ಬೌದ್ಧ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭೌದ್ಧಧರ್ಮ ಇಂದ ಪುನರ್ನಿರ್ದೇಶಿತ)
ಟೋಕಿಯೋ ರಾಷ್ಟ್ರೀಯ ವಸ್ತುಪ್ರದರ್ಶನಾಲಯದಲ್ಲಿರುವ ನಿಂತಿರುವ ಶೈಲಿಯ ಬುದ್ಧನ ಪ್ರತಿಮೆ. ಜಗತ್ತಿನಲ್ಲಿರುವ ಪುರಾತನ ಬುದ್ಧ ಪ್ರತಿಮೆಗಳ ಪೈಕಿ ಒಂದು ಇದಾಗಿದ್ದು ಇದನ್ನು ಕ್ರಿ.ಶ ೧ -೨ ನೇ ಶತಮಾನದಲ್ಲಿ ಕೆತ್ತನೆ ಮಾಡಲಾಗಿದೆಯೆಂದು ಅಂದಾಜಿಸಲಾಗಿದೆ.
ಬೌದ್ಧ ದರ್ಮ

ಪೀಠಿಕೆ[ಬದಲಾಯಿಸಿ]

ಟಿಬೆಟ್ ಬೌದ್ಧ ಧರ್ಮೀಯರ ಸಾಂಪ್ರದಾಯಿಕ ವರ್ಣಚಿತ್ರ, ಜೀವನದ ಆರು ವಿವಿಧ ಮಜಲುಗಳನ್ನು ಸೂಚಿಸುತ್ತಿರುವ ಜೀವನ ಚಕ್ರ.
ಬೌದ್ಧ ಧರ್ಮ ಎಂದರೆ ಪ್ರಪಂಚದ ಅನೇಕ ಧರ್ಮಗಳಲ್ಲಿ 4 ನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸತ್ಯ ಮತ್ತು ವಿಜ್ಞಾನಕ್ಕೆ ಹತ್ತಿರವಾದ ಹಾಗೂ ಯಾರಿಗೂ ನಿಷ್ಠೂರವಾಗದ ವಾಸ್ತವ ವಾದವನ್ನು ಕ್ರಿ.ಪೂ. 566 ವರ್ಷಗಳ ಮುಂಚಿತವಾಗಿ ಭಾರತ ದಲ್ಲಿ ಜನನವಾಗಿ 98 ವರ್ಷಗಳ ಕಾಲ ಜೀವಿಸಿದ್ದ ಸಿದ್ದಾರ್ಥ ಗೌತಮ ಬುದ್ದ‌ನ ಬೋಧನೆಗಳ ಮೇಲೆ ಆಧಾರಿತವಾಗಿ ಬೆಳೆದು ಬಂದಿರುವ ಭಾರತೀಯ ಧರ್ಮ.
ನಳಂದ ಶಾಸನಗಳಲ್ಲಿ ದೊರೆತಿರುವ ಬುದ್ಧನು ನಾಲ್ಕು ಸತ್ಯಗಳನ್ನು ಬೋಧಿಸುತ್ತಿರುವ ಕಾಲ್ಪನಿಕ ಚಿತ್ರ ನಳಂದ, ಬಿಹಾರ ರಾಜ್ಯ, ಭಾರತ.
ಗೌತಮಬುದ್ಧನಿಗೆ ಜ್ಞಾನೋದಯವಾದ ಸ್ಥಳ, ಬೋಧ ಗಯಾ, ಭಾರತ.
ಸಾಖ್ಯರ ರಾಜಧಾನಿಯಾದ ಕಪಿಲವಸ್ತುವಿನ ರಾಜ ಶುದ್ದೋಧನ ಹಾಗೂ ಮಹಾಮಾಯೆ ಎನ್ನುವವರ ಮಗನಾದ ರಾಜಕುಮಾರ ಸಿದ್ಧಾರ್ಥ ನು ಕಠಿಣ ಪರಿಶ್ರಮ ಮೂಲಕ ಜ್ಞಾನ ವನ್ನು ಪಡೆದು ಬುದ್ಧನಾಗಿ 98 ವರ್ಷಗಳ ಕಾಲ ಧರ್ಮೋಪದೇಶ ಮಾಡುತ್ತಾ ನಿರ್ವಾಣ ಹೊಂದಿದ ಕಾರಣ ಗೌತಮ ಬುದ್ಧ ನೆಂಬ ಹೆಸರೂ ಇದೆ. ಅವನ ಉಪದೇಶಗಳು ಸಂಭಾಷಣೆಯ ರೂಪದಲ್ಲಿದ್ದು ಅವನ ಶಿಷ್ಯರಾದ, ಮಹಾಕಶ್ಯಪ, ಉಪಾಲಿ ಗಳು ಸಂಗ್ರಹಿಸಿದ ಉಪದೇಶಗಳು ಪಿಟಿಕ ಗಳೆಂದು ಪ್ರಸಿದ್ಧವಾಗಿವೆ. ಅದರಲ್ಲಿ ವಿನಯ ಪಿಟಿಕ ಆಚಾರ ಸಂಬಂಧ ಗ್ರಂಥ ; ಅಭಿದಮ್ಮ ಪಿಟಿಕ ತಾತ್ವಿಕ ವಿಚಾರ ಸಂಬಂಧ ಗ್ರಂಥ. ಪ್ರಸಿದ್ಧವಾದ ದಮ್ಮಪದ (ಗ್ರಂಥ) ಅದರಲ್ಲೇ ಇದೆ. ಮಿಲಿಂದ ಪನ್ಹಾ ಈ ಧರ್ಮದ ಇನ್ನೊಂದು ಗ್ರಂಥ.

ಆರ್ಯ ಸತ್ಯಗಳು :[ಬದಲಾಯಿಸಿ]

ದಾರ್ಶನಿಕ (ತಾತ್ವಿಕ) ಸಮಸ್ಯೆಗೆ ತರ್ಕ ಪ್ರಯೋಜನವಿಲ್ಲವೆಂದು ಗೌತಮ ಬುದ್ಧನು ಆಚಾರ -ವಿಚಾರಗಳಿಗೆ ಪ್ರಾಮುಖ್ಯತೆ ಕೊಟ್ಟನು.

ಬುದ್ಧನು ಸಾಕ್ಷಾತ್ಕರಿಸಿಕೊಂಡ ಸತ್ಯಗಳು :

