ಹಂ.ಪ.ನಾಗರಾಜಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸಾಹಿತಿಗಳು-ಭಾಷಾ ಶಾಸ್ತ್ರಜ್ಞರು ಮತ್ತು ಸಂಶೋಧಕರು
ಹಂಪ ನಾಗರಾಜಯ್ಯ – Hampa Nagarajayya
ಜನನಅಕ್ಟೋಬರ್ ೭, ೧೯೩೬
ಹಂಪಸಂದ್ರ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
ಕಾವ್ಯನಾಮHampana – ಹಂಪನಾ
ವೃತ್ತಿಸಾಹಿತಿ, ಕನ್ನಡ ಪ್ರಾಧ್ಯಾಪಕರು
ರಾಷ್ಟ್ರೀಯತೆಭಾರತ
ವಿಷಯಕನ್ನಡ

ಪ್ರಭಾವಗಳು
  • ಕಮಲಾಹಂಪನ

ಕನ್ನಡ ಸಾರಸ್ವತ ಲೋಕದಲ್ಲಿ 'ಹಂಪನಾ' ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ನವರ ಮಗನಾಗಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು.

ವಿದ್ಯಾಭ್ಯಾಸ[ಬದಲಾಯಿಸಿ]

ಹಂ ಪ ನಾಗರಾಜಯ್ಯನವರು ಮಂಡ್ಯ, ಗೌರಿಬಿದನೂರು, ಮಧುಗಿರಿ, ತುಮಕೂರುಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿ ಕುವೆಂಪು, ತೀನಂಶ್ರೀ, ಡಿ. ಎಲ್‌. ನರಸಿಂಹಾಚಾರ್, ಎಸ್‌. ವಿ. ಪರಮೇಶ್ವರಭಟ್ಟ, ಕೆ. ವೆಂಕಟರಾಮಪ್ಪ, ದೇಜಗೌ ಮುಂತಾದ ಸಾಹಿತ್ಯಿಕ ದಿಗ್ಗಜಗಳ ನೆರಳಿನಲ್ಲಿ ಸ್ಫೂರ್ತಿ ಪಡೆದರು. ಮೈಸೂರು ವಿ.ವಿ ಯಿಂದ ಎಂಎ ಪದವಿಯನ್ನೂ, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿ.ವಿ ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದರು.

ವೃತ್ತಿ[ಬದಲಾಯಿಸಿ]

೧೯೫೯ರಿಂದ ೧೯೭೦ರವರೆಗೆ ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮಂಡ್ಯ, ದಾವಣಗೆರೆ, ಬೆಂಗಳೂರಿನ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ವಿಷಯವನ್ನು ಬೋಧಿಸಿದ ಇವರು ೧೯೭೦ರಿಂದ ೧೯೯೬ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡು ಸ್ನಾತಕೋತ್ತರರಿಗೆ ಬೋಧಿಸಿದರು. ಬೆಂಗಳೂರು ವಿವಿಯಲ್ಲಿರುವಾಗಲೇ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಪ್ರವೃತ್ತಿ[ಬದಲಾಯಿಸಿ]

ಸಾರ್ಥಕ ಜೀವನ[ಬದಲಾಯಿಸಿ]

