ಜೂಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾನ್ಯ ದಾಳಗಳು
ಅಂಧ ರಾಜ ಧೃತರಾಷ್ಟ್ರ ಕುರುಕ್ಷೇತ್ರ ಯುದ್ಧದ ವಿವರಗಳನ್ನು ದಿವ್ಯದೃಷ್ಟಿ ಹೊಂದಿದ್ದ್ದ ಸಂಜಯನಿಂದ ತಿಳಿದುಕೊಳ್ಳುತ್ತಿರುವುದು

ಜೂಜು - ಯಾವುದೇ ಆಟದ, ಪಂದ್ಯದ ಅಥವಾ ಅನಿಶ್ಚಿತ ಘಟನೆಯ ಯಾದೃಚ್ಛಿಕ ಫಲಿತಾಂಶದ ಬಗ್ಗೆ, ನಷ್ಟಸಂಭವದ ಅರಿವಿನಿಂದ ಮತ್ತು ಲಾಭ ಬರಬಹುದೆಂಬ ಆಶೆಯಿಂದ, ಮೂಲ್ಯವುಳ್ಳ ಏನನ್ನಾದರೂ ಪಣ ಹೂಡುವುದು (ಗ್ಯಾಂಬ್ಲಿಂಗ್). ಕವಡೆ, ಲೆತ್ತ, ಕಾರ್ಡು(ಎಲೆ), ಸಂಖ್ಯೆ, ಕುದುರೆ ಪಂದ್ಯ, ಕ್ರೀಡೆ ಮುಂತಾದ ಯಾವುದೂ ಇದಕ್ಕೆ ಸಾಧನವಾಗಬಹುದು. ಭವಿಷ್ಯದ ಸಂಭವಗಳನ್ನೂ ಜೂಜಾಟದ ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು.

ಲಕ್ಷಣ[ಬದಲಾಯಿಸಿ]

ಪಣವಿಡುವುದು ಹಾಗೂ ತನ್ಮೂಲಕ ಲಾಭ ಅಥವಾ ಹಾನಿ-ಇವು ಇದರ ಮುಖ್ಯ ಲಕ್ಷಣಗಳು. ಇವು ಇಲ್ಲದವು ಜೂಜು ಎನಿಸುವುದಿಲ್ಲ. ಬುದ್ಧಿಗಮ್ಯವಾದ ಆಟಗಳು ಜೂಜಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಭಾರಿ ಮೊತ್ತದ ಬಹುಮಾನ ದೊರೆಯುವುದೆಂದು ಟಿಕೆಟ್ಟನ್ನು ಕೊಳ್ಳುವುದು ಜೂಜು. ಆದರೆ ಅಂಥ ಟಿಕೆಟ್ಟನ್ನು ಮಾರುವುದು ಜೂಜು ಅಲ್ಲ. ಏಕೆಂದರೆ ಟಿಕೆಟ್ಟು ಮಾರುವವನಿಗೆ ಅನಿಶ್ಚಿತತೆಯ ಅಪಾಯದ ಹೆದರಿಕೆ ಇಲ್ಲ. ದಾನೋದ್ದೇಶದಿಂದ ನೀಡಲಾದ ಲಾಟರಿ ಟಿಕೆಟ್ಟನ್ನು ಕೊಳ್ಳುವುದು ಜೂಜಲ್ಲ. ಏಕೆಂದರೆ ಅದಕ್ಕೆ ಪ್ರೇರಣೆ ಲಾಭವಲ್ಲ. ಒಬ್ಬ ತನ್ನ ಮತ್ತು ತನ್ನ ಕುಟುಂಬದ ಉಪಯೋಗಕ್ಕಾಗಿ ಮನೆ ಕೊಂಡರೆ ಅದು ಜೂಜಲ್ಲ. ಭವಿಷ್ಯದಲ್ಲಿ ಅದರ ಬೆಲೆ ಇಳಿದು ನಷ್ಟ ಸಂಭವಿಸಬಹುದಾದರೂ ಆಗಬಹುದಾದ ನಷ್ಟದ ತಿಳಿವಳಿಕೆಯಿಂದ ಅವನು ಅದನ್ನು ಕೊಳ್ಳುವುದಿಲ್ಲ. ಸಣ್ಣ ನಾಣ್ಯವೊಂದರ ಪಣ ಇಡುವ ಶ್ರೀಮಂತನಿಗೆ ಅದು ಜೂಜಲ್ಲ; ಆದರೆ ಬಡವನಿಗೆ ಅದೇ ದೊಡ್ಡದಾದ್ದರಿಂದ ಅವನಿಗೆ ಅದು ಜೂಜು. ಕೇವಲ ಬುದ್ಧಿ ಬಳಕೆಯ ಆಟ ಜೂಜಾಗದು. ಆದರೆ ಹೆಚ್ಚಿನ ಬುದ್ಧಿವಂತನಾದವನು ಅದನ್ನು ಗೆಲ್ಲುವೆನೆಂದು ಪಣವಿಟ್ಟರೆ ಜೂಜು. ಅವನು ಎದುರಾಳಿಯ ಸಾಮಥ್ರ್ಯದ ತಪ್ಪು ಕಲ್ಪನೆ ಹೊಂದಿರಬಹುದು ಅಥವಾ ಅವನು ಆ ಆಟವನ್ನು ಚೆನ್ನಾಗಿ ಆಡದಿರಬಹುದು.[೧]

ಜೂಜು ಆಡುವ ಪ್ರವೃತ್ತಿ ಮಾನವನ ಹುಟ್ಟುಗುಣವಾಗಿದೆ ಎಂಬುದು ಹಲವರ ಮತ. ಈ ಪ್ರವೃತ್ತಿ ಹುಟ್ಟುಗುಣ ಅಲ್ಲ. ಏಕೆಂದರೆ ಅದು ಎಲ್ಲರಲ್ಲೂ ಕಂಡುಬರುವುದಿಲ್ಲ. ಕೆಲವು ಜನರು ಸಾಮಾನ್ಯವಾಗಿ ಸಂದರ್ಭ ಹಾಗೂ ಪರಿಸರಗಳ ಪ್ರಭಾವಕ್ಕೊಳಗಾಗಿ ಜೂಜಿನ ಚಟಕ್ಕೆ ಹಾಳಾಗುವುದುಂಟು ಎಂಬುದೂ ಒಂದು ಅಭಿಪ್ರಾಯ. ಜೂಜು ಮಾನವನ ಹುಟ್ಟುಗುಣವೆಂದು ಕಂಡುಬರುವುದಕ್ಕೆ ಮಾನವನ ಹುಟ್ಟುಗುಣಗಳಾದ ಅನುಕರಣೆ ಹಾಗೂ ಸ್ಪರ್ಧಿಸುವ ಪ್ರವೃತ್ತಿಗಳು ಪ್ರೇರಕವಾಗುವುದು ಕಾರಣವಾಗಿದೆ. ಜೂಜು ಮಾನವಸಹಜವಾದ ಮನೋರಂಜನೆಯ ಒಂದು ಬಗೆ ಎನ್ನುವವರೂ ಉಂಟು. ಜೂಜು ಮನೋರಂಜನೆಯ ಮುಖವಾಡ ಹೊತ್ತು ಆರಂಭವಾಗುವುದಾದರೂ ಮುಂದೆ ಅದು ಹಣಗಳಿಸಬೇಕೆಂಬ ಹವ್ಯಾಸವಾಗಿ ಪರಿಣಮಿಸುತ್ತದೆ. ಈ ದೃಷ್ಟಿಯಿಂದ ನೋಡಿದರೆ ಮಾನವನ ಸಾಮಾಜಿಕ ಜೀವನ ಆರಂಭವಾದಾಗಿನಿಂದ ಜೂಜಿನ ಪ್ರವೃತ್ತಿ ಬೆಳೆದು ಬಂದಿದೆ ಎನ್ನಬಹುದು.

ಚರಿತ್ರೆ[ಬದಲಾಯಿಸಿ]

ಅತ್ಯಂತ ಪ್ರಾಚೀನ ಕಾಲದಲ್ಲೂ ಜೂಜು ರೂಢಿಯಲ್ಲಿತ್ತು ಎಂಬುದಕ್ಕೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಐತಿಹಾಸಿಕ ಆಧಾರಗಳು ದೊರೆತಿವೆ. ಈಜಿಪ್ಟಿನಲ್ಲಿ ದೊರೆತಿರುವ ಕ್ರಿ.ಪೂ. 3000ಕ್ಕೂ ಹಿಂದಿನದಾಗಿರಬಹುದಾದ ದಾಳಗಳು ಬಹು ಪುರಾತನ ಆಧಾರ. ಯೂರೋಪ್, ಆಫ್ರಿಕ, ಆಸ್ಟ್ರೇಲಿಯ ಮತ್ತು ಚೀನಗಳ ಸಂಸ್ಕತಿಗಳಲ್ಲಿ ಜೂಜು ರೂಢಿಯಲ್ಲಿದ್ದುದು ಕಂಡುಬರುತ್ತಿದೆ. ಜರ್ಮನಿಯಲ್ಲಿ ಜೂಜಾಟದ ಹವ್ಯಾಸ ಅತಿರೇಕದ್ದಾಗಿತ್ತೆಂದೂ ಅಲ್ಲಿಯವರು ಹೆಂಡತಿ ಮಕ್ಕಳನ್ನೂ ಪಣ ಕಟ್ಟುವುದಲ್ಲದೆ ತಮ್ಮನ್ನೂ ಪಣ ಕಟ್ಟಿ ಸೋತು ಗುಲಾಮರಾಗುತ್ತಿದ್ದರೆಂಬುದಾಗಿಯೂ ಸು. 98ರಲ್ಲಿ ಬರೆಯಲಾಗಿರಬಹುದಾದ ಟ್ಯಾಸಿಟಸ್‌ನ ಗ್ರಂಥದಿಂದ ತಿಳಿದುಬರುತ್ತದೆ. ಅಂಥ ಅತಿರೇಕ ಈಜಿಪ್ಟ್ ಚೀನಗಳಲ್ಲೂ ಇದ್ದ ಬಗ್ಗೆ ದಾಖಲೆಗಳು ದೊರೆತಿವೆ.

