ಡಿ. ಸಿ. ಚೌಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ದರ್ಬೆ ಚಂದ್ರಶೇಖರ ಚೌಟ ಇವರು ಓರ್ವ ಕೃಷಿವಿಜ್ಞಾನಿ ಹಾಗೂ ತಳಿವಿಜ್ಞಾನ ಸಂಶೋಧಕ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಇವರ ಹುಟ್ಟೂರು. ಇವರ ತಂದೆಯ ಹೆಸರು ದರ್ಬೆ ಪಟೇಲ್ ನಾರಾಯಣ ಚೌಟ ಹಾಗೂ ತಾಯಿ ಮೋಹಿನಿ ಚೌಟ. ಇವರು ಬಾಂಬೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತಳಿವಿಜ್ಞಾನದ ಜೀವ ವೈವಿಧ್ಯ ಪರಿಸರ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಕೃಷಿ ಅಭಿವೃದ್ಧಿಗಾಗಿ ಬಹುರೂಪಿ ಪ್ರಯೋಗಗಳನ್ನು ಮಾಡಿದ್ದಾರೆ.[೧]

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ಡಿ.ಸಿ. ಚೌಟರವರು ಪ್ರಾಥಮಿಕ ಶಿಕ್ಷಣವನ್ನು ಮೀಯಪದವಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಪಡೆದರು. ಪ‍್ರೌಢ ಶಿಕ್ಷಣವನ್ನು ಕೊಡ್ಲಮೊಗರು ಶ್ರೀವಾಣಿವಿಜಯ ಶಾಲೆಯಲ್ಲಿ ಪಡೆದರು. ೧೯೬೪ರಲ್ಲಿ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಹಾಗೂ ೧೯೬೭ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ನಿಂದ ಸ್ನಾತಕೋತ್ತರ ಪದವಿ ಪಡೆದರು. ತಳಿವಿಜ್ಞಾನ: ಜೀವ ವೈವಿಧ್ಯ ಪರಿಸರ ವಿಷಯದ ಸಂಶೋಧನ ಪ್ರಬಂಧಕ್ಕೆ ಬಾಂಬೆ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ನಿಂದ ಡಾಕ್ಟ್ರೇಟ್ ಪದವಿ(ಪಿಎಚ್.ಡಿ) ಪಡೆದಿದ್ದಾರೆ. ೧೯೬೭ರಿಂದ ೧೯೭೧ರ ವರೆಗೆ ಬಾಂಬೆ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ನಲ್ಲಿ ಗೌರವ ಅಧ್ಯಾಪಕರಾಗಿ ಹಾಗೂ ೧೯೭೧ ರಿಂದ ೧೯೭೮ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಜೀವವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರಾಗಿದ್ದರು.

ಕೃಷಿ ಕ್ಷೇತ್ರದ ಕೊಡುಗೆ[ಬದಲಾಯಿಸಿ]

೧೯೭೮ರಿಂದ ಬೆಂಗಳೂರಿನಲ್ಲಿ ಸಹೋದರರೊಡನೆ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ೧೯೭೮ ರಂದ ೧೯೯೫ ಅಣಬೆ ಕೃಷಿ ಹಾಗೂ ಸಿಹಿ ನೀರಿನ ಮೀನು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕರ್ನಾಟಕದಲ್ಲಿ ಮೊತ್ತಮೊದಲನೆಯದಾಗಿ ಸಿಹಿ ನೀರಿನ ಮೀನು ಸಾಕಣೆಯನ್ನು ಆರಂಭಿಸಿದರು. ಕುಟುಂಬದೊಂದಿಗೆ ಮೀಂಜ ಗ್ರಾಮದಲ್ಲಿ ಕೃಷಿಯನ್ನು ಅಭಿವೃದ್ಧಿ ಪಡೆಸಲು ವಿವಿಧ ಪ್ರಯೋಗಗಳನ್ನು ನಡೆಸಿದ್ದಾರೆ.

