ಕರ್ನಾಟಕ ರಾಜ್ಯದಲ್ಲಿ ಆಧುನಿಕ ವಿಜ್ಞಾನ ಶಿಕ್ಷಣಕ್ಕೆ ನೂರು ವರ್ಷಗಳ ಇತಿಹಾಸ ಉಂಟು. ಭಾರತದಲ್ಲಿವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಜಮ್ಶೆಡ್ಜಿ ಟಾಟಾ ಅವರು ಬ್ರಿಟಿಷ್ ಆಡಳಿತದ ಮುಂದೆ ಪ್ರಸ್ತಾವ ಇಟ್ಟಾಗ, ಸಾರಾಸಗಟಾಗಿ ತಿರಸ್ಕರಿಸಲಾಯಿತು. ಆದರೆ, ಟಾಟಾ ಅಷ್ಟಕ್ಕೆ ಬಿಡಲಿಲ್ಲ. ಮತ್ತೆ ಮನವಿ ಸಲ್ಲಿಸಿದರು. ಆ ಮನವಿ ಕುರಿತಂತೆ ಪರಿಶೀಲಿಸಲು ರಾಯಲ್ ಸೊಸೈಟಿಯ ಸದಸ್ಯರಾಗಿದ್ದ ಸರ್ ವಿಲಿಯಂ ರಾಮ್ಸೆ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು.
ಭಾರತಕ್ಕೆ ವಿಜ್ಞಾನ ಸಂಸ್ಥೆಯೊಂದರ ಅಗತ್ಯವಿದೆ ಎಂಬ ವರದಿಯನ್ನು ಆ ಸಮಿತಿ ನೀಡಿತು. ಹಾಗಾದರೆ ಆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸುವುದು ಎಂಬ ಪ್ರಶ್ನೆ ಎದುರಾದಾಗ, ಬೆಂಗಳೂರಿನ ಜತೆಗೆ ಸ್ಪರ್ಧೆ ಒಡ್ಡಿದ್ದು ಈಗಿನ ಉತ್ತರಾಖಂಡದ ರೂರ್ಕಿ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ 371 ಎಕರೆ ಭೂಮಿ ಕೊಟ್ಟಿದ್ದಲ್ಲದೆ ನೀರು–ವಿದ್ಯುತ್ ಸೌಲಭ್ಯವನ್ನೂ ಕಲ್ಪಿಸಲು ಮುಂದೆ ಬಂದಿದ್ದರಿಂದ ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರವಾದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕನ್ನಡ ನಾಡಿನಲ್ಲಿ ತಲೆ ಎತ್ತುವಂತಾಯಿತು. ಈ ಹೆಮ್ಮೆಯ ಕೇಂದ್ರದ ಮಕ್ಕಳಂತೆ ದೇಶದ ಹಲವೆಡೆ ವಿವಿಧ ಸಂಶೋಧನಾ ಸಂಸ್ಥೆಗಳು ಸ್ಥಾಪನೆಯಾಗಿದ್ದು ಈಗ ಇತಿಹಾಸ.
ಬೆಂಗಳೂರು ಹಿಂದೆಯೂ ದೇಶದ ‘ವಿಜ್ಞಾನ ರಾಜಧಾನಿ’ಯಾಗಿತ್ತು. ಈಗಲೂ ಅದೇ ಕಿರೀಟ ತೊಟ್ಟಿದೆ. ಮತ್ತೆ, ಸದ್ಯದ ಭವಿಷ್ಯದಲ್ಲಿ ಆ ಪಟ್ಟ ಅಬಾಧಿತ. ಇಡೀ ಮೈಸೂರು ಸಂಸ್ಥಾನದಲ್ಲಿ ಸೆಂಟ್ರಲ್ ಕಾಲೇಜು ವಿಜ್ಞಾನ ಪದವಿ ಅಧ್ಯಯನಕ್ಕಾಗಿ ಇದ್ದ ಏಕೈಕ ವಿದ್ಯಾಕೇಂದ್ರವಾಗಿತ್ತು. ತಮ್ಮ ದೈನಂದಿನ ಕೆಲಸ–ಕಾರ್ಯಗಳಿಗೆ ಬೇಕಾದ ವಿದ್ಯಾವಂತರನ್ನು ತಯಾರು ಮಾಡುವುದಷ್ಟೇ ಬ್ರಿಟಿಷ್ ಆಡಳಿತಗಾರರ ಉದ್ದೇಶವಾಗಿತ್ತು. ವಿಜ್ಞಾನಿಗಳನ್ನು ಬೆಳೆಸುವಂತಹ ವ್ಯವಸ್ಥೆ ಕಲ್ಪಿಸಿ ನಮ್ಮನ್ನೆಲ್ಲ ಉದ್ಧಾರ ಮಾಡುವಷ್ಟು ಔದಾರ್ಯ ಆಗ ಅವರಿಗೆ ಇರಲಿಲ್ಲ.
