ಜನಾರ್ಧನ ಹೆಚ್ (ಜನ್ನಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಾರ್ಧನ ಹೆಚ್ (ಜನ್ನಿ) [೧][೨] ಗಾಯಕ, ಸಂಘಟಕ, ನಿರ್ದೇಶಕ, ನಟ, ಸಂಯೋಜಕ, ರಂಗ ಸಂಸ್ಥೆಗಳ ಸಲಹೆಗಾರ, ಬೀದಿನಾಟಕದ ರೂವಾರಿ, ಸಂಗೀತ ನಿರ್ದೇಶಕ ಹೀಗೆ ಬಹುಮುಖ ಪ್ರತಿಭಾವಂತರು. ಕಳೆದ ಎರಡುವರೆ ದಶಕಗಳಿಂದ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಇವರು ಮಾಜಿ ರಂಗಾಯಣದ ನಿರ್ದೇಶಕರು[೩].

ಜನನ/ಜೀವನ[ಬದಲಾಯಿಸಿ]

  • ಹುಟ್ಟಿದ್ದು ಜುಲೈ ೨೧, ೧೯೫೮ರಲ್ಲಿ. ಸುಮಾರು ಮೂರುವರೆ ದಶಕಗಳಿಂದ ಕನ್ನಡ ರಂಗಭೂಮಿ ಹಾಗೂ ಭಾರತೀಯ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ದಲಿತ ಚಳುವಳಿ ಹಾಗೂ ಸಮುದಾಯ ರಂಗ ಚಳುವಳಿ ಮೂಲಕ ರಂಗ ಪ್ರವೇಶ ಮಾಡಿದರು.
  • ನಂತರ ಇವರು ಸಾಮಾಜಿಕ ಅರಿವು ಮತ್ತು ಬದಲಾವಣೆಗೆ ರಂಗಭೂಮಿ ಒಂದು ಅಸ್ತ್ರವೆಂದು ನಂಬಿ ತಾತ್ವಿಕ ನೆಲೆಗಟ್ಟಿನಿಂದ ಬದ್ದತಾಪೂರ್ಣ ರಂಗ ಚಟುವಟಿಕೆಗೆ ಹೆಸರಾಂತ ನಿರ್ದೇಶಕರಾಗಿ, ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ನಾಡಿನಾದ್ಯಂತ 'ಜನಮನದ ಜನ್ನಿ' ಎಂದೇ ಪ್ರಖ್ಯಾತ ರಾಗಿದ್ದಾರೆ.

ಸಾಕ್ಷರತಾ ಆಂದೋಲನ[ಬದಲಾಯಿಸಿ]

  • ಕರ್ನಾಟಕದ ಸಾಕ್ಷರತಾ ಆಂದೋಲನಕ್ಕೆ ಸಾಂಸ್ಕೃತಿಕ ಆಯಾಮ ಕೊಟ್ಟವರಲ್ಲಿ ಜನ್ನಿ ಪ್ರಮುಖರು. ಇವರು ಸಾಕ್ಷರತಾ ಆಂದೋಲನ ಯಶಸ್ಸಿಗಾಗಿ ಕಲಿಕೆಯ ವಾತಾವರಣ ನಿರ್ಮಾಣ ಮಾಡುವತ್ತ ನೂರಾರು ಬೀದಿ ನಾಟಕ ತಂಡಗಳಿಗೆ ತರಭೇತಿ ನೀಡಿ, ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.
  • ಅಲ್ಲದೆ ಸಾಕ್ಷರತಾ ಆಂದೋಲನ ನಿರ್ಮಾಣದ ರಾಜ್ಯ ಸಂಯೋಜಕರಾಗಿ ಪಯಣಿಸಿದ್ದಾರೆ. ನೃತ್ಯ ರೂಪಕಗಳಾದ 'ಬಡಪಾಯಿ ಮಾದಪ್ಪ', 'ಈ ನೆಲ ಈ ಜಲ', 'ಇಷ್ಟು ಬೇಗ ಮದುವೆ ಯಾಕವ್ವಾ', 'ಕೊಂದವರ್ಯಾರೂ', 'ಹಚ್ಚಬ್ಯಾಡ ಹಚ್ಚಬ್ಯಾಡವ್ವಾ' ಸಾಕ್ಷರತೆಯ ಸಾಧನವಾಗಿ ನಿರೂಪಿತವಾಗಿವೆ.

