ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡು

Coordinates: 13°16′14″N 75°20′29″E / 13.2705°N 75.3414°E / 13.2705; 75.3414
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Annapoorneshwari Temple
ಭೂಗೋಳ
ಕಕ್ಷೆಗಳು13°16′14″N 75°20′29″E / 13.2705°N 75.3414°E / 13.2705; 75.3414
ದೇಶ ಭಾರತ
ರಾಜ್ಯಕರ್ನಾಟಕ
ಸ್ಥಳHoranadu
ಇತಿಹಾಸ ಮತ್ತು ಆಡಳಿತ
ಸೃಷ್ಟಿಕರ್ತTamil sidhar
ಅಧೀಕೃತ ಜಾಲತಾಣhttp://srikshetrahoranadu.com/

ಅನ್ನಪೂರ್ಣೇಶ್ವರಿ ದೇವಸ್ಥಾನವು , ಅನ್ನಪೂರ್ಣೇಶ್ವರಿ ( ಅನ್ನಪೂರ್ಣ ) ದೇವರಿಗೆ ಸಮರ್ಪಿತವಾಗಿದೆ, ಇದು ಚಿಕ್ಕಮಗಳೂರಿನಿಂದ ೧೦೦ ಕಿಲೋಮೀಟರ್ ದೂರ ಇರುವ ಹೊರನಾಡಿನಲ್ಲಿದೆ,  ಕರ್ನಾಟಕದ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮತ್ತು ಕಣಿವೆಗಳ ಪ್ರದೇಶದಲ್ಲಿ ಇದೆ. [೧] [೨] [೩] ಇದು ಭದ್ರಾ ನದಿಯ ದಡದಲ್ಲಿದೆ.

ಮಹಾದ್ವಾರ (ಅರ್ಥ: ಮುಖ್ಯದ್ವಾರ)
ಅನ್ನಪೂರ್ಣೇಶ್ವರಿ ದೇವಸ್ಥಾನ ಪ್ರವೇಶ

ಈ ದೇವಾಲಯವನ್ನು ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ ಅಥವಾ ಶ್ರೀ ಕ್ಷೇತ್ರ ಹೊರನಾಡು ದೇವಸ್ಥಾನ ಎಂದೂ ಕರೆಯುತ್ತಾರೆ. 8 ನೇ ಶತಮಾನದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ದೇವಿಯ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ.

ದಂತಕಥೆಯ ಪ್ರಕಾರ, ಶಿವದೇವರು ಮತ್ತು ಅನ್ನಪೂರ್ಣಳಾಗಿ ಆಹಾರದ ದೇವತೆಯಾದ ಆತನ ಪತ್ನಿ ಪಾರ್ವತಿ ನಡುವೆ ವಾಗ್ವಾದವುಂಟಾಯಿತು. ಶಿವನು ಆಹಾರ ಸೇರಿದಂತೆ ಪ್ರಪಂಚದ ಎಲ್ಲವನ್ನೂ ಮಾಯೆ (ಭ್ರಮೆ) ಎಂದು ಘೋಷಿಸಿದನು. ಆಹಾರವು ಭ್ರಮೆ ಅಲ್ಲ ಎಂದು ಸಾಬೀತುಪಡಿಸಲು, ಪಾರ್ವತಿಯು ಕಣ್ಮರೆಯಾದಳು, ಇದರ ಪರಿಣಾಮವಾಗಿ ಪ್ರಕೃತಿಯು ಸ್ಥಿರವಾಯಿತು. ಹವಾಮಾನ ಬದಲಾಗಲಿಲ್ಲ , ಸಸ್ಯಗಳು ಬೆಳೆಯಲಿಲ್ಲ, ಪರಿಣಾಮವಾಗಿ ಪ್ರಪಂಚದಲ್ಲಿ ಬರಗಾಲವು ಉಂಟಾಯಿತು. ಪ್ರಪಂಚದ ಮೇಲೆ ಕರುಣೆ ತೋರಿ ಪಾರ್ವತಿ ಕಾಣಿಸಿಕೊಂಡು ಎಲ್ಲರಿಗೂ ಆಹಾರವನ್ನು ಹಂಚಿದಳು.

