ಸನಾದಿ ಅಪ್ಪಣ್ಣ(ಶಹನಾಯ್ ವಾದಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸನಾದಿ ಅಪ್ಪಣ್ಣ(೧೮೭೬-೧೯೪೫) ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿ ಜನಿಸಿದ ಒಬ್ಬ ಶಹನಾಯ್ ಕಲಾವಿದ. ಕೊರವರ ಕುಟುಂಬಕ್ಕೆ ಸೇರಿದ ಅಪ್ಪಣ್ಣ ತಮ್ಮ ಕುಲಕಸುಬಾದ ಶಹನಾಯ್ ವಾದನವನ್ನೇ ಮುಂದುವರಿಸಿ, ಆ ಕ್ಷೇತ್ರದಲ್ಲಿ ಉನ್ನತವಾದ ಸಾಧನೆಯನ್ನು ಮಾಡಿ, ವಿವಿಧ ಪ್ರಾಂತ್ಯಗಳ ಮಹಾರಾಜರುಗಳಿಂದ ಮೆಚ್ಚುಗೆ ಗಳಿಸಿದರು[೧].

ಜನನ[ಬದಲಾಯಿಸಿ]

ಅಪ್ಪಣ್ಣನವರು ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿ ೧೮೭೬ರಲ್ಲಿ ಜನಿಸಿದರು. ತಂದೆ ಸಾಬಣ್ಣ ವಾಲಗದ, ತಾಯಿ ಹನುಮವ್ವ. ಅಪ್ಪಣ್ಣ ಅವರ ಹೆಂಡತಿ ಪೀರವ್ವ, ಸೋದರ ಬಾಬಣ್ಣ. ಅಪ್ಪಣ್ಣನವರು ಹುಟ್ಟಿದಾಗ ಅವರ ಕುಟುಂಬ ಸ್ಥಿತಿವಂತವಾಗಿಯೇ ಇತ್ತು. ಸರಕಾರದ ಕಡೆಯಿಂದ ದೊರೆತ ಉಂಬಳಿ ಸಾಕಷ್ಟಿತ್ತು[೧].

ಸಂಗೀತಾಭ್ಯಾಸ[ಬದಲಾಯಿಸಿ]

ಕೊರವರ ಕುಟುಂಬಕ್ಕೆ ಸೇರಿದ ಅಪ್ಪಣ್ಣ ಮತ್ತು ಸೋದರ ಬಾಬಣ್ಣ ಇಬ್ಬರೂ ಶಹನಾಯ್ ಅಭಾಸವನ್ನು ಆರಂಭಿಸಿದರು. ಆದರೆ ಅಪ್ಪಣ್ಣನವರಿಗೆ ಒಲಿದ ಶಹನಾಯ್ ವಿದ್ಯೆ ಸೋದರ ಬಾಬಣ್ಣನವರಿಗೆ ಒಲಿಯದೆ, ಅದನ್ನು ಕೈಬಿಡಬೇಕಾಯಿತು. ಬಾಬಣ್ಣ, ತನ್ನ ಸಹೋದರ ಅಪ್ಪಣ್ಣನಿಗೆ ಪ್ರೋತ್ಸಾಹ ನೀಡಿದರು. ಅಪ್ಪಣ್ಣ ಪ್ರತೀದಿನ ನಸುಕಿನಲ್ಲಿ ಸಂಜೆಯಲ್ಲಿ ಗ್ರಾಮದ ದುರ್ಗಾ ಮಂದಿರ ಮತ್ತು ಶಿವಯೋಗಿ ಸಿದ್ಧರಾಮ ಮಂದಿರಕ್ಕೆ ತೆರಳಿ ಶಹನಾಯ್ ಅಭ್ಯಾಸ ಮಾಡುತ್ತಿದ್ದರು.

ಆರಂಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಅಪ್ಪಣ್ಣ ಅವರು ಮೀರಜ್‌ನಲ್ಲಿ ಪ್ರತೀವರ್ಷ ನಡೆಯುತ್ತಿದ್ದ ಸಂತ ಮೀರ್‌ಸಾಬ್ ಉರುಸಿನಲ್ಲಿ ಒಮ್ಮೆ ಉಸ್ತಾದ್ ಕರೀಮ್ ಖಾನ್ ಅವರ ಸಂಪರ್ಕಕ್ಕೆ ಬಂದರು. ಅವರ ಹತ್ತಿರ ಅಪ್ಪಣ್ಣ ಹಿಂದೂಸ್ತಾನೀ ಸಂಗೀತವನ್ನು ಕಲಿತರು ಮತ್ತು ಶಹನಾಯ್‌ಯಲ್ಲಿ ತಮ್ಮ ಸಾಧನೆಯನ್ನು ಮುಂದುವರಿಸಿದರು[೧].

ಸಾಧನೆ[ಬದಲಾಯಿಸಿ]

ಕಠಿಣ ತರಬೇತಿ ಮತ್ತು ಪರಿಶ್ರಮದಿಂದ ಸನಾದಿ ನುಡಿಸುವುದರಲ್ಲಿ ಸಾಮರ್ಥ್ಯ ಪಡೆದರು. ನಂತರ ಅಪ್ಪಣ್ಣ ಅವರ ಕೀರ್ತಿ ದೇಶದಾದ್ಯಂತ ಹರಡಿತು. ಕರ್ನಾಟಕ ರಾಜ್ಯ ಮಾತ್ರವಲ್ಲ, ಪಕ್ಕದ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ, ಸೋಲಾಪುರ, ಕಾಳಹಸ್ತಿಯ ಶ್ರೀಮಂತ ಸಂಗೀತ ಪ್ರೇಮಿಗಳು, ಮಹಾರಾಜರು ಅಪ್ಪಣ್ಣರಿಗಾಗಿ ಸಂಗೀತ ಕಛೇರಿಯನ್ನು ಏರ್ಪಡಿಸಿ, ಅವರ ಸನಾದಿಯ ನುಡಿಸುವಿಕೆಯನ್ನು ಕೇಳಿ ಸಂತಸ ಹೊಂದುತ್ತಿದ್ದರು.

ಸ್ವಾತಂತ್ರ್ಯಪೂರ್ವದಲ್ಲಿ ವಾಹನದ ಸೌಕರ್ಯ ಇಲ್ಲದ ಕಾರಣ ಅಪ್ಪಣ್ಣ, ರಸಿಕರು ಕರೆದಲ್ಲಿಗೆ ತಮ್ಮ ಕುದುರೆಯನ್ನು ಏರಿ ಹೊರಟುಬಿಡುತ್ತಿದ್ದರು[೧].

ಸ್ವಾರಸ್ಯಕರ ಪ್ರಸಂಗಗಳು[ಬದಲಾಯಿಸಿ]

ರಾಜ ಮಹಾರಾಜರುಗಳ ಆಸ್ಥಾನದಲ್ಲಿ ಸಂಗೀತ ಕಛೇರಿ ನಡೆಸಿದಾಗ ಅಲ್ಲಿ ಮಣಗಟ್ಟಲೆ ಬೆಳ್ಳಿ ಬಂಗಾರಗಳನ್ನು ಮಹಾರಾಜರು ಕೊಡುತ್ತಿದ್ದರು. ಆದರೆ ಅಪ್ಪಣ್ಣ ಅವನ್ನೆಲ್ಲಾ ಅವರಿಗೆ ಮರಳಿಸಿ, ತಮಗೆ ಅಗತ್ಯಕ್ಕೆ ಬೇಕಾದಷ್ಟು ದವಸ ಧಾನ್ಯಗಳನ್ನು ಮಾತ್ರ ಪಡೆದು ಅಲ್ಲಿಂದ ಹೊರಡುತ್ತಿದ್ದರು.

