ಭಾರತೀಯ ನೌಕಾ ಅಕಾಡೆಮಿ

Coordinates: 12°0′40″N 75°13′8″E / 12.01111°N 75.21889°E / 12.01111; 75.21889
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ನೌಕಾ ಅಕಾಡೆಮಿ (INA)
ಸ್ಥಾಪನೆ೮ನೇ ಜನವರಿ ೨೦೦೯
ಪ್ರಕಾರಭಾರತದಲ್ಲಿ ಸೇನಾ ಅಕಾಡೆಮಿಗಳು
ಸ್ಥಳಎಳಿಮಲ, ಕೇರಳ, ಭಾರತ
ಆವರಣNaval base, ೨೫೦೦ ಎಕರೆಗಳು

ಎನ್ಎವಿಎಸಿ ಎಂದೂ ಸಹ ಕರೆಯಲಾಗುವ ಭಾರತೀಯ ನೌಕಾ ಅಕಾಡೆಮಿ ಎಳಿಯಾಲಾ (ಐಎನ್ಎ) (ಏಷ್ಯಾದ ಅತೀ ದೊಡ್ಡ ನೌಕಾ ಅಕಾಡೆಮಿ) ಯು ಭಾರತೀಯ ನೌಕಾಪಡೆಯ ಸುಸಜ್ಜಿತ ನೌಕಾ ತರಬೇತಿ ಕೇಂದ್ರವಾಗಿದೆ ಮತ್ತು ಇದು ದಕ್ಷಿಣ ಭಾರತಕೇರಳ ರಾಜ್ಯದ ಕಣ್ಣೂರು (ಕಣ್ಣಾನೂರು) ಜಿಲ್ಲೆಯಲ್ಲಿದೆ. ಡಿಲ್ಲಿ ಪರ್ವತಗಳ ಶ್ರೇಣಿಗಳ ನಡುವೆ, ನಿರ್ಮಲವಾದ ಕವ್ವಾಯಿ ಹಿನ್ನೀರು ಮತ್ತು ವೈಭವಯುಕ್ತ ಅರೇಬಿಯನ್ ಸಮುದ್ರದ ತಟದಲ್ಲಿ ನೆಲೆಸಿರುವ ಎನ್ಎವಿಎಸಿ ( ನೌಕಾ ಅಕಾಡೆಮಿಯ ಕಿರುನಾಮ)ವು ತನ್ನ ಆಕರ್ಷಕವಾದ ಮತ್ತು ನೆಮ್ಮದಿಯ ಪರಿಸರದಲ್ಲಿ ತರಬೇತಿಗಾಗಿ ಸಹಜ ಸುಂದರವಾದ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ಭಾರತೀಯ ನೌಕಾ ಸೇನೆ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಸೇರಲ್ಪಡುವ ಎಲ್ಲಾ ಅಧಿಕಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಮೂಲಭೂತ ತರಬೇತಿಯನ್ನು ನೀಡಲಾಗುತ್ತದೆ. ಐಎನ್ಎ ಕಾರ್ಯನಿರ್ವಹಿಸಲು ನಿರ್ವಹಣಾ ಮತ್ತು ಸೈನ್ಯ ವ್ಯವಸ್ಥಾಪನಾ ಕಾರ್ಯಗಳಿಗೆ ಐಎನ್ಎಸ್ ಜಾಮೋರಿನ್ ಎನ್ನುವುದು ಮೂಲ ನೆಲೆಯ ಹಡಗು ಆಗಿರುತ್ತದೆ.

ಪ್ರಾಚೀನ ಮೂಷಿಕ ರಾಜರುಗಳ ರಾಜಧಾನಿಯಾಗಿದ್ದ ಈ ಭೂಶಿರದಲ್ಲಿ ಸುಮಾರು 2,500 acres (10 km2) ಪ್ರದೇಶದಲ್ಲಿ ಅಕಾಡೆಮಿಯು ವ್ಯಾಪಿಸಿದೆ. ಇದು ಪ್ರಾಚೀನ ಕೇರಳದಲ್ಲಿ ಪ್ರವರ್ಧಮಾನಪಡೆದ ಬಂದರು ಮತ್ತು ವ್ಯಾಪಾರದ ಕೇಂದ್ರವಾಗಿತ್ತು, ಹಾಗೂ ೧೧ ನೇ ಶತಮಾನ ಎಡಿ ಸಂದರ್ಭದಲ್ಲಿ ನಡೆದ ಚೋಳ-ಚೇರ ಯುದ್ಧದ ಸಂದರ್ಭದಲ್ಲಿ ಪ್ರಮುಖ ಯುದ್ಧಭೂಮಿಯಾಗಿತ್ತು.

'ಏಳಿಮಲ' ಎಂಬ ಹೆಸರು ಈ ಪ್ರದೇಶದ ಆಕಾಶದೆತ್ತರಕ್ಕೆ ವ್ಯಾಪಿಸಿರುವ ಏಳು ಪರ್ವತಗಳು ಎಂಬುದರಿಂದ ಉದ್ಭವವಾಗಿದೆ ಎಂದು ನಂಬಲಾಗಿದೆ, (ಮಲೆಯಾಳಂನಲ್ಲಿ ಏಳು ಅಂದರೆ ಏಳು ಮತ್ತು ಮಲ ಅಂದರೆ ಪರ್ವತ ). ಈ ಸ್ಥಳವು 'ಏಳಿಮಲೈ' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು, ಇದರರ್ಥ 'ಇಲಿ ಪರ್ವತ' (ಮಲೆಯಾಳಂನಲ್ಲಿ 'ಎಲಿ' ಎಂದರೆ ಇಲಿ). ಮತ್ತೊಂದು ಐತಿಹ್ಯದ ಪ್ರಕಾರ ಈ ಹೆಸರು ಸೌಂದರ್ಯದ ಭೂಮಿ ಎಂಬ ಅರ್ಥವನ್ನು ನೀಡುವ 'ಎಳಿಲ್ ಮಲೈ' ಎಂಬ ಹೆಸರಿನಿಂದ ಉದ್ಭವವಾಗಿದೆ (ಏಳಿಲ್ ಅಂದರೆ ಸೌಂದರ್ಯ ). ಜನಪದ ನಂಬಿಕೆಗಳ ಪ್ರಕಾರ, ರಾಮಾಯಣದ ಯುದ್ಧದ ಸಂದರ್ಭದಲ್ಲಿ ಲಕ್ಷ್ಮಣನು ತೀವ್ರವಾಗಿ ಗಾಯಗೊಂಡು ಮೂರ್ಛೆಯಲ್ಲಿದ್ದಾಗ, ಅವನ ಚಿಕಿತ್ಸೆಗಾಗಿ ಲಂಕೆಗೆ ಹನುಮಂತನು ಮೃತ ಸಂಜೀವಿನಿ ಮತ್ತು ಇತರ ಗಿಡಮೂಲಿಕೆಗಳುಳ್ಳ ಪರ್ವತವನ್ನು ಕೊಂಡೊಯ್ಯುವಾಗ ಬಿದ್ದ 'ರಿಷಭಾದ್ರಿ' ಪರ್ವತದ ಭಾಗಗಳೇ ಈ ಏಳು ಪರ್ವತಗಳಾಗಿವೆ. ಇದನ್ನು ಸಮರ್ಥಿಸುವಂತೆ, ಈ ಪ್ರದೇಶದಲ್ಲಿ ಅಪರೂಪದ ಗಿಡಮೂಲಿಕೆಯ ಸಸ್ಯಗಳಿವೆ.

ನೌಕಾ ಅಕಾಡೆಮಿಯ ಮೂಲ ನೆಲೆಯ ಹಡಗು ಆದ ಐಎನ್ಎಸ್ ಜಾಮೋರಿನ್‌ಗೆ ಹೆಸರಾಂತ ಕುಂಜಾಲಿ ಮಾರಕ್ಕಾರ್ ಅವರುಗಳ ಮೇಲುಸ್ತುವಾರಿಯಲ್ಲಿದ್ದ ಬಲಶಾಲಿ ಯುದ್ಧಹಡಗುಗಳನ್ನು ಹೊಂದಿದ್ದ ಕೋಯಿಕ್ಕೋಡ್‌ನ ಜಾಮೋರಿನ್‌ಗಳ ಹೆಸರಿಡಲಾಗಿದೆ. ವಟಕರದ ಬಳಿಯಿರುವ ಕುಂಜಾಲಿ ಮಾರಕ್ಕಾರ್ ಅವರ ಪೂರ್ವಜರ ಮನೆಯಿರುವ ಇರಿಂಗಾಲ್ ಬಳಿ ನೌಕಾಪಡೆಯು ಸ್ಮಾರಕವೊಂದನ್ನು ಸಹ ನಿರ್ಮಾಣ ಮಾಡಿದೆ.

ಇತಿಹಾಸ[ಬದಲಾಯಿಸಿ]

೧೯೫೦ ರ ಮೊದಲಿನಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್‌ಡಿಎ) ಅನ್ನು ಸ್ಥಾಪಿಸುವುದಕ್ಕೂ ಮೊದಲು, 'ಸಾಮಾನ್ಯ' ಪ್ರವೇಶ ಅಧಿಕಾರಿ ಕೆಡೆಟ್‌ಗಳು ರಾಯಲ್ ಆರ್ಮಿಯೊಂದಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಾಲ್ಕು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ಸಬ್ ಲೆಫ್ಟಿನೆಂಟ್‌ಗಳಾಗಿ ಹಿಂತಿರುಗುತ್ತಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ನಿಂದ ತರಬೇತಿಯನ್ನು ಪಡೆದು ಹೊರಬರುವ ನೌಕಾ ಕೆಡೆಟ್‌ಗಳು ಸೂಕ್ತ ಅಗತ್ಯತೆಗಳನ್ನು ಪೂರ್ಣಗೊಳಿಸುತ್ತಿಲ್ಲ ಎಂಬುದಾಗಿ ೧೯೬೦ ರ ಮೊದಲಿನಲ್ಲಿ ಕಂಡುಕೊಳ್ಳಲಾಯಿತು ಮತ್ತು ಈ ಕಾರಣದಿಂದ ಕೊಚ್ಚಿನ್‌ನಲ್ಲಿ ಅಕಾಡೆಮಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಈ ಪ್ರಕಾರವಾಗಿ ೧೯೬೯ ರ ಜನವರಿಯಲ್ಲಿ ನೌಕಾದಳದ ಅಕಾಡೆಮಿಯೊಂದನ್ನು ಸ್ಥಾಪಿಸಲಾಯಿತು ಮತ್ತು ಅಂತಿಮವಾಗಿ ಅದನ್ನು ಐಎನ್ಎಸ್ ಮಾಂಡೋವಿ (ಗೋವಾ)ಕ್ಕೆ ೧೯೮೬ ರಲ್ಲಿ ವರ್ಗಾಯಿಸಲಾಯಿತು. ಹೆಚ್ಚುತ್ತಿರುವ ತರಬೇತಿಯ ಕಾರ್ಯಭಾರವನ್ನು ಪೂರೈಸಲು ಹೊಸ ಖಾಯಂ ನೌಕಾ ಅಕಾಡೆಮಿಯನ್ನು ಸ್ಥಾಪಿಸಲು ಮಂಜೂರಾತಿಯನ್ನು ಪಡೆದುಕೊಳ್ಳಲು ನಿರ್ಧರಿಸಲಾಯಿತು. ಅದೇ ಪ್ರಕಾರವಾಗಿ, ಕರಾವಳಿ ರಕ್ಷಣಾ ಪಡೆಯವರಿಗೂ ಸಹ ನೌಕಾ ಸೇನೆಯವರೊಂದಿಗೆ ತರಬೇತಿಯನ್ನು ನೀಡಬೇಕಾಗಿತ್ತು.

