ಪ್ರಾಚೀನ ಗ್ರೀಕ್ ಧರ್ಮ
ಪ್ರಾಚೀನ ಗ್ರೀಸ್ನಲ್ಲಿನ ಧಾರ್ಮಿಕ ಆಚರಣೆಗಳು ಜನಪ್ರಿಯ ಸಾರ್ವಜನಿಕ ಧರ್ಮ ಮತ್ತು ಭಕ್ತಗಣದ ಆಚರಣೆ ಎರಡೂ ರೂಪಗಳಲ್ಲಿ, ನಂಬಿಕೆಗಳು, ಕ್ರಿಯಾವಿಧಿಗಳು ಮತ್ತು ಪುರಾಣ ಸಾಹಿತ್ಯದ ಸಂಗ್ರಹವನ್ನು ಒಳಗೊಂಡಿದ್ದವು.
ಐರೋಪ್ಯ ನಾಗರಿಕತೆ, ಸಂಸ್ಕೃತಿಗಳ ಮೇಲೆ ಗ್ರೀಕರ ಪ್ರಭಾವ ಬಹಳ ತೀಕ್ಷ್ಣವಾದುದು; ಬಹಳ ಕಾಲ ನಡೆದುಬಂದಂಥದ್ದು. ರಾಜಕೀಯವಾಗಿ ಅಲ್ಲದೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಕೂಡ ಅವರು ಇತರ ದೇಶಗಳ ಮೇಲೆ ತಮ್ಮ ಪ್ರಖರವಾದ ಪ್ರಭಾವವನ್ನು ಬೀರಿದರು. ಪ್ರಾರಂಭ ಕಾಲದಿಂದ ಕ್ರಿಸ್ತಮತ ಗ್ರೀಸ್ನಲ್ಲಿ ಬೇರೂರಿದವರೆಗಿನ ಗ್ರೀಕ್ ಧರ್ಮದ ಪರಿಚಯವನ್ನು ಇಲ್ಲಿ ಕೊಡಲಾಗಿದೆ. ಮೊದಲ ಭಾಗದಲ್ಲಿ ಆ ಧರ್ಮದ ಒಟ್ಟಾರೆ ತಾತ್ತ್ವಿಕ ಚಿಂತನೆ ಎಂಥದು ಎಂಬುದನ್ನೂ, ಎರಡನೆಯ ಭಾಗದಲ್ಲಿ ಧರ್ಮದ ಇತಿಹಾಸವನ್ನೂ ನೋಡಬಹುದು.
ಗ್ರೀಕ್ ತತ್ತ್ವಜಿಜ್ಞಾಸೆಯ ಸಾರಸಂಗ್ರಹ
[ಬದಲಾಯಿಸಿ]ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ಕುರಿತು ಚಿಂತಿಸುವುದು ತತ್ತ್ವಜಿಜ್ಞಾಸೆಯ ಮೂಲ. ಈ ರೀತಿಯ ಪಾಶ್ಚಾತ್ಯ ತತ್ತ್ವಜಿಜ್ಞಾಸೆ ಗ್ರೀಸಿನಲ್ಲಿ ಕ್ರಿ. ಪೂ ಏಳನೆಯ ಶತಮಾನದಲ್ಲಿ ಪ್ರಾರಂಭವಾಯಿತು. ಇದಕ್ಕೆ ಸ್ಫೂರ್ತಿ ಒದಗಿದ್ದು ಈಜಿಪ್ಟ್, ಬ್ಯಾಬಿಲಾನುಗಳಿಂದ ಎಂದು ಕೆಲವರೂ, ಪ್ರಾಚ್ಯದೇಶಗಳಿಂದ ಎಂದು ಕೆಲವರೂ ಅಭಿಪ್ರಾಯಪಡುತ್ತಾರೆ. ಇದರ ಸತ್ಯಾಸತ್ಯತೆಗಳನ್ನು ನಿರ್ಧರಿಸುವುದು ಕಷ್ಟ. ಈ ದೇಶಗಳ ಪ್ರಭಾವ ಅಲ್ಪಸ್ವಲ್ಪ ಇದ್ದಿರಬಹುದು; ಆದರೆ ಗ್ರೀಕರ ತತ್ತ್ವಚಿಂತನೆ ತನ್ನದೇ ಆದ ಆಧಾರದ ಮೇಲೆ ಬೆಳೆಯಿತೆಂಬುದರಲ್ಲಿ ಸಂಶಯವಿಲ್ಲ.
ಗ್ರೀಕರ ತತ್ತ್ವಚಿಂತನೆಯಲ್ಲಿ ಆ ಜನರ ರೀತಿನೀತಿಗಳನ್ನು ಹೊಂದಿಕೊಂಡ ಒಂದು ವೈಶಿಷ್ಟ್ಯವಿದೆ. ಈ ವೈಶಿಷ್ಟ್ಯಕ್ಕೆ ಭೌಗೋಳಿಕ, ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಗ್ರೀಕರಲ್ಲಿ ವಿಶ್ವವನ್ನು ಕುರಿತು ಅದಮ್ಯ ಕುತೂಹಲವಿದ್ದುದು ಕಂಡುಬರುತ್ತದೆ. ಜೀವನದ ವೈವಿದ್ಯ, ಯುಕ್ತಾಯುಕ್ತತೆಗಳಲ್ಲಿ, ಸೌಂದರ್ಯೋಪಾಸನೆಯಲ್ಲಿ ಒಂದು ಸಹಜ ಉತ್ಸಾಹ ಅವರಲ್ಲಿತ್ತು. ವಿಶ್ವರಹಸ್ಯವನ್ನು ಭೇದಿಸುವ ಮೊಟ್ಟ ಮೊದಲ ಐರೋಪ್ಯ ಪ್ರಯತ್ನ ಗ್ರೀಕ್ ಚಿಂತಕರಲ್ಲಿ ಕಾಣುತ್ತದೆ. ಗ್ರೀಕರು ಸ್ವಾತಂತ್ರಪ್ರಿಯರೂ, ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋದವರೂ ಆಗಿದ್ದರು. ಸಮುದ್ರದಿಂದ ಸುತ್ತುವರಿಯಲ್ಪಟ್ಟಿದ್ದರಿಂದ ಗ್ರೀಸಿನ ಜನ ಸಾಹಸಿಗಳಾಗಲು ಅವಕಾಶವಾಯಿತು. ಅವರಿಗೆ ಹೊರದೇಶಗಳ ಪರಿಚಯ ಮಾಡಿಕೊಳ್ಳಬೇಕಾದ ಅಗತ್ಯವಿತ್ತು; ಇತರ ದೇಶಗಳೊಡನೆ ವಾಣಿಜ್ಯ ವ್ಯಾಪಾರಗಳಲ್ಲಿ ಅವರು ತೊಡಗಿದ್ದರು. ಹತ್ತಿರದ ಇತರ ದೇಶಗಳಲ್ಲಿ ವಸಾಹತುಗಳನ್ನು ನಿರ್ಮಿಸುವ ಅವಕಾಶ ಅವರದಾಯಿತು. ಇದರಿಂದಾಗಿ ಅವರಿಗೆ ಇತರರೊಡನೆ ಸಂಪರ್ಕ ಬೆಳೆಯಿತು. ಹೊರಪ್ರಪಂಚದ ಪರಿಚಯ ಅವರಿಗೆ ಸ್ಫೂರ್ತಿ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವರ ದೃಷ್ಟಿ ವಿಶಾಲವಾಗಲು ಇದೂ ಒಂದು ಕಾರಣವಾಯಿತು.
ಅವರು ಬೆಳಸಿದ ತತ್ತ್ವಜ್ಞಾನ ಅವರ ನಗರರಾಜ್ಯವಾದ ಆಥೆನ್ಸಿನಲ್ಲಿಯೇ ಅಲ್ಲದೆ ವಸಾಹತುಗಳಲ್ಲಿಯೂ ಬೆಳೆದು ಬೆಳಗಿತು. ಪರ್ಷಿಯಾದೊಡನೆ ಯುದ್ಧ ಮುಗಿದ ಮೇಲೆ ಆಥೆನ್ಸ್ ಗ್ರೀಕ್ ಸಂಸ್ಕೃತಿಯ ಕೇಂದ್ರವಾಯಿತು; ಏಷ್ಯಮೈನರಿನಲ್ಲಿ ಗ್ರೀಸಿನ ತತ್ತ್ವಜ್ಞಾನ ರೂಪುಗೊಂಡಿತು. ದೇವರೆಂದರೆ ಏನು, ಈ ಜಗತ್ತಿನ ಸ್ವರೂಪವೆಂಥದು, ನಾವು ಯಾರು, ನಮ್ಮ ಸ್ವರೂಪವೇನು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಪ್ರಾರಂಭವಾಯಿತು. ಹೀಗೆ ಹೊಸ ಜಿಜ್ಞಾಸೆ ಆರಂಭವಾದಾಗ, ಪುರಾಣಪ್ರಕ್ರಿಯೆ ಮಸಕಾಯಿತು.
ಅತಿ ಪ್ರಾಚೀನ ಗ್ರೀಸಿನಲ್ಲಿ ಈ ರೀತಿಯ ಪ್ರಶ್ನೆಗಳು ಎದ್ದಿದ್ದಿವೇ, ಅವುಗಳಿಗೆ ದೊರೆತ ಉತ್ತರಗಳೇನು ಎನ್ನುವುದರ ಮೇಲೆ ಬೆಳಕು ಚೆಲ್ಲುವಷ್ಟು ಸಂಗತಿಗಳು ದೊರೆತಿಲ್ಲ. ಎಷ್ಟೋ ಕಟ್ಟುಕಥೆಗಳು ಪ್ರಚಾರದಲ್ಲಿದ್ದಿರಬಹುದೆಂದು ಮಾತ್ರ ಊಹಿಸಲಾಗಿದೆ. ಆದರೆ ಅನಂತರ ನಡೆದ ಜಿಜ್ಞಾಸೆಗೆ ಅಲ್ಲಿ ಅವಕಾಶವಾದಂತಿಲ್ಲ. ಈ ಪೌರಾಣಿಕ ಮನೋಭಾವ ಕ್ರಮೇಣ ಜಾರಿಹೋಗಿ ನೂತನ ತಾತ್ತ್ವಿಕ ಪ್ರಶ್ನೆಗಳು ಎದ್ದಿರಬೇಕು, ಎನ್ನಿಸುತ್ತದೆ. ಗ್ರೀಸಿನ ಪ್ರಾಚೀನ ಕವಿಗಳಾದ ಹೋಮರ್ ಮತ್ತು ಹೆಸಿಯಡ್ಡರ ಕಾವ್ಯಗಳಲ್ಲಿ ಧರ್ಮಕ್ಕೆ ಪ್ರಾಧಾನ್ಯವಿದ್ದರೂ ತತ್ತ್ವಚಿಂತನೆಯ ಕುರುಹುಗಳೂ ಅಲ್ಲಲ್ಲಿ ಕಂಡುಬರುತ್ತವೆ. ನಿಸರ್ಗದಲ್ಲಿನ ಸಂಗತಿಗಳಿಗೆ ನೈಸರ್ಗಿಕ ಕಾರಣಗಳನ್ನು ಹುಡುಕುವ ಪ್ರವೃತ್ತಿಯನ್ನು ಹೆಸಿಯಡ್ಡನಲ್ಲಿ ಕಾಣಬಹುದು. ಜ಼್ಯೂಸ್ ಸೃಷ್ಟಿಕರ್ತ ಎಂಬ ಅಭಿಪ್ರಾಯ, ಜಗತ್ತಿನ ಉಗಮ ಏಕತತ್ತ್ವವೊಂದರಿಂದ ಆಯಿತು ಎನ್ನುವ ಅರಿವು ಇಲ್ಲಾಗಲೇ ಮೂಡಿದೆ.
ಅಯೋನಿಯಾದ ತತ್ತ್ವಜ್ಞಾನಿಗಳು ಮೊದಮೊದಲಿಗೆ ಈ ರೀತಿಯ ಚಿಂತನೆಯನ್ನು ವ್ಯವಸ್ಥಿತವಾಗಿ ಮಾಡಲು ಆರಂಭಿಸಿದರು. ಬರ್ನೆಟ್ ಎಂಬ ವಿದ್ವಾಂಸ ಹೇಳುವಂತೆ , ಇವರು ಪುರಾಣಕಥೆಗಳನ್ನು ಹೇಳುವುದನ್ನು ಕೈಬಿಟ್ಟರು; ಕಥೆಯ ಸ್ಥಾನದಲ್ಲಿ ವಿಚಾರ ಆರಂಭವಾಯಿತು. ಅರಿಸ್ಟಾಟಲ್ ಭೌತತತ್ತ್ವವಿಜ್ಞಾನಿಗಳು ಎಂದು ಕರೆಯುತ್ತಾನೆ. ಜಗತ್ತಿನ ಘಟನೆಗಳೆಲ್ಲ ದೇವದೇವತೆಗಳಿಂದ ಆಗುತ್ತವೆ ಎಂಬ ನಂಬಿಕೆಯನ್ನು ತೊರೆದು ಇವಕ್ಕೆ ಕಾರಣವಾದ ಕೆಲವು ತತ್ತ್ವಗಳನ್ನು ಹುಡುಕಲು ಇವರು ತೊಡಗಿದರು.
ಮೊದಮೊದಲಿಗೆ ಗ್ರೀಕ್ ತತ್ತ್ವಜ್ಞಾನವು ನಿಸರ್ಗದ ಸಮಸ್ಯೆಗಳನ್ನು ಎದುರಿಸಿತು. ಈ ವಿಶ್ವದಲ್ಲಿರುವ ಎಲ್ಲ ವಿವಿಧ ವಸ್ತುಗಳಿಗೂ ಮೂಲಭೂತವಾದ ದ್ರವ್ಯವಾವುದು ಎಂಬ ಪ್ರಶ್ನೆ ಮುಖ್ಯವಾಯಿತು. ಗ್ರೀಕ್ ತತ್ತ್ವಜ್ಞಾನದ ಚರಿತ್ರೆಯಲ್ಲಿ ಏಳು ಪ್ರಾಜ್ಞರ ಉಲ್ಲೇಖವಿದೆ. ಈ ಪ್ರಾಜ್ಞರಲ್ಲಿ ಥೇಲ್ಸ್, ಬಯಾಸ್ ಮತ್ತು ಸೋಲನ್ನರು ಸೇರಿದ್ದಾರೆ.[೧] ಇವರ ವಚನಗಳಲ್ಲಿ ಜೀವನದಲ್ಲಿ ನಡೆಸಿಕೊಳ್ಳಬೇಕಾದ ರೀತಿನೀತಿಗಳ ಸೂಚನೆಗಳಿವೆ. ಇಲ್ಲಿ ದರ್ಶನಕ್ಕಿಂತಲೂ ಧರ್ಮದ ಅಂಶವೇ ಹೆಚ್ಚಾಗಿದೆ.
ಗ್ರೀಕರ ಚಿಂತನೆ ಕ್ರಮೇಣ ಬಹಿರಂಗದಿಂದ ಅಂತರಂಗದೆಡೆಗೆ ಒಲಿಯಿತು. ಮಾನವನ ಅಂತರಂಗವನ್ನು ಕುರಿತ ಚಿಂತನೆ ಸಾಕ್ರಟೀಸ್, ಪ್ಲೇಟೋ ಮತ್ತು ಅರಿಸ್ಟಾಟಲ್ರ ತತ್ತ್ವಜ್ಞಾನದಲ್ಲಿ ಪರಾಕಷ್ಠೆಯನ್ನು ಮುಟ್ಟಿತು.
ಗ್ರೀಕ್ ತತ್ತ್ವಜ್ಞಾನದ ಚರಿತ್ರೆಯಲ್ಲಿ ಮೂರು ಘಟ್ಟಗಳನ್ನು ವಿಂಗಡಿಸಬಹುದು. ಕ್ರಿ. ಪೂ. 600ರಿಂದ ಕ್ರಿ. ಪೂ. 450ರ ವರಗೆ ಇದ್ದುದು ಎಂದು ಗ್ರೀಕ್ ಇತಿಹಾಸಜ್ಞರು ಎಣಿಸುವ ಮೊದಲನೆಯ ಘಟ್ಟವನ್ನು ಭೌತಿಕ ಚಿಂತನೆಯ ಘಟ್ಟವೆಂದು ಕರೆಯಬಹುದು. ಎರಡನೆಯದನ್ನು ಮಾನವತೆಯ ಯುಗವೆಂದು ಕರೆಯಬಹುದು. ಮಾನವ ಮತ್ತು ಜಗತ್ತಿನಲ್ಲಿ ಅವನ ನಡೆನುಡಿಗಳು, ನೀತಿನಿಯಮಗಳು ಪ್ರಧಾನವಾಗಿ ಈ ಕಾಲದಲ್ಲಿ ಚಿಂತ್ಯವಾದವು. ಮೂರನೆಯದಾದ ಸಿದ್ಧಾಂತಿಗಳ ಯುಗದಲ್ಲಿ ಜಗತ್ತಿನ ಒಟ್ಟು ಸ್ವರೂಪವನ್ನು ನಿರ್ಣಯಿಸುವ ಪ್ರಯತ್ನ ನಡೆಯಿತು. ಇದನ್ನು ವಿಶ್ವದರ್ಶನದ ಯುಗವೆಂದು ಕರೆಯಬಹುದು.
ಮೊದಲ ಘಟ್ಟಕ್ಕೆ ಸೇರಿದ ತಾತ್ತ್ವಿಕರು ಥೇಲ್ಸ್, ಅನಾಕ್ಸಿಮೇಂಡರ್, ಅನಾಕ್ಸಿಮೆನಿಸ್, ಪೈಥಾಗೋರಸ್, ಕೈನೋಫಿಸ್, ಪಾರ್ಮೆನಿಡಿಸ್, ಜ಼ೀನೋ, ಮೊದಲಾದವರು. ಹೆರಾಕ್ಲಿಟಸ್, ಎಂಪಿಡಾಕ್ಲಿಸ್, ಲೂಸಿಪಸ್, ಡೆಮೊಕ್ರಿಟಸ್ ಮತ್ತು ಅನಾಕ್ಸಗೊರಾಸರೂ ಇದೇ ಘಟ್ಟಕ್ಕೆ ಸೇರಿದವರು. ಎರಡನೆಯ ಮತ್ತು ಮೂರನೆಯ ಘಟ್ಟಗಳಿಗೆ ಸೇರಿದವರು ಸಾಫಿಸ್ಟರು, ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲ್, ಸ್ಟೋಯಿಕ್ ಪಂಥದವರು, ಎಪಿಕ್ಯೂರಸ್, ಸಿನೆಕ, ಎಪಿಕ್ಟಿಟಸ್, ಮಾರ್ಕಸ್ ಆರಿಲಿಯಸ್, ಫೈಲೋ, ಪ್ಲೊಟೈನಸ್, ಪ್ರಾಕ್ಲಸ್ ಮೊದಲಾದವರು. ಒಟ್ಟಿನಲ್ಲಿ ಇವರ ಆಲೋಚನೆಗಳನ್ನು ಹೀಗೆ ಕ್ರೋಢೀಕರಿಸಿ ಹೇಳಬಹುದು, ಮೊದಮೊದಲು ಗ್ರೀಕ್ ದಾರ್ಶನಿಕರಲ್ಲಿ ಜಡ-ಚೇತನಗಳಿಗಿರುವ ವ್ಯತ್ಯಾಸ ಗಣನೆಗೆ ಬರಲಿಲ್ಲ. ಇವರ ಮುಖ್ಯ ಪ್ರಶ್ನೆ ಪ್ರಥಮ ದ್ರವ್ಯ ಯಾವುದು ಎಂಬುದು. ಪಂಚಭೂತಗಳಿಂದ ನಿರ್ಮಿತವಾದ ಈ ಜಗತ್ತಿನ ಮೂಲದ್ರವ್ಯ ಪೃಥ್ವೀ, ಅಪ್ಪು ತೇಜಸ್ಸು, ವಾಯು- ಇವುಗಳಲ್ಲಿ ಒಂದಾಗಿರಬೇಕೆಂದು ಈ ತತ್ತ್ವಜ್ಞಾನಿಗಳು ಊಹಿಸಿದರು. ಆತ್ಮವೊಂದು ಇದೆಯೇ, ಈಶ್ವರನೆಂಬುವವನು ಇದ್ದಾನೆಯೇ ಎಂಬ ಪ್ರಶ್ನೆಗಳ ಗೋಜಿಗೆ ಹೋಗಲಿಲ್ಲ. ಈ ಮೂಲದ್ರವ್ಯದ ಅನ್ವೇಷಣೆಯಲ್ಲಿ ಪ್ರಾಸಂಗಿಕವಾಗಿ ಈ ಜಗತ್ತು ಸಂತತ ಪರಿವರ್ತನೆಗೆ ಒಳಗಾಗಿದೆ ಎಂಬ ಅಂಶ ಇವರಿಗೆ ಸ್ಪಷ್ಟವಾಯಿತು, ಹಾಗೂ ಪರಿವರ್ತನೆಯನ್ನು ಹೊಂದದ ವಸ್ತು ಜಗತ್ತಿನಲ್ಲಿದೆಯೇ ಎಂಬ ಪ್ರಶ್ನೆಯೂ ಎದ್ದುನಿಂತಿತು. ಕೆಲವರು ಪರಿಣಾಮವೇ ಸತ್ಯವೆಂದರು, ಮತ್ತೆ ಕೆಲವರು ಮಿಥ್ಯೆಯೆಂದರು. ಮತ್ತೆ ಕೆಲವು ದಾರ್ಶನಿಕರು ಈ ಜಗತ್ತು ಪರಮಾಣುಗಳ ಸಂಯೋಗದಿಂದ ಆಯಿತೆಂದರು. ಕ್ರಮೇಣ ಭೌತಿಕವೂ, ಅಭೌತಿಕವೂ ಆದ ವಸ್ತುಗಳಲ್ಲಿನ ವ್ಯತ್ಯಾಸ ಮನವರಿಕೆಯಾಗತೊಡಗಿತು. ಆತ್ಮ- ಶರೀರ ಎನ್ನುವ ಭೇದ ಕ್ರಮೇಣ ಸ್ಪಷ್ಟವಾಯಿತು. ಬುದ್ಧಿ ನಿಯಾಮಕಶಕ್ತಿ ಎಂಬ ಭಾವ ಉದಯವಾಯಿತು. ಮನುಷ್ಯನ ಜ್ಞಾನ ಎಲ್ಲಿಯವರಗೆ ನಮ್ಮನ್ನು ಕೊಂಡೊಯ್ಯಬಲ್ಲದು ಎನ್ನುವ ವಿಮರ್ಶೆ ಆರಂಭವಾಯಿತು. ಕೆಲವು ದಾರ್ಶನಿಕರು ಮೂಲತತ್ತ್ವದ ಅನ್ವೇಷಣೆ ವ್ಯರ್ಥವೆಂದೂ, ಈ ತರ್ಕವನ್ನು ಬಿಟ್ಟುಕೊಟ್ಟ ಜೀವನದಲ್ಲಿ ಶಾಂತಿ ಮತ್ತು ಸುಖವನ್ನು ಏರ್ಪಡಿಸುವ ಪ್ರಯತ್ನ ಮಾಡುವುದೇ ಒಳ್ಳೆಯದೆಂದರು. ಸಾಕ್ರಟೀಸ್ ಸಹ ಶುಷ್ಕ ವಾದವನ್ನು ಖಂಡಿಸಿದ. ಮನುಷ್ಯನ ಸಾಮಾನ್ಯ ರೂಪವಾದ ವಸ್ತುರೂಪವಾದ ವಸ್ತುಜ್ಞಾನವೇ ಪಾರಮಾರ್ಥಿಕ ಜ್ಞಾನವೆಂದು ಆತ ಹೇಳಿದ; ಹಾಗೂ ಪಾರಮಾರ್ಥಿಕ ಜ್ಞಾನವನ್ನು ಸಂಪಾದಿಸಿದ ಮನುಷ್ಯ ಶ್ರೇಯೋವಂತನಾಗುತ್ತಾನೆಂದು ಸಾರಿದ. ಜೀವನವನ್ನು ಯಾವ ರೀತಿ ನಡೆಸಿಕೊಂಡರೆ ಪರಮಪುರಷಾರ್ಥದ ಸಾಧನೆಯಾಗಬಹುದೆಂಬುದನ್ನೂ ವಿವರಿಸಿದ. ಇದರಿಂದ ಆಚಾರಶಾಸ್ತ್ರ ವೈಜ್ಞಾನಿಕ ರೂಪದಲ್ಲಿ ಪ್ರಾರಂಭವಾಯಿತು. ಇದರಿಂದ ಗ್ರೀಸಿನ ತತ್ತ್ವಜ್ಞಾನದಲ್ಲಿ ನಾಲ್ಕು ಮುಖ್ಯ ಪಂಥಗಳು ಹುಟ್ಟಿದವು: ಪ್ಲೇಟೊ ಮತ, ಅರಿಸ್ಟಾಟಲ್ನ ಮತ, ಸ್ಟೋಯಿಕರ ಮತ ಮತ್ತು ಎಪಿಕ್ಯೂರಸ್ ಮತ. ಸಂಶಯವಾದಿಗಳ ಐದನೆಯ ಮತವೂ ಅಲ್ಲಿ ಬೆಳೆಯಿತು. ಹೀಗೆ ಜಡವಾದ, ಸಂಶಯವಾದ, ಅಧ್ಯಾತ್ಮವಾದಗಳು ಘಟ್ಟಘಟ್ಟವಾಗಿ ಗ್ರೀಕ್ ದರ್ಶನದಲ್ಲಿ ತಲೆಯೆತ್ತುತ್ತ ಬಂದವು.