ಧಾರ್ಮಿಕ ಹಿನ್ನೆಲೆ[ಬದಲಾಯಿಸಿ]

ವಿಶ್ವದ ಧರ್ಮಗಳು ಜೂಜು ಆಡುವುದನ್ನು ಸಾಮಾನ್ಯವಾಗಿ ನಿಷೇಧಿಸಿವೆ. ಸನಾತನ(ಹಿಂದೂ) ಧರ್ಮ ಜೂಜು ಆಡುವುದನ್ನು ಪಾಪವೆಂದು ಪರಿಗಣಿಸಿತ್ತು. ಕ್ರೈಸ್ತಧರ್ಮ ಇದನ್ನು ಪರ್ಯಾಯವಾಗಿ ಖಂಡಿಸಿದೆ. ಸೆಮೆಟಿಕ್‍ ಧರ್ಮಗಳು ಜೂಜು ಆಡುವುದು ತ್ಯಾಜ್ಯವೆಂದು ಪರಿಗಣಿಸಿದ್ದುವು. ಇಸ್ಲಾಂ ಧರ್ಮ ಜೂಜು ಆಡುವುದನ್ನು ಪಾತಕವೆಂದು ನಿರ್ಧರಿಸಿದೆ. ಚದುರಂಗ ಆಡಲು ಕುರಾನಿನಲ್ಲಿ ಅನುಮತಿ ಉಂಟು. ಆಗಿನ ಕಾಲದಲ್ಲಿ ಚದುರಂಗ ಒಂದೇ ಬುದ್ಧಿಗಮ್ಯ ಆಟವೆಂದು ರೂಢಿಯಲ್ಲಿದ್ದಿರಬಹುದು. ಆರಿಸ್ಪಾಟಲ್ ಮತ್ತು ಕನ್‌ಫ್ಯೂಷಿಯಸ್‌ರು ಜೂಜುಗಾರರನ್ನು ಅಲ್ಲಗಳೆದಿದ್ದಾರೆ. ಜಗತ್ತಿನ ಅನೇಕ ದೇಶಗಳಲ್ಲಿಯ ತತ್ತ್ವಜ್ಞಾನಿಗಳು ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿದ್ದಾರೆ. ಭಾರತದ ತತ್ತ್ವಜ್ಞಾನಿಗಳು, ನ್ಯಾಯ-ಧರ್ಮಶಾಸ್ತ್ರಜ್ಞರು ಹಾಗೂ ಸ್ಮತಿಕಾರರು ಈ ಬಗ್ಗೆ ಹೆಚ್ಚಿನ ವಿವೇಚನೆ ಮಾಡಿದ್ದಾರೆ. ಜೂಜಾಟ ಎಂಥ ಪಾಪ ಎಂಬುದರ ಬಗ್ಗೆ ಜಿಜ್ಞಾಸೆ ನಡೆದಿರುವುದಲ್ಲದೆ, ಬೇಟೆ ಆಡುವುದು, ಜಾರತನ ಮತ್ತು ಮದ್ಯಪಾನ ಇವೇ ಮುಂತಾದ ಆಕ್ಷೇಪಾರ್ಹ ವ್ಯಸನಗಳೊಂದಿಗೆ ಇದನ್ನು ಹೋಲಿಸಿ ನೋಡಿರುವುದು ಧರ್ಮಶಾಸ್ತ್ರ ಹಾಗೂ ಅರ್ಥಶಾಸ್ತ್ರ ಗ್ರಂಥಗಳಿಂದ ಕಂಡುಬರುವುದು.

ಹೀಗೆ ಎಲ್ಲ ದೇಶಗಳಲ್ಲೂ ಧಾರ್ಮಿಕ ಹಾಗೂ ಸಾಮಾಜಿಕ ವಿರೋಧವಿದ್ದರೂ ಜೂಜು ಮಾನವನ ಇತಿಹಾಸದ ಅಂಗವಾಗಿ ಉಳಿದುಕೊಂಡು ಬಂದಿದೆ. ಜೂಜಿನ ವಿಚಾರವಾಗಿ ಈಜಿಪ್ಟ್ ಮತ್ತು ರೋಮನ್ ನ್ಯಾಯಸೂತ್ರಗಳು ಮತ್ತು ಇಂಗ್ಲೆಂಡಿನ 1388ರ ಹಾಗೂ ಫ್ರಾನ್ಸಿನ 1397ರ ಕಾನೂನುಗಳು ಧಾರ್ಮಿಕ ಸ್ಫೂರ್ತಿಯಿಂದ ಬಂದವು. ಪಾಶ್ಚಾತ್ಯ ದೇಶಗಳಲ್ಲಿ ಸು. 15ನೆಯ ಶತಮಾನದವರಿಗೆ ಜೂಜುಗಳಿಗೆ ಧಾರ್ಮಿಕ ಹಾಗೂ ರಾಜ್ಯರಕ್ಷಣೆಯ ಮನೋಭಾವಗಳು ವಿರೋಧವಾಗಿದ್ದುವು. ಜೂಜು ಅನುತ್ಪಾದಕ, ವಿನಾಕಾರಣ ಕಾಲಹರಣಕಾರಕ-ಎಂಬವು 15-17ನೆಯ ಶತಮಾನಗಳಲ್ಲಿ ಇದರ ಬಗ್ಗೆ ಇದ್ದ ವಿರೋಧಕ್ಕೆ ಕಾರಣಗಳು. ಜೂಜಾಟ ಶ್ರೀಮಂತರನ್ನು ಹಾಳು ಮಾಡುವುದೆಂಬುದೇ 18ನೆಯ ಶತಮಾನದಲ್ಲಿ ಇದರ ವಿರೋಧಕ್ಕೆ ಮುಖ್ಯ ಕಾರಣ. 1838ರಲ್ಲಿ ಫ್ರಾನ್ಸಿನಲ್ಲೂ 1873ರಲ್ಲಿ ಜರ್ಮನಿಯಲ್ಲೂ ಜೂಜಾಟದ ಗೃಹಗಳ ಮೇಲೆ ನಿರ್ಬಂಧ ಹಾಕಲಾಯಿತು. 19ನೆಯ ಶತಮಾನದಿಂದೀಚೆಗೆ ನೈತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕಾರಣಗಳು ಜೂಜುಗಳನ್ನು ನಿರ್ಬಂಧಿಸುವ ಕಾನೂನುಗಳ ಮೇಲೆ ಪ್ರಭಾವ ಬೀರಹತ್ತಿವೆ.

ಕಾನೂನು[ಬದಲಾಯಿಸಿ]

1860ರವರೆಗಿನ ಅಮೆರಿದ ಕಾನೂನುಗಳು ಸಾಧಾರಣವಾಗಿ ಪಾಶ್ಚಾತ್ಯ ದೇಶಗಳ ಅದರಲ್ಲೂ ಇಂಗ್ಲೆಂಡಿನ ಕಾನೂನುಗಳ ಮಾದರಿಯಲ್ಲಿ ಇದ್ದವು. ಅಮೆರಿಕದ ಎಲ್ಲ ರಾಜ್ಯಗಳ ಈ ಸಂಬಂಧದ ಕಾನೂನುಗಳು ಬೇರೆಬೇರೆಯಾಗಿದ್ದರೂ ಅವುಗಳ ಮೂಲಸ್ವರೂಪದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಜೂಜು ಎಂಬ ಪದವನ್ನು ಅಮೆರಿಕದ ಕಾನೂನುಗಳಲ್ಲೂ ಸ್ಪಷ್ಟವಾಗಿ ವಿವರಿಸಿಲ್ಲ. ಅದರಿಂದಾಗಿ ಯಾವೊಂದು ಆಟ ಬುದ್ಧಿಗಮ್ಯವಾದ್ದು ಅಥವಾ ಅದು ಜೂಜಾಟ-ಎಂದು ನಿರ್ಣಯ ಮಾಡುವಾಗ ಬೇರೆಬೇರೆ ರಾಜ್ಯಗಳ ನ್ಯಾಯಾಲಯಗಳ ತೀರ್ಪುಗಳಲ್ಲಿ ಏಕಾಭಿಪ್ರಾಯವಿಲ್ಲ. ಇಂಥ ಸಂದಿಗ್ಧ ಅಭಿಪ್ರಾಯಗಳು ಇಂಗ್ಲೆಂಡ್ ಹಾಗೂ ಭಾರತ ದೇಶಗಳಲ್ಲೂ ವ್ಯಕ್ತವಾಗಿವೆ.

ಪಾಶ್ಚಾತ್ಯ ದೇಶಗಳಲ್ಲಿ ಸುಮಾರು 300 ವರ್ಷಗಳಿಂದ ಈಚಿನ ಅವಧಿಯಲ್ಲಿ ಜೂಜಾಟವನ್ನು ಕಾನೂನುಬದ್ಧಗೊಳಿಸುವುದರ ಬಗ್ಗೆ ವಿಚಾರವಿನಿಮಯ ನಡೆಯುತ್ತ ಬಂದಿದೆ. ಭಾರತದಲ್ಲಿ ಈ ರೀತಿಯ ವಿಚಾರವಿನಿಮಯ ಕೌಟಿಲ್ಯನ ಕಾಲಕ್ಕೂ ಮುಂಚೆಯೇ ನಡೆದಿತ್ತು. ಜೂಜಾಟವನ್ನು ಕಾನುನುಬದ್ಧಗೊಳಿಸುವಂತೆ ಪ್ರತಿಪಾದಿಸುವವರು ಎರಡು ವಾದಗಳನ್ನು ಮುಂದೊಡ್ಡುತ್ತಾರೆ. ಆಡುವುದಕ್ಕೂ ಆಡುವಾಗ ಸಿಕ್ಕಿಬಿದ್ದರೆ ಅಪರಾಧದಿಂದ ಮುಕ್ತರಾಗಲಿಕ್ಕೂ ಲಂಚ ಕೊಡುವುದು ಸಾಮಾನ್ಯವಾಗಿರುವುದರಿಂದ ಜೂಟಾಟವನ್ನು ಕಾನೂನುಬದ್ಧಗೊಳಿಸಿದರೆ ಲಂಚದ ಹಾವಳಿ ಇರುವುದಿಲ್ಲ ಎನ್ನುವುದು ಒಂದು ವಾದ. ವಿಧಿವಿಹಿತಗೊಳಿಸಿ ಅದರ ಮೇಲೆ ತೆರಿಗೆ ವಿಧಿಸಿದರೆ ರಾಜ್ಯದ ಬೊಕ್ಕಸಕ್ಕೆ ವರಮಾನ ಲಭಿಸುವುದೆಂಬುದು ಎರಡನೆಯ ವಾದ. ಆದರೆ ಜೂಜು ಆಡುವುದನ್ನು ಕಾನೂನು ಬದ್ಧಗೊಳಿಸಬಾರದು ಎನ್ನುವವರ ಅಭಿಪ್ರಾಯವೂ ಅಷ್ಟೇ ಸ್ಪಷ್ಟವಾಗಿದೆ. ಅದನ್ನು ವಿಧಿವಿಹಿತಗೊಳಿಸುವುದರಿಂದ ಲಂಚ ನಿಲ್ಲುವುದಿಲ್ಲ. ಲಂಚ ಕೊಡುವುದಕ್ಕೂ ಪಡೆಯುವುದಕ್ಕೂ ಕಾರಣಗಳು ಬೇರೆಯಾಗಬಹುದು. ಮೇಲಾಗಿ, ಜೂಜಿನಿಂದ ಕೆಟ್ಟ ಹವ್ಯಾಸ ಬೆಳೆಯಲು ಅವಕಾಶವಾಗಿ ಅದರಿಂದ ಸಮಾಜಕ್ಕೆ ಅಹಿತವಾಗುವುದರ ಜೊತೆಗೆ, ಇತರ ಬುದ್ಧಿಗಮ್ಯರೀತಿಯ ಮನೋರಂಜನೆ ಹಾಗೂ ಕಲಾಕೌಶಲಗಳಿಗೆ ಹಣದ ಅಭಾವ ಉಂಟಾಗುವುದು. ಈ ಬಗ್ಗೆ ಸಾಮಾನ್ಯ ಅಭಿಪ್ರಾಯ ಏನೇ ಇದ್ದರೂ ಸಾಧಾರಣವಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಲವು ರೀತಿಯ ಜೂಜಾಟಗಳನ್ನು, ಅವು ಕರದ ರೂಪದಲ್ಲಿ ಸರ್ಕಾರಕ್ಕೆ ಹಣ ತರುವುದರಿಂದ, ವಿಧಿವಿಹಿತಗೊಳಿಸಲಾಗಿದೆ. ಈ ದಿಶೆಯಲ್ಲಿ ಭಾರತ ಬಹಳ ಹಿಂದೆಯೇ ಇಂಥ ಕ್ರಮ ಕೈಗೊಂಡಿತ್ತು ಎಂಬುದಕ್ಕೆ ಕೌಟಿಲ್ಯನ ಅರ್ಥಶಾಸ್ತ್ರ ಸಾಕ್ಷಿ. ಆಗ ಜೂಜಾಟ ರಾಜ್ಯಾಡಳಿತದ ನಿಯಂತ್ರಣಕ್ಕೊಳಪಟ್ಟಿತ್ತು. ವ್ಯವಸ್ಥಿತ ಕಾಲ, ಪ್ರದೇಶ ಹಾಗೂ ನಿಯಮಗಳಿಗನುಸಾರವಾಗಿ ಅದನ್ನು ಆಡಬೇಕಿತ್ತು. ಯಾವುದೇ ಬಗೆಯ ಆಕ್ರಮವಾದರೂ, ಆ ಬಗ್ಗೆ ದಂಡ ವಿಧಿಸಲಾಗುತ್ತಿತ್ತು. ಆದರೆ ಮುಂದೆ ಮುಸಲ್ಮಾನರ ಆಡಳಿತ ಆರಂಭವಾದ ಮೇಲೆ ಈ ಸಂಬಂಧದ ಭಾರತೀಯ ನ್ಯಾಯಸೂತ್ರ ಅಸ್ತಿತ್ವದಲ್ಲಿ ಉಳಿಯಲಿಲ್ಲ. ಇದಕ್ಕೆ ಇಸ್ಲಾಮೀ ನ್ಯಾಯಸೂತ್ರಗಳೂ ಕಾರಣವಾದವು. ಈ ಪರಿಸ್ಥಿತಿ ಆಂಗ್ಲರ ಆಡಳಿತ ಆರಂಭವಾದ ಮೇಲೂ ಮುಂದುವರಿಯಿತು. ಜೂಜನ್ನು ಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲವೆಂದೂ ವ್ಯವಸ್ಥಿತ ರೀತಿಯಲ್ಲಿ ನಡೆಯುವ ಜೂಜಾಟದ ಸಂಸ್ಥೆಗಳನ್ನು, ಸಾರ್ವಜನಿಕವಾಗಿ ಜೂಡಾಡುವುದನ್ನು ನಿಲ್ಲಿಸುವುದು 19ನೆಯ ಶತಮಾನದಲ್ಲಿ ಭಾರತದಲ್ಲಿ ಈ ಬಗ್ಗೆ ಜಾರಿಗೆ ಬಂದ ಅಧಿನಿಯಮ ಹೇಳುತ್ತದೆ. ಕೇಂದ್ರದ ಈ ಅಧಿನಿಯಮದ ಅನಂತರ ಪ್ರಾಂತಗಳಲ್ಲಿ ಇದೇ ಮಾದರಿಯ ಅಧಿನಿಯಮಗಳು ಜಾರಿಗೆ ಬಂದವು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾಮಾನ್ಯ ಜೂಜಾಟದ ಮನೆಗಳಲ್ಲಿ ಜೂಜಾಡುವುದು ಮಾತ್ರ ಇವುಗಳಲ್ಲಿ ಅಪರಾಧವಾಗಿ ಪರಿಗಣಿಸಲ್ಪಟ್ಟಿದೆ. ಸಾಮಾನ್ಯ ಜೂಜಾಟದ ಮನೆಯೆಂದರೆ ಒಂದು ಕಟ್ಟಡದ ಅಥವಾ ಸ್ಥಳದ ಮಾಲೀಕ ಇಲ್ಲವೆ ಸ್ವಾಧೀನಗಾರ ತನ್ನ ಲಾಭಕ್ಕಾಗಿ ಅಥವಾ ಸಂಪಾದನೆಗಾಗಿ ಜೂಜಾಟದ ಸಾಧನಗಳನ್ನು ಇಟ್ಟಿರುವ, ಇಲ್ಲವೆ ಜೂಜಾಡಲಿಕ್ಕೆ ಕೊಟ್ಟಿರುವ ಕಟ್ಟಡ ಅಥವಾ ಸ್ಥಳ.

