ್ಷೆ ಮಾಡಿ, ಕಾಲುವೆಗೆ ಸೇರಿದ ಆಸ್ತಿಯನ್ನು ಸಂರಕ್ಷಿಸಿದ್ದು ವಿಶೇಷ.
  • ಇದು 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ. ಇದರಲ್ಲಿ 32 ಟಿಎಂಸಿ ಹೂಳು ತುಂಬಿಕೊಂಡಿದೆ.

ಆಲಮಟ್ಟಿ ಜಲಾಶಯ[ಬದಲಾಯಿಸಿ]

  • ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಾಗರ ಅಥವಾ ಆಲಮಟ್ಟಿ ಅಣೆಕಟ್ಟೆ 2020 ಆಗಸ್ಟ್ ೧೫ ಕ್ಕೆ ಭರ್ತಿಯಾಯಿತು.. ಇದುವರೆಗೆ 2015ನೇ ಇಸವಿ ಹೊರತು ಪಡಿಸಿ ಪ್ರತಿ ವರ್ಷ ಜಲಾಶಯ ತುಂಬಿ ಹರಿದಿದೆ. 123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6.22 ಲಕ್ಷ ಹೆಕ್ಟೆರ್‌ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. 519.60 ಮೀಟರ್‌ ವರೆಗೆ ನೀರು ಸಂಗ್ರಹ ಮಾಡಲಾಗುತ್ತಿದೆ.ಆಳ–ಅಗಲ | ಜಲಸಮೃದ್ಧಿ; ಪ್ರಜಾವಾಣಿ ;d: 18 ಆಗಸ್ಟ್ 2020

ಇವನ್ನೂ ನೋಡಿ[ಬದಲಾಯಿಸಿ]

ಹೆಚ್ಚಿನ ಮಾಹಿತಿಗೆ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. *೧.ಆಧಾರ:ಪ್ರಜಾವಾಣಿ--೧೪-೧೨-೨೦೧೪