  1. ದುಃಖಮ್ : ಈ ಪ್ರಪಂಚದ ಜೀವನವು ದುಃಖಮಯವಾಗಿದೆ. ಸುಖಗಳು ತೋರಿಕೆಯವು ; ಆದ್ದರಿದ ದುಃಖದಿಂದ ತಪ್ಪಿಸಿಕೊಳ್ಳುವುದೇ ಮಾನವನ ಗುರಿ.
  2. ದುಃಖ ಸಮುದಾಯ :ದುಃಖದ ಸಂ+ಉದಯ -ಹುಟ್ಟು (ಸಮುದಾಯ ?) : ಈ ದುಃಖ (ಸಮುದಾಯಗಳೇ) ದ ಮೂಲವೇ ದುಃಖಕ್ಕೆ ಕಾರಣವಾಗಿದೆ. ಮುಖ್ಯವಾಗಿ ಹನ್ನೆರಡುಬಗೆಯ ದುಃಖಗಳು: ಜರಾ-ಮರಣ; ಜಾತಿ; ಭವ; ಉಪಾದಾನ; ತೃಷ್ಣಾ; ವೇದನಾ; ಸ್ಪರ್ಶ; ಷಡಾಯತನ; ನಾಮ ರೂಪ; ವಿಜ್ಞಾನ; ಸಂಸ್ಕಾರ; ಮತ್ತು ಅವಿದ್ಯಾ, -ಹಿಂದಿನದು ಮುಂದಿನದಕ್ಕೆ ಕಾರಣ. ಇದು ದ್ವಾದಶ ನಿದಾನ ( ಭವ : ಕರ್ಮ|| ಉಪಾದಾನ: ಆಸಕ್ತಿ|| ವೇದನಾ: ಇಂದ್ರಿಯಾನುಭವ|| ಷಡಾಯತನ: ಮನಸ್ಸು -ಶರೀರೇಂದ್ರಿಯಗಳ ಸಂಬಂಧ)(Dukkha samudaya; Samudaya means "origin" or "source",- ಇಂ. ವಿಕಿ)
ಕೊನೆಯಲ್ಲಿರುವ ಅವಿದ್ಯೆ (ಅಜ್ಞಾನ) ಸಮಸ್ತ ದುಃಖಗಳಿಗೂ ಕಾರಣ.
ಈ ಭವ ಚಕ್ರಕ್ಕೆ ಪ್ರತೀತ ಸಮುತ್ಪಾದ ಎನ್ನುವರು.
ಇದಕ್ಕೆ (ಈ ತಾತ್ವಿಕ ವಿಶ್ಲೇಷಣೆಗೆ) ಸಾಪೇಕ್ಷ ಕಾರಣತಾವಾದ ಎನ್ನಬಹುದು.
೩. ದುಃಖ ನಿರೋಧ : ದುಃಖ ನಿರೋಧ ಸಾಧ್ಯ ಎನ್ನುವುದು ಮೂರನೆಯ ಸತ್ಯ. .ಕಾರಣವನ್ನು ನಿರೋಧಿಸಿದರೆ -ಕಾರ್ಯವು ನಾಶವಾಗಿ ಅವಿದ್ಯೆಯ ನಾಶದಿಂದ ದುಃಖ ನಿವಾರಣೆ ಯಾಗುವುದು. (ಕಾರಣವಿಲ್ಲದೆ ಕಾರ್ಯವಿಲ್ಲ -ತರ್ಕ ಸಿದ್ಧಾಂತ)
೪. ದುಃಖ ನಿರೋಧ ಗಾಮಿನಿ ಪ್ರತಿಪತ್ : ದುಃಖವನ್ನು ನಿರೋಧಿಸಲು ಮಾರ್ಗವಿದೆ-ಎಂಬ ಸತ್ಯ. >
ಸುಖ ಲೋಲುಪತೆ ,- ಅತಿ ದೇಹ ದಂಡನೆ, ಈ ಎರಡರ ಬದಲು ಮಧ್ಯಮಾರ್ಗ ಉತ್ತಮವಾದುದು. ಅದಕ್ಕೆ ಎಂಟು ಮೆಟ್ಟಿಲು.
ಆರ್ಯ ಅಷ್ಟಾಂಗಿಕ ಮಾರ್ಗ
ಅವು : ಸಮ್ಯಕ್ ಜ್ಞಾನ (ನಾಲ್ಕು ಆರ್ಯ ಸತ್ಯಗಳನ್ನು ಅರಿಯುವುದು); ಸಮ್ಯಕ್ ಸಂಕಲ್ಪ (ದೃಢ ನಿಶ್ಚಯ) : ಸಮ್ಯಕ್ ವಚನ (ಸತ್ಯ ವಚನ) : ಸಮ್ಯಕ್ ಕರ್ಮಾಂತ (ಅಹಿಂಸೆ - ಸತ್ಕರ್ಮ) ; ಸಮ್ಯಕ್ ಆಜೀವ (ನ್ಯಾಯ ಜೀವನ) ; ಸಮ್ಯಕ್ ವ್ಯಾಯಾಮ (ಸತತ ಪ್ರಯತ್ನ) ; ಸಮ್ಯಕ್ ಸ್ಮ ತಿ (ಸತ್ ಚಿಂತನೆ) ; ಮತ್ತು ಸಮ್ಯಕ್ ಸಮಾಧಿ (ರಾಗ ದ್ವೇಷವಿಲ್ಲದ ಚಿತ್ತೈಕಾಗ್ರತೆ) ಇವು ಆರ್ಯ ಅಷ್ಟಾಂಗಿಕ ಮಾರ್ಗ. ಇದರಿಂದ ಮೋಕ್ಷ . ದಮ್ಮಪದದಲ್ಲಿ ಮೂರು ಮಾರ್ಗ ಹೇಳಿದೆ. ಅವು : ಪಾಪಾಕರಣ ; ಪುಣ್ಯ ಸಂಚಯ ; ಚಿತ್ತ ಪರಿಶುದ್ಧಿ . ಇವನು (ಗೌತಮ ಬುದ್ಧ) ಭವ ರೋಗಕ್ಕೆ ವ್ಶೆದ್ಯ ಶಾಸ್ತ್ರದ ನಿಯಮದಂತೆ ಪರಿಹಾರ ಹೇಳಿರುವುದರಿಂದ ಗೌತಮ ಬುದ್ಧನಿಗೆ -ಮಹಾಭಿಷಕ್ ಎಂದರೆ ವ್ಶೆದ್ಯರಾಜನೆಂದಿದೆ (ವ್ಶೆದ್ಯ ಶಾಸ್ತ್ರದ ನಿಯಮ- ರೋಗ, ರೋಗಮೂಲ, ನಿರೋಧ, ಬೈಷಜ ಎಂದರೆ ಔಷಧಿ galla mulaka

ದಾರ್ಶನಿಕ ಸಿದ್ಧಾಂತ :[ಬದಲಾಯಿಸಿ]

(ಬುದ್ಧನ ಶಿಲ್ಪ-ಧರ್ಮ ಚಕ್ರ ಮುದ್ರೆಯಲ್ಲಿ-ಸಾರನಾಥ-ವಾರಣಸಿ ಅವನ ಧರ್ಮದ ಸಂಕೇತ .
ಬುದ್ಧನ ಬೋಧನೆಯಲ್ಲಿ ತಾತ್ವಿಕ ಗುರಿ ಇಲ್ಲದಿದ್ದರೂ, ತಾತ್ವಿಕ ದೃಷ್ಠಿ ಇದೆ.
ಮುಖ್ಯವಾಗಿ ಎರಡು ಸಿದ್ಧಾಂತಗಳು - ನ್ಶೆರಾತ್ಮ ವಾದ ಅಥವಾ ಸಂಘಾತ ವಾದ ಮತ್ತು ಸಂತಾನ ವಾದ .
ನೈರಾತ್ಮ ವಾದ: ದೇಹಕ್ಕಿಂತ ಭಿನ್ನವಾದ ಆತ್ಮದ ಅಸ್ತಿತ್ವವನ್ನು ಬುದ್ಧ ನಿರಾಕರಿಸಿದ. ನೇತ್ಯಾತ್ಮಕವಾದ್ದರಿಂದ ನ್ಶೆರಾತ್ಮ ವಾದ ವೆಂದು ಹೆಸರು. ಆತ್ಮವು ಪ್ರತ್ಯಕ್ಷ ಗೋಚರವಾದ ಮಾನಸಿಕ ವೃತ್ತಿಗಳ ಪುಂಜವೆಂದು ಪ್ರತಿಪಾದಿಸಿದ. ಆದ್ದರಿಂದ ಅದು ಸಂಘಾತವಾದ.
Gold colored statue of man reclining on his right side
ಮಹಾ ಪರಿನಿರ್ವಾಣವನ್ನು ಬಿಂಬಿಸುತ್ತಿರುವ ಬುದ್ಧನ ಪ್ರತಿಮೆ. ಮಹಾ ಪರಿನಿರ್ವಾಣ ದೇವಾಲಯ, ಖುಷಿನಗರ, ಉತ್ತರಪ್ರದೇಶ, ಭಾರತ.

ಆತ್ಮ :[ಬದಲಾಯಿಸಿ]

ಆತ್ಮವು ನಾಮ-ರೂಪಕವಾದುದು, ಭೌತವಲ್ಲದ ಮಾನಸಿಕ ಪ್ರವೃತ್ತಿಗಳಿಗೆ ನಾಮವೆಂದು ಹೆಸರು. ಅದು ಸಂಜ್ಞಾ, ವೇದನಾ, ಸಂಸ್ಕಾರ, ವಿಜ್ಞಾನವೆಂದು ನಾಲ್ಕು ಬಗೆ.

ವಸ್ತುವಿನ ಜ್ಞಾನ ಸಂಜ್ಞೆ ಯು ಅದರಿಂದ ಆಗುವುದು ಸುಖ ದುಃಖ ,ವೇದನೆ, ಅದರ ಅನುಭವದ ಸ್ಮ್ ಋತಿ -ಸಂಸ್ಕಾರ , ಚೈತನ್ಯವೇ ವಿಜ್ಞಾನ .

