ಬದಲಾಪುರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾಪುರ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಶ್ರೀರಾಮ್ ರಾಘವನ್
ನಿರ್ಮಾಪಕದಿನೇಶ್ ವಿಜನ್
ಸುನಿಲ್ ಲುಲ್ಲಾ
ಲೇಖಕಶ್ರೀರಾಮ್ ರಾಘವನ್
ಅರಿಜೀತ್ ಬಿಸ್ವಾಸ್
ಪೂಜಾ ಲಢಾ ಸೂರ್ತಿ
ಕಥೆಮಾಸ್ಸೀಮೊ ಕಾರ್ಲೋಟೊ
ಆಧಾರಮಾಸ್ಸೀಮೊ ಕಾರ್ಲೋಟೊರ ಡೆತ್ಸ್ ಡಾರ್ಕ್ ಆ್ಯಬಿಸ್ ಮೇಲೆ ಆಧಾರಿತ
ಪಾತ್ರವರ್ಗ
  • ವರುಣ್ ಧವನ್
  • ನವಾಜ಼ುದ್ದೀನ್ ಸಿದ್ದೀಕಿ
  • ಹೂಮಾ ಕುರೇಶಿ
  • ರಾಧಿಕಾ ಆಪ್ಟೆ
  • ಯಾಮಿ ಗೌತಮ್
  • ದಿವ್ಯಾ ದತ್ತಾ
ಸಂಗೀತಸಚಿನ್-ಜಿಗರ್
ಛಾಯಾಗ್ರಹಣಅನಿಲ್ ಮೆಹ್ತಾ
ಸಂಕಲನಪೂಜಾ ಲಢಾ ಸೂರ್ತಿ
ಸ್ಟುಡಿಯೋಮ್ಯಾಡಾಕ್ ಫ಼ಿಲ್ಮ್ಸ್
ವಿತರಕರುಈರಾಸ್ ಇಂಟರ್‌ನ್ಯಾಷನಲ್
ಬಿಡುಗಡೆಯಾಗಿದ್ದು
  • 20 ಫೆಬ್ರವರಿ 2015 (2015-02-20)
ಅವಧಿ135 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ16 ಕೋಟಿ[೨]
ಬಾಕ್ಸ್ ಆಫೀಸ್ಅಂದಾಜು 81.31 ಕೋಟಿ[೩]

ಬದಲಾಪುರ್ (ಅನುವಾದ: ಸೇಡಿನ ನಗರ) 2015 ರ ಒಂದು ಹಿಂದಿ ನವ-ನ್ವಾರ್ ಸಾಹಸಪ್ರಧಾನ ರೋಮಾಂಚಕಾರಿ ಚಲನಚಿತ್ರ.[೪][೫] ಇದನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದು ದಿನೇಶ್ ವಿಜನ್ ಹಾಗೂ ಸುನಿಲ್ ಲುಲ್ಲಾ ಮ್ಯಾಡಾಕ್ ಫಿಲ್ಮ್ಸ್ ಹಾಗೂ ಈರಾಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ಇಟಾಲಿಯನ್ ಬರಹಗಾರ ಮಾಸ್ಸಿಮೊ ಕಾರ್ಲೊಟ್ಟೊರ ಕಾದಂಬರಿ ಡೆತ್ಸ್ ಡಾರ್ಕ್ ಅಬಿಸ್ ಮೇಲೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ನವಾಜ಼ುದ್ದೀನ್ ಸಿದ್ದೀಕಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಹೂಮಾ ಕುರೇಷಿ, ಯಾಮಿ ಗೌತಮ್, ವಿನಯ್ ಪಾಠಕ್, ದಿವ್ಯಾ ದತ್ತಾ ಮತ್ತು ರಾಧಿಕಾ ಆಪ್ಟೆ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 20 ಫೆಬ್ರವರಿ 2015 ರಂದು ಬಿಡುಗಡೆಯಾಯಿತು.[೬] ಬದಲಾಪುರ್ ವಿಶ್ವಾದ್ಯಂತ ಸುಮಾರು ₹ 813 ದಶಲಕ್ಷದಷ್ಟು ಗಳಿಸಿತು ಎಂದು ವರದಿಯಾಯಿತು.[೭]

ಈ ಚಿತ್ರವು 61 ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಇತರ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು.