ಕಾಯಿದೆಗಳು[ಬದಲಾಯಿಸಿ]

ಆದ್ದರಿಂದ, ಖಾಸಗಿ ಸ್ಥಳಗಳಲ್ಲಿ ಹಾಗೂ ಸಾಮಾನ್ಯ ಜೂಜಾಟದ ಮನೆಯ ವ್ಯಾಖ್ಯೆಯೊಳಗೆ ಬಾರದ ಕ್ಲಬ್ಬು ಇತ್ಯಾದಿ ಸಂಸ್ಥೆಗಳಲ್ಲಿ ಜೂಜಾಡುವುದನ್ನು ಈ ಕಾಯಿದೆಗಳು ಪ್ರತಿಬಂಧಿಸುವುದಿಲ್ಲ. ಆದರೆ, ಸಾಮಾನ್ಯ ಜೂಜಾಟದ ಮನೆಗಳಲ್ಲಿ ಜೂಜಾಡುವ ಸಲುವಾಗಿ ಹಾಜರಿರುವುದು ಸಹ ಅಪರಾಧ. ಈ ಅಧಿನಿಯಮಗಳಲ್ಲಿ ಕೊಟ್ಟಿರುವ ಜೂಜಾಟದ ವ್ಯಾಖ್ಯೆ ಸಾಧಾರಣ ಬಳಕೆಯಲ್ಲಿರುವ ಅರ್ಥಕ್ಕಿಂತ ವಿಸ್ತøತವಾದ್ದು. ಇದರ ಪ್ರಕಾರ ಎಲ್ಲ ರೀತಿಯಲ್ಲಿ ಪಣ ಒಡ್ಡುವುದು ಅಥವಾ ಪಂದ್ಯ ಕಟ್ಟುವುದು ಜೂಜಾಟ. ಕುದುರೆ ಪಂದ್ಯದ ದಿನಗಳಲ್ಲಿ ಅದರ ಆವರಣದೊಳಗೆ ಲೈಸನ್ಸ್‍ದಾರನೊಡನೆ ಕುದುರೆ ಪಂದ್ಯದ ಮೇಲೆ ಪಣ ಒಡ್ಡುವುದನ್ನು ಇಲ್ಲವೆ ಬಾಜಿ ಕಟ್ಟುವುದನ್ನು ಜೂಜಾಟದ ವ್ಯಾಖ್ಯೆಯಿಂದ ಹೊರಪಡಿಸಿರುತ್ತದೆ.

ಕುದುರೆ ಪಂದ್ಯಗಳು ಉತ್ತಮ ಜಾತಿಯ ಕುದರೆ ಪೀಳಿಗೆಯನ್ನು ಬೆಳೆಯಲು ಪ್ರೋತ್ಸಾಹ ಕೊಡುತ್ತವೆಂಬ ಕಾರಣದಿಂದ ಅವಕ್ಕೆ ಉತ್ತೇಜನ ಕೊಡಲಾಗಿದೆ. ಈ ಅಧಿನಿಯಮಗಳನ್ನು ಜಾರಿಗೆ ತಂದ 19ನೆಯ ಶತಮಾನದಲ್ಲಿ ಪರಿಸ್ಥಿತಿ ಏನಿದ್ದರೂ ಈಗಿನ ಯಂತ್ರಯುಗದಲ್ಲಿ ಕುದುರೆಗಳ ಉಪಯೋಗ ತೀರ ಕಡಿಮೆಯಾಗಿರುವುದರಿಂದ, ಕುದುರೆ ಪಂದ್ಯದಲ್ಲಿ ಪಣ ಒಡ್ಡುವುದಕ್ಕೆ ಅನುಮತಿ ಕೊಡುವುದು ಸಮರ್ಥನೀಯವೆನ್ನಲಾಗುವುದಿಲ್ಲ. ಆದರೆ, ಜೂಜಾಟದ ಅಧಿನಿಯಮಗಳಲ್ಲಿ ಈ ದಿಶೆಯಲ್ಲಿ ಈವರೆಗೆ ಬದಲಾವಣೆಯಾಗಿಲ್ಲ.

ಬ್ರಿಟಿಷರ ಆಗಮನಾನಂತರ ಪ್ರಾದೇಶಿಕ ಸಮಸ್ಯೆಗಳಿಗೆ ಹೊಂದಿಕೊಂಡು ಹೋಗುವಂಥ ಆಂಗ್ಲ ನ್ಯಾಯಸೂತ್ರಗಳು ಭಾರತದಲ್ಲಿ ಆಚರಣೆಗೆ ಬರಹತ್ತಿದವು. 1856ರ ನಗರ ಪೋಲೀಸ್ ಅಧಿನಿಯಮ ಜೂಜುಗಳನ್ನು ಕುರಿತ ಆಧುನಿಕ ನ್ಯಾಯದ ಮೊದಲ ಹೆಚ್ಚೆ ಎನ್ನಬಹುದು. ಜೂಜಾಟಗಳ ನಿಯಂತ್ರಣ ಪ್ರಾಂತೀಯ ಅಧಿಕಾರಕ್ಕೆ ಸಂಬಂಧಿಸಿದ ವಿಷಯವೆಂದು ಪರಿಗಣಿಸಿದ ಕಾರಣ ಪ್ರಾಂತೀಯ ಕಾನೂನುಗಳು ಆಚರಣೆಗೆ ಬಂದವು. 1867ರ ಸಾರ್ವಜನಿಕ ಜೂಜಾಟ ಅಧಿನಿಯಮ ಈ ಸಂಬಂಧದ ಮತ್ತೊಂದು ಪ್ರಮುಖ ಘಟ್ಟ.

ಭಾರತ ಸಂವಿಧಾನದ ಮೇರೆಗೆ ಜೂಜು ಮತ್ತು ಪಂದ್ಯಗಳು ರಾಜ್ಯಗಳ ಅಧಿಕಾರಕ್ಕೊಳಪಟ್ಟ ವಿಷಯಗಳಾಗಿವೆ; ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ನಡೆಯಿಸುವ ಲಾಟರಿಗಳು ಮಾತ್ರ ಕೇಂದ್ರದ ಅಧಿಕಾರ ವ್ಯಾಪ್ತಿಗೆ ಸೇರಿವೆ. ಒಂದು ರಾಜ್ಯದ ವಿಧಾನ ಮಂಡಲ ಅಂಗೀಕರಿಸಿದ ಕಾನೂನು ಬೇರೆ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ. ಬಹುರಾಜ್ಯಗಳಿಗೆ ಅನ್ವಯವಾಗುವಂಥ ಕಾನೂನಿನ ಆವಶ್ಯಕತೆಯನ್ನು ಮನಗಂಡು ಸಂವಿಧಾನದ ಅನುಚ್ಛೇದ 252 (1)ರ ಮೇರೆಗೆ ಹಿಂದಿನ ಮುಂಬೈ, ಮದ್ರಾಸು, ಹಿಂದಿನ ಹೈದರಾಬಾದು, ಮಧ್ಯಭಾರತ, ಉತ್ತರ ಪ್ರದೇಶ ಮುಂತಾದ ರಾಜ್ಯಗಳು ಸೇರಿ ಮಾಡಿಕೊಂಡ ಮನವಿಯ ಮೇರೆಗೆ ಸಂಸತ್ತು ಜೂಜುಗಳ ಸಂಬಂಧದ 1955ರ ಭಾರಿ ಮೊತ್ತದ ಬಹುಮಾನಗಳ ಸ್ಪರ್ಧೆಗೆ ಸಂಬಂಧಿಸಿದ ಅಧಿನಿಯಮವನ್ನು ಅಂಗೀಕರಿಸಿತು. ಇದು ಕರ್ನಾಟಕದ ವ್ಯಾಪ್ತಿಗೂ ಅನ್ವಯವಾಗುವಂತೆ ರಾಜ್ಯದ ವಿಧಾನಮಂಡಲ ನಿರ್ಣಯವನ್ನು ಅಂಗೀಕರಿಸಿದೆ. ಇದು ಹಲವು ಬಗೆಯ ಜೂಜಾಟಗಳನ್ನು ನಿಯಂತ್ರಣ ಮತ್ತು ಕ್ರಮಬದ್ಧಗೊಳಿಸಲು ಸಹಾಯಕವಾಗಿದೆ. ಕರ ಹಾಕಲು ರಾಜ್ಯಗಳು ಬೇರೆ ಕಾನೂನುಗಳನ್ನು ಮಾಡಿಕೊಂಡಿವೆ.