ಪೃಥ್ವಿ, ವಾಯು, ಜಲ, ತೇಜಸ್ಸು, -ಈ ನಾಲ್ಕು ಭೂತಗಳಿಂದ ಶರೀರವೂ ರೂಪವೂ ಆಗುತ್ತದೆ.

ರೂಪ, ಸಂಜ್ಞೆ, , ವೇದನಾ, ಸಂಸ್ಕಾರ, ವಿಜ್ಞಾನ-ಇವು ಸ್ಕಂದಗಳು. ಇವುಗಳ ಸಂಘಾತವೇ ಆತ್ಮ. -ಎಂದರೆ ಶರೀರ, ಮನಸ್ಸು, ಕಾರ್ಯ ಇವು ಸೇರಿ ಆತ್ಮ ವಾಗುತ್ತದೆ.

ಉದಾಹರಣೆ : ರಥದ ಭಾಗಗಳು, ದಂಡ ,ಚಕ್ರ, ಅಕ್ಷ, ಇತ್ಯಾದಿ ಸೇರಿ ರಥವಾಗುತ್ತದೆ. -ಇವು ಅವಯುವ ; ಇವು ಸತ್ಯ ; ಇವೆಲ್ಲಾ ಸೇರಿದರೆ ರಥ. ಅವಯುವ ಇದ್ದರೆ ರಥ ಇದೆ ; ಅವಯುವಿಯಾದ ರಥವು ಅವಯುವಗಳಾದ ಚಕ್ರಾದಿಗಳಿಲ್ಲದಿದ್ದರೆ -ಇಲ್ಲ. ಹಾಗೆಯೇ ಪಂಚ ಸ್ಕಂದಗಳಿಲ್ಲದಿದ್ದರೆ ಆತ್ಮವಿಲ್ಲ. ಆತ್ಮವು ಸಂಘಾತದಿಂದಾದುದು ; ಸಂಘಾತ ಹೋದರೆ ಆತ್ಮವಿಲ್ಲ.
ಜಪಾನ್ ನ ಕೋಟೊಕುಇನ್ ನಲ್ಲಿರುವ ಬುದ್ಧ ಪ್ರತಿಮೆ

ಬಂಧ ಮತ್ತು ಮೋಕ್ಷ.[ಬದಲಾಯಿಸಿ]

ಪುನರ್ಜನ್ಮವು ಪ್ರತಿಕ್ಷಣದಲ್ಲೂ ಆಗುತ್ತಿರುತ್ತದೆ ; ಒಂದು ದೀಪದಿಂದ ಮತ್ತೊಂದು ದೀಪ ಹತ್ತಿದಂತೆ , ಒಬ್ಬ ವ್ಯಕ್ತಿಗೆ ಸೇರಿದ ಕರ್ಮಗಳು, ಮರಣದ ಸಮಯದಲ್ಲಿ ಮತ್ತೊಬ್ಬನಿಗೆ ವರ್ಗಾವಣೆ ಆಗಬಹುದು. ಆಗ ಸಂಸ್ಕಾರಗಳೂ ವರ್ಗಾವಣೆ ಆಗುವುವು. ಅದೇ ಆತ್ಮ ಮತ್ತೊಂದುಕಡೆ ಹುಟ್ಟುವುದಿಲ್ಲ. ಆತ್ಮವು ವಸ್ತುವಲ್ಲದಿದ್ದರೂ, ನಿರಂತರ ಅದೇ (ಕರ್ಮ) ಸಂಸ್ಕಾರದೊಂದಿಗೆ ಪುನರ್ಜನ್ಮದಲ್ಲಿ ಬೇರೆ ಶರೀರದಲ್ಲಿ ಕಾಣಬಹುದು. ಕರ್ಮಫಲ ಸ್ವಂತಂತ್ರವಾಗಿ ಕೆಲಸ ಮಾಡುತ್ತದೆ.
ಧ್ಯಾನಸ್ಥ ಸ್ಥಿತಿಯಲ್ಲಿರುವ ಬುದ್ಧನ ಪ್ರತಿಮೆ, ಹಾವ್ ಫ್ರ ಕ್ಯಾವ್, ವಿಯೆಂಟಿಯಾನ್, ಲಾವೋಸ್.

ಮೋಕ್ಷ -ನಿರ್ವಾಣ[ಬದಲಾಯಿಸಿ]

ಎಲ್ಲಾ ದುಃಖಗಳೂ ಅಡಗುವ ಸ್ಥಿತಿ. ನಿರ್ವಾಣ-ನಂದಿಹೋಗುವುದು; ಅಥವಾ ಪ್ರಶಾಂತವಾಗುವುದು. ಅದು ಸಂಪೂರ್ಣ ವಿಲಯನ; ಸಂಘಾತದ ಪ್ರವಾಹ ನಿಂತು ಹೋಗುವ ಸ್ಥಿತಿ. ಈ ಸ್ಥಿತಿ ತಲುಪಿದವನು ಅರ್ಹಂತ. ಅದೇ ಜೀವನದ ಗುರಿ.

ತೇರವಾದ (ಹೀನಯಾನ) ಮತ್ತು ಮಹಾಯಾನ[ಬದಲಾಯಿಸಿ]

ಹೀನ ಯಾನವು(ತೇರವಾದ : ಚರ್ಚೆಪುಟ:ಬೌದ್ಧ ಧರ್ಮ) ಶ್ರಾವಕ ಬೋಧಿಯ ಆದರ್ಶವನ್ನು ಹೊಂದಿದೆ. ಬುದ್ಧನ ಬಳಿಯಲ್ಲಿ ಕಲಿಯುವಾತ ಶ್ರಾವಕ ಅವನು ಅಷ್ಟಾಂಗ ಮಾರ್ಗವನ್ನು ಅನುಸರಿಸಿ ಅರ್ಹತ ಪದವಿ ಪಡೆದು ಸಂಸಾರ ಬಂಧನದಿಂದ ಬಿಡುಗಡೆ ಹೊಂದುತ್ತಾನೆ. ಅವನು ತನ್ನ ವ್ಯಕ್ತಿಗತ ಕಲ್ಯಾಣಸಾಧನೆಯಲ್ಲಿ ತೊಡಗಿರುತ್ತಾನೆ. ಅವನಿಗೆ, ಬೇರೆಯವರಿಗೆ ನಿರ್ವಾಣ ಕೊಡುವ ಶಕ್ತಿ ಇಲ್ಲ.
ಮಹಾಯಾನಕ್ಕೆ ಬೋಧಿಸತ್ವನೇ ಆದರ್ಶ . ಬೋಧಸತ್ವ ಎಂದರೆ ಬೋಧಿಯನ್ನು ಹೊಂದಲು ಇಚ್ಛೆಯುಳ್ಳವನು. ಈ ಅವಸ್ಥೆಯನ್ನು ಹೊಂದಿರುವ ಸಾಧಕನ ಗುರಿ, ಧ್ಯೇಯ, ಜಗತ್ತಿನ ಕಲ್ಯಾಣ. -ಮಹಾಮೈತ್ರಿ - ಮಹಾಕರುಣೆ - ಅವನ ವೈಶಿಷ್ಯ. ಜಗತ್ತಿನ ಇರುವೆಯಿಂದ ಆನೆಯವರೆಗೆ, ಎಲ್ಲಾ ಜೀವಿಗಳ ದುಃಖ ನಿವಾರಣೆಯಾಗುವವರೆಗೆ ತನ್ನ ಮುಕ್ತಿಯನ್ನು ಬಯಸದವನು.
ನಿವೃತ್ತಿ ಪರ : ಹೀನ ಯಾನದಲ್ಲಿ ವೈಯುಕ್ತಿಕ ಮುಕ್ತಿಗೆ -ವೈರಾಗ್ಯಕ್ಕೆ ಪ್ರಾಧಾನ್ಯತೆ.
ಪ್ರವೃತ್ತಿ ಪರ : ಮಹಾಯಾನದಲ್ಲಿ -ಜಾನ, ಭಕ್ತಿ, ಲೋಕ ಕಲ್ಯಾಣ ಇದೆ. ಬುದ್ಧನ ಮೂರ್ತಿಪೂಜೆ, ದೇವತೆಗಳಿಗೆ ಪ್ರಾಧಾನ್ಯ ಇತ್ಯಾದಿ.

