ಸಂತ ರಾಯಪ್ಪರ ಗುರುಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತ ರಾಯಪ್ಪರ ಗುರುಮಠ

ಇಂಡಿಯಾದ ಪೂರ್ವ ಕಡಲತೀರವನ್ನು ಫ್ರೆಂಚರು ಕೊರೊಮ್ಯಾಂಡೆಲ್ ತೀರ ಎನ್ನುತ್ತಿದ್ದರು. ಈ ಕೊರೊಮ್ಯಾಂಡೆಲ್ ತೀರ ಪ್ರದೇಶದ ಪಾಂಡಿಚೇರಿ ಅವರ ವಸಾಹತು ಆಗಿತ್ತು. ಈ ಕೇಂದ್ರದಿಂದಲೇ ಅವರು ದಕ್ಷಿಣ ಇಂಡಿಯಾದಾದ್ಯಂತ ತಮ್ಮ ಧರ್ಮ ಪ್ರಚಾರದ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು. ಅದನ್ನು ಅವರು ಕರ್ನಾಟಿಕ್ ಮಿಷನ್ (Carnatic Mission) ಎಂಬುದಾಗಿ ಕರೆಯುತ್ತಿದ್ದರು. ಈ ರೀತಿ ಹೊರ ದೇಶಗಳಲ್ಲಿ ಸುವಾರ್ತಾ ಪ್ರಚಾರ ಕೇಂದ್ರಗಳನ್ನು ಸ್ಥಾಪಿಸಿ ಕ್ರೈಸ್ತಧರ್ಮವನ್ನು ಬೇರೂರಿಸಿದಾಗ ಪೋಪ್ ಜಗದ್ಗುರುಗಳು ಜನಸಂಖ್ಯೆಗನುಗುಣವಾಗಿ ಗುರುಪ್ರಧಾನ ಪ್ರೇಷಿತಯಾಜಕ(Vicar Apostolic)ರನ್ನು ಆಯ್ಕೆ ಮಾಡುತ್ತಿದ್ದರು. ಕ್ರಿಸ್ತಶಕ ೧೭೭೬ರಲ್ಲಿ ಕರ್ನಾಟಕ ಮಿಷನ್ನಿನ ಗುರುಪ್ರಧಾನರಾಗಿ ಮೋನ್ಸಿಗ್ನೊರ್ ಬ್ರಿಗೊ (Brigot) ನೇಮಕಗೊಂಡರು. ಕ್ರಿಸ್ತಶಕ ೧೭೭೮ ಪಾಂಡಿಚೇರಿಯಲ್ಲಿ ಸಂತ ಜೋಸೆಫರ ಗುರುಮಠ (Seminary) ಪ್ರಾರಂಭವಾಯಿತು. ಕರ್ನಾಟಕ ಮಿಷನ್ನಿನ ಕಾರ್ಯವ್ಯಾಪ್ತಿಗಳ ಬಗ್ಗೆ ಸೂಕ್ಷ್ಮ ವಿವಾದಗಳಿದ್ದುದರಿಂದ ಮೋನ್ಸಿಗ್ನೊರ್ (Mon Signor = ನಮ್ಮ ಸ್ವಾಮಿ) ಬ್ರಿಗೊರವರಿಗೆ ಪ್ರೇಷಿತಯಾಜಕತ್ವ ಪಟ್ಟ ನೀಡಿರಲಿಲ್ಲವದರೂ ಆ ಹುದ್ದೆಯ ಅಧಿಕಾರವನ್ನು ಅವರು ಚಲಾಯಿಸಬಹುದಾಗಿತ್ತು. ಹೀಗಾಗಿ ಸಂತ ಜೋಸೆಫರ ಗುರುಮಠ ಅವರ ಅಧೀನಕ್ಕೆ ಒಳಪಟ್ಟಿತು.