ಅಧಿನಿಯಮ[ಬದಲಾಯಿಸಿ]

ಜೂಜು ಬಹು ವ್ಯಾಪಕವಾದ ವಿಷಯ. ಇದನ್ನು ಕುರಿತ ಹೆಚ್ಚಿನ ವಿವರಗಳು ಜೂಜಾಟಕ್ಕೆ ಸಂಬಂಧಿಸಿದ ಅಧಿನಿಯಮಗಳು. ಪಣ ತೆರಿಗೆ ಅಧಿನಿಯಮಗಳು, ಕುದುರೆ ಪಂದ್ಯಗಳಿಗೆ ಸಂಬಂಧಿಸಿದ ಅಧಿನಿಯಮಗಳು, ಖಾಸಗಿ ಹಾಗೂ ಸರಕಾರಿ ಲಾಟರಿಗಳಿಗೆ ಅನ್ವಯವಾಗುವ ಕಾನೂನುಗಳು, ಎಲ್ಲ ರೀತಿಯ ಜೂಜಾಟಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಮಾಡಿಕೊಡುವ ಕಾನೂನುಗಳು. ಪೋಲೀಸ್ ಕಾನೂನುಗಳು, ದಂಡಸಂಹಿತೆ, ದಂಡಪ್ರಕ್ರಿಯಾಸಂಹಿತೆ ಮುಂತಾದವುಗಳಲ್ಲಿವೆ. ಯಾವ ಆಟ, ಎಂಥ ಸಂದರ್ಭದಲ್ಲಿ ಅಪರಾಧವೆನಿಸುವ ಜೂಜಾಟವೆಂದು ಗಣನೆಗೆ ಬರುವುದೆಂಬುದನ್ನು ಇವು ಸ್ಪಷ್ಟಪಡಿಸುತ್ತವೆ. ಅಕ್ರಮ ಜೂಜಾಟ ಅಪರಾಧಯುಕ್ತ ದಂಡಾರ್ಹ. ಹಾಗೆಯೇ ಜೂಜಾಟವನ್ನು ನಿಯಂತ್ರಣಗೊಳಿಸುವ ಕಾನೂನು ಅಥವಾ ಈ ಸಂಬಂಧದ ತೆರಿಗೆ ಕಾನೂನುಗಳನ್ನು ಉಲ್ಲಂಘಿಸುವುದೂ ಅಪರಾಧವೇ.

ಬಗೆಗಳು[ಬದಲಾಯಿಸಿ]

ಜೂಜಾಟಗಳಲ್ಲಿ ಹಲವು ಬಗೆಯುಂಟು. ಕವಡೆ, ಲೆತ್ತಗಳ ಮೂಲಕ ಆಡುವ ಜೂಜಾಟಗಳು ಭಾರತದಲ್ಲಿ ಪುರಾತನವಾದವು. ಕಾಟನ್ ದರಗಳು, ಕುದುರೆ ಪಂದ್ಯಗಳು, ಲಾಟರಿ ಇವೂ ಜೂಜಿನ ಸಾಧನಗಳು. ಇಸ್ಪೀಟು ಆಟಗಳು ಸಾಮಾನ್ಯವಾಗಿವೆ. ಶ್ರೀಮಂತರು, ಬಡವರು, ನಗರವಾಸಿಗಳು, ಹಳ್ಳಿಯ ಜನರು ಎಲ್ಲರನ್ನೂ ಸಟ್ಟಾ, ಮಟ್ಕಾ, ತೇಜಿ ಮತ್ತು ಮಂದಿ ಜೂಜಾಟಗಳು ಆಕರ್ಷಿಸಿವೆ. ಈಟಿಯೆಸೆತ, ಬಿಲಿಯಡ್ರ್ಸ್ ಮುಂತಾದ ಆಟಗಳನ್ನು ಜೂಜಾಡಲು ಬಳಸಿಕೊಳ್ಳುವುದುಂಟು. ಇನ್ನು ಅನೇಕ ಜೂಜಾಟಗಳನ್ನು ಸಾಂದರ್ಭಿಕವಾಗಿ ಆಡುವುದುಂಟು. ದೀಪಾವಳಿ, ಕಾರ್ತಿಕ ಏಕಾದಶಿ, ಸಂಕ್ರಾಂತಿ, ಈದ್, ಜಾತ್ರೆ ಮುಂತಾದ ಕೆಲವು ಸಂದರ್ಭಗಳಲ್ಲಿ ಜೂಜಾಟಗಳನ್ನು ಅಪರಾಧಗಳನ್ನಾಗಿ ಪರಿಗಣಿಸದೆ ಇರುವುದುಂಟು.

ಜೂಜು ಮಾನವನ ಆರ್ಥಿಕ ಹಾಗೂ ಮಾನಸಿಕ ವ್ಯಾಪಾರಗಳಿಗೆ ಸಮಸ್ಯೆಯನ್ನು ಒಡ್ಡುತ್ತದೆ. ಅದು ರಾಜ್ಯದ ಬೊಕ್ಕಸಕ್ಕೆ ಒಂದು ಆದಾಯಮೂಲವಾಗಿದ್ದರೂ ಸಾಮಾಜಿಕ ರುಜಿನವೂ ಶುದ್ಧ ಆಡಳಿತಕ್ಕೊಂದು ಸವಾಲೂ ಆಗಿದೆ. ಆಧುನಿಕ ನ್ಯಾಯಶಾಸ್ತ್ರ ದೃಷ್ಟಿಯಿಂದ ಜೂಜಿಗೆ ಸಂಬಂಧಿಸಿದ ಕಾನೂನು ನಿಷ್ಕøಷ್ಟ ನ್ಯಾಯಿಕ ಪರಿಕಲ್ಪನೆಗಳನ್ನೂ ಸ್ಪಷ್ಟೀಕರಣಗಳನ್ನೂ ಹೊಂದಿಕೊಂಡು ಇನ್ನೂ ಬೆಳೆಯಬೇಕಾಗಿದೆ.

ಭಾರತೀಯ ಸಾಹಿತ್ಯದಲ್ಲಿ ಜೂಜು[ಬದಲಾಯಿಸಿ]

ಬಹಳ ಪ್ರಾಚೀನ ಕಾಲದಿಂದ ಎಲ್ಲ ಜನಾಂಗಗಳಲ್ಲೂ ಜನಪ್ರಿಯವಾದ ಆಟ ಅಥವಾ ವಿನೋದವಾಗಿ ನಡೆದುಬಂದ ಜೂಜಿನ ಕುರುಹುಗಳನ್ನು ಮೊಹೆಂಜೊದಾರೊ ಸಂಸ್ಕತಿಯಲ್ಲಿಯೂ ಕಾಣಬಹುದು. ವಿಶ್ವಸಾಹಿತ್ಯದಲ್ಲೇ ಪ್ರಾಚೀನತಮ ದಾಖಲೆಯೆಂದು ಮಾನ್ಯವಾಗಿರುವ ಋಗ್ವೇದಸಂಹಿತೆಯಲ್ಲಿಯ ಒಂದು ಇಡಿಯ ಸೂಕ್ತವೇ (ಮಂಡಲ ಘಿ, ಸೂಕ್ತ 34) ಜೂಜುಗಾರನ ಒಂದು ವಿಲಾಪಕಾವ್ಯವಾಗಿದೆ. ಅದರ ಋಷಿ ಕವಶ ಐಲೂಷ. ಅದನ್ನು ಹೀಗೆ ಸಂಗ್ರಹಿಸಬಹುದು;

ಪರ್ವತಾಗ್ರದೆ ಬೆಳೆದ ಹೆಮ್ಮರದ ಕಾಯಿಗಳು
ಜೂಜುಹಲಗೆಯ ಮೇಲೆ ಗಡಗಡಿಸುತಿರಲು
ಮೆಚ್ಚುವೆನು ನಾನದರ ನಾದಮಾಧುರ್ಯವನು
ಸೋಮರಸಪಾನದಿಂದಧಿಕವೆಂದು !
ಒಮ್ಮೆಯೂ ಕೋಪಿಸದೆ, ಒಮ್ಮೆ ಮಾರ್ನುಡಿಯದಿಹ
ಅನುಕೂಲೆ ಸತಿಯೆನಗೆ ಮನೆಯೊಳಿಹಳು;
ಜೂಜಿನಾಸೆಯೊಳಾನು ದೂರಾದವಳಿಂದ
ಮುದಿಕುದುರೆಯಂತಾಯ್ತು ನನ್ನೊಂಟಿಬಾಳು !
ಇದ್ದಬದ್ದದನೆಲ್ಲ ಕಳೆದುಕೊಂಡಿರಲಾನು
ಕಂಡವರು ಮುದ್ದಿಸುವರೆನ್ನ ಮಡದಿಯನು;
ತಾಯ್ತಂದೆ, ಸೋದರರು, ಬಂಧುಮಿತ್ರರು-ಎಲ್ಲ
ನಾ ಕಾಣೆ. ಇವನಾರೊ ಎಂದು ಜಾರುವರು
ಕೆಳಗೆ ಉರುಳುವವೊಮ್ಮೆ, ಮೇಲೊಡನೆ ಪುಟಿಯುವವು.
ಕೈಯಿಂದ ಕಾಯಿಗಳು ಜನರ ಕೈಸೇರೆ
ಜೂಜುಹಲಗೆಯ ಮೇಲೆ ಮಾಯದಾ ಕೆಂಡದೊಲು
ತಣ್ಣನೆಯ ಕಾಯಹಹ ಎದೆಯನುರಿಸುವದು !
ಜೂಜುಗಾರನ ಮಡದಿ ಗೋಳಿನಲಿ ನವೆಯುವಳು
ತಾಯಿ ತಲ್ಲಣಿಸುವಳು ಮನೆ ಬಿಟ್ಟ ಸುತಗೆ;
ಸಂತಸದಿ ನಲಿಯುವಾ ಗೃಹಿಣಿಯರ ಕಂಡೊಡನೆ
ಜೂಜುಗಾರನ ಹೃದಯ ತಳಮಳಿಸುತಿಹುದು !