ಇನ್ನೊಂದು ಕಥೆಯ ಪ್ರಕಾರ, ಶಿವನು ಬ್ರಹ್ಮ ದೇವರ ಶಿರಚ್ಛೇದ ಮಾಡಿದನು. ಬ್ರಹ್ಮನ ತಲೆಬುರುಡೆಯು ಶಿವನ ಕೈಯಲ್ಲಿ ಅಂಟಿಕೊಂಡಿತು. ತಲೆಬುರುಡೆಯು ಆಹಾರ ಅಥವಾ ಧಾನ್ಯಗಳಿಂದ ತುಂಬುವ ತನಕ ಅದು ಅವನ ಕೈಗಳಿಗೆ ಅಂಟಿಕೊಳ್ಳುತ್ತದೆ ಎಂದು ಅವನಿಗೆ ಶಾಪವಿತ್ತು. ಶಿವನು ಎಲ್ಲೆಡೆ ಹೋಗಿ ಆಹಾರ ಕೇಳಿದರೂ ತಲೆಬುರುಡೆ ತುಂಬಿರಲಿಲ್ಲ. ಆದ್ದರಿಂದ ಅವನು ಅಂತಿಮವಾಗಿ ಈ ದೇವಸ್ಥಾನಕ್ಕೆ ಹೋದನು ಮತ್ತು ಅನ್ನಪೂರ್ಣೆಯು ತಲೆಬುರುಡೆಯನ್ನು ಧಾನ್ಯಗಳಿಂದ ತುಂಬಿಸಿದಳು ಮತ್ತು ಶಿವನ ಶಾಪವನ್ನು ನೀಗಿದಳು.

ಇತಿಹಾಸ[ಬದಲಾಯಿಸಿ]

ಈ ದೇವಸ್ಥಾನದಲ್ಲಿ ಅನುವಂಶಿಕ ಧರ್ಮಕರ್ತ"ರಾಗಿರುವ ಅರ್ಚಕರು ಕಳೆದ 400 ವರ್ಷಗಳಿಂದ ಇಂದಿನವರೆಗೂ ದೇವಾಲಯದ ಸೇವೆ ಮತ್ತು ಸಂರಕ್ಷಣೆ ಮಾಡುತ್ತಿದ್ದಾರೆ. ಧರ್ಮಕರ್ತರು ದೇವಾಲಯವನ್ನು ನವೀಕರಿಸುವಲ್ಲಿ ಹಾಗೂ ಇಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐದನೆಯ ಧರ್ಮಕರ್ತರಾದ ಶ್ರೀ ಡಿ.ಬಿ.ವೆಂಕಟಸುಬ್ಬ ಜೋಯಿಸ್ ಅವರುದೇವಸ್ಥಾನವನ್ನು ರಿಪೇರಿ ಮಾಡಿ ಪುನರುಜ್ಜೀವನಗೊಳಿಸುವವರೆಗೂ ದೇವಾಲಯದ ಆವರಣವು ಚಿಕ್ಕದಾಗಿತ್ತು ಮತ್ತು ಅನೇಕರಿಗೆ ತಿಳಿದಿರಲಿಲ್ಲ. ದೇವತೆಯ ಮೂರ್ತಿಯನ್ನು 1973 ರಲ್ಲಿ ಅಕ್ಷಯ ತೃತೀಯದ ಶುಭ ದಿನದಂದು ಪುನಃ ಸ್ಥಾಪಿಸಲಾಯಿತು.

ದೇವತೆ ಮತ್ತು ಆಚರಣೆಗಳು[ಬದಲಾಯಿಸಿ]

ಅನ್ನಪೂರ್ಣ ಎಂದರೆ ಸಂಪೂರ್ಣ ಅಥವಾ ಪರಿಪೂರ್ಣ ಆಹಾರ. ಶ್ರೀ ಅನ್ನಪೂರ್ಣೇಶ್ವರಿದೇವಿಯು ಶಿವನ ಪತ್ನಿ ಪಾರ್ವತಿ ದೇವಿಯ ಅವತಾರವೆಂದು ನಂಬಲಾಗಿದೆ.