ಕ್ರಿಸ್ತಶಕ ೧೭೩೬ರಲ್ಲಿ ಕೊರೊಮ್ಯಾಂಡಲ್ ತೀರವನ್ನು ಪ್ರೇಷಿತ ಯಾಜಕತ್ವ (Vicar apostolic) ಮಟ್ಟಕ್ಕೇರಿಸಿದರೂ ಗುರುಮಠದ ಸ್ಥಾನಮಾನದಲ್ಲೇನೂ ಬದಲಾವಣೆಯುಂಟಾಗಲಿಲ್ಲ. ಕ್ರಿಸ್ತಶಕ ೧೮೪೧ರಲ್ಲಿ ಸಮಾವೇಶಗೊಂಡ ಪಾಂಡಿಚೇರಿ ಸಿನೋಡ್(Synod)ನ ಕಲಾಪಗಳಲ್ಲಿ ಈ ಗುರುಮಠದ ಪ್ರಸ್ತಾವದ ಅನೇಕ ಗೊತ್ತುವಳಿಗಳನ್ನು ಸ್ವೀಕರಿಸಲಾಯಿತಾದರೂ ಅವು ಜಾರಿಗೆ ಬರಲಿಲ್ಲ. ಹೀಗಾಗಿ ಸಂತ ಜೋಸೆಫರ ಸೆಮಿನರಿಯು ಇತರ ಧರ್ಮಪ್ರಾಂತ್ಯಗಳಂತೆ ಸ್ಥಳೀಯ ಬಿಷಪರ ಒಡೆತನದಲ್ಲೇ ಮುಂದುವರಿಯಿತು.

ಕ್ರಿಸ್ತಶಕ ೧೯೪೫ರಲ್ಲಿ ಕೊರೊಮ್ಯಾಂಡಲ್ ತೀರದ ಪ್ರೇಷಿತಯಾಜಕಪೀಠವು ಮೂರು ಭಾಗವಾಗಿ ವಿಭಾಗಿಸಲ್ಪಟ್ಟತು. ಪಾಂಡಿಚೇರಿ, ಮೈಸೂರು ಮತ್ತು ಕೊಯಮತ್ತೂರು ಎಂಬುದಾಗಿ ಮೂರು ಭಾಗವೂ ಪ್ರತ್ಯೇಕ ಪ್ರೇಷಿತಯಾಜಕಪೀಠವನ್ನು ಪಡೆದವು. ಮೂರು ಭಾಗಗಳೂ ಕೆಲ ವರ್ಷಗಳ ಕಾಲ ಪ್ರತ್ಯೇಕ ಸೆಮಿನರಿಗಳನ್ನು ನಡೆಸಲು ಪ್ರಯತ್ನಿಸಿದವು.

ಆದರೆ ೨೦ನೇ ಶತಮಾನದ ಪ್ರಾರಂಭದ ವೇಳೆಗೆ ಸಂತ ಜೋಸೆಫರ ಗುರುಮಠವನ್ನು ಮೂರು ಪ್ರಾಂತ್ಯಗಳಿಗೂ ಏಕೀಭವಿಸಿಲಾಯಿತು. ಹಾಗೂ ಮೂರು ಪ್ರಾಂತ್ಯಗಳಿಂದಲೂ ಒಬ್ಬೊಬ್ಬ ಪ್ರತಿನಿಧಿ ಬಂದು ಈ ಗುರುಮಠದ ಆಡಳಿತ ನಡೆಸುತ್ತಿದ್ದರು. ಈ ಮೂರು ಮಂದಿಯೂ ಮಿಸ್ಸಿಯೋಂ ಎತ್ರಾಂಜೇರ್ ದ ಪಾರೀ (MEP)ನವರೇ ಆಗಿರುತ್ತಿದ್ದರು. ಆಗಿನ್ನೂ ಎಂಇಪಿ ಒಂದು ವ್ಯವಸ್ಥಿತ ಧರ್ಮಪ್ರಚಾರಸಂಸ್ಥೆ ಎನಿಸಿರಲಿಲ್ಲ. ಇದರಿಂದ ಇಂಡಿಯಾದಲ್ಲಿದ್ದ ಎಂಇಪಿಯವರು ಬೋಧಕವರ್ಗ ಮತ್ತು ಅವಶ್ಯಕ ಹಣದ ಬರುವಿಕೆಗಾಗಿ ಪ್ಯಾರಿಸ್ನತ್ತ ಕೈಚಾಚಬೇಕಿತ್ತು. ಆದರೆ ಸೆಮಿನರಿಯ ನೇರ ಆಡಳಿತ ಇವರ ಕೈಯಲ್ಲಿಯೇ ಇತ್ತು. ಹಲವು ವರ್ಷಗಳ ಕಾಲ ಇದು ಹೀಗೇ ನಡೆದಿತ್ತು .