ಪ್ರಾಚೀನ ಉಲ್ಲೇಖ[ಬದಲಾಯಿಸಿ]

ಜೂಜಿನ ಕಟ್ಟೆಯಲ್ಲಿರುವಷ್ಟು ಹೊತ್ತೂ ಮನೆ, ಮಡದಿ ಮಕ್ಕಳ ಪರಿವೆಯೇ ಜೂಜುಗಾರನಿಗಿಲ್ಲ; ಆಟದ ಆನಂದದಲ್ಲಿ ಮೈಮರೆಯುತ್ತಾನೆ. ಆದರೆ ಆ ಕ್ರೀಡಾಲೋಕದಿಂದ ವಾಸ್ತವಜೀವನಕ್ಕೆ ಎಲ್ಲಾದರೊಮ್ಮೆ ಕಣ್ಣು ಹಾಯಿಸಿದಾಗ ಅವನಿಗೆ ತನ್ನ ಬಾಳು ಹೇಗೆ ವ್ಯರ್ಥವಾಯಿತೆಂಬ ವಿಷಾದ ಮೂಡುತ್ತದೆ. ಅವನ ಉತ್ಕಟ ದ್ಯೂತಲಾಲಸೆ, ಭ್ರಮನಿರಸನ-ಎರಡು ಮನೋಭಾವಗಳನ್ನೂ ಸುಂದರವಾದ ಉಪಮೆಗಳು ಹಾಗೂ ವಿರೋಧಾಭಾಸಗಳಿಂದ ಚಿತ್ರಿಸುವ ಈ ಲೌಕಿಕ ಭಾವಗೀತೆಗೆ ಧರ್ಮಗ್ರಂಥವಾದ ಋಗ್ವೇದದಲ್ಲಿಯೇ ಸ್ಥಾನ ದೊರೆತಿರುವುದು ಒಂದು ಸೋಜಿಗದಂತಿದೆ. ಅಕ್ಷೈರ್ಮಾ ದೀವ್ಯಃ, ಕೃಷಿಮಿತ್ಕಷಸ್ವ-ಜೂಜಾಡಬೇಡ, ನೆಲವನ್ನು ಉತ್ತು ಕೃಷಿಮಾಡು ಎಂಬ ದೃಢ ಮನೋನಿಶ್ಚಯದಿಂದ ಜೂಜುಗಾರನ ಸೂಕ್ತ ಮುಗಿಯುತ್ತದೆ.

ಋಗ್ವೇದಕ್ಕಿಂತ ಹೆಚ್ಚು ಲೌಕಿಕಾಂಶಗಳನ್ನು ಒಳಗೊಳ್ಳುವ ಅಥರ್ವಣವೇದದಲ್ಲಿ ಕೂಡ ದ್ಯೂತದ ಉಲ್ಲೇಖ ಪ್ರಾಸಂಗಿಕವಾಗಿ ಬಂದಿದೆ. ಗಿI-70-1ರಲ್ಲಿ ಮಾಂಸ ಮತ್ತು ಮದ್ಯಗಳೊಡನೆ ದ್ಯೂತವನ್ನು ಹೆಸರಿಸಲಾಗಿದೆ. ಜೂಜಾಟದಲ್ಲಿ ಗೆಲುವನ್ನು ಸಾಧಿಸಲು ಒಂದು ವಿಚಿತ್ರ ತಂತ್ರವನ್ನು ಕೂಡ ಅಥರ್ವಣವೇದ ತಿಳಿಸುತ್ತದೆ. ಒಂದು ಶುಭತಿಥಿಯಂದು ರಾತ್ರಿಯ ವೇಳೆಯಲ್ಲಿ ಒಂದು ಗುಂಡಿ ಮಾಡಿ ಇನ್ನೊಂದು ರಾತ್ರಿ ಅದನ್ನು ಮಣ್ಣಿನಿಂದ ತುಂಬಬೇಕು. ಮಣ್ಣನ್ನು ಸಮಮಾಡುವಾಗ ಕೆಲವು ಮಂತ್ರಗಳನ್ನು ಉಚ್ಚರಿಸಬೇಕು. ಹಿಂದಿನ ಮೂರು ರಾತ್ರಿ ಮತ್ತು ಮೂರು ಹಗಲಿನ ಕಾಲ ಪಂಚಾಮೃತದಲ್ಲಿ ಅದ್ದಿಸಿಟ್ಟಿದ್ದ ದಾಳಗಳನ್ನು ಜೂಜುಗಾರ ಕೈಯಲ್ಲಿ ಹಿಡಿದು ಆ ಮಂತ್ರಪೂತ ನೆಲದ ಮೇಲೆ ಮೊದಲು ಉರುಳಿಸಬೇಕು.

ಮೇಲೆ ಉದಾಹರಿಸಲಾದ ಋಗ್ವೇದ ಸೂಕ್ತದಲ್ಲಿಯೇ ತ್ರಿಪಂಚಾಶಃ ಎಂದು ಕಾಯಿಗಳ ಸಂಖ್ಯೆಯನ್ನು ಹೇಳಲಾಗಿದೆ. ಅದಕ್ಕೆ 53 ಅಥವಾ 15 ಎಂದು ಎರಡು ರೀತಿ ಅರ್ಥಮಾಡುತ್ತಾರೆ. ಮೂಜವಂತ್ ಎಂಬ ಪರ್ವತದಲ್ಲಿ ಬೆಳೆಯುತ್ತಿದ್ದ ವಿಭೀತಕ (ಬೆಲೆರಿಕ್ ಮೈರಾಬಲನ್=ಅಳಲೆಕಾಯಿ) ಎಂಬ ಮರದ ಕಾಯಿಗಳನ್ನು ಜೂಜಿನ ಹಲಗೆಯ ಮೇಲೆ ಉರುಳಿಸುತ್ತಿದ್ದರೆಂದು ಕಂಡುಬರುತ್ತದೆ. ಹಲಗೆಯ ಮೇಲೆ ಚೌಕಗಳು ಅಥವಾ ಮನೆಗಳಿರುತ್ತಿದ್ದವು. ದಾಳ ಉರುಳಿ ಯಾವ ಮನೆಯಲ್ಲಿ ನಿಂತಿತೋ ಅದರ ಮೇಲಿಂದ ಗರವನ್ನೆಣಿಸುತ್ತಿದ್ದರು. ಬ್ರಾಹ್ಮಣ ಗ್ರಂಥಗಳಲ್ಲಿ ನಾಲ್ಕು ಗರಗಳ ಪ್ರಸ್ತಾಪ ಬರುತ್ತದೆ; ಕಲಿ ಎಂದರೆ 1, ದ್ವಾಪರ ಎಂದರೆ 2, ತ್ರೇತಾ ಎಂದರೆ, 3. ಕೃತ ಎಂದರೆ 4. ಇವು ನಾಲ್ಕೂ ನಾಲ್ಕು ಯುಗಗಳ ಹೆಸರುಗಳೇ ಆಗಿವೆ. ಕಲಿಯೇ ಸೋಲಿನ ಗರ, ಕೃತವೇ ಗೆಲವಿನ ಗರ. ಈ ಆಟದ ಹೆಚ್ಚಿನ ವಿವರಗಳು ಈಗ ಸಿಕ್ಕುವುದಿಲ್ಲ. ರಾಜಸೂಯ ಮುಂತಾದ ಯಾಗಗಳ ಅಂಗವಾಗಿಯೂ ಇದನ್ನು ಆಡುತ್ತಿದ್ದರೆಂದು ಉಲ್ಲೇಖಗಳಿಂದ ತಿಳಿದುಬರುತ್ತದೆ.

ಪ್ರಾಚೀನ ಆರ್ಯರ ವೇದಕಾಲೀನ ಜೂಜಾಟದ ರೀತಿ ಹಾಗಾದರೆ, ಮಿಕ್ಕ ಪ್ರಾಚೀನ ನಾಗರಿಕತೆಗಳಲ್ಲಿ ಬೇರೆ ಬೇರೆ ರೀತಿಯ ಜೂಜಾಟಗಳೂ ಇರುತ್ತಿದ್ದುದನ್ನು ಕಾಣುತ್ತೇವೆ. ಕ್ರೀಟಿನಲ್ಲಿ ಕ್ರಿ.ಪೂ. 1800-1650ರ ಕಾಲಕ್ಕೆ ಸೇರಿದ ಒಂದು ಜೂಜಾಟದ ಹಲಗೆ ಭೂಗರ್ಭಶೋಧನೆಯಲ್ಲಿ ಸಿಕ್ಕಿದ್ದು, ಅದು ಹಸ್ತಿದಂತ, ಸ್ಪಟಿಕ, ಪಚ್ಚೆಗಳಿಂದ ಅಲಂಕೃತವಾಗಿದೆ. ಯಾವುದೇ ಆಕಸ್ಮಿಕ ಅಂಶಗಳನ್ನೊಳಗೊಂಡ ಆಟವೂ ಜೂಜಿಗೆ ಉಪಯುಕ್ತವಾಗಬಹುದು. ಇದು ಹೀಗೆಯೇ ಆಗಬಹುದೆಂದು ನಿರ್ಣಯವಾಗಿ ಮೊದಲೇ ಹೇಳಲಾಗದಂಥ ಸಾಮಾನ್ಯ ಸಂಗತಿಗಳನ್ನು ಪಣವೊಡ್ಡಿ ಜೂಜಾಡಲು ಸಾಧನವಾಗಿ ಜನರು ಬಳಸುವುದುಂಟು. ಉದಾಹರಣೆಗೆ: ಮರದ ಮೇಲೆ ಕುಳಿತಿರುವ ಎರಡು ಹಕ್ಕಿಗಳಲ್ಲಿ ಮುಂಚೆ ಹಾರುವುದೂ ಒಂದೋ ಮತ್ತೊಂದೋ? ನಿದ್ರೆಯಲ್ಲಿ ಮಲಗಿರುವ ಒಂದು ಪ್ರಾಣಿ ಎದ್ದೊಡನೆ ಎಡಕ್ಕೆ ಹೋಗುವುದೋ ಬಲಕ್ಕೆ ಹೋಗುವುದೋ? ಒಂದು ಗೊತ್ತಾದ ದಿನ ಮಳೆ ಬರುವುದೋ ಬಾರದೋ? -ಇವೇ ಮುಂತಾದ ಒಂದೊಂದು ಅನಿರ್ಣಿತ ಸಂದಿಗ್ಧ ಅಂಶಗಳ ಮೇಲೆಲ್ಲ ಪಣವೊಡ್ಡಿ ಜೂಜಾಡಲು ಅವಕಾಶವುಂಟು.