ರುದ್ರಯಮಾಲಾ, ಅನ್ನಪೂರ್ಣಮಾಲಿನಿನಕ್ಷತ್ರಮಾಲಿಕಾ, ಶಿವರಹಸ್ಯ ಮತ್ತು ಅನ್ನಪೂರ್ಣ ಕವಚ ಮುಂತಾದ ಹಲವಾರು ಪುರಾತನ ಗ್ರಂಥಗಳಲ್ಲಿ ದೇವಿ ಅನ್ನಪೂರ್ಣೆಯನ್ನು ಸ್ತುತಿಸಲಾಗಿದೆ.

ಅನ್ನಪೂರ್ಣೇಶ್ವರಿ ದೇವಿಯನ್ನು ಇಲ್ಲಿ ಪೀಠದ ಮೇಲೆ ನಿಂತಿರುವ ಭಂಗಿಯಲ್ಲಿ ಕಾಣಬಹುದು. ಅವಳು ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಶ್ರೀ ಚಕ್ರ ಮತ್ತು ದೇವಿ ಗಾಯತ್ರಿಯನ್ನು ಹಿಡಿದಿದ್ದಾಳೆ. ವಿಗ್ರಹವು ತಲೆಯಿಂದ ಪಾದದವರೆಗೆ ಚಿನ್ನದ ಹೊದಿಕೆಯಿಂದ ಮುಚ್ಚಲ್ಪಟ್ಟಿದೆ, ಮತ್ತು ಅನ್ನಪೂರ್ಣ ದೇವಿಯನ್ನು ದರ್ಶನ ಮಾಡಿದವರು ಅವರ ಜೀವನದಲ್ಲಿ ಎಂದಿಗೂ ಆಹಾರವಿಲ್ಲದೆ ಹೋಗುವುದಿಲ್ಲ ಎಂದು ನಂಬಲಾಗಿದೆ.

ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯವು ಈ ದೇವಾಲಯದಲ್ಲಿ ಆಚರಿಸುವ ಪ್ರಮುಖ ಹಬ್ಬವಾಗಿದೆ. ಈ ದಿನ ದೇವಿಅನ್ನಪೂರ್ಣೆಯ ಜನ್ಮದಿನವೆಂದು ನಂಬಲಾಗಿದೆ. ಈ ದಿನವು ತ್ರೇತಾಯುಗದ ಆರಂಭ ಹಾಗೂ ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭ ಎಂದು ತಿಳಿಯಲಾಗಿದೆ. ದೇವಾಲಯವು ಫೆಬ್ರವರಿ ತಿಂಗಳಲ್ಲಿ 5 ದಿನಗಳ ದೀರ್ಘ ರಥೋತ್ಸವವನ್ನೂ , ಸೆಪ್ಟೆಂಬರ್‌ನಲ್ಲಿ 9 ದಿನಗಳ ನವರಾತ್ರಿಯನ್ನೂ , ದೀಪೋತ್ಸವ ಮತ್ತು ಹವಿಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತದೆ.

ವಾಸ್ತುಶಿಲ್ಪ[ಬದಲಾಯಿಸಿ]

ಮುಖ್ಯ ದೇವಾಲಯ ಸಂಕೀರ್ಣವನ್ನು ತಲುಪಲು, ಆರಾಧಕರು ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗಬೇಕು. ದೇವಾಲಯದ ಪ್ರವೇಶದ್ವಾರದ ಗೋಪುರವು ಹಲವಾರು ಹಿಂದೂ ದೇವತೆಗಳ ಶಿಲ್ಪಗಳಿಂದ ಅಲಂಕೃತವಾಗಿದೆ. ಮುಖ್ಯ ದೇವಾಲಯದ ಪ್ರವೇಶದ್ವಾರದ ಎಡಭಾಗದಲ್ಲಿ ಮಂಟಪವಿದೆ. ದೇವಾಲಯದ ಛಾವಣಿಗಳ ಮೇಲೆ ಸುಂದರವಾದ ಕೆತ್ತನೆಗಳನ್ನು ಕಾಣಬಹುದು. ಆದಿಶೇಷನು ದೇವಾಲಯದ ಗರ್ಭಗೃಹವನ್ನು ಸುತ್ತುವರೆದಿದ್ದಾನೆ. ಪದ್ಮ ಪೀಠವು ಕೂರ್ಮ, ಅಷ್ಟಗಜಗಳನ್ನು ಒಳಗೊಂಡಿದೆ.

