ಶೂರ್ಪಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿಯ ಶೂರ್ಪಾಲಯ ಒಂದು ಚಿಕ್ಕ ಗ್ರಾಮ. ಇಲ್ಲಿಯ ಕೃಷ್ಣಾನದಿಯ ತೀರದಲ್ಲಿ ಮನಮೋಹಕವಾದ ಪರಮ, ಪವಿತ್ರ, ಪ್ರಾಚೀನ, ಭಾಗವತ ಪುರಾಣ ಪ್ರಸಿದ್ಧವಾದ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನವಿದೆ. ಕನಕದಾಸರು ಹೇಳಿದಂತೆ ಸಿರಿ ತನ್ನ ತೊಡೆಯ ಮೇಲೇರಿಸಿಕೊಂಡ ಪಾದ ಎಂಬಂತೆ ಶ್ರೀ ಲಕ್ಷ್ಮೀ ಸಮೇತ ಶ್ರೀ ನರಸಿಂಹ ದೇವರು ಶಂಖ, ಚಕ್ರ, ಗದೆ, ಪದ್ಮ, ಮುಕುಟ, ಕಂಠಾಭರಣ, ಚರಣಾಭರಣಗಳಿಂದ ವಿರಾಜಮಾನರಾಗಿ ವಿಜೃಂಭಿಸುತ್ತಿದ್ದಾರೆ. ಏಕಶಿಲಾ ಸಾಲಿಗ್ರಾಮದ ಈ ಮೂರ್ತಿ ಒಬ್ಬ ಹುಟ್ಟುಕುರುಡನಿಂದ ಕೆತ್ತಲ್ಪಟ್ಟಿದೆ ಎಂಬ ಐತಿಹ್ಯವಿದೆ.

ಶೂರ್ಪಾಲಯ- ಹೆಸರು ಬಂದುದು ಹೇಗೆ?

"ಗಂಗಾ ಸ್ನಾನ ತುಂಗಾ ಪಾನ" ಎನ್ನುವ ಹಾಗೆ ನಮ್ಮೆಲ್ಲರ ಸಕಲ ಘೋರಪಾಪಗಳನ್ನು ಕಳೆಯುವ ಗಂಗಾ ಭಾಗೀರಥಿ ದೇವಿ ತಾನು ಎಲ್ಲ ಜನರ ಸಕಲ ಪಾಪಗಳಿಂದ ಭರಿತಳಾಗಿ ಕಾಶೀ ವಿಶ್ವನಾಥನ ಪ್ರೇರಣೆಯಿಂದ ಕೃಷ್ಣಾ ನದಿ ತೀರಕ್ಕೆ ಬಂದು ಮುತ್ತು ರತ್ನ, ವಜ್ರ, ವೈಢೂರ್ಯಗಳಿಂದ ತುಂಬಿದ ಮೊರದ ಬಾಗಿನ ಕೊಟ್ಟು ತನ್ನೆಲ್ಲಾ ಪಾಪಗಳನ್ನು ಕಳೆದುಕೊಳ್ಳುತ್ತಾಳೆ. ಸಂಸ್ಕೃತದಲ್ಲಿ ಮೊರಕ್ಕೆ "ಶೂರ್ಪ"ಎಂದು ಹೆಸರು. ಆಲಯ ಸೇರಿ ಈ ಕಾರಣದಿಂದ ಆ ಪವಿತ್ರ ಸ್ಥಳಕ್ಕೆ ಶೂರ್ಪಾಲಯ ಎಂದು ಹೆಸರು ಬಂದಿತು.

ಅಷ್ಟ ತೀರ್ಥಗಳ ಮಹಿಮೆ

ನದೀತೀರದ ಬಳಿಯ ಸನ್ನಿಧಿಯಲ್ಲಿ ಪುಣ್ಯಕರವಾದ ಕೋಟಿತೀರ್ಥ, ಚಲಕತೀರ್ಥ, ಚಕ್ರತೀರ್ಥ, ಕಂಠತೀರ್ಥ, ಉತ್ತುಂಗತೀರ್ಥ, ಮಧುತೀರ್ಥ, ಪಿತೃ ಋಣವಿಮೋಚನ ತೀರ್ಥ, ಋಣವಿಮೋಚನ ತೀರ್ಥ ಎಂಬ ಅಷ್ಟತೀರ್ಥಗಳಿವೆ. ಒಂದೊಂದು ತೀರ್ಥಕ್ಕೂ ಒಂದೊಂದು ಮಹಿಮೆ ಇದ್ದು ಘನಘೋರವಾದ ಪಾಪಗಳನ್ನು ನಾಶ ಮಾಡುವ ಮಹತ್ವ ಹೊಂದಿವೆ. ರಾಜಸೂಯ ಯಾಗ, ಅಶ್ವಮೇಧ ಯಾಗ ಮಾಡಿದ ಫಲವನ್ನು ಉತ್ತುಂಗ ತೀರ್ಥದಲ್ಲಿ ಸ್ನಾನ ಮಾಡುವದರಿಂದ ಪಡೆಯುತ್ತಾರೆ ಎಂಬ ಮಾತಿದೆ. "ಅನ್ಯ ಕ್ಷೇತ್ರೇ ಕೃತಂ ಪಾಪಂ ಪುಣ್ಯ ಕ್ಷೇತ್ರೆ ವಿನಶ್ಯತಿ" ಎಂಬ ಪ್ರತೀತಿ ಇದೆ. ಕೃಷ್ಣಾ ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡಿದರೆ ಆರು ತಿಂಗಳಲ್ಲಿ ಅಸ್ತಿಗಳು ಶಂಖದ ರೂಪವನ್ನು ತಾಳುತ್ತವೆಂದು ನಂಬಲಾಗಿದೆ.