ಕಾವ್ಯರಂಗ ಪ್ರಯೋಗ[ಬದಲಾಯಿಸಿ]

ವಾಚನಾಭಿರುಚಿಗೆ ಮಾತ್ರ ಸೀಮಿತವಾಗಿದ್ದ ಕನ್ನಡ ಕಾವ್ಯ ಪರಂಪರೆಗೆ ರಂಗಭೂಮಿಯ ಆಯಾಮವನ್ನು ನೀಡಿದವರಲ್ಲಿ ಇವರು ಪ್ರಸಿದ್ದರಾಗಿದ್ದಾರೆ. ದಿವಂಗತ ಕಿ.ರಂ.ನಾಗರಾಜು ಅವರ ಸಾರಥ್ಯದಲ್ಲಿ ಇವರ ಕಾವ್ಯರಂಗ ಪ್ರಯೋಗಗಳಾದ 'ಸಿಂಗಿರಾಜ ಸಂಪಾದನೆ', 'ಸಮಗಾರ ಭೀಮವ್ವ', 'ಅಲ್ಲೇ ಕುಂತವರೆ', ಕೊಲೆಯ ಹಿಂದಿನ ರಾತ್ರಿ', 'ಕತ್ತೆ ಮತ್ತು ಧರ್ಮ'. ಕಲ್ಕಿ ಮತ್ತು ನಾಗಿ' ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ.

ನಟರಾಗಿ[ಬದಲಾಯಿಸಿ]

  1. ಗಿರೀಶ್ ಕಾರ್ನಾಡರ 'ಹಯವದನ',
  2. ಬ್ರೆಕ್ಟ್ ನ 'ತಾಯಿ',
  3. ತೇಜಸ್ವಿಯವರ 'ಕುಬಿ ಮತ್ತು ಇಯಾಲ',
  4. ಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ, ಕತ್ತಲ ದಾರಿ ದೂರ',
  5. ಚೋರ ಚರಣದಾಸ, ಸಂತ ಶಿಶುನಾಳ ಷರೀಫ, ಕುರಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ದೂರದರ್ಶನ ಮತ್ತು ಚಲನಚಿತ್ರರಂಗ ಹಾಗೂ ನಾಟಕಗಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕರಾಗಿ[ಬದಲಾಯಿಸಿ]

  1. ಕುಸುಮ ಬಾಲೆ-ದೇವನೂರು ಮಹಾದೇವ
  2. ತುಕ್ರನ ಕನಸು- ಚಂದ್ರಶೇಖರ ಕಂಬಾರ
  3. ಮುಟ್ಟಿಸಿಕೊಂಡವನು-ಪಿ.ಲಂಕೇಶ
  4. ಬಿಂಬ, ಬಂಡೆ ಕೊಳಲು- ಚದುರಂಗ
  5. ಸಾಯೋ ಆಟ- ದ.ರಾ.ಬೇಂದ್ರೆ
  6. ಜಲಗಾರ-ಕುವೆಂಪು
  7. ಮಾದಾರಿ ಮಾದಯ್ಯ ಮತ್ತು ಸಿಂಗಿರಾಜ ಸಂಪಾದನೆ, ಸಮಗಾರ ಭೀಮವ್ವ-ಹೆಚ್.ಎಸ್.ಶಿವಪ್ರಕಾಶ್
  8. ಅಲ್ಲೇ ಕುಂತವರೇ- ಸಿದ್ದಲಿಂಗಯ್ಯ ಮೊದಲಾದ ಮಹತ್ತರ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಬೀದಿನಾಟಕದ ರೂವಾರಿಯಾಗಿ[ಬದಲಾಯಿಸಿ]

