ಧರ್ಮಕೀರ್ತಿ ಸ್ವಾಮೀಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಕ್ಷೇತ್ರ ಶ್ರವಣಬೆಳಗೊಳವನ್ನು ಒಂದು ಮಾದರಿ ಕ್ಷೇತ್ರವಾಗಿ ಮುನ್ನಡೆಸುತ್ತಿರುವ ಶ್ರೀ ಚಾರುಕೀರ್ತಿ ಸ್ವಾಮೀಜಿಯವರ ಗರಡಿಯಲ್ಲಿ ಪಳಗಿದ ಓರ್ವ ಪ್ರತಿಭಾವಂತ ಯುವ ಕ್ಷುಲ್ಲಕ ಸ್ವಾಮೀಜಿಯವರು ಶ್ರೀ ಧರ್ಮಕೀರ್ತಿ ಸ್ವಾಮೀಜಿಯವರು (Dharmakeerthi Swamiji, Shravanabelagola).

ಶ್ರೀ ಕ್ಷೇತ್ರದ ಧಾರ್ಮಿಕ ಪೀಠದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ಶ್ರೀಯುತರು, ಬಾಲ್ಯದಲ್ಲೇ ಧಾರ್ಮಿಕ ಚಟುವಟಿಕೆಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ತೋರಿಸುತ್ತಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು ಇವರಿಗೆ ಕ್ಷುಲ್ಲಕ ದೀಕ್ಷೆಯನ್ನು ನೀಡಿ, ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆಯನ್ನು ನೀಡಿದರು.

ಪ್ರಸ್ತುತ ಶ್ರೀ ಸ್ವಾಮೀಜಿಯವರ ಆದೇಶ ಹಾಗೂ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆಯಲು ಅಧ್ಯಯನವನ್ನು ನಡೆಸುತ್ತಿರುವ ಶ್ರೀಯುತರು ಜೊತೆಗೆ ಜೈನ ಧಾರ್ಮಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬಿಜಾಪುರದ ಶ್ರೀ ಸಹಸ್ರಫಣಿ ಪಾರ್ಶ್ವನಾಥ ಕ್ಷೇತ್ರದ ಉಸ್ತುವಾರಿ ಕಾರ್ಯವನ್ನು ಕೆಲವರ್ಷಗಳ ಕಾಲ ಸಮರ್ಥವಾಗಿ ನಿರ್ವಹಿಸಿದ ಶ್ರೀ ಸ್ವಾಮೀಜಿಯವರು, ಪ್ರಸ್ತುತ ಶ್ರವಣಬೆಳಗೊಳ ಕ್ಷೇತ್ರದಲ್ಲಿ ತಂಗಿದ್ದು, ಪೂಜ್ಯ ಚಾರುಕೀರ್ತಿ ಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ತಮ್ಮ ಉಪಸ್ಥಿತಿ ಹಾಗೂ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ.

ಜೈನ ಧರ್ಮ ಹಾಗೂ ಧರ್ಮದ ಬೆಳವಣಿಗೆಯ ವಿಶಿಷ್ಟವಾದ ಕಲ್ಪನೆಯನ್ನು ಹೊಂದಿರುವ ಶ್ರೀ ಸ್ವಾಮೀಜಿಯವರು ಧರ್ಮದ ರಕ್ಷಣೆಯನ್ನು ಮಾಡಲು ತಮ್ಮದೇ ಆದ ಹೊಂಗನಸುಗಳನ್ನು ಹೊಂದಿದ್ದಾರೆ. ಧರ್ಮ ರಕ್ಷಣೆಯ ಕಾರ್ಯದಲ್ಲಿ ಯುವಜನರ ಪಾತ್ರ ಮತ್ತು ಅವರಲ್ಲಿ ಧರ್ಮದ ಬಗ್ಗೆ ಆಸಕ್ತಿಯನ್ನು ಕೆರಳಿಸುವ ಕುರಿತಂತೆ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಆಸಕ್ತಿಯುತರಾಗಿದ್ದಾರೆ.