ಕನ್ನಡದಲ್ಲೇ ಬೇಕು ಮಾಧ್ಯಮಿಕ ಶಿಕ್ಷಣ
ಮಾತೃಭಾಷೆಯಲ್ಲಿ ಓದಿದರೆ ವಿಜ್ಞಾನ ರಂಗಕ್ಕೆ ಧುಮುಕುವುದು ಕಷ್ಟ ಎಂಬ ಅಭಿಪ್ರಾಯ ಬಹುತೇಕ ಪಾಲಕರಲ್ಲಿದೆ. ಆದರೆ, ಇಂತಹ ಆತಂಕಕ್ಕೆ ಯಾವುದೇ ಕಾರಣವಿಲ್ಲ. ಮಾಧ್ಯಮಿಕ ಶಿಕ್ಷಣದವರೆಗೆ ಮಾತೃಭಾಷೆಯೇ ಕಲಿಕಾ ಮಾಧ್ಯಮವಾದರೆ ಮಕ್ಕಳಿಗೆ ಗ್ರಹಿಕೆ ಸುಲಭ. ನಾನು ವಿಜ್ಞಾನದಲ್ಲಿ ಇವತ್ತು ಏನಾದರೂ ಸಾಧನೆ ಮಾಡಿದ್ದರೆ ಮಾಧ್ಯಮಿಕ ಶಿಕ್ಷಣದವರೆಗೆ ನನಗೆ ಮಾತೃಭಾಷೆಯಾದ ಕನ್ನಡದಲ್ಲಿ ಶಿಕ್ಷಣ ದೊರೆತದ್ದೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದ ನಮ್ಮಪ್ಪ, ‘ಇಂಗ್ಲಿಷ್ ಭಾಷೆಯನ್ನು ಕಲಿತುಕೊ. ಆದರೆ, ಕನ್ನಡ ಮಾಧ್ಯಮದಲ್ಲೇ ಓದು’ ಎಂದು ಹೇಳಿದ್ದರು. ರಾಜ್ಯದ ಜನರಿಗೆ ನನ್ನ ಹಿತವಚನವೂ ಅದೇ: ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಖಂಡಿತವಾಗಿ ಕಲಿಸಿ, ಹೈಸ್ಕೂಲ್ವರೆಗೆ ಕನ್ನಡದಲ್ಲೇ ಶಿಕ್ಷಣ ಕೊಡಿಸಿ. ವಿಜ್ಞಾನದ ಆಳವನ್ನು ಅರಗಿಸಿಕೊಳ್ಳಲು ತಕ್ಕ ಬುನಾದಿಯನ್ನು ಅದು ಹಾಕುತ್ತದೆ.
ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಮಾಡಬೇಕಾದ ಕೆಲಸ[ಬದಲಾಯಿಸಿ]
ಕೊರಿಯಾದ ಸಾಧನೆ
ನಮ್ಮ ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಎರಡು ‘ದಕ್ಷಿಣ ಕೊರಿಯಾ’ಗಳನ್ನೇ ಸೃಷ್ಟಿಸಬಹುದು, ಗೊತ್ತೆ? ಆದರೆ, ಆ ಪುಟ್ಟ ದೇಶ ಸಂಶೋಧನಾ ಕ್ಷೇತ್ರದ ಹೂಡಿಕೆಯಲ್ಲಿ ‘ನೂರಾರು ಕರ್ನಾಟಕ’ಗಳ ಸಾಧನೆಯನ್ನು ಮೀರಿ ನಿಂತಿದೆ. ವಿಜ್ಞಾನ ಕ್ಷೇತ್ರದಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎನ್ನುವ ಮಾತು ಕೇಳಿಬಂದಾಗಲೆಲ್ಲ ಈ ಎರಡೂ ಅಂತರಗಳ ಚಿತ್ರಣ ಮನದಂಗಳದಲ್ಲಿ ಥಟ್ಟಂತ ಮೂಡುತ್ತದೆ.