ವಜ್ರಯಾನ ವೆಂಬ ಪ್ರಬೇಧದಲ್ಲಿ ಮಂತ್ರ ತಂತ್ರ, ಹಠಯೋಗ, ತಾಂತ್ರಿಕ ಆಚಾರಗಳು ಇವೆ. ಇವರ ಒಂದುವಾಕ್ಯ ಶೂನ್ಯತಾ ವಜ್ರಮುಚ್ಯತೇ ; ಶೂನ್ಯವು ಗಟ್ಟಿಯಾದುದು ; ಅಭೇದ್ಯ.

ಬೌದ್ಧ ಧರ್ಮದಲ್ಲಿ ಬೇಧಗಳು :
ತೇರವಾದ(ಹೀನಯಾನ) :
: ೧.ವೈಭಾಷಿಕ -ಬಾಹ್ಯಾರ್ಥ ಪ್ರತ್ಯಕ್ಷ ವಾದ ;
: ೨.ಸೌತ್ರಾಂತಿಕ - ಬಾಹ್ಯಾರ್ಥಾನುಮೇಯ ವಾದ ;
ಮಹಾಯಾನ :
: ೩.ಯೋಗಾಚಾರ -ವಿಜ್ಞಾನ ವಾದ ;
: ೪.ಮಾಧ್ಯಮಿಕ - ಶೂನ್ಯವಾದ ;

ವೈಭಾಷಿಕ ವಾದ[ಬದಲಾಯಿಸಿ]

ಅಭಿಧರ್ಮ ಗ್ರಂಥದ ವಿಭಾಷೆಯ ಆಧಾರದಿಂದ ವೈಬಾಷಿಕ ಎಂಬ ಹೆಸರು ಬಂದಿದೆ. ಇದಕ್ಕೆ ದಿಂಙನಾಗ , ಮತ್ತು ಬ್ರಹ್ಮಕೀರ್ತಿ ಪ್ರವರ್ತಕರು. ಧರ್ಮಕೀರ್ತಿಯ ನ್ಯಾಯಬಿಂದು (ಕ್ರಿ. ಶ.೬೦೦) ಮತ್ತು ಧರ್ಮೋತ್ತರನ ವ್ಯಾಖ್ಯಾನಗಳು -ಆಧಾರ.

ವೈಭಾಷಿಕ ಮತದಲ್ಲಿ ವಸ್ತು (ವಿಶ್ಲೇಷಣೆ) : :ಪ್ರತ್ಯಕ್ಷ ಪ್ರಮಾಣವನ್ನು ಒಪ್ಪುವರು. ವಸ್ತು ಅರಿವಿಗೆ ಬರಲು, ಉತ್ಪತ್ತಿ, ಕ್ಷೀಣತೆ, ನಾಶ, ಇವುಗಳ ಕಾಲ - ನಾಲ್ಕು ಕ್ಷಣ ಅಗತ್ಯ ; ಇಲ್ಲದಿದ್ದರೆ ಕಾರ್ಯಕಾರಣಸಂಬಂಧ ತಪ್ಪಿಹೋಗುವುದು. ಕಾರಣವು ಕಾರ್ಯವಾಗಿ ಮುಂದುವರಿಯುವುದು. ಇದಕ್ಕೆ ಸೌತ್ರಾಂತಿಕರ ಸಹಮತವಿದೆ. ವೈಭಾಷಿಕರು ವಸ್ತುವನ್ನು ನೇರವಾಗಿ ತಿಳಿಯುತ್ತೇವೆಂದರೆ. ಸೌತ್ರಾಂತಿಕರು ಪರೋಕ್ಷವಾಗಿ ತಿಳಿಯುತ್ತೇವೆ ಎನ್ನುತ್ತಾರೆ. (ಇವೆಲ್ಲ ಮನಸ್ಸಿನ ಕ್ರಿಯೆಯ ವಿಶ್ಲೇಷಣೆ).

ಮಯನ್ಮಾರ್ ನ ಬಾಗಾನ್ ಸಮೀಪದ ಶ್ವೆಝಿಗನ್ ಪಾಯ.
ಜೀವನದ ಅಷ್ಟ ಪಥಗಳನ್ನು ಬಿಂಬಿಸುವ ಧರ್ಮಚಕ್ರ.

ಸೌತ್ರಾಂತಿಕ ಮತ[ಬದಲಾಯಿಸಿ]

ಬಾಹ್ಯ ವಸ್ತುಗಳು ಭೂತ ಪದಾರ್ಥಗಳು. ಪೃಥ್ವಿ, . ಜಲ, ವಾಯು, ನಾಲ್ಕು ಭೂತಗಳು- ಆಕಾಶ ಭೂತವಲ್ಲ. ಯಾಕೆಂದರೆ ಅದು ವಸ್ತುವಲ್ಲ. ಭೂತಗಳು ಅಣುರೂಪಿ - ಅದಕ್ಕೆ ಆರು ಪಾರ್ಶ್ವಗಳಿವೆ. ಅವುಗಳ ಸಮುದಾಯ ಮಾತ್ರ ದೃಷ್ಠಿ ಗೋಚರ. (ದ್ವಣುಕ, ತ್ರ್ಯಣುಕಗಳ ವಿಚಾರವಿಲ್ಲ)

ಸೌತ್ರಾಂತಿಕ ಮತದಲ್ಲಿ ವಸ್ತು :[ಬದಲಾಯಿಸಿ]


ಪರಮಾಣು ಇಂದ್ರಿಯಾತೀತ; ಅದರಲ್ಲಿ ಎಲ್ಲಾ ಭೂತಗಳ ಅಂಶವೂ ಇರುತ್ತದೆ. ಆದರೆ ಆಯಾ ಭೂತದ ಅಣುವಿನಲ್ಲಿ ಆ ಅಂಶ ಹೆಚ್ಚಿರುತ್ತದೆ. ಇಂದ್ರಿಯಗಳು ಬಣ್ಣ ರುಚಿ ತಿಳಿಸಿದರೆ . ಮನಸ್ಸುವರ್ಣತ್ವವನ್ನು ತಿಳಿಸುತ್ತದೆ.

ಬುದ್ಧ

ಸಂಸ್ಸೃತ ಧರ್ಮ[ಬದಲಾಯಿಸಿ]

ರಾಗ ದ್ವೇಷಕ್ಕೆ ಕಾರಣವಾದ ಪದಾರ್ಥಗಳು ಕ್ಷಣಿಕ. ಈವು ನಾಲ್ಕು ಬಗೆ. ಭೌತ ಧರ್ಮಗಳು ಹನ್ನೊಂದು. ಜೀವ ಅಥವಾ ಚಿತ್ತದ ಧರ್ಮಗಳು ನಲವತ್ತಾರು . ಸಂಯುಕ್ತ ಧರ್ಮಗಳು ಹದಿನಾಲ್ಕು. ಒಟ್ಟು ೭೨ ಧರ್ಮ ಬೇಧಗಳು.

ಅಸಂಸ್ಸೃತ ಧರ್ಮ[ಬದಲಾಯಿಸಿ]

ಶುದ್ಧ ಬದಲಾಗದ ಧರ್ಮಗಳು {ಗುಣಗಳು) ; ಬದಲಾಗದ ನಿತ್ಯ (ವಸ್ತು)ಧರ್ಮಗಳು : ಮೂರು : ಆಕಾಶ-ಅಪ್ರತಿಸಂಖ್ಯಾ ನಿರೋಧ, ಪ್ರತಿಸಂಖ್ಯಾನಿರೋಧ. ; ಆಕಾಶ ಭೌತವಸ್ತುವಲ್ಲ. ಆದರೂ ಸತ್ತಾತ್ಮಕ (ಇದೆ).