ಹೊಸ ನೌಕಾ ಅಕಾಡೆಮಿಗಾಗಿ ಕಲ್ಪನಾತ್ಮಕ ಅಗತ್ಯತೆಗಳು ನೌಕಾಪ್ರಾವೀಣ್ಯ ಮತ್ತು ಮಾನವ ಚಲಿತ ನೌಕೆಯ ತರಬೇತಿಗಾಗಿ ಸಮುದ್ರ ಅಥವಾ ಸರೋವರಕ್ಕೆ ಹತ್ತಿರವಿರುವ, ರೈಲು ಮಾರ್ಗದ ತುದಿಯ ಆದರೂ ಪಟ್ಟಣದಿಂದ ದೂರವಿರುವ 100 acres (0.40 km2) ನ ಸ್ಥಳದ 'ಮಹತ್ವಪೂರ್ಣ'ವಾದ ಅಗತ್ಯತೆಗಳಿದ್ದವು. ನೌಕಾ ಬಂದರಿನಿಂದ ಕಡಿಮೆ ದೂರದೊಳಗೆ ಇರುವ ಮತ್ತು ಉಲ್ಲಾಸಕರವಾದ ಮತ್ತು ಮಧ್ಯಮ ಹವಾಗುಣವನ್ನು ಹೊಂದಿರುವ ಸ್ಥಳವು 'ಅಪೇಕ್ಷಣೀಯ"ಅಗತ್ಯತೆಗಳಾಗಿತ್ತು.

ಎಳಿಮಲದ ಆಯ್ಕೆ ಹೊಸ ನೌಕಾದಳದ ಅಕಾಡೆಮಿಗೆ ಪರಿಗಣಿಸಿದ ಸ್ಥಳಗಳೆಂದರೆ, ನೀಲಿಗಿರಿ ಬೆಟ್ಟಗಳಲ್ಲಿರುವ ವೆಲ್ಲಿಂಗ್ಟನ್ ಹತ್ತಿರದ ಅರುವಂಕಾಡು ಮತ್ತು ಪೈಕಾರಾ ಅಣೆಕಟ್ಟು ಸರೋವರ, ಪೂನಾ-ಕೊಲ್ಹಾಪುರ ರಸ್ತೆಯಲ್ಲಿರುವ ಲಾಯ್ಡ್ಸ್ ಅಣೆಕಟ್ಟು (ಭಾಟಘರ್), ಬೆಂಗಳೂರಿನ ಹತ್ತಿರದ ಹಸ್ಸೇರ್‌ಗೇಟ್ ಸರೋವರ, ಸೌರಾಷ್ಟ್ರ ತೀರದ ಪೋರಬಂದರ್, ಮದ್ರಾಸ್ ಹತ್ತಿರದ ಚೆಂಗಲಪೆಟ್ ಮತ್ತು ಕೇರಳ ತೀರದ ಎಳಿಮಲ. ೧೯೭೯ ರಲ್ಲಿ ನೌಕಾದಳದ ಅಕಾಡೆಮಿಯ ಖಾಯಂ ಅಗತ್ಯವನ್ನು ಸರ್ಕಾರವು ಒಪ್ಪಿತು. ಕೇರಳ ಸರ್ಕಾರವು ಉತ್ತರ ಕೇರಳದಲ್ಲಿರುವ ಉತ್ತರ ಕಣ್ಣೂರಿನ (ಕಣ್ಣಾನೂರು), ಎಳಿಮಲದಲ್ಲಿ ನೌಕಾದಳಕ್ಕೆ ೯೬೦ ಹೆಕ್ಟೇರುಗಳಷ್ಟು ಭೂಮಿಯನ್ನು ನೀಡಲು ಮುಂದೆ ಬಂದಿತು. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ,ನಿರ್ಮಾಣ ಕಾರ್ಯಕ್ಕೆ ನೀರು, ವಿದ್ಯುತ್, ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆಗಳು, ಹಡಗುಗಳ ಚಲನೆಗಾಗಿ ಕವ್ವಾಯಿ ಹಿನ್ನೀರು ನೀರನ್ನು ಅಗಲಗೊಳಿಸುವ ಕಾರ್ಯ (ಮಾನವ ಚಾಲಿತ ಹಡಗುಗಳ ತರಬೇತಿಗಾಗಿ), ಸವಕಳಿಯನ್ನು ತಪ್ಪಿಸಲು ಸಮುದ್ರ ಗೋಡೆಯ ನಿರ್ಮಾಣ, ಹತ್ತಿರದ ಪಯ್ಯನೂರು ರೈಲ್ವೇ ನಿಲ್ದಾಣದ ಅಭಿವೃದ್ಧೀಕರಣ ಹೀಗೆ ಇವೆಲ್ಲಾ ಕಾರ್ಯಗಳನ್ನು ನೌಕಾದಳಕ್ಕೆ ಯಾವುದೇ ವೆಚ್ಚವಿಲ್ಲದೇ ಕೇರಳ ಸರ್ಕಾರವು ಮಾಡಿಕೊಡಲು ಒಪ್ಪಿಗೆ ನೀಡಿತು. ೧೯೮೨ ರಲ್ಲಿ, ಸರ್ಕಾರವು ಎಳಿಮಲ ಬಳಿ ಜಾಗಕ್ಕೆ ಅನುಮೋದನೆ ನೀಡಿತು ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಸಂತ್ರಸ್ಥರ ಪುನರ್ವಸತಿಯ ಸೌಕರ್ಯಗಳಿಗೆ ಮಧ್ಯಮ ಅವಧಿಯ ಸಾಲವನ್ನು ನೀಡಿತು.

ಪೌರಾಣಿಕ ಸಂಪರ್ಕ ಅರೇಬಿಯನ್ ಸಮುದ್ರದಕ್ಕೆ ಹೊಂದಿಕೊಂಡಂತಿರುವ ಡಿಲ್ಲಿ ಪರ್ವತದೊಂದಿಗಿನ ಎಳಿಮಲದ ಸ್ಥಳದ ಲಕ್ಷಣವು, ಪುರಾತನ ಕಾಲದಿಂದಲೂ ಹಲವಾರು ಪುರಾಣಕಥೆಗಳನ್ನು ರಚಿಸಲು ಸ್ಥಳೀಯ ಜನರಿಗೆ ಪ್ರೇರೇಪಣೆ ನೀಡಿದೆ. ರಾಮಾಯಣ ಸಂಪ್ರದಾಯದೊಂದಿಗೆ ಕೂಡಿಕೊಂಡಿರುವಂತಹುದು ಹೆಚ್ಚು ಜನಪ್ರಿಯವಾಗಿದೆ. ರಾಮ ಮತ್ತು ರಾವಣರ ನಡುವಿನ ಯುದ್ಧದ ಒಂದು ಘಟ್ಟದಲ್ಲಿ, ರಾಮನ ತಮ್ಮ ಲಕ್ಷ್ಮಣನನ್ನು ಒಳಗೊಂಡು ರಾಮನ ಹಲವಾರು ಸೈನಿಕರು ಸಾವನ್ನಪ್ಪುತ್ತಾರೆ. ತಲ್ಲಣಗೊಂಡ ರಾಮನು ವಾನರ ಸೇನೆಯಲ್ಲಿ ಹಿರಿಯನಾದ ಜಾಂಬವಂತನ ಸಲಹೆಯನ್ನು ಕೇಳುತ್ತಾನೆ. ಬಾಣಗಳನ್ನು ತೆಗೆಯಲು, ಗಾಯಗಳನ್ನು ವಾಸಿ ಮಾಡಲು ಮತ್ತು ಹೊಲಿಯಲು ಮತ್ತು ಅಂತಿಮವಾಗಿ ಸತ್ತವರಿಗೆ ಮರುಜೀವ ನೀಡಲು ಹಿಮಾಲಯದಿಂದ ನಾಲ್ಕು ವೈದ್ಯಕೀಯ ಗಿಡಮೂಲಿಕೆಗಳಾದ ಶಳ್ಯ ಕರಣಿ, ವಿಶಾಲ್ಯ ಕರಣಿ, ಸಂಧಾನ ಕರಣಿ ಮತ್ತು ಮೃತ ಸಂಜೀವಿನಿಯನ್ನು ತರಲು ನಿರ್ಧಾರವಾಗುತ್ತದೆ. ಈ ಗಿಡಮೂಲಿಕೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹನುಮಂತನಿಗೆ ವಹಿಸಲಾಗುತ್ತದೆ ಮತ್ತು ಅವನು ಹಿಮಾಲಯಕ್ಕೆ ತೆರಳಲು ಸಿದ್ಧನಾಗುತ್ತಾನೆ. ಹಿಮಾಲಯವನ್ನು ತಲುಪಿದ ಬಳಿಕ, ಆಯುರ್ವೇದಿಯ ಗಿಡಮೂಲಿಕೆಗಳನ್ನು ಗುರುತಿಸಲು ತನಗೆ ಸಾಧ್ಯವಾಗುವುದಿಲ್ಲ ಎಂದು ಹನುಮಂತನು ಮನಗಾಣುತ್ತಾನೆ. ಆಗ ಅವನು ಮುಂದಿನ ಹಂತವಾಗಿ ಸಂಪೂರ್ಣ ರಿಷಭಾದ್ರಿ ಬೆಟ್ಟವನ್ನೇ ಕಿತ್ತುಗೊಂಡು ಮರಳಿ ಹೊರಡುತ್ತಾನೆ. ದಕ್ಷಿಣಾಭಿಮುಖವಾಗಿ ಹಿಂತಿರುಗುವಾಗ, ಸಮುದ್ರದ ಬಳಿ ಬೆಟ್ಟದ ತುಂಡು ಕೆಳಗೆ ಬೀಳುತ್ತದೆ ಮತ್ತು ಅದೇ ಎಳಿಮಲವಾಗಿದೆ. ಎಳಿಮಲದಲ್ಲಿ ಇಂದಿಗೂ ಸಹ ಅಪರೂಪವಾದ ಆಯುರ್ವೇದಿಯ ಗಿಡಮೂಲಿಕೆಗಳಿವೆ ಎಂದು ಸ್ಥಳೀಯರು ನಂಬಿದ್ದಾರೆ.