ಕಥಾವಸ್ತು[ಬದಲಾಯಿಸಿ]

ಇಬ್ಬರು ಸ್ನೇಹಿತರಾದ ಲಿಯಾಕ್ (ನವಾಜ಼ುದ್ದೀನ್ ಸಿದ್ದೀಕಿ ) ಮತ್ತು ಹರ್ಮನ್ (ವಿನಯ್ ಪಾಠಕ್)ಪುಣೆಯಲ್ಲಿನ ಒಂದು ಬ್ಯಾಂಕನ್ನು ದರೋಡೆ ಮಾಡಿ ಮಿಶಾ (ಯಾಮಿ ಗೌತಮ್) ಮತ್ತು ಆಕೆಯ ಮಗ ರಾಬಿನ್‌ಗೆ ಸೇರಿದ ಕಾರನ್ನು ಅಪಹರಿಸಿ ಪರಾರಿಯಾಗುತ್ತಾರೆ. ನಂತರದ ಬೆನ್ನಟ್ಟುವ ವೇಳೆ, ರಾಬಿನ್ ಕಾರಿನಿಂದ ಬೀಳುತ್ತಾನೆ ಮತ್ತು ಮಿಶಾಗೆ ಗುಂಡೇಟು ಬೀಳುತ್ತದೆ. ಯೋಜನೆಯ ಪ್ರಕಾರ, ಹರ್ಮನ್ ಕಾರಿನಿಂದ ಹಾರಿ ತಪ್ಪಿಸಿಕೊಳ್ಳುತ್ತಾನೆ ಮತ್ತು ಪೊಲೀಸರು ಲಿಯಾಕ್‍ನನ್ನು ಬಂಧಿಸುತ್ತಾರೆ. ಮಿಶಾ ಮತ್ತು ರಾಬಿನ್ ಇಬ್ಬರೂ ಗಾಯಗೊಂಡು ಆಸ್ಪತ್ರೆಯಲ್ಲಿ ನಂತರ ಸಾವನ್ನಪ್ಪುತ್ತಾರೆ. ಇದರಿಂದ ಅವಳ ಪತಿ ಮತ್ತು ಅವನ ತಂದೆ ರಾಘವ್ "ರಘು" ಪುರೋಹಿತ್ (ವರುಣ್ ಧವನ್) ಛಿದ್ರಗೊಳ್ಳುತ್ತಾನೆ. ಅವನು ಲಿಯಾಕ್ ಮೇಲೆ ಜೈಲಿನಲ್ಲಿ ಹಿಂಸಾತ್ಮಕವಾಗಿ ಹಲ್ಲೆ ಮಾಡುತ್ತಾನೆ. ನಂತರ ಇನ್ಸ್ಪೆಕ್ಟರ್ ಗೋವಿಂದ್ (ಕುಮುದ್ ಮಿಶ್ರಾ) ಲಿಯಾಕ್‍ನ ಜೊತೆ ಮತ್ತೊಬ್ಬನಿದ್ದ ಎಂದು ಹೇಳುತ್ತಾನೆ. ಶೀಘ್ರದಲ್ಲೇ, ರಘು ಖಾಸಗಿ ಪತ್ತೇಗಾರ್ತಿಯಾದ ಶ್ರೀಮತಿ ಜೋಶಿ (ಅಶ್ವಿನಿ ಕಲ್ಸೇಕರ್) ಬಳಿ ಹೋಗುತ್ತಾನೆ. ಅವಳು ಅವನಿಗೆ ಲಿಯಾಕ್‍ನ ಗೆಳತಿ ಮತ್ತು ಹಾದರಗಿತ್ತಿಯಾದ ಝಿಮ್ಲಿ (ಹೂಮಾ ಕುರೇಷಿ) ಬಗ್ಗೆ ಹೇಳುತ್ತಾಳೆ. ರಘು ಅವಳನ್ನು ಭೇಟಿಯಾಗಿ ವಿಚಾರಿಸುತ್ತಾನೆ ಮತ್ತು ಲಿಯಾಕ್‌ನ ಪಾಲುದಾರನ ಹೆಸರನ್ನು ಹೇಳುವ ಬದಲಾಗಿ ತಾನು ತನ್ನ ಮಗನ ಸಾವಿಗೆ ಪಡೆದ ಎಲ್ಲಾ ವಿಮಾ ಹಣವನ್ನು ನೀಡುವೆನೆಂದು ಹೇಳುತ್ತಾನೆ, ಆದರೆ ಝಿಮ್ಲಿ ನಿರಾಕರಿಸುತ್ತಾಳೆ. ಪರಿಣಾಮವಾಗಿ, ಕೋಪಗೊಂಡ ರಘು ಅವಳು ತನ್ನೊಂದಿಗೆ ನೃತ್ಯ ಮಾಡುವಂತೆ ಒತ್ತಾಯಿಸುತ್ತಾನೆ ಮತ್ತು ಅಂತಿಮವಾಗಿ ಅವಳ ಮೇಲೆ ಅತ್ಯಾಚಾರ ಮಾಡುತ್ತಾನೆ. ಲಿಯಾಕ್ ದರೋಡೆಗೆ ಶಿಕ್ಷೆಗೊಳಗಾಗುತ್ತಾನೆ ಮತ್ತು ಜೈಲು ಶಿಕ್ಷೆ ಅನುಭವಿಸುತ್ತಾನೆ, ಮತ್ತು ರಘು ಪುಣೆಯಿಂದ ದೂರದಲ್ಲಿರುವ ಏಕಾಂತ ಜೀವನಕ್ಕೆ ತನ್ನನ್ನು ತಾನು ಗಡಿಪಾರು ಮಾಡಿಕೊಳ್ಳುತ್ತಾನೆ.