ಪ್ಲೇಟೊವಿನ ಮತ ಬಾಹ್ಯಪದಾರ್ಥಗಳು ಅಸತ್ತೆಂದೂ ಶುದ್ದಜ್ಞಾನ ಸತ್ತಿನ ಅರಿವನ್ನು ತೆಗೆದುಕೊಂಡುದೆಂದೂ ಬೋಧಿಸುತ್ತದೆ. ಗ್ರೀಕ್ ದರ್ಶನದ ಅಂತಿಮ ಕಾಲದಲ್ಲಿ ಪ್ಲೇಟೊವಿನ ಪ್ರಭಾವದಿಂದ ಸಮಾಧಿವಾದ (ಡಾಕ್ಟ್ರೀನ್ ಆಫ್ ಎಕ್ಸ್ಟಸಿ) ಹುಟ್ಟಿತು. ಇದಕ್ಕೆ ನಿಯೋಪ್ಲೇಟೊನಿಸಂ ಎಂದು ಹೆಸರು. ಇದನ್ನು ಪ್ರತಿಪಾದಿಸಿದವ ಪ್ಲೊಟೈನಸ್.[೨] ಗ್ರೀಸ್ ದೇಶದ ಅವನತಿಯಾದರೂ ಈ ದರ್ಶನಗಳ ಪ್ರಭಾವ ರೋಮ್, ಅಲೆಗ್ಸಾಂಡ್ರಿಯಾ ಮೊದಲಾದ ನಗರಗಳಲ್ಲಿ ಸುರಕ್ಷಿತವಾಗಿ ಉಳಿಯಿತು.
ಗ್ರೀಕ್ ಧರ್ಮದ ಇತಿಹಾಸ
[ಬದಲಾಯಿಸಿ]ಪ್ರಾಚೀನ ಧರ್ಮಗಳಲ್ಲಿ ಗ್ರೀಕ್ ಧರ್ಮ ತುಂಬ ಮುಖ್ಯವಾದದ್ದು. ಅದರ ಬೆಳವಣಿಗೆ ಕ್ರಿ.ಪೂ ಎರಡು ಸಾವಿರದಿಂದ ಕ್ರಿ. ಶ. ಒಂದನೆಯ ಶತಮಾನದವರಗೆ ದೀರ್ಘವಾದದ್ದು. ಅದರ ಬೆಳವಣಿಗೆಯ ಅವಧಿಯನ್ನು ಸ್ಥೂಲವಾಗಿ ನಾಲ್ಕು ಘಟ್ಟಗಳಾಗಿ ವಿಭಾಗಿಸಬಹುದು:
- ಮೊದಲನೆಯದು ಕ್ರಿ.ಪೂ. 2000ದಿಂದ ಹೋಮರನವರಗೆ,
- ಎರಡನೆಯದು ಕ್ರಿ. ಪೂ. 900ರಿಂದ ಕ್ರಿ. ಪೂ 500ರ ವರೆಗಿನದು, ಅಂದರೆ ಗ್ರೀಕ್ ವಸಾಹತುಗಳ ವಿಸ್ತರಣ ಕಾಲದಿಂದ ಪಾರಸಿಕರ ದಂಡಯಾತ್ರೆಯವರಗೆ,
- ಮೂರನೆಯದು ಕ್ರಿ. ಪೂ. 500ರಿಂದ ಕ್ರಿ. ಪೂ. 338ರ ವರಗಿನದು. ಈ ಕಾಲದಲ್ಲಿ ಗ್ರೀಸ್ ಮ್ಯಾಸಿಡೋನಿಯಾದ ಆಳ್ವಿಕೆಗೆ ಒಳಪಟ್ಟಿತು.
- ನಾಲ್ಕನೆಯದು ಕ್ರಿ.ಪೂ 228ರಿಂದ ಕ್ರಿ. ಶ. ಒಂದನೆಯ ಶತಮಾನದ ಕೊನೆಯವರೆಗಿನದು. ಈ ಕಾಲದಲ್ಲಿ ಗ್ರೀಸ್ ರೋಮನ್ನರ ಆಳ್ವಿಕೆಗೆ ಒಳಪಟ್ಟು ಗ್ರೀಕ್ ಸಂಸ್ಕೃತಿ ರೋಮನ್ ರಾಜ್ಯದಲ್ಲಿ ಹರಡಿತು.
ಕೊನೆಯಲ್ಲಿ ಗ್ರೀಕ್ಮತ ಕ್ರೈಸ್ತಮತದ ಪ್ರಭಾವಕ್ಕೆ ಒಳಗಾಗಿ ಅಲ್ಲಿಂದ ಮುಂದೆ ನಾಮಾವಶೇಷವಾಯಿತು. ಎರಡು ಸಾವಿರ ವರ್ಷಗಳ ಹಿಂದೆಯೇ ಇದು ಕ್ಷಯಿಸಿದುದರಿಂದ ಇದರ ವಿಚಾರವಾಗಿ ಯಥಾವತ್ತಾದ ವಿವರಣೆ ಇತ್ತೀಚಿನವರೆಗೂ ದೊರೆತಿರಲಿಲ್ಲ. ಇತ್ತೀಚಿಗೆ ಗ್ರೀಕ್ ಸಂಸ್ಕೃತಿಯ ವಿಚಾರವಾಗಿ ನಡೆಸಿದ ಸಂಶೋಧನೆಗಳಿಂದ ಅದರ ನಿಜಸ್ವರೂಪವನ್ನು ಸ್ವಲ್ಪಮಟ್ಟಿಗೆ ತಿಳಿದಿಕೊಳ್ಳಲು ಸಾಧ್ಯವಾಗಿದೆ. ಗ್ರೀಕ್ ಧರ್ಮದ ತತ್ತ್ವಜಿಜ್ಞಾಸೆಯ ತಿರುಳು ಏನು ಎನ್ನುವುದನ್ನು ಮೇಲೆ ನೋಡಲಾಯಿತು. ಈಗ ಗ್ರೀಕ್ ಮತಾಚರಣೆಗಳ ಸ್ಥೂಲ ರೂಪರೇಖೆಯನ್ನು ಗುರುತಿಸಲಾಗುತ್ತದೆ.
ಗ್ರೀಕ್ ಮತ ಚರಿತ್ರೆಯ ಸಂಶೋಧನೆ ಆಧಾರಸಾಮಗ್ರಿ ಬಹು ಮುಖ್ಯವಾಗಿದೆ. ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿ ಮತವಿಚಾರ ಬಹುಮುಖ್ಯವಾದದ್ದು. ಕಾವ್ಯಗಳಲ್ಲಿ ಹೋಮರನ ಆಡಿಸಿ ಮತ್ತು ಇಲಿಯಡ್ (ಕ್ರಿ.ಪೂ. 9 ಮತ್ತು 10ನೆಯ ಶತಮಾನಗಳು ) ಹೆಸಿಯಡ್ಡನ ಕವನಗಳು (ಕ್ರಿ.ಪೂ. 7ನೆಯ ಶತಮಾನ). ಥಿಯೋಗ್ನಿಸ್ಸನ ಮತ್ತು ಸೋಲನ್ನನ (ಕ್ರಿ.ಪೂ. 6ನೆಯ ಶತಮಾನ) ಶೋಕದ್ವಿಪದಿಗಳು, ಸಾಫೊಕ್ಲೀಸನ ರುದ್ರನಾಟಕಗಳು, ಲೈಕೋಫ್ರಾನನ ಕ್ಯಾಸಾಂಡ್ರ,[೩] ಕ್ಯಾಲಿಮಾಕಸ್ಸಿನ ಸ್ತೋತ್ರಗೀತೆಗಳು, ರೋಡಿಯಾಸ್ನ ಅಪೋಲಿಯಸ್ಸನ ಮಹಾಕಾವ್ಯ ಮೊದಲಾದವೂ, ಗದ್ಯಸಾಹಿತ್ಯದಲ್ಲಿ ಪ್ಲೇಟೊವಿನ ಸಂವಾದಗಳು, ಹೀರಡಟ್ಟಸ್ಸಿನ ಚರಿತ್ರೆ, ಡೆಮಾಸ್ತೆನೀಸನ ಮಹಾಭಾಷಣಗಳು ಇವುಗಳಲ್ಲದೆ ಮತವಿಚಾರಕ್ಕೆ ಮೀಸಲಾದ ಗ್ರಂಥಗಳು ಬಹುಮುಖ್ಯವಾದವು. ಯಜ್ಞಗಳನ್ನು ಕುರಿತು ಥಿಯೋಫ್ರಾಸ್ಟಸ್ ಬರೆದ ಒಂದು ಅಧ್ಯಾಯ, ಹಬ್ಬಗಳು ಮತ್ತು ಹರಿದಿನಗಳನ್ನೂ, ಆಟಿಕೆ ರಹಸ್ಯ ವಿಧಿವಿಧಾನಗಳನ್ನೂ ಕುರಿತು ಫೈಲೋಕೊರಸ್ ಬರೆದಿರುವ ಗ್ರಂಥಗಳು, ಅಪೊಲೋವಿನ ಪ್ರೇತಗಳನ್ನೂ, ಕ್ರೀಟನ್ ದೇಶದ ಯಜ್ಞಗಳನ್ನೂ ಕುರಿತು ಕ್ಯಾಲಿಮಾಕಸ್ ಬರೆದಿರುವ ಗ್ರಂಥಗಳು, ದೇವಸ್ಥಾನದ ತಳಹದಿ ಮತ್ತು ಸ್ತೋತ್ರಗಳನ್ನು ಕುರಿತು ಕೋಸ್ ಪಟ್ಟಣದ ಸಾಕ್ರಟೀಸ್ ಬರೆದಿರುವ ಗ್ರಂಥ, ನಾಡಜನರ ಮತವನ್ನು ಕುರಿತು ಅಪಾಲೋಡೋರಸ್ ಬರೆದ ಗ್ರಂಥ- ಇವು ಮತ, ವಿಚಾರಗಳಿಗೇ ಮೀಸಲಾದ ಗ್ರಂಥಗಳು. ಸ್ಟ್ರಾಬೋವಿನ ಭೌಗೋಳಿಕ ಗ್ರಂಥಗಳಲ್ಲೂ ದೈವವಾಣಿಯನ್ನು ಕುರಿತು ಬರೆದಿದೆ. ಪ್ಲೂಟಾರ್ಕನ ಗ್ರಂಥಗಳಲ್ಲೂ ಅಮೂಲ್ಯ ಮತವಿಚಾರಗಳು ಅಡಕವಾಗಿವೆ. ಇವೆಲ್ಲಕ್ಕಿಂತಲೂ ಅಮೂಲ್ಯವಾದದ್ದು ಹಳ್ಳಿಯ ಜನರ ಮತವನ್ನು ಕುರಿತು ಪಾಸಿನೀಯಸ್ ಬರೆದಿರುವ ಆಧಾರಗ್ರಂಥ. ಗ್ರೀಕರು ಕ್ರೈಸ್ತಮತಕ್ಕೆ ಪರಿವರ್ತನೆಯಾದ ನಂತರ ಕ್ರೈಸ್ತರು ಗ್ರೀಕರ ಮತವನ್ನು ಕುರಿತು ಹಲವು ಗ್ರಂಥಗಳನ್ನು ಬರೆದಿರುತ್ತಾರೆ. ಇವು ಕ್ರೈಸ್ತಮತ ಪಕ್ಷಪಾತದಿಂದ ಕೂಡಿವೆಯಾದುದರಿಂದ ಇವುಗಳಲ್ಲಿ ದೊರೆಯುವ ವಿವರಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅತಿಶಯೋಕ್ತಿಗಳನ್ನು ತೂರಿ ನಿಜಾಂಶಗಳನ್ನು ಆಯ್ದುಕೊಳ್ಳಬೇಕು. ಪ್ರಾಚೀನ ಕ್ರೈಸ್ತರು ಗ್ರೀಕರ ಮತವಿಚಾರವಾಗಿ ಬರೆದಿರುವ ಗ್ರಂಥಗಳಲ್ಲಿ ಕ್ಲೆಮೆಂಟಿನ ಪ್ರೊಟ್ರಿಪ್ಟಿಕಸ್,[೪] ಅರ್ನೋಬಿಯಸ್ಸಿನ ಅಡ್ವರ್ಸಸ್ ಜೆಂಟೀಸ್, ಯುಸೇಬಿಯಸ್ನ ಪ್ರಿಪರೇಸಿಯೋ ಇವ್ಯಾಂಜೆಲಿಕಾ, ಅಗಸ್ಟೈನಿನ ಡಿ ಸಿವಿಟೇಟ್ ಡಿಯಿ- ಇವು ಮುಖ್ಯ.
ಸಾರ್ವಜನಿಕ ಮತ್ತು ಖಾಸಗಿ ಶಾಸನಗಳಿಂದ ಸಾಹಿತ್ಯವಲ್ಲದ ಗ್ರೀಕ್ ಮತಾಚರಣೆಗಳ ವಿವರಗಳು ಕೂಡ ದೊರೆಯುತ್ತವೆ. ಸಾರ್ವಜನಿಕ ಶಾಸನಗಳು, ರಾಜಕೀಯ ಸಂಸ್ಥೆಗಳು ಮತವಿಚಾರದಲ್ಲಿ ತೋರಿಸಿದ ಶ್ರದ್ಧೆಯನ್ನು ಸೂಚಿಸುತ್ತವೆ. ಖಾಸಗಿ ಶಾಸನಗಳು ಅನೇಕ ವ್ಯಕ್ತಿಗಳ ಮತಶ್ರದ್ಧೆಯನ್ನು ಸೂಚಿಸುತ್ತವೆ. ಈ ಶಾಸನಗಳು ಕಳೆದ ಐವತ್ತು ವರ್ಷಗಳಲ್ಲಿ ಬೆಳಕಿಗೆ ಬಂದವು. ಖಾಸಗಿ ಶಾಸನಗಳಲ್ಲಿ ಡೈಯೊನೈಸಸ್ ದೇವರ ಪ್ರಾರ್ಥನೆಗಳೂ, ಡೆಲ್ಫೈ ಕ್ಷೇತ್ರದ ಪ್ರಾರ್ಥನೆಗಳೂ ಕಂಡುಬರುತ್ತವೆ. ಇವನ್ನು ಗ್ರೀಕ್ ಮಹಿಳೆಯರು ಪೂಜಾ ಕಾಲದಲ್ಲಿ ಹಾಡುತ್ತಿದ್ದರು.
ಗ್ರೀಕ್ ಮತದ ಮೇಲೆ ವಿಶೇಷವಾದ ಬೆಳಕನ್ನು ಹರಿಸುವಂಥವುಗಳೆಂದರೆ ಗ್ರೀಕರ ದೇವಾಲಯಗಳು, ದೇವತಾ ವಿಗ್ರಹಗಳು ಮತ್ತು ಚಿತ್ರಗಳು. ಸಾಹಿತ್ಯ ಮತ್ತು ಶಾಸನಗಳಿಂದಲೂ ಇವು ಗ್ರೀಕರ ಮತ ಭಾವನೆಗಳನ್ನು ವಿಶೇಷ ರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತವೆ.
ಈ ಎಲ್ಲ ಆಧಾರಗಳ ಮೇಲೆ ಪುನಾರಚಿಸಿದ ಗ್ರೀಕ್ ಮತ ಭಾವನೆಗಳು ಮೇಲೆ ಹೇಳಿದ ನಾಲ್ಕು ಅವಧಿಗಳಲ್ಲಿ ಹೇಗೆ ಬೆಳೆದುವೆಂಬುದನ್ನು ಇನ್ನು ಮುಂದೆ ತಿಳಿಸಲಾಗುವುದು:
ಚರಿತ್ರೆಪೂರ್ವ ಗ್ರೀಕ್ ಮತದ ಅವಧಿ (ಕ್ರಿ.ಪೂ. 2000ದಿಂದ ಕ್ರಿ.ಪೂ 1000ದ ವರಗೆ)
[ಬದಲಾಯಿಸಿ]ಇದಕ್ಕೆ ಮುಖ್ಯವಾದ ಆಧಾರ ಮೈಸೀನೀಯ ಅವಶೇಷಗಳು ಮತ್ತು ಹೋಮರನ ಮಹಾಕಾವ್ಯಗಳು. ಗ್ರೀಕರ ಮೊಟ್ಟಮೊದಲಿನ ಮತ ಭಾವನೆಗಳು ವಿಶೇಷವಾಗಿ ಮೈಸೀನೀಯ ಸಂಸ್ಕೃತಿಯಿಂದ ಪ್ರಚೋದನೆಗೊಂಡಿವೆ.[೫] ಮೈಸೀನೀಯ ಸಂಸ್ಕೃತಿಯಲ್ಲಿ ಮಾತೃದೇವತೆಗೆ ಪ್ರಾಶಸ್ತ್ಯ. ಮಾತೃದೇವತೆಯ ಭಾವನೆ ಗ್ರೀಸಿನಲ್ಲಿ ಹರಡಲು ಈ ಸಂಸ್ಕೃತಿ ಮುಖ್ಯ ಕಾರಣ. ಆರ್ಕೇಡಿಯಾ ಮತ್ತು ಆಟಿಕದ ಆರ್ಟೆಮಿಸ್,[೬][೭] ಅಥೆನ್ಸಿನ ಆಥೆನೆ, ಆರ್ಗಾಸ್, ಸಾಮೋವಾದ ಹೀರ ದೇವತೆಗಳು ಮೈಸೀನೀಯ ಮಾತೃದೇವತೆಯ ಪ್ರತಿರೂಪಗಳು.
- ಚರಿತ್ರೆಪೂರ್ವ ಅವಧಿಯ ಗ್ರೀಕ್ ಮತ ಉತ್ತರದಿಂದ ಮೆಡಿಟರೇನಿಯನ್ ಪ್ರದೇಶಕ್ಕೆ ಬಂದ ಆರ್ಯರಿಂದಲೂ ಪ್ರಚೋದನೆಗೊಂಡಿತು. ಆರ್ಯರ ದೇವತೆಗಳು ಗ್ರೀಸಿಗೆ ಪ್ರವೇಶಿಸುವುದಕ್ಕೆ ಪರ್ಷಿಯ ವಿಶೇಷವಾಗಿ ಕಾರಣವಾಗಿತ್ತು. ಆಗಿನ ಪರ್ಷಿಯಾದ ಮತದಿಂದ ಬಹುಶಃ ವೇದದ ಮತ ಇನ್ನೂ ಪ್ರತ್ಯೇಕಗೊಂಡಿರಲಿಲ್ಲ. ಗ್ರೀಕರ ದೇವತೆಗಳಿಗೂ, ವೇದದ ದೇವತೆಗಳಿಗೂ ಅನೇಕ ಅಂಶಗಳಲ್ಲಿ ಸಾಮ್ಯವಿರುವುದಕ್ಕೆ ಪಾರಸಿ ಮತ ಕಾರಣ. ಗ್ರೀಕರ ಕೃಷಿದೇವತೆ ಡೆಮಿಟರ್ ಆರ್ಯರ ಕುಲದೇವತೆ. ಅಗ್ಗಿಷ್ಟಿಕೆ ದೇವತೆಯಾದ ಹೆಸ್ಟಿಯಾ[೮] ಕೂಡ ಆರ್ಯ ಸಂಸ್ಕೃತಿಯಿಂದ ಬೆಳೆದು ಬಂದವಳು.[೯] ಗ್ರೀಕರ ಜ಼್ಯೂಸಿಗೂ ಆರ್ಯರ ಆಕಾಶದ ದೇವತೆಯಾದ ದ್ವೈಕಿಗೂ ನಿಕಟ ಸಂಬಂಧವಿದೆ.[೧೦] ಆ ಕಾಲದಲ್ಲಿ ಸಮಾಜ ಮನೆತನಗಳ ತಂಡಗಳಿಂದ ಕೂಡಿದ್ದರೂ ಪಟ್ಟಣದ ರಾಜ್ಯವಾಗಿ ರೂಪುಗೊಳ್ಳುವುದರಲ್ಲಿತ್ತು. ಆಥೆನ್ಸಿನಲ್ಲಿ ಆಥೆನ ಮತ್ತು ಜ಼್ಯೂಸ್ ರಾಜಕೀಯ ವಿವೇಕವನ್ನು ಪ್ರಚೋದಿಸುವ ದೇವತೆಗಳಾಗಿ ಬೆಳೆದರು. ಆಗ ಜ಼್ಯೂಸ್ ದೇವತೆಯನ್ನು ಜ಼್ಯೂಸ್ ಪೊಲಿಯಸ್ ಎಂದು ಕರೆಯುತ್ತಿದ್ದರು.[೧೧] ದಾರಿಗಳ ದೇವತೆಯಾದ ಹರ್ಮೀಸ್ ದೇವತೆಗೂ, ವೇದಗಳ ಪೂಷನ್ ದೇವತೆಗೂ ತುಂಬ ಹೋಲಿಕೆಯಿದೆ.[೧೨] ಚರಿತ್ರೆಯ ಪೂರ್ವ ಅವಧಿಯಲ್ಲಿ ಹರ್ಮೀಸ್ ದಾರಿಗಳು ಕೂಡುವ ಸಂತೆಯ ಮಾಳದ ದೇವತೆಯಾಗಿ ಬೆಳೆದಿರುತ್ತಾನೆ. ಈ ಕಾಲದ ಕಲಾಭಿಮಾನಿ ಸ್ತ್ರೀದೇವತೆಗಳನ್ನು ಗೀತ ಮತ್ತು ಶಿಲ್ಪದ ಪೋಷಕರಾಗಿ ಭಾವಿಸಲಾಗಿತ್ತು.