ವಿಜ್ಞಾನಿ;ಕರ್ನಾಟಕ ರತ್ನ:ಭಾರತ ರತ್ನ:ಸಿಎನ್ಆರ್ ರಾವ್.
.
ಯಾವುದೇ ಕ್ಷೇತ್ರದಲ್ಲಿ ಹಣ ತೊಡಗಿಸುವಾಗ ಮುಂದಿನ ನೂರು ವರ್ಷಗಳ ಗುರಿ ಇರಬೇಕು. ಅನುಮಾನವೇ ಇಲ್ಲ, ಶಿಕ್ಷಣ ಹಾಗೂ ಸಂಶೋಧನೆಯಿಂದ ಮಾತ್ರ ಅಪೇಕ್ಷಿತ ಬದಲಾವಣೆ ತರಲು ಸಾಧ್ಯ. ಈ ಕ್ಷೇತ್ರಗಳೇ ನಮ್ಮ ಆದ್ಯತಾ ವಲಯಗಳಾಗಬೇಕು. ವಿಜ್ಞಾನ ಕಾಲೇಜುಗಳು ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲದೆ ಇರುವುದರಿಂದ ಎಷ್ಟೋ ಮಕ್ಕಳು ಅನಿವಾರ್ಯವಾಗಿ ಬೇರೆ ಬೇರೆ ವಿದ್ಯಾ ಶಾಖೆಗಳಿಗೆ ಸೇರಬೇಕಾಗಿದೆ. ಇರುವ ವಿಜ್ಞಾನ ಕಾಲೇಜುಗಳಲ್ಲೂ ಪ್ರಯೋಗಾಲಯದ ಕೊರತೆ. ಕೇವಲ ಬೋಧನಾ ವೃತ್ತಿಗೆ ಅಂಟಿಕೊಂಡಿರುವ ಪ್ರಾಧ್ಯಾಪಕರುಗಳಿಗೆ ಬೋಧನಾ ಗುಣಮಟ್ಟ ಸುಧಾರಿಸಲು ಅವರಿಗೆ ಸರಿಯಾದ ತರಬೇತಿಯ ವ್ಯವಸ್ಥೆಯನ್ನು ಮಾಡಲೇಬೇಕಿದೆ. ಬಿ.ಎಸ್. ಮಾಧವರಾವ್, ಶ್ರೀನಿವಾಸ್ ಅಯ್ಯಂಗಾರ್, ಬಿ.ವೆಂಕಟೇಶಾಚಾರ್, ಬಿ.ಆರ್. ಶೇಷಾಚಾರ್, ಮಂಜುನಾಥ್ ಅವರಂತಹ ವಿಜ್ಞಾನಿಗಳು ಬೋಧಕರಾಗಿದ್ದರು. ಅಂತಹ ಶೈಕ್ಷಣಿಕ ವಾತಾವರಣ ಮರುಸೃಷ್ಟಿ ಆಗಬೇಕು. ಈಗ ಧಾರವಾಡದಲ್ಲಿ ಒಂದು ಐಐಟಿ ಆರಂಭಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಅಂತಹ 2–3 ಸಂಸ್ಥೆಗಳಾದರೂ ಬೇಕು. ಆಗ ಪ್ರತಿಭೆಗಳಿಗೆ ಅಲ್ಲಿ ಕೆಲಸಮಾಡಲು ಅವಕಾಶ ಸಿಕ್ಕು, ಸಂಶೋಧನಾ ಗುಣಮಟ್ಟ ಎತ್ತರಕ್ಕೇರುತ್ತದೆ. ಹಾಗಂತ ಸೂಕ್ತ ತಯಾರಿ ಇಲ್ಲದೆ, ಐಐಟಿ ಆರಂಭಿಸಿದರೆ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ‘ಐಐಟಿ ಬ್ರ್ಯಾಂಡ್’ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ.