ಅಕಾಡೆಮಿಯ ಸ್ಥಾಪನೆ ಅಕಾಡೆಮಿಯ ಶಂಕುಸ್ಥಾಪನೆಯನ್ನು ಅಂದಿನ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ರಾಜೀವ್ ಗಾಂಧಿಯವರು ೧೯೮೭ ರ ಜನವರಿ ೧೭ ರಂದು ಮಾಡಿದರು. ಅಕಾಡೆಮಿಯ ಮೂಲ ನೆಲೆಯಾದ ಐಎನ್ಎಸ್ ಜಾಮೋರಿನ್ ಅನ್ನು ೨೦೦೫ ರ ಏಪ್ರಿಲ್ ೬ ರಂದು ಆಗಿನ ಕೇರಳದ ಮುಖ್ಯಮಂತ್ರಿಗಳಾಗಿದ್ದ ಒಮನ್ ಚಾಂಡಿಯವರು ಪ್ರಾರಂಭಿಸಿದರು ಮತ್ತು ಈ ಮೂಲಕ ಎಳಿಮಲ ನೌಕಾ ಅಕಾಡೆಮಿ ಯೋಜನೆಯ ಹಂತ I ಪ್ರಾರಂಭವಾಯಿತು. ಪ್ರಾರಂಭಿಕವಾಗಿ ಈ ನೆಲೆಯು ಅಕಾಡೆಮಿಯ ನಿರ್ಮಾಣ ಮತ್ತು ಅದರ ತರಬೇತಿ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಬೆಂಬಲಿಸಿತು. ಶಂಕುಸ್ಥಾಪನೆಯನ್ನು ನೆರವೇರಿಸಿದ ಸುಮಾರು ೨೨ ವರ್ಷಗಳ ಬಳಿಕ, ಭಾರತೀಯ ನೌಕಾ ಅಕಾಡೆಮಿ (ಐಎನ್ಎ), ಎಳಿಮಲ ಉದ್ಘಾಟನೆಗೆ ಸಿದ್ಧವಾಗಿತ್ತು. ೨೦೦೯ ರ ಜನವರಿ ೮ ರಂದು ಭಾರತದ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಅಕಾಡೆಮಿಯನ್ನು ಉದ್ಘಾಟಿಸಿದರು. ೧೯೮೭ ರ ಜನವರಿ ೧೭ರಂದು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಶಂಕುಸ್ಥಾಪನೆ ಮಾಡಿದ್ದಾಗ ಅವರೊಂದಿಗಿದ್ದ ಈಗಿನ ರಕ್ಷಣಾ ಮಂತ್ರಿಗಳಾದ ಎ.ಕೆ.ಆಂಟನಿಯವರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಯೋಜನೆಗೆ ಪ್ರಾರಂಭಿಕವಾಗಿ ರೂ ೧೬೬ ಕೋಟಿ ( ರೂ. ೧.೬೬ ಬಿಲಿಯನ್) ವೆಚ್ಚವಾಗುವುದೆಂದು ಅಂದಾಜಿಸಲಾಗಿತ್ತು. ೨೨ ವರ್ಷಗಳ ಬಳಿಕ ಯೋಜನೆಯು ಪೂರ್ಣಗೊಂಡಾಗ ಇದರ ವೆಚ್ಚವು ರೂ ೭೨೧ ಕೋಟಿ (ರೂ.೭.೨೧ ಬಿಲಿಯನ್) ಗೆ ತಲುಪಿತ್ತು.

ಸ್ಥಳ[ಬದಲಾಯಿಸಿ]

12°0′40″N 75°13′8″E / 12.01111°N 75.21889°E / 12.01111; 75.21889

ಭಾರತೀಯ ನೌಕಾ ಅಕಾಡೆಮಿ (ಐಎನ್ಎ), ಎಳಿಮಲವು ಭಾರತದ ಪಶ್ಚಿಮ ತೀರದ ಪರ್ಯಾಯ ದ್ವೀಪದಲ್ಲಿ ಕಣ್ಣೂರಿನಿಂದ (ಕಣ್ಣಾನೂರು) ನಿಂದ ೩೫ ಕಿಮೀ ಉತ್ತರಕ್ಕೆ ಮತ್ತು ಮಂಗಳೂರಿನಿಂದ ದಕ್ಷಿಣಕ್ಕೆ ೧೩೫ ಕಿಮೀ ದೂರದಲ್ಲಿ ನೆಲೆಸಿದೆ. ಹತ್ತಿರದ ರೈಲ್ವೇ ನಿಲ್ದಾಣವು ೧೦ ಕಿಮೀ ದೂರದಲ್ಲಿನ ಪಟ್ಟಣವಾದ ಪಯ್ಯನೂರಿನಲ್ಲಿದೆ. ಮಂಗಳೂರಿನಿಂದ ಕಣ್ಣೂರಿನ ನಡುವಿನ ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ಪಯ್ಯನೂರು ನೆಲೆಸಿದೆ.ಹತ್ತಿರದ ವಿಮಾನ ನಿಲ್ದಾಣವು ಭಾರತೀಯ ನೌಕಾ ಅಕಾಡೆಮಿಯಿಂದು ಸುಮಾರು ೧೪೫ ಕಿಮೀ ದೂರದಲ್ಲಿನ ಮಂಗಳೂರಿನಲ್ಲಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಕಾಡೆಮಿಯ ದಕ್ಷಿಣದಲ್ಲಿ ಸುಮಾರು ೧೫೦ ಕಿಮೀ ದೂರದಲ್ಲಿರುವ ಕೋಯಿಕೋಡ್‌ನಲ್ಲಿದೆ.

ಸಂಪರ್ಕ[ಬದಲಾಯಿಸಿ]

ಭಾರತೀಯ ನೌಕಾ ಅಕಾಡೆಮಿ (ಐಎನ್ಎ) ಯು ರೈಲು ಮತ್ತು ರಸ್ತೆಯಿಂದ ಉತ್ತಮವಾಗಿ ಸಂಪರ್ಕಿತವಾಗಿದೆ. ಹತ್ತಿರದ ರೈಲ್ವೇ ನಿಲ್ದಾಣವು ನೌಕಾದಳ ನೆಲೆಯಿಂದ ೧೨ ಕಿಮೀ ದೂರದಲ್ಲಿನ ಪಟ್ಟಣವಾದ ಪಯ್ಯನೂರಿನಲ್ಲಿದೆ. ಮಂಗಳೂರಿನಿಂದ ಕಣ್ಣೂರಿನ ನಡುವಿನ ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ಪಯ್ಯನೂರು ನೆಲೆಸಿದೆ. ಬ್ರಾಡ್‌ಗೇಜ್ ರೈಲ್ವೇ ಮಾರ್ಗವು ಪಯ್ಯನೂರು ಮತ್ತು ಮುಂಬಯಿ ಹಾಗೂ ಪಶ್ಚಿಮ, ಮಧ್ಯ ಮತ್ತು ಉತ್ತರ ಭಾರತದ ಇತರ ಪ್ರಮುಖ ನಗರಗಳನ್ನು ಕೊಂಕಣ ರೈಲ್ವೇ ಮುಖಾಂತರ ಸಂಪರ್ಕಿಸುತ್ತದೆ. ಬ್ರಾಡ್‌ಗೇಜ್ ರೈಲ್ವೇ ಜಾಲವು ಪಯ್ಯನೂರಿನಿಂದ ಚೆನ್ನೈ ಅನ್ನು ಮತ್ತು ಪೂರ್ವ ಭಾರತದ (ಚೆನ್ನೈ ಮೂಲಕ) ಮತ್ತು ದಕ್ಷಿಣ ಭಾರತದ (ಪಾಯಕ್ಕಾಡ್ ಮೂಲಕ) ಪ್ರಮುಖ ನಗರಗಳನ್ನು ಸಹ ಸಂಪರ್ಕಿಸುತ್ತದೆ. ಹತ್ತಿರದ ರೈಲ್ವೇ ನಿಲ್ದಾಣವು ಐಎನ್ಎಸ್ ಜಾಮೋರಿನ್‌ನಿಂದ ಸುಮಾರು ೧೫೦ ಕಿಮೀ ದೂರದ ಮಂಗಳೂರಿನಲ್ಲಿ ನೆಲೆಸಿದೆ. ಐಎನ್ಎಸ್ ಜಾಮೋರಿನ್, ಪಯ್ಯನೂರು ಮತ್ತು ಕಣ್ಣೂರು ನಡುವೆ ನಿಯಮಿತವಾಗಿ ಖಾಸಗಿ ಬಸ್ ಸೇವೆಯು ಲಭ್ಯವಿದೆ. ಐಎನ್ಎ ಇಂದ ಹತ್ತಿರದ ರೈಲ್ವೇ ನಿಲ್ದಾಣವು ಪಯ್ಯನೂರು ಆಗಿದೆ. ಪಯ್ಯನೂರು ರೈಲ್ವೇ ನಿಲ್ದಾಣವನ್ನು ಈ ಮೂಲಕ ಸಂಪರ್ಕಿಸಬಹುದು:-

(ಎ) ರೈಲು - ರಾಜಧಾನಿ ಎಕ್ಸ್‌ಪ್ರೆಸ್ ಹೊರತುಪಡಿಸಿ ಕೊಂಕಣ ರೈಲ್ವೇ ಮಾರ್ಗದ ಎಲ್ಲಾ ರೈಲುಗಳು (ದೆಹಲಿ - ತಿರುವನಂತಪುರಂ ಮಧ್ಯೆ ಚಲಿಸುವ ರೈಲುಗಳು), ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಚಂಡೀಗಢ - ತಿರುವನಂತಪುರಂ ನಡುವೆ ಚಲಿಸುವ ರೈಲು), ಜೋಧ್‌ಪುರ್ ಎಕ್ಸ್‌ಪ್ರೆಸ್ (ಜೋಧ್‌ಪುರ್ - ತಿರುವನಂತಪುರಂ ನಡುವೆ ಚಲಿಸುವ ರೈಲು) ಮತ್ತು ಜೈಪುರ ಮಾರು ಸಾಗರ್ ಎಕ್ಸ್‌ಪ್ರೆಸ್ (ಜೈಪುರ- ಎರ್ನಾಕುಲಂ ನಡುವೆ ಚಲಿಸುವ ರೈಲು) ಪಯ್ಯನೂರಿನಲ್ಲಿ ನಿಲ್ಲುತ್ತದೆ. ಕೆಲವು ಸಂದರ್ಭಗಳಲ್ಲಿ, ಮೇಲಿನ ರೈಲುಗಳು ಪಯ್ಯನೂರಿನಲ್ಲಿ ನಿಲ್ಲದೇ ಹತ್ತಿರದ ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ನಿಲ್ಲಬಹುದು.