  • ಬೀದಿನಾಟಕದ ಚಳುವಳಿಯನ್ನು ಬೆಳೆಸುವಲ್ಲಿ ಪ್ರಮುಖರಾದ ಇವರು ನಾಡಿನಾದ್ಯಂತ ಸಂಚರಿಸಿ, ಸಾವಿರಾರು ಹಳ್ಳಿಗಳಲ್ಲಿ ಪ್ರದರ್ಶನ ನೀಡುವುದರ ಮೂಲಕ ಸಾಂಸ್ಕೃತಿಕ ಪ್ರೇರಕರಾಗಿ ಕೆಲಸ ಮಾಡಿದ್ದಾರೆ. ಬೆಲ್ಜಿ, ಸೌಹಾರ್ದತೆ, ಎಚ್ಚರ, ಒಂದಾನೊಂದು ಊರು, ಗಾಂಧಿ ಹೇಳಿದ್ದು, ಆಶಯ, ಡಾಂಬರು ಬಂದದ್ದು, ಗುಮಾಸ್ತನ ಸಾವು ಮುಂತಾದ ಬೀದಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.
  • ರಚಿಸಿದ 'ಪತ್ರೆ ಸಂಗಪ್ಪನ ಕಗ್ಗೊಲೆ', 'ನರಗುಂದ ಬಂಡಾಯ', 'ಸ್ವಾತಂತ್ರ್ಯ ಅಂದು-ಇಂದು ನಾಟಕಗಳು ನಾಡಿನಾದ್ಯಂತ ಪ್ರದರ್ಶನಗೊಂಡಿವೆ. ಇವರು ನಿರ್ದೇಶಿಸಿದ ನಾಟಕಗಳು ರಾಷ್ಟ್ರೀಯ ಬೀದಿನಾಟಕ ಉತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಜೊತೆಗೆ ಕಲ್ಕತ್ತ, ದೆಹಲಿ, ಹೈದ್ರಾಬಾದ್, ಮಧ್ಯಪ್ರದೇಶದ ಭೂಪಾಲ್ ನ ಭಾರತ್ ಭವನದಲ್ಲೂ ಪ್ರದರ್ಶನಗೊಂಡು, ಪ್ರಶಂಸೆಗೊಳಪಟ್ಟಿವೆ.

ಸಾಂಸ್ಕೃತಿಕ ಸಂಘಟನಾಕಾರರಾಗಿ[ಬದಲಾಯಿಸಿ]

  • ಮೈಸೂರಿನ ಸಾಂಸ್ಕೃತಿಕ ರಂಗ ಸಂಘಟನೆಯಾದ 'ಜನಮನ'ದೊಂದಿಗೆ ಕೆಲಸ ಮಾಡುತ್ತಿರುವ ಇವರು ಕಳೆದ ಎರಡೂವರೆ ದಶಕಗಳಿಂದ ನೂರಾರು ಯುವಕ-ಯುವತಿಯರನ್ನು ರಂಗ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿ, ಪ್ರೋತ್ಸಾಹಿಸಿದ್ದಾರೆ.
  • ಯುವಜನತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಅವರಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅರಿವು, ಬದ್ದತೆ ಮೂಡಿಸುವಲ್ಲಿ ಪ್ರಿಯಾಶೀಲರಾಗಿದ್ದಾರೆ. ಅಲ್ಲದೆ ಅನೇಕ ರಂಗಸಂಸ್ಥೆಗಳಿಗೆ ಸಲಹೆಗಾರರಾಗಿ, ಸಾಮಾಜಿಕ ಜವಾಬ್ದಾರಿ ಹೊತ್ತು ಸೃಜನಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
  • ಅವಕಾಶ ವಂಚಿತ ಪ್ರತಿಭಾವಂತ ಗ್ರಾಮೀಣ ಹಿನ್ನೆಲೆಯ ಯುವಜನರಿಗೆ ರಂಗ ತರಭೇತಿ ಶಿಬಿರಗಳು ಮತ್ತು ರಂಗ ಸಂವಾದ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನಾಟಕ ಉತ್ಸವಗಳನ್ನು ಮಾಡುವುದರ ಮೂಲಕ ಅವರಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಿರುವರು.
  • ಪ್ರಖ್ಯಾತ ಕಲಾವಿದರ ಸಾಂಗತ್ಯದಲ್ಲಿ ಜನಪದ, ಜನಪರ, ತತ್ವಪದಗಳ ಹಾಡಿನ ತಂಡವು ನಿರಂತರವಾಗಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಾ, ಜನರಲ್ಲಿ ಸೌಹಾರ್ದತೆಯನ್ನು ಬಿತ್ತುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಖ್ಯಾತ ರಂಗತಜ್ಞರ ಒಡನಾಟದಲ್ಲಿ[ಬದಲಾಯಿಸಿ]

