ಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೨೧-೨೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಧಾನಸೌಧ ಬೆಂಗಳೂರು
ಕರ್ನಾಟಕದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪನವರು ದಿ. 8-3-2021 ಸೋಮವಾರ ಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೨೧-೨೨ (2021-2022 )ನ್ನು ವಿಧಾನ ಸಭೆಯಲ್ಲಿ ಮಂಡಿಸಿದರು. ಕೋವಿಡ್‌ ನಿಂದ ಆರ್ಥಿಕ ಚಟುವಟಿಕೆ ಮತ್ತು ಆದಾಯ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮಗಳಾಗಿದ್ದರೂ, ಬಜೆಟ್‌ ಗಾತ್ರವನ್ನು ಕುಗ್ಗಿಸಿಲ್ಲ. ತೆರಿಗೆ ಹಾಕಿ ಜನರ ಮೇಲೆ ಮತ್ತಷ್ಟು ಹೊರೆ ಹಾಕುದೆ ಮುಖ್ಯಮಂತ್ರಿಯವರು, ಸಂಪನ್ಮೂಲದ ಕೊರತೆ ತುಂಬಲು ವರ್ಷವೊಂದರಲ್ಲಿ ದಾಖಲೆಯ ರೂ. 71,332 ಕೋಟಿ ಸಾಲ ಪಡೆಯುವುದಾಗಿ ಹೇಳಿದ್ದಾರೆ.
  • ಇದರಿಂದಾಗಿ 2022ರ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ರೂ. 4.57 ಲಕ್ಷ ಕೋಟಿಯನ್ನೂ ಮೀರಲಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 26.9ರಷ್ಟಾಗುತ್ತದೆ. ಇದಕ್ಕಾಗಿ ಕಾಯ್ದೆ ತಿದ್ದುಪಡಿ ಪ್ರಸ್ತಾವವನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಸಂಕ್ಷಿಪ್ತ ನೋಟ[ಬದಲಾಯಿಸಿ]

ಆಯವ್ಯಯ ಪಕ್ಷಿನೋಟ –ಕೋಟಿ ರೂಗಳಲ್ಲಿ
ಆದಾಯ ರಾಜಸ್ವ
ಆಯ ಕೋಟಿ ರೂ.ಗಳಲ್ಲಿ
ತೆರಿಗೆ ಇಲಾಖೆಗಳಿಂದ 76,473
1.ಅಬಕಾರಿ ಇಲಾಖೆ ಯಿಂದ 24,580
2.ನೊಂದಣಿ ಮತ್ತು ಮುದ್ರಾಂಕದಿಂದ 12,655
3. ಸಾರಿಗೆ ಇಲಾಖೆಯಿಂದ 7.515.
ಆದಾಯ ವೆಚ್ಚ ವಿವರ ಕೋಟಿ ರೂ.ಗಳಲ್ಲಿ
ಒಟ್ಟು ವೆಚ್ಚ 246,207
ಒಟ್ಟು ಸ್ವೀಕೃತಿ (ಆದಾಯ 243,734
ರಾಜಸ್ವ ವೆಚ್ಚ 187405
ಬಂಡವಾಳ ವೆಚ್ಚ -- 44,237
ಸಾಲ ಮರುಪಾವತಿ -
[೧]

(ವಿವರವಾದ ಇಲಾಖಾವಾರು ಆದಾಯ ವೆಚ್ಚದ ಪಟ್ಟಿ ಲಭ್ಯವಿಲ್ಲ.)

ಮುಖ್ಯ ಅನುದಾನಗಳು[ಬದಲಾಯಿಸಿ]

  • ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ರೂ. 500 ಕೋಟಿ
  • ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯ ಎಲ್ಲ ನಿಗಮಗಳಿಗೆ ಒಟ್ಟು ರೂ. 500 ಕೋಟಿ
  • ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರೂ. 50 ಕೋಟಿ
  • ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಕಡಿತ
  • ಆದಿಚುಂಚನಗಿರಿ ಮಠದಲ್ಲಿ ನಾಥ ಪಾರಂಪರಿಕ ಕೇಂದ್ರ ಸ್ಥಾಪನೆಗೆ ರೂ. 10 ಕೋಟಿ
  • ಅಯೋಧ್ಯೆಯ ಯಾತ್ರಿನಿವಾಸಕ್ಕೆ ರೂ. 10 ಕೋಟಿ
  • ಡಾ. ಎಸ್‌.ಎಲ್‌. ಭೈರಪ್ಪ ಅವರ ‘ಪರ್ವ’ ರಂಗ ಪ್ರಯೋಗಕ್ಕೆ ರೂ. 1 ಕೋಟಿ
  • ಜೈನ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ರೂ. 50 ಕೋಟಿ
  • ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಸ್ಮೃತಿ ವನಕ್ಕೆ ರೂ.2 ಕೋಟಿ
  • ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಸ್ಮೃತಿ ವನಕ್ಕೆ ರೂ. 2 ಕೋಟಿ

ಒಕ್ಕೂಟ ತೆರಿಗೆ ಮೊತ್ತದಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳು[ಬದಲಾಯಿಸಿ]

