ಸದಸ್ಯ:Rajeshwari Belal/ನನ್ನ ಪ್ರಯೋಗಪುಟ 3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಿಕೋದ್ಯಮಿ ಡಾ. ವಿಜಯಾ[ಬದಲಾಯಿಸಿ]

ಆರಂಭಿಕ ಜೀವನ[ಬದಲಾಯಿಸಿ]

ಡಾ. ವಿಜಯಾರವರು 1942ರ ಮಾರ್ಚ್ 10 ರಂದು ದಾವಣಗೆರೆಯಲ್ಲಿ ಹೋಳಿ ಹುಣ್ಣಿಮೆಯಂದು ಜನಿಸಿದರು. ಇವರ ತಂದೆ ಶಾಮಣ್ಣ ಮತ್ತು ತಾಯಿ ಸರೋಜ. ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾ ಚಳವಳಿ ಮುಂತಾದ ಚಳವಳಿಯಲ್ಲಿ ಕ್ರೀಯಾಶೀಲರಾಗಿ ತೊಡಗಿಕೋಳ್ಳುವ ದಿಟ್ಟ ಮಹಿಳೆ ಡಾ. ವಿಜಯಾ.

ವಿಜಯ ಅವರ ಪ್ರಾರಂಭಿಕ ಶಿಕ್ಷಣ ನೆರವೇರಿದ್ದು ದಾವಣಗೆರೆ ಹಾಗೂ ಹೊಸ ಪೇಟೆಯ ಅಮರಾವತಿಗಳಲ್ಲಿ. ನಂತರ ಬೆಂಗಳೂರಿನಲ್ಲಿ ಬಿ.ಎ ಪದವಿ ಹಾಗೂ ಶ್ರೀರಂಗರ ನಾಟಕಗಳು: ಒಂದು ಅಧ್ಯಯನ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿ ಪಡೆದರು.

ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ವಿಜಯಾ ತನ್ನ ಹದಿನಾರರ ಹರೆಯದಲ್ಲಿಯೇ ವಿವಾಹ ಬಂಧನಕ್ಕೊಳಗಾದರೂ ಕುಟುಂಬದ ಕರ್ತವ್ಯಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಅರ್ಥಪೂರ್ಣ ಬದುಕನ್ನು ತಮ್ಮದಾಗಿಸಿಕೊಳ್ಳುವ ಛಲದಿಂದ ಸಾಧನೆಯಲ್ಲಿ ತೊಡಗಿಕೊಂಡು ವಿವಾಹದ ನಂತರವೇ ಅವರು ಪದವಿ ಮತ್ತು ಡಾಕ್ಟರೇಟ್‍ಗಳನ್ನು ಪಡೆದರು.

ಬಿ.ಎ. ಓದುವ ದಿನಗಳಲ್ಲಿ ವಿಜಯಾವರವರಿಗೆ ಕಿ.ರಂ., ಸಾ.ಶಿ. ಮರುಳಯ್ಯ ಮುಂತಾದ ದಿಗ್ಗಜರು ಗುರುಗಳಾಗಿದ್ದರು. ಹೀಗಾಗಿ ಅವರಲ್ಲಿ ಸಾಹಿತ್ಯಾಸಕ್ತಿ ಮತ್ತು ಬರವಣಿಗೆಯ ಆಸಕ್ತಿಯು ಬೆಳೆದಿತ್ತು. ಇವುಗಳೊಂದಿಗೆ ಕಲಾಮಂದಿರದ ಒಡನಾಟದಿಂದ ರಂಗಭೂಮಿಯ ಸಂಪರ್ಕವೂ ಹೆಚ್ಚಾಗಿತ್ತು. ಈ ನಡುವೆ ಅವರು ಬದುಕಿನ ಅನಿವಾರ್ಯತೆಗಳನ್ನು ನಿರ್ವಹಿಸುವುದಕ್ಕಾಗಿ ಕೆಲವು ಕಾಲ ಐ.ಟಿ.ಐ ಕಾರ್ಖಾನೆಯಲ್ಲಿ ಉದ್ಯೋಗ ನಿರ್ವಹಿಸಿದ್ದು ಇದೆ.