  • ಸ್ವಾಭಿಮಾನ, ಆತ್ಮಗೌರವಕ್ಕೆ ಚ್ಯುತಿಬರುವ ಯಾವುದೇ ಮಾತು, ಕೃತಿಗಳನ್ನು ಅಪ್ಪಣ್ಣನವರು ಸಹಿಸುತ್ತಿರಲಿಲ್ಲ. ಒಮ್ಮೆ ಕೊಲ್ಲಾಪುರದ ಮಹಾರಾಜರು ಅಪ್ಪಣ್ಣನವರನ್ನು ಶಹನಾಯ್ ಕಛೇರಿ ನೀಡಲು ಆಹ್ವಾನಿಸಿದ್ದರು. ಅದೇ ಸಮಯದಲ್ಲಿ ಊರಿನಲ್ಲಿದ್ದ ಒಬ್ಬ ಧನಿಕನ ಮನೆಯಲ್ಲಿ ಕಾರ್ಯಕ್ರಮ ಏರ್ಪಾಟಾಗಿತ್ತು. ಆ ಧನಿಕ ತಮ್ಮ ಮನೆಯಲ್ಲಿ ಸಂಗೀತ ಕಛೇರಿ ನಡೆಸಿಕೊಡಲು ಅಪ್ಪಣ್ಣನವರನ್ನು ಅಹ್ವಾನಿಸಿದನು. ತಾವು ಕೊಲ್ಲಾಪುರದ ಮಹಾರಾಜರ ಅರಮನೆಗೆ ಕಛೇರಿ ಕೊಡಲು ಹೊರಟ ವಿಷಯವನ್ನು ತಿಳಿಸುತ್ತಾ ಅಪ್ಪಣ್ಣ, ಧನಿಕನ ವಿನಂತಿಯನ್ನು ನಿರಾಕರಿಸಿದರು. ಇದರಿಂದ ಕೆರಳಿದ ಧನಿಕ, ಸರ್ಕಾರದಿಂದ ನಿಮಗೆ ಬಂದಿರುವ ಉಂಬಳಿ ಜಮೀನನ್ನು ವಾಪಾಸು ಹೋಗುವಂತೆ ಮಾಡುವೆ ಎಂದು ಬೆದರಿಸಿದನು. ಇದಕ್ಕೆ ಬಗ್ಗದ ಅಪ್ಪಣ್ಣ, ಸರ್ಕಾರದ ಜಮೀನನ್ನು ನಾನು ಕಿಸೆಯಲ್ಲಿಟ್ಟುಕೊಂಡು ತಿರುಗುತ್ತಿಲ್ಲ, ನನಗೆ ನನ್ನ ಜಮೀನಿಗಿಂತ ನನ್ನ ಸನಾದಿಯನ್ನು ಪ್ರೀತಿಸುವ ಕಲಾರಾದಹಕರು ದೊಡ್ಡವರೌ ಎಂದು ಉತ್ತರಿಸಿ ಕೊಲ್ಲಾಪುರಕ್ಕೆ ಪ್ರಯಾಣ ಮುಂದುವರಿಸಿದರು.
  • ಗುಲಾಮ್ ಖಾಸಿಮ್ ಎಂಬ ಸಂಗೀತ ಕಲಾವಿದ ತನಗೆ ಎದುರಾಗಿ ಬಂದ ಕಲಾವಿದರನ್ನು ಜುಗಲ್‌ಬಂಧಿಯಲ್ಲಿ ಸೋಲಿಸಿ ಅವರಿಗೆ ಹೀನಾಯವಾಗಿ ಅವಮಾನ ಮಾಡುತ್ತಿದ್ದ. ಒಂದು ಕಛೇರಿಯಲ್ಲಿ ಆತನ ಪಟ್ಟುಗಳನ್ನು ಗಮನಿಸಿದ ಅಪ್ಪಣ್ಣ, ತನ್ನೂರಿನ ಮಠದ ಕರವೀರ ಸ್ವಾಮೀಜಿಗಳ ಹತ್ತಿರ ವಿಷಯವನ್ನು ತಿಳಿಸಿದರು. ಸ್ವತಃ ಶಾಸ್ತ್ರೀಯ ಸಂಗೀತ ಪರಿಣತರಾದ ಸ್ವಾಮೀಜಿಗಳು ಅಪ್ಪಣ್ಣನವರ ಜೊತೆಗೆ ತಬಲಾ ಮತ್ತು ಶಹನಾಯ್ ಜುಗಲ್‌ಬಂಧಿ ನುಡಿಸಿ ಕೆಲವು ಪಟ್ಟುಗಳನ್ನು ಹೇಳಿಕೊಟ್ಟು, ಹರಸಿ ಕಳಿಸಿದರು. ಮಹಾಲಿಂಗ ಪುರದ ಮುಧೋಳದ ಘೋರ್ಪಡೆ ಮಹಾರಾಜರ ಎದುರಿನಲ್ಲಿ ಕಾಸೀಮ್ ಮತ್ತು ಅಪ್ಪಣ್ಣನವರ ನಡುವೆ ಜುಗಲ್‌ಬಂಧಿ ನಡೆಯಿತು. ಈ ಕಛೇರಿಯಲ್ಲಿ ಅಪ್ಪಣ್ಣನವರು ಕಾಸೀಮನನ್ನು ಸೋಲಿಸಿದರು. ಇದರಿಂದ ಸಂತಸಗೊಂಡ ಮಹಾರಾಜರು ಏನು ಬೇಕು ಎಂದು ಅಪ್ಪಣ್ಣನವರನ್ನು ಕೇಳಿದಾಗ, ಊರಿನ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ನೀವು ಬಂದು ತೆಂಗಿನ ಕಾಯಿ ಒಡೆದ ಮೇಲೆಯೇ ಮಹಾಲಿಂಗೇಶ್ವರನ ತೇರು ಮುಂದೆ ಸಾಗಬೇಕು ಎಂದು ಕೇಳಿಕೊಂಡರು.