  • ರಾಷ್ಟ್ರೀಯ ಮತ್ತು ಅಂತರತಾಷ್ಟ್ರೀಯ ಖ್ಯಾತಿಯ ರಂಗ ನಿರ್ದೇಶಕರುಗಳಾದ 'ಫ್ರಿಡ್ಜ್ ಬೆನಿವಡ್ಜ್', ಬಿ.ವಿ.ಕಾರಂತ, ಬಾದಲ್ ಸರ್ಕಾರ್, ಪ್ರಸನ್ನ, ಎಂ.ಎನ್.ಸತ್ಯು, ಸಿ.ಜಿ.ಕೃಷ್ಣಮೂರ್ತಿ, ರಣಜಿತ್ ಕಪೂರ್, ರೋಬಿನ್ ದಾಸ್, ಅಮಲ್ ಅಲ್ಲಾನ, ಬಿ.ಎಂ.ಷಾ, ಅಂಕೂರ್, ಅಲಕನಂದ್ ಸಮ್ರತ್, ಗುರೂಜಿ ಫಣಿಕರ್, ನರಸಿಂಹನ್, ಪ್ರೇಮಕಾರಂತ ಮೊದಲಾದ ರಂಗ ದಿಗ್ಗಜರ ಒಡನಾಟದಲ್ಲಿ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ, ನಟರಾಗಿ, ಸಂಘಟಕರಾಗಿ ಕೆಲಸ ಮಾಡಿ ಅನುಭವ ಪಡೆದ ಇವರು ಪ್ರಬುದ್ದ ನಾಟಕಗಳನ್ನು ನೀಡಿರುವುದಲ್ಲದೆ, ರಾಷ್ಟ್ರಮಟ್ಟದ ರಂಗಮೇಳಗಳು, ರಂಗ ಸಂವಾದಗಳಲ್ಲದೆ ನಾಟಕೋತ್ಸವಗಳಲ್ಲಿ ಭಾಗವಹಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನದಲ್ಲಿ[ಬದಲಾಯಿಸಿ]

  • ೨೦೦೬ರಲ್ಲಿ ಅಮೆರಿಕಾದ 'ಬಾಲ್ಟಿ ಮೋರ್'ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಂಗಭೂಮಿ ಹಾಗೂ ಜನಪದ ಗಾಯಕರಾಗಿ ಭಾಗವಹಿಸಿ ಪ್ರಬುದ್ದ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ವಾಷಿಂಗ್‍ಟನ್, ನ್ಯೂಯಾರ್ಕ್, ನ್ಯೂಜರ್ಸಿ, ಅಟ್ಲಾಂಟ, ಕನೆಕ್ಟಿಕಟ್ ಮುಂತಾದ ಪಾಶ್ಚಾತ್ಯ ನಗರಗಳಲ್ಲಿ ಜನಪದ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆ ಗಳಿಸಿದ್ದಾರೆ.
  • ೨೦೧೦ರಲ್ಲಿ ಲಾಸ್‍ಏಂಜಲಿಸ್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಜನಪದ ಗಾಯನದ ಮೂಲಕ ಜನಮನ ಗೆದ್ದಿದ್ದಾರೆ. ಅಲ್ಲದೆ ಕ್ಯಾಲಿಫೋರ್ನಿಯಾ, ಸ್ನಾನ್‍ಫ್ಯಾನ್ಸಿಸ್ಕೋ, ಸ್ಯಾನ್‍ಹೌಸೆ ಸ್ಥಳಗಳಲ್ಲಿ ಜನಮೆಚ್ಚುಗೆ ಗಳಿಸಿ ನಾಡಿಗೆ ಗೌರವ ತಂದಿದ್ದಾರೆ.