- ಈ ಕಾಲದಲ್ಲಿ ಗುಹೆಗಳು, ಅರಣ್ಯಪ್ರದೇಶಗಳು ಪೂಜಾಸ್ಥಾನಗಳಾಗಿದ್ದವು. ಮೈಸೀನೀ ಸಂಶೋಧನೆಗಳಿಂದ ತಿಳಿದುಬರುವಂತೆ ರಾಜನ ಅರಮನೆಯ ಒಳಾಂಗಣದಲ್ಲಿ ದೇವಸ್ಥಾಗಳಿದ್ದವು. ಈಚಿನ ಸಂಶೋಧನೆಗಳಿಂದ ಹೊರಬಿದ್ದ ದೇವಸ್ಥಾನಗಳಲ್ಲಿ ಆರ್ಗಾಸ್, ಒಲಿಂಪಿಯಾದಲ್ಲಿ ಹೀರಾ ದೇವತೆಯ ದೇವಸ್ಥಾನಗಳು ಮುಖ್ಯವಾದವು. ದೇವಸ್ಥಾನಗಳು ಎಂದಾಗ ಅವುಗಳೊಂದಿಗೆ ಅರ್ಚಕವೃಂದವೂ ಬಂದೇ ಬರುತ್ತದೆ. ಹೋಮರನ ಕಾವ್ಯಗಳಲ್ಲಿ ಇಡಾ ಶಿಖರದ ಜ಼್ಯೂಸ್ ಮತ್ತು ಸ್ಕಮನ್ಡ್ರಾಸ್ ನದಿಯ ಪೂಜಾರಿಗಳ ವಿವರಗಳು ದೊರೆಯುತ್ತವೆ. ಮತವಿಚಾರಗಳಲ್ಲಿ ರಾಜನಿಗೆ ರಾಜಪುರೋಹಿತ ನೆರವಾಗುತ್ತಿದ್ದ. ಪುರೋಹಿತರಲ್ಲದೆ ಈ ಕಾಲದಲ್ಲಿ ಕಣಿ ಹೇಳುವವರೂ ಇದ್ದರು.
- ಆಗಿನ ಪೂಜಾವಿಧಾನದಲ್ಲಿ ಬಲಿಪೀಠದ ಮೇಲೆ ಬಲಿ ಅರ್ಪಿಸುವುದು ಬಹು ಮುಖ್ಯವಾದದ್ದು. ಬಲಿಪೀಠದ ಮುಂದೆ ಸಾಮಾನ್ಯವಾಗಿ ಒಂದು ಪ್ರಾಣಿಯನ್ನು ಅರ್ಪಿಸುತ್ತಿದ್ದರು.[೧೩][೧೪] ಪ್ರಾಣಿವಧೆ ಇಲ್ಲದೆ ಹೆಣ್ಣುಕಾಳುಗಳ ಸೌಮ್ಯ ಅರ್ಪಣೆಯೂ ಆಚರಣೆಯಲ್ಲಿತ್ತು. ಪಾತಾಳದ ದೇವತೆಗಳಿಗೆ ಬಲಿ ಅರ್ಪಿಸಿದಾಗ ಬಲಿಕೊಟ್ಟ ಪ್ರಾಣಿಯ ರುಂಡವನ್ನು ಒಂದು ಕುಳಿಯ ಕಡೆಗೆ ಬಗ್ಗಿಸುತ್ತಿದ್ದರು. ಸ್ವರ್ಗದ ದೇವತೆಗಳಿಗೆ ಬಲಿ ಅರ್ಪಿಸಿದಾಗ ರುಂಡವನ್ನು ಆಕಾಶದ ಕಡೆ ತೋರಿಸುತ್ತಿದ್ದರು. ಅರ್ಘ್ಯ ಸಾಮಾನ್ಯವಾಗಿ ನೀರು, ಜೇನುತುಪ್ಪ ಮತ್ತು ಮದ್ಯದ ಮಿಶ್ರಣರೂಪದಲ್ಲಿರುತ್ತಿತ್ತು.[೧೫]
- ಮೈಸೀನೀ ಮತ್ತು ಟಿರ್ಯೂಸ್ ಪ್ರದೇಶಗಳಲ್ಲಿ ದೊರೆತಿರುವ ಗೋರಿಗಳು ಆ ಕಾಲದಲ್ಲಿ ಪಿತೃ ಪೂಜೆ ಆಚರಣೆಯಲ್ಲಿತ್ತೆಂದು ಹೇಳಲು ಪ್ರಬಲ ಆಧಾರಗಳಾಗಿವೆ. ಆ ಕಾಲದವರು ಪಿತೃಗಳ ಪ್ರೇತಗಳಲ್ಲಿ ದೈವಾಂಶವಿದೆಯೆಂದು ನಂಬಿದ್ದರು. ಸತ್ತ ವೀರರಿಗೆ ಪೂಜೆ ಸಲ್ಲುಸುತ್ತಿದ್ದರೆಂಬುದಕ್ಕೆ ಹೆರಾಕ್ಲೀಸಿನ ಪೂಜೆಯೇ ಸಾಕ್ಷಿ. ಸತ್ತವರ ವಂಶದವರು ಶವಸಂಸ್ಕಾರ ನಡೆಸಿದ ಅನಂತರ ಶುದ್ಧಿ ಸ್ನಾನವನ್ನು ಆಚರಿಸುತ್ತಿದ್ದರು. ಆದರೆ ಶುದ್ಧೀಕರಣ ಕರ್ಮ ಹೋಮರನ ಅನಂತರದ ಕಾಲದಲ್ಲಿದ್ದಷ್ಟು ಅತಿಯಾಗಿರಲಿಲ್ಲ.
- ಸೌಮ್ಯ ದೇವತೆಗಳಲ್ಲದೇ ಕ್ರೂರ ದೇವತೆಗಳ ಕುರುಹೂ ಅಲ್ಲಲ್ಲಿ ಕಂಡುಬರುತ್ತದೆ. ಫಿಗೇಲಿಯಾದ ಭೂದೇವತೆ ಭಯಂಕರ ದೇವತೆ. ಇವಳಿಗೆ ಕುದುರೆಯ ತಲೆಯೂ, ಹಾವಿನ ಕಣ್ಣೂ ಇದ್ದಂತೆ ಚಿತ್ರಿಸಿದೆ.[೧೬][೧೭] ಪಾತಾಳ ದೇವತೆಗಳನ್ನು ಕೆಡಕಿನ ದೇವತೆಗಳೆಂದು ಭಾವಿಸಿರಲಿಲ್ಲ. ಇವರನ್ನು ಸೌಮ್ಯದೇವತೆಗಳಾಗಿ ಭಾವಿಸಿ ಪ್ಲೂಟಾನ್ ಎಂದು ಕರೆಯುತ್ತಿದ್ದರು. ಡೆಮಿಟರ್ ದೇವತೆ ಭಯಂಕರ ದೇವತೆಯಲ್ಲ. ಕೆಡಕಿನ ದೇವತೆಗಳು ಕೇವಲ ಕೆಳಮಟ್ಟದ ಜನರಲ್ಲಿ ಪ್ರಚಾರದಲ್ಲಿದ್ದುವು. ಮೇಲ್ಮಟ್ಟದ ಸಂಸ್ಕೃತಿಯ ಜನರಲ್ಲಿ ವಿಶೇಷವಾಗಿ ಸೌಮ್ಯ ದೇವತೆಗಳೇ ಹೆಚ್ಚು. ಈ ಕಾಲದಲ್ಲಿ ಹರ್ಮೀಸ್ ದೇವತೆಯನ್ನು ಆತ್ಮಗಳನ್ನು ಕರೆದೊಯ್ಯುವ ದೇವತೆಯಾಗಿ ಭಾವಿಸಿದ್ದರು.[೧೮][೧೯] ಆದರೂ ಎಲುಸಿನಿಯಾ ಸ್ವರ್ಗದಲ್ಲಿ ಗತಿಸಿದವರಿಗೆ ಸುಖ ದೊರೆಯುತ್ತದೆಯೆಂಬ ಭಾವನೆ ಇನ್ನೂ ಬೆಳೆದಿರಲಿಲ್ಲ.
- ಮೇಲ್ಮಟ್ಟದ ದೇವತೆಗಳನ್ನು ಇವರು ಮಾನವ ಗುಣಗಳನ್ನು ಹೊಂದಿದಂತೆ ಬಗೆದಿದ್ದರೂ ಅವರ ಮಾನವ ಗುಣಗಳಿನ್ನೂ ಪರಿಪೂರ್ಣವಾಗಿರಲಿಲ್ಲ. ತುಂಬ ಪ್ರಾಚೀನ ಗ್ರೀಕ್ ತಂಡದವರು ಕೆಲವು ಪ್ರಾಣಿಗಳು ದೈವಿಕ ಸ್ವರೂಪ ಪಡೆದಂತೆ ಭಾವಿಸುತ್ತಿದ್ದುದುಂಟು. ಉದಾಹರಣೆಗೆ ಅಪೋಲೊವಿಗೂ ತೋಳಗಳಿಗೂ ನಿಕಟ ಸಂಬಂಧ ಕಂಡುಬರುತ್ತದೆ.[೨೦][೨೧] ಹಿಂದೂಗಳು ಕೂರ್ಮ, ವರಾಹ, ಮತ್ಸ್ಯಗಳಲ್ಲಿ ದೈವ ಅವತರಿಸಿದುದಾಗಿ ಭಾವಿಸಿದ್ದಂತೆಯೇ ಗ್ರೀಕರು ತೋಳದಲ್ಲಿ ಅಪೊಲೋ ದೇವತೆ ಅವತರಿಸಿದಂತೆ ಭಾವಿಸಿದ್ದರು. ಡೆಲ್ಫೈ, ಮ್ಯಾಸಿಡೋನಿಯ ಮತ್ತು ಎಪಿರಸ್ ಪ್ರದೇಶಗಳಲ್ಲಿ ದೈವ ಹಾವಿನ ಅವತಾರವೆಂಬ ಭಾವನೆ ಪ್ರಚಾರದಲ್ಲಿತ್ತು. ಆರ್ಕೇಡಿಯ ಮತ್ತು ಆಟಿಕ ಪ್ರದೇಶಗಳಲ್ಲಿ ಆರ್ಟೆಮಿಸ್ ದೇವತೆಯನ್ನು ಕರಡಿಯ ಅವತಾರವಾಗಿ ಭಾವಿಸಲಾಗಿತ್ತು.[೨೨] ಫಿಗೇಲಿಯಾದಲ್ಲಿ ಕುದುರೆಯ ತಲೆಯುಳ್ಳ ಡೆಮಿಟರನ್ನೂ, ಅರ್ಧ ಭಾಗ ಹೆಂಗಸಿನ ಶರೀರವನ್ನೂ, ಇನ್ನರ್ಧ ಮೀನಿನ ಶರೀರವನ್ನೂ ಉಳ್ಳ ಯುರನೊಮಿ ಎಂಬ ದೇವತೆಯನ್ನೂ ಪೂಜಿಸುತ್ತಿದ್ದರು.[೨೩]
- ದೇವತೆಗಳು ಪೂರ್ಣ ಮಾನವ ಸ್ವರೂಪವನ್ನು ಪಡೆಯುವುದಕ್ಕೆ ಮುಂಚೆ, ಕೆಲವು ದೇವತೆಗಳ ಸ್ವರೂಪ ಕೇವಲ ಒಂದು ಕ್ರಿಯೆಗೆ ಮಾತ್ರ ಕ್ಲುಪ್ತವಾಗಿತ್ತು. ಅವರ ಹೆಸರು ಜ಼್ಯೂಸ್ನಂತೆ ಅಂಕಿತನಾಮವಾಗಿರಲಿಲ್ಲ. ಇಂಥ ದೇವತೆಗಳಿಗೆ ಮ್ಯಾರಥಾನಿನ ಗುಳದ ದೇವತೆ, ಟನಗ್ರಾದ ಕಾಳಿನ ದೇವತೆ, ಆರ್ಕೆಡಿಯಾದ ನೊಣವನ್ನೋಡಿಸುವ ದೇವತೆ,[೨೪][೨೫] ಆಟಿಕಾದ ಹೆರಿಗೆಯ ದೇವತೆಗಳು ಉದಾಹರಣೆಗಳು.
- ಪ್ರಾಣಿಗಳ ರೂಪದಲ್ಲಿಲ್ಲದ ಪ್ರಕೃತಿಯ ಶಕ್ತಿಗಳಲ್ಲೂ ದೈವ ಅಡಗಿದ್ದಂತೆ ಪ್ರಾಚೀನ ಗ್ರೀಕರು ಭಾವಿಸಿದ್ದರು. ತುಂಬ ಹಿಂದುಳಿದ ಆರ್ಕೇಡಿಯ ಪ್ರದೇಶದವರು ತುಂಬ ಹಿಂದಿನ ಕಾಲದಲ್ಲಿ ಜ಼್ಯೂಸ್ ದೇವತೆ ಗುಡುಗಿನಲ್ಲಿ ಅಡಗಿರುವುದಾಗಿ ಭಾವಿಸಿದ್ದರು. ಅವರು ಮಿಂಚು, ಗುಡುಗು, ಬಿರುಗಾಳಿಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ಮ್ಯಾಸಿಡೋನಿಯದವರು ಜಲದೇವತೆಯನ್ನು ಆರಾಧಿಸುತ್ತಿದ್ದರು. ಗ್ರೀಕರ ಹೆಸ್ಟಿಯಾ ಮೊದಲಿನಿಂದ ಕೊನೆಯವರೆಗೂ ಕೇವಲ ಅಗ್ಗಿಷ್ಟಿಕೆಯ ದೇವತೆಯಾಗಿಯೇ ಉಳಿದಳು.
- ಪ್ರಕೃತಿ ಶಕ್ತಿಗಳ ಆರಾಧನೆಯೊಂದಿಗೆ ಮಂತ್ರಮಾಟಗಳು ಮಿಳನವಾಗಿರುವುದು ಸ್ವಾಭಾವಿಕ. ಗ್ರೀಕರ ಥೆಸ್ಮೊಫೋರಿಯಾ ಎಂಬ ಅತ್ಯಂತ ಪ್ರಾಚೀನ ಆಚರಣೆಯಲ್ಲಿ ಮಾಟವನ್ನು ಗುರುತಿಸಬಹುದು. ಭೂಮಾತೆಗೆ ಬಲಿಕೊಟ್ಟ ಹಂದಿಯ ಅವಶೇಷಗಳನ್ನು ಹೊಲಗಳಲ್ಲಿ ಎರಚುವುದು ಈ ಆಚರಣೆಯ ಒಂದು ಅಂಗವಾಗಿತ್ತು.[೨೬] ಹಾಗೆ ಎರಚಿದುದರಿಂದ ಹೊಲಗಳಲ್ಲಿ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂದು ಇವರು ನಂಬಿದ್ದರು. ಆಟಿಕದ ಥರ್ಗೇಲಿಯಾ ಎಂಬ ಪಾಪನಿವಾರಣೆಯ ಆಚರಣೆಯೂ ಮಾಟಕ್ಕೆ ಒಂದು ಉದಾಹರಣೆ. ಜನರ ಪಾಪಗಳನ್ನು ಒಂದು ಆಡಿನ ತಲೆಯ ಮೇಲೆ ಹೊರಿಸಿ ಕಾಡಿಗೆ ಅಟ್ಟುವುದು ಈ ಆಚರಣೆಯ ಒಂದು ಅಂಗವಾಗಿತ್ತು.
- ಹೋಮರನ ಮಹಾಕಾವ್ಯಗಳಲ್ಲಿ ನರಬಲಿಯ ಪ್ರಸ್ತಾಪವಿಲ್ಲದ್ದರಿಂದ ಪ್ರಾಚೀನ ಗ್ರೀಕರಲ್ಲಿ ನರಬಲಿ ಪದ್ಧತಿ ಇರಲಿಲ್ಲವೆಂದು ಕೆಲವರು ವಾದಿಸುತ್ತಾರೆ. ಅದು ಪ್ರಾಚೀನರಲ್ಲಿ ಆಚರಣೆಯಲ್ಲಿತ್ತೆಂಬುದಕ್ಕೆ ಬೇರೆ ಕಡೆಗಳಿಂದ ರುಜುವಾತು ದೊರೆತಿದೆ. ಆರ್ಕೇಡಿಯದ ಲೈಕಾಆನ್ ದೊರೆ ಜ಼್ಯೂಸ್ಗೆ ತನ್ನ ಮಗನನ್ನು ಬಲಿಕೊಟ್ಟಂತೆಯೂ,[೨೭] ಪೆಗಸೈ ಪ್ರದೇಶದಲ್ಲಿ ಕೈನೋಸ್ ಯಾತ್ರಿಕರನ್ನು ಜ಼್ಯೂಸಿಗೆ ಬಲಿಯಾಗಿ ಅರ್ಪಿಸಿ ಅವರ ತಲೆಬುರುಡೆಗಳನ್ನು ಅಪೊಲೋವಿಗೆ ಅರ್ಪಿಸಿದಂತೆಯೂ, ಕಾರಿಂತ್ ಕೊಲ್ಲಿಯ ಬಳಿ ಅಯೋನಿಯಾದವರು ಆರ್ಟಿಮಿಸ್ ದೇವತೆಗೆ ಒಬ್ಬ ವಟುವನ್ನೂ, ಕನ್ಯೆಯನ್ನೂ ಬಲಿಯಾಗಿ ಅರ್ಪಿಸಿದಂತೆಯೂ ಪುರಾಣದ ಕಥೆಗಳಿವೆ.
- ಚರಿತ್ರಪೂರ್ವ ಅವಧಿಯ ಅಂತ್ಯದಲ್ಲಿ (ಬಹುಶಃ ಕ್ರಿ.ಪೂ. 10 ನೆಯ ಶತಮಾನದಲ್ಲಿ) ಒಂದು ಹೊಸ ಮತ ಥ್ರೇಸ್ ಮತ್ತು ಮ್ಯಾಸಿಡೋನಿಯಾ ಪ್ರದೇಶಗಳಿಂದ ಗ್ರೀಸಿಗೆ ಪ್ರವೇಶಿಸಿತು. ಆ ಮಠದ ದೇವತೆ ಡೈಯೊನೈಸಸ್.[೨೮][೨೯][೩೦] ಮೊದಮೊದಲಲ್ಲಿ ಈ ಮತಕ್ಕೆ ತಡೆಗಳಿದ್ದರೂ ಅದು ಥೀಬ್ಸಿನಲ್ಲಿ ಭದ್ರವಾಗಿ ಬೇರೂರಿ ಕಾಲಕ್ರಮದಲ್ಲಿ ಡೆಲ್ಫೈಗೂ ಹಬ್ಬಿತು. ಇದು ಗ್ರೀಸಿನಲ್ಲಿ ಹೇಗೆ ಪ್ರಬಲವಾಯಿತೆಂಬುದನ್ನು ಮುಂದೆ ತಿಳಿಸಲಾಗುವುದು.
ಗ್ರೀಕರ ಮತದ ಎರಡನೆಯ ಅವಧಿ (ಕ್ರಿ. ಪೂ. 900 ರಿಂದ ಕ್ರಿ. ಪೂ. 500 ರ ವರಗೆ)
[ಬದಲಾಯಿಸಿ]ಒಂಭತ್ತನೆಯ ಶತಮಾನದ ವೇಳೆಗೆ ಉತ್ತರದ ಮತ್ತು ಮೆಡಿಟರೇನಿಯನ್ ಪ್ರದೇಶದ ಜನರ ಮಿಳನ ಪೂರ್ಣವಾಗಿ ತಾವೆಲ್ಲ ಒಂದೇ ಸಂಸ್ಕೃತಿಗೆ ಸೇರಿದವರೆಂಬ ಭಾವನೆ ಗ್ರೀಕರಲ್ಲಿ ಮೂಡಿತ್ತು. ಪ್ರಾಚೀನ ಹಾಗೂ ನವೀನ ಮತಭಾವನೆಗಳ ಮತ್ತು ಸಂಸ್ಕಾರಗಳ ಮಿಳನದಿಂದ ಗ್ರೀಕ್ ಮತ ಒಂದು ನಿರ್ದಿಷ್ಟ ರೂಪ ಪಡೆದಿತ್ತು. ಒಂಭತ್ತನೆಯ ಮತ್ತು ಎಂಟನೆಯ ಶತಮಾನದಲ್ಲಿ ಬೆಳೆದ ಮಹಾಕಾವ್ಯಗಳೂ, ಹೊಸದಾಗಿ ಹುಟ್ಟಿದ ಭಾವಗೀತೆಗಳೂ, ವಿಗ್ರಹರಚನೆಯ ಶಿಲ್ಪದ ಹುಟ್ಟೂ, ನಗರ ರಾಜ್ಯಗಳ ಬೆಳವಣಿಗೆಯೂ ಇದಕ್ಕೆ ಮುಖ್ಯ ಕಾರಣಗಳು.