ಅಪ್ರತಿಸಂಖ್ಯಾನಿರೋಧ : ಏಕಾಗ್ರತೆಯಿಂದ ಪೂರ್ವಾಗ್ರಹವಿಲ್ಲದೆ, ಗ್ರಹಿಸಿದ ವಿಷಯ. ಪ್ರತಿ ಸಂಖ್ಯೆ ಎಂದರೆ ಪ್ರತಿಸಂಕ್ಯಾನಿರೋಧ -ಪ್ರಜ್ಞೆ . ಈ ಹಂತದಲ್ಲಿ ಮಾತ್ರಾ, ವಸ್ತುವಿನ ಯತಾರ್ಥ ಸ್ವರೂಪದ ಅರಿವಾಗುವುದು. ಪ್ರೀತಿಯನ್ನು ತೊರೆದಾಗ ಮಾತ್ರ ಈ ಸ್ಥಿತಿಯಾಗುತ್ತದೆ..

ವೈಭಾಷಿಕ ನಿರ್ವಾಣ[ಬದಲಾಯಿಸಿ]

ಅಭಿಧರ್ಮದ ವಿಭಾಷೆಯ ಮೇಲೆ ಆಧಾರಿತವಾಗಿದೆ. ವೈಭಾಷಿಕ ನಿರ್ವಾಣವು ಸೋಪಾಧಿಶೇಷ, ನಿರುಪಾಧಿಶೇಷ ಎಂದು ಎರಡು ಬಗೆ. ಆಸ್ರವ ಅಥವಾ ಬಂಧನ ಹೇತುವು (ಕಾರಣ) ನಾಶವಾದ ಮೇಲೆ ಅರ್ಹತನು ಜೀವಿಸಿದ್ದರೆ, ಅದು ಸೋಪಾಧಿಶೇಷ. ಕಾರಣ ಅವನಲ್ಲಿ ಪಂಚ ಸ್ಕಂದಗಳಿಂದ ಉತ್ಪನ್ನವಾದ ವಿಜ್ಞಾನ ವಿಶೇಷಗಳಿರುತ್ತವೆ.(ವೇದಾಂತದ ಜೀವನ್ಮ್ಮಕ್ತಿ-ಸದೇಹಮುಕ್ತಿ?)ಅರ್ಹಂತನು ಮರಣಾನಂತರ ಉಪಾದಿಗಳು ಇಲ್ಲವಾಗುವುದರಿಂದ ಅದು ರೂಪಧಿಶೇಷ ನಿರ್ವಾಣ.(ವೇದಾಂತದ ವಿದೇಹ ಮುಕ್ತಿ?).

ಸೌತ್ರಾಂತಿಕ[ಬದಲಾಯಿಸಿ]

ಸೂತ್ರ ಆಧಾರಿತವಾದದ್ದು ; ಅಭಿದರ್ಮ ಕೋಶವು ಬುದ್ಧನಿಂದ ರಚಿತವಾದದ್ದಲ್ಲವಾದ್ದರಿಂದ, ಅವು ಪ್ರಮಾಣಗಳಲ್ಲ. ಸುತ್ತ ಪಿಟಿಕದ ಸೂತ್ರಗಳೇ ವಾಸ್ತವಿಕ ಉಪದೇಶಗಳು. ಅವೇ ಪ್ರಮಾಣ.
ಕ್ರಿ. ಶ. ೨-೩ನೇ ಶತಮಾನದ ಕುಮಾರ ಲಬ್ಧ ಈ ಪಂಥದ ಸ್ಥಾಪಕ.ಇದಕ್ಕೆ ಲಭ್ಯವಿರುವ ಆಧಾರ ಅಭಿದರ್ಮಕೋಶ . ಇವರ ಸಿದ್ಧಾಂತ ಭಾಹ್ಯಾರ್ಥನುಮೇಯವಾದ - ವಸ್ತುಗಳ ಅಸ್ತಿತ್ವವನ್ನು ಅನುಮಾನ ಪ್ರಮಾಣದಿಂದ ತಿಳಿಯುತ್ತೇವೆ -ಎಂಬುದು.
ಜಗತ್ತು ಅಥವಾ ವಸ್ತು : ವೈಭಾಷಿಕರು ಜಗತ್ತು ಸತ್ಯವೆನ್ನುತ್ತಾರೆ. ; ವಿಜ್ಞಾನವಾದಿಗಳು (ಮಿಥ್ಯೆ) ಜಗತ್ತು ಮಾನಸಿಕ ಭಾವನೆ ಎನ್ನುತ್ತಾರೆ :ನಡುವಿನವರು ಸೌತ್ರಾಂತಿಕರು- ಇವರು ಜಗತ್ತನ್ನು ಸತ್ಯವೆನ್ನುತ್ತಾರೆ. ಆದರೆ ಪ್ರತ್ಯಕ್ಷವಲ್ಲ -ಮಾನಸಿಕ ಭಾವನೆ - ಆದರೆ ಭಾಹ್ಯ ಪ್ರಪಂಚವಿದೆ ಎನ್ನುತ್ತಾರೆ.
ಸುಖ ದುಃಖಗಳು ಮಾನಸಿಕ ಭಾವನೆ, ಘಟ ಪಟಗಳ ಜ್ಞಾನ ಬೇರೆ ಬೇರೆ ; ಆದರೆ ಮಾನಸಿಕವೂ ಹೌದು.

ವಸ್ತುವಿನ ಬಿಂಬ ಮನಸ್ಸಿನಲ್ಲಿ ಮೂಡಿದಾಗ ಜ್ಞಾನ ; ಆದರೆ ಕ್ಷಣಿಕವಾದುದು-ಆದ ಕಾರಣ ವಸ್ತು ಆಗಲೇ ನಾಶವಾಗುತ್ತದೆ. ಆದ್ದರಿಂದ ಅನುಮಾನ ಪ್ರಮಾಣದಿಂದ ವಸ್ತು ಜ್ಷಾನವಾಗುವುದು. ಜಗತ್ತು ಸತ್ಯವಾದರೂ, ಅದನ್ನು ಪ್ರತ್ಯಕ್ಷ ಮೂಲಕ ತಿಳಿಯುವುದು ಸಾದ್ಯವಿಲ್ಲ. ವಸ್ತುವಿನ ಗುಣ, ರೂಪ, ಕ್ರಿಯೆ, ಇಂದ್ರಿಯ - ಮನಸ್ಸಿಗೆ ಸಂಬಂಧ ಪಟ್ಟುದು, ಈ ಗುಣಗಳಿಂದ ದೂರವಾದುದು ವಸ್ತುವಿನ ಸ್ವಲಕ್ಷಣ -ನಿಜರೂಪ ; 'ಅದು ಏನೋ ಒಂದು' ; ಕೆಲವರು ವಸ್ತುವಿನ ಆಕಾರ ಉಭಯಾತ್ಮಕ ಎನ್ನುತ್ತಾರೆ. ಇವರು "ಕಾಲ" ವರ್ತಮಾನವೊಂದೇ ಇರುವುದು ಎನ್ನುತ್ತಾರೆ. ಭೂತ, ಭವಿಷ್ಯತ್, ಇಲ್ಲ ; ಅದು ಕೇವಲ ಕಾಲ್ಪನಿಕ.

ಆದರೆ ವೈಭಾಷಿಕರು ಮೂರೂ ಕಾಲಗಳನ್ನು ಒಪ್ಪಿದ್ದಾರೆ.
ಇಬ್ಬರೂ ಪರಮಾಣು ವಾದವನ್ನು ಒಪ್ಪುತ್ತಾರೆ. ಪರಮಾಣು ನಿರವಯುವಗಳು ( ಡೈಮೆನ್ಶನ್ಗಳಿಲ್ಲ :No dimension) ; ಪರಮಾಣುಗಳು ಒಟ್ಟಾದಾಗ (ವಸ್ತು) ಸ್ಪರ್ಶ ಸಾದ್ಯ. ತದಾತ್ಮ್ಯ ಹೊಂದಿದ ಪರಮಾಣುಗಳಿಗೆ ಮಾತ್ರಾಗುಣಗಳು ಇವೆ.