ರಂಗ ಸಂಘಟಕರಾಗಿ[ಬದಲಾಯಿಸಿ]

  • ಇವರು ಬೀದರ್ ಜಿಲ್ಲೆಯಿಂದ ಹಿಡಿದು ಕೋಲಾರ ಜಿಲ್ಲೆಯವರೆಗೆ ಸಂಚರಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ರಾಜ್ಯಮಟ್ಟದಲ್ಲಿ ನಡೆದ 'ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ(೧೯೭೯-೮೦) ಮತ್ತು ರೈತನತ್ತ ಜಾಥಾ (೧೯೮೦-೮೧), ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಇವನ್ನೇಲ್ಲ ಆಯೋಜನೆ ಮಾಡಿ ಅದರಲ್ಲಿ ಯಶಸ್ವೀಯಾಗಿದ್ದಾರೆ.
  • ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಅವಧಿಯಲ್ಲಿ ನಾಡಿನಲ್ಲೇ ಪ್ರಥಮ ಬುಡಕಟ್ಟು ರಂಗಭೂಮಿಯನ್ನು ಪರಿಚಯಿಸಿದ್ದಾರೆ. ಗಿರೀಶ ಕಾರ್ನಾಡರ ಕುರಿತು 'ಆಧುನಿಕ ರಂಗಭೂಮಿ ಒಂದು ಚರ್ಚೆ' ಆಯೋಜಿಸಿ, ಮೈಸೂರಿನಲ್ಲಿ ನಡೆದ ರಂಗೋತ್ಸವ-೯೭' ನಾಟಕೋತ್ಸವವನ್ನು ಸಂಪನ್ನಗೊಳಿಸಿದ್ದಾರೆ.

ಗಾಯಕ, ಸಂಗೀತ ನಿರ್ದೇಶಕರಾಗಿ[ಬದಲಾಯಿಸಿ]

ಬರ ಚಿತ್ರದ ಮೂಲಕ ಚಲನ ಚಿತ್ರರಂಗಕ್ಕೆ ಪ್ರವೇಶಿಸಿದ ಇವರು ಸಿ.ಅಶ್ವಥ್, ಬಿ.ವಿ.ಕಾರಂತ, ವಿ.ಮನೋಹರ್, ಹಂಸಲೇಖರೊಂದಿಗೆ ಕೆಲಸ ಮಾಡಿ ಅನುಭವ ಪಡೆದಿದ್ದಾರೆ.

  1. ತದಾನ,
  2. ದುನಿಯಾ,
  3. ಪರಿ,
  4. ಅಮಾಸ,
  5. ಅ ಆ ಇ ಈ,
  6. ಮಾತಾಡ್ ಮಾತಾಡ್ ಮಲ್ಲಿಗೆ,
  7. ಸಿಂಗಾರವ್ವನ ಅರಮನೆ,
  8. ನೋಡು ಬಾ ನಮ್ಮೂರ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ.

ನೀತಿ ಚಕ್ರ, ಓ ನನ್ನ ಚೇತನ,ಕಾಡಿನ ಮಕ್ಕಳು, ನೀನೆಲ್ಲಿರುವೆ ಮತ್ತು ಕ್ರೈಂ-ಟೈಂ ಧಾರವಾಹಿಗಳಿಗಾಗಿ, ಸಂಗೀತ ನಿರ್ದೇಶನ ಮಾಡಿ, ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. ರಂಗ ಸಂಗೀತ ನಿರ್ದೇಶಕರಲ್ಲಿ ಪ್ರಮುಖರಾದ ಇವರು ಈವರೆವಿಗೂ ಈ ಕೆಳಕಂಡ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  1. ಸೂರ್ಯ ಶಿಕಾರಿ
  2. ಧರ್ಮಪುರಿಯ ದೇವದಾಸಿ
  3. ದ್ಯಾವನೂರು
  4. ಮನೆ
  5. ಬಡಪಾಯಿ ಮಾದಪ್ಪ
  6. ಚೆ ಸವಾರ್
  7. ಪುಂಟೀಲ
  8. ಜೋಗತಿ
  9. ತಷ್ಕರ
  10. ಜಸ್ಮಾ ಓಡನ್
  11. ಕೆರೆಗೆ ಹಾರ
  12. ಅವ್ವಾ
  13. ಮನುಕುಲದ ಹಾಡು
  14. ತಾಯಿ ಹೊಕ್ಕಳ ಹೂ
  15. ಸಾವಿರಾರು ನದಿಗಳು
  16. ಅರಳದ ಮೊಗ್ಗುಗಳು
  17. ಮುಂಜಾನೆ
  18. ನೀಲಿತಾರೆ
  19. ಕೆಂಪುಸೂರ್ಯ
  20. ಕೇಳವ್ವ ತಾಯಿ
  21. ಹಾಡಲ್ಲ ಒಡಲುರಿ
  22. ಬುದ್ದ ವಂದನೆ
  23. ನನ್ನ ಜನಗಳು
  24. ಬನದ ಹಾಡು

