ಸಾಲಿಗ್ರಾಮ ಮೇಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ
ಸಂಸ್ಥೆಯ ಪ್ರಕಾರಡೇರೆ ಮೇಳ
ಸ್ಥಾಪನೆ೧೯೬೮
ಸಂಸ್ಥಾಪಕ(ರು)ಪಾರಂಪಳ್ಳಿ ಶ್ರೀಧರ ಹಂದೆ
ಮುಖ್ಯ ಕಾರ್ಯಾಲಯಸಾಲಿಗ್ರಾಮ,ಉಡುಪಿ
ಪ್ರಮುಖ ವ್ಯಕ್ತಿ(ಗಳು)ಪಳ್ಳಿ ಕಿಶನ್ ಹೆಗ್ಡೆ
ಉದ್ಯಮಯಕ್ಷಗಾನ
ಸಾಲಿಗ್ರಾಮದ ಗ್ರಾಮದೇವತೆ ನರಸಿಂಹ ದೇವರ ಚಿತ್ರ

ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ (ಶ್ರೀ ಸಾಲಿಗ್ರಾಮ ಮೇಳ ಎಂದು ಪ್ರಸಿದ್ಧ) ಯಕ್ಷಗಾನದ ಡೇರೆ ಮೇಳಗಳ ವಿಭಾಗದಲ್ಲಿ ಸುದೀರ್ಘ ಇತಿಹಾಸವುಳ್ಳ, ವೃತ್ತಿಪರ ಕಲಾವಿದರನ್ನೊಳಗೊಂಡ ಒಂದು ಯಕ್ಷಗಾನ ಕಲಾತಂಡ (ಸ್ಥಳೀಯವಾಗಿ ಮೇಳ ಎಂದೇ ಕರೆಯಲಾಗುತ್ತದೆ). ಇದು ಬಡಗು ತಿಟ್ಟಿನ ಪ್ರಥಮ ಡೇರೆ ಮೇಳ ಎಂದು ಗುರುತಿಸಲ್ಪಟ್ಟಿದೆ.

ಇತಿಹಾಸ[ಬದಲಾಯಿಸಿ]

೧೯೬೮ ನೇ ಇಸವಿಯಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುರುನರಸಿಂಹ ದೇವರ ಹೆಸರಿನಲ್ಲಿ ಪಾರಂಪಳ್ಳಿ ಶ್ರೀಧರ ಹಂದೆಯವರು ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿಯನ್ನು ಪ್ರಾರಂಭಿಸಿದರು. ಆದರೆ ಮೇಳದ ನಿರ್ವಹಣಾ ವೆಚ್ಚವನ್ನು ಭರಿಸಲು ಅಸಾಧ್ಯವಾದ ಕಾರಣದಿಂದಾಗಿ, ಮೇಳ ಸ್ಥಾಪನೆಯಾದ ಮರುವರ್ಷವೇ ಹಂದೆಯವರು ಮೇಳದ ಮೇಲಿನ ತನ್ನ ಮಾಲಿಕತ್ವವನ್ನು, ಖಾಸಗಿ ಸಾರಿಗೆ ಬಸ್ಸುಗಳು ಮತ್ತು ಲಾರಿ ಸಂಸ್ಥೆಯ ಮಾಲಿಕರಾದ ಪಳ್ಳಿ ಸೋಮನಾಥ ಹೆಗ್ಡೆಯವರಿಗೆ ಹಸ್ತಾಂತರಿಸಿದರು. ಸೋಮನಾಥ ಹೆಗ್ಡೆಯವರು ಸುಮಾರು ೧೭ ವರ್ಷಗಳ ಕಾಲ ಮೇಳವನ್ನು ನಿರ್ವಹಿಸಿದರು. ಸೋಮನಾಥ ಹೆಗ್ಡೆಯವರ ಮರಣಾನಂತರ ಅವರ ಮಗ ಪಳ್ಳಿ ಕಿಶನ್ ಹೆಗ್ಡೆ ಮೇಳದ ಆಡಳಿತವನ್ನು ವಹಿಸಿಕೊಂಡರು. ಪ್ರಸ್ತುತ ಪಳ್ಳಿ ಕಿಶನ್ ಹೆಗ್ಡೆಯವರ ಮಾಲಿಕತ್ವದಲ್ಲಿ ಮೇಳ ನಡೆಯುತ್ತಿದೆ.[೧]

ಪ್ರಸ್ತುತ ಸಾಲಿಗ್ರಾಮ ಮೇಳವು, ಬಯಲಾಟ(ವ್ಯಕ್ತಿ, ಕುಟುಂಬ ಅಥವಾ ಸಂಘ-ಸಂಸ್ಥೆ ಪ್ರಾಯೋಜಿತ) ಮತ್ತು ಟೆಂಟ್(ಟಿಕೇಟು ಖರೀದಿಸಿ ಪ್ರದರ್ಶನವನ್ನು ವೀಕ್ಷಿಸುವುದು)- ಈ ಎರಡೂ ವಿಭಾಗದಲ್ಲಿ ಕಲಾ ಪ್ರದರ್ಶನವನ್ನು ನೀಡುತ್ತಿದೆ. ಸದ್ಯ, ಟೆಂಟ್ ಮತ್ತು ಬಯಲಾಟ- ಎರಡೂ ವಿಭಾಗದಲ್ಲಿ ಯಶಸ್ವಿಯಾಗಿ ಕಲಾಪ್ರದರ್ಶನ ನೀಡುತ್ತಿರುವ ಯಕ್ಷಗಾನ ಮೇಳಗಳು ಎರಡು ಮಾತ್ರ. ಒಂದು- ಶ್ರೀ ಅನ೦ತಪದ್ಮನಾಭ ಯಕ್ಷಗಾನ ಮ೦ಡಳಿ-ಪೆರ್ಡೂರು, ಮತ್ತೊಂದು ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ.