- ಹೋಮರನ ಮಹಾಕಾವ್ಯಗಳು ಗ್ರೀಕ್ ಮತದ ಬೆಳವಣಿಗೆಗೆ ಸಹಾಯ ಮಾಡಿದರೂ ಅವು ಗ್ರೀಕರ ವೇದಗಳೆಂದು ಗಣಿಸಲಾಗುವುದಿಲ್ಲ. ಆತನ ಮಹಾಕಾವ್ಯಗಳಲ್ಲಿ ಗ್ರೀಕ್ ದೇವತೆಗಳಿಗೆ ಮಾನುಷ್ಯತ್ವಾರೋಪಣೆ ಆಗಿದೆಯಾಗಿ ಸ್ತ್ರೀ ಮತ್ತು ಪುರುಷ ದೇವತೆಗಳು ನಿರ್ದಿಷ್ಟ ವ್ಯಕ್ತಿತ್ವವನ್ನು ಪಡೆದಿರುತ್ತಾರೆ. ಒಂದೊಂದು ದೇವತೆಗೆ ಸಂಬಂಧಪಟ್ಟ ಸ್ಥಳಪುರಾಣಗಳಲ್ಲೂ, ಆಚರಣೆಗಳಲ್ಲೂ ವ್ಯತ್ಯಾಸಗಳಿದ್ದರೂ ಆ ದೇವತೆ ಒಂದೇ ಎಂಬ ಭಾವನೆ ಬೆಳೆದಿರುತ್ತದೆ. ಹೋಮರನ ಕಾವ್ಯಪ್ರಚಾರದಿಂದ ಆರ್ಗಾಸಿನ ಅಪೊಲೋ ಮತ್ತು ಆಥೆನ್ಸಿನ ಅಪೊಲೋ ಒಂದೇ ನಿರ್ದಿಷ್ಟ ದೇವತೆ ಎಂಬ ಭಾವನೆ ಸ್ಥಾಪನೆಯಾಯಿತು. ಆರ್ಟಿಮಿಸ್ ಮತ್ತು ಆಥೆನಾ ಇಬ್ಬರೂ ಕನ್ನಿಕಾಪರಮೇಶ್ವರಿಯರೆಂಬ ಭಾವನೆಯೂ ನೆಲೆಗೊಂಡಿತ್ತು. ಜ಼್ಯೂಸ್ ದೇವತೆ ಸಾರ್ವಭೌಮ ಪದವಿಯನ್ನು ಪಡೆದರೂ ಪ್ರಮಾಣ ಮಾಡುವ ಕಾಲದಲ್ಲಿ ಜ಼್ಯೂಸ್, ಆಥೆನ ಮತ್ತು ಅಪೊಲೋ ಈ ಮೂವರನ್ನೂ ಒಟ್ಟಿಗೆ ಹೆಸರಿಸುವುದು ರೂಢಿಯಲ್ಲಿತ್ತು. ಆಡಿಸಿ ಕಾವ್ಯದಲ್ಲಿ ಸಾರ್ವಭೌಮ ದೇವತೆಯ ಭಾವನೆಯ ಜೊತೆಯಲ್ಲಿ ವಿಶ್ವ ದೇವತೆಗಳ ಭಾವನೆಯೂ ಕಂಡುಬರುತ್ತದೆ. ಆ ಕಾವ್ಯದಲ್ಲಿ ಅನೇಕ ವೇಳೆ ಯಾವ ಒಂದು ದೇವತೆಯನ್ನೂ ಹೆಸರಿಟ್ಟು ಸಂಬೋಧಿಸದೆ ಸಾಮೂಹಿಕವಾಗಿ ದೇವತೆಗಳೆಲ್ಲರನ್ನೂ ಒಟ್ಟಿಗೆ ಸಂಬೋಧಿಸುವುದನ್ನೂ ಕಾಣಬಹುದು.
- ಹೋಮರನ ದೇವತೆಗಳೆಲ್ಲರಲ್ಲೂ ಕೆಲವು ಸಾಮಾನ್ಯ ಗುಣಳಿವೆ: 1. ಅವರೆಲ್ಲರೂ ಅಮರ್ತ್ಯರು ಅಥವಾ ಅಮೃತತ್ವ ಪಡೆದವರು. 2. ಯಾವುದೊಂದು ವ್ಯಸನವೂ ಇಲ್ಲದೆ ಸರ್ವದಾ ಸಂತೋಷದಿಂದ ಕೂಡಿರುತ್ತಾರೆ. 3. ಅವರ ಆಹಾರ ಅಮೃತ.[೩೧] ಸಾಮನ್ಯವಾಗಿ ಅವರು ಅದೃಶ್ಯರು, ಆದರೆ ಅವರು ಅನೇಕ ವೇಷಗಳನ್ನು ತಾಳಿ (ಉದಾಹರಣೆಗೆ ಪಕ್ಷಿರೂಪ) ಮಾನವರಿಗೆ ಕಾಣಿಸಿಕೊಳ್ಳಬಹುದು. 4. ಅವರು ಸರ್ವಮಂಗಳದಾತರಾದರೂ ಭಾಷೆಗೆ ತಪ್ಪಿ ನಡೆದವರನ್ನು ತಪ್ಪದೆ ಶಿಕ್ಷಿಸುತ್ತಾರೆ. ತಮ್ಮನ್ನು ಪ್ರತಿಭಟಿಸಿದ ಮಾನವರನ್ನು ನಿರ್ಮೂಲ ಮಾಡುತ್ತಾರೆ. 5. ಮಾನವರ ನೀತಿ ಅನೀತಿಗಳನ್ನು ಪರೀಕ್ಷಿಸಲು ಆಗಾಗ ವೇಷ ಬದಲಾಯಿಸಿಕೊಂಡು ನಗರಗಳಲ್ಲಿ ಸಂಚರಿಸುತ್ತಾರೆ.
- ಕ್ರಿ. ಪೂ. ಒಂಭತ್ತನೆಯ ಮತ್ತು ಎಂಟನೆಯ ಶತಮಾನದ ಮತಭಾವನೆಗಳನ್ನು ತಿಳಿಯಲು ಹೋಮರನ ಕಾವ್ಯಗಳನ್ನಲ್ಲದೆ ಹೆಸಿಯಡ್ಡನ ಕವನಗಳ ಅಧ್ಯಯನವೂ ಅಗತ್ಯ. ಇವನ ಕವನಗಳಲ್ಲಿ ಹೆಲಿಕಾನಿನ ಕಾವ್ಯಾಭಿಮಾನಿ ಸ್ತ್ರೀ ದೇವತೆಗಳ ವಿಶೇಷ ಪಾತ್ರ ವರ್ಣಿತವಾಗಿದೆ. ಇವರು ಭಕ್ತರಿಗೆ ದೇವಲೋಕದ ರಹಸ್ಯಗಳನ್ನು ತಿಳಿಸುತ್ತಾರೆ. ಈ ಕವನಗಳಲ್ಲಿ ನ್ಯಾಯ, ದಯೆ, ಪ್ರೀತಿ, ಸ್ನೇಹ, ಶಾಂತಿ ಮುಂತಾದ ಗುಣಗಳನ್ನು ದೈವಿಕ ವ್ಯಕ್ತಿತ್ವ ಪಡೆದಂತೆ ವರ್ಣಿಸಿದೆ. ಹೆಸಿಯಡ್ಡನ ಪದ್ಯಗಳು ಪ್ರಧಾನ ದೇವತೆಗಳಿಗೂ, ಉಪದೇವತೆಗಳಿಗೂ, ದೈವಾಂಶಸಂಭೂತ ಮಾನವರಿಗೂ ಇರುವ ತಾರತಮ್ಯಗಳನ್ನು ಸ್ಪಷ್ಟಪಡಿಸುತ್ತವೆ.
- ಈ ಕಾಲದಲ್ಲಿ ಮತಭಾವಗಳು ಭಾವಗೀತೆಗಳ ಮೂಲಕ ಅಭಿವ್ಯಕ್ತಗೊಂಡಿವೆ. ಜ಼್ಯೂಸ್ ದೇವತೆಯ ಪ್ರಾರ್ಥನೆಗಳು ಸಾಮಾನ್ಯವಾಗಿ ಸ್ಪಾಂಡಿ ಎಂಬ ಗಂಭೀರವಾದ ಛಂದಸ್ಸಿನಲ್ಲಿ ರಚಿತವಾಗಿದ್ದವು. ಡೈಯೋನೈಸಸ್ ದೇವತೆಯನ್ನು ಕುರಿತ ಪ್ರಾರ್ಥನಾಗೀತಗಳಿಗೆ ಡಿಥರಿಂಬೋಸ್ ಎಂದು ಹೆಸರು.[೩೨] ದೇವತೆಗಳ ಪದವಾದ ಭಾವಗೀತೆಗಳನ್ನು ಬಾಲಕರಿಗೆ ಕಲಿಸುವುದು ಆರ್ಕೇಡಿಯ ವಿದ್ಯಾಭ್ಯಾಸದ ಒಂದು ಮುಖ್ಯ ಅಂಗವಾಗಿತ್ತು. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಮತಾಚರಣೆಗಳ ಕಾಲದಲ್ಲೂ ಭಾವಗೀತೆಗಳನ್ನು ಹಾಡುವುದು ವಾಡಿಕೆಯಾಗಿತ್ತು.
- ಹಿಂದಿನ ಅವಧಿಯಲ್ಲಿ ಒಂದು ಕಲ್ಲುಬಂಡೆಯನ್ನೋ, ಒಂದು ಗಿಡದ ಮೋಟನ್ನೋ ದೈವವೆಂದು ಪೂಜಿಸುತ್ತಿದ್ದರು. ಕ್ರಿ. ಶ. 10 ನೆಯ ಶತಮಾನದಲ್ಲಿ ಮೊಟ್ಟಮೊದಲಿಗೆ ದೇವತೆಗಳನ್ನು ವಿಗ್ರಹರೂಪದಲ್ಲಿ ಪೂಜಿಸುವುದು ಪ್ರಾರಂಭವಾಯಿತು.[೩೩] ವಿಗ್ರಹಾರಾಧನೆಯ ಒಂದು ನಿದರ್ಶನ ಹೋಮರನ ಕಾವ್ಯಗಳಲ್ಲಿ ದೊರೆಯುತ್ತದೆ. ಇತ್ತೀಚೆಗೆ ಕ್ನೊಸ್ಸೋಸ್ ಹತ್ತಿರ ನಡೆಸಿದ ಭೂಸಂಶೋಧನೆಯಿಂದ ಆಯುಧಪಾಣಿಗಳಾದ ಪುರುಷ ಮತ್ತು ಸ್ತ್ರೀದೇವತೆಗಳ ವಿಗ್ರಹಗಳ ಚಿತ್ರಗಳುಳ್ಳ ಕಲಶ ಸಿಕ್ಕಿದೆ. ಒಂಭತ್ತನೆಯ ಶತಮಾನದ ಅನಂತರ ಗ್ರೀಸಿನಲ್ಲಿ ವಿಗ್ರಹಗಳ ಪೂಜೆ ಸಾಮಾನ್ಯವಾಯಿತು. ಅಲ್ಲಿಂದೀಚೆಗೆ ಗ್ರೀಸಿನ ಶಿಲ್ಪಕಲೆ ಬೆಳೆದು ಲೋಕಪ್ರಖ್ಯಾತವಾದ ದೇವತೆಗಳ ಸುಂದರ ಪ್ರತಿಮೆಗಳು ಗ್ರೀಸಿನ ಅನೇಕ ಮುಖ್ಯ ನಗರಗಳಲ್ಲಿ ಪ್ರತಿಷ್ಠಿತವಾದವು. ವಿಗ್ರಹಪೂಜೆಯಿಂದ ದೈವ ಮಾನವನ ಸಂಪೂರ್ಣ ರೂಪವೆಂಬ ಭಾವನೆ ಬಲಿಯಿತಲ್ಲದೆ ಪ್ರತಿಮೆಗಳಲ್ಲಿ ದೈವ ಸಾಕ್ಷಾತ್ಕಾರವಾದಂತೆ ಜನರಿಗೆ ಭಾಸವಾಯಿತು. ಗ್ರೀಕರ ವಿಗ್ರಹಗಳಲ್ಲಿ ಸೌಂದರ್ಯ, ವೀರ್ಯ, ಗಾಂಭೀರ್ಯ ಘನೀಭೂತವಾಗಿವೆ. ವಿಗ್ರಹಾರಾಧನೆಯ ಪರಿಣಾಮವಾಗಿ ದೈವಿಕ ಅಸ್ತಿತ್ವದಲ್ಲಿನ ನಂಬಿಕೆ ವಾಸ್ತವಿಕವಾದರೂ ಗ್ರೀಕರಲ್ಲಿ ದೈವವು ಚೇತನರೂಪವಾದ ಅಂತರಾತ್ಮವೆಂಬ ಭಾವನೆ ಬೆಳೆಯಲು ತಡೆಯಾಯಿತು.
- ಈ ಕಾಲದಲ್ಲಿ ಗ್ರೀಕ್ ಮತ ರಾಜಕೀಯವನ್ನು ಆವರಿಸಿತು. ದೇವತೆಗಳು ನಗರರಾಜ್ಯಗಳ ವಿಧಾಯಕರಾದರು. ತೋಳದ ದೇವತೆ ಅಪೊಲೋ ಈಗ ಆರ್ಗಾಸ್ ರಾಜ್ಯದ ರಕ್ಷಕ. ಮನೆತನದ ದೇವತೆಯಾದ ಜ಼್ಯೂಸ್ ರಾಜ್ಯದ ದೇವರಾದ. ಹೀಗೆ ಗ್ರೀಕರು ಜ಼್ಯೂಸ್ ದೇವತೆಯ ಭಕ್ತರಾದುದರಿಂದ ತಾವೆಲ್ಲರೂ ಒಂದು ದೊಡ್ಡ ಸಂಸಾರಕ್ಕೆ ಸೇರಿದವರು ಎಂಬ ಭಾವನೆ ಬೆಳೆಯಿತು. ವರ್ಷಕ್ಕೊಮ್ಮೆ ಕುಟುಂಬಗಳ ಮಿಳನದ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು. ಈ ಆಚರಣೆಯ ಪರಿಣಾಮವಾಗಿ ಒಂದೊಂದು ನಗರರಾಜ್ಯದ ಜನರೆಲ್ಲರಿಗೂ ಒಂದೇ ದೇವತೆ ಮೂಲಪುರುಷನಾದ. ಕೆಲವು ಕಾಲದ ಅನಂತರ ಅಯೋನಿಯದ ಹೊರಗಿನ ಜನರೂ ಅಪೊಲೋ ತಮ್ಮ ಮೂಲಪುರುಷನೆಂದು ಸಾರತೊಡಗಿದರು. ಡಿಲಾಸ್ನಲ್ಲಿ ಜ಼್ಯೂಸ್ ದೇವತೆಯನ್ನು ತಂದೆ ದೇವತೆ ಎಂದು ಸಂಬೋಧಿಸುವುದು ವಾಡಿಕೆಯಾಯಿತು.
- ಕ್ರಿ. ಪೂ. ಎಂಟನೆಯ ಶತಮಾನದಲ್ಲಿ ಒಂದೊಂದು ರಾಜ್ಯದವರೂ ತಮ್ಮ ಪುರಾತನ ವೀರನೊಬ್ಬನನ್ನು ದೇವರ ಪ್ರತಿನಿಧಿ ಎಂದು ಭಾವಿಸತೊಡಗಿದರು. ಕ್ರಿ. ಪೂ. ಆರನೆಯ ಶತಮಾನದ ವೇಳೆಗೆ ಪುರಾತನರಿಗಲ್ಲದೆ ಈಚಿನ ವೀರರಿಗೂ ದೈವತ್ವವನ್ನು ಆರೋಪಿಸುವುದು ಸಾಮಾನ್ಯವಾಯಿತು. ಇಂಥ ಈಚಿನ ವೀರರು ದೈವತ್ವ ಪಡೆದುದಕ್ಕೆ ಸ್ಪಾರ್ಟದ ಲೈಕರ್ಗಸ್ ಒಂದು ಉತ್ತಮ ಉದಾಹರಣೆ.[೩೪] ಗ್ರೀಕರು ಹೊಸ ವಸಾಹತುಗಳನ್ನು ಏರ್ಪಡಿಸಿದಾಗ ತಮ್ಮ ಮುಖಂಡರಲ್ಲಿ ಪ್ರಧಾನವಾದೊಬ್ಬನನ್ನು ದೈವವಾಗಿ ಮಾಡಿಕೊಳ್ಳುತ್ತಿದ್ದರು. ಅವರ ಸಮಾಧಿಗಳು ಪವಿತ್ರ ಸ್ಥಾನಗಳಾದವು. ವರ್ಷಕ್ಕೊಮ್ಮೆ ಈ ಸಮಾಧಿಯ ಸ್ಥಳದಲ್ಲಿ ಉತ್ಸವವನ್ನು ಏರ್ಪಡಿಸಿ ಬಲಿ ಅರ್ಪಿಸುತ್ತಿದ್ದರು. ವೀರರ ಪೂಜೆಯ ಜೊತೆಯಲ್ಲಿ ಪಿತೃಗಳ ಪೂಜೆಯೂ ಬೆಳೆಯಿತು. ಕ್ರಿ. ಶ. 7 ನೆಯ ಶತಮಾನದಲ್ಲಿ ಸರ್ವಪಿತೃಗಳ ಹಬ್ಬ (ಆಲ್ ಸೋಲ್ಸ್ ಡೇ) ನಗರದ ಹಬ್ಬವಾಗಿ ಆಚರಿಸುವುದು ಪ್ರಾರಂಭವಾಯಿತು.
- ರಾಜ್ಯದ ಪ್ರಜೆಗಳೆಲ್ಲರೂ ಒಂದೇ ಸಂಸಾರದವರು, ವಿಸ್ತರಿಸಿದ ಕುಟುಂಬವೇ ರಾಜ್ಯವೆಂಬ ಭಾವನೆ ಬಲಿತಾಗ ರಾಜ್ಯದ ಕಾನೂನಿನಲ್ಲೂ ಬದಲಾವಣೆಯಾಯಿತು. ಮೊದಲಲ್ಲಿ ಒಂದು ಕುಟುಂಬದವನು ಅದಕ್ಕೆ ಸೇರಿದವನೊಬ್ಬನನ್ನು ಕೊಂದಾಗ ಮಾತ್ರ ಅದು ಮಹಾಪಾತಕವೆಂದು ಎಣಿಸಲಾಗುತ್ತಿತ್ತು. ರಾಜ್ಯವೆಂಬುದು ವಿಸ್ತರಿಸಿದ ಕುಟುಂಬವೆಂದು ಭಾವನೆ ಬೆಳೆದಮೇಲೆ ಒಂದು ರಾಜ್ಯದ ಪೌರ ಆ ರಾಜ್ಯದ ಯಾವ ಪೌರನನ್ನು ಕೊಂದರೂ ಅದು ಮಹಾಪಾತಕವೆಂಬ ಭಾವನೆ ಹುಟ್ಟಿತು. ರಾಜ್ಯದ ಪೌರನ ಕೊಲೆಯಾದರೂ ಜ಼್ಯೂಸ್ ದೇವತೆ ಕೋಪಗೊಳ್ಳುತ್ತಾನಾದ್ದರಿಂದ ಕೊಲೆಮಾಡಿದವನು ಆ ಪಾಪದ ಪರಿಹಾರಾರ್ಥವಾಗಿ ಶುದ್ಧೀಕರಣ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ವಿಧಾಯಕವಾಯಿತು. ಎಂಟನೆಯ ಶತಮಾನದ ಮೈಲಿಟಾಸಿನ ಕವಿಯೊಬ್ಬ ಆಕಿಲಿಸ್ ತನ್ನ ರಕ್ತಸಂಬಂಧಿಯಲ್ಲದ ಥರ್ಸಿಟೀಸನನ್ನು ಕೊಂದದ್ದಕ್ಕಾಗಿ[೩೫] ಅವನು ಲೆಸ್ಬಾಸಿಗೆ ಹೋಗಿ ಅಪೊಲೋ ಮತ್ತು ಆರ್ಟಿಮಿಸ್ ದೇವತೆಗಳ ಸಮ್ಮುಖದಲ್ಲಿ ಶುದ್ಧೀಕರಣ ಪ್ರಾಯಶ್ಚಿತ್ತ ಮಾಡಿಕೊಂಡದ್ದನ್ನು ವರ್ಣಿಸಿರುತ್ತಾರೆ.[೩೬]
- ಈ ಅವಧಿಯಲ್ಲಿ ಡೆಲ್ಫೈ ಕ್ಷೇತ್ರ ತುಂಬ ಪ್ರಬಲಗೊಂಡಿತು. ಯಾವ ಒಂದು ಗ್ರೀಕ್ ನಗರರಾಜ್ಯವಾಗಲಿ, ಹೊಸ ವಸಾಹತಾಗಲಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಡೆಲ್ಫೈಯ ಪುರೋಹಿತರನ್ನು ಆಶ್ರಯಿಸುತ್ತಿದ್ದವು. ಡೆಲ್ಫೈಯ ಪ್ರಚೋದನೆಯಿಂದ ಗ್ರೀಕರಲ್ಲಿ ಐಕ್ಯಮತ್ಯ ಕುದುರಿತು. ಅದು ಶುದ್ಧೀಕರಣಕ್ಕೆ ಕೇಂದ್ರಕ್ಷೇತ್ರವಾಯಿತು. ಸಾಮಾನ್ಯವಾಗಿ ಅದರ ನ್ಯಾಯ, ನಿಷ್ಠೆ ಮತ್ತು ಧಾರ್ಮಿಕ ನೀತಿ ಮೇಲ್ಮಟ್ಟದ್ದಾಗಿತ್ತು. ಕ್ರಿ.ಪೂ. ಎಂಟನೆಯ ಶತಮಾನದಿಂದ ಕ್ರಿ.ಪೂ. ಐದನೆಯ ಶತಮಾನದವರೆಗೆ ಧಾರ್ಮಿಕ ವಿಚಾರಗಳಲ್ಲಿ ಏಕೈಕ ವಿಧಾಯಕತ್ವ ಪಡೆದಿತ್ತು. ಅಲ್ಲಿಂದಾಚಿನ ಕಾಲದಲ್ಲಿ ಅದರ ಪ್ರಾಬಲ್ಯ ಕ್ಷೀಣಗೊಂಡಿತು.
- ದೈವವೃಂದದ ಪ್ರಸಿದ್ಧ ಕೇಂದ್ರವಾದ ಒಲಿಂಪಿಯದಲ್ಲಿ ಈ ಕಾಲದಲ್ಲಿ ಗ್ರೀಕರು ಪಂದ್ಯಗಳನ್ನು ಏರ್ಪಡಿಸಲು ಪ್ರಾರಂಭಿಸಿದರು. ಕ್ರಿ.ಪೂ. 6 ನೆಯ ಶತಮಾನದ ವೇಳೆಗೆ ಪೂರ್ವ ಪಶ್ಚಿಮ ದೇಶಗಳ ಜನ ತಮ್ಮ ರಾಜಕೀಯ ವೈಮನಸ್ಯವನ್ನು ಮರೆತು ಈ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು. ನಾಲ್ಕು ವರ್ಷಗಳಿಗೊಮ್ಮೆ ಗ್ರೀಸಿನ ಎಲ್ಲ ಕಡೆಯ ವೀರರೂ ಇಲ್ಲಿಗೆ ಬಂದು ತಂದೆ ದೇವತೆಗೆ ಪೂಜೆಯನ್ನು ಸಲ್ಲಿಸಿ ಈ ಪಂದ್ಯಗಳಲ್ಲಿ ಪೈಪೋಟಿ ನಡೆಸುತ್ತಿದ್ದರು.[೩೭][೩೮] ಆಟಗಳ ಜೊತೆಯಲ್ಲಿ ಕಲಾವಿದರ ಸ್ಪರ್ಧೆಯೂ ಏರ್ಪಡುತ್ತಿತ್ತು. ಈ ಸ್ಪರ್ಧೆಗಳಿಂದ ಹೆಲೆನ್ನರಲ್ಲಿ (ಗ್ರೀಕರಲ್ಲಿ) ಒಗ್ಗಟ್ಟು ಕುದುರಿದುದಲ್ಲದೆ ಅವರ ಮತೀಯ ಭಾವನೆಗಳಲ್ಲೂ ಏಕತೆ ಬೆಳೆಯಿತು. ಈ ಪಂದ್ಯಗಳಲ್ಲದೆ ವರ್ಷೇ ವರ್ಷೇ ನಡೆಯುತ್ತಿದ್ದ ಅಖಿಲ ಐಯೋನಿಯ ಅಪೊಲೊ ಉತ್ಸವವೂ ಗ್ರೀಕ್ ಮತದ ಏಕತೆಯನ್ನು ಬಲಗೊಳಿಸಿತು.