ಪಣಿನಿಯ ಕಾಲದಲ್ಲೂ (ಕ್ರಿ.ಪೂ. 700) ಜೂಜು ತುಂಬ ಜನಪ್ರಿಯವಾಗಿದ್ದುದನ್ನು ಅವನ ಗಣಪಾಠದಲ್ಲಿ ಬರುವ ಅಕ್ಷದ್ಯೂತಾದಿ ಗಣ ಸೂಚಿಸುತ್ತದೆ. ಅಕ್ಷವೆಂದರೆ ದಾಳ. ಜೂಜಿನಲ್ಲಿ ಒಡ್ಡುತ್ತಿದ್ದ ಪಣವನ್ನು ಗ್ಲಹವೆನ್ನುತ್ತಿದ್ದರೆಂದೂ ಹೇಳುವ ಸೂತ್ರವಿದೆ. ಅಷ್ಟೇ ಅಲ್ಲ; ಅಕ್ಷಶಲಾಕಾಸಂಖ್ಯಾಃ ಪರಿಣಾ (ಅಷ್ಟಾಧ್ಯಾಯೀ II, i, 10) ಎಂಬ ಸೂತ್ರದಲ್ಲಿ ಅಕ್ಷಪರಿ, ದ್ವಿಪರಿ, ತ್ರಿಪರಿ, ಚತುಷ್ಟರಿ ಎಂಬ ಗರಗಳ ನಿರ್ದೇಶವೂ ಇವೆ. ಐದು ಕವಡೆಗಳಿಂದಾಡುವಾಗ ಐದು ಮಗುಚಿಬಿದ್ದರೆ ಗೆಲ್ಲುವ ಕೃತ ಅಥವಾ ಅಕ್ಷರಾಜವೆಂದೂ ಕ್ರಮವಾಗಿ 1, 2, 3, 4 ಮಾತ್ರ ಮಗುಚಿಬಿದ್ದಾಗ ಈ- 'ಪರಿ' ಲೆಕ್ಕವೆಂದೂ ವ್ಯಾಖ್ಯಾನ ಮಾಡಿದ್ದಾರೆ.

ಆದರ್ಶಜೀವನದ ಚಿತ್ರಣದ ರಾಮಾಯಣದಲ್ಲಿ ದ್ಯೂತಪ್ರಸಕ್ತಿಯಿಲ್ಲವಾದರೂ ಆದಕ್ಕಿಂತಲೂ ಐದಾರುಪಟ್ಟು ದೊಡ್ಡದಾದ ಮಹಾಭಾರತದ ಇಡಿಯ ಸೌಧವೇ ದ್ಯೂತದ ಆಧಾರಸ್ತಂಭದ ಮೇಲೆ ನಿಂತಿದೆಯೆನ್ನಬಹುದು. ಕೌರವ-ಪಾಂಡವರ ತಿಕ್ಕಾಟಕ್ಕೆಲ್ಲ ಜೂಜೇ ಬೀಜವೆನ್ನಬಹುದು. ಪಾಂಡವರಿಗೆ ಅವರ ಪಾಲಿನ ರಾಜ್ಯವನ್ನು ವಹಿಸಿಕೊಟ್ಟಾದ ಮೇಲೆ, ಅವರು ಸ್ವಂತ ಬಾಹುಬಲದಿಂದ ಅಭಿವೃದ್ಧಿ ಸಾಧಿಸಿ ರಾಜಸೂಯಯಾಗವನ್ನು ವೈಭವದಿಂದ ನೆರವೇರಿಸಿದರು. ಅದರಿಂದ ದುರ್ಯೋಧನನ ಅಸೂಯೆಗೆ ಪುಟ ಕೊಟ್ಟಂತಾಯಿತು. ಅವನ ಅಭಿಮಾನಕ್ಕೆ ಧಕ್ಕೆಯೊದಗಿತು. ಯುದ್ಧದಿಂದ ಪಾಂಡವರನ್ನು ಸೋಲಿಸುವಂತಿರಲಿಲ್ಲ. ಆಗ ಶಕುನಿ, ಕರ್ಣ ಮುಂತಾದವರು ಜೂಜಿನಲ್ಲಿ ಪಾಂಡವರನ್ನು ಸೋಲಿಸುವ ಹಂಚಿಕೆ ಹೂಡಿದರು. ದುರ್ಯೋಧನನ ಹಟ ಧೃತರಾಷ್ಟ್ರನನ್ನೂ ಒಪ್ಪಿಸಿತು.

ಯುಧಿಷ್ಠಿರನ ಹೆಸರೇ ಧರ್ಮರಾಯ. ಅವನಿಗೆ ಜೂಜು ಬಹಳ ಕೆಟ್ಟದ್ದೆಂಬ ನೀತಿ ಗೊತ್ತಿಲ್ಲದೆ ಇರಲಿಲ್ಲ. ಆದರೂ ಕ್ಷತ್ರಿಯರ ವಿಶಿಷ್ಟ ಸಂಪ್ರದಾಯದಂತೆ ಯುದ್ಧಕ್ಕಾಗಲಿ ಜೂಜಿಗಾಗಲಿ ಬಂದ ಆಹ್ವಾನವನ್ನು ಮಾನವಂತನಾದವ ಹೇಗೂ ಒಲ್ಲೆನೆನ್ನುವಂತಿರಲಿಲ್ಲವೆಂದು ವ್ಯಾಸರು ವರ್ಣಿಸಿದ್ದಾರೆ. ತ್ರೇತಾಯುಗದಲ್ಲಿ ಇಲ್ಲದ ಈ ಹೊಸ ಸಂಪ್ರದಾಯ ದ್ವಾಪರಯುಗದಲ್ಲಿ ತಲೆದೋರಿ ಯುದ್ಧದ ಹಾಗೆ ಜೂಜು ರಾಜವಂಶಗಳನ್ನು ಹಾಳುಗೈಯುವಷ್ಟು ಪ್ರಾಮುಖ್ಯ ಪಡೆಯಿತೆನ್ನಬಹುದಾಗಿದೆ. ಕೈತವ ಎಂದರೆ ಜೂಜುಗಾರ. ಕೈತವ ಎಂದರೆ ಮೋಸಕ್ಕೆ ಇನ್ನೊಂದು ಹೆಸರು. ಧೂರ್ತ ಎಂದರೂ ಜೂಜುಗಾರನೇ. ಯಾವುದಕ್ಕೂ ಹೇಸದ ಭಂಡನೆಂಬುದೂ ಅದರ ಇನ್ನೊಂದು ಅರ್ಥ. ಹೀಗೆ ನೆತ್ತ ಹಾಕುವುದರಲ್ಲಿ ಜೂಜುಗಾರನ ಮೋಸ, ಕೈಚಳಕ ತುಂಬ ಉಪಯೋಗಕ್ಕೆ ಬರುತ್ತಿತ್ತು. ಯುದ್ಧನಿಯಮದಷ್ಟೇ ಜೂಜಿನ ನಿಯಮಗಳು ಕಠೋರವಾಗಿರುತ್ತಿದ್ದುವು. ಇಲ್ಲದಿದ್ದರೆ ಧರ್ಮರಾಯ ದೇವಕುಮಾರರಂತಿದ್ದ ತನ್ನ ತಮ್ಮಂದಿರನ್ನೂ ತನ್ನನ್ನೂ ತನ್ನ ಪಟ್ಟದ ರಾಣಿ ದೌಪ್ರದಿಯನ್ನೂ ಪಣವಿಟ್ಟು ಸೋಲುತ್ತಿರಲಿಲ್ಲ. ಸೋತರೂ ತುಂಬಿದ ಸಭೆಯಲ್ಲಿ ಹಿರಿಯರೆಲ್ಲರೂ ಮಾನಿನಿಗೆ ಆಗುತ್ತಿದ್ದ ಮಾನಭಂಗವನ್ನು ನೋಡುತ್ತ ಹಾಗೆ ಸುಮ್ಮನೆ ಕುಳಿತಿರುತ್ತಿರಲಿಲ್ಲ. ಸೋತವ ಗೆದ್ದವನ ದಾಸ ಅಥವಾ ಗುಲಾಮನೆಂಬುದನ್ನು ಅವರೆಲ್ಲರೂ ಅಕ್ಷರಶಃ ಒಪ್ಪಿದ್ದುದರಿಂದಲೇ ಹಾಗೆ ಪಾಂಡವರು ಅದನ್ನೆಲ್ಲ ಅಸಹಾಯಕರಾಗಿ ಸಹಿಸಬೇಕಾಗಿ ಬಂದಿತು. ಇಷ್ಟಾದ ಮೇಲೂ ಮತ್ತೊಮ್ಮೆ ಕೌರವರು ಇವರನ್ನು ಜೂಜಿಗೆ ಕರೆಯ ಕಳುಹಿಸಿದರೆ ಪಣವನ್ನು ವನವಾಸವೆಂದಿಟ್ಟುಕೊಂಡು ಧರ್ಮರಾಯ ಮತ್ತೆ ಆಡುತ್ತಾನೆ. ಮತ್ತೆ ಸೋಲುತ್ತಾನೆ. ರಾಜ್ಯಕ್ಕೆ ಎರವಾಗುತ್ತಾನೆ. ಹೀಗೆ ಮಹಾಭಾರತದಲ್ಲಿ ಜೂಜು ಬರಿಯ ಸಾಮಾನ್ಯಜನರ ವಿನೋದವಷ್ಟೇ ಅಲ್ಲ; ರಾಜಾಧಿರಾಜರ ರಾಜನೀತಿಯ ಒಂದು ಗಣನೀಯ ಅಂಶವೂ ಆಗಿತ್ತೆನ್ನಬಹುದು.

ಮಹಾಭಾರತದ ಉಪಾಖ್ಯಾನಗಳಲ್ಲಿಯೂ ಜೂಜಿನ ಮಹತ್ತ್ವದ ಅರಿವಾಗುತ್ತದೆ. ನಳೋಪಾಖ್ಯಾನದಲ್ಲಿ ನಳ ರಾಜ್ಯಕೋಶಗಳನ್ನೆಲ್ಲ ಪುಷ್ಕರನಿಗೆ ಜೂಜಿನಲ್ಲಿ ಸೋತು ದಮಯಂತಿಯನ್ನೊಡ್ಡಲು ಮನಸ್ಸುಬಾರದೆ ಅವಳೊಂದಿಗೆ ಕಾಡು ಸೇರುತ್ತಾನೆ. ಅಲ್ಲಿ ಅವಳನ್ನು ತೊರೆಯುತ್ತಾನೆ. ಮುಂದೆ ತನ್ನ ನಷ್ಟ ರಾಜ್ಯದ ಪುನಃಪ್ರಾಪ್ತಿಗಾಗಿ, ಜೂಜಿನ ರಹಸ್ಯ ಅಥವಾ ಅಕ್ಷಹೃದಯವನ್ನು ಬಲ್ಲ ಋತುಪರ್ಣ ರಾಜನ ಸಾರಥಿಯಾಗಿ ಸೇವೆಮಾಡಿ ಅವನಿಂದ ಅದನ್ನು ಪಡೆದು ಮತ್ತೆ ಪುಷ್ಕರನೊಡನೆ ಜೂಜಾಡಿ ತನ್ನ ರಾಜ್ಯವನ್ನು ಆತ ಗೆದ್ದುಕೊಳ್ಳಬೇಕಾಗುತ್ತದೆ. ಹೀಗೆ ಹಿಂದೆಯೇ ಜೂಜು ಒಂದು ದೊಡ್ಡ ವಿದ್ಯೆಯಾಗಿ ಬೆಳೆದಿತ್ತಾಗಿ ವಾತ್ಸಾಯನನ ಕಾಮಸೂತ್ರದಲ್ಲಿ ಅರವತ್ತುನಾಲ್ಕು ಕಲೆಗಳೆಂದು ಹೆಸರಿಸಿರುವವುಗಳಲ್ಲಿ ದ್ಯೂತಕ್ಕೂ ಒಂದು ಸ್ಥಾನ ದೊರೆತಿದೆ. ಕಥಾಸರಿತ್ಸಾಗರದಲ್ಲಿ ಈ ವಿದ್ಯೆಯ ಒಂದು ನಿದರ್ಶನವನ್ನು ಕೂಡ ಹೇಳಲಾಗಿದೆ. ಒಂದು ಮರದ ಕೊಂಬೆಯಲ್ಲಿ ಇಷ್ಟೇ ಎಲೆಗಳಿವೆಯೆಂದು ಒಂದು ಸಂಖ್ಯೆಯನ್ನು ಋತುಪರ್ಣ ಹೇಳಿ ಕೊಂಬೆಯನ್ನು ಕಡಿದು ಎಲೆಗಳನ್ನು ಲೆಕ್ಕಮಾಡಿ ನೋಡಿಕೊಳ್ಳುವಂತೆ ನಳನಿಗೆ ಆಜ್ಞಾಪಿಸುತ್ತಾನೆ. ನಳ ಹಾಗೆ ಮಾಡಿದಾಗ ಋತುಪರ್ಣ ಹೇಳಿದ ಸಂಖ್ಯೆ ಎಲೆಗಳ ಲೆಕ್ಕಕ್ಕೆ ಸರಿಯಾಗಿತ್ತೆಂದು ಕಥೆ.