  • ಅವರ ಪತ್ನಿ ಕಮಲಾ ಹಂಪನಾ ಅವರೂ ಸಾಹಿತ್ಯವೇತ್ತರು, ಉತ್ತಮ ವಾಗ್ಮಿಗಳು ಹಾಗೂ ನಾಡೋಜ ಪ್ರಶಸ್ತಿಗೆ ಭಾಜನರಾದವರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಹಂಪನಾ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ಅವಿರತವಾಗಿ ದುಡಿದಿದ್ದಾರೆ. ಕನ್ನಡದ ಮಹಾನ್ ಶಿಕ್ಷಕ ಪರಂಪರೆಯನ್ನು ಪೋಷಿಸಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸಿದ ಹಿರಿಮೆ ಇವರದು. ಯಾವುದೇ ಲಾಬಿಗಳನ್ನು ಒಣಸಿದ್ಧಾಂತಗಳನ್ನು ಎಂದೂ ತಮ್ಮ ವಿದ್ಯಾರ್ಥಿಗಳ ಮೇಲೆ ಹೇರಿದವರಲ್ಲ.
  • ನಾಗೇಂದ್ರಪ್ಪ ದಾಗಿನಕಟ್ಟೆ ಹಾಗೂ ಬಾಳೇಶ ಲಕ್ಸೆಟ್ಟಿ ಅವರು ಪ್ರತ್ಯೇಕವಾಗಿ ಹಂಪನಾ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ. ಹಂಪನಾ ಕೃತಿಗಳ ಅಧ್ಯಯನವನ್ನು ಸಂಶೋಧನಾ ವಿಷಯವನ್ನಾಗಿ ತೆಗೆದುಕೊಂಡು ಕಲಬುರ್ಗಿ ವಿವಿಯಲ್ಲಿ ಡಾ ಚೆನ್ನಣ್ಣ ವಾಲೀಕಾರ ಅವರ ಮಾರ್ಗದರ್ಶನದಲ್ಲಿ ಡಾ. ನಾಗಪ್ಪ ಚಲವಾದಿಯವರು ಡಾಕ್ಟರೆಟ್ ಪಡೆದಿದ್ದಾರೆ.
  • ಹಂಪನಾ ಅವರು ವಿಶೇಷವಾಗಿ ಅವರು ಶ್ರಮಣ ಪರಂಪರೆಯನ್ನು ಕನ್ನಡಿಗರ ಮುಂದೆ ತೆರೆದಿಟ್ಟರು. ಅದಕ್ಕಾಗಿ ಅವರು ಪಾಲಿ ಪ್ರಾಕೃತಗಳ ಮೂಲಕ ನಮ್ಮ ದೇಶದ ಪ್ರಾಚೀನ ಲೋಕದರ್ಶನವನ್ನು ಮಾಡಿಸಿದ್ದಾರೆ. ಕನ್ನಡ ನಾಡಿನಲ್ಲೇ ಅತ್ಯಂತ ಒಳಹುನ್ನಾರದ ಭಾಗವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಅಳಿಸಿಹಾಕಿದ್ದ ಒಂದು ಧಾರ್ಮಿಕ ಪರಂಪರೆಯ ಕುರಿತಾದ ಮಾಹಿತಿಯನ್ನು ಸದ್ದಿಲ್ಲದೆ ತುಂಬಿ ಕೊಡುತ್ತಾ ಬಂದಿದ್ದಾರೆ.
  • ಭಾವಹಿಂಸೆಯೂ ಪಾಪ ಎಂಬ ಪರಂಪರೆಯ ಹಂಪನಾ ಎಂದೂ ಯಾರನ್ನೂ ಕಟುವಾಗಿ ಮಾತನಾಡಿ ನೋಯಿಸಿದವರಲ್ಲ. ಒಟ್ಟಿನಲ್ಲಿ ನಾಡೋಜ ಹಂಪನಾ ಅವರು ಸೃಜನಶೀಲತೆ, ವಿದ್ವತ್ತು, ಸಂಶೋಧನೆ ಮತ್ತು ಭಾಷಾವಿಜ್ಞಾನದ ಅಪಾರ ತಿಳಿವಳಿಕೆಯೊಂದಿಗೆ ಆಡಳಿತಾತ್ಮಕ ಪರಿಣತಿಯೂ ಉಳ್ಳ ಅಪರೂಪದ ವಿದ್ವಾಂಸ.

ಕೃತಿಗಳು[ಬದಲಾಯಿಸಿ]

ಸರಸ್ವತಿಯ ಔರಸಪುತ್ರರೋ ಎಂಬಂತೆ ಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಇವರ ಲೇಖನಿಯಿಂದ ೧೧೫ ಪುಸ್ತಕಗಳು ಪ್ರಕಟವಾಗಿದೆ. ಅವನ್ನು ವಿಷಯವಾರು ರೀತ್ಯಾ ವರ್ಗೀಕರಿಸಬಹುದಾದರೆ