- ಬೊಯೀಷಿಯದಿಂದ ಮೊಟ್ಟಮೊದಲಿಗೆ ಹತ್ತನೆಯ ಶತಮಾನದಲ್ಲಿ ಆಟಿಕಕ್ಕೆ ಪ್ರವೇಶಿಸಿದ ಡೈಯೊನೈಸಸ್ ಆರಾಧನೆ ಈ ಕಾಲದಲ್ಲಿ ಇತರ ಗ್ರೀಕ್ ರಾಜ್ಯಗಳಿಗೂ ಹರಡಿತು. ಹೀಗೆ ಹಬ್ಬಿದಾಗ ಅದು ತನ್ನ ಮೊದಲಿನ ಕರಾಳ ರೂಪವನ್ನು ತ್ಯಜಿಸಿ ಬಹುಮಟ್ಟಿಗೆ ಸೌಮ್ಯ ರೂಪ ತಾಳಿ ಸಾರ್ವಜನಿಕ ಮತವಾಯಿತು. ಈ ದೇವತೆಯನ್ನು ಕುರಿತು ಡಿಥಿರ್ಯಾಂಬ್ ಎಂಬ ಆ ದೇಶದ ಸ್ತೋತ್ರಗೀತೆ ಬೆಳೆಯಿತು. ಈ ಗೀತೆಗಳು ಮುಂದೆ ಆಟಿಕದ ರುದ್ರನಾಟಕಕ್ಕೆ ಮಾತೃಕೆಗಳಾದವು.[೩೯] ಈ ದೇವತೆಯ ಆರಾಧನೆ ದೈವದೊಡನೆ ಭಾವೈಕ್ಯ ಬೆಳೆಸಿತಲ್ಲದೆ, ಮರಣಾಂತರದ ಆತ್ಮ ದಿಶೆಯಲ್ಲಿ ನಂಬಿಕೆಯನ್ನು ಭದ್ರಗೊಳಿಸಿತು.
- ಡೈಯೊನೈಸಸ್ ಮತ ಸಾರ್ವಜನಿಕವಾದರೂ ಅದರಲ್ಲಿ ಸತ್ತ್ವವಿರುವುದು ಅದರ ಗುಹ್ಯ ಅಥವಾ ಗೂಢ ಭಾವನೆಯಲ್ಲಿ. ಈ ದೇವತೆಯ ಆರಾಧಕರು ಗೂಢ ಭ್ರಾತೃವರ್ಗವನ್ನು ಏರ್ಪಡಿಸಿಕೊಂಡು ಆರ್ಫಿಸಂ ಎಂಬ ಹೆಸರಿನಲ್ಲಿ, ಬುಡಕಟ್ಟುಗಳ ಮತ್ತು ಜನಾಂಗಗಳ ಭೇದವನ್ನು ಎಣಿಸದೆ, ಜನರನ್ನು ತಮ್ಮ ಭ್ರಾತೃವರ್ಗಕ್ಕೆ ಸೇರಿಸಿಕೊಂಡು ಆ ದೇವತೆಯ ಸಂದೇಶವನ್ನು ಉಪದೇಶಿಸಿದರು. ಆರ್ಫಿಯಸ್ ಮತಭಾವನೆಗಳು ಗ್ರೀಕ್ ಪೌರಾಣಿಕ ಮತದಿಂದ ಭಿನ್ನವಾದವು. 1. ಪ್ರತಿಯೊಬ್ಬನ ಆತ್ಮವೂ ದೈವಿಕವಾದದ್ದು. 2. ಆ ಆತ್ಮ ಶರೀರವೆಂಬ ಕೊಳೆ ತುಂಬಿದ ಕಾರಾಗೃಹದಲ್ಲಿ ಬಂಧಿತವಾಗಿದೆ. 3. ಯೋಗ್ಯವಾದ ಸಂಸ್ಕಾರಗಳಿಂದ ಆ ಆತ್ಮವನ್ನು ಶುಚಿರ್ಭೂತವಾಗಿ ಮಾಡಬಹುದು. 4. ಹಾಗೆ ಈ ಜನ್ಮದಲ್ಲಿ ಶುಚಿಯಾದ ಆತ್ಮಗಳು ಶುದ್ಧಿಲೋಕದಲ್ಲಿ (ಪರ್ಗೆಟೊರಿ) ಪಾಪಪರಿಹಾರ ದಂಡನೆಗೆ ಒಳಪಟ್ಟು ಶುಚಿಯಾಗುತ್ತವೆ. 5. ಸತ್ತವರಿಗೆ ಪುನರ್ಜನ್ಮ ಉಂಟು. ಇವು ಆರ್ಫಿಯಸ್ ಮತದ ಮುಖ್ಯಾಂಶಗಳು. ಪುನರ್ಜನ್ಮದ ಭಾವನೆ ಬಹುಶಃ ಬೌದ್ಧರಿಂದ ಗ್ರೀಸಿಗೆ ಬಂದಿರಬಹುದೆಂದು ಕೆಲವರ ಊಹೆ. ಕ್ರಿ. ಪೂ. ಐದನೆಯ ಶತಮಾನದಷ್ಟು ಹಿಂದೆ, ಅಂದರೆ ಬೌದ್ಧಮತ ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ ಈ ಭಾವನೆ ಗ್ರೀಸಿಗೆ ಹಬ್ಬಲು ಸಾಧ್ಯವೇ ಎಂಬ ಸಂದೇಹಕ್ಕೆ ಅವಕಾಶವುಂಟು. ಆತ್ಮಕ್ಕೆ ಸಾವಿಲ್ಲ ಎಂಬ ಆರ್ಫಿಯಸ್ ಮತಭಾವನೆ ಪ್ಲೇಟೊವಿನ ಮೇಲೆ ಪ್ರಭಾವ ಬೀರಿರಬಹುದೆಂದು ಊಹಿಸಲು ಅವಕಾಶವಿದೆ.
- ಎಲೂಸಿನ ಗುಹ್ಯ ತತ್ತ್ವಗಳು ಆರ್ಫಿಯಸ್ ತತ್ತ್ವಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಅವು ಇಹಲೋಕವನ್ನು ಬಿಟ್ಟ ಆತ್ಮಗಳಿಗೆ ಸುಖಪ್ರದ ಜೀವನದ ಭರವಸೆಯನ್ನು ನೀಡುತ್ತವೆ. ಎಲೂಸಿಸ್ ಸಂಘದ ವ್ಯಾಪ್ತಿ ತುಂಬ ವಿಶಾಲವಾದದ್ದು. ಈ ಮತದವರು ಹೆಂಗಸರಿಗೂ ಗುಲಾಮರಿಗೂ ತಮ್ಮ ಸಂಘಕ್ಕೆ ಸೇರಲು ಅವಕಾಶ ಕೊಟ್ಟರು. ಪವಿತ್ರ ಬಟ್ಟಲಿನಿಂದ ಒಂದು ವಿಧವಾದ ಮಿಶ್ರಪಾನೀಯವನ್ನು ಕುಡಿಸುವುದು ಈ ಸಂಘದ ಸಂಸ್ಕಾರಗಳಲ್ಲಿ ಒಂದು. ಕ್ರೈಸ್ತರ ಪ್ಯಾಷನ್ ಪ್ಲೇ ಮಾದರಿಯ ಪವಿತ್ರ ವಸ್ತುಗಳ ದೃಶ್ಯನಾಟಕ ಪ್ರದರ್ಶನ - ಇನ್ನೊಂದು. ಈ ಸಂಸ್ಕಾರಗಳ ಮೂಲಕ ಈ ಸಂಘದ ಸದಸ್ಯರಲ್ಲಿ ತಾವು ದೈವದೊಂದಿಗೆ ಸಂಸರ್ಗ ಪಡೆದೆವೆಂಬ ಭಾವನೆ ಹುಟ್ಟುತ್ತಿತ್ತು.
- ಕ್ರಿ. ಪೂ. 6 ನೆಯ ಶತಮಾನದಲ್ಲಿ ಗ್ರೀಕರಲ್ಲಿ ತತ್ತ್ವಚಿಂತನೆ ಮೊಟ್ಟಮೊದಲಿಗೆ ಕಾಣಿಸಿಕೊಂಡಿತು. ಇದು ಮುಖ್ಯವಾಗಿ ವಿಶ್ವದ ಹುಟ್ಟಿಗೆ ಕಾರಣ ಯಾವುದು ಎಂಬ ಪ್ರಶ್ನೆಗೆ ಸಂಬಂಧಪಟ್ಟಿದ್ದು. ಥಾಲೀಸ್ ಮುಂತಾದ ತಾತ್ತ್ವಿಕರು ವಿಶ್ವದ ಸೃಷ್ಟಿಗೆ ಜಾತ ತತ್ತ್ವಗಳು ಕಾರಣವೆಂದು ವಾದಿಸಿದರು. ಇವರ ವಾದ ಗ್ರೀಕರ ದೈವಿಕ ಭಾವನೆಗೆ ವಿರುದ್ಧವಾದುದು. ಹೆರಾಕ್ಲೀಟಸ್ ಎಂಬ ತಾತ್ತ್ವಿಕ ವಿಶ್ವದ ಸೃಷ್ಟಿಗೆ ದೇವತೆಗಳಾಗಲಿ ಮಾನವರಾಗಲಿ ಕಾರಣವಲ್ಲವೆಂದು ಘೋಷಿಸಿದ. ಎಂಪಿಡೋಕ್ಲಿಸ್ ವಿಶ್ವದಲ್ಲಿ ಕಾಣುವ ಕ್ರಿಯೆಗಳಿಗೆ ಆಕರ್ಷಣ ಮತ್ತು ವಿಕರ್ಷಣವೆಂಬುದು ಪೈಥಾಗೊರಸನ ಮೂಲಭಾವನೆ ಎಂದು ಸಾರಿದ. ಜ಼ೆನೋಫೆನೀಸ್, ದೈವ ಮಾನವನಂತೆ ವ್ಯಕ್ತಿಯಲ್ಲ, ಅದು ಸತ್ ತತ್ತ್ವವೆಂದು ಸಾರಿದ.[೪೦] ಇತರ ತತ್ತ್ವಗಳು ಕೇವಲ ಕೆಲವರನ್ನು ಆಕರ್ಷಿಸಿತೇ ಹೊರಡು ಅನೇಕ ದೇವತೆಗಳ ಭಕ್ತರಾದ ಸಾಮಾನ್ಯ ಗ್ರೀಕ್ ಪ್ರಜೆಗಳ ಮೇಲೆ ಗಮನಾರ್ಹವಾದ ಪರಿಣಾಮವನ್ನು ಉಂಟುಮಾಡಲಿಲ್ಲ. ಈ ಭಾವನೆಗಳು ರಾಷ್ಟ್ರದ ಮತಕ್ಕೆ ಹಾನಿ ಎಂದು ರಾಜಕೀಯ ಮುಖಂಡರು ಎಣಿಸಿದ್ದು ಕ್ರಿ. ಪೂ. 5 ನೆಯ ಶತಮಾನದಲ್ಲಿ.
ಗ್ರೀಕ್ ಮತದ ಮೂರನೆಯ ಅವಧಿ (ಕ್ರಿ. ಪೂ. 500 ರಿಂದ ಕ್ರಿ. ಪೂ. 338 ರವರೆಗೆ)
[ಬದಲಾಯಿಸಿ]ಇದು ಗ್ರೀಕರ ಪ್ರಸಿದ್ಧ ಸ್ಮಾರಕಗಳ ಮತ್ತು ಸಾಹಿತ್ಯದ ಕಾಲ. ಈ ಕಾಲದಲ್ಲಿ ಅಥೆನ್ಸ್ ಗ್ರೀಕ್ ರಾಜ್ಯಗಳಲ್ಲಿ ಪ್ರಮುಖ ರಾಜ್ಯವಾಗಿತ್ತಲ್ಲದೇ ಅದು ಗ್ರೀಕರ ಕಲೆ ಮತ್ತು ಸಾಹಿತ್ಯದ ನೆಲೆವೀಡಾಯಿತು. ಈ ಕಾಲದಲ್ಲಿ ಗ್ರೀಕರ ದೇವವೃಂದ ಬೆಳೆದು ಪರಿಪೂರ್ಣಗೊಂಡಿತು. ಈ ಕಾಲದಲ್ಲಿ ದೇವವೃಂದಕ್ಕೆ ಪ್ಯಾನ್ ಮತ್ತು ಆಸ್ಕ್ಲಿಪಯಸ್ ದೇವತೆಗಳು ಸೇರಿದರು.
- ಈ ಅವಧಿಯಲ್ಲಿ ಗ್ರೀಕರಿಗೂ, ಪಾರಸಿಕರಿಗೂ ನಡೆದ ಯುದ್ಧದಿಂದ ಗ್ರೀಕರಲ್ಲಿ ತಾವು ಒಂದು ಸಂಘಟಿತ ಜನಾಂಗವೆಂಬ ಭಾವನೆ ಏರ್ಪಟ್ಟಿತಲ್ಲದೆ ಅತಿಶಯವಾದ ಬಿಕ್ಕಟ್ಟು ಕುದುರಿತು. ಗ್ರೀಕರಿಗೂ, ಪಾರಸಿಕರಿಗೂ ನಡೆದ ಯುದ್ಧ ಕೇವಲ ಜನಾಂಗಗಳ ಯುದ್ಧವಲ್ಲ. ಅದು ಸಾಂಸ್ಕೃತಿಕ ಮತ್ತು ಮತೀಯ ಯುದ್ಧ. ಅಂತಿಮವಾಗಿ ಗ್ರೀಕರಿಗೆ ದೊರೆತ ವಿಜಯ.[೪೧] ಈ ಕಾಲದ ಪ್ರಸಿದ್ಧ ಇತಿಹಾಸಕಾರ ಹೀರಡಟಸ್ ಜ಼್ಯೂಸ್ ಹೆಲಿನೋಸ್ ಭಾವನೆಯನ್ನು ಎತ್ತಿ ತೋರಿಸಿರುತ್ತಾನೆ. ಜ಼್ಯೂಸ್ ದೇವತೆ ಗ್ರೀಕರ ಸ್ವಾತಂತ್ರ್ಯದ ರಕ್ಷಕ (ಜ಼್ಯೂಸ್ ಎಲಿಯುಥೇರೋಸ್) ಎಂಬ ಭಾವನೆಯೂ ರೂಪುಗೊಂಡಿತು.[೪೨] ಗ್ರೀಕರ ಬಿಡುಗಡೆಯ ದೇವತೆಯಾದ ಜ಼್ಯೂಸಿನ ಹೆಸರಿನಲ್ಲಿ ಒಂದು ಪವಿತ್ರ ಸ್ಮಾರಕ ಸ್ಥಾಪನೆಯಾಯಿತು. ಗ್ರೀಕರು ಪಾರಸಿಕರನ್ನು ಸೋಲಿಸಿದ ಮೇಲೆ ಅದಕ್ಕೆ ತಮ್ಮ ದೇವತೆಗಳೇ ಕಾರಣರಾದುದರಿಂದ ದೇವತೆಗಳಲ್ಲಿ ಹಿಂದೆಂದೂ ಇಲ್ಲದಿದ್ದಷ್ಟು ಅತಿಶಯವಾದ ಪ್ರೀತಿ ಮತ್ತು ಭಕ್ತಿ ಬೆಳೆಯಿತು. ಗ್ರೀಕರು ಜಯ ಗಳಿಸಿದ ಮೇಲೆ ಯುದ್ಧದಲ್ಲಿ ವಶಪಡಿಸಿಕೊಂಡ ಸಂಪತ್ತಿಯಲ್ಲಿ ಬಹುಭಾಗವನ್ನು ಡೆಲ್ಫಿಯ ಅಪೊಲೋವಿಗೂ, ಒಲಿಂಪಿಯದ ಜ಼್ಯೂಸ್ ಮಹಾದೇವತೆಗೂ ಅರ್ಪಿಸಿದರು. ಅಕ್ರಗಾಸಿನಲ್ಲಿ ಜ಼್ಯೂಸ್ ದೇವತೆಗೆ ಅತಿ ದೊಡ್ಡ ದೇವಸ್ಥಾನವನ್ನು ಕಟ್ಟಿದರು. ಪ್ಲೇಟಿಯಾದಲ್ಲಿ ಜ಼್ಯೂಸ್ ದೇವತಾಪ್ರೀತ್ಯರ್ಥವಾಗಿ ಸ್ವಾತಂತ್ರ್ಯದ ಸಂತಷ್ಣೆ ಏರ್ಪಟ್ಟಿತ್ತು. ಅದೇ ಕಾಲದಲ್ಲಿ ವಿಜಯದ ಸ್ಮಾರಕಗಳಾಗಿ ಅಥೆನ್ಸಿನಲ್ಲಿ ಅಥೆನ ದೇವತೆಯ ಎರಡು ವಿಗ್ರಹಗಳು ಸ್ಥಾಪನೆಯಾದವು. ಗ್ರೀಕರ ಹಡಗುಗಳ ಚಲನಕ್ಕೆ ನೆರವಾದ ಮರುತ್ತಗಳಿಗೂ ಉತ್ಸವಗಳು ನಡೆದವು. ಮ್ಯಾರಥಾನ್ ಯುದ್ಧದಲ್ಲಿ ಜಯಕ್ಕೆ ಕಾರಣವಾದ ಆಡಿನ ಆಕಾರದ ಆರ್ಕೇಡಿಯಾ ಪ್ಯಾನ್ ದೇವತೆಯನ್ನು ಅಥೆನ್ಸಿನಲ್ಲಿ ಸ್ಥಾಪಿಸಿದರು.[೪೩] ಯುದ್ಧದಲ್ಲಿ ಮಡಿದ ವೀರರ ಹೆಸರಿನಲ್ಲೂ ಸ್ಮಾರಕಗಳು ಸ್ಥಾಪನೆಯಾದವು. ಯುದ್ಧದಲ್ಲಿ ಜಯಗಳಿಸಲು ಸಹಾಯಕರಾದ ಎಲೂಸಿಯಾ ದೇವತೆಗಳಿಗೆ ತಮ್ಮ ಕೃತಜ್ಞತೆಯನ್ನು ತೋರಿಸಲು ಎಲೂಸಿಯಾದ ಮಹಲನ್ನು ಹೆಲನ್ನರು ಸಾರ್ವತ್ರಿಕ ಮತಕೇಂದ್ರವಾಗಿ ಮಾಡಿಕೊಂಡರು.
- ಎರಡನೆಯ ಅವಧಿಯಲ್ಲಿ ಪ್ರಾರಂಭವಾದ ವಿಗ್ರಹಾರಾಧನೆ ಮೂರನೆಯ ಅವಧಿಯಲ್ಲಿ ಮುಗಿಲು ಮುಟ್ಟಿತು. ಇದಕ್ಕೆ ಮುಖ್ಯವಾಗಿ ಗ್ರೀಕರ ಅತ್ಯಂತ ಶ್ರೇಷ್ಠ ಶಿಲ್ಪಿ ಫಿಡಿಯಾಸ್ನ ಅಮರ ಕಲೆ ಕಾರಣವಾಯಿತು. ಇವನ ಲೋಕ ಪ್ರಖ್ಯಾತ ದೇವತೆಗಳ ವಿಗ್ರಹಗಳು ಗ್ರೀಕರಲ್ಲಿ ಅನುಪಮ ಭಕ್ತಿಭಾವನೆಯನ್ನು ಬೆಳೆಸಿದುವು. ಕಾವ್ಯದ ಮಾತಿನಲ್ಲಿ ದೈವಿಕ ಭಾವನೆಯನ್ನು ಈ ವಿಗ್ರಹಗಳು ಪ್ರಕಾಶಪಡಿಸುತ್ತವೆ. ಗ್ರೀಕರ ಪಾರ್ಥೆನಾನಿನಲ್ಲಿ ಸ್ಥಾಪಿಸಿದ ವಿಗ್ರಹಗಳು ಶರೀರ ಸೌಂದರ್ಯವನ್ನೂ, ಬಲವನ್ನೂ ತೋರಿಸುತ್ತವೆಯಲ್ಲದೇ, ದೈವದ ಘನೆತೆಯನ್ನೂ, ದಯಾಮಯತೆಯನ್ನೂ, ಸುಖಶಾಂತಿಯನ್ನೂ ಅಭಿವ್ಯಕ್ತಗೊಳಿಸುತ್ತವೆ. ಎಲೂಸಿಯಾ ಮತದ ಸೌಮ್ಯ ಮತ್ತು ಶಾಂತಭಾವನೆಗಳು ಎಲೂಸಿಯದ ಮಾತೃ ದೇವತೆಯ ಉಬ್ಬುಚಿತ್ರದಲ್ಲಿ ಎದ್ದುಕಾಣುತ್ತವೆ. ಕವಿಗಳು ವರ್ಣಿಸಿರುವ ಅಥೆನ ದೇವತೆಗಿಂತ ಚೆನ್ನಾಗಿ ಪಾರ್ಥೆನಾನಿನಲ್ಲಿರುವ ಫೀಡಿಯಾಸನ ವಿಗ್ರಹ (ಕ್ರೈಸ್ತರ ಮೇರಿ ಕನ್ನಿಕೆಯ ಚಿತ್ರದಂತೆ) ಕನ್ನಿಕಾಭಾವನೆಯನ್ನು ಸ್ಫುಟಗೊಳಿಸುತ್ತದೆ. ಫೀಡಿಯಾಸನ ಜ಼್ಯೂಸ್ ಒಲಿಂಪಿಯೋಸ್ ವಿಗ್ರಹ ಆ ದೇವತೆಯ ಘನತೆಯನ್ನು ಹೋಮರ್ ಮತ್ತು ಈಸ್ಕಿಲಸರಿಗಿಂತ ಚೆನ್ನಾಗಿ ಪ್ರಕಟಿಸುತ್ತದೆ. ಫಿಡಿಯಾಸನ ಆಫ್ರೋಡೈಟಿಯ ವಿಗ್ರಹ ಈಸ್ಕಿಲಸ್ ವರ್ಣಿಸಿರುವ ಘನತೆಯೊಂದಿಗೆ ಅವನ ವರ್ಣನೆಯಲ್ಲಿ ಕಾಣದ ಪ್ರೇಮವನ್ನು ಪ್ರಕಾಶಿಸುತ್ತದೆ.
- ಈ ಕಾಲದಲ್ಲಿ ಹೂದಾನಿಗಳ ಮೇಲೆ ದೇವತೆಗಳ ವಿವಿಧ ಭಾವಭಂಗಿಗಳನ್ನು ಚಿತ್ರಿಸುವುದು ರೂಢಿಗೆ ಬಂತು. ಕ್ರಿ. ಪೂ. ಐದನೆಯ ಶತಮಾನದಲ್ಲಿ ಹೂದಾನಿಗಳ ಮೇಲೆ ಚಿತ್ರಿಸಿರುವ ಡೈಯೊನೈಸಸ್ ದೇವತೆಯ ವರ್ಣಚಿತ್ರ ಯುರಿಪಿಡೀಸನ ವರ್ಣನೆಗಿಂತ ತುಂಬ ಭಾವಪ್ರದವಾಗಿದೆ.
- ಭೌತವಾದಿಗಳು ಮತ್ತು ತಾತ್ತ್ವಿಕರು ಗ್ರೀಕರ ಬಹು ದೇವತೆಗಳ ಆರಾಧನೆಯನ್ನು ಅಲ್ಲಗಳೆದರೂ ಕ್ರಿ. ಪೂ. 5 ನೆಯ ಶತಮಾನದಲ್ಲಿ ಗ್ರೀಕ್ ಮತ ಅವರ ಕಟುಟೀಕೆಗಳನ್ನು ಮೆಟ್ಟಿ ನಿಂತುದಕ್ಕೆ ಗ್ರೀಕ್ ಕಲೆ ಒಂದು ಮುಖ್ಯ ಕಾರಣ. ಈ ಕಲೆ ಅವರ ಮತವನ್ನು ಪುಷ್ಟಿಗೊಳಿಸದಿದ್ದರೆ ಬಹುಶಃ ಗ್ರೀಕ್ ಮತ ಇನ್ನೂ ಮುಂಚೆಯೇ ಕ್ಷೀಣದೆಶೆಗೆ ಇಳಿಯುತ್ತಿತ್ತು. ಅದು ರೋಮನ್ನರ ಮೇಲೆ ತನ್ನ ಪ್ರಭಾವಬೀರಿ ಅದನ್ನು ರೂಪಾಂತರಗೊಳಿಸಿದ್ದಕ್ಕೂ ಗ್ರೀಕರ ವಿಗ್ರಹಶಿಲ್ಪವೇ ಕಾರಣ.
- ಐದನೆಯ ಶತಮಾನದ ಮತ್ತು ನಾಲ್ಕನೆಯ ಶತಮಾನದ ಪೂರ್ವಾರ್ಧದಲ್ಲಿ ಗ್ರೀಕ್ ಮತದ ಉನ್ನತಿಗೆ ಸಾಹಿತ್ಯವೂ ಬೇರೆ ರೀತಿಯಲ್ಲಿ ನೆರವಾಯಿತು. ಮತ ಭಾವನೆಗಳಿಗೆ ಪುಷ್ಟಿಕೊಟ್ಟ ಈ ಕಾಲದ ಸಾಹಿತಿಗಳಲ್ಲಿ ಪ್ರಧಾನವಾದವರು ಪಿಂಡಾರ್, ಈಸ್ಕಿಲಸ್ ಮತ್ತು ಸಾಫೊಕ್ಲೀಸ್. ಆ ಕಾಲದ ಮೇಲ್ಮಟ್ಟದ ಮತೀಯ ಭಾವನೆಗಳನ್ನು ಇವರ ಕಾವ್ಯಗಳು ಪ್ರತಿಬಿಂಬಿಸುತ್ತವೆ. ಪಿಂಡಾರನ ಪ್ರಗಾಥಗಳು ಆರ್ಫಿಯಸ್ಸನ ಮತದ ಉಚ್ಚ ಭಾವನೆಗಳನ್ನು ಪ್ರತಿಪಾದಿಸುತ್ತವೆ. ಮರಣಾನಂತರದಲ್ಲಿ ಆತ್ಮ ಸ್ವರ್ಗದಲ್ಲಿ ಅನುಭವಿಸುವ ಸುಖವನ್ನು ದಿವ್ಯವಾಗಿ ಚಿತ್ರಿಸುತ್ತದೆ. ಅವನ ಒಲಿಂಪಿಯ ಪ್ರಗಾಥ ಯೂರೋಪಿನ ಮೊಟ್ಟಮೊದಲ ಸ್ವರ್ಗದ ಅತಿಶಯ ಚಿತ್ರ. ಆತ್ಮ ಸ್ವಭಾವತಃ ದೈವಿಕವಾದದ್ದು ಎಂಬ ಭಾವನೆ ಈ ಪ್ರಗಾಥದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
- ಪಿಂಡಾರ್, ಈಸ್ಕಿಲಸ್ ಮತ್ತು ಸಾಫೊಕ್ಲೀಸ್ ಈ ಮೂವರೂ ಸಾಂಪ್ರದಾಯಿಕ ಗ್ರೀಕ್ ಮತದ ಘನತೆಯನ್ನು ಎತ್ತಿ ಹಿಡಿದಿರುತ್ತಾರೆ. ಒಬ್ಬೊಬ್ಬನೂ ತನಗೆ ವಿಶಿಷ್ಟವಾದ ರೀತಿಯಲ್ಲಿ ಜ಼್ಯೂಸ್ ದೇವತೆ ಸರ್ವಶಕ್ತನೂ, ನ್ಯಾಯಪರನೂ ಎಂಬ ಭಾವನೆಯನ್ನು ಒತ್ತಿ ಹೇಳಿರುತ್ತಾನೆ. ಈ ಮೂವರಲ್ಲಿ ಸಾಫೊಕ್ಲೀಸ್ ಜ಼್ಯೂಸ್ ದೇವತೆ ಕರುಣಾಳು ಕೂಡ ಎಂಬ ಭಾವನೆಯನ್ನು ಒತ್ತಿ ಹೇಳಿರುತ್ತಾನೆ. ಈ ಮೂವರು ವಿಧಿಯ ವಿಚಾರವಾಗಿ ಒಂದು ಸಣ್ಣ ದೇವತೆಯಾಗಿ ಮೊದಲಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ಮೂವರ ಕಾವ್ಯಗಳಲ್ಲಿ ವಿಧಿ ಬೇರೆ ದೇವತೆಯಾಗಿ ನಿಲ್ಲುವುದಿಲ್ಲ. ಮೊಯಿರಾ ಜ಼್ಯೂಸ್ ದೇವನ ವಾಣಿ ಅಥವಾ ನಿಯೋಗಿಯಾಗಿ ಪರಿವರ್ತನೆಯಾಗಿರುತ್ತಾಳೆ. ವಿಧಿ ಕುರುಡಲ್ಲ; ಅದರ ಹಿಂದೆ ದೈವಸಂಕಲ್ಪವಿದೆ. ವಿಧಿಯನ್ನು ದೈವಾನುಗ್ರಹದಿಂದ ಗೆಲ್ಲಬಹುದು ಎಂಬ ಸೂಚನೆ ಈ ಮೂವರ ಕಾವ್ಯಗಳಲ್ಲೂ ಕಂಡುಬರುತ್ತದೆ. ಅಜಾಗರೂಕತೆಯಿಂದ ಒಬ್ಬರಿಗೆ ಕೇಡು ಸಂಭವಿಸಿದರೂ ಅವನು ತನ್ನ ಅಜ್ಞಾನ ಮತ್ತು ಆಜಾಗರೂಕತೆಗಳಿಗೆ ಮರುಗಿ ದೈವವನ್ನು ಧ್ಯಾನಿಸುವುದರಿಂದ ಆ ಕೇಡು ಕೊನೆಯಲ್ಲಿ ಸತ್ಪರಿಣಾಮವನ್ನುಂಟುಮಾಡುತ್ತದೆ. ಈ ಭಾವನೆ ಸಾಫೊಕ್ಲೀಸನ ರುದ್ರನಾಟಕಗಳಲ್ಲಿ ಚೆನ್ನಾಗಿ ಅಭಿವ್ಯಕ್ತವಾಗಿದೆ. ಈ ಮೂವರೂ ದೇವತೆಯ ಭಾವನೆಯನ್ನು ಶುಭ್ರಗೊಳಿಸಿದರು. ಈಸ್ಕಿಲಸ್ಸನ ನಾಟಕಗಳಲ್ಲಿ ವಿಶ್ವ ದೇವೈಕಭಾವನೆ ಹೊಸದಾಗಿ ಕಾಣಿಸಿಕೊಳ್ಳುತ್ತದೆ. ಈ ವಿಶ್ವದಲ್ಲಿರುದೆಲ್ಲವನ್ನೂ, ಅವುಗಳಿಗಿಂತ ಮೇಲಿನವನನ್ನೂ ಜ಼್ಯೂಸ್ ದೇವತೆ ವ್ಯಾಪಿಸಿರುತ್ತಾನೆ ಎಂಬ ಅವನ ಮಾತಿನಲ್ಲಿ ವಿಶ್ವದೇವೈಕಭಾವನೆ ಚೆನ್ನಾಗಿ ಮೂಡಿಬಂದಿದೆ. ಇದಲ್ಲದೆ ಜ಼್ಯೂಸ್ ಕೇವಲ ಪ್ರಭುವಲ್ಲ, ಧರ್ಮಾಧ್ಯಕ್ಷ - ಎಂಬ ಭಾನವೆಯೂ ಈ ಮೂವರಲ್ಲೂ ಹೊಸದಾಗಿ ಕಾಣಿಸಿಕೊಳ್ಳುತ್ತದೆ. ಪಿಂಡಾರ್, ಈಸ್ಕಿಲಸ್ಸರ ಕಾವ್ಯಗಳಲ್ಲಿ ನ್ಯಾಯಕನ್ನಿಕೆ ಜ಼್ಯೂಸ್ ದೇವತೆಯ ಮಗಳೆಂದು ಹೇಳಿದ್ದಾರೆ. ಆ ನ್ಯಾಯದೇವತೆ ಹೊಗೆಯಿಂದ ಕಪ್ಪಾದ ಬಡವನ ಮನೆಯಲ್ಲೂ ಬೆಳಗುತ್ತಾಳೆ. ಕ್ಷಮಾದೇವತೆ ಜ಼್ಯೂಸ್ನೊಡನೆ ಅವನ ಸಿಂಹಾಸನದಲ್ಲಿ ಕುಳಿತು ಜೀವರುಗಳಿಗೆ ಕ್ಷೇಮಭಿಕ್ಷೆ ಕೊಡುತ್ತಾಳೆ. ಸಾಫೊಕ್ಲೀಸನ ನಾಟಕಗಳಲ್ಲಿ ಆಫ್ರೋಡೈಟಿ ದೇವತೆ ಕೇವಲ ದೇವತೆಯಲ್ಲ. ಅವಳು ವಿಶ್ವಶಕ್ತಿ. ಕ್ರಿ.ಪೂ. ಐದನೆಯ ಶತಮಾನದ ಕವಿಗಳೆಲ್ಲ ನೀತಿಬೋಧಕರಾದರೂ ನೀತಿಬೋಧನೆ ವಿಶೇಷವಾಗಿ ಕಂಡುಬರುವುದು ಪಿಂಡಾರನ ಪದ್ಯಗಳಲ್ಲಿ. ದೇವತೆಗಳು ಒಬ್ಬರೊಡನೆ ಒಬ್ಬರು ಕಾದಾಡುವುದನ್ನೂ ಅವನು ಕಟುವಾಗಿ ಟೀಕಿಸಿರುತ್ತಾನೆ. ಅಮರ್ತ್ಯರಾದ ದೇವತೆಗಳಿಂದ ಯುದ್ಧ ಸರಿದು ನಿಲ್ಲಲಿ ಎಂದು ಘೋಷಿಸಿರುತ್ತಾನೆ. ಅದರೂ ಈ ಕವಿಗಳು ದೇವತೆಗಳ ನೀತಿಕೆಟ್ಟ ಪ್ರಣಯವನ್ನು ಮಾತ್ರ ಖಂಡಿಸಿಲ್ಲ.
- ಗ್ರೀಕ್ ಮತದ ವಿಚಾರದಲ್ಲಿಯೂ ಯುರಿಪಿಡೀಸನ ನಿಲುವು ಬೇರೆ. ಇವನು ಸಾಫೊಕ್ಲೀಸನ ಅನಂತರ ಬಂದವ. ಈತ ಸಾಂಪ್ರದಾಯಿಕ ಮತವನ್ನು ತಾತ್ತ್ವಿಕ ವಿಮರ್ಶೆಗೆ ಒಳಪಡಿಸಿರುತ್ತಾನೆ. ದೇವತೆಗಳಿಗೆ ಮಾನವರ ದುಷ್ಟ ಮತ್ತು ಅಶ್ಲೀಲ ಗುಣಗಳನ್ನು ಆರೋಪಿಸುವುದನ್ನು ಕಟುವಾಗಿ ಟೀಕಿಸುತ್ತಾನೆ. ಕೆಲವು ವೇಳೆ ಅಪೊಲೋ ಮತ್ತು ಆಫ್ರೊಡೈಟಿ ದೇವತೆಗಳ ಮೇಲೆ ದ್ವೇಷ ಕಾರಿರುತ್ತಾನೆ. ಡೆಲ್ಫಿಯ ಭವಿಷ್ಯವಾದಿಗಳನ್ನು ಹಳಿದಿರುತ್ತಾನೆ. ನರಬಲಿ ಹೇಯ ಪದ್ಧತಿ ಎಂದು ಖಂಡಿಸಿರುತ್ತಾನೆ. ಮಾನವರು ಕೊಟ್ಟ ಆಹಾರದಿಂದ ಬಾಳುವ ಹಂಗಿನ ಜೀವನ ಖಂಡಿಸಿರುತ್ತಾನೆ. ಮಾನವರು ಕೊಟ್ಟ ಆಹಾರದಿಂದ ಬಾಳುವ ಹಂಗಿನ ಅಜೀವನವಲ್ಲ, ದೇವರದು - ಎಂದು ಸಮರ್ಥಿಸಿರುತ್ತಾನೆ; ಎಲ್ಲವನ್ನೂ ಕೊಡಬಲ್ಲವಾದಂಥ ಶಕ್ತಿ ಪಡೆದ ದೈವ ಮಾನವನನ್ನು ಆಶ್ರಯಿಸಬೇಕಾಗಿಲ್ಲ; ಮಾನವರು ಆಡಂಬರದ ಬಲಿ ಅರ್ಪಿಸಿದುದರಿಂದ ದೇವರು ತೃಪ್ತಿಗೊಳ್ಳುವುದಿಲ್ಲ; ತಮ್ಮ ಕೃತಜ್ಞತೆಯನ್ನು ಸೂಚಿಸಲು ನಿಷ್ಠೆಯಿಂದ ಅರ್ಘ್ಯವನ್ನು ಅರ್ಪಿಸಿದರೂ ಅವರು ಸಂತೃಪ್ತರಾಗುತ್ತಾರೆ ಎಂದು ಅವನು ಹೇಳಿರುತ್ತಾನೆ. ಈ ಅರ್ಪಣೆಯ ಭಾವನೆ ಉದಾತ್ತವಾದದ್ದು. ಈ ವಿಶ್ವವೆಲ್ಲ ದೈವದ ವಾಸಸ್ಥಾನ, ದೇವರಿಗೆ ಈ ದೇಶ ತನ್ನ ನಾಡು, ಈ ಜನ ತನ್ನ ಜನವೆಂಬ ಸಂಕುಚಿತ ಭಾವನೆ ಇಲ್ಲ ಎಂಬ ಅವನ ಭಾವನೆಯೂ ಉದಾತ್ತವಾದುದು. ಇವುಗಳ ಮೂಲಕ ಅವನು ಮೇಲ್ಮಟ್ಟದ ಸುಸಂಸ್ಕೃತರಲ್ಲಿ ಉಚ್ಚಭಾವನೆಗಳನ್ನು ಬಿತ್ತಿದ.
- ಈ ಹೊಸ ಭಾವನೆಗಳಿಗೆ ಯುರಿಪಿಡೀಸ್ ಮಾತ್ರ ಕಾರಣನಲ್ಲ. ಕ್ರಿ. ಪೂ. 5 ನೆಯ ಶತಮಾನದ ಕೊನೆಯಲ್ಲಿ, ಮತಭಾವ ಆಂತರಿಕವಾದದ್ದು, ಬಾಹ್ಯಾಚರಣೆಗಳಿಗಿಂತ ಅಂತರಂಗ ಭಾವಶುದ್ಧಿ ಶ್ರೇಷ್ಠವಾದದ್ದು ಎಂಬ ಭಾವನೆಗಳು ತಾತ್ತ್ವಿಕರಲ್ಲಿ ಪ್ರಚಾರದಲ್ಲಿದ್ದುವು. ನೀನು ಅಂತರಂಗದಲ್ಲಿ ಶುದ್ಧನಾಗಿದ್ದರೆ ದೇಹಾದ್ಯಂತ ಶುದ್ಧನಾಗಿರುತ್ತೀಯೆ ಎಂದು ಎಪಿಚಾರ್ಮೊಸ್ ಘೋಷಿಸಿದ್ದ. ಈ ಹೊಸ ಭಾವನೆಗಳು ಹುಟ್ಟಿದ ಮೇಲೆ ನರಮೇಧ ಪದ್ಧತಿಯನ್ನು ಗ್ರೀಸಿನ ಅನೇಕ ಸ್ಥಳಗಳಲ್ಲಿ ನಿಷೇಧಿಸಲಾಯಿತು.
- ಆದರೆ ಈ ಹೊಸ ಭಾವನೆಗಳು ಸಾಮಾನ್ಯ ಗ್ರೀಕರಲ್ಲಿ ಲೈಂಗಿಕ ಪರಿಶುದ್ಧತೆಯನ್ನು ಬೆಳೆಸಲಿಲ್ಲ. ಅನೇಕ ಗ್ರೀಕ್ ದೆವಾಲಯಗಳಲ್ಲಿ ದೇವದಾಸಿಯರ ಪದ್ಧತಿ ಕ್ರೈಸ್ತಮತವು ಗ್ರೀಸಿನಲ್ಲಿ ನೆಲೆಸಿದ ಮೇಲೂ ಪ್ರಚಾರದಲ್ಲಿತ್ತು. ಲಿಂಗಸಂಕೇತಗಳುಳ್ಳ ಧ್ವಜಗಳ ಮೆರವಣಿಗೆ ಉತ್ಸವಗಳ ಒಂದು ಅಂಗವಾಗಿತ್ತು. ಪ್ರಖ್ಯಾತ ವೇಶ್ಯೆಯರ ವಿಗ್ರಹಗಳು ಕೂಡ ಸ್ಥಾಪನೆಗೊಂಡಿದ್ದುವು.[೪೪][೪೫] ಲೈಂಗಿಕ ಕ್ರಿಯೆ ದೈವಿಕವಾದದ್ದು. ಅದರ ಮೂಲಕ ದೇವರ ಸೃಷ್ಟಿಶಕ್ತಿ ಅಭಿವ್ಯಕ್ತವಾಗುತ್ತದೆ ಎಂಬ ಗ್ರೀಕರ ನಂಬಿಕೆ ಇದಕ್ಕೆ ಮುಖ್ಯ ಕಾರಣ.
- ಕ್ರಿ. ಪೂ. 4 ನೆಯ ಶತಮಾನದಲ್ಲಿ ಹುಟ್ಟಿದ ಪ್ರಹಸನಗಳು ಮುಖ್ಯವಾಗಿ ಅರಿಸ್ಟಾಫನೀಸನ ಪ್ರಹಸನಗಳು, ದೇವತೆಗಳನ್ನು, ರುದ್ರದೇವತೆಯಾದ ಡೈಯೊನೈಸಸನನ್ನೂ, ಹಾಸ್ಯಮಾಡಿವೆ. ಹೀಗೆ ಆ ದೇವತೆಯನ್ನು ನಗೆಗೆ ಈಡು ಮಾಡಿದಾಗ ಅದನ್ನು ಕೇವಲ ಒಂದು ವಿನೋದವಾಗಿ ಭಾವಿಸಿದರು. ಅವರಿಗೆ ಆ ದೇವತೆಗಳಲ್ಲಿ ಪ್ರೀತಿ ಕುಗ್ಗಲಿಲ್ಲ. ದೇವತೆಗಳನ್ನು ಕೆಲವು ವೇಳೆ ಹಾಸ್ಯ ಮಾಡುವುದು ಈ ಮುಂಚೆಯೇ ಹೋಮರನಲ್ಲೂ ಕಾಣಬಹುದು. ಅದಕ್ಕೆ ಹರ್ಮಿಸ್ ದೇವತೆಯನ್ನು ಕುರಿತ ಹೋಮರಿನ ಪ್ರಾರ್ಥನೆ ಒಂದು ನಿದರ್ಶನ. ಆರಿಸ್ಟಾಫನೀಸಿಗಿಂತ ಮುಂಚೆ ಎಪಿಚಾರ್ಮೊಸ್ ದೇವತೆಗಳನ್ನು ಕುರಿತು ಹಾಸ್ಯ ಮಾಡಿರುತ್ತಾನೆ. ದೇವತೆಗಳಲ್ಲಿ ಒಂದು ವಿಧವಾದ ಸಲುಗೆಯನ್ನು ತೋರ್ಪಡಿಸುವುದು ಗ್ರೀಕರ ಜಾಯಮಾನ. ಹೀಗೆ ದೇವತೆಗಳನ್ನು ಹಾಸ್ಯ ಮಾಡಿರುವುದರಿಂದ ಅವರು ದೇವತೆಗಳನ್ನು ತಿರಸ್ಕರಿಸಿದರೆಂದು ಭಾವಿಸಕೂಡದು. ಎಲ್ಲ ಪ್ರಹಸನಕಾರರೂ ಈ ರೀತಿ ದೇವತೆಗಳನ್ನು ಹಾಸ್ಯಕ್ಕೆ ಒಳಪಡಿಸಿಲ್ಲ. ಮಿನಾಂಡರ್ ತನ್ನ ಪ್ರಹಸನಗಳಲ್ಲಿ ಉದಾತ್ತ ಭಾವನೆಗಳು ಹುಟ್ಟಿಸುವಂತೆ ದೇವತೆಗಳನ್ನು ಚಿತ್ರಿಸಿರುತ್ತಾನೆ.
- ಕ್ರಿ. ಪೂ. 4 ನೆಯ ಶತಮಾನದ ಉತ್ತರಾರ್ಧದ ವೇಳೆಗೆ ಡೆಲ್ಫಿಯ ರಾಜಕೀಯ ಪ್ರಾಮುಖ್ಯ ಕುಗ್ಗಿತು. ಪಾರಸಿಕರೊಡನೆ ಯುದ್ಧಮಾಡಿದ ಕಾಲದಲ್ಲಿ ಡೆಲ್ಫಿಯ ಪುರೋಹಿತರ ವಂಚನೆಯ ಭವಿಷ್ಯವಾಣಿ ರಾಜಕೀಯ ಮುಖಂಡರಿಗೆ ಡೆಲ್ಫಿಯ ವಾಣಿಯಲ್ಲಿದ್ದ ನಂಬಿಕೆಯನ್ನು ಸಡಿಲಿಸಿತು. ಡೆಮಾಸ್ತೆನೀಸ್ ತನ್ನ ಭಾಷಣಗಳಲ್ಲಿ ಡೆಲ್ಫಿಯನ್ನು ಕುರಿತು ತಿರಸ್ಕಾರದ ಮಾತುಗಳನ್ನಾಡಿದ್ದಾನೆ.