ಕೃಷಿ ಪ್ರಯೋಗ[ಬದಲಾಯಿಸಿ]

ಗುಡ್ಡದ ಇಳಿಜಾರಿನಲ್ಲಿ ಮೇಲ್ಮಣ್ಣಿನ ಸಂರಕ್ಷಣೆಯೊಂದಿಗೆ ಅಡಿಕೆ,ತೆಂಗು ಹಾಗೂ ಬಾಳೆ ಕೃಷಿ ಹಾಗೂ ಅಡಿಕೆ, ತೆಂಗು ಲಾಭದಾಯಕವಾಗದ ಕಾಲದಲ್ಲಿ ಎಡೆ ಬೆಳೆಗಳಾದ ಬಾಳೆ, ಕೊಕ್ಕೊ, ಕಾಳುಮೆಣಸಿನ ಕೃಷಿ ಪ್ರಯೋಗಗಳನ್ನು ನಡೆಸಿದ್ದಾರೆ. ಅಡಿಕೆ ಒಣಗಿಸುವ ಅಂಗಳದಲ್ಲಿ ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಸಿದ್ದಾರೆ. ತೆಂಗಿನ ತೋಟದಲ್ಲಿ ಎಡೆ ಬೆಳೆಗಳಾದ ಬಾಲೆ, ರಂಬುಟಾನ್, ಮಾಂಗಸ್ಟೀನ್, ಪಪ್ಪಾಯಿ, ಬೆಣ್ಣೆ ಹಣ್ಣುಗಳನ್ನು ಬೆಳೆಯುವ ಪ್ರಯೋಗಗಳನ್ನು ಮಾಡಿದ್ದಾರೆ. ತೆಂಗಿನ ಗಿಡ್ಡ ತಳಿಗಳನ್ನು ಬೆಳೆದು, ಎಳನೀರಿನ ಕೊಯಿಲನ್ನು ಬೃಹತ್ ಪ್ರಮಾಣದಲ್ಲಿ ಮಾಡಿದ್ದಾರೆ. ಈ ಉಪಕ್ರಮವು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಮನ್ನಣೆ ಪಡೆದಿದೆ. ಕೇರಳದಲ್ಲಿ ಪ್ರಥಮವಾಗಿ ತೆಂಗಿನ ಗಿಡಗಳ ನರ್ಸರಿ (ನ್ಯೂಕ್ಲಿಯಸ್ ಸೀಡ್ ಗಾರ್ಡನ್) ನ್ನು ಸ್ಥಾಪಿಸಿದ್ದಾರೆ. ಚಾವಕ್ಕಾಡ್ ಕೆಂಪು ತಳೆ, ಮಲಯನ್ ಹಳದಿ ತಳಿಯಾದ ಗಂಗಾ ಬೊಂಡಮ್ ನ್ನು ಬೆಳೆಸಿದ್ದಾರೆ. ೧೫೦ ರೈತರನ್ನು ಒಳಗೊಂಡ ಕಾಸರಗೋಡು ಜಿಲ್ಲಾ ವೆನಿಲ್ಲಾ ಬೆಳೆಗಾರರ ಸಂಘವನ್ನು ಕಟ್ಟಿ ವೆನಿಲ್ಲಾ ಸಂಸ್ಕರಣೆ ಮತ್ತು ಮಾರಾಟ ನಡೆಸಲು ಸಹಕರಿಸಿದರು. ಇವರು ಅಖಿಲ ಭಾರತ ವೆನಿಲ್ಲಾ ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿದ್ದರು. ೨೦೦೧ರಲ್ಲಿ 'ಸಮಾಗಮ' ಎಂಬ ಅಡಿಕೆ ಬೆಳೆಗಾರರ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.[೨]

ಕೃಷಿ ಮೇಳ ಹಾಗೂ ಕಾರ್ಯಗಾರ[ಬದಲಾಯಿಸಿ]