ವೃತ್ತಿ[ಬದಲಾಯಿಸಿ]

1968ರಲ್ಲಿ ಪತ್ರಕರ್ತೆಯಾಗಿ ಡಾ. ವಿಜಯಾ ಅವರು ಪ್ರಜಾಮತ ಪತ್ರಿಕೆಯಲ್ಲಿ ಪತ್ರಿಕೋದ್ಯಮಿಯಾಗಿ ವೃತ್ತಿ ಪ್ರಾರಂಭಿಸಿದರು. ನಂತರ ಮಲ್ಲಿಗೆ, ತುಷಾರ, ರೂಪತಾರ ಪತ್ರಿಕೆಗಳ ಸಹಾಯಕ ಸಂಪಾದಕೀಯಾಗಿ ಜವಾಬ್ದಾರಿ ಹೊತ್ತು ಆ ಪತ್ರಿಕೆಗಳಿಗೆ ವಿಶಿಷ್ಟ ಮೌಲ್ಯ ತಂದುಕೊಟ್ಟರು. ಚಲನಚಿತ್ರ ಸುದ್ದಿಗಳಿಗಷ್ಟೇ ಸೀಮಿತವಾಗಿದ್ದ ‘ರೂಪತಾರ’ ಪತ್ರಿಕೆ ವಿಜಯಾ ಅವರ ಸಂಪಾದಕತ್ವದಲ್ಲಿ ಅನೇಕ ಪ್ರಖ್ಯಾತ ಸಾಹಿತ್ಯಗಳ ಸಾಹಿತ್ಯಕ ವಿಚಾರಗಳನ್ನು ಪ್ರಕಟಿಸಿ ಪತ್ರಿಕೆಗೊಂದು ಸಾಹಿತ್ಯಕ ಮೌಲ್ಯವನ್ನು ತಂದುಕೊಟ್ಟಿತು. ವಿಜಯಾ ಅವರ ಕಾರ್ಯನಿರ್ವಹಣೆ ರೂಪತಾರಾ ಪತ್ರಿಕೆಯಲ್ಲಿ ಕೇವಲ ಸಿನಿಮಾ ತಾರೆಗಳು ಮಾತ್ರ ಪರಿಚಿತಗೊಂಡದಲ್ಲದೆ ಸ್ಟುಡಿಯೋಗಳಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞಗಳು, ಲೈಟ್ ಬಾಯ್ ಅಂತಹ ಕಾರ್ಮಿಕರು ಕೂಡಾ ಹೊರಜಗತ್ತಿಗೆ ಪರಿಚಯವಾಗುವಂತ ಕಾರ್ಯ ನಡೆಯಿತು. ವ್ಯಾಪಾರಿ ಮಾಧ್ಯಮಗಳ ಅಲೆಗಳ ಆಚೆಯಲ್ಲಿ ಹವ್ಯಾಸಿ ಹೊಸ ಅಲೆಯ ಚಿತ್ರರಂಗಕ್ಕೆ ಬಂದ ಪ್ರತಿಭೆಗಳಿಗೆ ವಿಜಯಾ ಅವರ ನೇತೃತ್ವದ ಈ ಪತ್ರಿಕೆ ಪೋಷಣೆ ಒದಗಿಸುತ್ತಿತ್ತು.

ಉದಯವಾಣಿ ಪತ್ರಿಕೆಯ ಅಂಕಣ ಬರಹಗಳಲ್ಲಿ ವಿಶಾಲ ವ್ಯಾಪ್ತಿಯ ಸೃಜನಾತ್ಮಕ ಬರವಣಿಗೆಗಳನ್ನು ನೀಡಿ ಓದುಗರ ಗಮನ ಸೆಳೆದರು. ಮುಂದೆ ಈ ಜವಾಬ್ದಾರಿಯಿಂದ ಹೊರ ಬಂದ ನಂತರ ‘ಅರಗಿಣಿ’ ಚಲನಚಿತ್ರ ಪತ್ರಿಕೆಯ ಸಾಪ್ತಾಹಿಕದ ಗೌರವ ಸಂಪಾದಕಿಯಾಗಿ, ‘ಬೆಳ್ಳಿ ಚುಕ್ಕಿ’ ವೀಡಿಯೋ ಮ್ಯಾಗಜಿನ್ ಸಮಾಲೋಚಕ ಸಂಪಾದಕಿಯಾಗಿ, ‘ನಕ್ಷತ್ರಲೋಕ’ ಚಲನಚಿತ್ರ ಸಾಪ್ತಾಹಿಕದ ಸಂಪಾದಕರಾಗಿ, ಪ್ರತಿಷ್ಠಿತ ‘ಕರ್ಮವೀರ’ ಪತ್ರಿಕೆಯ ಸಾಪ್ತಾಹಿಕದ ಸಲಹೆಗಾರರ್ತಿಯಾಗಿ, ‘ನಮ್ಮಮಾನಸ’ ಮಹಿಳಾ ಪತ್ರಿಕೆಯ ಸಲಹೆಗಾರರಾಗಿ, ‘ಹೊಸತು’ ಮಾಸ ಪತ್ರಿಕೆಯ ಸಲಹಾ ಮಂಡಲಿಯ ಸದಸ್ಯರಾಗಿ ಹೀಗೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕೋದ್ಯಮದಲ್ಲಿ ತಮ್ಮ ಅಪಾರ ಕೊಡುಗೆಗಳನ್ನು ನೀಡಿ ಜನಪ್ರಿಯ ಲೇಖಕಿ ಎಂಬ ಮನ್ನಣೆ ಪಡೆದಿದ್ದಾರೆ.