  • ಇದರಲ್ಲಿ ಹಂಚಬಹುದಾದ ಮೊತ್ತ ರೂ.103 ಲಕ್ಷ ಕೋಟಿ (ಪ್ರ.ವಾ., ಮಾರ್ಚ್‌ 7). ಏಕೆಂದರೆ ಒಕ್ಕೂಟ ತೆರಿಗೆ ಮೊತ್ತದಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳ ಬಾಬ್ತು ಹಂಚಬಹುದಾದ ರಾಶಿಯಲ್ಲಿ ಸೇರುವುದಿಲ್ಲ. ಅಂದರೆ ಒಕ್ಕೂಟದ ತೆರಿಗೆ ರಾಶಿಯಾದ ರೂ. 135.2 ಲಕ್ಷ ಕೋಟಿಯಲ್ಲಿ ರಾಜ್ಯಗಳಿಗೆ ರೂ. 55.43 ಲಕ್ಷ ಕೋಟಿ ದೊರೆಯಬೇಕಾಗಿತ್ತು (ಶೇ 41). ಆದರೆ ಈಗ ದೊರೆಯುತ್ತಿರುವುದು ಕೇವಲ ರೂ. 42.2 ಲಕ್ಷ ಕೋಟಿ. ಒಕ್ಕೂಟದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳ ಪ್ರಮಾಣ 2011-12ರಲ್ಲಿ ಶೇ 10.4ರಷ್ಟಿದ್ದುದು 2020-21ರಲ್ಲಿ ಶೇ 20ಕ್ಕೇರಿದೆ.
  • ಒಕ್ಕೂಟ ಸರ್ಕಾರದ ಹಂಚಬಹುದಾದ ತೆರಿಗೆ ರಾಶಿಯಲ್ಲಿ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ 4.71ರಷ್ಟನ್ನು ಶಿಫಾರಸು ಮಾಡಿದ್ದರೆ 15ನೇ ಹಣಕಾಸು ಆಯೋಗವು ಶೇ 3.64ರಷ್ಟನ್ನು ಶಿಫಾರಸು ಮಾಡಿದೆ. ಅಂದರೆ ಮುಂದಿನ ಐದು ವರ್ಷಗಳಲ್ಲಿ (2021-22ರಿಂದ 2025-26) ಒಕ್ಕೂಟ ತೆರಿಗೆ ರಾಶಿಯಲ್ಲಿ (ರೂ. 103 ಲಕ್ಷ ಕೋಟಿ) ಕರ್ನಾಟಕದ ಪಾಲು ವಾರ್ಷಿಕ ರೂ. 75,000 ಕೋಟಿ. ಒಂದು ಅಧ್ಯಯನದ ಪ್ರಕಾರ, 2017ರಲ್ಲಿ ಕರ್ನಾಟಕವು ಒಕ್ಕೂಟಕ್ಕೆ (ಕೇಂದ್ರಕ್ಕೆ) ನೀಡಿದ ಪ್ರತೀ ರೂ. 100 ಮೊತ್ತದ ತೆರಿಗೆಗೆ ಪ್ರತಿಯಾಗಿ ತೆರಿಗೆಯ ವರ್ಗಾವಣೆ ಮೂಲಕ ರಾಜ್ಯ ಪಡೆದ ಮೊತ್ತ ಕೇವಲ ರೂ. 36. ಮೇಲಾಗಿ ತೈಲದ ಮೇಲೆ ಒಕ್ಕೂಟ ವಿಧಿಸುವ ತೆರಿಗೆ ಸಹ ಹಂಚಬಹುದಾದ ತೆರಿಗೆ ರಾಶಿಯಲ್ಲಿ ಸೇರುವುದಿಲ್ಲ. ಏಕೆಂದರೆ ಇದು ಜಿಎಸ್‍ಟಿ ಭಾಗವಲ್ಲ. ಈ [ಅಸಮತೋಲನವನ್ನು ಶೀಘ್ರ ಸರಿಪಡಿಸದಿದ್ದರೆ ಒಕ್ಕೂಟ ಮತ್ತು ರಾಜ್ಯಗಳ ನಡುವಣ ಸಂಬಂಧ ವಿವಾದಾತ್ಮಕವಾಗುವಸಾಧ್ಯತೆ ಇದೆ).[೨]

ಒಕ್ಕೂಟ ತತ್ವಕ್ಕೆ ಅಪಾಯ[ಬದಲಾಯಿಸಿ]

  • ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ನಡುವಣ ಅತ್ಯಂತ ಸೂಕ್ಷ್ಮವಾದ ಹಣಕಾಸು ಸಂಬಂಧದಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ಮತ್ತು ಭಾರತ ಸರ್ಕಾರವು ಸಂವಿಧಾನದತ್ತ ಒಕ್ಕೂಟ ತತ್ವವನ್ನು ನಿರ್ಲಕ್ಷಿಸುತ್ತಿರುವುದರಿಂದ ಅಸಮತೋಲನ ಉಂಟಾಗಿದೆ. ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಅವರ ಪ್ರಕಾರ, 2021-22ರಿಂದ 2025-26ರ ಒಕ್ಕೂಟ ಸರ್ಕಾರದ ತೆರಿಗೆ ರಾಶಿ ಅಂದಾಜು ರೂ. 135.2 ಲಕ್ಷ ಕೋಟಿ.( 15th Finance Commission Central Government And State Governments)[೩]

ಬಜೆಟ್‍ನ ಮುಖ್ಯಾಂಶಗಳು[ಬದಲಾಯಿಸಿ]