  1. ೨೦೦೬ರಲ್ಲಿ ೩ ದಿನಗಳ ಕೃಷಿ ಸಮಾಲೋಚನಾ ಸಭ
  2. ೨೦೧೪ರಲ್ಲಿ ಮೀಯಪದವಿನಲ್ಲಿ ದಕ್ಷಿಣದ ಮೂರು ರಾಜ್ಯಗಳ ಹಣ್ಣು ಬೆಳೆಗಾರರ ಕಾರ್ಯಗಾರ
  3. ಕರಾವಳಿ ಜಿಲ್ಲೆಗಳ ರೈತರಿಗೆ ತರಬೇತಿ ಶಿಬಿರ
  4. ಜಲಸಂರಕ್ಷಣೆ, ಕೊಯಿಲೋತ್ತರ ಸಂಸ್ಕರಣೆ ಕಾರ್ಯಗಾರಗಳು
  5. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಕೃಷಿ ಅಧ್ಯಯನ
  6. ಅಗ್ರಿಕಲ್ಚರ್ ಟೆಕ್ನೋಲೊಜಿ ಮಿಷನ್ ನ ಸಹಕಾರದೊಂದಿಗೆ ವಿಶೇಷ ತರಬೇತಿ, ಇತ್ಯಾದಿ[೩]

ಅಧ್ಯಯನ ಪ್ರವಾಸ[ಬದಲಾಯಿಸಿ]

  • ಹಣ್ಣುಗಳ ಕೃಷಿಯ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಕೃಷಿಕರೊಂದಿಗೆ ಮಲೇಷಿಯ ಮತ್ತು ಥಾಯಿಲೇಂಡ್ ದೇಶಗಳಿಗೆ ಪ್ರವಾಸ
  • ಅಮೇರಿಕಾದ ಟೆಕ್ಸಾಸ್ ಕೃಷಿ ವಿದ್ಯಾಲಯ
  • ಕೆನೆಡಾದ ಮೇಗಿಲ್ಲ್ ವಿಶ್ವವಿದ್ಯಾಲಯದ ಕೃಷಿ ವಿಭಾಗಗಳ ಸಂದರ್ಶನ ಮತ್ತು ಅಧ್ಯಯನ
  • ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಬರೇಟಮ್ ಮತ್ತು ಹೆರ್ಬೇರಿಯಮ್ ಸಂದರ್ಶನ
  • ಭಾರತದ ಕೃಷಿ ವಿದ್ಯಾಲಯಗಳ ಸಂದರ್ಶನ

ಪ್ರಶಸ್ತಿ ಪುರಸ್ಕಾರ[ಬದಲಾಯಿಸಿ]

  1. `ಐಸಿರಿ'- ಕೃಷಿಕ ಪ್ರಶಸ್ತಿ (೨೦೦೭)
  2. ನಾಡ ಚೇತನ ಪ್ರಶಸ್ತಿ, (೨೦೦೭)
  3. ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಗಾಂಧಿಯನ್ ಸ್ಟಡೀಸ್ ಪುರಸ್ಕಾರ, (೨೦೦೮)
  4. ಉತ್ತಮ ತೆಂಗು ಬೆಳೆಗಾರ ಪ್ರಶಸ್ತಿ, (೨೦೧೦)
  5. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, (೨೦೧೪)
  6. ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯ ವಷ‍ದ ಅನ್ವೇಷಕ ಪ್ರಶಸ್ತಿ, (೨೦೧೪)
  7. ಆಳ್ವಾಸ್ ನುಡಿಸಿರಿ ಪ್ರಶಸ್ತಿ[೪][೫]

ಉಲ್ಲೇಖ[ಬದಲಾಯಿಸಿ]

  1. ವಾರ್ತಭಾರತಿ ಪತ್ರಿಕೆಯ ಲೇಖನ
  2. http://hasirumatu.blogspot.com/2011/12/
  3. ಉದಯವಾಣಿ ವರದಿ
  4. http://m.varthabharati.in/article/2016_11_09/47835
  5. https://www.prajavani.net/awards-ceremony-553212.html