(ಬಿ) ರಸ್ತೆ - ಪಯ್ಯನೂರನ್ನು ರಾಷ್ಟ್ರೀಯ ಹೆದ್ದಾರಿ ೧೭ ಕಣ್ಣೂರು ಮತ್ತು ಮಂಗಳೂರಿನೊಡನೆ ಸಂಪರ್ಕಿಸುತ್ತದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಬಸ್‌ಗಳು ನಿಯಮಿತವಾಗಿ ಪಯ್ಯನೂರನ್ನು ಕಣ್ಣೂರು ಮತ್ತು ಮಂಗಳೂರಿನೊಡನೆ ಸಂಪರ್ಕಿಸುತ್ತದೆ. ಬಸ್‌ ಮೂಲಕ ತಲುಪಿದಾಗ, ಪಯ್ಯನೂರು ಬಸ್ ನಿಲ್ದಾಣ (ಪಯ್ಯನೂರು ಪಟ್ಟಣದೊಳಗೆ, ರೈಲ್ವೇ ನಿಲ್ದಾಣದಿಂದ ನಾಲ್ಕು ಕಿಮೀ ದೂರದಲ್ಲಿ ನೆಲೆಸಿದೆ) ದಲ್ಲಿ ಇಳಿಯಬೇಕು.

(ಸಿ) ವಿಮಾನ ಸಂಪರ್ಕ - ಪಯ್ಯನೂರಿನಲ್ಲಿ ಯಾವುದೇ ವಿಮಾನ ನಿಲ್ದಾಣಗಳಿಲ್ಲ. ಹತ್ತಿರದ ವಿಮಾನ ನಿಲ್ದಾಣವು ಪಯ್ಯನೂರಿನಿಂದ ಸುಮಾರು ೧೫೦ ಕಿಮೀ ದೂರದಲ್ಲಿನ ಮಂಗಳೂರಿನಲ್ಲಿದೆ. ಮಂಗಳೂರಿಗೆ ಮತ್ತು ಅಲ್ಲಿಂದ ಹೊರಭಾಗಕ್ಕೆ ಇಂಡಿಯನ್ ಏರ್‌ಲೈನ್ಸ್ ಮತ್ತು ಜೆಟ್ ಏರ್‌ವೇಸ್‌ನ ವಿಮಾನಗಳು ಕಾರ್ಯನಿರ್ವಹಿಸುತ್ತವೆ. ಮತ್ತೊಂದು ವಿಮಾನ ನಿಲ್ದಾಣವು ಪಯ್ಯನೂರಿನಿಂದ ೧೪೫ ಕಿಮೀ ದೂರದಲ್ಲಿ ಕೋಯಿಕೋಡ್ (ಕ್ಯಾಲಿಕಟ್) ನಲ್ಲಿ ನೆಲೆಸಿದೆ. ಮಂಗಳೂರು ಮತ್ತು ಕೋಯಿಕೋಡ್ ಎರಡೂ ನಿಲ್ಧಾಣಗಳು ಪಯ್ಯನೂರಿನಿಂದ ರಸ್ತೆ ಮತ್ತು ರೈಲು ಮಾರ್ಗಗಳಿಂದ ಉತ್ತಮವಾಗಿ ಸಂಪರ್ಕಿತವಾಗಿದೆ.ಆದರೆ ಮತ್ತನೂರಿನಲ್ಲಿ ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾಪವಿದೆ (ಕಣ್ಣೂರು ಪಟ್ಟಣದಿಂದ ಅಂದಾಜು ೨೫ ಕಿಮೀ ದೂರದಲ್ಲಿ).

ಸ್ಥೂಲ ಅವಲೋಕನ[ಬದಲಾಯಿಸಿ]

ಅಕಾಡೆಮೆ ಎಸ್ಟೇಟ್ (೨೫೦೦ ಎಕರೆಗೂ ಹೆಚ್ಚು) ಎನ್ನುವುದು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರಕ್ಕೆ ಮುಖಮಾಡಿರುವ ತೀರ ಪ್ರದೇಶಕ್ಕೆ ಗೋಚರಿಸುವ ವಿಶಾಲವಾದ ಪ್ರದೇಶವಾಗಿದ್ದು, ಮಧ್ಯದ ಭಾಗವನ್ನು ರೂಪಿಸಿರುವ ಅಲೆಯಾಕಾರದ ಬೆಟ್ಟಗಳಿಂದ ಆವರಿಸಿದೆ ಮತ್ತು ಪೂರ್ವದಲ್ಲಿ ಒಳನಾಡಿನ ಪ್ರದೇಶಗಳು ಪಶ್ಚಿಮ ಘಟ್ಟದ ಭಾಗವನ್ನು ರೂಪಿಸಿದೆ.

ಐಎನ್ಎ ಅನ್ನು ಮೂರು ವಲಯಗಳಾಗಿ ವಿಭಾಗಿಸಲಾಗಿದ್ದು, ಅವುಗಳೆಂದರೆ ತರಬೇತಿ ವಲಯ, ಆಡಳಿತಾತ್ಮಕ ವಲಯ ಮತ್ತು ವಸತಿ ವಲಯ. ಅಕಾಡೆಮಿ ಮುಖ್ಯ ಕಟ್ಟಡದ ಸಂಕೀರ್ಣ, ದೈಹಿತ ತರಬೇತಿ ಮತ್ತು ಪಠ್ಯೇತರ ಚಟುವಟಿಕೆಗಳು (ಇಸಿಎ) ಸಂಕೀರ್ಣ, ಹೊರಾಂಗಣ ತರಬೇತಿ ಮತ್ತು ವಾಟರ್‌ಮ್ಯಾನ್‌ಶಿಪ್ ಸಂಕೀರ್ಣ, ಫೈರಿಂಗ್ ರೇಂಜ್, ಕೆಡೆಟ್‌ಗಳ ಭೋಜನಾಲಯ ಮತ್ತು ಕೆಡೆಟ್‌ಗಳ ವಸತಿ ಇವುಗಳನ್ನು ತರಬೇತಿ ವಲಯವು ಒಳಗೊಂಡಿದೆ. ಆಡಳಿತಾತ್ಮಕ ಸಂಕೀರ್ಣ, ಆಸ್ಪತ್ರೆ, ಲಾಜಿಸ್ಟಿಕ್ ಸಂಕೀರ್ಣ, ಸಾರಿಗೆ ಸಂಕೀರ್ಣ ಮತ್ತು ಅಗ್ನಿಶಾಮಕ ಠಾಣೆಯನ್ನು ಆಡಳಿತಾತ್ಮಕ ವಲಯವು ಒಳಗೊಂಡಿದೆ.

ಅಕಾಡೆಮಿ ಮುಖ್ಯ ಕಟ್ಟಡ ಕಾಂಪ್ಲೆಕ್ಸ್ (ಎಎಮ್‌ಬಿಸಿ)ಯು ಅಕಾಡೆಮಿಯ ಹೃದಯ ಭಾಗವಾಗಿದ್ದು, ಇದು ಕೇಂದ್ರ ಕಚೇರಿ ವಿಭಾಗ, ಸೇವಾ ಮತ್ತು ತಾಂತ್ರಿಕ ತರಬೇತಿ ವಿಭಾಗಗಳು, ಪ್ರಯೋಗಶಾಲೆಗಳು, ಕಾರ್ಯಾಗಾರಗಳು, ಗ್ರಂಥಾಲಯ ಮತ್ತು ೧೭೩೬ ಜನರು ಕುಳಿತುಕೊಳ್ಳಬಹುದಾದ ಸಭಾಂಗಣವನ್ನು ಒಳಗೊಂಡಿದೆ. ಮುಖ್ಯ ಪರ್ವತ ಶ್ರೇಣಿಯಿಂದ ಚಾಚಿಕೊಂಡ ಭಾಗದಲ್ಲಿ ಸಂಕೀರ್ಣವು ನೆಲೆಸಿದೆ ಮತ್ತು ಇದು ಅಕಾಡೆಮಿಯ ಎತ್ತರದ ಪ್ರದೇಶವಾಗಿ ರೂಪಿಸಿದೆ.

ಅಕಾಡೆಮಿಯು ಪ್ರತಿವರ್ಷ ಅಂದಾಜು ೧೧೦೦ ಶಿಕ್ಷಾರ್ಥಿಗಳಿಗೆ ತರಬೇತಿಯನ್ನು ನೀಡುತ್ತದೆ. ಇದರಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯ ಮತ್ತು ವಿದೇಶೀ ರಾಷ್ಟ್ರಗಳ ಸ್ನೇಹಪರ ಅಧಿಕಾರಿ ಶಿಕ್ಷಾರ್ಥಿಗಳನ್ನು ಒಳಗೊಂಡಿರುತ್ತದೆ.