1970ರಲ್ಲಿ ಎ.ಎಸ್. ಮೂರ್ತಿ, ಎ.ಎಲ್. ಶ್ರೀನಿವಾಸಮೂರ್ತಿ ಮುಂತಾದವರುಗಳ ಜೊತೆಗೂಡಿ ‘ಪಪೆಟ್‍ಲ್ಯಾಂಡ್’ ಸಂಘಟನೆಯ ಸ್ಥಾಪಕರಾಗಿ ಕಾರ್ಯ ನಡೆಸಡೆಸಿದರು. ಇದು ಹೆಣ್ಣು ಮಕ್ಕಳೇ ಬೊಂಬೆಗಳನ್ನು ತಯಾರಿಸಿಕೊಂಡು, ವಿಶಿಷ್ಟ ರೀತಿಯ ಚಲನಗತಿಯನ್ನು ಕೊಟ್ಟು ಅನೇಕ ಘಟನೆಗಳಿಗೆ ಹಿನ್ನೆಲೆಯಲ್ಲಿ ಧ್ವನಿಮೂಡಿಸಿ, ನಡೆಸಿಕೊಟ್ಟ ಬೊಂಬೆಯಾಟದ ಪ್ರದರ್ಶನಗಳು ಕರ್ನಾಟಕ ರಾಜ್ಯದಾದ್ಯಂತ ಖ್ಯಾತಗೊಂಡಿದೆ. ಸೂತ್ರದ ಬೊಂಬೆಯಾಟ ಎಂಬ ಜನಪದ ಕಲೆಯನ್ನು ಆಧುನಿಕ ಕಾಲಕ್ಕೆ ಬೇಕಾದಂತೆ ಪುನರ್ ರಚನೆ ಮಾಡಿ ಹೊಸ ವಿಚಾರಗಳಿಗೆ ಅಳವಡಿಸಿಕೊಟ್ಟರು. ಹೆಣ್ಣು ಮಕ್ಕಳಿಗಾಗಿಯೇ ಇದನ್ನು ಆರಂಭಿಸಿ ತರಬೇತಿ ನೀಡಿದರು. ಅನೇಕ ಮಹಿಳೆಯರನ್ನು ಒಟ್ಟುಗೂಡಿಸಿ ಒಂದು ತಂಡವನ್ನು ನಿರ್ಮಿಸಿದರು. ಈ ಸಂಘಟನೆಗೆ ಅಂದು ಪ್ರಜಾವಾಣಿಯಲ್ಲಿದ್ದ ಟಿ.ಎಸ್. ರಾಮಚಂದ್ರರಾವ್ ಅವರು ಆಸಕ್ತಿ ತೋರಿಸಿದ್ದರಿಂದ ರಾಷ್ಟ್ರಾದ್ಯಂತ ಪ್ರಚಾರ ಸಿಕ್ಕಿ ಚಂದ್ರಶೇಖರ ಕಂಬಾರರ ‘ಕಿಟ್ಟಿಕತೆ’, ಗಿರೀಶ್ ಕಾರ್ನಾಡರ ‘ಮಾನಿಷಾದ’, ಚಂದ್ರಶೇಖರ ಪಾಟೀಲರ ‘ಟಿಂಗರ ಬುಡ್ಡಣ್ಣ’ ಮತ್ತು ಗಿರಡ್ಡಿ ಗೋವಿಂದ ರಾಜರ ‘ಕನಸು’ಗಳನ್ನು ಬೊಂಬೆಯಾಟಕ್ಕೆ ಅಳವಡಿಸಿ ಪ್ರಸಿದ್ಧಿ ಪಡೆದ ಕೀರ್ತಿ ವಿಜಯಾ ಅವರಿಗೆ ಸಲ್ಲುತ್ತದೆ.

