ಲಲಿತಾರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಡಾ. ಲಲಿತಾರಾವ್'
ಜನನ
ಲಲಿತಾ

ಹುಟ್ಟಿದ ಸ್ಥಳ : ಮಂಗಳೂರಿನ ಬಳಿಯ ಇನ್ನದಲ್ಲಿ.
ಉದ್ಯೋಗಸಂಗೀತ, ಹೊಲಿಗೆ, ಮುದ್ರಾವಿಜ್ಞಾನ, ಆಯುರ್ವೇದ, ರಾಜಕೀಯ; ಬಹುಮುಖ ಪ್ರತಿಭೆಯ ವೈದ್ಯೆ. ಪತ್ರಿಕೆಗಳಲ್ಲಿ ಜನಜಾಗೃತಿಯ ಅಂಕಣ ಬರೆಯುತ್ತಿದ್ದರು.
ಸಕ್ರಿಯ ವರ್ಷಗಳುತಮ್ಮ ವೃತ್ತಿಜೀವನದ ಸಮಯದಲ್ಲಿ, ಮುಂಬಯಿನ ಉಪನಗರ, ಧಾರಾವಿಯಲ್ಲಿ ಹರಡಿದ್ದ, ಪೋಲಿಯೋ ಮತ್ತು ಕುಷ್ಟರೋಗ ನಿರ್ಮೂಲನೆಗೆ ಬಹಳವಾಗಿ ಶ್ರಮಿಸುವಲ್ಲಿ ಸಕ್ರಿಯಪಾತ್ರವಹಿಸಿದ್ದರು.
ಪ್ರಶಸ್ತಿಗಳು
  • ಅಮೆರಿಕದಲ್ಲಿ ಜರುಗಿದ ಮೆಡಿಕಲ್ ಕಾನ್ಫರೆನ್ಸ್ ನಲ್ಲಿ ಭಾರತದ ಪ್ರತಿನಿಧಿ. ಸನ್.೧೯೬೮ ರಲ್ಲಿ ಇಂಡೋ ಸೋವಿಯೆಟ್ ಕಲ್ಚರಲ್ ಸೊಸೈಟಿ ಉಪಾಧ್ಯಕ್ಷೆ.
  • ಸನ್.೧೯೮೩ ರಲ್ಲಿ ಪ್ರತಿಷ್ಠಿತ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಗಳಿಸಿದರು.


ಡಾ. ಲಲಿತಾರಾವ್, ಮಹಾರಾಷ್ಟ್ರದ ಮಾಜಿ ಆರೋಗ್ಯ ಸಚಿವೆ, (೧೯೮೦-೮೫) ಸಾಮಾಜಿಕ ಕಾರ್ಯಕರ್ತೆ, ಹಾಗೂ ಹಲವಾರು ಸಂಘಸಂಸ್ಥೆಗಳಿಗೆ ನೆರವು ನೀಡುತ್ತಿದ್ದರು. ಲಲಿತಾ ರಾವ್ ಬಿ. ಎಸ್. ಕೆ. ಬಿ, ಮೈಸೂರ್ ಅಸೋಸಿಯೇಷನ್, ತುಳು ಸಂಘಗಳು ಸೇರಿದಂತೆ, ಹಲವಾರು ಸಾಮಾಜಿಕ ಸಂಸ್ಥೆಗಳ ಜೊತೆ ನಿಕಟವಾಗಿ ಕೆಲಸಮಾಡುತ್ತಿದ್ದರು. ಜನಪ್ರಿಯ ವೈದ್ಯೆ,, ಹಾಗೂ ಬಡವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಅಪ್ರತಿಮ ಕೊಳಲು ವಾದಕಿ, ಮಹಾಸಂಘಟಕಿ, ಒಳ್ಳೆಯ ಸೇವಾಮನೋಭಾವದ ವೈದ್ಯೆ, ಜೀವನವನ್ನು ತೀವ್ರವಾಗಿ ಪ್ರೀತಿಸುವ ನಗುಮುಖದ ವ್ಯಕ್ತಿಯಾದ ಲಲಿತರಾವ್ ಹಲವಾರು ವಿಶಯಗಳಲ್ಲಿ ಗಮನಕೊಡುತ್ತಿದ್ದರು. ಅವರಿಗೆ ಪರ್ವತಾರೋಹಣದಲ್ಲಿ ವಿಪರೀತ ಆಸಕ್ತಿ. ಸಂಗೀತ, ಹೊಲಿಗೆ, ಮುದ್ರಾವಿಜ್ಞಾನ, ಆಯುರ್ವೇದ, ರಾಜಕೀಯ, ಮೊದಲಾದ ಹಲವು ವಿಷಯಗಳಲ್ಲಿ ಆಸಕ್ತಿ ಇತ್ತು. ಬದುಕು ನಿಂತ ನೀರಿನಂತಿರಬಾರದೆಂದು ಹೇಳುತ್ತಿದ್ದರು.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಡಾ. ಲಲಿತಾರವರು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದಲ್ಲಿರುವ ಇನ್ನ ಎಂಬ ಊರಿನವರು. ಸನ್. ೧೯೨೦ ರಲ್ಲಿ ಜನಿಸಿದರು., ಲಲಿತ, ಮಂಗಳೂರಿನ ಆಯುರ್ವೇದ ಭೂಷಣ ಎಮ್. ವಿ. ಶಾಸ್ತ್ರಿಯವರ ಪುತ್ರಿ. ಉದ್ಯಮಿ ಪಿ. ವೆಂಕಟರಾವ್ ರನ್ನು ಮದುವೆಯಾದರು. ಖ್ಯಾತ ಕ್ರಿಕೆಟ್ ಪಟು ರವಿ ಶಾಸ್ತ್ರಿಗೆ ಇವರು ಸೋದರತ್ತೆಯಾಗಬೆಕು. ತಮ್ಮ ೧೭ ರ ಹರೆಯದಲ್ಲೇ ಮುಂಬಯಿಗೆ ಪಾದಾರ್ಪಣೆಮಾಡಿದ ಲಲಿತಾರವರು, ಸನ್. ೧೯೩೯ ರಲ್ಲಿ ಕಿಂಗ್ ಜಾರ್ಜ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇಂಟರ್ಮಿಡಿಯೆಟ್ ಪಾಸ್ ಆದ ಬಳಿಕ ಟೋಪಿವಾಲ ವೈದ್ಯಕೀಯ ಕಾಲೇಜ್ ನಲ್ಲಿ ವೈದ್ಯಕೀಯ ಶಿಕ್ಷಣಗಳಿಸಿದರು. ಅಂತಿಮ ಪರೀಕ್ಷೆಯಲ್ಲಿ 'ಪ್ರತಿಷ್ಠಿತ ಜೆನ್ನಿಂಗ್ಸ್ ಬಹುಮಾನ' ಗಳಿಸಿದರು. ೧೯೩೭-೩೮ ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಮಾಟುಂಗಾ ತಾಲ್ಲೂಕು ಕಾಂಗ್ರೆಸ್ ಸಮಿತಿಯಲ್ಲಿ ದುಡಿದ ಕ್ವಿಟ್ ಇಂಡಿಯ ಚಳುವಳಿಯಲ್ಲೂ ಭಾಗವಹಿಸಿ ಭೂಗತರಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ವೈದ್ಯಕೀಯ ನೆರವು ಕೊಟ್ಟರು. ಈ ಕಾರಣಕ್ಕಾಗಿ ಬ್ರಿಟಿಷ್ ಸರಕಾರ ಅವರಿಗೆ ಮೆರಿಟ್ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿತ್ತು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಲ್ಲಿ[ಬದಲಾಯಿಸಿ]