15 ವರ್ಷಗಳ ನಂತರ, ಲಿಯಾಕ್ ಗುಣವಾಗದ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಮತ್ತು ತನ್ನ ಉಳಿದ ಜೀವನವನ್ನು ತಾಯಿಯೊಂದಿಗೆ ಕಳೆಯಲು ಬಯಸುತ್ತಾನೆ. ರಘು ಬಳಿ ಒಬ್ಬ ಸಮಾಜ ಸೇವಕಿ ಶೋಭಾ (ದಿವ್ಯಾ ದತ್ತಾ) ಬರುತ್ತಾಳೆ. ಅವಳು ಲಿಯಾಕ್‍ನನ್ನು ಕ್ಷಮಿಸುವಂತೆ ಕೇಳಿಕೊಂಡರೂ ಅವನು ನಿರಾಕರಿಸುತ್ತಾನೆ. ಆದರೆ, ಲಿಯಾಕ್‍ನ ಪಾಲುದಾರನ ಹೆಸರನ್ನು ಅವನ ತಾಯಿ ಜ಼ೀನತ್ (ಪ್ರತಿಮಾ ಕಾಜ಼್ಮಿ) ಹೇಳಿದಾಗ ಅವನ ಮನಸ್ಸು ಬದಲಾಗುತ್ತದೆ. ಅವಳು ತಮ್ಮ ಮಗನನ್ನು ಸಹಾನುಭೂತಿಯ ಆಧಾರದ ಮೇಲೆ ವಾಗ್ದಾನದ ಮೇಲೆ ಬಿಡುಗಡೆಗೊಳಿಸಬೇಕೆಂದು ಬಯಸುತ್ತಾಳೆ. ಲಿಯಾಕ್ ಬಿಡುಗಡೆಗೊಳ್ಳುತ್ತಾನೆ. ಆದರೆ ಅವನು ತನ್ನ ಸಂಗಾತಿ ಹರ್ಮನ್ ಬಳಿ ಕರೆದೊಯ್ಯುವಂತೆ ಒಬ್ಬ ಪೋಲೀಸಿನವನು ಅವನನ್ನು ರಹಸ್ಯವಾಗಿ ಹಿಂಬಾಲಿಸುತ್ತಾನೆ. ರಘು ಹರ್ಮನ್‌ನನ್ನು ಪತ್ತೆಹಚ್ಚುತ್ತಾನೆ ಮತ್ತು ಅವನ ಹೆಂಡತಿ ಕಾಂಚನ್ "ಕೋಕೊ" ಖತ್ರಿ (ರಾಧಿಕಾ ಆಪ್ಟೆ) ಗೆ ಹತ್ತಿರವಾಗುತ್ತಾನೆ. ಅವಳು ರಘುವನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತ್ತಾಳೆ. ಅಲ್ಲಿ ಅವನ ನಿಜವಾದ ಉದ್ದೇಶಗಳು ಬಹಿರಂಗವಾಗುತ್ತವೆ. ತಾನು ದರೋಡೆಯಲ್ಲಿ ಪಾಲ್ಗೊಂಡಿದ್ದನೆಂದು ಹರ್ಮನ್ ಒಪ್ಪಿಕೊಳ್ಳುತ್ತಾನೆ, ಆದರೆ ಮಿಶಾ ಮತ್ತು ರಾಬಿನ್‌ನನ್ನು ಕೊಂದಿದ್ದನ್ನು ನಿರಾಕರಿಸುತ್ತಾನೆ. ರಘುನನ್ನು ನಿಭಾಯಿಸಲು ಪ್ರಯತ್ನಿಸಿದಾಗ ಪೊಲೀಸರನ್ನು ಕರೆಯುವುದಾಗಿ ರಘು ಬೆದರಿಕೆ ಹಾಕುತ್ತಾನೆ. ಕೊಕೊ ತಮ್ಮನ್ನು ಉಳಿಸಬೇಕೆಂದು ಅವನಲ್ಲಿ ಬೇಡಿಕೊಳ್ಳಲು ಪ್ರಾರಂಭಿಸುತ್ತಾಳೆ. ಇದಕ್ಕೆ ಬದಲಾಗಿ ಅವಳು ತನ್ನೊಂದಿಗೆ ಮಲಗಬೇಕೆಂದು ರಘು ಬೇಡಿಕೆ ಇಡುತ್ತಾನೆ. ಹರ್ಮನ್ ಮತ್ತು ರಘು ಜಗಳವಾಡುತ್ತಾರೆ. ಇದರಲ್ಲಿ ರಘು ಅವನನ್ನು ಸೋಲಿಸುತ್ತಾನೆ ಮತ್ತು ಮಲಗುವ ಕೋಣೆಗೆ ಹೋಗುತ್ತಾನೆ. ಅಲ್ಲಿ ಅವನು ಕೋಕೊ ತನ್ನ ಬಟ್ಟೆಕಳಚುವಂತೆ ಮಾಡುವ ಮತ್ತು ಹರ್ಮನ್ ತಾವು ಸಂಭೋಗಿಸುತ್ತಿದ್ದಾರೆಂದು ನಂಬುವಂತೆ ಮಾಡಲು ಅವಳು ಕಿರುಚುವಂತೆ ಒತ್ತಾಯಿಸುವ ಮೂಲಕ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಾನೆ.