ಕ್ರಿಸ್ತಶಕ ೧೯೧೯ರಲ್ಲಿ ಕ್ರೈಸ್ತ ಧರ್ಮಸಂಹಿತೆ (Canon Law) ರೂಪುಗೊಂಡಿತು. ಪ್ರಪಂಚದಾದ್ಯಂತ ಹಬ್ಬಿರುವ ಕ್ರೈಸ್ತ ಧರ್ಮಸಭೆಗೆ ಏಕಪ್ರಕಾರದ ಆಡಳಿತವ್ಯವಸ್ಥೆ ನೀಡುವಲ್ಲಿ ಈ ಸಂಹಿತೆ ಯಶಸ್ವಿಯಾಯಿತು. ಗುರುಮಠಗಳಿಗೂ ಈ ಕಾಯಿದೆ ಅನ್ವಯವಾಯಿತಾದರೂ ಸಂತ ಜೋಸೆಫರ ಗುರುಮಠ ಅದನ್ನು ಅಂಗೀಕರಿಸಿದ್ದು ಕ್ರಿಸ್ತಶಕ ೧೯೩೪ದಲ್ಲಿ. ಆಗ ಆ ಗುರುಮಠವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಯೋಜನೆ ನಡೆದಿತ್ತು. ಎಂಇಪಿ ಮುಖ್ಯಸ್ಥರಾಗಿದ್ದ ಬಿಷಪ್ ಗೆಬ್ರಿಯಾನ್ (Bishop de Guebriant) ರವರು ಗುರುಮಠಕ್ಕೆ ಹೊಸ ಕಾಯಿದೆಗಳನ್ನು ರೂಪಿಸುವ ಅವಶ್ಯಕತೆಯನ್ನು ಮನಗಂಡು ಬೆಂಗಳೂರಿನಲ್ಲಿ ಸಂಬಂಧಪಟ್ಟ ಬಿಷಪರನ್ನೆಲ್ಲಾ ಒಟ್ಟುಗೂಡಿಸಿದರು. ಹೀಗೆ ಬೆಂಗಳೂರಿನಲ್ಲಿ ಕ್ರಿಸ್ತಶಕ ೧೯೩೪ರ ಜೂನ್ ತಿಂಗಳಲ್ಲಿ ಸಂತ ರಾಯಪ್ಪರ ಗುರುಮಠ ಅಸ್ತಿತ್ವಕ್ಕೆ ಬಂದು ಹೊಸ ನಿಯಮಾವಳಿಗಳು ಅಂಗೀಕೃತವಾದವು.

ಸಂತ ರಾಯಪ್ಪರ ಗುರುಮಠದ ಹಳೆಯ ಕಟ್ಟಡ

ಆದರೆ ಅದೇ ಸಮಯದಲ್ಲಿ ಪೋಪ್ ಜಗದ್ಗುರುಗಳು "ಈ ಗುರುಮಠವು ಮಿಷನ್ ಸಂಸ್ಥೆಯ ಆಡಳಿತದಿಂದ ತಪ್ಪಿ ಪ್ರಾಂತೀಯ ಗುರುಮಠವಾಗಿ ಪರಿವರ್ತನೆಗೊಂಡು ರೋಮಿನ ನೇರ ಆಡಳಿತಕ್ಕೆ ಒಳಪಡಬೇಕು" ಎಂದು ಅದೇಶ ವಿಧಿಸಿದರು. ಹೊಸದಾಗಿ ರೂಪುಗೊಂಡಿದ್ದ ಗುರುಮಠದ ನಿಯಮಾವಳಿಗಳು ಪ್ರಾಂತೀಯ ಗುರುಮಠದ ನಿಯಮಾವಳಿಗಳಿಗಿಂತ ಭಿನ್ನವಿರಲಿಲ್ಲವಾದರೂ ಠರಾವುಗಳನ್ನು ಆಗಿಂದಾಗ್ಗೆ ರೋಮಿನ ವರಿಷ್ಠರ ಅವಗಾಹನೆಗೆ ತರಬೇಕೆನ್ನುವ ಪೋಪರ ಆಜ್ಞೆ ಇಲ್ಲಿನ ಬಿಷಪರಿಗೆ ಇರಿಸು ಮುರಿಸು ಉಂಟುಮಾಡಿತು.