ಯೋಗಾಚಾರ - ವಿಜ್ಞಾನವಾದ[ಬದಲಾಯಿಸಿ]

ಯೋಗಾಚಾರ - ವಿಜ್ಞಾನವಾದ ಇದು ಮಹಾಯಾನಕ್ಕೆ ಸೇರಿದೆ.
ಪರಮಸತ್ಯವನ್ನು ಯಾ ಬೋಧಿಯನ್ನು ಯೋಗದ ಮೂಲಕ ಪಡೆಯಬಹುದು -ಎನ್ನುವುದು ಯೋಗಾಚಾರ.
ಬಾಹ್ಯ ವಸ್ತುಗಳ ಅಸ್ತಿತ್ವವನ್ನು ನಿರಾಕರಿಸಿ ಜ್ಞಾನವೊಂದೇ (ಜ್ಞಾನ ಒಂದೇ) ಸತ್ಯವೆನ್ನುವುದು ವಿಜ್ಞಾನವಾದ. - ಇದು ತಾತ್ವಿಕ ದೃಷ್ಠಿ ಕ್ರಿ. ಶ. ೩ ನೇಶತಮಾನದ ಆಚಾರ್ಯ ಮೈತ್ರೇಯ ನು ಇದರ ಪ್ರವರ್ತಕ. ಅಸಂಗನು ಪ್ರಚುರ ಪಡಿಸಿದನು. ಎರಡನೆಯ ಬುದ್ಧನೆಂದು ಖ್ಯಾತಿ ಪಡೆದ ವಸುಬಂಧುವಿನ ವಿಜ್ಞ ಪ್ತಿ ಮಾತೃತಾಸಿದ್ಧಿ ಪ್ರಮಾಣ ಗ್ರಂಥ. ಜಗತ್ತು ಇದೆ ಎನ್ನುವ ವಾದ, ಜಗತ್ತು ಶೂನ್ಯ ಎನ್ನುವ ಇನ್ನೊಂದು ತುದಿ ; ಇದೆ-ಇಲ್ಲ ಎನ್ನುವ ಸೌತ್ರಾಂತಿಕರು ಮಧ್ಯ ಇದ್ದಾರೆ.
ವಿಜ್ಞಾನವಾದಿಗಳು ಶೂನ್ಯವಾದವನ್ನು ನಿರಾಕರಿಸುತ್ತಾರೆ. ಎಲ್ಲವೂ ಶೂನ್ಯವಾದರೆ ಚಿತ್ತವೂಇಲ್ಲ. ಎಲ್ಲವೂ ನಿರರ್ಥಕ ; ಆತ್ಮ ಘಾತಕ ; ಆದ್ದರಿಂದ ಚಿತ್ತದ ಸತ್ಯತೆಯನ್ನು ಅಂಗೀಕರಿಸಬೇಕು.

ವಿಜ್ಞಾನ[ಬದಲಾಯಿಸಿ]


ವಿಜ್ಞಾನವೆಂದರೆ ಕ್ಷಣಿಕವಾದ ಜ್ಞಾನಗಳ ಪರಂಪರೆ . ಇದೇ ಚಿತ್ತ ; ಚಿತ್ತವನ್ನು ಬಿಟ್ಟು ಉಳಿದ್ದೆಲ್ಲಾ ಮಿಥ್ಯೆ. ಮಾನಸಿಕ ಕಲ್ಪನೆ. ಈ ಪ್ರಪಂಚವು ಸ್ವಪ್ನ ಸದೃಶ - ಕಲ್ಪನೆ. ಸ್ವಪ್ನದಲ್ಲಿರುವವನು ಅದನ್ನೇ ಸತ್ಯವೆಂದು ತಿಳಿದಂತೆ ಬಾಹ್ಯ ವಸ್ತುಗಳ ಅಸ್ತಿತ್ವವನ್ನು ಸಿದ್ಧಪಡಿಸಲು ಸಾದ್ಯವಿಲ್ಲ. ವಸ್ತುವಿಗೂ ವಸ್ತುವಿನ ಜ್ಞಾನಕ್ಕೂವ್ಯತ್ಯಾಸವಿಲ್ಲ. ಜ್ಞಾನವಿಲ್ಲದೆ ವಸ್ತುವನ್ನು ತಿಳಯಲು ಸಾಧ್ಯವಿಲ್ಲ.ಅಂತೆಯೇ ಜ್ಞಾನಕ್ಕಿಂತ ಬೇರೆಯಾಗಿ ವಸ್ತುವಿಗೆ ಅಸ್ತಿತ್ವವಿಲ್ಲ.

ಉದಾಹರಣೆ : ಅಣುಗಳಿಂದ ವಸ್ತು ; ಅಣುಗಳಿಗೆ ಗುಣವಿಲ್ಲ ; ನಾವು ನೋಡುವುದು ಅಣುಗಳನ್ನೋ -ವಸ್ತುವನ್ನೋ ? ಅಣುಗಳು ಕಾಣಲಾರವು ; ಅವಕ್ಕೆ ಗುಣವಿಲ್ಲ, ಆಕಾರವಿಲ್ಲ. ಆದ್ದರಿಂದ ಉದ್ದ ,ಗಾತ್ರ, ರುಚಿ ಎಲ್ಲಾ ಕಲ್ಪನೆ. ವಾಸ್ತವವಾಗಿ ನಮ್ಮನ್ನು ಬಿಟ್ಟು (ಚಿತ್ತ-ಜ್ಞಾನ) ಹೊರಗಿನ ಯಾವ ವಸ್ತುವೂ ಇಲ್ಲ. ಆಕ್ಷೇಪ : ಬಾಹ್ಯ ವಸ್ತುಗಳೇ ಇಲ್ಲವೆಂದಾದರೆ- ಮನಸ್ಸು ವಸ್ತುಗಳನ್ನು ಸೃಷ್ಟಿಸಬಲ್ಲುದೇ ಬದಲಾಯಿಸಬಲ್ಲದೇ ? ಉತ್ತರ : ಮನಸ್ಸು ಕ್ಷಣಿಕ ಜ್ಞಾನಗಳ ಪ್ರವಾಹ ; ಅನುಭವಗಳ ಸಂಸ್ಕಾರದಿಂದ ವಸ್ತುಗಳನ್ನು ಕಾಣುತ್ತದೆ.

ಆಲಯ ವಿಜ್ಞಾನ[ಬದಲಾಯಿಸಿ]


ಕ್ಲೇಶಗಳೂ ಧರ್ಮಗಳ ಆಲಯವೂ ಆದ ಸಂಸ್ಕಾರಗಳ ಬಂಢಾರ -ಇವುಗಳಿಂದ ವಿಜ್ಞಾನ ರೂಪಿಯಾದ ಅಲೆಗಳು ಏಳುತ್ತವೆ. ಆಲಯ ವಿಜ್ಞಾನವು ಪರಿವರ್ತನಾ ಶೀಲವಾದುದು. ಆದರೆ ತಥಾಗತ ಗರ್ಭವು ಅದನ್ನು ಅಪರಿವರ್ತನ ಶೀಲವೆಂದು ಹೇಳುತ್ತದೆ. ( ಇದು ವೇದಾಂತದ ಆತ್ಮ ತತ್ವವನ್ನು ಹೋಲುತ್ತದೆ)

ಪ್ರವೃತ್ತಿ ವಿಜ್ಞಾನ[ಬದಲಾಯಿಸಿ]


ಆಲಯ ವಿಜ್ಞಾನವು ಕಡಲಾದರೆ , ಅಲ್ಲಿ ಏಳುವ ತೆರೆಗಳೇ /ಅಲೆಗಳೇ ಪ್ರವೃತ್ತಿವಿಜ್ಞಾನ ; ಪಂಚೇಂದ್ರಿಯಗಳಿಗೆ ಸೇರಿದ ತೆರೆಗಳು ಕಾಯ ವಿಜ್ಞಾನ. ಮನೋವಿಜ್ಞಾನ -ಏಳು ಬಗೆ , ಮೊದಲಿನ ಐದು ವಿಜ್ಞಾನಗಳಿಂದ ವಸ್ತುವು ಕಲ್ಪಿಸಲ್ಪಡುತ್ತದೆ. ಇವುಗಳನ್ನು ಉತ್ಪತ್ತಿ ಮಾಡುವ ಆಲಯ ವಿಜ್ಞಾನ ಸಬೀಜ ಎಂದು ಕರೆಯಲ್ಪಡುತ್ತದೆ.