ಇದಕ್ಕೆ ಮಹಾರಾಜರು ಒಪ್ಪಿದರು ಮತ್ತು ಅಪ್ಪಣ್ಣನವರಿಗೆ ಶಹನಾಯ್ ಸಾಮ್ರಾಟ್ ಎಂಬ ಬಿರುದು ನೀಡಿ ಗೌರವಿಸಿದರು. ಇಂದಿಗೂ ಸಹ ಬಿಳಗಿಯಲ್ಲಿ ಮಹಾರಾಜರ ಸಂತತಿಯವರು ಬಂದು ಮೊದಲು ತೆಂಗಿನಕಾಯಿ ಒಡೆದ ಮೇಲೆಯೆ ಮಹಾಲಿಂಗೇಶ್ವರನ ತೇರು ಮುಂದೆ ಸಾಗುತ್ತದೆ[೧].

ಮರಣ[ಬದಲಾಯಿಸಿ]

ಸಂಗೀತ ಕಲಾವಿದರಾಗಿ ದೇಶದಾದ್ಯಂತ ಖ್ಯಾತಿ ಗಳಿಸಿದ್ದರೂ ಅಪ್ಪಣ್ಣನವರು ತಮ್ಮ ಅಂತಿಮ ದಿನಗಳನ್ನು ತೀರಾ ದುಃಖದಲ್ಲಿ ಕಳೆಯಬೇಕಾಯಿತು. ಓದಿ ವಿದ್ಯಾವಂತನಾದ ಮಗ ತನ್ನ ತಂದೆಯನ್ನು, ತಂದೆಯ ಶಹನಾಯ್‌ಯನ್ನಿ ಕೀಳಾಗಿ ನೋಡಿದನು. ಅದೇ ಕಾಲಕ್ಕೆ ಅಪ್ಪಣ್ಣನವರ ಧರ್ಮಪತ್ನಿ ಪೀರವ್ವ ಅಕಾಲಿಕ ಮರಣಕ್ಕೆ ತುತ್ತಾದರು. ಇವೆಲ್ಲವುಗಳಿಂದ ನೊಂದು, ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಒಮ್ಮೆ ಹತ್ತಿರದ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಒಂದು ಲಾರಿ ಅಪ್ಪಣ್ಣ ಅವರ ಮೇಲೆ ಹರಿದು, ಸೆಪ್ಟೆಂಬರ್ ೬, ೧೯೪೫ರಲ್ಲಿ ಮರಣ ಹೊಂದಿದರು[೧].

ನೆನಪಿಡುವ ಕಾರ್ಯ[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

ಚಲನಚಿತ್ರ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ "ಸನಾದಿ ಅಪ್ಪಣ್ಣ". nammamudhol.com. ನಮ್ಮ ಮುಧೋಳ. Retrieved 15 March 2023.