ಇದನ್ನು ತೀವ್ರವಾಗಿ ವಿರೋಧಿಸಿದ ಬಿಷಪ್ ದೆ ಗೆಬ್ರಿಯಾನ್ ಬೆಂಗಳೂರಿನ ಗುರುಮಠವನ್ನು ಪಾಂಡಿಚೇರಿಯ ಗುರುಮಠದಂತೆಯೇ ಸಾಮಾನ್ಯ ಗುರುಮಠವಾಗಿ ಉಳಿಸಬೇಕೆಂದು ಮನವಿ ಸಲ್ಲಿಸಿದರು. ಆದರೆ ರೋಮಿನ ವರಿಷ್ಠರು ಅದಕ್ಕೆ ಸ್ಪಂದಿಸದೆ ಮೌನವಾಗಿ ಉಳಿದರು. ಗೆಬ್ರಿಯಾನ್ ನಿಧನದ ನಂತರ ಅವರ ಉತ್ತರಾಧಿಕಾರಿ ಫಾದರ್ ರಾಬರ್ಟ್ ಕ್ರಿಸ್ತಶಕ ೧೯೩೫ರಲ್ಲಿ “ಸಂತ ರಾಯಪ್ಪರ ಗುರುಮಠವನ್ನು ಪ್ರಾಂತೀಯ ಗುರುಮಠವೆಂದು ವೃಥಾ ಭಾವಿಸುವಿರೇಕೆ... " ಎಂದು ಅಭಿಪ್ರಾಯಪಟ್ಟಾಗ ಬಿಷಪರೂ ಇತರರೂ ಅದು ಪ್ರಾಂತೀಯ ಗುರುಮಠವಲ್ಲ ಎಂದು ತಿದ್ದಿಕೊಂಡರು.

ಆದರೆ ಕ್ರಿಸ್ತಶಕ ೧೯೪೨ರಲ್ಲಿ "ಈ ಗುರುಮಠದ ಕಟ್ಟಡ ಸೇನೆಯ ತುರ್ತು ಅಗತ್ಯಕ್ಯಾಗಿ ಬೇಕಾಗಿದೆಯಂತೆ, ಏನು ಮಾಡಬೇಕು?" ಎಂದು ರೋಮ್ ವರಿಷ್ಠರಿಗೆ ಪತ್ರ ಬರೆದಾಗ ಅವರು ಮಾರುತ್ತರದಲ್ಲಿ ಪ್ರಾಂತೀಯ ಗುರುಮಠ ಎಂಬುದಾಗಿ ಸಂಬೋಧಿಸಿದ್ದರು. ಇದು ತಪ್ಪಿರಬಹುದೇ ಎಂದು ಇಲ್ಲಿಂದ ಮತ್ತೆ ರೋಮ್ಗೆ ಪತ್ರ ಬರೆದಾಗ ಅವರು "ಇದು ತಪ್ಪಲ್ಲ, ಇದರಲ್ಲಿ ಸಂದೇಹವೇನೂ ಇಲ್ಲ, ನಮ್ಮ ಪ್ರಜ್ಞೆಯಲ್ಲಿ ಸಂತ ರಾಯಪ್ಪರ ಗುರುಮಠವು ಕ್ರಿಸ್ತಶಕ ೧೯೩೧ರಿಂದಲೂ ಪ್ರಾಂತೀಯ ಗುರುಮಠವೆಂದೇ ಪರಿಗಣಿತವಾಗಿದೆ. ಆ ಗುರುಮಠದ ಕಾಯಿದೆ ನಿಯಮಗಳನ್ನು ನಮ್ಮ ಅನುಮೋದನೆಗಾಗಿ ಕಳುಹಿಸುತ್ತೀರೆಂದು ಆಗಿನಿಂದಲೂ ನಾವಿಲ್ಲಿ ನಿರೀಕ್ಷಿಸುತ್ತಿದ್ದೇವೆ. ವಿದ್ವಾಂಸರ-ಬೋಧಕರ ಪಟ್ಟಿ, ವಾರ್ಷಿಕವರದಿ ಎಲ್ಲವನ್ನೂ ಕೂಡಲೇ ಕಳುಹಿಸಿ" ಎಂದು ಮರುಪತ್ರ ಬರೆದರು. ಹೀಗೆ ಅಂದಿನಿಂದ ಇದುವರೆಗೂ ಸಂತ ರಾಯಪ್ಪರ ಗುರುಮಠ ರೋಮಿನ ನೇರ ಆಡಳಿತದಲ್ಲಿದೆ.