ಪ್ರಾಪಂಚಿಕ ಪದಾರ್ಥಗಳು :

೧. ಪರಿ ನಿಷ್ಪನ್ನ : ಪಾರಮಾರ್ಥಿಕ ಸತ್ಯ ;
೨. ಪರಿ ಕಲ್ಪಿತ : ಕಾಲ್ಪನಿಕ ವಸ್ತು. ;
೩. ಪರತಂತ್ರ : ಸಾಪೇಕ್ಷವಾದುದು ; ಪ್ರಾಪಂಚಿಕ ವ್ಯವಹಾರ ಕಾರಣಗಳನ್ನು ಆಧರಿಸಿದ್ದು.

ಅಜ್ಞಾನ :

೧. ಕ್ಲೇಶಾವರಣ : ಸತ್ಯದ ಯತಾರ್ಥ ಕಲ್ಪನೆಯು ಹೆಚ್ಚಿದಂತೆ ಮಾಡಿ ವ್ಯಕ್ತಿಯನ್ನು ಬಳಲಿಸುತ್ತದೆ.
೨. ಜ್ಞೇಯಾವರಣ : ವಸ್ತುಗಳ ನಿಜರೂಪವನ್ನು ಮರೆಸಿ , ಅವುಗಳು ಸತ್ಯವೆಂಬ ಭ್ರಾಂತಿಯನ್ನು ಹುಟ್ಟಿಸುತ್ತದೆ.
ಈ ಎರಡೂ ಬಗೆಯ ಅಜ್ಞಾನಗಳನ್ನು ನಿವಾರಿಸಿಕೊಳ್ಳುವುದೇ ಮನುಷ್ಯನ ಗುರಿಯಾಗಿದೆ.
(ವಿಜ್ಞಾನವಾದವು, ಅದ್ವೈತ ವೇದಾಂತಕ್ಕೆ ತುಂಬಾ ಹತ್ತಿರವಾಗಿದೆ ಎನ್ನಬಹುದು).

ಮಾಧ್ಯಮಿಕ ಶೂನ್ಯವಾದ[ಬದಲಾಯಿಸಿ]

ಮಹಾಯಾನ ದವರ ಮಾಧ್ಯಮಿಕ ಶೂನ್ಯವಾದ
ಬುದ್ಧನು ಅತಿ ಕಠೋರ ಯತಿ ಜೀವನವಾಗಲೀ , ಅತಿ ಭೋಗ ಜೀವನವಾಗಲೀ ಸಲ್ಲದೆಂದು, ಮಧ್ಯ ಮಾರ್ಗವನ್ನು ಬೋಧಿಸಿದನು. ಇವರು ಅದೇ ತಮ್ಮ ಮಾರ್ಗವೆನ್ನುತ್ತಾರೆ.
ಕ್ರಿ.ಶಕ ಸುಮಾರು ಒಂದನೆಯ ಶತಮಾನದಲ್ಲಿದ್ದ ದಕ್ಷಿಣದ ನಾಗಾರ್ಜುನಮಾದ್ಯಮಿಕ ಶಾಸ್ತ್ರ ಅಥವಾ ಮಾದ್ಯಮಿಕ ಕಾರಿಕೆ , ಶೂನ್ಯವಾದಕ್ಕೆ ವೇದವೆಂದು, ಪ್ರಸಿದ್ಧ. ಇದಕ್ಕೆ ಚಂದ್ರಕೀರ್ತಿಯ ವ್ಯಾಖ್ಯಾನವೂ ಪ್ರಸಿದ್ಧವಾಗಿದೆ. ಶಾಂತರಕ್ಷಿತ (ಕ್ರಿ.ಶ. ೮ ನೇ ಶತಮಾನ)ನ ಮಾಧ್ಯಮಿಕ ಸಂಪ್ರದಾಯದ ಸ್ವತಂತ್ರ ಕೃತಿ ತತ್ವಸಂಗ್ರಹ ವೂ ಪ್ರಸಿದ್ಧ ಕೃತಿ.

ಶೂನ್ಯ ತತ್ವ[ಬದಲಾಯಿಸಿ]

ಇವರ ಪ್ರಕಾರ ಶೂನ್ಯವೆಂದರೆ ಏನೂ ಇಲ್ಲದ್ದೆಂಬ ಅರ್ಥವಲ್ಲ ; ವರ್ಣನೆಗೆ ನಿಲುಕದ್ದು. ವಸ್ತು ನಿರ್ಣಯ - ಇದೆ(ಅಸ್ತಿ) - ಇದೆ ಮತ್ತು ಇಲ್ಲ (ತದುಭಯಂ) ; ಇದೆ ಮತ್ತು ಇಲ್ಲ ಎರಡೂ ಅಲ್ಲದ್ದು ; (ನ ಅಸ್ತಿ ನಚನಾಸ್ತಿ) ಎಂಬುದಾಗಿ ಹೇಳುವುದುಂಟು. ತತ್ವ (ಶೂನ್ಯ) ಚತುಷ್ಕೋಟಿ ವಿನಿರ್ಮಕ್ತವಾದುದೆಂಬ ಅರ್ಥದಲ್ಲಿ ಅನಿರ್ವಚನೀಯವಾದುದು. ಶೂನ್ಯವು ಭಾವವೂ ಅಲ್ಲ; ಅಭಾವವೂ ಅಲ್ಲ. ಅನಿರ್ವಚನೀಯ. ಅದೇ ಅಪರೋಕ್ಷ ತತ್ವ ; ಇಡೀ ಪ್ರಪಂಚವು ಈ ಶೂನ್ಯ ವಿವರ್ತವೇ ಆಗಿದೆ. (ಶುದ್ಧ ಅದ್ವೈತದ ಪರಬ್ರಹ್ಮ ತತ್ವವೇ ಮಾಧ್ಯಮಿಕರ ಶೂನ್ಯವೇ ?)

ಪ್ರಪಂಚ[ಬದಲಾಯಿಸಿ]

ಪ್ರಪಂಚವೂ ಆತ್ಮದಂತೆಯೇ ಶೂನ್ಯ - ಎಂದರೆ ಅನಿರ್ವಚನೀಯ : ಸಾಪೇಕ್ಷ - ಸತ್ಯ (?)
ವಾದ(Argument)
- ಇರುವ ವಸ್ತು ಯಾವಾಗಲೂ ಇರಬೇಕು ; ಒಂದು ಕ್ಷಣವೂ ಇಲ್ಲದಂತೆ ತೋರಬಾರದು. ; ಇಲ್ಲವೆಂದರೆ ಅದಕ್ಕೆ ಉತ್ಪತ್ತಿ ಇಲ್ಲ ; ಯಾವಾಗಲೂ ಇರಬಾರದು ; ಆದ್ದರಿಂದ ಶೂನ್ಯವಾದಿಗಳು ಪ್ರಪಂಚವು ಇದೆ ಎಂಬುದನ್ನು ನಿರಾಕರಿಸುತ್ತಾರೆ. : ಹಾಗೆಯೇ ಇಲ್ಲ ಎಂಬುದನ್ನೂ ಆಕ್ಷೇಪಿಸುತ್ತಾರೆ.
ಶಬ್ದ : ಪದಗಳು - ದ್ವೈತಪರವಾಗಿದ್ದು ಅನಿರ್ವಚನೀಯ ಸತ್ಯವನ್ನು ವಿವರಿಸಲಾರವು.

ನಾಗಾರ್ಜುನನ ತರ್ಕ ಅಸಾಧಾರಣವಾಗಿದ್ದು , ಅವನ ತರ್ಕದ-ಬಿರುಗಾಳಿಗೆ ಪ್ರಪಂಚ ಮರಳಿನ ಮನೆಯಂತೆ ಕುಸಿದು ಬೀಳುತ್ತದೆ.

ಬಾಹ್ಯ ವಸ್ತುಗಳು, ವ್ಯಕ್ತಿ, ಭೌತ ದ್ರವ್ಯ, ಗ ತಿ, ಕಾರಣವಾದ, ಕಾಲ, ದೇಶ, ವಸ್ತುತ್ವ, ಗುಣ, ಸಂಬಂಧ, ದ್ರವ್ಯ, ಆತ್ಮ , ದೇವರು, ಧರ್ಮ, ನ್ಶೆತಿಕತೆ, ಆರ್ಯ ಸತ್ಯ , ನಿರ್ವಾಣ, ಬುದ್ಧ , ಹೀಗೆ ಎಲ್ಲವೂ ಶೂನ್ಯ ವಾದದಲ್ಲಿ ಕರಗಿ ಹೋಗುತ್ತದೆ.