ಮೊದಲಾದುವು. ಇವುಗಳಲ್ಲದೆ ಮಹಿಳೆ ಮತ್ತು ಮಕ್ಕಳು, ಅನಕ್ಷರಸ್ಥರು ಕಲಿಯುವಂತೆ ಪ್ರೇರೆಪಿಸುವ ನವ ಸಾಕ್ಷರಗೀತೆಗಳನ್ನು, ಪರಿಸರ ಜಾಗೃತಿ ಮೂಡಿಸುವ ಗೀತೆಗಳನ್ನು ಧ್ವನಿ ಸುರುಳಿಯ ಮೂಲಕ ಹೊರತಂದಿದ್ದಾರೆ. ಜನಪರ ಗೀತೆಗಳ ಚಳುವಳಿಯ ಮುಂಚೂಣಿಯಲ್ಲಿರುವ ಇವರು ಬಸವಣ್ಣನವರ 'ಕೂಡಲ ಸಂಗಮ' ಧ್ವನಿ ಸುರುಳಿಯ ಪ್ರಮುಖ ಗಾಯಕರಾಗಿ ಹಾಡಿದ್ದಾರೆ.

ಪ್ರಶಸ್ತಿ/ಗೌರವ/ ಸನ್ಮಾನ[ಬದಲಾಯಿಸಿ]

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿರುವ ಜನ್ನಿಯವರಿಗೆ ಹಲವಾರು ಪ್ರಮುಖ ಪ್ರಶಸ್ತಿಗಳು ದೊರಕಿವೆ.

  1. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
  2. ಕರ್ನಾಟಕ ಚಲನಚಿತ್ರ ಹಿನ್ನೆಲೆ ಗಾಯನ ಪ್ರಶಸ್ತಿ
  3. ಕರ್ನಾಟಕ ಸರ್ಕಾರದ ಅಂಬೇಡ್ಕರ್ ಪ್ರಶಸ್ತಿ
  4. ಮಂಡ್ಯದ ಕೆ,ವಿ. ಶಂಕರೇಗೌಡ ಪ್ರಶಸ್ತಿ
  5. ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  6. ರಂಗಶ್ರೀ ಪ್ರಶಸ್ತಿ
  7. ನೋಡು ಬಾ ನಮ್ಮೂರ ಚಲನಚಿತ್ರದ ಹಿನ್ನೆಲೆ ಗಾಯನಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.rangayana.org/%E0%B2%A8%E0%B2%AE%E0%B3%8D%E0%B2%AE-%E0%B2%AC%E0%B2%97%E0%B3%8D%E0%B2%97%[ಶಾಶ್ವತವಾಗಿ ಮಡಿದ ಕೊಂಡಿ] E0%B3%86 /%E0%B2%A8%E0%B2%BF%E0%B2%B0%E0%B3%8D%E0%B2%A6%E0%B3%87%E0%B2%B6%E0%B2%95%E0%B2%B0%E0%B3%81/%E0%B2%9C%E0%B2%A8%E0%B2%BE%E0%B2%B0%E0%B3%8D%E0%B2%A7%E0%B2%A8-%E0%B2%B9%E0%B3%86%E0%B2%9A%E0%B3%8D-%E0%B2%9C%E0%B2%A8%E0%B3%8D%E0%B2%A8%E0%B2%BF/
  2. http://kannadarangabhoomi.org/%E0%B2%B[ಶಾಶ್ವತವಾಗಿ ಮಡಿದ ಕೊಂಡಿ] 5%E0%B2%BF %E0%B2%B3%E0%B2%BE%E0%B2%B8%E0%B2%97%E0%B2%B3%E0%B3%81/%E0%B2%B9%E0%B3%8A%E0%B2%B0%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86-%E0%B2 %95%E0%B2%B2%E0%B2%BE%E0%B2%B5%E0%B2%BF%E0%B2%A6%E0%B2%B0-%E0%B2%AA%E0%B2%9F%E0%B3%8D%E0%B2%9F%E0%B2%BF/
  3. "ಆರ್ಕೈವ್ ನಕಲು". Archived from the original on 2021-09-22. Retrieved 2018-05-07.