ತರಬೇತಿ ಮತ್ತು ಇತರ ಆಡಳಿತಾತ್ಮಕ ಬೆಂಬಲಿತ ಕಾರ್ಯಗಳನ್ನು ನಡೆಸಲು ಅಕಾಡೆಮಿಯು ಸಮವಸ್ತ್ರಧಾರಿ ಮತ್ತು ನಾಗರಿಕ ಸಿಬ್ಬಂದಿಗಳ ಮಿಶ್ರಣವನ್ನು ಹೊಂದಿದೆ. ಇಲ್ಲಿ ೧೬೧ ಅಧಿಕಾರಿಗಳು, ೪೭ ಪ್ರೊಫೆಸರ್‌ಗಳು/ಉಪನ್ಯಾಸಕರು, ೫೦೨ ನಾವಿಕರು ಮತ್ತು ೫೫೭ ನಾಗರಿಕರಿದ್ದಾರೆ. ಸಿಬ್ಬಂದಿಯ ಕುಟುಂಬ ವರ್ಗದವರೊಡನೆ, ಕ್ಯಾಂಪಸ್‌ನ ಜನಸಂಖ್ಯೆಯು ಸುಮಾರು ೪೦೦೦ ದಷ್ಟಿದೆ.

ಆಯ್ಕೆ ವಿಧಾನ[ಬದಲಾಯಿಸಿ]

೧೦ + ೨ (ತಾಂತ್ರಿಕ) ಕೆಡೆಟ್ ಪ್ರವೇಶ ಮತ್ತು ಎನ್‌ಸಿಸಿ ವಿಶೇಷ ಪ್ರವೇಶ (ಪದವಿ)ಗಳನ್ನು ಹೊರತುಪಡಿಸಿ ಎಲ್ಲಾ ಪರ್ಮನೆಂಟ್ ಕಮೀಷನ್ ಪ್ರವೇಶಗಳಿಗೆ ಆಯ್ಕೆಯನ್ನು ಯುಪಿಎಸ್‌ಸಿ ನಡೆಸುವ ಲಿಖಿತ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ, ತದನಂತರ ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್‌ಬಿ) ನಡೆಸುವ ಸಂದರ್ಶನವಿರುತ್ತದೆ. ಶಾರ್ಟ್ ಸರ್ಮೀಸ್ ಕಮೀಷನ್ (ಎಸ್ಎಸ್‌ಸಿ) ಗಾಗಿ ಯಾವುದೇ ಲಿಖಿತ ಪರೀಕ್ಷೆಗಳಿರುವುದಿಲ್ಲ. ಆಯ್ಕೆಯು ಅರ್ಹತೆ ಆಧಾರದಲ್ಲಿ ಮಾತ್ರ ಆಗಿರುತ್ತದೆ. ಅರ್ಹತೆ ಮತ್ತು ಲಭ್ಯವಿರುವ ಸ್ಥಾನಗಳ ಆಧಾರದಲ್ಲಿ ಎಸ್‌ಎಸ್‌ಸಿ ಅಧಿಕಾರಿಗಳು ಪರ್ಮನೆಂಟ್ ಕಮೀಷನ್‌ ಅನ್ನು ಆಯ್ದುಕೊಳ್ಳಬಹುದು. ಭಾರತೀಯ ಕರಾವಳಿ ರಕ್ಷಣಾ ಪಡೆಗೆ, ಆಯ್ಕೆಯನ್ನು ಪಿಎಸ್‌ಬಿ ಮತ್ತು ಎಫ್‌ಎಸ್‌ಬಿ ಆಯ್ಕೆ ಹಂತಗಳ ಮೂಲಕ ನಡೆಸಲಾಗುತ್ತದೆ.

ಸರ್ವೀಸಸ್ ಸೆಲೆಕ್ಷನ್ ಬೋರ್ಡ್/ಎಸ್ಎಸ್‌ಬಿ ಎಸ್ಎಸ್‌ಬಿಯು ಐದು ದಿನಗಳ ಪರೀಕ್ಷಾ ವೇಳಾಪಟ್ಟಿಯನ್ನು ಹೊಂದಿರುತ್ತದೆ ಮತ್ತು ಅಭ್ಯರ್ಥಿಗಳು ಒಂದು ದಿನ ಮೊದಲು ಮಧ್ಯಾಹ್ನದೊಳಗೆ ವರದಿ ಮಾಡಿಕೊಳ್ಳಬೇಕು. ಮಧ್ಯಾಹ್ನ/ಸಂಜೆಯ ವೇಳೆಯಲ್ಲಿ ಅಭ್ಯರ್ಥಿಗಳಿಗೆ ಮುಂದಿನ ಐದು ದಿನಗಳ ವಿವರವಾದ ವೇಳಾಪಟ್ಟಿ ಮತ್ತು ನಡತೆಯ ನಿಯಮಾವಳಿಯ ಬಗ್ಗೆ ವಿವರಿಸಲಾಗುವುದು ಮತ್ತು ಅಭ್ಯರ್ಥಿಗಳು ವಯಸ್ಸು/ಶೈಕ್ಷಣಿಕ ವಿದ್ಯಾರ್ಹತೆಯ ಬಗ್ಗೆ ಅಗತ್ಯ ಪ್ರಮಾಣಪತ್ರಗಳನ್ನು ಒಳಗೊಂಡು ಸಂಪೂರ್ಣ ದಾಖಲಾತಿಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಪರೀಕ್ಷೆಯ ವಿವರಗಳು ಈ ಕೆಳಕಂಡಂತಿದೆ:-

ದಿನ-I (ಹಂತ-I).

ಹಂತ ಒಂದು ಆಯ್ಕೆಯ ವ್ಯವಸ್ಥೆಯು ಈ ಮುಂದಿನದನ್ನು ಒಳಗೊಂಡಿರುತ್ತದೆ:- (i) ಜಾಣ್ಮೆ ಪರೀಕ್ಷೆ (ii) ಚಿತ್ರದ ಗ್ರಹಿಕೆ ಮತ್ತು ವಿವರಣೆ ಪರೀಕ್ಷೆ (ಪಿಡಿಪಿಟಿ): ೩೦ ಸೆಕೆಂಡುಗಳ ಕಾಲ ಚಿತ್ರವನ್ನು ತೋರಿಸಲಾಗುವುದು. ಪ್ರತಿ ಪಾತ್ರಕ್ಕೆ ಸಂಬಂಧಿಸಿಂದಂತೆ ಒಂದು ನಿಮಿಷದಲ್ಲಿ ಅಭ್ಯರ್ಥಿಗಳು ಪಾತ್ರಗಳ ಸಂಖ್ಯೆ, ವಯಸ್ಸು, ಲಿಂಗ, ಮನೋಭಾವ, ಭೂತ, ಭವಿಷ್ಯ ಮತ್ತು ವರ್ತಮಾನಕಾಲಕ್ಕೆ ಸಂಬಂಧಿಸಿದಂತೆ ಕಾರ್ಯಗಳ ಕುರಿತು ಹೀಗೆ ಮೂಲಭೂತ ಏಳು ಮಾನದಂಡಗಳನ್ನು ಸಂಪೂರ್ಣವಾಗಿ ಟಿಪ್ಪಣಿ ಮಾಡಿಕೊಳ್ಳಬೇಕು. (iii) ಚಿತ್ರದ ಬಗ್ಗೆ ಚರ್ಚೆ – ೩೦ ನಿಮಿಷಗಳು. ಈ ಹಂತದಲ್ಲಿ ಅಭ್ಯರ್ಥಿಗಳನ್ನು ಹಲವು ಗುಂಪುಗಳಾಗಿ ವಿಂಗಡಿಸಲಾಗುವುದು. ಗುಂಪಿನಲ್ಲಿ ಸುಮಾರು ೧೫ ಅಭ್ಯರ್ಥಿಗಳಿರುತ್ತಾರೆ. ಪ್ರತಿ ಅಭ್ಯರ್ಥಿಯು ತನ್ನ ಸ್ವಂತ ಲಿಖಿತ ವಿವರಣೆಯನ್ನು ಅದೇ ಪದಗಳಲ್ಲಿ ವಿವರಿಸಬೇಕಾಗುತ್ತದೆ. ತರುವಾಯು, ಭಾಗ -II ರಲ್ಲಿ, ಅಭ್ಯರ್ಥಿಗಳು ತಮ್ಮಷ್ಟಕ್ಕೇ ಚರ್ಚಿಸಬೇಕಾಗುತ್ತದೆ ಮತ್ತು ಕಥೆಯ ಪಾತ್ರಗಳು ಮತ್ತು ವಿಷಯ ವಸ್ತುವಿನ ಬಗ್ಗೆ ಸಾಮಾನ್ಯ ಸಹಮತಕ್ಕೆ ಬರಬೇಕಾಗುತ್ತದೆ. ಅಭ್ಯರ್ಥಿಗಳು ಒಮ್ಮೆ ಈ ಹಂತವನ್ನು ಪೂರೈಸಿದ ನಂತರ ಹಂತ ಒಂದರ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಯಶಸ್ವಿ ಅಭ್ಯರ್ಥಿಗಳನ್ನು ಹಂತ-II ರ ಪರೀಕ್ಷೆಗೆ ಉಳಿಸಿಕೊಳ್ಳಲಾಗುತ್ತದೆ ಮತ್ತು ಉಳಿದವರಿಗೆ ಸಾಮಾನ್ಯ ನ್ಯೂನ್ಯತೆಗಳ ಬಗ್ಗೆ ವಿವರಿಸಿದ ನಂತರ ತೊರೆಯಲು ತಿಳಿಸಲಾಗುತ್ತದೆ.

ದಿನ -೨ (ಹಂತ-II).