ಲಿಯಾಕ್ ತನ್ನ ಹಣದ ಪಾಲಿಗಾಗಿ ಹರ್ಮನ್‌ನನ್ನು ಸಂಪರ್ಕಿಸುತ್ತಾನೆ ಮತ್ತು ಒಂದು ಭೇಟಿಯನ್ನು ಏರ್ಪಡಿಸುತ್ತಾನೆ. ಆದರೆ, ಮೊದಲು ರಘು ಹರ್ಮನ್‍ನ ಮನೆಗೆ ಬಂದು ಕೋಕೊ ಮತ್ತು ಹರ್ಮನ್‍ನ್ನು ಸುತ್ತಿಗೆಯಿಂದ ಕೊಲ್ಲುತ್ತಾನೆ. ನಂತರ ಅವನು ಶೋಭಾಳನ್ನು ಭೇಟಿಯಾಗಲು ಹೋಗಿ, ಅವಳನ್ನು ಪ್ರೀತಿಸುತ್ತಿರುವಂತೆ ನಟಿಸಿ ಪರಿಪೂರ್ಣವಾದ ಗೈರುಹಾಜರಿ ಸಾಕ್ಷ್ಯವನ್ನು ಸೃಷ್ಟಿಸುತ್ತಾನೆ. ಪೊಲೀಸರು ಹರ್ಮನ್ ಮತ್ತು ಅವನ ಪತ್ನಿ ನಾಪತ್ತೆಯಾಗಿರುವ ಬಗ್ಗೆ ತನಿಖೆ ಆರಂಭಿಸಿದಾಗ ಲಿಯಾಕ್ ಸಂಶಯಪಡುತ್ತಾನೆ. ಲಿಯಾಕ್‍ನ ಸ್ವಂತದ ಸ್ವಾತಂತ್ರ್ಯಕ್ಕೆ ಬದಲಾಗಿ ತಾನು ರಘುಗೆ ಹರ್ಮನ್‍ನ ಹೆಸರನ್ನು ಕೊಟ್ಟೆನೆಂದು ಅವನಿಗೆ ಜ಼ೀನತ್ ಹೇಳುತ್ತಾಳೆ. ರಘು ತಾವು ಸಂಭೋಗಿಸಿದೆವೆಂದು ಪೊಲೀಸರಿಗೆ ಹೇಳಿರುವುದನ್ನು ತಿಳಿದು ಶೋಭಾ ಕೋಪಗೊಳ್ಳುತ್ತಾಳೆ. ರಘು ಮನೆಗೆ ಆಗಮಿಸಿದಾಗ ಅಲ್ಲಿ ಅವನ ಮತ್ತು ಲಿಯಾಕ್ ನಡುವೆ ಜಗಳ ನಡೆಯುತ್ತದೆ. ಇದರಲ್ಲಿ ಅವನು ಪ್ರಜ್ಞಾಹೀನನಾಗುವಂತೆ ರಘು ಹೊಡೆಯುತ್ತಾನೆ. ಲಿಯಾಕ್‍ಗೆ ಎಚ್ಚರವಾದಾಗ, ರಘು ತನ್ನ ಸಂಪೂರ್ಣ ಕಾರ್ಯವಿಧಾನವನ್ನು ವಿವರಿಸುತ್ತಾನೆ. ಆಗ ಭೀತಿಗೊಂಡು ರಘುನ ಕುಟುಂಬವನ್ನು ಕೊಂದವನು ತಾನು ಎಂದು ಲಿಯಾಕ್ ಬಹಿರಂಗಪಡಿಸುತ್ತಾನೆ. ಶಾಂತ ಮನಸ್ಸಿನಿಂದ ಮತ್ತು ಪಾಪಪ್ರಜ್ಞೆಯಿಲ್ಲದೆ ತನ್ನ ಕೊಲೆಗಳನ್ನು ಯೋಜಿಸಿದ ರಘುಗಿಂತ ತಾನು ಭಿನ್ನವಾಗಿದ್ದೇನೆ ಎಂದು ಲಿಯಾಕ್ ಜ್ಞಾಪಿಸುತ್ತಾನೆ. ನಂತರ, ಈಗ ಒಬ್ಬ ಸ್ಥಳೀಯ ಉದ್ಯಮಿ ಪಾಟೀಲ್‍ನ (ಜ಼ಾಕಿರ್ ಹುಸೇನ್) ಉಪಪತ್ನಿಯಾಗಿರುವ, ಝಿಮ್ಲಿಯನ್ನು ಕೊನೆಯ ಬಾರಿಗೆ ಭೇಟಿಯಾಗಲು ಹೋಗುತ್ತಾನೆ ಮತ್ತು ತಾನು ಸಾವಿಗೆ ಸಮೀಪದಲ್ಲಿದ್ದೇನೆ ಎಂದು ಹೇಳುತ್ತಾನೆ. ರಘು ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಹೊಂದಿರುವ ಗೋವಿಂದ್, ಲಿಯಾಕ್‍ನ ಹಣದ ಪಾಲನ್ನು ನೀಡುವಂತೆ ಹೆದರಿಸಲು ಪ್ರಯತ್ನಿಸುತ್ತಾನೆ. ಆದರೆ, ಲಿಯಾಕ್ ಪೊಲೀಸ್ ಠಾಣೆಗೆ ಬಂದು ರಘು ಮಾಡಿದ ಅಪರಾಧಗಳಿಗೆ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ಇದರಿಂದ ಅವನಿಗೆ ಜೀವನವನ್ನು ಜೀವಿಸಲು ಮತ್ತು ತನ್ನನ್ನು ತಾನು ಉದ್ಧರಿಸಿಕೊಳ್ಳಲು ಎರಡನೇ ಅವಕಾಶ ಸಿಗುತ್ತದೆ.