ಬಜೆಟ್ ಮುಖ್ಯಾಂಶಗಳು:-
2021-2022 ಕರ್ನಾಟಕ ರಾಜ್ಯ ಬಜೆಟ್- ಮುಖ್ಯಾಂಶಗಳು
* ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ * ಬೆಂಗಳೂರು ಮಿಷನ್ 2022 - ಬೆಂಗಳೂರಿಗೆ ನವಚೈತನ್ಯ ಕಾರ್ಯಕ್ರಮ
* ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಪ್ರದೇಶದಲ್ಲಿ ರಾಜ್ಯ ಸಂಸ್ಕೃತಿ ಬಿಂಬಿಸುವ ಕೇಂದ್ರ ಸ್ಥಾಪನೆ * ಎನ್ ಜಿಇಎಫ್ ನ 105 ಎಕರೆ ಜಮೀನಿನಲ್ಲಿ ವೃಕ್ಷೋದ್ಯಾನ
* ಬೆಂಗಳೂರು ನಗರ ಸುತ್ತಲೂ 65 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ * 15 ಸಾವಿರದ 767 ಕೋಟಿ ರೂ. ವೆಚ್ಚದ ಉಪನಗರ ರೈಲು ಯೋಜನೆಗೆ ಈ ವರ್ಷ 850 ಕೋಟಿ ರೂ.
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್ ವೇ ಕಾಮಗಾರಿಗೆ ಪ್ರಸಕ್ತ ವರ್ಷ 4,751 ಕೋಟಿ ರೂ. * ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ, ನಿರ್ವಹಣೆಗೆ 169 ಕೋಟಿ ರೂ.
* ಬೆಂಗಳೂರು ನಗರದಲ್ಲಿ 3 ವೃಕ್ಷೋದ್ಯಾನ. * ಕೆ.ಸಿ. ವ್ಯಾಲಿಯ ಎಸ್ ಟಿಪಿ ಪುನರುಜ್ಜೀವನ ಯೋಜನೆಗೆ 450 ಕೋಟಿ ರೂ.
* ಮೇಕೆದಾಟು ಜಲಾಶಯಕ್ಕೆ 9 ಸಾವಿರ ಕೋಟಿ ರೂ. ಅಂದಾಜು ಮೊತ್ತದ ಯೋಜನಾ ವರದಿ * ಈ ವರ್ಷದ ಜೂನ್ ನಿಂದ ಮುಂದಿನ ವರ್ಷದ ಅಂತ್ಯದ ವೇಳೆಗೆ 41 ಕಿ.ಮೀ. ಉದ್ದದ ಮೆಟ್ರೋ ರೈಲು ಸೇವೆ ಹಂತ ಹಂತವಾಗಿ ಕಾರ್ಯಗತ.
* ಬಿಎಂಟಿಸಿಯಲ್ಲಿ ಸ್ವಯಂ ಚಾಲಿತ ಪ್ರಯಾಣ ದರ ಸಂಗ್ರಹ ವ್ಯವಸ್ಥೆ ಅನುಷ್ಠಾನ * ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆ ನಿರ್ವಹಣೆಗೆ ಪ್ರತ್ಯೇಕ ಸಂಸ್ಥೆ ಸ್ಥಾಪನೆ
* ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರ ಸ್ಥಾಪನೆ * ಬಿಬಿಎಂಪಿ ವ್ಯಾಪ್ತಿಯ 57 ವಾರ್ಡ್ ಗಳಲ್ಲಿ ಜನಾರೋಗ್ಯ ಕೇಂದ್ರಗಳ ಸ್ಥಾಪನೆ.
* ಬಿಬಿಎಂಪಿ ಶಾಲೆಗಳ ನವೀಕರಣ ಮತ್ತು ಪನರ್ ನಿರ್ಮಾಣಕ್ಕೆ 33 ಕೋಟಿ ರೂ. * ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಪ್ರತಿ ವಾರಾಂತ್ಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಸಂತೆ, ಶಿಲ್ಪಕಲಾಕೃತಿ ಪ್ರದರ್ಶನ , ಜಾನಪದ ಕಾರ್ಯಕ್ರಮಗಳ ಆಯೋಜನೆ
* ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 2021-22ರಲ್ಲಿ ಒಟ್ಟಾರೆ 7,795 ಕೋಟಿ ರೂ. ಅನುದಾನ * ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸೌಲಭ್ಯಗಳ ಅಭಿವೃದ್ಧಿಗೆ 2 ಕೋಟಿ ರೂ.
* ಜಗಜ್ಯೋತಿ ಬಸವೇಶ್ವರರ ಜನ್ಮಸ್ಥಳ ಇಂಗಳೇಶ್ವರ ಅಭಿವೃದ್ಧಿಗೆ 5 ಕೋಟಿ ರೂ. * ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರೂ. ಅನುದಾನ
* ಆದಿಚುಂಚನಗಿರಿ ಕ್ಷೇತ್ರದಲ್ಲಿ ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರ ಸ್ಥಾಪನೆಗೆ 10 ಕೋಟಿ ರೂ. * ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ಸ್ಥಾಪನೆಗೆ 10 ಕೋಟಿ ರೂ.
* ತುಮಕೂರಿನಲ್ಲಿ ಶ್ರೀ ಶಿವಕುಮಾರಸ್ವಾಮೀಜಿಗಳ ಮತ್ತು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ಮಾಮೀಜಿ ಅವರ ಗೌರವಾರ್ಥ ತಲಾ 2 ಕೋಟಿ ರೂ. ವೆಚ್ಚದಲ್ಲಿ ಸ್ಮೃತಿವನ ನಿರ್ಮಾಣ * ಡಾ. ಎಸ್.ಎಲ್. ಭೈರಪ್ಪ ನವರ ಪರ್ವ ನಾಟಕ ರಂಗಾಯಣಗಳ ಮೂಲಕ ರಾಜ್ಯಾದ್ಯಂತ ಪ್ರದರ್ಶನ ; ಒಂದು ಕೋಟಿ ರೂ. ಅನುದಾನ
* ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ . * ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ.
* 10 ಕೋಟಿ ರೂ. ವೆಚ್ಚದಲ್ಲಿ ಮಂಡ್ಯದಲ್ಲಿ ಕ್ರೀಡಾಂಗಣ ಮೇಲ್ದರ್ಜೆಗೆ * 2022ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ
* ಪ್ರವಾಸೋದ್ಯಮ ಇಲಾಖೆ ವತಿಯಿಂದ 500 ಕೋಟಿ ರೂ. ಯೋಜನೆ ಕಾರ್ಯಾನುಷ್ಠಾನ * ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ
* ಉಡುಪಿ ಜಿಲ್ಲೆ ತ್ರಾಸಿ, ಮರವಂತೆ , ಒತ್ತಿನೆಣೆ ಹಾಗೂ ಇನ್ನಿತರ ಕಡಲತೀರಗಳ ಅಭಿವೃದ್ಧಿಗೆ 10 ಕೋಟಿ ರೂ. * ಬೈಂದೂರು ತಾಲೂಕಿನ ಸೋಮೇಶ್ವರ ಕಡಲತೀರ ಅಭಿವೃದ್ದಿಗೆ 10 ಕೋಟಿ ರೂ.
* ತದಡಿಯಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಉದ್ಯಾನವನ ಅಭಿವೃದ್ಧಿ * ಕಾಡು ಪ್ರಾಣಿಗಳಿಂದ ಉಂಟಾಗುವ ಹಾನಿಗೆ ತಕ್ಷಣ ಪರಿಹಾರ ಒದಗಿಸಲು ಅರಣ್ಯ ಇ-ಪರಿಹಾರ ಯೋಜನೆ ಜಾರಿ
* ನಗರಗಳಲ್ಲಿ ವೃಕ್ಷ ಸಂಪತ್ತು ಹೆಚ್ಚಿಸಲು ಸ್ಮೃತಿ ವನಗಳ ನಿರ್ಮಾಣ * ಚಾಮರಾಜನಗರ ಜಿಲ್ಲೆ ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಫಾರಿ
* ಚಾಮರಾಜನಗರ ಜಿಲ್ಲೆ ಬೂದಿಪಗಡದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಆನೆ ಶಿಬಿರ * ಮುಂದಿನ ಎರಡು ವರ್ಷದಲ್ಲಿ ಆಡಳಿತದಲ್ಲಿ ಗಮನಾರ್ಹ ಬದಲಾವಣೆ ತರಲು ಕ್ರಮ
* ನಿಖರ ಮತ್ತು ತ್ವರಿತವಾಗಿ ಭೂ ದಾಖಲೆಗಳನ್ನು ಒದಗಿಸಲು ಗಣೀಕೃತ ಆಕಾರಬಂದ್ ಮಾಹಿತಿ ಮತ್ತು ಪಹಣಿ ಮಾಹಿತಿ ಸಂಯೋಜನೆ * 25 ಕೋಟಿ ರೂ. ವೆಚ್ಚದಲ್ಲಿ ಹಕ್ಕುದಾಖಲೆಗಳನ್ನು ವಿತರಿಸುವ ಸ್ವಾಮಿತ್ವ ಯೋಜನೆ ಜಾರಿ
* ನಗರ ಮತ್ತು ಪಟ್ಟಣಗಳ ನಗರಮಾಪನ ದಾಖಲೆಗಳ ಸ್ಕ್ಯಾನಿಂಗ್, ಸಂರಕ್ಷಣೆ * ಎಲ್ಲ ಇಲಾಖೆಗಳು ತಮ್ಮ ವ್ಯವಸ್ಥೆಯಲ್ಲಿನ ಕೌಟುಂಬಿಕ ಗುರುತು ದಾಖಲಿಸಿಕೊಳ್ಳುವ ಯೋಜನೆಗೆ 15 ಕೋಟಿ ರೂ.
* ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಆಸ್ತಿ ನೋಂದಣಿ ಮಾಡುವ ಯೋಜನೆಗೆ ಒಂದು ಕೋಟಿ ರೂ. * ದತ್ತಾಂಶ ಕೇಂದ್ರದ ಸೈಬರ್ ಸುರಕ್ಷತೆ ಬಲಪಡಿಸಲು 2 ಕೋಟಿ ರೂ.
* 2 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್ ಅಭಿವೃದ್ಧಿ * ಸ್ವಂತ ಕಟ್ಟಡಗಳಿಲ್ಲದ 100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಈ ವರ್ಷ 25 ಕೋಟಿ ರೂ.
* ಶಿಗ್ಗಾಂವ್ ನ ಕೆಎಸ್ಆರ್ ಪಿ 10ನೇ ಬೆಟಾಲಿಯನ್ ಗೆ 8 ಕೋಟಿ ರೂ. * ಕೊಡಗು ಮತ್ತು ಹಾವೇರಿಯಲ್ಲಿ ನೂತನ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ 8 ಕೋಟಿ ರೂ.
* 8 ಕಾರಾಗೃಹಗಳ ಸಾಮರ್ಥ್ಯ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. * ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ
* ಪ್ರಸಕ್ತ ವರ್ಷ 52 ಬಸ್ ನಿಲ್ದಾಣಗಳು , 16 ಬಸ್ ಡಿಪೋಗಳ ನಿರ್ಮಾಣ * ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 2021-22ನೇ ಸಾಲಿನಲ್ಲಿ ಒಟ್ಟಾರೆ 52 ಸಾವಿರದ 519 ಕೋಟಿ ರೂ ಅನುದಾನ[೪]