- ಈ ಕಾಲದಲ್ಲಿ ಆಸ್ಕ್ಲಿಪಿಯಸ್ ದೇವತೆಯ ಆರಾಧನೆ ಗ್ರೀಸಿನಲ್ಲಿ ಹರಡಿತು. ನಾಲ್ಕನೆಯ ಶತಮಾನದ ಕೊನೆಯಲ್ಲಿ ಈ ದೇವತೆ ಮತ್ತು ಅವನ ಮೂರು ಹೆಣ್ಣುಮಕ್ಕಳ ಆರಾಧನೆ ಎಪಿಡಾರಸ್ಸಿನಿಂದ ಅಥೆನ್ಸನ್ನು ಪ್ರವೇಶಿಸಿತು. ಆ ದೇವತೆಯ ಪೂಜೆಗೆ ರಾಜಕೀಯ ಮುದ್ರೆ ಬಿತ್ತು. ಅಲ್ಲಿಂದ ಮುಂದೆ ಈ ದೇವತೆಯ ಆರಾಧನೆ ಇಡೀ ಗ್ರೀಸನ್ನು ಆವರಿಸಿತು.
- ಈ ಕಾಲದಲ್ಲಿ ಕೆಲವು ಖಾಸಗಿ ಮತಗಳು ಕಾಣಿಸಿಕೊಂಡವು. ಇವುಗಳ ದೇವತೆ ಪರಕೀಯ ದೇವತೆ. ಕೊಟಿಟ್ಟೋ ದೇವತೆ ಇದಕ್ಕೆ ಒಂದು ಉತ್ತಮ ಉದಾಹರಣೆ. ಈ ಮತಗಳು ಗ್ರೀಸಿಗೆ ದೀಕ್ಷಾಸ್ನಾನ ಸಂಸ್ಕಾರವನ್ನು ತಂದವು. ಕ್ರಿ. ಪೂ. ಆರನೆಯ ಶತಮಾನದಲ್ಲಿ ಹುಟ್ಟಿಕೊಂಡ ಖಾಸಗಿ ಆರ್ಫಿಯಸ್ ಮತ[೪೬][೪೭][೪೮] ಅಲೆಗ್ಸಾಂಡರನ ಕಾಲಕ್ಕೆ ಸ್ವಲ್ಪ ಮುಂಚೆ ಪೂರ್ವ ಗ್ರೀಸಿನಲ್ಲಿ ವಿಶೇಷವಾಗಿ ಹರಡಿತು. ಡೆಮಾಸ್ತೆನೀಸ್ ತನ್ನ ಭಾಷಣಗಳಲ್ಲಿ ಆರ್ಫಿಯಸ್ಸನ್ನು ಹೆಲನರ ಉದಾತ್ತ ಮತಪ್ರಚಾರಾಚಾರ್ಯನೆಂದು ಪ್ರಶಂಸಿಸಿರುತ್ತಾನೆ.
- ಹೀಗೆ ಖಾಸಗಿ ಮತಗಳು ಬೆಳೆದುವಾದರೂ ಕ್ರಿ. ಪೂ. 4 ನೆಯ ಶತಮಾನದ ಪೂರ್ವಾರ್ಧದಲ್ಲಿ ಸಾರ್ವಜನಿಕ ರಾಷ್ಟ್ರೀಯ ಮತ ಕ್ಷೀಣಗೊಂಡಿತೆಂದು ಭಾವಿಸಲಾಗುವುದಿಲ್ಲ. ಪುನರುತ್ಥಾನಗೊಂಡ ಪ್ರಜಾಪ್ರಭುತ್ವ ರಾಷ್ಟ್ರೀಯ ಮತವನ್ನು ಖಂಡಿಸಿದ ಪಾಷಂಡಿಗಳನ್ನು ಬಲವಾಗಿ ಶಿಕ್ಷಿಸಿತು. ಸಾಕ್ರಟೀಸನಿಗೆ ಮರಣದಂಡನೆಯನ್ನು ವಿಧಿಸಿದ್ದಕ್ಕೆ[೪೯] ಅವನು ಪಾಷಂಡಿ ಎಂಬುದು ಒಂದು ಮುಖ್ಯ ಕಾರಣ.[೫೦]
- ಈ ಕಾಲದಲ್ಲಿ ಫೀಡಿಯಸ್ಸನ ಅನುಯಾಯಿಗಳು ಹೊಸ ಸಾರ್ವಜನಿಕ ದೇವತೆಗಳ ವಿಗ್ರಹಗಳನ್ನು ಸೃಷ್ಟಿಸಿದರು. ಸಾಕ್ಸಿಟಿಲೀಸ್ ಸೃಷ್ಟಿಸಿದ ಡೆಮಿಟರ್ ದೇವತೆಯ ವಿಗ್ರಹ ಅತ್ಯಂತ ಪರಿಪೂರ್ಣವಾದದ್ದು. ಈ ಕಾಲದಲ್ಲಿ ಅಥೆನ್ಸಿನ ಪ್ರಜೆಗಳು ಶಾಂತಿಗಾಗಿ ಹಾತೊರೆಯುತ್ತಿದ್ದರು. ಶಾಂತಿದೇವತೆಯ ವಿಗ್ರಹ ಬಹು ಜನಪ್ರಿಯವಾಯಿತು.[೫೧]
- ಈ ಕಾಲದ ಮಹಾವ್ಯಕ್ತಿಗಳಲ್ಲಿ ಸಾಕ್ರಟೀಸನ್ನು ಬಿಟ್ಟರೆ ಪ್ಲೇಟೋ ಲೋಕಪ್ರಸಿದ್ಧನಾದವ. ಇವನ ಸಂವಾದಗಳಲ್ಲಿ ಗ್ರೀಕ್ ತತ್ತ್ವ ಮುಗಿಲನ್ನು ಮುಟ್ಟಿದೆ. ಪ್ಲೇಟೋ ಸಾಕ್ರಟೀಸನ ಶಿಷ್ಯ. ಸಾಕ್ರಟೀಸನ ಉದಾತ್ತ ಭಾವನೆಗಳನ್ನು ಮನಮುಟ್ಟುವಂತೆ ಚಿತ್ರಿಸಿರುತ್ತಾರೆ. ಪ್ಲೇಟೊವಿನ ಮೊದಲ ಸಂವಾದಗಳಲ್ಲಿ, ದೇವತೆಗಳ ಅಶ್ಲೀಲ ವರ್ತನೆಯನ್ನು ಖಂಡಿಸಿರುತ್ತಾನಾದರೂ ಆತ ಗ್ರೀಕ್ ಜನತೆಯ ಶ್ರೇಯಸ್ಸಿಗೆ ಅವರ ಸಾಂಪ್ರದಾಯಕ ಮತ ತುಂಬ ಅಗತ್ಯವೆಂದು ಮನಗಂಡಿದ್ದ. ಆ ಸಾಂಪ್ರದಾಯಿಕ ಮತ ಸುಧಾರಣೆ ಹೊಂದಬೇಕೆಂದು ಅಷ್ಟೇ ಬಲವಾಗಿ ನಂಬಿದ್ದ. ತನ್ನ ಕೊನೆಯ ಸಂವಾದಗಳಲ್ಲಿ ಆತ ಅತಿ ದೊಡ್ಡದಾದ ಲಾಸ್ ಎಂಬ ಸಂವಾದದಲ್ಲಿ ಸುಧಾರಣೆ ಹೊಂದಿದ ರಾಷ್ಟ್ರೀಯ ಮತಕ್ಕೆ ಬೆಂಬಲ ಕೊಟ್ಟಿರುತ್ತಾನೆ. ಆದರೆ ಪ್ಲೇಟೊ ಮುಖ್ಯವಾಗಿ ತಾತ್ತ್ವಿಕನೆಂಬುದನ್ನು ಮರೆಯಕೂಡದು. ದೈವ ಮತ್ತು ಅಮೃತತ್ವಗಳನ್ನು ಕುರಿತ ಅವನ ಟಮಿಯನ್ ಎಂಬ ಸಂವಾದದಲ್ಲಿ ಇಂಥ ಚೇತನರೂಪವಾದ ಅಮೂರ್ತ ದೈವವನ್ನೇ ಪರಮವಾಗಿ ಗಣಿಸಿರುತ್ತಾನೆ. ಆದಕ್ಕೆ ಪ್ರಥಮಸ್ಥಾನ. ಅದಕ್ಕಿಂತ ಕೆಳಮಟ್ಟದವು, ಸೂರ್ಯ ಮುಂತಾದ ಗ್ರಹಗಳು. ಗ್ರೀಕರ ಸಾಂಪ್ರದಾಯಿಕ ದೇವವೃಂದಕ್ಕೆ ಪ್ಲೇಟೊ ಮೂರನೆಯ ಅಥವಾ ಕೆಳಗಿನ ಸ್ಥಾನವನ್ನು ಕೊಟ್ಟಿರುತ್ತಾನೆ. ಹುಟ್ಟಿಲ್ಲದ ಪರಮಚೇತನವೇ ಪರಿಪೂರ್ಣವಾದ ದೈವ. ಅಂಥ ಪರಿಪೂರ್ಣ ದೈವವೊಂದೇ ಅಮೃತವಾದದ್ದು. ಮಾನವನಲ್ಲಿ ಆ ಚೇತನಾಂಶವಿರುವುದರಿಂದ ಮಾನವನ ಆತ್ಮ ಈ ದೇಹ ಬಿದ್ದುಹೋದಮೇಲೆ ಅಳಿಯದೆ ಉಳಿಯುತ್ತದೆ. ಪ್ಲೇಟೊವಿನ ಪರಮಚೇತನ ಭಾವನೆ ಮತ್ತು ಅಮೃತತ್ವ ಭಾವನೆ ಉಪನಿಷತ್ತಿನ ಭಾವನೆಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಪ್ಲೇಟೊನ ಪ್ಲೊಟೈನಸ್ನ ತತ್ತ್ವ ಉಪನಿಷತ್ ತತ್ತ್ವವನ್ನೂ ಇನ್ನೂ ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಅನುಯಾಯಿಯಾದ ಪ್ಲೇಟೊಗೆ ಭಾರತದ ತತ್ತ್ವಜಿಜ್ಞಾಸೆಯ ಪರಿಚಯವಿತ್ತೆಂದು ಹೇಳಲಾಗುವುದಿಲ್ಲ. ಆದರೆ ಅವನಿಗಿಂತ ಹಿರಿಯನಾದ ಪೈಥಾಗೊರಸ್ಸನಿಗೆ ಬ್ರಾಹ್ಮಣರ ಮತದ ಪರಿಚಯವಿತ್ತೆಂದು ಆತನ ಜೀವನ ಚರಿತ್ರೆಯನ್ನು ಬರೆದ ಐಯಾಂಬ್ಲಿಕಸ್ ಹೇಳಿರುತ್ತಾರೆ.
ಗ್ರೀಕ್ ಮತದ ನಾಲ್ಕನೆಯ ಅವಧಿ
[ಬದಲಾಯಿಸಿ]ಕ್ರಿ.ಪೂ. 350 ರಲ್ಲಿ ಮ್ಯಾಸಿಡೋನಿಯ ಸಾಮ್ರಾಜ್ಯ ಸ್ಥಾಪನೆಯಾದಾಗ ಗ್ರೀಕ್ ಮತದಲ್ಲಿ ಮಹತ್ತರ ಬದಲಾವಣೆಗಳು ಉಂಟಾದವು. ಗ್ರೀಕರ ಸಾಂಪ್ರದಾಯಿಕ ಮತ ಕ್ಷೀಣಗೊಂಡಿತು. ಅಥೆನ್ಸಿನಲ್ಲಿ ಅಥೆನಾಳ ಪ್ರಾಬಲ್ಯ ಕುಗ್ಗಿತು. ಪರಕೀಯರ ಮತಭಾವನೆಗಳು ಗ್ರೀಸಿಗೆ ಪ್ರವೇಶಿಸಿದವು. ಈ ಕಾಲದಲ್ಲಿ ಮತಭಾವನೆ ರಾಜಕೀಜಯ ಎಲ್ಲೆಗಳನ್ನು ಮೀರಿ ವಿಶ್ವವ್ಯಾಪಕವಾದ ದೈವದೊಡನೆ ಆಂತರಿಕವಾಗಿ ಮಿಳನವಾಗಬೇಕೆಂಬ ಆಕಾಂಕ್ಷೆ ಬಲವಾಯಿತು. ಗ್ರೀಕರ ಮೇಲೆ ಪೂರ್ವದೇಶಗಳ ಮತಗಳು ಪ್ರಭಾವ ಬೀರಿದವು. ಪೂರ್ವಪಶ್ಚಿಮಗಳ ಮಿಳನವನ್ನೇರ್ಪಡಿಸಬೇಕೆಂಬುದು ಅಲೆಗ್ಸಾಂಡರನ ಮಹದಾಶಯವಾಗಿತ್ತು. ಪರಕೀಯರನ್ನು ಆಹ್ವಾನಿಸಿ ಅವರ ನೇತೃತ್ವದಲ್ಲಿ ದೈವದೊಡನೆ ಆತ್ಮೀಯ ಸಂಪರ್ಕ ಬೆಳೆಸಿಕೊಳ್ಳಲು ಗೂಢಭ್ರಾತೃವೃಂದಗಳು ಹುಟ್ಟಿಕೊಂಡವು.
- ಮೀನಾಂಡರನ ಕವಿತೆಗಳ ಸಂಪುಟದಲ್ಲಿ ಮಾನವನ ವಿಚಾರವಾಗಿ ಉದಾರ ಭಾವನೆ ಕಂಡುಬರುತ್ತದೆ. ಒಳ್ಳೆಯವನಾದ ಮನುಷ್ಯ ಎಲ್ಲಿಯವನಾಗಲಿ ಅವನು ಪರಕೀಯನೆಂಬ ಭಾವನೆ ನನಗೆ ಇಲ್ಲ; ಎಲ್ಲರ ನೈಜ ಸ್ವಭಾವ ಒಂದೇ ಎಂಬುದು ಅವನ ವಾಕ್ಯಗಳಲ್ಲಿ ಒಂದು. ಅವನ ಕವಿತೆಗಳಲ್ಲಿ ಕ್ರೈಸ್ತರ ಹೊಸ ಒಡಂಬಡಿಕೆಯ ಕೆಲವು ಭಾವನೆಗಳು ಕ್ರೈಸ್ತಮತ ಹುಟ್ಟುವುದಕ್ಕೆ ಮುಂಚೆಯೇ ಮೂಡಿಬಂದಿದೆ. ಅರ್ಪಣೆ ನಾವು ದೇವರ ಅನುಗ್ರಹ ಪಡೆಯಲು ಕೊಟ್ಟ ಲಂಚವಲ್ಲ. ಅದು ನಮ್ಮ ಪ್ರೀತಿಯ ಕಾಣಿಕೆ ಎಂಬುದು ಅವನ ಇನ್ನೊಂದು ವಾಕ್ಯ. ದೈವ ಚೇತನ ಸ್ವರೂಪ, ಅದನ್ನು ಧ್ಯಾನದಿಂದ ಸಾಕ್ಷಾತ್ಕಾರಮಾಡಿಕೊಳ್ಳಬೇಕಾದ ವಿಷಯ; ದೈವ ಪ್ರತಿಯೊಬ್ಬನ ಅಂತರಂಗದಲ್ಲೂ ಅವನು ಹುಟ್ಟಿದಂದಿನಿಂದ ಅವನ ಮಾರ್ಗದರ್ಶಕನಾಗಿ ಇರುತ್ತದೆ ಎಂಬ ಭಾವನೆ ಅವನ ಕೃತಿಗಳ ಉಳಿಕೆಯಲ್ಲಿ ಕಂಡುಬರುವ ಭಾವನೆಗಳು.
- ವಿವಿಧ ಮತಗಳ ಸಮನ್ವಯ ಈ ಕಾಲದ ಮತದ ಒಂದು ಅಂಶ. ಈಜಿಪ್ಟ್, ಸಿರಿಯಾ ಮತ್ತು ಗ್ರೀಕ್ ದೇವತೆಗಳು ಒಂದೇ ಎಂದು ಭಾವಿಸಿ ಅವರೆಲ್ಲರ ಹೆಸರಿನಲ್ಲೂ ಪೂಜೆಯನ್ನು ಅರ್ಪಿಸುವುದು ಮೊದಲಾಯಿತು. ಪೂರ್ವ ದೇಶಗಳ ದೇವತೆಗಳನ್ನು ಜ಼್ಯೂಸ್ ಎಂದು ಕರೆಯುವುದು ವಾಡಿಕೆಯಾಯಿತು. ಜ಼್ಯೂಸ್ ಎಂಬ ಪದವನ್ನು ಆಂಶಿಕ ನಾಮವಾಗಿ ಬಳಸುವುದು ತಪ್ಪಿ ಸರ್ವನಾಮವಾಗಿ ಬಳಸುವುದು ಸಾಮಾನ್ಯವಾಯಿತು. ದೈವದ ಸ್ವರೂಪ ಒಂದೇ ಆದುದರಿಂದ ನಾಮಭೇದಗಳಿಗೆ ಎಡೆ ಇಲ್ಲ ಎಂಬುದು ವರ್ರೊ ಎಂಬುವನ ಮುಖ್ಯ ಭಾವನೆ. ಕ್ರಿ. ಪೂ. 3 ನೆಯ ಶತಮಾನದ ಅರಾಟಸಿನ ಈ ವಾಕ್ಯ ಗಮನಾರ್ಹವಾದದ್ದು - ಎಲ್ಲ ಪಂಥಗಳೂ ದೈವಭಾವನೆಯಿಂದ ತುಂಬಿವೆ. ಜನ ಸೇರುವ ಎಲ್ಲ ಸ್ಥಳಗಳಲ್ಲೂ, ಬಂದರುಗಳಲ್ಲೂ ನಮಗೆ ದೇವರ ಕೃಪೆ ಅಗತ್ಯ. ಎಲ್ಲ ಕಾಲಗಳಲ್ಲೂ ನಾವೆಲ್ಲರೂ ದೈವದ ಬಳಗ.
- ಮುಕ್ತಾತ್ಮ ದೈವಿಕವಾದದ್ದು, ಎಂಬ ಭಾವನೆ ಮಾತ್ರ ಮೊದಲಿಗೆ ಗ್ರೀಕ್ ಮತದ ನಾಲ್ಕನೆಯ ಅವಧಿಯಲ್ಲಿ ಕಾಣಿಸಿಕೊಂಡಿತು. ಅಥೆನ್ಸಿನ ಜನ ಅಲೆಗ್ಸಾಂಡರನನ್ನು ದೈವದ ಅಂತಸ್ತಿಗೆ ಏರಿಸಿದರು. ಟಾಲಿಮಿ ವಂಶದ ದೊರೆಗಳಿಗೆ ಅವರ ಮರಣಾನಂತರ ಪೂಜೆ ಸಲ್ಲುತ್ತಿತ್ತು. ರೊಸೆಟ್ಟ ಶಿಲಾಶಾಸನ ಟಾಲಿಮಿ ಸಶರೀರ ದೇವರು ಎಂದು ಘೋಷಿಸುತ್ತದೆ.
- ಗ್ರೀಕ್ ದೇವತೆಗಳನ್ನು ರಾಷ್ಟ್ರ ಗೌರವಿಸಬೇಕೆಂದು ಅರಿಸ್ಟಾಟಲ್ ಹೇಳಿರುತ್ತಾನಾದರೂ ತಾತ್ತ್ವಿಕ ನಿಟ್ಟಿನಿಂದ ಅವನು ಅವರಿಗೆ ಬೆಲೆ ಕೊಡಲಿಲ್ಲ. ತಾತ್ತ್ವಿಕ ದೃಷ್ಟಿಯಿಂದ ಪರಿಪೂರ್ಣವಾದ ದೈವ ಒಂದೇ. ಅದು ಆರಾಧನೆಯ ವಿಷಯವಲ್ಲ; ತತ್ತ್ವಾವಲೀಕನ ವಿಷಯ. ಇವನ ಏಕೀಶ್ವರ ಭಾವನೆ ಗ್ರೀಕರ ಮೇಲೆ ಪ್ರಭಾವ ಬೀರಲಿಲ್ಲ. ಆದರೆ ಯೂರೋಪಿನ ಮಧ್ಯಯುಗದಲ್ಲಿ ಸೇಂಟ್ ಥಾಮಸ್ ಅರಿಸ್ಟಾಟಲನ ತತ್ತ್ವವನ್ನು ಕ್ರೈಸ್ತಮತ ತತ್ತ್ವಕ್ಕೆ ಒಂದು ಪ್ರಬಲ ಆಧಾರವಾಗಿ ಮಾಡಿಕೊಂಡ.
- ಗ್ರೀಕ್ ಮತ ಕ್ಷೀಣಗೊಳ್ಳುವುದಕ್ಕೆ ಕಾರಣವಾದ ತಾತ್ತ್ವಿಕರಲ್ಲಿ ಸಿನಿಕರು ಮುಖ್ಯರು. ಇವರು ಗ್ರೀಕ್ ಮತದ ತೀವ್ರ ವಿರೋಧಿಗಳು. ಇವರ ಮುಖಂಡರಾದ ಡಯೋಜನೀಸ್ ಮತ್ತು ಆಂಟಿಸ್ಥೆನೀಸರು ಗ್ರೀಕ್ ದೇವತೆಗಳನ್ನು ಕುರಿತು ತಿರಸ್ಕಾರದ ಮಾತುಗಳನ್ನಾಡಿರುತ್ತಾರೆ. ಕ್ರಿ. ಪೂ. 3 ನೆಯ ಶತಮಾನದ ಸಿನಿಕ್ ತಾತ್ತ್ವಿಕ ಕೆರ್ಕಿಡಾಸ್ ದೇವತೆಗಳನ್ನು ವಿಧಿಯ ಕೈಗೊಂಬೆಗಳೆಂದು ಕರೆದಿರುತ್ತಾನೆ.
- ಎಪಿಕ್ಯೂರಸ್ ಮತ್ತು ಅವನ ಅನುಯಾಯಿಗಳು ನಿರೀಶ್ವರವಾದಿಗಳು. ಅದಕ್ಕಿಂತ ಹೆಚ್ಚಾಗಿ ಇವರು ಇಂದ್ರಿಯಸುಖವೇ ಜೀವನದ ಪರಮಗುರಿಯೆಂದು ವಾದಿಸಿದವರು. ದೇವತೆಗಳು ಮಾನವರ ಸುಖದುಃಖಗಳ ಕಡೆಗೆ ಬೆನ್ನು ತಿರುಗಿಸಿ ಉದಾಸೀನರಾಗಿರುತ್ತಾರೆಂದು ಅವರನ್ನು ಇವರು ಆಕ್ಷೇಪಿಸಿರುತ್ತಾರೆ.