ಮೈಸೂರು ಭಾಗದಲ್ಲಿ ಒಡೆಯರ್ ಅವರ ಔದಾರ್ಯದಿಂದ ಒಳ್ಳೆಯ ಸಂಸ್ಥೆಗಳು ಸ್ಥಾಪನೆಯಾಗಿವೆ. ಆದರೆ, ಏಕೀಕರಣದ ಮುಂಚೆ ಮದ್ರಾಸ್ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡ, ಬಾಂಬೆ ಪ್ರಾಂತ್ಯ ಹಾಗೂ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶದಲ್ಲಿ ಅಂತಹ ಸೌಲಭ್ಯಗಳು ಇಲ್ಲ. ಅಲ್ಲಿಯೂ ಪ್ರತಿಭಾವಂತರು ಇದ್ದಾರೆ. ಆ ಪ್ರದೇಶಗಳಲ್ಲಿ ಉನ್ನತ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಬೇಕು. ಬೇಕಾದಷ್ಟು ಉದ್ಯಮಗಳು ನಮ್ಮ ರಾಜ್ಯದಲ್ಲಿವೆ. ಸಂಶೋಧನಾ ಚಟುವಟಿಕೆ ಹೆಚ್ಚಲು ಅವುಗಳ ಸಹಭಾಗಿತ್ವ ಅಗತ್ಯವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು.
ಯಾವ ಕ್ಷೇತ್ರದಲ್ಲಿ ಸಂಶೋಧನೆ ನಡೆಸಬೇಕು ಎನ್ನುವ ಖಚಿತತೆ ನಮ್ಮಲ್ಲಿರಬೇಕು. ಹಾಗೆ ಆಯ್ಕೆ ಮಾಡಲಾದ ಸಂಶೋಧನಾ ಚಟುವಟಿಕೆಗಳಲ್ಲಿ ಹಣ ಹೂಡಿದರೆ ಒಳ್ಳೆಯ ಫಲಿತಾಂಶ ಸಿಗುವುದು. ಬಾಹ್ಯಾಕಾಶ ಹಾಗೂ ಅಣುಶಕ್ತಿ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಸಾಧನೆಗಳೇ ಇದಕ್ಕೆ ಸಾಕ್ಷಿ. ಮಾಹಿತಿ ತಂತ್ರಜ್ಞಾನ (ಐ.ಟಿ) ಹಾಗೂ ಜೈವಿಕ ತಂತ್ರಜ್ಞಾನಗಳ (ಬಿ.ಟಿ) ಅಬ್ಬರ ಹೆಚ್ಚಾಗಿರುವುದು ನಿಜ. ಐ.ಟಿಯಲ್ಲಿ ವಿಜ್ಞಾನವೇ ಇಲ್ಲ. ಬಿ.ಟಿಯಲ್ಲಿ ಚೂರುಪಾರು ವಿಜ್ಞಾನ ಇದೆ. ಮೂಲ ವಿಜ್ಞಾನ ಘನವಾದುದು. ಯುವ ಪೀಳಿಗೆಗೆ ದೊಡ್ಡ ವಿಜ್ಞಾನಿ ಆಗಬೇಕು ಎನ್ನುವ ಗುರಿ ಹೊಂದಬೇಕು.
ಮೂಲ ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಆಸಕ್ತಿ ತಾಳಲು ಸ್ಕಾಲರ್ಷಿಪ್ ವಿತರಣೆ, ಉದ್ಯೋಗ ಸೃಷ್ಟಿಯಂತಹ ಸೌಲಭ್ಯಗಳ ಕಡೆಗೂ ಗಮನಹರಿಸುವ ಅಗತ್ಯವಿದೆ. ಮುಖ್ಯವಾಗಿ ಅಧ್ಯಯನ ಮಾಡಲು ಅತ್ಯುನ್ನತ ಸಂಸ್ಥೆಗಳನ್ನು ಸೃಷ್ಟಿಸಬೇಕಿದೆ. ಮೂಲ ವಿಜ್ಞಾನದಲ್ಲಿ ಪೂರಕ ಅವಕಾಶವಿಲ್ಲದ ಕಾರಣ ಉದ್ಯಮ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಯುವಪೀಳಿಗೆ ಭವಿಷ್ಯ ಕಂಡುಕೊಳ್ಳುತ್ತಿದೆ.