ಮನೋವೈಜ್ಞಾನಿಕ ಪರೀಕ್ಷೆಗಳು ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ:- (i) ಥೆಮ್ಯಾಟಿಕ್ ಅಪ್ರೆಸೆಪ್ಶನ್ ಟೆಸ್ಟ್ (ಟಿಎಟಿ). ಪ್ರತಿ ೩೦ ಸೆಕೆಂಡುಗಳ ಅಂತರದಲ್ಲಿ ಒಂದು ಖಾಲಿ ಚಿತ್ರವನ್ನು ಒಳಗೊಂಡು ೧೨ ಚಿತ್ರಗಳನ್ನು ತೋರಿಸಲಾಗುತ್ತದೆ. ಘಟನೆಗೆ ಏನು ಕಾರಣವಾಯಿತೆಂಬುದನ್ನು ಅಭ್ಯರ್ಥಿಗಳಿಗೆ ಬರೆಯಲು ತಿಳಿಸಲಾಗುತ್ತದೆ? ಏನು ನಡೆಯುತ್ತಿದೆ ಮತ್ತು ಫಲಿತಾಂಶವು ಏನಾಗಿರುತ್ತದೆ? ಚಿತ್ರವನ್ನು ೩೦ ಸೆಕೆಂಡುಗಳ ಕಾಲ ತೋರಿಸಲಾಗುತ್ತದೆ ಮತ್ತು ಅಭ್ಯರ್ಥಿಗಳು ಅದನ್ನು ೪ ನಿಮಿಷಗಳಲ್ಲಿ ಬರೆಯಬೇಕು. ಖಾಲಿ ಚಿತ್ರದಲ್ಲಿ, ಅಭ್ಯರ್ಥಿಗಳು ತಮ್ಮದೇ ಆಯ್ಕೆಯ ಚಿತ್ರವೊಂದರ ಬಗ್ಗೆ ಯೋಚಿಸಿ ಅದರ ಬಗ್ಗೆ ವಿಷಯವನ್ನು ಬರೆಯಬೇಕು. (ii) ವರ್ಡ್ ಅಸೋಸಿಯೇಶನ್ ಟೆಸ್ಟ್ (ಡಬ್ಲ್ಯೂಎಟಿ).ಈ ಪರೀಕ್ಷೆಯಲ್ಲಿ, ಪ್ರತಿ ೧೫ ಸೆಕೆಂಡುಗಳ ಅಂತರದಲ್ಲಿ ಒಂದರ ನಂತರ ಒಂದು ಹೀಗೆ ೬೦ ಪದಗಳನ್ನು ಸರಣಿಯಲ್ಲಿ ತೋರಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಮನಸ್ಸಿನಲ್ಲಿ ಮೊದಲು ಹೊಳೆಯುವ ಯೋಚನೆ ಅಥವಾ ಅಭಿಪ್ರಾಯವನ್ನು ಬರೆಯಬೇಕಾಗುತ್ತದೆ. (iii) ಸನ್ನಿವೇಶಕ್ಕೆ ಪ್ರತಿಕ್ರಿಯೆ ಪರೀಕ್ಷೆ (ಎಸ್ಆರ್‌ಟಿ).ಈ ಪರೀಕ್ಷೆಯು ದೈನದಿಂದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ೬೦ ದಿನನಿತ್ಯದ ಜೀವನ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಸನ್ನಿವೇಶಗಳನ್ನು ಕಿರು ಪುಸ್ತಕದಲ್ಲಿ ಮುದ್ರಿಸಿರಲಾಗುತ್ತದೆ ಮತ್ತು ಅಭ್ಯರ್ಥಿಗಳು ಈ ಸನ್ನಿವೇಶಗಳ ಬಗ್ಗೆ ಹೇಗೆ ಭಾವಿಸುತ್ತಾರೆ, ಯೋಚಿಸುತ್ತಾರೆ ಮತ್ತು ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವಾಕ್ಯಗಳನ್ನು ಪೂರ್ಣಗೊಳಿಸುವುದರ ಮೂಲಕ ಬರೆಯಬೇಕಾಗುತ್ತದೆ. (iv) ಸ್ವಯಂ ವಿವರಣೆ-೧೫ ನಿಮಿಷಗಳು.ಅಭ್ಯರ್ಥಿಗಳು ಐದು ಪ್ರತ್ಯೇಕ ಪ್ಯಾರಾಗ್ರಾಫ್‌ಗಳಲ್ಲಿ ತಮ್ಮ ಪಾಲಕರು/ಪೋಷಕರು, ಸ್ನೇಹಿತರು, ಶಿಕ್ಷಕರು/ಮೇಲ್ವಿಚಾರಕರು ಹೀಗೆ ಪ್ರತಿಯೊಬ್ಬರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬರೆಯಬೇಕಾಗುತ್ತದೆ.

ದಿನ -೩(ಜಿಟಿಓ-ದಿನ ೧)

ಇದು ಇವುಗಳನ್ನು ಒಳಗೊಂಡಿರುತ್ತದೆ:- (i) ಸಮೂಹ ಚರ್ಚೆ. ಸಾಮಾನ್ಯ ಆಸಕ್ತಿಯ (ಸಾಮಾಜಿಕ ಸಮಸ್ಯೆಗಳು ಮತ್ತು ಪ್ರಸ್ತುತ ಘಟನೆಗಳು) ಕುರಿತ ಎರಡು ವಿಷಯಗಳನ್ನು ಚರ್ಚಿಸಲಾಗುವುದು. ಇದು ಒಂದು ಅನೌಪಚಾರಿಕ ಚರ್ಚೆಯಾಗಿರುತ್ತದೆಯೇ ಹೊರತು ವಾದವಾಗಿರುವುದಿಲ್ಲ. ಪ್ರತಿ ವಿಷಯಕ್ಕೆ ತಲಾ ೨೦ ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಯಾವುದೇ ನಿರ್ದಿಷ್ಟ ನಿರ್ಣಯವನ್ನು ಊಹಿಸುವ ಅಗತ್ಯವಿರುವುದಿಲ್ಲ. (ii)ಗ್ರೂಪ್ ಪ್ಲಾನಿಂಗ್ ಎಕ್ಸರ್‌ಸೈಸ್(ಜಿಪಿಇ). ಇದು ಐದು ಹಂತಗಳನ್ನು ಒಳಗೊಂಡಿರುತ್ತದೆ, ಇವುಗಳೆಂದರೆ, ಮಾದರಿಯ ಬಗ್ಗೆ ವಿವರಿಸುವಿಕೆ, ಜಿಟಿಓನಿಂದ ನಿರೂಪಣೆಯ ಓದುವಿಕೆ, ಅಭ್ಯರ್ಥಿಗಳಿಂದ ಐದು ನಿಮಿಷಗಳ ಕಾಲ ಸ್ವಯಂ ಓದುವಿಕೆ, ವೈಯಕ್ತಿಕ ಲಿಖಿತ ಪರಿಹಾರಗಳಿಗೆ ೧೦ ನಿಮಿಷಗಳು ಮತ್ತು ಸಮೂಹ ಚರ್ಚೆಗಾಗಿ ೨೦ ನಿಮಿಷಗಳು. ಸಮೂಹ ಪರಿಹಾರದ ನಿರೂಪರಣೆ ಮತ್ತು ಸ್ಪಷ್ಟ ನಿರ್ಣಯವು ಅಗತ್ಯವಿರುತ್ತದೆ. (iii)ಪ್ರೊಗ್ರೆಸ್ಸಿವ್ ಗ್ರೂಪ್ ಟಾಸ್ಕ್ಸ್(ಪಿಜಿಟಿ). ಇದು ಮೊದಲ ಹೊರಾಂಗಣ ಕಾರ್ಯವಾಗಿರುತ್ತದೆ. ಹಂತಹಂತವಾಗಿ ಹೆಚ್ಚುತ್ತಿರುವ ಹಂತದ ಅಡಚಣೆಗಳೊಂದಿಗೆ ನಾಲ್ಕು ತಡೆಗಳನ್ನು ೪೦ ರಿಂದ ೫೦ ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ರಚನೆಗಳು, ಸಹಾಯ ವಸ್ತು ಮತ್ತು ಸಾಮಾನುಗಳನ್ನು ಗುಂಪಿಗೆ ಒದಗಿಸಲಾಗುತ್ತದೆ. (iv) ಗ್ರೂಪ್ ಒಬ್ಸ್ಟಾಕಲ್ ರೇಸ್(ಜಿಓಆರ್). ಈ ಕಾರ್ಯದಲ್ಲಿ ಗುಂಪಿನವರು ಪರಸ್ಪರರ ವಿರುದ್ಧವಾಗಿ ಆರು ಅಡೆತಡೆಗಳಲ್ಲಿ ನಿರ್ವಹಿಸಬೇಕಾಗುತ್ತದೆ ಮತ್ತು ಇದರಲ್ಲಿ ಹಾವಿನಂತಹ ಸಾಮಾನನ್ನು ಎತ್ತಿಕೊಂಡಿರಬೇಕಾಗುತ್ತದೆ. (v) ಹಾಫ್ ಗ್ರೂಪ್ ಟಾಸ್ಕ್ (ಹೆಚ್‌ಜಿಟಿ). ಇದು ಪ್ರೊಗ್ರೆಸಿವ್ ಗ್ರೂಪ್ ಟಾಸ್ಕ್‌ನಂತಹುದೇ ಒಂದು ಅಡಚಣೆಯನ್ನು ಹೊಂದಿರುತ್ತದೆ ಮತ್ತು ಇಲ್ಲಿ ಸಹಾಯ ವಸ್ತು ಮತ್ತು ಸಾಮಾನನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಗುಂಪನ್ನು ಎರಡು ಉಪ ಗುಂಪುಗಳಾಗಿ ವಿಭಾಗಿಸಲಾಗುತ್ತದೆ ಮತ್ತು ಎರಡೂ ಗುಂಪುಗಳಿಗೂ ಒಂದೇ ಅಡಚಣೆಯನ್ನು ನೀಡಿರಲಾಗಿರುತ್ತದೆ, ಆದರೆ ಒಂದು ಗುಂಪು ಕಾರ್ಯನಿರ್ವಹಿಸಬೇಕಾದಾಗ ಮತ್ತೊಂದು ಗುಂಪಿಗೆ ಅದನ್ನು ನೋಡಲು ಅವಕಾಶ ಕಲ್ಪಿಸಲಾಗಿರುವುದಿಲ್ಲ. ಪ್ರತಿ ಉಪ ಗುಂಪಿಗೆ ೧೫ ನಿಮಿಷಗಳ ಕಾಲಾವಧಿಯನ್ನು ನಿಗದಿಪಡಿಸಿರಲಾಗಿರುತ್ತದೆ. (vi) ಲೆಕ್ಚರೇಟ್. ಇದು ವೈಯಕ್ತಿಕ ಕಾರ್ಯವಾಗಿದೆ ಮತ್ತು ಅಭ್ಯರ್ಥಿಯು ಗುಂಪಿನಲ್ಲಿ ಕಿರು ಭಾಷಣವನ್ನು ಮಾಡಬೇಕಾಗುತ್ತದೆ. ಮಾತನಾಡಲು ನೀಡಿರುವ ನಾಲ್ಕು ಲೆಕ್ಚರೇಟ್ ಕಾರ್ಡುಗಳಿಂದ ಆಯ್ಕೆ ಮಾಡಲಾದ ಯಾವುದೇ ಒಂದು ವಿಷಯದ ಬಗ್ಗೆ ತಯಾರಿ ಮಾಡಿಕೊಳ್ಳಲು ಮೂರು ನಿಮಿಷಗಳ ಕಾಲಾವಧಿಯನ್ನು ನೀಡಲಾಗುತ್ತದೆ.