ಉದಾಹರಣೆ : ಇಲ್ಲದ್ದು ಹುಟ್ಟಲಾರದು ; ಗ ತಿ ಇಲ್ಲದ್ದು ಚಲಿಸಲಾರದು ; ಇದ್ದ ವಸ್ತು ಪುನಃ ಹುಟ್ಟಲು ಸಾದ್ಯವಿಲ್ಲ. ಚಲಿಸುವುದು ಪುನಃ ಚಲಿಸುವುದೆಂಬುದಿಲ್ಲ -ಇತ್ಯಾದಿ.

ನಾಗಾರ್ಜುನ :-
ಅಪರಂ ಪ್ರತ್ಯಯಂ ಶಾಂತಂ ಪ್ರಪಂಚೈರ ಪ್ರಪಂಚಿತಂ |
ನಿರ್ವಿಕಲ್ಪ ಮ ನಾನಾರ್ಥಂ ಏತತ್ ತತ್ವ ಲ ಕ್ಷ ಣಂ||
ಅಪರೋಕ್ಷವೂ , ಶಾಂತವೂ, ಪ್ರಪಂಚ ಸ್ವಭಾವದ ಪರಿಣಾಮವಿಲ್ಲದ್ದೂ , ನಿರ್ವಿಕಲ್ಪವೂ, ನಾನಾರ್ಥ ರಹಿತವೂ, ಆಗಿರುವುದು ತತ್ವ ಲಕ್ಷಣ .

ಎರಡು ಸತ್ಯ[ಬದಲಾಯಿಸಿ]

ಬುದ್ಧನ ಉಪದೇಶದಲ್ಲಿ ಎರಡು ಸತ್ಯ ಇದೆ ಎನ್ನುತ್ತಾನೆ -ನಾಗಾರ್ಜುನ .
ದ್ವೇ ಸತ್ಯೇದಮುಪಾಶ್ರಿತ್ಯ ಬುದ್ಧಾನಾಂ ಧರ್ಮದೇಶನಾ |
ಲೋಕ ಸಂವೃತಿ ಸತ್ಯಂಚ ಸತ್ಯಂಚ ಪರಮಾರ್ಥತ ||
ಒಂದು- ವ್ಯವಹಾರಿಕ ಸತ್ಯ , ಲೋಕ ಸಂವೃತ್ತಿ (ಎಲ್ಲವನ್ನೂ ಮುಚ್ಚಿದ್ದು) ; ಅವಿದ್ಯೆ- ಮಾಯೆ : ಇನ್ನೊಂದು ಪಾರಮಾರ್ಥಿಕ ಸತ್ಯ .

ಅವಿದ್ಯೆ :- ಅವಿದ್ಯೆ ಎರಡು ಬಗೆ ; ೧. ಸ್ವಭಾವ -ದರ್ಶನದ - ಇದು ಆವರಣ ; ೨. ಇಲ್ಲದ ಪದಾರ್ಥದ ಆರೋಪ. :(ವೇದಾಂತದಲ್ಲಿ- ಆವರಣ ಮತ್ತು ವಿಕ್ಷೇಪ) ತಥ್ಯ ಸಂವೃತಿ : ಮನೆ, ಮಠ ಮುಂತಾದವು :: ಮಿಥ್ಯ ಸಂವೃತಿ : ಹಗ್ಗವನ್ನು ಹಾವೆಂದು ಭಾವಿಸುವುದು.

ಪಾರಮಾರ್ಥಿಕ ಸತ್ಯ ಅಥವಾ ಶೂನ್ಯ (ಅನಿರ್ವಚನೀಯ ವಸ್ತು) : ತ್ರಿಕಾಲಾಭಾದಿತವಾದುದು (ಜಾಗ್ರತ್ , ಸ್ವಪ್ನ , ಸುಷುಪ್ತಿ ; ವರ್ತಮಾನ, ಭೂತ , ಭವಿಷ್ಯತ್ -ಗಳಲ್ಲಿಯೂ ಇರುವಂತಹದು) . ಇದೇ ತಥಾಗತ
ಸಾಧನೆಯಿಂದ ಸಮಾಧಿ ಸಿದ್ಧವಾಗಿ, ಅಪರೋಕ್ಷ ಜ್ಞಾನವುಂಟಾಗಿ, ದ್ವೈತ ಭಾವ ನಾಶವಾಗಿ ಬುದ್ಧತ್ವ ಪ್ರಾಪ್ತಿಯಾಗುತ್ತದೆ. ಅದಯ ಸಮಸ್ತ ಧರ್ಮಸ್ವಭಾವ ಹೀನವಾದುದರಿಂದ ಅದಕ್ಕೆ ಶೂನ್ಯತೆ ಎಂದು ಹೆಸರು.

ಸಮೀಕ್ಷೆ[ಬದಲಾಯಿಸಿ]

ಇದು-ಮಾಧ್ಯಮಿಕರ ಶೂನ್ಯವಾದ, ಶಂಕರರ ಅದ್ವೈತವು ಅವರ ಗುರುವಿನ ಗುರು ಗೌಡಪಾದಾಚಾರ್ಯರ ಮಂಡೂಕ್ಕಾಕಾರಿಕದಿಂದ ಅಭಿವೃದ್ಧಿಪಡಿಸಿದ್ದು.ಮಂಡೂಕೋಪನಿಷತ್‍ನ್ನು ನೆಪಮಾತ್ರಕ್ಕೆ ಆಧರಿಸಿ, ಬೌದ್ಧರ ಶೂನ್ಯತಾ ತಾತ್ವಿಕೆಯನ್ನು ಚರ್ಚಿಸಿದರು. ಗುರು ಗೌಡ ಪಾದರು ಶೂನ್ಯವಾದವನ್ನು ಭೌದ್ಧ ಮಾಧ್ಯಮಕ ತತ್ವದಿಂದ ತೆಗೆದುಕೊಂಡಿದ್ದರು. ಆ ಕೃತಿಯಲ್ಲಿ ಬುದ್ಧನ ಸ್ಮರಣೆ ಇರುವುದನ್ನು ಕಾಣಬಹುದು. ಶಂಕರರು ಶೂನ್ಯವನ್ನುಮಾಯಾ ಎಂದು ಕರೆದರು. ಅವರು ಮಾಧ್ಯಮಿಕರ ತರ್ಕ ಪ್ರಸ್ಥಾನವನ್ನೇ ಆಧರಿಸಿದರು. ಇದೇ ಕಾರಣಕ್ಕಾಗಿ ಶಂಕರರನ್ನು ಹಿಂದೂ ಮೀಮಾಂಸಕರು ಪ್ರಚ್ಚನ್ನ ಬುದ್ಧ ಎಂದು ಕರೆದರು. ಅದೇ ರೀತಿ ಮಾದ್ಯಮಿಕರ ಮೇಲೆ ಉಪನಿಷತ್ ಪ್ರಭಾವ ಎದ್ದು ಕಾಣುವುದು. ತರ್ಕಶಾಸ್ತ್ರಕ್ಕೆ ಬೌದ್ಧರ ಕೊಡಿಗೆ ಅಪಾರವಾದುದು.

||ಓಂ ಸತ್ಸತ್|| [೧] [೨]

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಉಲ್ಲೇಖ[ಬದಲಾಯಿಸಿ]

  1. ಭಾರತೀಯ ತತ್ವ ಶಾಸ್ತ್ರ ಪರಿಚಯ - ಎಂ. ಪ್ರಭಾಕರ ಜೋಷಿ ಮತ್ತು ಪ್ರೊ.ಎಂ.ಎ.ಹೆಗಡೆ, ಸಂಸ್ಕೃತ ವಿಭಾಗದ ಮುಖ್ಯಸ್ಥರು, ಎಂ.ಜಿ.ಸಿ. ಕಾಲೇಜು, ಸಿದ್ದಾಪುರ, ಕಾರವಾರ ಜಿಲ್ಲೆ. ಪ್ರಕಾಶಕರು: ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  2. ದಮ್ಮಪದ ಕನ್ನಡ ಅನುವಾದ, ಜಿ.ಪಿ.ರಾ.