ಸನ್. ೧೯೫೦ ರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸದಸ್ಯೆಯಾಗಿ ಸಕ್ರಿಯ ಕಾರ್ಯಕರ್ತೆಯಾಗಿ ಗುರುತಿಸಲ್ಪಟ್ಟರು. ಅಸೋಸಿಯೇಷನ್ ನ ಕಟ್ಟಡ ಸಮಿತಿಯ ಕಾರ್ಯದರ್ಶಿಯಾಗಿ ಕಟ್ಟಡ ನಿರ್ಮಾಣಕ್ಕೆ ಭಾರಿಮೊತ್ತದ ಧನ ಸಂಗ್ರಹಿಸಿದರು. ಮುಂದೆ ಅಸೋಸಿಯೇಷನ್ ನ ಮುಂಬಯಿಶಾಖೆಯ ಅಧ್ಯಕ್ಷರಾಗಿ, ರಾಜ್ಯ ಶಾಖೆಯ ಉಪಾಧ್ಯಕ್ಷೆಯಾಗಿದ್ದರು. ೬೦ ರ ದಶಕದಲ್ಲಿ ಮುಂಬಯಿನ ಜೇಕಬ್ ಸರ್ಕಲ್ ನಲ್ಲಿ ಸ್ವಂತ ದವಾಖಾನೆಯನ್ನು ತೆರೆದು ಅಲ್ಲಿನ ಮಿಲ್ ಕಾರ್ಮಿಕರಿಗೆ ನೆರೆವಾದರು.ಕಡುಬಡವರು ವಾಸಿಸುವ ಧಾರಾವಿ ಕೊಳೆಗೇರಿ ಪರಿಶ್ತಿತಿ ಗಂಭೀರವಾಗಿತ್ತು. ಸ್ಷ್ಯ ಕುಷ್ಠರೋಗಗಳಂತ ರೋಗಗಳ ಆಗರವಾಗಿತ್ತು. ಅವುಗಳನ್ನು ವಾಸಿಮಾಡಲು ಸಾಧ್ಯ್ವೆಂದು ಮನವರಿಕೆ ಮಾಡಿಕೊಟ್ಟರು. ಸನ್. ೧೯೬೮ ರಲ್ಲಿ ಇಂಡೋ ಸೋವಿಯೆಟ್ ಕಲ್ಚರಲ್ ಸೊಸೈಟಿ ಉಪಾಧ್ಯಕ್ಷೆಯಾಗಿ ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳತೊಡಗಿದರು. ಸನ್, ೧೯೭೯ ರಲ್ಲಿ ಅಮೆರಿಕದ ಶಿಕಾಗೋನಗರದಲ್ಲಿ ಜರುಗಿದ ಅಮೆರಿಕನ್ ಮೆಡಿಕಲ್ ಕಾನ್ಫರೆನ್ಸ್ ನಲ್ಲಿ ಭಾರತವನ್ನು ಡಾ.ಲಲಿತಾರಾವ್ ಪ್ರತಿನಿಧಿಸಿದ್ದರು.

ಕನ್ನಡ ಕಲಾ ಕೇಂದ್ರದ ಅಧ್ಯಕ್ಷೆ[ಬದಲಾಯಿಸಿ]

ಸುಮಾರು ೪ ದಶಕಗಳ ಕಾಲ 'ಕನ್ನಡ ಕಲಾ ಕೇಂದ್ರ'ದ ಒಳಿತಿಗಾಗಿ ಸಕ್ರಿಯವಾಗಿ ದುಡಿದರು. ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದ 'ಶ್ರೀಮತಿ.ಲಲಿತಾರಾವ್ 'ಮಾಟುಂಗಾದ 'ತಮ್ಮ ಸ್ವಂತ ಬಂಗಲೆ, 'ಕೈಲಾಸ್' ನಲ್ಲಿ ವಾಸಿಸುತ್ತಿದ್ದರು. ಇವರ ಮನೆ, 'ಸಯಾಂ ಆಸ್ಪತ್ರೆ'ಗೆ ಹತ್ತಿರದಲ್ಲೇ ಇರುವ 'ಜೆ.ಆರ್.ಮೆಹ್ತಾ ಉದ್ಯಾನ್' ಎದುರಿಗಿದೆ.

ಗೌರವ, ಪುರಸ್ಕಾರಗಳು[ಬದಲಾಯಿಸಿ]

  • ಡಾ. ಲಲಿತಾರಾವ್ ರವರ ಸಾಮಾಜಿಕ ಸೇವೆಯನ್ನು ಗುರುತಿಸಿ ಮುಂಬಯಿನ ಮತ್ತು ಮಹಾರಾಷ್ಟ್ರದ ಹಲವಾರು ಸಂಘ-ಸಂಸ್ಥೆಗಳು ಅವರಿಗೆ ಸನ್ಮಾನಮಾಡಿವೆ.[೧]
  • ಸನ್. ೧೯೮೩ ರಲ್ಲಿ ಪ್ರತಿಷ್ಟಿತ ಡಾ. ಬಿ.ಸಿ.ರಾಯ್ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ

ಸಾರ್ವಜನಿಕ ಸೇವಾ ಅಭಿಯಾನಗಳು[ಬದಲಾಯಿಸಿ]

  • ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಹಲವು ಸಾರ್ವಜನಿಕ ಸಭೆಗಳನ್ನು ನಡೆಸಿದರು.
  • ನೇತ್ರ, ಹಾಗೂ ದಂತ ತಪಾಸಣೆಯ ಶಿಬಿರಗಳು ಹಲವುಬಾರಿ ಆಯೋಜಿಸಲ್ಪಟ್ಟಿದ್ದವು.
  • ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವ ನೆಲೆಯಲ್ಲಿ ಉಪನ್ಯಾಸಗಳನ್ನು ಸತತವಾಗಿ ಕೊಡುತ್ತಿದ್ದರು.
  • ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಶಿಕ್ಷಣ ತರಗತಿಗಳನ್ನು ನಡೆಸುತ್ತಿದ್ದರು.
  • ತಾವು ಸಚಿವರಾಗಿದ್ದಾಗ ಕೊಳಚೆ ಪ್ರದೇಶದಲ್ಲಿನ ಮದ್ಯದ ಅಂಗಡಿಗಳನ್ನೂ ತೆರವುಗೊಲಿಸಿ ಪೋಲಿಸ್ ಥಾಣೆ ಮತ್ತು ಅಂಚೆ ಕಚೇರಿಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರಕ್ಕೆ ಮನವೊಪ್ಪಿಸಲು ಯಶಸ್ವಿಯಾದರು.
  • ಕೊಳಚೆಪ್ರದೇಶಗಳಲ್ಲೂ ಕೊ ಆಪರೇಟಿವ್ ಹೌಸಿಂಗ್ ಸೊಸೈಟಿಗಳನ್ನು ಸ್ಥಾಪಿಸಲು ಪ್ರೊತ್ಸಾಹಿಸಿದರು.

ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ[ಬದಲಾಯಿಸಿ]

ಮಹಿಳೆಯರಿಗೆ ಹೆಚ್ಚಿನ ವಿದ್ಯೆಯನ್ನು ಕೊಡುವ ಬಗ್ಗೆ, ರಾಜಕೀಯದಲ್ಲಿ ಆದ್ಯತೆ ಇಲ್ಲದ ಕಾಲ. ಮನೆಯಲ್ಲಿ ಗಂಡನ ಸಹಕಾರ ಹಾಗೂ ಪ್ರೋತ್ಸಾಹದಿಂದ ಅವರು, ಮುಂದುವರೆದರು. ಅವರಲ್ಲಿದ್ದ ಸಮಾಜಸೇವಕಿ, ರಾಜಕಾರಣಿ ಮತ್ತು ಸಂಘಟಕಿಯ ಕಾರ್ಯಗಳು ದೇಶಕ್ಕೆ ಅಮೂಲ್ಯ ಕೊಡುಗೆಗಳಾಗಲು ಅನುಕೂಲವಾಯಿತು. ಅವರು, ನಾಡಿನಾದ್ಯಂತ ಓಡಾಡಿ ಹಲವಾರು ಸಮಾಜಸೇವೆಯ ಕಾರ್ಯಗಳನ್ನು ತಮ್ಮನ್ನು ತೊಡಗಿಸಿಕೊಂಡರು. ಸನ್. ೧೯೩೬ ರಲ್ಲಿ ಮದುವೆಯಾದ ನಂತರ ಗಂಡನ ಪ್ರೋತ್ಸಾಹದಿಂದ ಎಮ್. ಬಿ.ಬಿ.ಎಸ್. ಸೇರಿ, ವೈದ್ಯಕೀಯ ವಲಯದಲ್ಲಿ ಒಬ್ಬ ವ್ಯಕ್ತಿ ಸಾಧಿಸಬಹುದಾದ್ದೆಲ್ಲವನ್ನೂ ಸಾಧಿಸಿತೋರಿಸಿದರು. ಸನ್.೧೯೬೯ ರಲ್ಲಿ ಲಲಿತಾರಾವ್ ರವರ ಕಾರ್ಯಕ್ಷಮತೆ ಮತ್ತು ಸೇವಾಪ್ರವೃತ್ತಿಯನ್ನು ಹತ್ತಿರದಲ್ಲಿ ಕಂಡ ಭಾರತದ ಪ್ರಧಾನಿ ಇಂದಿರಾಜಿಯವರು ಅವರನ್ನು ರಾಜಕೀಯದಲ್ಲಿ ಪ್ರವೇಶಿಸಲು ಒತ್ತಾಯಮಾಡಿದರು. ನಿಸ್ಪೃಹ ಕಾರ್ಯಕರ್ತರನ್ನು ಅವರು ಮೆಚ್ಚಿ ಪ್ರಾತ್ಸಾಹಿಸುತ್ತಿದ್ದರು. ಸನ್. ೧೯೭೪ ರಲ್ಲಿ ಈ ಜನಸೇವಕಿ ಮುಂಬಯಿ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಟ್ರಾಂಬೆ ಕ್ಷೇತ್ರದಿಂದ ಚುನಾವಣೆಗೆ ನಿಂತು ಜಯಗಳಿಸಿದರು[ಬದಲಾಯಿಸಿ]