ದಿನ – ೪(ಜಿಟಿಓ –ದಿನ ೨)

(i) ವೈಯಕ್ತಿಕ ಅಡಚಣೆಗಳು. ೧೦ ಅಡಚಣೆಗಳನ್ನು ವೈಯಕ್ತಿಕವಾಗಿ ನಿರ್ವಹಿಸಬೇಕಾಗುತ್ತದೆ. ಅಡಚಣೆಗಳಿಗೆ ಒಂದರಿಂದ ಹತ್ತು ಸಂಖ್ಯೆಗಳನ್ನು ನೀಡಲಾಗಿರುತ್ತದೆ ಮತ್ತು ಇದು ಪ್ರತಿಯೊಂದಕ್ಕೆ ನಿಗದಿಪಡಿಸಿರುವ ಅಂಕಗಳನ್ನು ಸೂಚಿಸುತ್ತದೆ. ಪ್ರತಿ ಅಭ್ಯರ್ಥಿಗೆ ಮೂರು ನಿಮಿಷಗಳ ಕಾಲಾವಧಿ ನೀಡಲಾಗುತ್ತದೆ. (ii) ಕಮಾಂಡ್ ಟಾಸ್ಕ್. ಪ್ರೊಗ್ರೆಸಿವ್ ಗ್ರೂಪ್ ಟಾಸ್ಕ್‌ನಂತಹ ಒಂದು ಅಡಚಣೆಯನ್ನು ಒಳಗೊಂಡಿರುವ ಒಂದು ಕಾರ್ಯಕ್ಕೆ ಪ್ರತಿಯೊಬ್ಬರನ್ನೂ ಕಮಾಂಡರ್ ಆಗಿ ನೇಮಕ ಮಾಡಲಾಗುತ್ತದೆ ಮತ್ತು ಇದಕ್ಕೆ ೧೫ ನಿಮಿಷಗಳ ಕಾಲಾವಧಿಯನ್ನು ನೀಡಲಾಗುತ್ತದೆ. (iii) ಫೈನಲ್ ಗ್ರೂಪ್ ಟಾಸ್ಕ್. ಈ ಕಾರ್ಯವು ಪ್ರೊಗ್ರೆಸಿವ್ ಗ್ರೂಪ್ ಟಾಸ್ಕ್‌ನಂತಹ ಒಂದು ಅಡಚಣೆಯನ್ನು ಒಳಗೊಂಡಿರುತ್ತದೆ. ಈ ಕಾರ್ಯವನ್ನು ಪೂರ್ತಿಗೊಳಿಸಲು ೧೫-೨೦ ನಿಮಿಷಗಳ ಕಾಲಾವಧಿಯನ್ನು ನೀಡಲಾಗಿರುತ್ತದೆ.

ದಿನ ೩ & ೪ ಸಂದರ್ಶನಗಳು - ಸಂದರ್ಶನ ಅಧಿಕಾರಿ (ಐಓ) ಕೈಗೊಳ್ಳುವ ವೈಯಕ್ತಿಕ ಸಂದರ್ಶನ

ದಿನ - ೫

ಇದು ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ:- (i) ಬೋರ್ಡ್‌ನ ಉಪಾಧ್ಯಕ್ಷರಿಂದ ಮುಕ್ತಾಯ ಭಾಷಣ. (ii) ಸಭೆ. (iii) ಫಲಿತಾಂಶಗಳ ಘೋಷಣೆ. (iv) ಮುಕ್ತಾಯ.

ಪ್ರವೇಶದ ವಿಧಾನಗಳು[ಬದಲಾಯಿಸಿ]

೧೦+೨ ಎಕ್ಸಿಕ್ಯೂಟಿವ್ ಪ್ರವೇಶ / ಎನ್‌ಡಿಎ ಪ್ರವೇಶ ೧೦+೨(ಎಕ್ಸಿಕ್ಯೂಟಿವ್)ನ ಆಯ್ಕೆಗೊಂಡ ಅಭ್ಯರ್ಥಿಗಳನ್ನು ನೇರವಾಗಿ ಭಾರತೀಯ ನೌಕಾ ಅಕಾಡೆಮಿ, ಎಳಿಮಲದಲ್ಲಿ ನಾಲ್ಕು ವರ್ಷಗಳ ಬಿ-ಟೆಕ್ ಕೋರ್ಸಿಗೆ ಕೆಡೆಟ್‌ಗಳಾಗಿ ಸೇರ್ಪಡೆಗೊಳಿಸಿಕೊಳ್ಳಲಾಗುತ್ತದೆ. ಕೋರ್ಸು ಪೂರ್ಣಗೊಳಿಸಿದ ನಂತರ, ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ದಿಂದ ಬಿ-ಟೆಕ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಎನ್‌ಡಿಎನಲ್ಲಿ ಆಯ್ಕೆಯಾದ ನೌಕಾ ಅಭ್ಯರ್ಥಿಗಳು ಭೂಸೇನೆ ಮತ್ತು ವಾಯುಸೇನೆಗಳ ಕೆಡೆಟ್‌ಗಳೊಂದಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಜಂಟಿ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಹೆಚ್ಚಿನ ತರಬೇತಿಗಾಗಿ ಭಾರತೀಯ ನೌಕಾ ಅಕಾಡೆಮಿ, ಎಳಿಮಲಕ್ಕೆ ಆಗಮಿಸುತ್ತಾರೆ. ಭಾರತೀಯ ನೌಕಾ ಅಕಾಡೆಮಿಯಲ್ಲಿ ಇನ್ನೂ ಎರಡು ವರ್ಷಗಳನ್ನು ಪೂರೈಸಿದ ಬಳಿಕ, ಎಲ್ಲಾ ಕೆಡೆಟ್‌ಗಳಿಗೆ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ದಿಂದ ಬಿ-ಟೆಕ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ.

೧೦+೨ ತಾಂತ್ರಿಕ ಪ್ರವೇಶ ಆಯ್ಕೆಯಾದ ಅಭ್ಯರ್ಥಿಗಳನ್ನು ಕೇರಳದ ಎಳಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷಗಳ ಬಿ-ಟೆಕ್ ಕೋರ್ಸಿಗೆ ಸೇರಿಸಿಕೊಳ್ಳಲಾಗುತ್ತದೆ. ಕೋರ್ಸಿನ ಅವಧಿಯಲ್ಲಿ ಕೆಡೆಟ್‌ಗಳಿಗೆ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ವಿಭಾಗವನ್ನು ನೀಡಲಾಗುತ್ತದೆ. ಕೋರ್ಸು ಪೂರ್ಣಗೊಳಿಸಿದ ನಂತರ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ದಿಂದ ಬಿ-ಟೆಕ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಮೊದಲ ಅವಧಿಯ ನಂತರ ಕೆಲವು ಕೆಡೆಟ್‌ಗಳಿಗೆ ಕೊಚ್ಚಿನ್ ಯೂನಿವರ್ಸಿಟಿ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ (ಸಿಯುಎಸ್ಎಟಿ)ಯ ನವಲ್ ಆರ್ಕಿಟೆಕ್ಚರ್‌ನಲ್ಲಿ ಬಿ-ಟೆಕ್ ಪದವಿಗೆ ನಾಮಕರಣ ಮಾಡಲಾಗುವುದು. ಅವರು ಸಿಯುಎಸ್ಎಟಿ ನ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಬೇಕಾಗುತ್ತದೆ. ಯಶಸ್ವಿ ಅಭ್ಯರ್ಥಿಗಳು ಸ್ವಲ್ಪ ಕಾಲಾವಧಿಯ ಬಳಿಕ ಸಿಯುಎಸ್ಎಟಿ ನಲ್ಲಿ ನವಲ್ ಆರ್ಕಿಟೆಕ್ಚರ್ ಎಂಡ್ ಶಿಪ್ ಬಿಲ್ಡಿಂಗ್‌ನಲ್ಲಿ ನಾಲ್ಕು ವರ್ಷಗಳ ಬಿ-ಟೆಕ್ ಪದವಿ ವ್ಯಾಸಂಗ ಮಾಡಬೇಕಾಗುತ್ತದೆ. ಆ ನಂತರ, ಕೆಡೆಟ್‌ಗಳನ್ನು ವಿಶಾಖಪಟ್ಣಂನಲ್ಲಿ ಯುದ್ಧನೌಕೆಯ ವಿನ್ಯಾಸದ ಕೋರ್ಸಿಗಾಗಿ ಆರು ತಿಂಗಳ ಅವಧಿಗೆ ಕಳುಹಿಸಲಾಗುತ್ತದೆ, ಆ ಬಳಿಕ ಅವರು ಐಐಟಿ ದೆಹಲಿಯಲ್ಲಿ ೧೮ ತಿಂಗಳ ನವಲ್ ಆರ್ಕಿಟೆಕ್ಚರ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ವ್ಯಾಸಂಗ ಮಾಡಬೇಕಾಗುತ್ತದೆ.ಎನ್ಎವಿಎಸಿ ಸಹ ೭೫೦ ಕೆಡೆಟ್‌ಗಳು ಮತ್ತು ನಿಯೋಜಿತ ಅಧಿಕಾರಿಗಳಿಗೆ ನವಲ್ ಆರ್ಕಿಟೆಕ್ಚರ್‌ನಲ್ಲಿ ಬಿ-ಟೆಕ್ ಅನ್ನು ನಡೆಸುತ್ತದೆ. ಇಂಜಿನಿಯರಿಂಗ್ ಶಿಕ್ಷಣ ಕ್ರಮವನ್ನು ಭಾರತೀಯ ನೌಕಾಪಡೆಯು ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಕೌನ್ಸಿಲ್ (ಎಐಸಿಟಿಇ) ಸಹಯೋಗದೊಂದಿಗೆ ರೂಪಿಸಿದೆ.