ಭಕ್ತರು, ಯಾತ್ರಾರ್ಥಿಗಳು[ಬದಲಾಯಿಸಿ]

ಹೊರನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯವು ಈಗ ಕರ್ನಾಟಕದಾದ್ಯಂತ ಹೆಸರು ಪಡೆದಿದೆ.ಇದಕ್ಕೆ ಮುಖ್ಯಕಾರಣವೆಂದರೆ, ೧೯೮೦-೧೯೯೦ ರ ದಶಕದಲ್ಲಿ ವಾಹನಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅನುಕೂಲವಾದದ್ದರಿಂದ, ಶೃಂಗೇರಿಗೆ ಬರುವ ಪ್ರವಾಸಿಗರು ಅಲ್ಲಿಂದ ೮೦ ಕಿ.ಮೀ.ದೂರ ಇರುವ ಹೊರನಾಡಿಗೂ ಬರತೊಡಗಿದರು. . ಅದಕ್ಕೂ ಹಿಂದೆ, ಇಲ್ಲಿನ ಅನ್ನಪೂರ್ಣೇಶ್ವರಿ ದೇವಾಲಯದ ವೈಶಿಷ್ಟ್ಯವೆಂದರೆ, ಯಾವುದೇ ಸಮಯದಲ್ಲಿ ಭೇಟಿ ಕೊಡುವ ಜನರಿಗೂ ಇಲ್ಲಿ ಊಟ ಅಥವಾ ಉಪಹಾರವನ್ನು ನೀಡುವ ಪದ್ದತಿ ಇತ್ತು - ರಾತ್ರಿ ಬಂದವರಿಗೂ ತಿನಿಸು ಅಥವಾ ಊಟವನ್ನು ಕೊಡುವ ಪದ್ದತಿ ಇಲ್ಲಿತ್ತು. ಕ್ರಮೇಣ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆ ಜಾಸ್ತಿಯಾದಂತೆಲ್ಲ, ವಸತಿ ವ್ಯವಸ್ಥೆ ಮತ್ತಿತರ ವ್ಯವಸ್ಥೆಗಳ ಅನುಕೂಲಗಳು ಹೆಚ್ಚಾದವು ಮತ್ತು ಅಂಗಡಿ ಮುಂಗಟ್ಟುಗಳೂ ತಲೆ ಎತ್ತಿದವು.ಇಲ್ಲಿನ ದೇವಾಲಯದ ಆಳೆತ್ತರದ ಅನ್ನಪೂರ್ಣೇಶ್ವರಿ ವಿಗ್ರಹವು ಆಕರ್ಷಕವಾಗಿದೆ. ವರ್ಷದ ಎಲ್ಲಾ ಕಾಲಗಳಲ್ಲೂ ಇಲ್ಲಿಗೆ ಭೇಟಿ ನೀಡಬಹುದಾದರೂ, ಮಳೆಗಾಲದ ಮೂರು ತಿಂಗಳಿನಲ್ಲಿ ಮಳೆ ವಿಪರೀತವಿರುವುದರಿಂದ, ಸ್ವಲ್ಪ ಅನಾನುಕೂಲವಾಗಬಹುದು.

ಇವನ್ನು ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 

  1. "Temples:Annapoorneshwari temple - Horanadu, Karnataka". indian-heritage.org. Indian Heritage.
  2. "Horanadu Annapoorneshwari Temple". timesofindia.indiatimes.com. Times of India: Times Travel.
  3. "Horanadu Annapoorneshwari Temple". karnatakaholidays.com. Karnataka Holidays. Archived from the original on 2013-05-30. Retrieved 2021-08-07.