ಪ್ರತಿಕ್ರಿಯೆಗಳು[ಬದಲಾಯಿಸಿ]

  • ಬೊಮ್ಮಾಯಿ: ಕೋವಿಡ್ 19 ರ ಸಂಕಷ್ಟ ಸಂದರ್ಭದಲ್ಲಿಯೂ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಯಾವುದೇ ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸದೇ ಪ್ರಗತಿಗೆ ಇಂಬು ಕೊಡುವ ಸಮತೋಲಿತ ಬಜೆಟ್ ಅನ್ನು ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಡಿ ವಿ ಸದಾನಂದ ಗೌಡ:ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಮಧ್ಯೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಶಯದೊಂದಿಗೆ ಸಮತೋಲಿತ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.[೫]
  • ಪ್ರತಿಪಕ್ಷನಾಯಕ ಸಿದ್ದರಾಮಯ್ಯ:, ಬಜೆಟ್‌ ಮಂಡನೆಯಾಗುತ್ತಿದ್ದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರು ಸಭಾತ್ಯಾಗ ಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ ‘ಆಪರೇಷನ್ ಬರ್ಬಾದ್‘ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೇ ಸಾಕ್ಷಿ‘ ಎಂದು ಟೀಕಿಸಿದರು. ‘ಆಯವ್ಯಯವನ್ನು ಇಲಾಖಾವಾರು ನೀಡದೆ ಆರು ವಲಯಗಳಾಗಿ ವಿಂಗಡಿಸಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದು ಸ್ಪಷ್ಟವಿಲ್ಲ. ಹೀಗೆ ರಾಜ್ಯದ ಬಜೆಟ್ಟಿಗೆ ಇದ್ದ ಮಹತ್ವ ಮತ್ತು ಪಾವಿತ್ರ್ಯವನ್ನು ಯಡಿಯೂರಪ್ಪ ಹಾಳು ಮಾಡಿದ್ದಾರೆ. ಬಜೆಟ್ಟಿನಲ್ಲಿ ಇಲಾಖೆಗಳ ಕಾರ್ಯಕ್ರಮಗಳೇನು? ಕಳೆದ ವರ್ಷದ ಸಾಧನೆಗಳೇನು. ಹೊಸ ಯೋಜನೆಗಳೇನು ಎಂಬ ವಿವರಗಳೇ ಇಲ್ಲ. 33 ಇಲಾಖೆಗಳನ್ನು ಆರು ವಲಯಗಳಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಆರೂ ವಲಯಗಳಿಗೆ ಕಳೆದ ಬಜೆಟ್‍ನಲ್ಲಿ ನಿಗದಿಪಡಿಸಲಾಗಿದ್ದ ಅನುದಾನಕ್ಕಿಂತ ಕಡಿಮೆ ಹಣ ನಿಗದಿಪಡಿಸಲಾಗಿದೆ’ ಎಂದರು. ಈ ಬಜೆಟ್ ಟೋಟಲಿ ಕಾನ್ಸಪರೆನ್ಸಿ (ಒಟ್ಟಾರೆ ಪಿತೂರಿಯ ಬಜೆಟ್) ಆಗಿದೆ. ಮೀಸಲಿಟ್ಟ ಹಣವನ್ನು ಯಾವುದಕ್ಕೆ ಹೇಗೆ ಖರ್ಚು ಮಾಡುತ್ತೇವೆ ಎಂದು ವಿಧಾನಸಭೆಯ ಮುಂದೆ ಇಡಬೇಕು. (ಹಾಗೆ ಮಾಡಿಲ್ಲ.)ಬೆಂಗಳೂರು ಸಮಗ್ರ ಅಭಿವೃದ್ಧಿಗೆ 21-22 ಕ್ಕೆ 1000 ಕೋಟಿ ಕಡಿಮೆ ಮಾಡಿದ್ದಾರೆ-- ಇತ್ಯಾದಿ--;
  • ಕೇಂದ್ರ ಸರ್ಕಾರದ ಜೊತೆ ಸೇರಿರುವ ರಾಜ್ಯ ಸರ್ಕಾರ ಬಜೆಟ್‍ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಬೋವಿ, ವಿಶ್ವಕರ್ಮ, ಕಾಡುಗೊಲ್ಲರ, ಅಂಬಿಗರ ಚೌಡಯ್ಯ, ಸವಿತಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು ಕೇವಲ ರೂ. 500 ಕೋಟಿ ಅನುದಾನ ನೀಡುವ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಈ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ವಿರೋಧಿ ಎಂದರು.[೬]
  • ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ:ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ತೀರಿಸಲು ಆಗಿಲ್ಲ. ಈಗ ಹೊಸದಾಗಿ ರೂ.70 ಸಾವಿರ ಕೋಟಿ ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ. ಸಾಲ ಮಾಡಿ ತುಪ್ಪ ತಿನ್ನು ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ, ಈ ಸರ್ಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ. ರಾಜ್ಯಗಳ ಜಿಎಸ್‌ಟಿ ಪಾಲು ಹಂಚುವಾಗ ಗುಜರಾತ್, ಅಸ್ಸಾಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರ ಸರಕಾರ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರಕಾರವಾಗಲಿ, ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅದರ ಫಲವೇ ಈಗ ರಾಜ್ಯದ ಜನರ ತಲೆ ಮೇಲೆ ಬೀಳುತ್ತಿರುವ ಸಾಲದ ಹೊರೆ.[೭]
  • ಲಕ್ಷ್ಮೀನಾರಾಯಣ ನಾಗವಾರ, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ:ದಲಿತರಿಗೆ ಮಾರಕ; ಒಕ್ಕಲಿಗರು ಮತ್ತು ವೀರಶೈವ ಅಭಿವೃದ್ಧಿ ನಿಗಮಗಳಿಗೆ ತಲಾ ರೂ.500 ಕೋಟಿ ನೀಡಿರುವ ಸರ್ಕಾರ 16 ಸಮುದಾಯದಗಳನ್ನು ಒಳಗೊಂಡ ಹಿಂದುಳಿದ ನಿಗಮಗಳಿಗೆ ಕೇವಲ ರೂ.500 ಕೋಟಿ ಅನುದಾನ ಘೋಷಿಸಿರುವುದು ಯಾವ ನ್ಯಾಯ? ಇದು ದಲಿತ ಮತ್ತು ಹಿಂದುಳಿದವರಿಗೆ ಮಾರಕವಾದ ಬಜೆಟ್.[೮]

ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ[ಬದಲಾಯಿಸಿ]

  • ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನಿಗಮಗಳಿಗೆ ಹಂಚಿಕೆ ಮಾಡಿದ ಅನುದಾನದ ಬಗ್ಗೆ ಅಸಮಾಧಾನವಿದೆ. ಬಜೆಟ್‌ಗೆ ಇದೊಂದು ಕಪ್ಪುಚುಕ್ಕೆಯಾಗಿ ಕಾಣಿಸುತ್ತಿದೆ ಎಂದು ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
  • ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಮೇಲ್ವರ್ಗದ ನಿಗಮಗಳಿಗೆ ನೀಡಿದ ಅನುದಾನದ ಬಗ್ಗೆ ಆಕ್ಷೇಪವಿಲ್ಲ. ಆದರೆ, ತುಳಿತಕ್ಕೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಆದ್ಯತೆ ಸಿಗಬೇಕು. ಇದರಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಈ ಸಮಸ್ಯೆಯನ್ನು ಸರಿಪಡಿಸಿಕೊಂಡರೆ ಪಕ್ಷಕ್ಕೆ ಅನುಕೂಲಗುತ್ತದೆ’ ಎಂದು ಹೇಳಿದರು.[೯]

ಬಿಜೆಪಿಯ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್‌[ಬದಲಾಯಿಸಿ]

  • ವಿಧಾನ ಪರಿಷತ್‌ನಲ್ಲಿ ವಿತ್ತೀಯ ಕಲಾಪದ ವೇಳೆ ಅವರು ಮಾತನಾಡಿದರು;
  • ಈ ಬಜೆಟ್‌ನಲ್ಲಿ ಏನೂ ಇಲ್ಲ. ಕಳೆದ 10 ವರ್ಷಗಳ ಬಜೆಟ್ ನೋಡಿದ್ದೇನೆ. ಅದೇ ಅಂಕಿ ಅಂಶ ತಿರುಗು ಮುರುಗು ಮಾಡಿದ್ದಾರೆ.‘33 ಇಲಾಖೆಗಳಲ್ಲಿ ಅತಿ ಮುಖ್ಯವಾದ ಹಣಕಾಸು, ಡಿಪಿಎಆರ್‌, ಕಾನೂನು ಇಲಾಖೆ ಈ ಮೂರು ಅತಿ ಮುಖ್ಯವಾದುದು. ಈ ಪೈಕಿ, ಮೊದಲ ಎರಡು ಮುಖ್ಯಮಂತ್ರಿ ಬಳಿ ಇದೆ’
  • 1978ರಲ್ಲಿ ನಾನು ಸದನದೊಳಗೆ ಬಂದೆ. ವೀರಪ್ಪ ಮೊಯಿಲಿ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಆಗ ಬಜೆಟ್‌ಗೆ ಸಾಕಷ್ಟು ಮಹತ್ವವಿತ್ತು. ಬಜೆಟ್ ಮಂಡಿಸಿದ ಮೇಲೆ ಅದರ ಮೇಲೆ ವ್ಯಾಪಕ ಚರ್ಚೆ ನಡೆಯುತ್ತಿತ್ತು. ಹಿಂದಿನ ಬಜೆಟ್ ಗಾತ್ರ ಎಷ್ಟು, ಎಷ್ಟು ಖರ್ಚು ಆಗಿದೆ. ಇಲಾಖಾವಾರು ಚರ್ಚೆಯ ಬಳಿಕ ಸಂಬಂಧಪಟ್ಟ ಸಚಿವರು ಉತ್ತರ ಕೊಡುತ್ತಿದ್ದರು. ಆದರೆ ಈಗ ಏನಾಗಿದೆ’ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗೆ ಸಮಯವಿಲ್ಲ. ಮುಖ್ಯಮಂತ್ರಿಯೇ ಆ ಖಾತೆ ನಿಭಾಯಿಸಿದರೆ, ಅದು ಸತ್ತು ಹೋಗುತ್ತದೆ. ಹೀಗಾಗಿ ಬೇರೆಯವರಿಗೆ ಕೊಡಬೇಕು.
  • ‘ವಿಧಾನಸೌಧ ಇಂದು ಮಾಲ್ ಆಗಿದೆ. ಏನು ಬೇಕಾದರೂ ಮಾರಾಟ ಮಾಡಬಹುದು, ಖರೀದಿ ಮಾಡಬಹುದು. ವರ್ಗಾವಣೆ, ಟೆಂಡರ್ ಕೊಡಿಸುವ ದಲ್ಲಾಳಿಗಳೇ ಹೆಚ್ಚಾಗಿದ್ದಾರೆ’ ಎಂದೂ ವಿಶ್ವನಾಥ್‌ ಹೇಳಿದರು.
  • ‘ಇಂದು ಮೀಸಲಾತಿ ಹೋರಾಟ ಹೆಚ್ಚಾಗುತ್ತಿದೆ. ಕುರುಬ, ವಾಲ್ಮೀಕಿ, ಪಂಚಮಸಾಲಿ, ಎಲ್ಲರಿಗೂ ಮೀಸಲಾತಿ ಕೊಡಿ. ಆದರೆ ಕೆನೆಪದರ ಜಾರಿಗೆ ತನ್ನಿ. ವಿಶ್ವನಾಥನಿಗೂ ಮೀಸಲಾತಿ, ಮಗನಿಗೂ ಮೀಸಲಾತಿ. ಖರ್ಗೆ, ಗೋವಿಂದ ಕಾರಜೋಳ ಅವರಿಗೂ ಮೀಸಲಾತಿ, ಅವರ ಮಕ್ಕಳಿಗೂ ಮೀಸಲಾತಿ ಕೊಟ್ಟರೆ ಏನು ಪ್ರಯೋಜನ. ಕೆನೆಪದರು ತಂದು ಮೀಸಲಾತಿ ಕೊಡಿ. ಆಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ತಲುಪಲು ಸಾಧ್ಯ’ ಎಂದೂ ಅವರು ಅಭಿಪ್ರಾಯಪಟ್ಟರು.[೧೦]

ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರತಿಕ್ರಿಯೆ[ಬದಲಾಯಿಸಿ]