ನಾಟಕ ಪ್ರದರ್ಶನ[ಬದಲಾಯಿಸಿ]

ನಾಟಕ ಗೃಹಗಳಿಗೇ ಸೀಮಿತವಾಗಿದ್ದ ನಾಟಕಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಕ್ರಾಂತಿಕಾರಕ ಬದಲಾವಣೆ ಎಂಬಂತೆ, 1973ರಲ್ಲಿ ‘ಚಿತ್ರಗೆಳೆಯರ ಗುಂಪನ್ನು’ ಪ್ರಾರಂಭಿಸಿದ ವಿಜಯಾ ಅವರು ಆ ಮೂಲಕ ಬೀದಿ ನಾಟಕಗಳ ಪ್ರದರ್ಶನಗಳನ್ನು ಜಾರಿಗೆ ತಂದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಅದು ಚಳುವಳಿಯ ರೂಪ ಪಡೆದು ಇವರು ರಚಿಸಿದ ತೀಕ್ಷ್ಣ ವಿಡಂಬನೆಯ ನಾಟಕಗಳಾದ ‘ಬಂದರೋ ಬಂದರು’, ‘ಉಳ್ಳವರ ನೆರಳು’, ‘ಕೇಳ್ರಪ್ಪೋ ಕೇಳ್ರೀ...’, ‘ಮುಖವಿಲ್ಲದವರು’, ಕುವೆಂಪುರವರ ‘ಧನ್ವಂತರಿ ಚಿಕಿತ್ಸೆ’ (ರೂಪಾಂತರ) ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡು ಯಶಸ್ವಿಯಾಗುವುದರ ಜೊತೆಗೆ ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿದೆ.

ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಾಧನೆ[ಬದಲಾಯಿಸಿ]

ವಿಜಯಾ ಅವರ ಮತ್ತೊಂದು ಸಾಹಸದ ಕೆಲಸವೆಂದರೆ ಕಲೆಗಾಗಿಯೇ ಪ್ರಾರಂಭಿಸಿದ ಒಂದು ಮಹತ್ವದ ಪತ್ರಿಕೆ. ಕಲೆಯ ಎಲ್ಲ ಕ್ಷೇತ್ರಗಳು, ಇತರ ಶಾಸ್ತ್ರಗಳು ಒಟ್ಟಾಗಿ ಕೆಲಸ ಮಾಡುವ ಪ್ರಕ್ರಿಯೆಯ ಶೋಧ ಮತ್ತು ಅವುಗಳನ್ನು ಅನುಭವಿಸುವ ಅರ್ಥೈಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶದಿಂದ 1993ರ ನವಂಬರ್‍ನಲ್ಲಿ ದ್ವೈಮಾಸಿಕವಾಗಿ ಪ್ರಾರಂಭಿಸಿದ ‘ಸಂಕುಲ’ ಪತ್ರಿಕೆಯು ಆಯಾಯ ಕ್ಷೇತ್ರದ ವಿದ್ವಾಂಸರುಗಳ ಸಲಹೆ, ಸಹಕಾರಗಳಿಂದ ಹಲವಾರು ಆಕರ ವಿಷಯಗಳ ಸಮೃದ್ಧ ಮಾಹಿತಿಯ ಪ್ರೌಢ ಲೇಖನಗಳಿಂದ ಕೂಡಿದೆ. ಕಲೆಗಾಗಿಯೇ ಮೀಸಲಾಗಿದ್ದ ಈ ಪತ್ರಿಕೆಯು ಐದು ವರ್ಷಗಳ ನಂತರ ಕಾರಣಾಂತರದಿಂದ ನಿಂತು ಹೋದದ್ದು ಕಲಾಪ್ರಿಯರಿಗಾದ ಬಹು ದೊಡ್ಡ ನಷ್ಟವೆಂದರೆ ತಪ್ಪಾಗಲಾರದು.