ಪುರಾಣಗಳ ಪ್ರಕಾರ ಜೂಜಾಟ ದೇವತೆಗಳಿಗೂ ಪ್ರಿಯವಾದ ವಿನೋದ. ಜೂಜಾಡುತ್ತ ಆಡುತ್ತಲೇ ದೇವತೆಗಳು ಯುಗಯುಗಾಂತರಗಳು ಉರುಳಿದರೂ ಪರಿವೆಯಿಲ್ಲದೆ ಇರುತ್ತಾರೆಂದು ಅವು ವರ್ಣಿಸಿವೆ. ಒಂದು ಪೌರಾಣಿಕ ಕಥೆ ಹೀಗಿದೆ: ಪಾರ್ವತಿಯೊಡನೆ ಜೂಜಾಡುವಾಗ ಶಿವ ಒಂದು ಆಟದಲ್ಲಿ ಸೋತನಂತೆ. ಆಮೇಲೆ ಪಾರ್ವತಿ ಕುಮಾರನೊಂದಿಗೆ ಆಡಿ ಸೋತಳು. ಅನಂತರ ಕುಮಾರ ಗಣೇಶನೊಡನೆ ಜೂಜಾಡಿ ಸೋತ. ಈ ನಡುವೆ ಪಾರ್ವತಿಯೊಡನೆ ಆಡಿದಾಗ ತಾನು ಸೋತೆನಲ್ಲ ಎಂದು ಶಿವ ಚಿಂತೆಮಾಡತೊಡಗಿದನಂತೆ. ಶಿವನ ಮನಸ್ಸಮಾಧಾನ ಮಾಡುವುದಕ್ಕಾಗಿ ವಿಷ್ಣು ದೀಪಾವಳಿಯ ದಿವಸ ಇನ್ನೊಂದು ಆಟವಾಡಲು ಏರ್ಪಡಿಸಿದನಂತೆ. ಆ ಆಟದ ಸಂದರ್ಭದಲ್ಲಿ ಶಿವ ತಾನೇ ದಾಳದೊಳಗೆ ಇದ್ದುಕೊಂಡು ತನಗೆ ಬೇಕುಬೇಕಾದ ಗರಗಳೇ ಬೀಳುವಂತೆ ಮಾಡಿ ಪಾರ್ವತಿಯನ್ನು ಸೋಲಿಸಿದನಂತೆ. ಇದರಿಂದ ಮೊದಲು ಪಾರ್ವತಿಗೆ ಸಿಟ್ಟು ಬಂದರೂ ವಿಷ್ಣು ನಿಜಸ್ಥಿತಿಯನ್ನು ವಿವರಿಸಿದ ಮೇಲೆ ಸಮಾಧಾನಗೊಂಡಳಂತೆ. ಅದರಿಂದ ಸಂತುಷ್ಟಳಾದ ಆಕೆ ಪ್ರತಿವರ್ಷವೂ ದೀಪಾವಳಿಯಂದು ಜೂಜಾಡಿದವರಿಗೆ ಸಂವತ್ಸರವೆಲ್ಲ ಜಯಪ್ರದವಾಗಲೆಂದು ವರವಿತ್ತಳಂತೆ. ಈ ಪುರಾಣ ಕಥೆಯ ಆಧಾರದ ಮೇಲೆ ದೀಪಾವಳಿಯಲ್ಲಿ (ಆಶ್ವಯುಜ ಶುದ್ಧ ಪೂರ್ಣಿಮೆ ಮತ್ತು ಬಲಿಪಾಡ್ಯಮಿಗಳಲ್ಲಿ) ಪಣವಿಟ್ಟು ಜೂಜಾಡುವ ಸಂಪ್ರದಾಯ ಇಂದಿಗೂ ಭಾರತದಲ್ಲೆಲ್ಲ ಉಳಿದುಬಂದಿದೆ.

ಸಾಹಿತ್ಯಕ ಹಿನ್ನೆಲೆ[ಬದಲಾಯಿಸಿ]

ಕಥಾಸಾಹಿತ್ಯದಲ್ಲಿ ಕೂಡ ಜೂಜಿಗೆ ಪ್ರಮುಖ ಸ್ಥಾನ ದೊರೆತಿರುವುದು ಸಹಜವೇ ಆಗಿದೆ. ಕೇವಲ ರಾಜರಷ್ಟೇ ಅಲ್ಲ, ನಾಗರಿಕರೂ ಪಾನ, ವೇಶ್ಯೆ, ದ್ಯೂತಗಳಲ್ಲಿ ಆಸಕ್ತರಾಗಿದ್ದರೆನ್ನುವುದನ್ನು ಸೂಚಿಸುವ ಅನೇಕ ಕಥೆಗಳು ಬರುತ್ತವೆ. ಮಾಂಸ, ಮದ್ಯ, ವಾರಾಂಗನೆಯರೊಡನೆ ವಿಲಾಸಗಳಿಗಾಗಿ ದ್ಯೂತದಿಂದಲೋ ಚೌರ್ಯದಿಂದಲೋ ಹಣವನ್ನು ಸಂಪಾದಿಸಿದರಾಯಿತೆನ್ನುವ ಕಥಾನಾಯಕರು ಅನೇಕರು ಕಥಾಸರಿತ್ಸಾಗರದಲ್ಲಿ ಕಾಣಸಿಗುತ್ತಾರೆ. ಜೂಜುಗಾರ ಯಾವ ದುಸ್ಸಾಹಸಕ್ಕೆ ತಾನೆ ಹೇಸುತ್ತಾನೆ? (ದ್ಯೂತತಾಂತಸ್ಯ ಕಿಂ ನಾಮಕಿ ತವಸ್ಸ ಹಿ ದುಷ್ಕರಂ-ಕಥಾಸರಿತ್ಸಾಗರ) ಎನ್ನುವುದೇ ಕಥಾಸಾಹಿತ್ಯದ ಪಲ್ಲವಿಯೂ ಆಗಿದೆಯೆನ್ನಬಹುದು.

ಆದರೆ ಪ್ರಾಚೀನ ಭಾರತದ ಸ್ಮೃತಿಕಾರರೂ ಧರ್ಮಶಾಸ್ತ್ರಕಾರರೂ ಜೂಜನ್ನು ಒಂದು ದುವ್ರ್ಯಸನವೆಂದು ಖಂಡಿತವಾಗಿ ನಿಷೇಧಿಸಿಯೇ ಇದ್ದಾರೆನ್ನುವುದು ಇಲ್ಲಿ ಉಲ್ಲೇಖನೀಯವಾಗಿದೆ. ಮನು, ಕಾಮಂದಕ, ಯಾಜ್ಞವಲ್ಕ್ಯ-ಇವರೆಲ್ಲರ ಅಭಿಪ್ರಾಯದಲ್ಲಿಯೂ ಜೂಜು ಹೇಯವಾದ ವ್ಯಸನವೇ ಎನ್ನುವುದರಲ್ಲಿ ಸಂಶಯವಿಲ್ಲ. ರಾಜವ್ಯಸನಗಳಲ್ಲಿ ಬೇಟೆ, ಜೂಜು, ಹೆಣ್ಣು, ಹೆಂಡ-ಈ ನಾಲ್ಕನ್ನೂ ಕಾಮಜ ವ್ಯಸಗಳೆಂದು ಅವರು ಕರೆಯುತ್ತಾರೆ. ರಾಜರ ವ್ಯಸನಗಳನ್ನೇ ಮಿಕ್ಕ ಧನಾಢ್ಯರೂ ಅನುಕರಣ ಮಾಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಜೂಜಿನ ಒಂದು ಸರ್ವಾಂಗಸುಂದರವೂ ಅತ್ಯಂತ ವಾಸ್ತವಿಕವೂ ಮಾರ್ಮಿಕವೂ ಆದ ಸಾಹಿತ್ಯಚಿತ್ರವನ್ನು ಕಾಣಬೇಕಾದರೆ ಶೂದ್ರಕನ ಮೃಚ್ಛಕಟಿಕ ನಾಟಕದ ಎರಡನೆಯ ಅಂಕವನ್ನು ನೋಡಬೇಕು. ಇಲ್ಲಿ ಬರುವ ಇಬ್ಬರು ಜೂಜುಕೋರರಾದ ಸಂವಾಹಕ ಮತ್ತು ದರ್ದುರಕರ ಚಿತ್ರ ಎಂದೆಂದೂ ಮರೆಯದಂಥದು. ಸೋತ ಪಣವನ್ನು ಕೊಡಲಾಗದೆ ಸಭಿಕನ ಚಿತ್ರಹಿಂಸೆಗೀಡಾಗುವ, ಹೇಗೋ ಅಡಗಿಕೊಂಡರೂ ಜೂಜಿನ ಆಸೆಯನ್ನೂ ಬಿಡಲಾಗದೆ ಮತ್ತೆ ಸಿಕ್ಕಿಬೀಳುವ ಸಂವಾಹಕನ ಚಿತ್ರ ಜೂಜಿನ ಒಂದು ಮುಖ. ಜೂಜೆನ್ನುವುದು ಮನುಷ್ಯನಿಗೆ ಸಿಂಹಾಸನವೊಂದಿಲ್ಲದ ರಾಜಪದವಿಯೇ ಸರಿ (ದ್ಯೂತಂ ಹಿ ನಾಮ ಪುರುಷಸ್ಯ ಅಸಿಂಹಾಸನಂ ರಾಜ್ಯಂ) ಎಂದು ಆರಂಭಿಸಿ ಸೋಲಿನಿಂದ ಚಿಂತೆಪಡದೆ, ಕಂಡವರ ಹಣವನ್ನು ತನಗೆ ಬೇಕುಬೇಕಾದಂತೆ ದಾನಮಾಡುತ್ತ, ರಾಜನ ಬೊಕ್ಕಸಕ್ಕೆ ಕಡಿಮೆಯಿಲ್ಲದ ಆದಾಯವನ್ನು ಪಡೆಯುತ್ತ. ನಿತ್ಯವೂ ಸಿರಿವಂತ ಸಹವಾಸದಲ್ಲಿಯೇ ಇರುವ ಜೂಜುಗಾರನಿಗೂ ರಾಜನಿಗೂ ಏನಂತರವೆಂದು ಅವನ ವಾದ. ಅವನು ಕೊಂಡದ್ದು, ಕೊಟ್ಟದ್ದು, ಅವನ ಹೆಂಡತಿ ಮಕ್ಕಳ ಸಂಸಾರ, ಮಿತ್ರರು ಬಂಧುಗಳು, ಉಂಡದ್ದು ಉಟ್ಟದ್ದು-ಎಲ್ಲವೂ ಜೂಜಿನ ಪ್ರಸಾದವೇ ಎಂದು ಅವನ ಪ್ರಶಂಸೆ. ಇದು ಜೂಜಾಟದ ಉಲ್ಲಾಸದ ಮುಖ. ಇದರ ಪ್ರತಿ ಮುಖವೇ ಜೂಜಿನ ಬವಣೆ. ಇದರ ದುರಂತಚಿತ್ರವನ್ನು ದರ್ದುರಕ ಮಾಡಿಕೊಡುತ್ತಾನೆ. ತಲೆಕೆಳಕಾಗಿ ನೇಣುಹಾಕಿ ಹೋದರೂ ಸಹಿಸಿಕೊಂಡಿರಲು, ಬೆನ್ನಿನ ಮೇಲೆ ಬಿದ್ದ ಪೆಟ್ಟಿನ ಕಲೆಗಳು ಮೂಡಿದರೂ ಲೆಕ್ಕಿಸದಿರಲು, ತನ್ನ ಮುಂಗಾಲನ್ನು ನಾಯಿ ಕಚ್ಚಿ ತಿನ್ನುತ್ತಿದ್ದರೂ ತಾಳಿಕೊಳ್ಳಲು-ಯಾವ ಮನುಷ್ಯನಿಗೆ ಶಕ್ಯವಿಲ್ಲವೋ ಅಂಥ ಮೃದುಶರೀರನಿಗೆ ಜೂಜಾಟದ ಮಾತೇಕೆ?