ಆನಂದ ಬಾಷ್ಪ ಸುರಿಸಿದಾಗ ಅರಳಿಮರ ಉದ್ಭವ

ಕೃಷ್ಣಾ ನದಿಯ ದಕ್ಷಿಣ ತೀರದಲ್ಲಿ ಪರಶುರಾಮ ದೇವರು ನಿಸರ್ಗದ ರಮ್ಯ ಸೌಂದರ್ಯ ನೋಡಿ ಆನಂದ ಬಾಷ್ಪ ಸುರಿಸಿದಾಗ ಅರಳಿಮರ ಉದ್ಭವವಾಯಿತೆಂದು ಹೇಳುತ್ತಾರೆ. ಅದು ದೇವರ ಗುಡಿಯ ಮುಂಭಾಗದಲ್ಲಿದೆ. ಗುಡಿಯ ಹಿಂಭಾಗದಲ್ಲಿ ಶ್ರೀ ಪ್ರಾಣದೇವರ ಚಿಕ್ಕ ಮೂರ್ತಿ ಇದ್ದು ನೋಡಲು ನಯನಮನೋಹರವಾಗಿದ್ದು ಪ್ರಾಣದೇವರ ಕಂಠದಲ್ಲಿ ಯಾವತ್ತೂ ತೇವಾಂಶವಿರುತ್ತದೆ. ಇದರಿಂದ ಅಲ್ಲಿ ಗಂಗಾ ದೇವಿ ಇರುವಳೆಂಬ ಪ್ರತೀತಿ ಕೂಡ ಇದೆ. ಭಕ್ತ ಪ್ರಹ್ಲಾದನಿಂದ ಪ್ರಾರ್ಥಿತನಾಗಿ ಕಾಶೀ ಕ್ಷೇತ್ರದ ವಿಶ್ವನಾಥನು ಕೋಟೇಶ್ವರನಾಗಿ ಕೃಷ್ಣ ನದಿಯ ಮಧ್ಯದಲ್ಲಿರುತ್ತಾನೆ. ಸಕಲ ತಪೋಮುನಿಗಳಿಂದ ಪ್ರಾರ್ಥಿತನಾಗಿ ಶ್ರೀ ಶಂಕರನು ಶ್ರೀ ಲಕ್ಷ್ಮೀನರಸಿಂಹದೇವರ ಪೂಜೆಗಾಗಿ ಬಲಭಾಗದ ಬಯಲು ಜಾಗದಲ್ಲಿ ಗಣಪ, ಶೇಷ, ನಂದಿಯರೊಡಗೂಡಿ ಬಯಲೇಶ್ವರನಾಗಿ ಸನ್ನಿಹಿತನಾಗಿರುವನು.

ಜಾತ್ರಾ ಮಹೋತ್ಸವ

ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವು ವೈಶಾಖ ಶುದ್ಧ ಸಪ್ತಮಿಯಿಂದ ಪ್ರಾರಂಭವಾಗಿ ವೈಶಾಖ ವದ್ಯ ದ್ವಿತೀಯಾದವರೆಗೆ ನವರಾತ್ರಿ ನೆರವೇರುವದು. ಉತ್ಸವದ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಪಲ್ಲಕ್ಕಿ ಅವಾಹನೋತ್ಸವ ನೆರವೇರುವುದು. ವೈಶಾಖ ಶುದ್ಧ ಹುಣ್ಣಿಮೆ ದಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ರಥೋತ್ಸವ ಜಾತ್ರೆ ನಡೆಯುತ್ತದೆ. ಆ ಹುಣ್ಣಿಮೆಯನ್ನು ಆಗಿ ಹುಣ್ಣಿಮೆ ಎಂದು ಕರೆಯುವರು. ಆ ದಿನ ಸುಕ್ಷೇತ್ರದ ದೇವಸ್ಥಾನದಲ್ಲಿ ಪುಣ್ಯಾಹವಾಚನ, ರಥಾಂಗ ಹೋಮ ಹವನಗಳನ್ನು ಮಾಡುತ್ತಾರೆ. ಅಲ್ಲದೇ ಕಾರ್ತಿಕ ಮಾಸದಲ್ಲಿ ವೈಕುಂಠ ಚತುರ್ದಶಿ ದಿವಸ ದೇವರಿಗೆ ಸುವರ್ಣಭರಿತ ವಿಶೇಷ ಅಲಂಕಾರ ನೈವೇದ್ಯೆ ಪ್ರಸಾದ ಇರುವುದು. ಬೆಳ್ಳಿ ಉತ್ಸವ ಪ್ರತಿಮೆಯನ್ನು ನಾವಿನಲ್ಲಿ ಕೂಡಿಸಿ ಕೃಷ್ಣಾ ನದಿಯಲ್ಲಿ ತಪೋತ್ಸವ ದೀಪೋತ್ಸವ ನೆರವೇರುವುದು.

ಮಹಾರಾಷ್ಟ್ರದ ಶಾಹೂ ಮಹಾರಾಜರು ಹಾಗೂ ಬಿಜಾಪೂರದ ಆದಿಲ್‌ಶಾಹಿ ಮನೆತನದವರು ಶ್ರೀ ಕ್ಷೇತ್ರದ ಜನರಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.[ಸೂಕ್ತ ಉಲ್ಲೇಖನ ಬೇಕು]