ಕ್ರಿಸ್ತಶಕ ೧೯೬೨ರಲ್ಲಿ ಸಂತ ರಾಯಪ್ಪರ ಗುರುಮಠವನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸಲಾಯಿತು. ಎರಡನೇ ವ್ಯಾಟಿಕನ್ ಸಮಾವೇಶದ ತೀರ್ಮಾನದಂತೆ ಸೆಮಿನರಿಯ ಆಡಳಿತವನ್ನು ಸಂಬಂಧಪಟ್ಟ ಬಿಷಪರಿಗೆ ಬಿಟ್ಟುಕೊಟ್ಟು ಅಂತಿಮ ಅನುಮೋದನೆಯನ್ನು ವ್ಯಾಟಿಕನ್ ವರಿಷ್ಠರಿಂದ ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.

ಹಲವಾರು ಧರ್ಮಪ್ರಾಂತ್ಯಗಳ ಬಿಷಪರನ್ನೊಳಗೊಂಡ ಆಡಳಿತಮಂಡಳಿ ಇಲ್ಲಿದೆ. ಇದರ ಅಧ್ಯಕ್ಷರು ಚುನಾಯಿತರು. ವರ್ಷಕ್ಕೊಮ್ಮೆ ಈ ಮಂಡಳಿ ಸಭೆಸೇರಿ ಆಡಳಿತ, ಹಣಕಾಸು, ಧರ್ಮಸುಧಾರಣೆ, ವಿದ್ಯಾಮಟ್ಟಗಳ ಕುರಿತು ಚರ್ಚಿಸುತ್ತದೆ. ಆಚಾರ್ಯರನ್ನು ನೇಮಿಸಬೇಕಾದಾಗ ಎಲ್ಲಾ ಬಿಷಪರು ತಮ್ಮಲ್ಲೇ ಉತ್ತಮ ಅಭ್ಯರ್ಥಿ ಯಾರೆಂಬುದನ್ನು ಸಮಾಲೋಚಿಸುತ್ತಾರೆ. ಒಬ್ಬರಿಗಿಂತ ಹೆಚ್ಚು ಮಂದಿಯ ಬಗ್ಗೆ ಮಂಡಳಿಯ ಒಲವು ಇದ್ದಲ್ಲಿ ಅಧ್ಯಕ್ಷರು ಪ್ರಾಧ್ಯಾಪಕವರ್ಗದ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚಿಸುತ್ತಾರೆ. ನಂತರ ಅಂತಿಮ ಆಯ್ಕೆಯನ್ನು ಪ್ರಕಟಿಸುವ ಹೊಣೆಯನ್ನು ಪೋಪ್ ಜಗದ್ಗುರುಗಳಿಗೆ ಬಿಟ್ಟುಕೊಡುತ್ತಾರೆ. ಇದೆಲ್ಲಾ ಆಗಿ ಮೂವತ್ತು ದಿನಗಳ ನಂತರದ ಒಂದು ನಿಗದಿತ ದಿನ ವ್ಯಾಟಿಕನ್ ರೇಡಿಯೊ ಗುರುಮಠದ ಆಚಾರ್ಯರ ನೇಮಕವನ್ನು ಬಿತ್ತರಿಸುತ್ತದೆ.

ಕ್ರಿಸ್ತಶಕ ೧೭೭೮ ರಿಂದ ಇಲ್ಲಿಯವರೆಗೆ ಈ ಗುರುಮಠದಲ್ಲಿ ೩೫ ಆಚಾರ್ಯರು ಆಗಿಹೋಗಿದ್ದಾರೆ. ಇವರಲ್ಲಿ ಎಂಟು ಮಂದಿ ಮಾತ್ರ ನಮ್ಮ ದೇಶದವರು. ಅವರಾರೆಂದರೆ ಅರುಳ್ ದಾಸ್ ಜೇಮ್ಸ್, ಮೈಕೆಲ್ ಅಗಸ್ಟಿನ್, ಜೋಸೆಫ್ ಫ್ರಾನ್ಸಿಸ್, ಜಾನ್ ಬ್ಯಾಪ್ಟಿಸ್ಟ್ ಸಿಕ್ವೆರಾ, ಜೆ ಬಿ ಝೇವಿಯರ್, ಥಾಮಸ್ ವಾಳಪಿಳ್ಳಿ, ಸೆಬಾಸ್ಟಿಯನ್ ಪೆರಿಯಣ್ಣನ್ ಹಾಗೂ (ಈಗ ಇರುವ)ಕೊಚ್ಚುಪುರಯಿಲ್ ಥಾಮಸ್ ಜೋಸೆಫ್.