ಏಳು ತಿಂಗಳ ನಂತರ, ಲಿಯಾಕ್ ಜೈಲಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದಾಗ, ಝಿಮ್ಲಿ ರಘುನನ್ನು ಭೇಟಿಯಾಗಿ ಅವನಿಗೆ ತನ್ನ ಪ್ರತೀಕಾರದ ನಿರರ್ಥಕತೆಯನ್ನು ಅರಿವು ಮಾಡಿಕೊಡುತ್ತಾಳೆ. ನಂತರ ಅವಳು ಪಾಟೀಲ್ ಜೊತೆ ಕಾರಿನಲ್ಲಿ ಹೋಗುತ್ತಾಳೆ. ಅವನು ಮಳೆಯಲ್ಲಿ ನಿಲ್ಲುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

(ಎ-ಬ) ವರುಣ್ ಧವನ್, ಹೂಮಾ ಕುರೇಷಿ, ನವಾಜ಼ುದ್ದೀನ್ ಸಿದ್ದೀಕಿ.
  • ರಾಘವ್ "ರಘು" ಪುರೋಹಿತ್ ಪಾತ್ರದಲ್ಲಿ ವರುಣ್ ಧವನ್
  • ಲಿಯಾಕ್ ಮೊಹಮ್ಮದ್ ತುಂಗ್ರೇಕರ್ ಪಾತ್ರದಲ್ಲಿ ನವಾಜ಼ುದ್ದೀನ್ ಸಿದ್ದೀಕಿ
  • ಜಾನಕಿ "ಝಿಮ್ಲಿ" ದಾಗಾಂವ್‍ಕರ್ ಪಾತ್ರದಲ್ಲಿ ಹೂಮಾ ಕುರೇಷಿ
  • ಮಿಶಾ ಸೆಂಥಿಲ್ ಪುರೋಹಿತ್ ಪಾತ್ರದಲ್ಲಿ ಯಾಮಿ ಗೌತಮ್
  • ಶೋಭಾ ಪಾತ್ರದಲ್ಲಿ ದಿವ್ಯಾ ದತ್ತಾ
  • ಹರ್ಮನ್ ಖತ್ರಿ ಪಾತ್ರದಲ್ಲಿ ವಿನಯ್ ಪಾಠಕ್
  • ಕಾಂಚನ್ "ಕೋಕೊ" ಖತ್ರಿ ಪಾತ್ರದಲ್ಲಿ ರಾಧಿಕಾ ಆಪ್ಟೆ
  • ಶ್ರೀಮತಿ ಜೋಶಿ ಪಾತ್ರದಲ್ಲಿ ಅಶ್ವಿನಿ ಕಲ್ಸೇಕರ್
  • ಮೈಕಲ್ ದಾದಾ ಪಾತ್ರದಲ್ಲಿ ಮುರಳಿ ಶರ್ಮಾ
  • ಜ಼ೀನತ್ ಮೊಹಮ್ಮದ್ ತುಂಗ್ರೇಕರ್ ಪಾತ್ರದಲ್ಲಿ ಪ್ರತಿಮಾ ಕಾಜ಼್ಮಿ
  • ಶಾರ್ದುಲ್ ಪಾಟೀಲ್ ಪಾತ್ರದಲ್ಲಿ ಜ಼ಾಕಿರ್ ಹುಸೇನ್
  • ಇನ್ಸ್ಪೆಕ್ಟರ್ ಗೋವಿಂದ್ ಪಾತ್ರದಲ್ಲಿ ಕುಮುದ್ ಮಿಶ್ರಾ
  • ರಾಬಿನ್ ಪುರೋಹಿತ್ ಪಾತ್ರದಲ್ಲಿ ನೀಲ್ ತ್ಯಾಗಿ

ತಯಾರಿಕೆ[ಬದಲಾಯಿಸಿ]

ಈ ಚಿತ್ರದ ಚಿತ್ರೀಕರಣ ಮೇ 2014 ರಲ್ಲಿ ಪ್ರಾರಂಭವಾಯಿತು.[೮][೯][೧೦]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ಬದಲಾಪುರ್ ವಿಶ್ವಾದ್ಯಂತ ಸುಮಾರು ₹ 813 ದಶಲಕ್ಷದಷ್ಟು ಗಳಿಸಿತು ಎಂದು ಬಾಕ್ಸ್ ಆಫ಼ಿಸ್ ಇಂಡಿಯಾ ವರದಿ ಮಾಡಿತು.[೧೧]