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾಗಿ, ಅಧ್ಯಕ್ಷರಾಗಿ, ಕಲಾಮಂದಿರ ಕಲಾಶಾಲೆ, ಸುಚಿತ್ರ ಫಿಲಂ ಅಕಾಡೆಮಿ ಮುಂತಾದವುಗಳ ಉಪಾಧ್ಯಕ್ಷರಾಗಿ, ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ, ರಾಷ್ಟ್ರೀಯ ಚಲನಚಿತ್ರ ತೀರ್ಪುಗಾರರ ಮಂಡಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಮಂಡಲಿ, ಕರ್ನಾಟಕ ಸರಕಾರದ ಪಟ್ಟಣ ಕಣಗಾಲ್ ಪ್ರಶಸ್ತಿ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನ ಚಲನಚಿತ್ರ ಸೆನ್ಸಾರ್ ಸಮಿತಿ, ಕರ್ನಾಟಕ ಲೇಖಕಿರ ಸಂಘದ ಅನುಪಮ ಪ್ರಶಸ್ತಿ ಆಯ್ಕೆ ಸಮಿತಿ, ಮೈಸೂರು ವಿಶ್ವವಿದ್ಯಾಲಯದ ಮಹಿಳಾ ವಿಷಯಗಳ ಅಧ್ಯಯನ ಕೇಂದ್ರ ಸಲಹಾ ಮಂಡಲಿ ಮುಂತಾದ ಸಮಿತಿಗಳ ಸದಸ್ಯರಾಗಿ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಿತಿಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ಮಾಡತ್ತಾ ಬಂದಿದ್ದಾರೆ.

ಕನ್ನಡ ಪುಸ್ತಕ ಪ್ರಕಾಶನದಲ್ಲಿ ಮುದ್ರಣದ್ದೇ ದೊಡ್ಡ ಸಮಸ್ಯೆ ಎದುರಾದ ದಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ವಿಜಯಾ ಅವರ ‘ಇಳಾ’ ಪ್ರಕಾಶನವು ಮುಂದೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾಗಿ ರೂಪುಗೊಂಡಿತು. ಪ್ರಖ್ಯಾತ ಬರಹಗಾರರದಷ್ಟೇ ಅಲ್ಲದೆ ಅನೇಕ ಉದಯೋನ್ಮುಖ ಬರಹಗಾರರನ್ನು ಬೆಳಕಿಗೆ ತಂದು ಸುಮಾರು 200ಕ್ಕೂ ಅಧಿಕ ಮೌಲಿಕ ಕೃತಿಗಳನ್ನು ಹೊರತರುವಲ್ಲಿ ತನ್ನ ಅಗಾಧ ಶ್ರಮವನ್ನು ವಹಿಸಿತು. ಸಾಮಾಜಿಕ ಅನ್ಯಾಯಗಳ ವಿರುದ್ದ ಸದಾ ಹೋರಾಟ ನಡೆಸುತ್ತಿದ್ದ ವಿಜಯಾ ಜನರು ಅನ್ಯಾಯ, ದೌರ್ಜನ್ಯ, ಸಂಕಟಗಲಿಗೆ ಒಳಗಾದದ್ದು ಕಂಡು ಬಂದರೆ ಮಾನಸಿಕವಾಗಿ ಕರಗಿ ಹೊಗುತ್ತಿದ್ದರು.

ಪತ್ರಿಕೆಗೆ ಬರೆದ ಲೇಖನಗಳು, ಅಂಕಣ ಬರಹಗಳು ಇವೆಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿಲ್ಲವಾದರೂ ‘ಮಾತಿನಿಂದ ಲೇಖನಿಗೆ’, ‘ಸುದ್ದಿಕನ್ನಡಿ’, ‘ನಿಜ ಧ್ಯಾನ’, -ಲೇಖನಗಳ ಸಂಗ್ರಹ; ಸತ್ಯಜಿತ್ ರಾಯ್ ಮತ್ತು ಅ.ನ.ಸುಬ್ಬರಾವ್ -ವ್ಯಕ್ತಿ ಚಿತ್ರಣ; ಶ್ರೀರಂಗ- ರಂಗ- ಸಾಹಿತ್ಯ- ಸಂಪ್ರಬಂಧ; ನೇಮಿಚಂದ್ರ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಲೇಖನ ಹೀಗೆ ಹಲವಾರು ಕೃತಿಗಳ ಪ್ರಕಟಿಸಿದ್ದಾರೆ. ಜೊತೆಗೆ ಅನೇಕ ಕೃತಿಗಳನ್ನು ಡಾ. ವಿಜಯಾ ಅವರು ಸಂಪಾದಿಸಿದ್ದಾರೆ.