ಟ್ರಾಂಬೆ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಚಂಡ ಬಹುಮತ ಗಳಿಸಿ ವಿಜಯಿಯಾದರು. ಡಾ. ಲಲಿತಾ ರಾವ್ ನಗರದ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳನ್ನು ಉತ್ತಮಗೊಳಿಸುವ ನೆಲೆಯಲ್ಲಿ ನಿಷ್ಠೆಯಿಂದ ದುಡಿದು ಜಯಶಾಲಿಯಾದರು. ಸನ್. ೧೮೮೩ ರಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬಳು ರಾಜ್ಯದ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಶಾಖೆಯ ಮಂತ್ರಿಯಾಗಿ ನೇಮಿಸಲ್ಪಟ್ಟರು. ಆ ಸಮಯದಲ್ಲಿ ಲಲಿತಾರವರು, ಏಷ್ಯಾದ ಅತಿದೊಡ್ಡ ಕೊಳೆಗೇರಿಯೆಂಬ ಕುಖ್ಯಾತಿಗೆ ಪಾತ್ರವಾಗಿದ್ದ ಮುಂಬಯಿನ ಉಪನಗರ, ಧಾರಾವಿಯಲ್ಲಿ ಹರಡಿದ್ದ, ಪೋಲಿಯೋ ಮತ್ತು ಕುಷ್ಟರೋಗ ನಿರ್ಮೂಲನೆಗೆ ಬಹಳವಾಗಿ ಶ್ರಮಿಸಿದರು. ಅದಕ್ಕೆ ಕಾಯಕಲ್ಪ ನೀಡಲು ಬಹಳವಾಗಿ ಶ್ರಮಿಸಿದರು. ಸರಳ ವ್ಯಕ್ತಿತ್ವದ ಡಾ. ಲಿಲಿತಾ ರಾವ್ ರವರು, ಮುಂಬಯಿ ಕನ್ನಡಿಗರ ಸುಖದುಖಃಗಳನ್ನು ಹತ್ತಿರದಿಂದ ಕಂಡು ಸದಾ ಸ್ಪಂದಿಸುತ್ತಾ ಒಟ್ಟಾರೆ ನಗರದ ಬಡವರ ಶುಷೄಷೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ತಾವು ಮಂತ್ರಿಯಾಗಿದ್ದ ಸಮಯದಲ್ಲಿ ೨ ಸಾವಿರ ವೈದ್ಯರ ಪಡೆಯೊಂದನ್ನು ಸಿದ್ಧಪಡಿಸಿ, ಇಡೀ ಧಾರಾವಿಯ ಸರ್ವೆ ಮಾಡಿದರು. ಅವರ ಅಭಿಯಾನದಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಮತ್ತು ಯುನಾನಿ ವೈದ್ಯಕೀಯ ವಿದ್ಯಾರ್ಥಿಗಳ ಪಡೆಯಿತ್ತು. ಅವರ ಸಹಯೋಗ, ಸಹಕಾರಗಳಿಂದ ಪೋಲಿಯೋ ರೋಗ ನಿವಾರಣೆಗೆ ತಮ್ಮ ಅನುಪಮ ಸಮಯವನ್ನು ಮುಡಿಪಾಗಿಟ್ಟರು. ಆಗ ಮಾಡಿದ ಸರ್ವೇಕ್ಷಣೆಯ ವರದಿಯ ಪ್ರಕಾರ ಕಾಯಿಲೆ ಹರಡಲು ಅಲ್ಲಿದ್ದ ಅತಿಯಾದ ಹಂದಿಗಳ ಇರುವಿಕೆಯಿಂದ ಎನ್ನುವ ಸತ್ಯ ತಿಳಿಯಿತು. ಡಾ. ಲಲಿತಾ, ಸ್ಥಳೀಯ ಕಾರ್ಪೊರೇಟರ್ ಒಬ್ಬ್ಬರ ನೆರವಿನಿಂದ ೨೦೦ ಲಾರಿ ಹಂದಿಗಳನ್ನು ಹಿಡಿದು, ಹೊರಗೆ ಸಾಗಿಸಿದರು. ಹೊಲಸು ಗುಂಡಿಗಳನ್ನು ಮುಚ್ಚಿ, ಚರಂಡಿಗಳನ್ನು ಶುದ್ಧಿಮಾಡಿ ಹೊಲಸು ನೈರ್ಮಲ್ಯ , ನಿರ್ಮೂಲನಾ ಕಾರ್ಯದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸಿದರು. ಧಾರಾವಿಗೆ , ಹೊಸರೂಪ ಬಂತು. ಅಲ್ಲಿನ ಪ್ರತಿ ಮನೆಮನೆಗೆ ಭೆಟ್ಟಿಮಾಡಿ ಜನರಿಗೆ ವೈದ್ಯಕೀಯ ಸಹಾಯ ಕೊಡಿಸಿದರು. ಅಲ್ಲಿನ ಜನ ಲಲಿತಾರಾವ್ ರನ್ನು ಬಹಳವಾಗಿ ಆದರ, ಗೌರವಗಳಿಂದ ಕಾಣುತ್ತಿದ್ದರು. ರಾಜಕೀಯ ಕ್ಷೇತ್ರ ಅವರ ಮನೋಭಾವಕ್ಕೆ ಸರಿಯಾಗಿ ಒಗ್ಗಿಬರಲಿಲ್ಲ. ರಾಜಕೀಯ ವಲಯದಲ್ಲಿದ್ದ ಸರ್ವರೂ ಸೇವಾಮನೋಭಾವವನ್ನು ಹೊಂದಿದರೆ ಮಾತ್ರ ಆ ಕೆಲಸ ಅಚ್ಛುಕಟ್ಟಾಗಿ ನಡೆಯಲು ಸಾಧ್ಯ.. ಕೇವಲ ಕೆಲವರಿಂದ ಸಾರ್ವಜನಿಕ ಸೇವೆಯ ಕಾರ್ಯ ಸರಿಯಾಗಿ ನಡೆಯುವುದು ಅಸಾಧ್ಯ. ಇದನ್ನು ಮನಗಂಡ 'ಲಲಿತಾ ರಾವ್' ತಮ್ಮ ಸಚಿವ ಸ್ಥಾನಕ್ಕೆ ಸ್ವಯಂ ರಾಜೀನಾಮೆ ಕೊಟ್ಟರು.