ಧ್ವನಿವಾಹಿನಿ[ಬದಲಾಯಿಸಿ]

ಧ್ವನಿವಾಹಿನಿಯನ್ನು ಸಂಪೂರ್ಣವಾಗಿ ಸಚಿನ್-ಜಿಗರ್ ಸಂಯೋಜಿಸಿದರೆ, ಹಾಡುಗಳಿಗೆ ಸಾಹಿತ್ಯವನ್ನು ದಿನೇಶ್ ವಿಜಾನ್ ಮತ್ತು ಪ್ರಿಯಾ ಸರಯ್ಯಾ ಬರೆದಿದ್ದಾರೆ.

ಎಲ್ಲ ಹಾಡುಗಳು ಪ್ರಿಯಾ ಸರಯ್ಯಾ ಮತ್ತು ದಿನೇಶ್ ವಿಜಾನ್ ಅವರಿಂದ ರಚಿತ; ಎಲ್ಲ ಸಂಗೀತ ಸಚಿನ್-ಜಿಗರ್ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಗಾಯಕರುಸಮಯ
1."ಜೀ ಕರ್ದಾ"ದಿವ್ಯಾ ಕುಮಾರ್4:01
2."ಜೀನಾ ಜೀನಾ"ಆತಿಫ಼್ ಅಸ್ಲಮ್3:49
3."ಜೀ ಕರ್ದಾ" (ರಾಕ್ ಆವೃತ್ತಿ)ದಿವ್ಯಾ ಕುಮಾರ್4:00
4."ಜುದಾಯಿ"ರೇಖಾ ಭಾರದ್ವಾಜ್, ಅರಿಜೀತ್ ಸಿಂಗ್4:32
5."ಜೀನಾ ಜೀನಾ" (ರೀಮಿಕ್ಸ್)ಆತಿಫ಼್ ಅಸ್ಲಮ್3:39
6."ಬದಲಾ ಬದಲಾ"ವಿಶಾಲ್ ದಾದ್ಲಾನಿ, ಜಸ್ಲೀನ್ ರಾಯಲ್, ಸೂರಜ್ ಜಗನ್3:13
ಒಟ್ಟು ಸಮಯ:23:14

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

೬೧ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಲನಚಿತ್ರ - ದಿನೇಶ್ ವಿಜನ್, ಸುನೀಲ್ ಲುಲ್ಲಾ - ನಾಮನಿರ್ದೇಶಿತ
  • ಅತ್ಯುತ್ತಮ ನಿರ್ದೇಶಕ - ಶ್ರೀರಾಮ್ ರಾಘವನ್ - ನಾಮನಿರ್ದೇಶಿತ
  • ಅತ್ಯುತ್ತಮ ನಟ - ವರುಣ್ ಧವನ್ - ನಾಮನಿರ್ದೇಶಿತ
  • ಅತ್ಯುತ್ತಮ ಪೋಷಕ ನಟ - ನವಾಜ಼ುದ್ದೀನ್ ಸಿದ್ದೀಕಿ - ನಾಮನಿರ್ದೇಶಿತ
  • ಅತ್ಯುತ್ತಮ ಪೋಷಕ ನಟಿ - ಹೂಮಾ ಕುರೇಷಿ - ನಾಮನಿರ್ದೇಶಿತ
  • ಅತ್ಯುತ್ತಮ ಗಾಯಕ - ಆತಿಫ಼್ ಅಸ್ಲಮ್ ("ಜೀನಾ ಜೀನಾ" ಹಾಡಿಗಾಗಿ) - ನಾಮನಿರ್ದೇಶಿತ

ಹೆಚ್ಚಿನ ಓದಿಗೆ[ಬದಲಾಯಿಸಿ]

  • Nair, Gayatri; Tamang, Dipti (2016). "Representations of rape in popular culture: Gone Girl and Badlapur". International Feminist Journal of Politics. 18 (4): 614–618. doi:10.1080/14616742.2016.1226401.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]