ಪರ್ವ – ಒಚಿದು ಸಮೀಕ್ಷೇ, ಇನಾಂದಾರ್, ಇಂದಿನ ರಮಗ ಕಲಾವಿದರು, ಕನ್ನಡ ಸಿನಿಮಾ ಸ್ವರ್ಣ ಮಹೋತ್ಸವ, ಮಕ್ಕಳ ಸಿನಿಮಾ, ಕಿರಿಯರ ಕರ್ನಾಟಕ, ಪದ್ಮಾಂತರಂಗ (ಆಕಾಶವಾಣಿ ಕಲಾವಿದೆ ಎಸ್.ಕೆ. ಪದ್ಮಾದೇವಿಯವರ ಜೀವನ ವೃತ್ತಿ) ‘ಅಕ್ಕರೆ’ (ವ್ಯಾಸರಾಯ ಬಲ್ಲಾಳರ ಅಭಿನಂದ ಗ್ರಂಥ), ಕನ್ನಡ ಚಲನಚಿತ್ರ ಇತಿಹಾಸ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ - ಸಂಸ್ಕøತಿ. ಬೆಂಗಳೂರು ದರ್ಶನ, ಕರ್ನಾಟಕ ಕಲಾದರ್ಶನ ಮುಂತಾದವು ಇವುಗಳಲ್ಲಿ ಪ್ರಮುಖವಾಗಿವೆ.

ಪ್ರಶಸ್ತಿಗಳು[ಬದಲಾಯಿಸಿ]

ಹೀಗೆ ಚಲನಚಿತ್ರ, ನಾಟಕ, ಸಾಹಿತ್ಯಗಳಲ್ಲಿ ತೊಡಗಿಕೊಂಡಿರುವ ಡಾ. ವಿಜಯಾ ಅವರಿಗೆ ಹಲವಾರು ಪ್ರಶಸ್ತಿಗಳು ಮಡಿಗೇರಿವೆ. ಬಂದರೋ ಬಂದರು ಎಂಬ ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಕುಲ ಕೃತಿಗೆ ಗೀತಾದೇಸಾಯಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್.ಎನ್.ಆರ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಲೋಕ ಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಮಾಸ್ತಿ ಪ್ರಶಸ್ತಿ, ಹಾರ್ನಳ್ಳಿ ಟ್ರಸ್ಟ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ವಿಜಯಾ ಅವರನ್ನು ಅರಸಿ ಬಂದಿದೆ. ವಿಜಯಾ ಅವರು ತಮಗೆ ಪ್ರಶಸ್ತಿಯ ಜೊತೆಗೆ ಬಂದ ಹಣವನ್ನು ಅನೇಕ ಸಂಘ ಸಂಸ್ಥೆಗಳಿಗೆ ಕೊಡುಗೆಯಾಗಿ ನೀಡುತ್ತದ್ದರು. ನಾಲ್ಕು ಜನ ಲೇಖಕರು ಸೇರಿ ತರಲು ನಿರ್ಧರಿಸಿರುವ ನಾಲ್ಕು ಗ್ರಂಥಗಳ ಪ್ರಕಟಣೆಗೆ ಹಾರ್ನಳ್ಳಿ ರಾಮಸ್ವಾಮಿ ಟ್ರಸ್ಟ್ ಪ್ರಶಸ್ತಿಯ ಜೊತೆಗೆ ಕೊಡಮಾಡಿದ ಒಂದು ಲಕ್ಷ ರೂ. ಹಣವನ್ನು ನೆರವು ನೀಡಿದ್ದಾರೆ. ಅಲ್ಲದೆ ಮಾಸ್ತಿ ಪ್ರಶಸ್ತಿಯಿಂದ ದೊರೆತ 25000 ರೂ.ಗಳನ್ನು ಗಾರ್ಮೆಂಟ್ಸ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್‍ಗೆ ನೀಡಿ ಶ್ರಮ ಜೀವಿಗಳ ಹೋರಾಟದ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಹಾನ್ ಚೈತನ್ಯಶೀಲ, ಮಾನವೀಯ ಧ್ವನಿಯ ಹಿರಿಯ ಕನ್ನಡತಿ ಡಾ. ವಿಜಯಾ.

ಆಧಾರ ಗ್ರಂಥ[ಬದಲಾಯಿಸಿ]

ಕಣಜ ಮತ್ತು ಅಂತರ್ಜಾಲ ವಾಹಿನಿಯಲ್ಲಿರುವ ವಿವಿಧ ಲೇಖನಗಳು

1. http://www.sallapa.com/search/label/%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%8B%E0%B2%A6%E0%B3%8D%E0%B2%AF%E0%B2%AE

2. kanaja.in