  • ಆಯವ್ಯಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ರೂ. 2 ಕೋಟಿ, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 5 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಮರಾಠಾ ನಿಗಮಕ್ಕೆ ರೂ. 50 ಕೋಟಿ, ವೀರಶೈವ ಮತ್ತು ಒಕ್ಕಲಿಗ ನಿಗಮಕ್ಕೆ ತಲಾ ರೂ. 500 ಕೋಟಿ, ಅಲ್ಪಸಂಖ್ಯಾತರಿಗೆ ರೂ. 1,500 ಕೋಟಿ ಮೀಸಲಿಡಲಾಗಿದೆ.
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 2020–21ನೇ ಸಾಲಿನ ಬಜೆಟ್‌ನಲ್ಲಿ ರೂ. 259 ಕೋಟಿ ಹಂಚಿಕೆ ಮಾಡಿದ್ದ ಸರ್ಕಾರ, ಬಳಿಕ ಕೋವಿಡ್‌ ಕಾರಣಕ್ಕೆ ರೂ. 55 ಕೋಟಿ ಕಡಿತಗೊಳಿಸಿ, ರೂ. 192 ಕೋಟಿ ಬಿಡುಗಡೆ ಮಾಡಿತ್ತು. ಆದರೆ, ಈ ಸಾಲಿನಲ್ಲಿ ಇನ್ನೂ ರೂ. 50 ಕೋಟಿ ಕಡಿತ ಮಾಡಲಾಗಿದೆ. ಕಲೆ, ಸಾಹಿತ್ಯ, ಕಲಾವಿದರ ಹಲವು ಯೋಜನೆಗಳಿಗೆ ಅನುದಾನ ಕಡಿತ ಮಾಡಿ, ಒಟ್ಟು ರೂ. 152 ಕೋಟಿ ಹಂಚಿಕೆಯಾಗಿದೆ.
  • ವಲಯವಾರು ಹಣ ಹಂಚಿಕೆ ಮಾಡಿದ್ದರಿಂದ ವಿವಿಧ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿರುವ ಅನುದಾನದ ಸ್ಪಷ್ಟ ಮಾಹಿತಿ ಅನೇಕರಿಗೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಸಂಘಟನೆಗಳು, ಕಲಾವಿದರು ವಿಚಾರಿಸುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
  • ಸ್ವಾತಂತ್ರ್ಯ ಯೋಧರ ಗ್ರಾಮಗಳ ಅಭಿವೃದ್ಧಿಗೆ ಕಳೆದ ಸಾಲಿನಲ್ಲಿ ರೂ. 1 ಕೋಟಿ ನೀಡಿದ್ದ ಸರ್ಕಾರ, ಸ್ವಾತಂತ್ರೋತ್ಸವದ 75ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಯೋಜನೆಯನ್ನೇ ಕೈಬಿಟ್ಟಿದೆ. ಹಂಪಿ, ಕದಂಬ ಉತ್ಸವಕ್ಕೂ ಹಣ ಇಟ್ಟಿಲ್ಲ. ವೃತ್ತಿ ನಾಟಕ ಕಂಪನಿಗಳಿಗೆ ನೆರವು, ಸಾಂಸ್ಕೃತಿಕ ಚಟುವಟಿಕೆಯ ಪ್ರೋತ್ಸಾಹಕ್ಕೆ ಅನುದಾನ ಕಡಿತಗೊಳಿಸಲಾಗಿದೆ. ರಾಜ್ಯ, ರಾಷ್ಟ್ರೀಯ ಉತ್ಸವಗಳ ಆಚರಣೆಗೂ ಹಣ ಕಡಿಮೆ ಇಡಲಾಗಿದೆ. ಅಕಾಡೆಮಿಗಳು, ಪ್ರಾಧಿಕಾರಗಳ ಅನುದಾನಕ್ಕೂ ಕತ್ತರಿ ಪ್ರಯೋಗಿಸಲಾಗಿದೆ.
  • ಕನ್ನಡ ಸಾಹಿತ್ಯವನ್ನು ಇತರ ಭಾಷೆಗಳಿಗೆ ಅನುವಾದ ಮಾಡಲು 2019–20ರಲ್ಲಿ ರೂ. 50 ಲಕ್ಷ ತೆಗೆದಿರಿಸಲಾಗಿತ್ತು. ಅದನ್ನು ಕಳೆದ ಸಾಲಿನಲ್ಲಿ ರೂ. 30 ಲಕ್ಷಕ್ಕೆ ಇಳಿಸಲಾಗಿದೆ. ಈ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇತ್ತಾದರೂ ಈ ಬಾರಿಯೂ ಅಷ್ಟೇ ಮೊತ್ತ ಹಂಚಿಕೆ ಮಾಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಸಾಲಿನಲ್ಲಿ ರೂ. 2 ಕೋಟಿ ಮಾತ್ರ ನೀಡಲಾಗಿತ್ತು. ಆ ನಂತರ ಹೆಚ್ಚುವರಿಯಾಗಿ ರೂ. 3 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಅದರಲ್ಲಿ ರೂ. 1.25 ಕೋಟಿ ಮಾತ್ರ ಬಿಡುಗಡೆಯಾಗಿದೆ.

ಆಯವ್ಯಯದಲ್ಲಿ ಅನುದಾನ ಹಂಚಿಕೆ[ಬದಲಾಯಿಸಿ]

ಆಯವ್ಯಯದಲ್ಲಿ ಅನುದಾನ ಹಂಚಿಕೆ (ಕೋಟಿ ರೂ.ಗಳಲ್ಲಿ)
ಕಾರ್ಯಕ್ರಮ; 2020–21; 2021–22
ಕಲೆ, ಸಂಸ್ಕೃತಿಗೆ ಪ್ರೋತ್ಸಾಹ 2.50; 2.00
ಸಂಘ, ಸಂಸ್ಥೆಗಳು 4.39 3.66
ಪರಿಶಿಷ್ಟ ಜಾತಿ ವಿಶೇಷ ಘಟಕ (ಎಸ್‌ಸಿಎಸ್‌ಪಿ 15.00; 10.00
ಪರಿಶಿಷ್ಟ ವರ್ಗದ ವಿಶೇಷ ಘಟಕ (ಟಿಎಸ್‌ಪಿ); 5.00 3.00
ವೃತ್ತಿ ನಾಟಕ ಕಂಪನಿಗಳು; ; 2.00 1.50
ರಾಜ್ಯ, ರಾಷ್ಟ್ರೀಯ ಉತ್ಸವ; ; 9.00 7.00
ವಿವಿಧ 16 ಅಕಾಡೆಮಿಗಳು 8.00 7.00
[೧೧]