  1. ಭಾಷಾವಿಜ್ಞಾನ(೬),
  2. ಸಂಶೋಧನೆ(೧೩),
  3. ಮಹಾಕಾವ್ಯ(ಚಾರುವಸಂತ),
  4. ಗ್ರಂಥಸಂಪಾದನೆ(೧೫),
  5. ಜಾನಪದ(೫),
  6. ಅನುವಾದ(೪),
  7. ಜೀವನಚರಿತ್ರೆ(೮),
  8. ಶಿಶುಸಾಹಿತ್ಯ(೬),
  9. ವಿಮರ್ಶೆ(೨),
  10. ಕಾದಂಬರಿ(ನಾಗಶ್ರೀ, ಸವ್ಯಸಾಚಿ ಪಂಪ),
  11. ಪ್ರಬಂಧ ಸಂಕಲನ(೨),
  12. ಪ್ರಚಾರೋಪನ್ಯಾಸ ಮಾಲೆ(೪),
  13. ಸಂಪಾದಿತ (೧೧) ಎಂದು ಪಟ್ಟಿ ಮಾಡಬಹುದು. ಇವಿಷ್ಟು ಕನ್ನಡ ಪುಸ್ತಕಗಳಲ್ಲದೆ ಇವರು ಇಂಗ್ಲಿಷಿನಲ್ಲಿಯೂ ಇಪ್ಪತ್ತು ಮೌಲಿಕ ಪುಸ್ತಕಗಳನ್ನು ಹೊರತಂದಿದ್ದಾರೆ.

ಸಂಭಾವನಾ ಗ್ರಂಥಗಳು[ಬದಲಾಯಿಸಿ]

  1. ಪಚ್ಚೆತೆನೆ – ೧೯೮೩ರಲ್ಲಿ ಸಂ: ಟಿ ಕೆ ಮಹಮೂದ್ ಮತ್ತು ಶಾ ಮಂ ಕೃಷ್ಣರಾಯ
  2. ಸಂಕೃತಿ – ೧೯೮೮ರಲ್ಲಿ ಸಂ: ಡಾ ಎಚ್ ಜೆ ಲಕ್ಕಪ್ಪಗೌಡ ಮತ್ತು ಪ್ರೊ. ಸುಕನ್ಯಾ ಮಾರುತಿ
  3. ಸಂಕರ್ಷಣ – ೧೯೮೮ರಲ್ಲಿ ಸಂ: ಜೆ ಜ್ಞಾನಾನಂದ ಮತ್ತು ಡಾ. ಸಂಜೀವ ಕೆ ಶೆಟ್ಟಿ
  4. ಬರಹ ಬಾಗಿನ – ೧೯೯೬ ಸಂ: ಎಚ್ ವಿ ನಾಗೇಶ್
  5. ಹಂಗ್ರಂಥಾವಳಿ – ೧೯೯೭ ಸಂ: ಸ್ಮಿತಾರೆಡ್ಡಿ ಮತ್ತು ತಮಿಳ್ ಸೆಲ್ವಿ
  6. ಹಂಪನಾ ವಾಙ್ಮಯ – ೨೦೦೭ ಸಂ: ಡಾ. ಎಂ ಭೈರೇಗೌಡ ಮತ್ತು ಬಿ ಆರ್ ಸತ್ಯನಾರಾಯಣ

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಹಂಪನಾ ಅವರಿಗೆಕನ್ನಡ ವಿಶ್ವವಿದ್ಯಾಲಯವು ೨೦೦೬ರಲ್ಲಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.[೨] ಅಲ್ಲದೆ ಅವರನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

  1. ೧೯೯೩-೯೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
  2. ೧೯೯೫ರ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ,
  3. ಶಿಶುಸಾಹಿತ್ಯಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ ೧೯೯೦ರಲ್ಲಿ,
  4. ೧೯೯೬ರಲ್ಲಿ ಚಾವುಂಡರಾಯ ಪ್ರಶಸ್ತಿ,
  5. ೧೯೯೭ರಲ್ಲಿ ಕಾವ್ಯಾನಂದ ಪ್ರಶಸ್ತಿ,
  6. ೧೯೯೮ರಲ್ಲಿ ರಾಜ್ಯೋತ್ಸವ ಪ್ರಶಸ್ತಿ,
  7. ೨೦೦೧ರಲ್ಲಿ ಶಾಸನ ಸಾಹಿತ್ಯ ಪ್ರಶಸ್ತಿ,
  8. ಅತ್ತಿಮಬ್ಬೆ ಪ್ರತಿಷ್ಠಾನಚಿ ನಾ ಮಂಗಳ ಪ್ರಶಸ್ತಿ,

ಉಲ್ಲೇಖಗಳು[ಬದಲಾಯಿಸಿ]

  1. "Hampana". Jain world. Archived from the original on ಸೆಪ್ಟೆಂಬರ್ 26, 2007. Retrieved June 26, 2007.
  2. "Nadoja for Kinhanna Rai, Sarojini Mahishi, Ham. Pa. Na., two others". The Hindu. November 26, 2006. Archived from the original on ಜುಲೈ 7, 2007. Retrieved December 15, 2010.