ಜಂಬೂನಾಥೇಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ದೇವಸ್ಥಾನ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಸುಮಾರು ೬ ಕಿ.ಮೀ. ದೂರದಲ್ಲಿದೆ. ಹೊಸಪೇಟೆಯಿಂದ ಸಂಡೂರಿಗೆ ಹೋಗುವ ಮಾರ್ಗದಲ್ಲಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು ೧೩೩೬ರಲ್ಲಿ. ವಿಜಯನಗರ ಸ್ಥಾಪನೆಗೂ ಮೊದಲೇ ಈ ದೇವಾಲಯವೆತ್ತೆಂದು ಆಧಾರಗಳಿಂದ ತಿಳಿದುಬಂದಿದೆ.

ಇಲ್ಲಿ ಜಾಂಬುವಂತನು ೧೦ ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿ ವಿರೂಪಾಕ್ಷನ ಕರುಣೆಗೆ ಪಾತ್ರನಾದನೆಂಬ ಕತೆ ಇದೆ. ಜಂಬೂನಾಥೇಶ್ವರ ಲಿಂಗವು ಉದ್ಭವ ಲಿಂಗವಾಗಿದ್ದು, ಭೈರ, ತ್ರಿಶಂಕು ಮತ್ತು ಪರಾಹ ಎಂಬ ಮೂವರು ರಾಜರು ಈ ದೇವಸ್ಥಾನವನ್ನು ೧೩೧೦ರಲ್ಲಿ ಕಟ್ಟಿಸಿದರೆಂಬ ಇತಿಹಾಸವಿದೆ. ಹಂಪೆಯ ದಕ್ಷಿಣ ಗಡಿ ಎಂದೇ ಗುರುತಿಸಲ್ಪಟ್ಟಿರುವ ಇದು, ಲೋಹಾದ್ರಿ ತಪ್ಪಲಿನ ಸುಂದರವಾದ ಪರಿಸರದಲ್ಲಿ ಸ್ಥಾಪಿತವಾಗಿದ್ದು ಎತ್ತರವಾದ ಅದಿರಿನ ಬೆಟ್ಟಗಳಿಂದ ಸುತ್ತುವರಿದಿದೆ.


ಇದರ ವಾಸ್ತು ರಚನೆ ಹಂಪೆಯ ವಿರೂಪಾಕ್ಷೇಶ್ವರ ದೇವಸ್ಥಾನವನ್ನು ಹೋಲುವುದನ್ನು ನೋಡಿ, ಕಾಲಾನಂತರದಲ್ಲಿ ವಿಜಯನಗರ ಅರಸರಿಂದ ಪುನಾರಚನೆಗೊಂಡಿತೇನೋ ಎಂದು ಅನುಮಾನಿಸಲಾಗಿದೆ. ಸುಂದರ ಕೆತ್ತನೆಗಳಿಂದ ಕೂಡಿದ ಮುಖಮಂಟಪವಿದೆ. ಎಲ್ಲಾ ಶಿವ ದೇವಾಲಯಗಳಲ್ಲಿ ಲಿಂಗದ ಎದುರು ಒಂದು ನಂದಿ ಇರುವುದು ಸಾಮಾನ್ಯ. ಆದರೆ ಇಲ್ಲಿ ನವರಂಗದ ಭಾಗದಲ್ಲಿ ಮೂರು ನಂದಿಗಳಿರುವುದು ವಿಶೇಷ.

ದೇವಸ್ಥಾನದ ಆವರಣದಲ್ಲಿ ಕಾಂಚನತೀರ್ಥ ಎಂಬ್ ಬಾವಿ ಇದೆ. ಭೂಮಟ್ಟದಿಂದಲೇ ನೂರಾರು ಅಡಿ ಕೊರೆದರೂ ಸಿಗದ ನೀರು, ಬೆಟ್ಟದ ಮಧ್ಯದ ಈಬಾವಿಯಲ್ಲಿ ಯಾವಕಾಲಕ್ಕೂ ಬತ್ತದಿರುವುದು ಸೋಜಿಗದ ಸಂಗತಿ. ಅರಣ್ಯದ ಅನೇಕ ಗಿಡಮೂಲಿಕೆಗಳನ್ನು ಹಾದು ಈ ಬಾವಿಯೊಳಗೆ ಬಸಿಯುವ ನೀರಿಗೆ ಔಷಧೀಯ ಗುಣವಿದೆ ಎಂದು ಹೇಳಲಾಗುತ್ತದೆ . ಮಧುಮೇಹ ಇರುವವರು ಪ್ರತಿದಿನ ಬೆಳಗ್ಗೆ ಈ ನೀರು ಕುಡಿದರೆ ಗುಣಮುಖರಾಗುತ್ತಾರೆ ಎಂದು ಸ್ಥಳೀಯರ ನಂಬಿಕೆ. .