ಶಾರ್ಟ್ ಸರ್ವಿಸ್ ಕಮೀಷನ್(ಎಸ್ಎಸ್‌ಸಿ) ಎಸ್ಎಸ್‌ಸಿ ಅಧಿಕಾರಿಗಳ ಕಾಲಾವಧಿ ಇದು ೧೦ ವರ್ಷಗಳ ಕಾಲಾವಧಿಯದ್ದಾಗಿರುತ್ತದೆ, ಇದನ್ನು ಸೇವಾ ಅಗತ್ಯತೆಗಳು ಮತ್ತು ಅಭ್ಯರ್ಥಿಗಳ ಸಾಧನೆ/ಬಯಕೆಗೆ ಒಳಪಟ್ಟು ಇನ್ನೂ ೪ ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ.ಶಿಕ್ಷಣ, ಲಾಜಿಸ್ಟಿಕ್ಸ್, ಇಂಜಿನಿಯರಿಂಗ್, ಎಲೆಕ್ಟ್ರಿಕಲ್, ಸಬ್‌ಮೆರಿನ್ (ತಾಂತ್ರಿಕ), ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಕಾನೂನು ವಿಭಾಗಗಳು/ವರ್ಗಗಳ ಸಬ್ ಲೆಫ್ಟಿನೆಂಟ್‌ಗಳಿಗೆ ಪ್ರಾರಂಭಿಕ ತರಬೇತಿ ಅವಧಿಯು ೨೦ ವಾರಗಳದ್ದಾಗಿರುತ್ತದೆ. ಇತರ ನೌಕಾ ಕೇಂದ್ರಗಳಲ್ಲಿಯೂ ವಿಭಾಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ತರಬೇತಿಯನ್ನು ಆ ನಂತರ ನೀಡಲಾಗುವುದು.ನವಲ್ ಆರ್ಕಿಟೆಕ್ಟ್, ಕಾನೂನು, ಲಾಜಿಸ್ಟಿಕ್ಸ್, ಎಟಿಸಿ, ಅಬ್ಸರ್ವರ್ ಮತ್ತು ಶೈಕ್ಷಣಿಕ ವಿಭಾಗಗಳಲ್ಲಿ ಮಹಿಳೆಯರಿಗೆ ಶಾರ್ಟ್ ಸರ್ವಿಸ್ ಕಮೀಷನ್ (ಎಸ್ಎಸ್‌ಸಿ) ಅನ್ನು ನೀಡಲಾಗುವುದು.

ಐಸಿಟಿ ಅಸಿಸ್ಟೆಂಟ್ ಕಮಾಂಡೆಂಟ್ಸ್ ಕೋರ್ಸ್ (ಜಿಡಿ/ತಾಂತ್ರಿಕ/ಪೈಲಟ್-ನ್ಯಾವಿಗೇಟರ್/ಕಾನೂನು/ಸಿಪಿಎಲ್*) ಅಸಿಸ್ಟಂಟ್ ಕಮಾಂಡೆಂಟ್ ( ಲೆಫ್ಟಿನೆಂಟ್ ಹುದ್ದೆಗೆ ಸಮಾನ)ಗಳು ಖಾಯಂ ನಿಯೋಜಿತ ಅಧಿಕಾರಿಗಳಾಗಿದ್ದು, ಇವರು ನೌಕಾ ಅಕಾಡೆಮಿಯಲ್ಲೇ ತರಬೇತಿ ಪಡೆದುಕೊಳ್ಳುತ್ತಾರೆ, ಆದರೆ ಇವರು ಭಾರತೀಯ ತಟ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ಸಿಪಿಎಲ್ ಹೊಂದಿರುವವರಿಗೆ ಶಾರ್ಟ್ ಸರ್ವಿಸ್ ಕಮೀಷನ್‌ಗಳನ್ನು ನೀಡಲಾದರೆ ಇತರರು ಖಾಯಂ ಅಧಿಕಾರಿಗಳಾಗುತ್ತಾರೆ.

ತರಬೇತಿ[ಬದಲಾಯಿಸಿ]

ವರದಿ ಮಾಡಿಕೊಂಡ ಬಳಿಕ, ಶಿಕ್ಷಾರ್ಥಿಗಳಿಗೆ ಐಎನ್ಎನಲ್ಲಿನ ಒಂದು ಸ್ಕ್ವಾಡ್ರನ್ ಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಪ್ರತಿ ವಿಭಾಗದಲ್ಲಿ ಸುಮಾರು ೪೦ ಶಿಕ್ಷಾರ್ಥಿಗಳಂತೆ ಪ್ರತಿ ಸ್ಕ್ವಾಡ್ರನ್ ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ. ಕಮಾಂಡರ್/ ಲೆಫ್ಟಿನೆಂಟ್ ಕಮಾಂಡರ್ ಹುದ್ದೆಯ ಸ್ಕ್ವಾಡ್ರನ್ ಕಮಾಂಡರ್ ಅವರು ಸ್ಕ್ವಾಡ್ರನ್‌ನ ಮುಖ್ಯಸ್ಥರಾಗಿರುತ್ತಾರೆ ಮತ್ತು ಇವರಿಗೆ ಲೆಫ್ಟಿನೆಂಟ್ ಹುದ್ದೆಯ ವಿಭಾಗೀಯ ಅಧಿಕಾರಿಗಳು ಸಹಾಯ ಮಾಡುತ್ತಾರೆ. ಪ್ರತಿಯೊಂದು ವಿಭಾಗವು ವಿವಿಧ ಕೋರ್ಸುಗಳಿಂದ ಬಂದಿರುವ ಶಿಕ್ಷಾರ್ಥಿಗಳ ಮಿಶ್ರಣವನ್ನು ಹೊಂದಿರುತ್ತದೆ ಮತ್ತು ಇದನ್ನು ವಿಭಾಗೀಯ ಅಧಿಕಾರಿಯು ನಿಯಂತ್ರಿಸುತ್ತಾರೆ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ, ಇವರಿಗೆ ಸ್ಕ್ವಾಡ್ರನ್/ಡಿವಿಷನ್‌ನಲ್ಲಿ ಶಿಕ್ಷಾರ್ಥಿ ನೇಮಕಾತಿಗಳಿಂತ ಸಹಾಯ ಮಾಡಲಾಗುತ್ತದೆ. ಈ ಮೂಲಕ ವಿಭಾಗೀಯ ವ್ಯವಸ್ಥೆಯು ಶಿಕ್ಷಾರ್ಥಿಗಳಿಗೆ ಅವರ ಎಲ್ಲಾ ಚಟುವಟಿಕೆಗಳ ಸೂಕ್ಷ್ಮ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಸಲಹೆಗೆ ಅವಕಾಶ ಒದಗಿಸುತ್ತದೆ. ಶಿಕ್ಷಾರ್ಥಿಗಳಿಗೆ ಸ್ಕ್ವಾಡ್ರನ್‌ಗಳು ವಾಸದ ಪ್ರದೇಶವಾಗಿರುತ್ತದೆ, ಆದರೆ ತರಗತಿ ಕೋಣೆಯ ಸೂಚನೆಗಳು ಮತ್ತು ಹೊರಾಂಗಣ ತರಬೇತಿಯನ್ನು ಪ್ರತ್ಯೇಕವಾಗಿ ನಿಯೋಜಿತ ತರಬೇತಿ ಪ್ರದೇಶಗಳಲ್ಲಿ ನಡೆಸಲಾಗುವುದು.ತರಬೇತಿಯನ್ನು ಪ್ರತಿ ೨೨ ವಾರಗಳ ಅವಧಿಯ ಎಂಟು ಸೆಮಿಸ್ಟರ್‌ಗಳಲ್ಲಿ ಪೂರ್ಣಗೊಳಿಸಲಾಗುವುದು, ಹಾಗೂ ಇದರಲ್ಲಿ ಸೆಮಿಸ್ಟರ್‌ಗಳ ನಡುವೆ ನಾಲ್ಕು ವಾರಗಳ ರಜೆಯಿರುತ್ತದೆ.

ಐಎನ್‌ಹೆಚ್ಎಸ್ ನವಜೀವನಿ[ಬದಲಾಯಿಸಿ]

ಐಎನ್‌ಹೆಚ್ಎಸ್ ನವಜೀವನಿ ಎನ್ನುವುದು ೬೪- ಹಾಸಿಗೆಗಳ ನೌಕಾ ಆಸ್ಪತ್ರೆಯಾಗಿದ್ದು, ಇದಕ್ಕೆ ಕೇಂದ್ರದ ರಕ್ಷಣಾ ಮಂತ್ರಿಯವವರಾದ ಎ.ಕೆ. ಆಂಟನಿಯವರು ಶಂಕುಸ್ಥಾಪನೆಯನ್ನು ನೇರವೇರಿಸಿದ್ದಾರೆ, ಇಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕೆಡೆಟ್‌ಗಳು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಮಾಜಿ-ಸೈನಿಕರ ಆರೋಗ್ಯದ ಅಗತ್ಯತೆಗಳನ್ನು ನೋಡಿಕೊಳ್ಳಲಾಗುತ್ತದೆ.

ಭಾರತೀಯ ನೌಕಾದಳದ ಚಿತ್ರಪಟ[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

  • ಭಾರತದ ಸಶಸ್ತ್ರ ಸೈನ್ಯಗಳು
  • ಭಾರತೀಯ ನೌಕಾಪಡೆ
  • ಭಾರತೀಯ ನೌಕಾಪಡೆಯ ವಾಯು ವಿಭಾಗ
  • ನೌಕಾದಳದ ದರ್ಜೆಗಳು ಮತ್ತು ಭಾರತದ ಬಿರುದುಗಳು
  • ಭಾರತೀಯ ಪ್ರಾಚೀನ ಸಮುದ್ರತೀರದ ಇತಿಹಾಸ
  • ಕನ್ಹೋಜಿ ಆಂಗ್ರೆ - ಪ್ರಸಿದ್ಧ ಮರಾಠ ಅಡ್ಮಿರಲ್
  • ಕುಂಜಾಲಿ ಮಾರಕ್ಕರ್ - ಜಮೋರಿನ್ನ ನೌಕಾದಳದ ಮುಖ್ಯಸ್ಥ
  • ನೌಕಾ ಅಕಾಡೆಮಿ
  • ಭಾರತದಲ್ಲಿನ ಸೈನಿಕ ಅಕಾಡೆಮಿಗಳು
  • ಸೈನಿಕ ಶಾಲೆ
  • ನೌಕಾದಳದ ದರ್ಜೆಗಳು ಭಾರತದ ಬಿರುದುಗಳು

ಬಾಹ್ಯ ಕೊಂಡಿಗಳು[ಬದಲಾಯಿಸಿ]