ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕನ್ನಡದ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಆಗಿದೆ. ಕನ್ನಡ ಸಾಹಿತ್ಯದ ಕವನ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ, ಪ್ರವಾಸ ಬರವಣಿಗೆ, ಅನುವಾದ, ಮಕ್ಕಳ ಬರವಣಿಗೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಪುಸ್ತಕಗಳಿಗೆ 1965ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಉನ್ನತ ಸಾಹಿತ್ಯ ಪ್ರಶಸ್ತಿ
ಪ್ರವರ್ತಕಕರ್ನಾಟಕ ಸಾಹಿತ್ಯ ಅಕಾಡೆಮಿ
ಸಂಭಾವನೆ₹50,000 (ಗೌರವ ಪ್ರಶಸ್ತಿ)
₹25,000 (ಸಾಹಿತ್ಯಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ದತ್ತಿನಿಧಿ ಪ್ರಶಸ್ತಿ)
ಅಧಿಕೃತ ಜಾಲತಾಣಕರ್ನಾಟಕ ಸಾಹಿತ್ಯ ಅಕಾಡೆಮಿ

ಪ್ರಶಸ್ತಿಯ ವಿವರ[ಬದಲಾಯಿಸಿ]

1965ನೇ ಸಾಲಿನಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಮೂರು ಪ್ರಕಾರಗಳಲ್ಲಿ ನೀಡಲಾಗುತ್ತದೆ. ಪ್ರಶಸ್ತಿಗಳ ಪ್ರಕಾರಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

ಪುಸ್ತಕ ಬಹುಮಾನ[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಂದು ಸಾಮಾನ್ಯವಾಗಿ ಕರೆಯಲಾಗುವ ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಸಾಹಿತ್ಯ ಕ್ಷೇತ್ರದ 21 ವಿಭಿನ್ನ ವಿಭಾಗಗಳಿಂದ ಆಯ್ಕೆ ಮಾಡಿದ ಒಂದು ಅಥವಾ ಎರಡು ಪುಸ್ತಕಗಳಿಗೆ ಕೊಡಲಾಗುತ್ತದೆ. ಪ್ರಶಸ್ತಿ ನೀಡಲಾಗುವ 21 ವಿಭಾಗಗಳು ಈ ಕೆಳಗಿನಂತಿವೆ:

ವಿಭಾಗಗಳು
ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿದಂತೆ)
ನವಕವಿಗಳ ಪ್ರಥಮ ಪ್ರಕಟಿತ ಕವನ ಸಂಕಲನ
ನವಕವಿಗಳ ಪ್ರಥಮ ಅಪ್ರಕಟಿತ ಕವನ ಸಂಕಲನ / ಹಸ್ತಪ್ರತಿ
ಕಾದಂಬರಿ
ಸಣ್ಣಕತೆ
ನಾಟಕ
ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿದಂತೆ)
ಪ್ರವಾಸ ಸಾಹಿತ್ಯ
ಜೀವನ ಚರಿತ್ರೆ / ಆತ್ಮಕಥೆ
ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿದಂತೆ)
ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ)
ಮಕ್ಕಳ ಸಾಹಿತ್ಯ
ವಿಜ್ಞಾನ ಸಾಹಿತ್ಯ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಇಂಜಿನಿಯರಿಂಗ್, ವೈದ್ಯಶಾಸ್ತ್ರ, ಭೂಶಾಸ್ತ್ರ, ಖಗೋಳಶಾಸ್ತ್ರ, ಗೃಹವಿಜ್ಞಾನ, ಪರಿಸರ)
ಮಾನವಿಕ (ಜನಪದ, ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಾಲಯ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ)
ಸಂಶೋಧನೆ (ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಸಂಬಂಧಿಸಿದ ಸಂಶೋಧನೆ)
ವೈಚಾರಿಕ / ಅಂಕಣ ಬರಹ
ಅನುವಾದ-1 (ಅನ್ಯ ಭಾರತೀಯ ಭಾಷೆಯಿಂದ ಕನ್ನಡಕ್ಕೆ)
ಅನುವಾದ-2 (ಕನ್ನಡದಿಂದ ಅನ್ಯಭಾಷೆಗೆ)
ಲೇಖಕರ ಮೊದಲ ಸ್ವತಂತ್ರ ಕೃತಿ
ಅನುವಾದ-3 (ಕನ್ನಡದಿಂದ ಇಂಗ್ಲಿಷ್‌ಗೆ)
ದಾಸ ಸಾಹಿತ್ಯದ ಸೃಜನಶೀಲ / ಸೃಜನೇತರ ಕೃತಿ

ದತ್ತಿನಿಧಿ ಬಹುಮಾನ[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಇರುವ ಪ್ರಮುಖ ದತ್ತಿನಿಧಿ ಬಹುಮಾನಗಳು ಈ ಕೆಳಗಿನಂತಿವೆ.