ಕಳವಳಕಾರಿ ಸಂಗತಿ ಏನೆಂದರೆ ನಮ್ಮ ಜವಾಹರಲಾಲ್ ನೆಹರೂ ಉನ್ನತ ಸಂಶೋಧನಾ ಸಂಸ್ಥೆಗೆ ಕಳೆದ 25 ವರ್ಷಗಳಲ್ಲಿ ಒಬ್ಬ ಬೆಂಗಳೂರು ವಿದ್ಯಾರ್ಥಿಯೂ ಅಧ್ಯಯನಕ್ಕಾಗಿ ಸೇರಿಲ್ಲ. ಇದೇ ಕಾಲಕ್ಕೆ ತುಮಕೂರು, ಮಂಡ್ಯದಂತಹ ಗ್ರಾಮಾಂತರ ಭಾಗಗಳಿಂದ ಒಂದಿಬ್ಬರು ವಿದ್ಯಾರ್ಥಿಗಳು ಮಾತ್ರಾ ಬಂದಿರುವುದು ಆಶಾದಾಯಕ ಬೆಳವಣಿಗೆ. ಪಶ್ಚಿಮ ಬಂಗಾಲ, ಆಂಧ್ರ ಪ್ರದೇಶ ಹಾಗೂ ಬಿಹಾರ ಭಾಗಗಳಲ್ಲಿ ಈಗ ಸಂಶೋಧನಾ ಆಸಕ್ತಿ ಚೆನ್ನಾಗಿ ಬೆಳೆದಿದೆ.
ಮುಂದಿನ 15 ವರ್ಷಗಳ ಗುರಿ ಇಟ್ಟುಕೊಂಡು ವಿಜ್ಞಾನದ ಆಸಕ್ತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮ ಹಾಕಿಕೊಳ್ಳಬೇಕು. ಪ್ರಾದೇಶಿಕ ಮಟ್ಟದಲ್ಲಿ ಹತ್ತಾರು ವಿಜ್ಞಾನ ಸಂಸ್ಥೆಗಳನ್ನು ಕಟ್ಟಬೇಕು. ಸಮಾಜ ಗೌರವಿಸುವ ಮೌಲ್ಯಗಳು ಹಾಗೂ ನಂಬಿಕೆಗಳಿಗೆ ಸಂಬಂಧಿಸಿದ ವಿಚಾರ. ಜನರು ಮೂಲವಿಜ್ಞಾನ ಓದಿದವರನ್ನು ಗೌರವಿಸಬೇಕು. ಜನರ ಈ ಮನಸ್ಥಿತಿ ಬದಲಾಗದಿದ್ದರೆ ವಿಜ್ಞಾನ ಬೆಳೆಯುವುದು ಕಷ್ಟ.
ವಿಜ್ಞಾನದ ಬೆಳವಣಿಗೆಗೆ ಬಹುತೇಕ ಅನುದಾನ ಕೇಂದ್ರ ಸರ್ಕಾರದಿಂದಲೇ ಬರುತ್ತಿದೆ. ಅದು ಕೂಡ ನಗಣ್ಯವಾಗಿದೆ. ಆದರೆ, ಕಳೆದ 8–10 ವರ್ಷಗಳಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಬಜೆಟ್ನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ಸಹ ಕಾಣಿಸಿಕೊಳ್ಳಲು ಆರಂಭಿಸಿವೆ. ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷನ್ ಗ್ರೂಪ್ ಮಾಡಿದ್ದ ಶಿಫಾರಸುಗಳಲ್ಲಿ ಕೆಲವನ್ನು ಅನುಷ್ಠಾನಕ್ಕೆ ತರಲಾಗಿದೆ.