ಅಕಾಡಮಿ ಅಧ್ಯಕ್ಷರು[ಬದಲಾಯಿಸಿ]

  • ಸಾಂಸ್ಕೃತಿಕ ವಿಷಯಗಳಲ್ಲಿ ಸರ್ಕಾರಕ್ಕೆ ಕಾಳಜಿ ಇರಬೇಕಿತ್ತು. ಅದು ಇಲ್ಲವಾಗುತ್ತಿದೆ. ಕೈಗೆ ಕಾಸು ಕೊಡದೆ ಕುರ್ಚಿಯಲ್ಲಿ ಕುಳಿತು ಜಪ ಮಾಡಿ ಹೋಗುವ ಸ್ಥಿತಿಯಿದೆ

- ಪ್ರೊ. ಎಂ.ಎ. ಹೆಗಡೆ, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ

  • ಕಳೆದ ಸಾಲಿನಲ್ಲಿ ಲಭ್ಯವಿದ್ದ ಅನುದಾನ ಸದ್ಬಳಕೆ ಮಾಡಿದ್ದೇವೆ. ಈ ಬಾರಿಯ ಚಟುವಟಿಕೆಗೆ ಕೊರತೆಯಾದರೆ ಸರ್ಕಾರ ಪೂರಕ ಅನುದಾನ ಕೊಡುವ ವಿಶ್ವಾಸವಿದೆ

- ಬಿ.ವಿ. ವಸಂತಕುಮಾರ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ

  • ಗಡಿಭಾಗದ ಅವಶ್ಯಕತೆಗಳಿಗೆ ಅನುದಾನ ಕಡಿಮೆಯಿದೆ. ಆ ಭಾಗದ ಕನ್ನಡಿಗರ ಸ್ಥಿತಿಗತಿ ಅರಿತಿರುವ ಮುಖ್ಯಮಂತ್ರಿ ₹ 75 ಕೋಟಿಗೂ ಹೆಚ್ಚು ಅನುದಾನ ಕೊಡುವ ನಂಬಿಕೆಯಿದೆ

-ಸಿ. ಸೋಮಶೇಖರ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ ಬಜೆಟ್ ೨೦೨೧ - ೨೦೨೨
  2. Karnataka Budget 2021: ಬರೀ ನೋಟ, ಸಾಲದ ಆಟ; ವಿ.ಎಸ್.ಸುಬ್ರಹ್ಮಣ್ಯ Updated: 09 ಮಾರ್ಚ್ 2021
  3. 15th Finance Commission Central Government And State Governments
  4. ಬಜೆಟ್ 2021--22 ರಾಜ್ಯ ಬಜೆಟ್
  5. ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿಯ ಬಜೆಟ್-ಡಿವಿಎಸ್; ಸಮತೋಲಿತ ಬಜೆಟ್-ಬೊಮ್ಮಾಯಿ;ರಾಜ್ಯ ಬಜೆಟ್ 2021;ಮುಖಪುಟ ಬಜೆಟ್ 2021
  6. ಇದು ‘ಆಪರೇಷನ್ ಬರ್ಬಾದ್‌’ ಬಜೆಟ್‌: ಸಿದ್ದರಾಮಯ್ಯಪ್ರಜಾವಾಣಿ ವಾರ್ತೆ Updated: 09 ಮಾರ್ಚ್ 2021
  7. ಇದು ದು ಕಣ್ಣಾಮುಚ್ಚಾಲೆಯ ಬೋಗಸ್‌ ಬಜೆಟ್‌ ಪ್ರಜಾವಾಣಿ ವಾರ್ತೆ Updated: 09 ಮಾರ್ಚ್ 2021
  8. {https://www.prajavani.net/business/budget/opinions-of-leaders-opinion-about-state-karnataka-budget-2021-811778.html ಬೋಗಸ್‌ ಬಜೆಟ್‌ ಪ್ರಜಾವಾಣಿ ವಾರ್ತೆ Updated: 09 ಮಾರ್ಚ್ 2021,]
  9. ಬಜೆಟ್‌ನಲ್ಲಿ ಕಾಣಿಸುತ್ತಿದೆ ಕಪ್ಪುಚುಕ್ಕೆ: ಸಂಸದ ಎ.ನಾರಾಯಣಸ್ವಾಮಿ ಅಸಮಾಧಾನ;ಪ್ರಜಾವಾಣಿ ವಾರ್ತೆ Updated: 09 ಮಾರ್ಚ್ 2021,
  10. ಬಜೆಟ್‌: ಹಣಕಾಸು ಇಲಾಖೆ ಅಧಿಕಾರಿಗಳು ಸಿ.ಎಂಗೇ ಟೋಪಿ ಹಾಕಿದ್ದಾರೆ –ವಿಶ್ವನಾಥ್‌;ಪ್ರಜಾವಾಣಿ-d: 10 ಮಾರ್ಚ್ 2021
  11. ಗಡಿ, ನುಡಿಗೆ ಅನುದಾನ ಕತ್ತರಿ: ಸಾಂಸ್ಕೃತಿಕ ವಲಯದ ಆಕ್ರೋಶ;;ರಾಜೇಶ್‌ ರೈ ಚಟ್ಲ Updated: 15 ಮಾರ್ಚ್ 2021

ಉಲ್ಲೇಖ[ಬದಲಾಯಿಸಿ]