ಚದುರಂಗ ದತ್ತಿನಿಧಿ[ಬದಲಾಯಿಸಿ]

ಚಿ. ಶ್ರೀನಿವಾಸರಾಜು ದತ್ತಿನಿಧಿ[ಬದಲಾಯಿಸಿ]

ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ[ಬದಲಾಯಿಸಿ]

1. ಸಿಂಪಿ ಲಿಂಗಣ್ಣ ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಮಕ್ಕಳಾದ ಪ್ರೊ. ವೀರೇಂದ್ರ ಸಿಂಪಿ ಮತ್ತು ಸಹೋದರರು ಸಿಂಪಿ ಲಿಂಗಣ್ಣ ಅವರ ಹೆಸರಿನಲ್ಲಿ ಅಕಾಡೆಮಿಯಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಲು ಒಟ್ಟು ₹60,000 (ಅರವತ್ತು ಸಾವಿರ ಮಾತ್ರ) ಮೊಬಲಗನ್ನು ನೀಡಿರುತ್ತಾರೆ. ಇದರಲ್ಲಿ ₹5,000ದಷ್ಟನ್ನು ಬಹುಮಾನಕ್ಕೆ ಬಳಸಿಕೊಂಡು ಉಳಿದ ₹55,000ದಷ್ಟನ್ನು ಬ್ಯಾಂಕಿನಲ್ಲಿ ನಿಗದಿತ ಠೇವಣಿಯಾಗಿ ಇಡಲಾಗಿದೆ.

2. ಇದರಿಂದ ಬರುವ ಬಡ್ಡಿಯಲ್ಲಿ ₹5,000ದಷ್ಟು ಮೊಬಲಗನ್ನು ಪುಸ್ತಕ ಬಹುಮಾನ ಯೋಜನೆಯ ನಿಯಮಗಳ ಅನುಸಾರ ಪ್ರತಿವರ್ಷ ಜೀವನ ಚರಿತ್ರೆ/ಅತ್ಮಕಥನ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, ಪುಸ್ತಕ ಬಹುಮಾನ ಯೋಜನೆಯಲ್ಲಿನ 7ನೇ ಸಾಹಿತ್ಯ ಪ್ರಕಾರವಾದ ಜೀವನ ಚರಿತ್ರೆ/ಆತ್ಮಕಥನವೇ ಆಗಿರುತ್ತದೆ.

3. ಈ ಬಹುಮಾನವನ್ನು ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ಎಂದು ಕರೆಯಲಾಗುವುದು.

ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ[ಬದಲಾಯಿಸಿ]

1. ಡಾ. ಸುಮತೀಂದ್ರ ನಾಡಿಗ ಮತ್ತು ಶ್ರೀಮತಿ ಮಾಲತಿ ನಾಡಿಗ ಅವರು ದಿ. ಪಿ. ಶ್ರೀನಿವಾಸರಾವ್ ಅವರ ಹೆಸರಿನಲ್ಲಿ ಅಕಾಡೆಮಿಗೆ ₹50,000 (ಐವತ್ತು ಸಾವಿರಗಳು ಮಾತ್ರ) ಮೊಬಲಗನ್ನು ದತ್ತಿನಿಧಿಯಾಗಿ ನೀಡಿದ್ದಾರೆ.

2. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ₹5,000 ಮೊಬಲಗನ್ನು ಪುಸ್ತಕ ಬಹುಮಾನ ಯೋಜನೆಯ ನಿಯಮಗಳ ಅನುಸಾರ ಪ್ರತಿವರ್ಷ ಸಾಹಿತ್ಯ ವಿಮರ್ಶೆ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ ಪುಸ್ತಕ ಬಹುಮಾನ ಯೋಜನೆಯಲ್ಲಿಯ 8ನೇ ಸಾಹಿತ್ಯ ಪ್ರಕಾರವಾದ ಸಾಹಿತ್ಯ ವಿಮರ್ಶೆಯೇ ಆಗಿರುತ್ತದೆ.

3. ಈ ಬಹುಮಾನವನ್ನು ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ ಎಂದು ಕರೆಯಲಾಗುವುದು.

ಮಧುರಚೆನ್ನ ದತ್ತಿನಿಧಿ ಬಹುಮಾನ[ಬದಲಾಯಿಸಿ]

1. ಡಾ. ಉಮಾ ಬಿದರಿ ಹಾಗೂ ಮಧುರಚೆನ್ನರ ಶಿಷ್ಯರು ಒಟ್ಟಾಗಿ ಮಧುರಚೆನ್ನರ ಜನ್ಮಶತಮಾನೋತ್ಸವದ ಸಂದರ್ಭದ ನೆನಪಿಗಾಗಿ ಅವರ ಹೆಸರಿನಲ್ಲಿ ಅಕಾಡೆಮಿಗೆ ₹50,000 (ಐವತ್ತು ಸಾವಿರಗಳು) ಮೌಲ್ಯದ ದತ್ತಿನಿಧಿಯನ್ನು ನೀಡಿದ್ದಾರೆ.

2. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ₹5,000ದಷ್ಟು ಮೊಬಲಗನ್ನು ಪುಸ್ತಕ ಬಹುಮಾನ ಯೋಜನೆಯ ನಿಯಮಗಳ ಅನುಸಾರ ಪ್ರತಿವರ್ಷ ಲೇಖಕರ ಮೊದಲ ಕೃತಿ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, ಪುಸ್ತಕ ಬಹುಮಾನ ಯೋಜನೆಯಲ್ಲಿನ 17ನೇ ಸಾಹಿತ್ಯ ಪ್ರಕಾರವಾದ ಲೇಖಕರ ಮೊದಲನೆ ಕೃತಿಯೇ ಆಗಿರುತ್ತದೆ.

3. ಈ ಬಹುಮಾನವನ್ನು ಮಧುರಚೆನ್ನ ದತ್ತಿನಿಧಿ ಬಹುಮಾನ ಎಂದು ಕರೆಯಲಾಗುವುದು.

ಅಮೆರಿಕಾ ಕನ್ನಡಿಗರ ದತ್ತಿನಿಧಿ[ಬದಲಾಯಿಸಿ]

1. ಅಮೆರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ ವಿಶೇಷ ಬಹುಮಾನ ಯೋಜನೆ:

ಅ) ಈ ಬಹುಮಾನದ ಹೆಸರು ಅಮೆರಿಕಾ ಕನ್ನಡಿಗರ ಮತ್ತು ಕನ್ನಡ ಸಂಘಗಳ ವಿಶೇಷ ಬಹುಮಾನ ಎಂದು ಇರತಕ್ಕದ್ದು.

ಆ) ಆ ವಿಶೇಷ ಬಹುಮಾನದ ಮೊತ್ತ ₹5,000.

ಇ) ಈ ಬಹುಮಾನವನ್ನು ಪ್ರತಿ ವರ್ಷವೂ ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದಿತವಾದ ವರ್ಷದ ಶ್ರೇಷ್ಠ ಸೃಜನಾತ್ಮಕ ಕೃತಿಯೊಂದಕ್ಕೆ ನೀಡಲಾಗುತ್ತದೆ.

ಈ) ಈ ವಿಶೇಷ ಬಹುಮಾನಕ್ಕೆ ಪರಿಗಣಿತವಾಗುವ ಕೃತಿ ಒಂದು ನೂರು ಪುಟಗಳಿಗಿಂತ ಕಡಿಮೆಯ ಗಾತ್ರದ್ದಾಗಿರಬಾರದು. ಆದರೆ ಈ ನಿಯಮ ಕಾವ್ಯ, ನಾಟಕಗಳಿಗೆ ಅನ್ವಯಿಸುವುದಿಲ್ಲ.

ಉ) ಈಗಾಗಲೇ ಪುಸ್ತಕ ಬಹುಮಾನಗಳಿಗೆ ಸಂಬಂಧಿಸಿದಂತೆ ಅಕಾಡೆಮಿ ರೂಪಿಸಿರುವ ನಿಯಮಾವಳಿಗಳೇ ಇದರ ಪರಿಶೀಲನೆ ಹಾಗೂ ತೀರ್ಮಾನದ ವಿಧಾನಕ್ಕೆ ಅನ್ವಯಿಸುತ್ತವೆ.

ಸೂಚನೆ: ಈ ಸಂಬಂಧವಾಗಿ ಅಮೆರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ ಕೊಡುಗೆಯಾಗಿ ಬಂದ ಅರವತ್ತು ಸಾವಿರ ರೂಪಾಯಿಗಳ ಮೊತ್ತದ ನಿಶ್ಚಿತ ನಿಧಿಯಿಂದ ಬರುವ ಬಡ್ಡಿಯಿಂದ ಈ ಬಹುಮಾನದ ಯೋಜನೆ ಪ್ರಾರಂಭವಾಗಿದೆ.

ಗೌರವ ಪ್ರಶಸ್ತಿಗಳು[ಬದಲಾಯಿಸಿ]

ಸಾಹಿತ್ಯಶ್ರೀ ಪ್ರಶಸ್ತಿ[ಬದಲಾಯಿಸಿ]

ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ನೇ ವರ್ಷದಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ₹25,000 ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಗುತ್ತದೆ.

ಗೌರವ ಪ್ರಶಸ್ತಿ[ಬದಲಾಯಿಸಿ]

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷವೂ ಗೌರವ ಪ್ರಶಸ್ತಿಯನ್ನು ₹50,0000 ನಗದು, ಫಲಕ, ಶಾಲು ಹಾರ ಹಾಗೂ ಪ್ರಮಾಣ ಪತ್ರದೊಂದಿಗೆ ನೀಡುತ್ತದೆ. ಕೆಲವೊಮ್ಮೆ ಗಮಕ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಿದ ಗಮಕಿಗಳಿಗೂ ಈ ಗೌರವ ನೀಡಲಾಗಿದೆ.