ಕೆಲವು ಪ್ರಸಿದ್ಧ ಕಥಾನಕಗಳು[ಬದಲಾಯಿಸಿ]

  1. ಸಮಗ್ರ ಭೀ‍ಷ್ಮ
  2. ಬೇಡರ ಕಣ್ಣಪ್ಪ
  3. ಮೃಚ್ಛಕಟಿಕ
  4. ನಾಗಶ್ರೀ
  5. ಈಶ್ವರಿ ಪರಮೇಶ್ವರಿ
  6. ಮಹಾಸತಿ ಮಂಗಳ
  7. ವೀರ ವಜ್ರಾಂಗ
  8. ಮೇಘ ಮಯೂರಿ
  9. ಚಂದ್ರಮುಖಿ ಸೂರ್ಯಸಖಿ


ಯಕ್ಷಗಾನದ ಯುಗಪ್ರವರ್ತಕ ಕಾಳಿಂಗ ನಾವಡ[ಬದಲಾಯಿಸಿ]

ಯಕ್ಷಗಾನ ಭಾಗವತಿಕೆಗೊಂದು ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಕಾಳಿಂಗ ನಾವಡರು 1978ರಲ್ಲಿ ಕಾಳಿಂಗ ನಾವಡರು ಸಾಲಿಗ್ರಾಮ ಮೇಳದ ಭಾಗವತರಾಗಿ ಸೇರ್ಪಡೆಗೊಂಡು ಸಾಲಿಗ್ರಾಮ ಮೇಳದಲ್ಲಿಯೇ ಖ್ಯಾತಿಯ ಉತ್ತುಂಗಕ್ಕೇರಿದರು. ನಾವಡರ 'ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.........', 'ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ......' ಮುಂತಾದ ಪದ್ಯಗಳನ್ನು ಕೇಳಿದಾಗ ಇಂದಿಗೂ ಮೈ ನವಿರೇಳುತ್ತದೆ. ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ನಾವುಡರು 'ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ' ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. 1990ರಲ್ಲಿ ಕರ್ನಾಟಕ ಸರಕಾರ ಮರಣೋತ್ತರವಾಗಿ 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಹಾಗೆಯೇ ಯಕ್ಷಕಲಾರಸಿಕರಿಂದ 'ಕರಾವಳಿ ಕೋಗಿಲೆ', 'ರಸರಾಗ ಚಕ್ರವರ್ತಿ' ಮುಂತಾದ ಬಿರುದುಗಳು, ಸನ್ಮಾನಗಳು, ಪ್ರಶಸ್ತಿಗಳು ನಾವಡರಿಗೆ ಸಂದಿವೆ.

ಮೇ ೨೭ ೧೯೯೦ ನೇ ಇಸವಿಯಲ್ಲಿ ೩೨ರ ಹರೆಯದ ತರುಣ ಕಾಳಿಂಗ ನಾವಡ ರಸ್ತೆ ಅಪಘಾತಕ್ಕೆ ಬಲಿಯಾಗಿ ಅಸ್ತಂಗತರಾದರು

ಪ್ರಥಮ ಡೇರೆ ಆಟ[ಬದಲಾಯಿಸಿ]

ಸಾಲಿಗ್ರಾಮದ ಪ್ರಥಮ ದೇವರಸೇವೆಯ ಮರುದಿನ ಪ್ರಥಮ ಡೇರೆ ಮೇಳದ ಆಟ ಪ್ರತಿ ವರ್ಷವೂ ಶಿರಿಯಾರದಲ್ಲಿ ನಡೆಯುತ್ತದೆ.

ತಿರುಗಾಟದ ಕೊನೆಯ ಆಟ[ಬದಲಾಯಿಸಿ]

ಮೇಳದ ಪ್ರಥಮ ಜಾತ್ರೆ ಆಟ ಕೋಟೇಶ್ವರ ಜಾತ್ರೆಯಲ್ಲೂ ಕೊನೆಯ ಜಾತ್ರೆ ಆಟ ಪಾದೆಮಠದಲ್ಲೂ ಸಾಂಪ್ರದಾಯಿಕವಾಗಿ ನಡೆದು ಬಂದಿದೆ

ಕಲಾವಿದನ ಹೆಸರಿನಲ್ಲಿ ಪ್ರಶಸ್ತಿ[ಬದಲಾಯಿಸಿ]

ಯಕ್ಷಗಾನ ತಿರುಗಾಟದ ಆರಂಭದಲ್ಲಿ ಶಿರೂರಿನಲ್ಲಿ ನಡೆಯುವ ಪ್ರಥಮ ಆಟದಲ್ಲಿ ಕಲಾವಿದ ಶಿರಿಯಾರ ಮಂಜು ನಾಯ್ಕ ಇವರ ಹೆಸರಿನಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ

ಉಲ್ಲೇಖಗಳು[ಬದಲಾಯಿಸಿ]

  1. "Saligrama Yakshagana mela gets ready for golden jubilee tour". thehindu.com. The Hindu. Retrieved 11 January 2021.