ಶೂದ್ರಕನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಜೂಜಿನ ಮಹಿಮೆಯನ್ನು ವರ್ಣಿಸಿರುವ ಮಹಾಕವಿಯೇ ದಂಡಿ. ತಾರುಣ್ಯದಲ್ಲಿಯೇ ರಾಜ್ಯಕ್ಕೆ ಬಂದಿರುವ ಒಬ್ಬನನ್ನು ತನ್ನ ದುರ್ಬೋಧನೆಯಿಂದ ಹಾಳುಮಾಡುವ ಧೂರ್ತನಾದ ಮಿತ್ರನೊಬ್ಬನ ಉಪದೇಶ ಆತನ ದಶಕುಮಾರಚರಿತ್ರೆಯಲ್ಲಿ ಹೀಗೆ ಬರುತ್ತದೆ. ಜೂಜಿನಲ್ಲಿ ದ್ರವ್ಯರಾಶಿಯನ್ನೇ ಹುಲ್ಲಿಗಿಂತ ಕಡೆಯಾಗಿ ತೊರೆಯುವ ಅಭ್ಯಾಸ ಹೆಚ್ಚುವುದರಿಂದ ನಿರುಪಮವಾದ ಔದಾರ್ಯಗುಣ ಬೆಳಗುತ್ತದೆ; ಸೋಲುಗೆಲವುಗಳನ್ನು ಸರಿಸಮವಾಗಿ ತಿಳಿಯುವದರಿಂದ ಸುಖದುಃಖಗಳೆರಡರಲ್ಲಿಯೂ ಸಮತ್ವಗುಣ ಮೂಡುತ್ತದೆ; ಪೌರುಷಕ್ಕೆ ಪ್ರೇರಕವಾದ ಹುರುಪು ಹೆಚ್ಚುತ್ತದೆ. ಗರ, ನೆಲ ಮುಂತಾದವುಗಳಲ್ಲಿ ಮೋಸದ ರಹಸ್ಯವನ್ನು ಛೇದಿಸುವ ಶಕ್ತಿ ಬೆಳೆಯುವುದರಿಂದ ಬುದ್ಧಿ ತುಂಬ ಸೂಕ್ಷ್ಮವಾಗುತ್ತದೆ; ಒಂದೇ ವಿಷಯದಲ್ಲಿ ಮನಸ್ಸನ್ನು ನಿಲ್ಲಿಸುವುದರಿಂದ ಚಿತ್ತದ ಏಕಾಗ್ರತೆ ಸಿದ್ಧಿಸುತ್ತದೆ. ಕಷ್ಟಪ್ರಚುರವಾದ ದುಸ್ಸಾಹಸಗಳಲ್ಲಿ ಆ ಪ್ರೀತಿಯುಂಟಾಗುತ್ತದೆ; ಕರ್ಕಶಜನರ ಸಂಘರ್ಷದಿಂದ ಸೋಲರಿಯದ ಸ್ವಭಾವ ಸಹಜವಾಗುತ್ತದೆ, ಅಭಿಮಾನ ಹೆಚ್ಚುತ್ತದೆ. ದೈನ್ಯ ಮಾಯವಾಗುತ್ತದೆ.

ಅಕ್ಷದ್ಯೂತ[ಬದಲಾಯಿಸಿ]

ಇಷ್ಟೂ ಪ್ರಾಚೀನ ಭಾರತದಲ್ಲಿ ಅಕ್ಷದ್ಯೂತವೆನ್ನುವ ಜೂಜಿನ ವಿಷಯವಾಯಿತು. ಇದರಲ್ಲಿ ದಾಳ, ನೆತ್ತ, ಕವಡೆ, ಕಾಯಿ ಮುಂತಾದ ನಿರ್ಜೀವ ವಸ್ತುಗಳನ್ನು ಬಳಸಿ ಒಂದು ಗೊತ್ತಾದ ರೀತಿಯ ಹಲಗೆಯ ಮೇಲೆ ಉರುಳಿಸಿ ಸೋಲುಗೆಲುವುಗಳ ನಿರ್ಣಯವಾಗುತ್ತದೆ. ಆದರೆ ಸಜೀವ ಪ್ರಾಣಿಗಳನ್ನೋ ಮನುಷ್ಯರನ್ನೋ ಬಳಸಿ-ಓಟದ ಪಂದ್ಯಕ್ಕೆ ಹಚ್ಚುವುದೇ ಉದಾಹರಣೆ-ಸೋಲುಗೆಲುವುಗಳನ್ನು ನಿರ್ಣಯಿಸುವ ಜೂಜು ಇನ್ನೊಂದು ರೀತಿಯದಿದೆ. ಇದಕ್ಕೆ ಸಮಾಹ್ವಯವೆನ್ನುತ್ತಿದ್ದರು. ಕೋಳಿಯ ಕಾಳಗ, ಟಗರು ಕಾಳಗಗಳಲ್ಲೂ ಪಣವೊಡ್ಡುವ ಜೂಜುಗಳಿರುತ್ತಿದ್ದವು. ಐತಿಹಾಸಿಕ ಕಾಲದಲ್ಲಿ ಜೂಜುಕಟ್ಟೆಗಳನ್ನು ನಡೆಸಲು ರಹದಾರಿಪತ್ರಗಳನ್ನು ಕೊಡುತ್ತಿದ್ದ ದ್ಯೂತಾಧ್ಯಕ್ಷ ಅಥವಾ ಸಭಿಕ ಗೆದ್ದವರಿಂದ ಶೇಕಡಾ ಐದು ಲಾಭ ಪಡೆದು ರಾಜನ ಬೊಕ್ಕಸಕ್ಕೆ ಒಂದು ಪಾಲನ್ನು ಜಮಾ ಮಾಡುತ್ತಿದ್ದ ವಿಷಯ ಕೌಟಿಲ್ಯನ ಅರ್ಥಶಾಸ್ತ್ರದಿಂದ ತಿಳಿದುಬರುತ್ತದೆ. ಅಶೋಕ ಚಕ್ರವರ್ತಿ ಮಾತ್ರ ತನ್ನ ರಾಜ್ಯದಲ್ಲಿ ಜೂಜನ್ನು ಸಂಪೂರ್ಣವಾಗಿ ನಿಷೇಧಿಸಿದ್ದ, ಹಾಗೆಯೇ ಮಾಳವರಾಜನೊಬ್ಬ ಸರ್ವಸ್ವವನ್ನೂ ಕಳೆದುಕೊಂಡ ಜೂಜುಗಾರರಿಗಾಗಿ ಪುಕ್ಕಟೆ ಊಟ ವಸತಿಗಳನ್ನು ಕಲ್ಪಿಸಿದ್ದನಂತೆ.

ಜೂಜಿನ ರೀತಿ[ಬದಲಾಯಿಸಿ]

ಇಸ್ಟೀಟು, ಚದುರಂಗ, ಕುದುರೆಯ ಪಂದ್ಯ ಮುಂತಾದವು ಆಧುನಿಕ ಯುಗದಲ್ಲಿ ವಿಶೇಷ ಬಳಕೆಯಲ್ಲಿರುವ ಜೂಜಿನ ಪರಿಗಳು.

ಪ್ರವೃತ್ತಿ[ಬದಲಾಯಿಸಿ]

ವಿದ್ವಾಂಸರು ಜೂಜಿನ ಪ್ರವೃತ್ತಿಗೆ ಮೂರು ಮೂಲ ಕಾರಣಗಳನ್ನು ಹೇಳುತ್ತಾರೆ.

  1. ಸ್ವಲ್ಪಸ್ವಲ್ಪವಾಗಿ ಹಣವನ್ನು ಸಂಪಾದಿಸುವ ಕಷ್ಟವಿಲ್ಲದೆ ತಟ್ಟನೆ ದೊಡ್ಡ ಹಣವನ್ನು ಗಳಿಸುವ ಆಸೆ
  2. ಮನಸ್ಸಿಗೆ ಬರುವ ಉಲ್ಲಾಸ
  3. ಗೆದ್ದವನಿಗೆ ಅದೃಷ್ಟಶಾಲಿಯೆಂದು ಸಾರ್ವತ್ರಿಕವಾಗಿ ಬರುವ ಕೀರ್ತಿ
  4. ಸ್ಪರ್ಧೆ ಸೆಣಸಾಟಗಳ ವ್ಯಾಮೋಹ

ಗುಣದೋಷ[ಬದಲಾಯಿಸಿ]

ಜೂಜಿನ ಪ್ರವೃತ್ತಿಯಲ್ಲಿ ಗುಣಕ್ಕಿಂತ ದೋಷವೇ ಅಧಿಕವಾಗಿದೆ.

  1. ಇದು ಶ್ರೀಮಂತರ ಆಟವೇ ವಿನಾ ಬಡವರದಲ್ಲ
  2. ಗೆದ್ದರೆ ಎಲ್ಲ ಸರಿ, ಸೋಲುವುದೊಂದೇ ತಪ್ಪು ಎಂಬ ಭಾವನೆ ನೀತಿಪೋಷಕವಲ್ಲ
  3. ಪ್ರಸ್ತುತಃ ಇದರಲ್ಲಿ ಸಮಾಜಪೋಷಕವಾದುದೇನೂ ಇಲ್ಲವಷ್ಟೆ ಅಲ್ಲ ಸಮಾಜಶೋಷಕವಾದ ಅಂಶಗಳು ತುಂಬಿವೆ
  4. ಆನಾಗರಿಕ ಜನರ ವಿನೋದವೇ ಸುಸಂಸ್ಕøತರಿಗೆ ಯೋಗ್ಯವಾಗಲಾರದು

ಉಲ್ಲೇಖ[ಬದಲಾಯಿಸಿ]

  1. https://www.vijayavani.net/legalise-prostitution-law-cant-abolish-vices-retired-sc-judge-santosh-hegde/[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಜೂಜು&oldid=1160496" ಇಂದ ಪಡೆಯಲ್ಪಟ್ಟಿದೆ