ಮಗ ಬಿ.ಟೆಕ್, ಪದವೀಧರ[ಬದಲಾಯಿಸಿ]

ಮಗ ಡಾ. ಅನಿಲ್ ವಿ.ರಾವ್, ಮೆಟಲರ್ಜಿ ವಿಷಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಇ.; ಬಿ.ಟೆಕ್; ಪದವಿ ಗಳಿಸಿದ ನಂತರ ಅಮೆರಿಕಕ್ಕೆ ಹೋಗಿ, ಅಲ್ಲಿ ವೈದ್ಯಕೀಯ ಕಾಲೇಜಿಗೆ ಸೇರಿ ವೈದ್ಯರಾಗಿದ್ದಾರೆ.

ನಿಧನ[ಬದಲಾಯಿಸಿ]

೯೩ ವರ್ಷಹರೆಯದ ಡಾ. ಲಲಿತಾರಾವ್ ಸನ್. ೨೦೧೩ರ, ಜುಲೈ, ೨೮, ರವಿವಾರದ ಪೂರ್ವಾನ್ಹ, ೧೧ ಗಂಟೆಗೆ ಮುಂಬಯಿನಗರದ 'ಸಯಾನ್ ಆಸ್ಪತ್ರೆ'ಯಲ್ಲಿ ವಿಧಿವಶರಾದರು. ಲಲಿತಾರಾವ್ ಸುಮಾರು ಸಮಯದಿಂದ ವೃದ್ಧಾಪ್ಯ , ಹಾಗೂ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]

  • ಕೃಪೆ: ' ಮಹಾರಾಷ್ಟ್ರ ರಾಜಕೀಯ ಕ್ಷೇತ್ರದ ಅಪೂರ್ವ ಮಹಿಳೆ ಡಾ. ಲಲಿತಾ ರಾವ್', ೧೦-೦೮-೨೦೧೩ ಕರ್ನಾಟಕ ಮಲ್ಲ, ಪುಟ ೬, ಡಾ. ಜಿ.ಎನ್. ಉಪಾಧ್ಯ..
  1. http://www.daijiworld.com/news/news_disp.asp?n_id=65225&n_tit=Students+Felicitate+Former+State+Health+Minister+Dr+Lalita+Rao+[ಶಾಶ್ವತವಾಗಿ ಮಡಿದ ಕೊಂಡಿ]