- ಮತದೃಷ್ಟಿಯಿಂದ ಗ್ರೀಕರ ಮೇಲೆ ಮತ್ತು ರೋಮನ್ನರ ಮೇಲೆ ಸ್ಟೋಯಿಕ್ಕರ ಪ್ರಭಾವ ಅತಿಶಯವಾದದ್ದು. ಈ ಪಂಥದ ಮೂಲಪುರುಷ ಜ಼ೀನೊ (366 - 264).[೫೨] ತರುವಾಯ ಅದನ್ನು ಬೆಳೆಸಿದವ ಕ್ರಿಸಿಪಸ್. ಅಥೆನ್ಸಿನಲ್ಲಿ ಇವರ ಪ್ರಚಾರ ಕೇಂದ್ರಕ್ಕೆ ಸ್ಟೋವಾ ಎಂದು ಹೆಸರು. ಹುಟ್ಟಿದ ಪ್ರಥಮ ಅವಧಿಯಲ್ಲಿ ಆ ಪಂಥ ವಿಶ್ವದೇವೈಕ್ಯವಾದವಾಗಿತ್ತು. ಅನಂತರ ಅದು ಏಕೀಶ್ವರ ಭಾವನೆಯಲ್ಲಿ ಕೊನೆಗೊಂಡಿತು. ದೈವ ಅಂತರ್ಯಾಮಿ ಮತ್ತು ಅತೀತ ಎಂಬ ಭಾವನೆ ಕ್ಲಿಯಾಂಥೀಸನ (331 - 232) ಸ್ತೋತ್ರದಲ್ಲಿ ಎದ್ದು ಕಾಣುತ್ತದೆ. ಸ್ಟೋಯಿಕ್ ಮತದಲ್ಲಿ ಮೊಟ್ಟಮೊದಲಿಗೆ ವಿಶ್ವ ಮತ ಭಾವನೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಮಾನವರೆಲ್ಲ ಸೋದರರು ಎಂಬುದು ಈ ಮತದ ಮೂಲಭಾವನೆ. ಮಾನವನಲ್ಲಿ ದೈವಾಂಶವಿದೆಯಾದ್ದರಿಂದ ಆತ್ಮಕ್ಕೆ ಮರಣವಿಲ್ಲ. ಇಂದ್ರಿಯಗಳ ಮೋಹಪಾಶದಿಂದ ಬಿಡುಗಡೆ ಹೊಂದಿ ಸಹಜಪ್ರಜ್ಞೆಯ ನಿಯಮಾನುಸಾರವಾಗಿ ಬಾಳುವುದೇ ವಿವೇಕದ ದಾರಿ.
- ಸ್ಟೋಯಿಕ್ ಮತತತ್ತ್ವ ಸ್ವಲ್ಪ ಕಾಲದಲ್ಲಿ ಗ್ರೀಸಿನಿಂದ ರೋಮಿಗೆ ಹಬ್ಬಿತು. ಅದರ ಮುಖ್ಯ ತತ್ತ್ವಗಳಲ್ಲಿ ಕೆಲವನ್ನು ಕ್ರೈಸ್ತರು ಒಪ್ಪಿಕೊಂಡರು. ಕ್ರಿ. ಶ. ನಾಲ್ಕನೆಯ ಮತ್ತು ಐದನೆಯ ಶತಮಾನಗಳಲ್ಲಿ ಕ್ರೈಸ್ತ ಸಂತರು ಸ್ಟೋಯಿಕ್ ತತ್ತ್ವವನ್ನು ತಮ್ಮ ಮತಬೋಧೆಗೂ ಉಪಯೋಗಿಸಿಕೊಂಡರು. ಸಿಸಿರೋ ಎಂಬ ರೋಮನ್ ತಾತ್ತ್ವಿಕ ಸ್ಟೋಯಿಕ್ ಮತವನ್ನು ಡಿ ಅಫಿಸೈಸ್ ಎಂಬ ಗ್ರಂಥದಲ್ಲಿ ಸಾರವತ್ತಾಗಿ ವರ್ಣಿಸಿರುತ್ತಾನೆ.[೫೩][೫೪] ಸೇಂಟ್ ಆಂಬ್ರೋಸ್ ಅದೇ ಹೆಸರಿನ ಗ್ರಂಥದಲ್ಲಿನ ಸ್ಟೋಯಿಕ್ ಮತದ ಅಂಶಗಳನ್ನು ಕ್ರೈಸ್ತಮತ ಪ್ರಚಾರಕ್ಕೆ ಬಳಸಿಕೊಂಡಿರುತ್ತಾನೆ. ಸ್ಟೋಯಿಕ್ ತತ್ತ್ವ ಪ್ರತಿಪಾದಕರಲ್ಲಿ ಮಾರ್ಕಸ್ ಆರಿಲಿಯಸ್ ಸುಪ್ರಸಿದ್ಧನಾದವ. ಸ್ಟೋಯಿಕ್ ಮತಕ್ಕೂ, ಕ್ರೈಸ್ತಮತಕ್ಕೂ ಇರುವ ಸಾಮ್ಯವನ್ನು ಕಿ. ಶ. 65 ರಲ್ಲಿ ಸಿನೆಕ ಬರೆದ ಈ ವಾಕ್ಯಗಳು ಸ್ಪಷ್ಟಪಡಿಸುತ್ತವೆ.
- ದೈವಿಕ ಭಾವನೆ ಇಲ್ಲದ ಜೀವನ ಮಂಗಳಕರವಾಗಲಾರದು. ದೇವರು ಮಂಗಳಕರನಾದವನಾದುದರಿಂದ ಈ ವಿಶ್ವವನ್ನು ಸೃಷ್ಟಿಸಿದ. ಮಂಗಳಕರವಾದ ದೈವ ಒಳ್ಳೆಯವರಿಗೆ ಹಿತವಾದುದನ್ನು ಕೊಡಲು ಹಿಂಜರಿಯುವುದಿಲ್ಲ. ಆದ್ದರಿಂದ ಎಲ್ಲವನ್ನೂ ಅತ್ಯುತ್ತಮವಾಗಿ ಮಾಡಿದ ದೇವರು ಒಳ್ಳೆಯವರನ್ನು ತಂದೆಯಂತೆ ಪ್ರೀತಿಸುತ್ತಾನೆ. ಅವರಿಗೆ ಕಷ್ಟ ಸನ್ನಿವೇಶಗಳನ್ನು ಅವನು ಕಲ್ಪಿಸುವುದು ಅವರ ಬಲ ಬೆಳೆಯಲೆಂದು. ನಮ್ಮೆಲ್ಲರೊಳಗೆ ನಮ್ಮ ಹೃದಯಭಾವನೆಗಳ ಪ್ರೇಕ್ಷಕನಾಗಿ ರಕ್ಷಕ ಅಂತರ್ಯಾಮಿಯಾಗಿ ಪವಿತ್ರಾತ್ಮನಿರುತ್ತಾನೆ.
- ಕ್ರಿ. ಶ. 75 ರಲ್ಲಿ ಎಪಿಕ್ಟಿಟಸ್ ಆಡಿದ ಮಾತುಗಳೂ ಕ್ರೈಸ್ತರ ಹೊಸ ಒಡಂಬಡಿಕೆಯ ಮಾತುಗಳಂತಿವೆ. ಒಬ್ಬ ದೇವರಿದ್ದಾನೆ. ಅವನ ಚೇತನ ಈ ವಿಶ್ವವನ್ನು ವ್ಯಾಪಿಸಿದೆ. ಅದು ನಮ್ಮ ಕಾರ್ಯಗಳಲ್ಲಲ್ಲದೆ ನಮ್ಮ ಆಲೋಚನೆಗಳಲ್ಲೂ ಭಾವಗಳಲ್ಲೂ ವಿಕಾಸವಾಗುತ್ತದೆ. ದೇವರು ನಮ್ಮ ಸೃಷ್ಟಿಕರ್ತನೂ, ರಕ್ಷಕನೂ ಆಗಿರುವುದರಿಂದ ಅವನು ನಮ್ಮನ್ನು ಭಯದಿಂದ ವ್ಯಸನದಿಂದ ಬಿಡುಗಡೆ ಮಾಡುವುದಿಲ್ಲವೇ? ನೀನು ನಿನ್ನ ಕೋಣೆಯ ಬಾಗಿಲನ್ನು ಮುಚ್ಚಿ ಕತ್ತಲೆಯಲ್ಲಿ ಕುಳಿತಿರುವಾಗ ನೀನೊಬ್ಬನೇ ಏಕಾಕಿಯಾಗಿರುವುದಾಗಿ ಭಾವಿಸಬೇಡ. ದೇವರು ನಿನ್ನ ಕೋಣೆಯಲ್ಲಿರುತ್ತಾನೆ. ನಿನ್ನ ರಕ್ಷಕನಾಗಿ ಕಾದಿರುತ್ತಾನೆ. ನೀನು ಏನು ಮಾಡುತ್ತಿರುವೆಯೆಂಬುದನ್ನು ನೋಡಲು ಅವನಿಗೆ ದೀವಟಿಗೆಯ ಅಗತ್ಯವಿಲ್ಲ.
- ಹೀಗೆ ಕ್ರೈಸ್ತಮತಕ್ಕೂ, ಸ್ಟೋಯಿಕ್ ಮತಕ್ಕೂ ಸಾಮ್ಯವಿದ್ದರೂ ಕ್ರೈಸ್ತರು ಪ್ರಶಂಸಿಸುವ ಸದ್ಗುಣಗಳಿಗೂ, ಸ್ಟೋಯಿಕ್ ಮತದವರು ಪ್ರಶಂಸಿಸುವ ಸದ್ಗುಣಗಳಿಗೂ ಭೇದವಿದೆ. ಕಾರುಣ್ಯ, ನಮ್ರತೆಗಳಿಗೆ ಕ್ರೈಸ್ತರು ಹೆಚ್ಚು ಪ್ರಾಧಾನ್ಯ ಕೊಡುತ್ತಾರೆ. ಸ್ಟೋಯಿಕ್ರು ಕಾರುಣ್ಯವನ್ನೂ, ನಮ್ರತೆಯನ್ನೂ ಹೃದಯ ದೌರ್ಬಲ್ಯವೆಂದು ಪರಿಗಣಿಸಿರುತ್ತಾರೆ. ಸ್ಟೋಯಿಕ್ಕರು ಕಷ್ಟಸಹಿಷ್ಣುತೆಗೂ, ಧೃತಿಗೂ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುತ್ತಾರೆ. ಆಧುನಿಕ ತಾತ್ತ್ವಿಕರಲ್ಲಿ ಡಾ. ಲಿಪ್ಮನ್ ಸ್ಟೋಯಿಕ್ಕರ ತತ್ತ್ವವನ್ನು ಎತ್ತಿ ಹಿಡಿದಿರುತ್ತಾನೆ.
ಉಪಸಂಹಾರ
[ಬದಲಾಯಿಸಿ]ಕ್ರೈಸ್ತಮತ ಹುಟ್ಟಿದ ಹೊತ್ತಿಗೆ ಗ್ರೀಕರ ಸಾಂಪ್ರದಾಯಿಕ ಮತ ನಾಮಾವಶೇಷವಾಯಿತು. ಅವರ ಸ್ಟೋಯಿಕ್ ಮತ ಕ್ರೈಸ್ತಮತದಲ್ಲಿ ಲೀನವಾಯಿತು. ಕ್ರೈಸ್ತ ಮತದ ಆರಂಭ ಕಾಲದಲ್ಲಿ ಕ್ರೈಸ್ತಮತ ವಿಶೇಷವಾಗಿ ಹರಡಿದ್ದು ಗ್ರೀಕರಲ್ಲಿ. ಕ್ರೈಸ್ತರ ಹೊಸ ಒಡಂಬಡಿಕೆಯನ್ನು ಗ್ರೀಕ್ ಭಾಷೆಯಲ್ಲಿ ಬರೆದಿಟ್ಟರು.[೫೫][೫೬] ಕ್ರೈಸ್ತ ಮೂರ್ತಿಗಳಲ್ಲಿ ಎರಡನೆಯ ಮೂರ್ತಿಯಾದ ಯೇಸುಕ್ರಿಸ್ತನನ್ನು ಗ್ರೀಕರು ಲಾಗಸ್ ಎಂದು ಕರೆದರು.[೫೭] ಕ್ರಿ. ಶ. ನಾಲ್ಕನೆಯ ಶತಮಾನದಲ್ಲಿ ಕ್ರೈಸ್ತಮತವನ್ನು ಗ್ರೀಕರು ರಾಷ್ಟ್ರ ಮತವಾಗಿ ಅಂಗೀಕರಿಸಿದರು. ಆದಿಯಲ್ಲಿ ಗ್ರೀಸಿನಲ್ಲಿ ಸ್ಥಾಪನೆಯಾದ ಕ್ರೈಸ್ತ ಮಂಡಲವೇ ಸಾಂಪ್ರದಾಯಿಕವಾದದ್ದು. ಪಾಶ್ಚಾತ್ಯ ಸುಧಾರಿತ ಕ್ರೈಸ್ತಮಂಡಲಿ ಈ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂಬ ಭಾವನೆ ಕ್ರಿ. ಶ. 9 ನೆಯ ಶತಮಾನದಲ್ಲಿ ಪ್ರಬಲಗೊಂಡು ಅದರ ಮುಂದಿನ ಮತಚರಿತ್ರೆ ಸಂಪೂರ್ಣವಾಗಿ ಕ್ರೈಸ್ತರ ಮತ ಚರಿತ್ರೆಗೆ ಸೇರಿದುದಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Protagoras 342e–343b, trans. R.E. Allen.
- ↑ Siorvanes, Lucas (2018). "Plotinus and Neoplatonism: The Creation of a New Synthesis". In Keyser, Paul T.; Scarborough, John (eds.). Oxford Handbook of Science and Medicine in the Classical World. New York: Oxford University Press. pp. 847–868. doi:10.1093/oxfordhb/9780199734146.013.78. ISBN 9780199734146. LCCN 2017049555.
- ↑ Alexandra is merely an alternative name for Cassandra.
- ↑ Droge (1989), p. 130
- ↑ Nilsson 1967, Volume I, p. 339.
- ↑ Artemis the adviser, Skyris. (related to the family of Skyridai), a form of the mother-goddess: Nilsson, Geschichte, Vol I, p.498 A1
- ↑ βουληφόρος
- ↑ Nagy 1990, p. 143.
- ↑ http://www.cultureandcosmos.org/pdfs/23-1/23-1_de_Martino_goddess_fire.pdf
- ↑ Zeus's main Hindu equivalent is Indra. "Indra | Hindu God of War, Rain & Thunder | Britannica". www.britannica.com (in ಇಂಗ್ಲಿಷ್). 2023-10-23. Retrieved 2023-11-03.
- ↑ "pseudo-Aristotle, De mundo, Aristotelis Opera, Volume 3, Oxford, Bekker, 1837". Archived from the original on 1 October 2022. Retrieved 1 October 2022.
- ↑ H. Collitz, "Wodan, Hermes und Pushan," Festskrift tillägnad Hugo Pipping pȧ hans sextioȧrsdag den 5 November 1924 1924, pp 574–587.
- ↑ Burkert 1985, 2:1:1.
- ↑ To some extent, different animals were thought appropriate for different deities. From bulls for Zeus and Poseidon to doves for Aphrodite. Burkert 1985, 2:1:4
- ↑ Zaidman & Schmitt Pantel 1992, p. 40; Burkert 1985, pp. 72–73.
- ↑ L. H. Jeffery (1976). Archaic Greece: The Greek city states c. 800-500 B.C. (Ernest Benn Limited) p 23 ISBN 0-510-03271-0
- ↑ Pausanias|8.42.1–4
- ↑ Powell, Barry B. (2015). Classical Myth (8th ed.). Boston: Pearson. pp. 177–190. ISBN 978-0-321-96704-6.
- ↑ Burkert 1985, pp. 157–158.
- ↑ Aelian, Characteristics of Animals 10. 26
- ↑ Homer, Iliad
- ↑ Nilsson Vol I, p.285-486
- ↑ Pausanias, 8.41.4–6 (trans. Jones)
- ↑ Joseph William Hewitt, "The Propitiation of Zeus," Harvard Studies in Classical Philology 19 (1908), p. 115.
- ↑ Lewis Richard Farnell, The Cults of the Greek States (Oxford: Clarendon Press, 1896), vol. 1, p. 45.
- ↑ Dillon 2002, p. 114.
- ↑ Pausanias, 8.2.3
- ↑ Thomas McEvilley, The Shape of Ancient Thought, Allsworth press, 2002, pp. 118–121. Google Books preview
- ↑ Reginald Pepys Winnington-Ingram, Sophocles: an interpretation, Cambridge University Press, 1980, p. 109 Google Books preview
- ↑ Zofia H. Archibald, in Gocha R. Tsetskhladze (Ed.) Ancient Greeks west and east, Brill, 1999, pp. 429 ff.Google Books preview
- ↑
Chisholm, Hugh, ed. (1911). . Encyclopædia Britannica. Vol. 1 (11th ed.). Cambridge University Press. p. 800. {{cite encyclopedia}}: Cite has empty unknown parameters:|separator=and|HIDE_PARAMETER=(help) - ↑ Dithurambos, Henry George Liddell, Robert Scott, A Greek-English Lexicon, at Perseus. Dithyrambos seems to have arisen out of the hymn: just as paean was both a hymn to and a title of Apollo, Dithyrambos was an epithet of Dionysos as well as a song in his honour; see Harrison (1922, 436).
- ↑ https://www.penn.museum/sites/expedition/early-greek-idols-re-ocr-last-few-pages/
- ↑ Nafissi 2018, p. 95.
- ↑ Analyses et réflexions sur Gorgias by Luc Brisson, p. 152.
- ↑ https://chs.harvard.edu/chapter/part-iv-beyond-epic16-the-death-of-a-poet/
- ↑ Spivey, 2005, pp.225–226
- ↑ Pausanias, Description of Greece, 5.7.6–9
- ↑ Aristotle, Poetics (1449a10–15): "Anyway, arising from an improvisatory beginning (both tragedy and comedy—tragedy from the leaders of the dithyramb, and comedy from the leaders of the phallic processions which even now continue as a custom in many of our cities), [tragedy] grew little by little, as [the poets] developed whatever [new part] of it had appeared; and, passing through many changes, tragedy came to a halt, since it had attained its own nature"; see Janko (1987, 6).
- ↑ McKirahan 1994, p. 60-62.
- ↑ "Greco-Persian Wars | Definition, Summary, Facts, Effects, & History". Encyclopedia Britannica.
- ↑ Hanson, Victor Davis (18 December 2007). Carnage and Culture: Landmark Battles in the Rise to Western Power (in ಇಂಗ್ಲಿಷ್). Knopf Doubleday Publishing Group. ISBN 978-0-307-42518-8.
- ↑ Herodotus VI, 105
- ↑ Funke 2024, pp. 70–71.
- ↑ Keesling 2006, pp. 66–7.
- ↑ Guthrie 1955, p. 322.
- ↑ Kirk, Raven & Schofield 1983, pp. 21, 30–31.
- ↑ Parker 1995, pp. 485, 497.
- ↑ May 2000, pp. 47–48.
- ↑ May 2000, p. 30, 40.
- ↑ Wünsche, Raimund (2007). Glyptothek, Munich: masterpieces of Greek and Roman sculpture. C. H. Beck. p. 79. ISBN 978-3-406-56508-3.
- ↑ "Stoicism – Internet Encyclopedia of Philosophy". www.iep.utm.edu. Retrieved 19 March 2018.
- ↑ Atkins & Griffin 1991, p. xix
- ↑ Cicero, Miller: On Duty, iii. 23
- ↑ Metzger & Ehrman 2005.
- ↑ Aland, K.; Aland, B. (1995). The Text of the New Testament. Wm. B. Eerdmans Publishing. ISBN 978-0-8028-4098-1.
- ↑ Erwin R. Goodenough, The Theology of Justin Martyr, 1923 (reprint on demand BiblioBazaar, LLC, pp. 139–175. ISBN 1-113-91427-0)
ಗ್ರಂಥಸೂಚಿ
[ಬದಲಾಯಿಸಿ]- Droge, Arthur J. (1989). Homer or Moses?: early Christian interpretations of the history of culture. Tübingen: Mohr Siebeck. ISBN 978-3-16-145354-0.
- Nilsson, Martin Persson (1967). Geschichte der Griechischen Religion (3rd ed.). Munich: C.H. Beck Verlag.
- Nagy, Gregory (1990). Greek Mythology and Poetics. Cornell University Press. ISBN 0-8014-8048-5.
- Burkert, Walter (1985). Greek Religion: Archaic and Classical. Cambridge: Harvard University Press. ISBN 0674362810. Widely regarded as the standard modern account.
- Zaidman, Louise Bruit; Schmitt Pantel, Pauline (1992). Religion in the Ancient Greek City. Translated by Paul Cartledge. Cambridge University Press. ISBN 978-0-521-42357-1.
- Dillon, Matthew (2002). Girls and Women in Classical Greek Religion. London: Routledge. ISBN 0415202728.
- Nafissi, Massimo. "Lykourgos the Spartan "lawgiver": ancient beliefs and modern scholarship". In Powell (2018), pp. 93–123.
- Powell, Anton, ed. (2018). A companion to Sparta. Wiley Blackwell. ISBN 978-1-119-07238-6. LCCN 2017011675. OCLC 981761116.
- Spivey, Nigel (2005). The Ancient Olympics. Oxford, England: Oxford University Press. ISBN 978-0-19-280433-4. Retrieved 12 February 2010.
origins of the ancient olympics.
- McKirahan, Richard D. (1994). "Xenophanes of Colophon". Philosophy Before Socrates: An Introduction with Texts and Commentary (in ಇಂಗ್ಲಿಷ್). Hackett Publishing Company. ISBN 978-0-87220-175-0. Retrieved 13 April 2022.
- Funke, Melissa (2024), Phryne: A Life in Fragments, London: Bloomsbury Academic, ISBN 9781350371873
- Keesling, Catherine (2006), "Heavenly Bodies: Monuments to Prostitutes in Greek Sanctuaries", in Faraone, Christopher; McClure, Laura (eds.), Prostitutes and Courtesans in the Ancient World, Madison: University of Wisconsin Press, pp. 59–76, ISBN 0299213102
- Guthrie, William Keith Chambers (1955). The Greeks and Their Gods. by W.K.C. Guthrie (in ಇಂಗ್ಲಿಷ್). Beacon Press. Retrieved 10 August 2023.
- Kirk, G. S.; Raven, J. E.; Schofield, M. (29 December 1983). The Presocratic Philosophers: A Critical History with a Selection of Texts (in ಇಂಗ್ಲಿಷ್). Cambridge University Press. ISBN 978-0-521-27455-5.
- Parker, Robert (1995). "Early Orphism". In Powell, Anton (ed.). The Greek World (in ಇಂಗ್ಲಿಷ್). Psychology Press. pp. 483–510. ISBN 978-0-415-06031-8. Retrieved 10 August 2023.
- May, Hope (2000). On Socrates. Wadsworth/Thomson Learning. ISBN 978-0-534-57604-2.
- Atkins, E. M.; Griffin, M. T. (1991), Cicero: On Duties (Cambridge Texts in the History of Political Thought), Cambridge University Press
- Metzger, Bruce M.; Ehrman, Bart D. (2005) [1964]. The Text of the New Testament: Its Transmission, Corruption, and Restoration (4th ed.). New York: Oxford University Press. OCLC 1245822346.
ಹೊರಗಿನ ಕೊಂಡಿಗಳು
[ಬದಲಾಯಿಸಿ]
Chisholm, Hugh, ed. (1911). . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters:|separator=and|HIDE_PARAMETER=(help)