ಮುಖ್ಯವಾಗಿ ಸರ್ಕಾರ ತನ್ನ ಬಜೆಟ್ನಲ್ಲಿ ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 2ರಷ್ಟನ್ನು ಸಂಶೋಧನೆಗೆ ಹಾಗೂ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ವಿಜ್ಞಾನ ಕಲಿಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ತುರ್ತಾಗಿ ಒದಗಿಸಬೇಕು. ಉದ್ಯಮಗಳ ಸಹಭಾಗಿತ್ವ ಹೆಚ್ಚಾಗಿ ಬೇಕು. ಹಾಗಾದರೆ ಶತಮಾನದ ಸಮೃದ್ಧ ಕರ್ನಾಟಕದ ಕನಸು ನನಸಾಗುವುದಲ್ಲದೆ ದೇಶದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾದೀತು.
ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 8ರಷ್ಟು ಹಣವನ್ನು ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರಗಳಿಗೆ ಮೀಸಲಿಡಬೇಕು. ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಅಧ್ಯಯನ ಸಂಸ್ಥೆಗಳನ್ನು ತೆರೆಯಬೇಕು
ಮುಂದಿನ 15 ವರ್ಷಗಳಲ್ಲಿ ನಮ್ಮ ವಿಜ್ಞಾನ ಕ್ಷೇತ್ರ ಪ್ರಗತಿಯತ್ತ ದಾಪುಗಾಲು ಹಾಕದಿದ್ದರೆ ಶಾಶ್ವತವಾಗಿ ಹಿಂದೆ ಬೀಳುವ ಅಪಾಯವಿದೆ. ಈ ಎಚ್ಚರಿಕೆ ಇಟ್ಟುಕೊಂಡು ಹಣ ವಿನಿಯೋಗ ಮಾಡಬೇಕು
ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಖಾಸಗಿ ಸಹಭಾಗಿತ್ವ ಬೇಕು. ರಾಜ್ಯದಲ್ಲಿ ಸಾವಿರಾರು ಬೃಹತ್ ಉದ್ಯಮಗಳು ಬೀಡು ಬಿಟ್ಟಿದ್ದು, ಅವುಗಳ ಸಹಯೋಗ ಪಡೆಯುವ ಕೆಲಸ ಆಗಬೇಕು. ದಕ್ಷಿಣ ಕೊರಿಯಾದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಶೇ 75ರಷ್ಟು ಹೂಡಿಕೆ ಉದ್ಯಮ ಕ್ಷೇತ್ರದಿಂದಲೇ ಆಗುತ್ತಿದೆ
ಪ್ರೌಢಶಾಲೆಯಿಂದ ವಿಶ್ವವಿದ್ಯಾಲಯ ವರೆಗೆ ಎಲ್ಲ ಹಂತದ ಶಿಕ್ಷಣದಲ್ಲೂ ವಿಜ್ಞಾನ ಬೋಧಕರಿಗೆ ಸೂಕ್ತ ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ವಿಜ್ಞಾನದ ವಸ್ತು ಸಂಗ್ರಹಾಲಯದ ವ್ಯವಸ್ಥೆ ಮಾಡಬೇಕು. ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸಂಸ್ಥೆಯೊಂದನ್ನು ಹುಟ್ಟುಹಾಕಬೇಕು. ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ನೀಡುವ ಮೂಲಕ ಮೂಲವಿಜ್ಞಾನದತ್ತ ಅವರನ್ನು ಆಕರ್ಷಿಸಬೇಕು.
ದೇಶದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಸೀಟುಗಳು (8,750) ಕರ್ನಾಟಕದಲ್ಲಿವೆ. ಮಹಾರಾಷ್ಟ್ರ (7,120) ಮತ್ತು ತಮಿಳುನಾಡು (6.660) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) 2017– 18ನೇ ಸಾಲಿನಲ್ಲಿ ಲಭ್ಯವಿರುವ ಎಂಬಿಬಿಎಸ್ ಸೀಟುಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಕರ್ನಾಟಕದಲ್ಲಿ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿ 56 ವೈದ್ಯಕೀಯ ಕಾಲೇಜುಗಳಿವೆ. ಬಹುತೇಕ ಕಾಲೇಜುಗಳು ಪ್ರತಿ ವರ್ಷವೂ ಪ್ರವೇಶ ಮಿತಿಯನ್ನು ಹೆಚ್ಚಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. [೩]