ವಿಷಯಕ್ಕೆ ಹೋಗು

ಗೋದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋದಾನ ಎನ್ನುವುದು ಗೋವನ್ನು ದಾನವಾಗಿ ಕೊಡುವ ಒಂದು ಕಟ್ಟಳೆ.[][][] ಇದು ವೇದ ಕಾಲದಿಂದ ಇಂದಿನವರೆಗೂ ನಡೆದು ಬಂದಿದೆ. ಗೋವು ಸಕಲ ದೇವತಾಮಯವೆಂದು ವೇದ ಪುರಾಣಾದಿಗಳು ಹೇಳುತ್ತವೆ. ಯಜ್ಞಾಂತ್ಯದಲ್ಲಿ ಋತ್ವಿಜರಿಗೆ ದಕ್ಷಿಣೆಯನ್ನು ಗೋದಾನ ರೂಪದಲ್ಲಿಯೇ ಕೊಡುವ ಪದ್ಧತಿಯಿತ್ತು. ಇಂಥಿಂಥ ಋತ್ವಿಜರಿಗೆ ಇಷ್ಟಿಷ್ಟು ಕೊಡಬೇಕೆಂದು ಯಜ್ಞಕ್ರಮ ಹೇಳುತ್ತದೆ.

ಪುರಾಣಗಳಲ್ಲಿ ಗೋದಾನದ ಬಗ್ಗೆ ಮತ್ತು ಗೋದಾನದ ನಿಯಮಗಳು

[ಬದಲಾಯಿಸಿ]

ಕಠೋಪನಿಷತ್ತಿನಲ್ಲಿ ಬರುವಂತೆ ನಚಿಕೇತ ತನ್ನ ತಂದೆ ಯಜ್ಞಾನಂತರ ಋತ್ವಿಜರಿಗೆ ಅಯೋಗ್ಯ ಗೋವುಗಳನ್ನು ಕೊಡುವುದನ್ನು ನೋಡಿ[] ಶ್ರದ್ಧಾಯುಕ್ತನಾಗಿ ತನ್ನನ್ನು ಯಾರಿಗೆ ಕೊಡುವೆಯೆಂದು ಆತನನ್ನು ಪ್ರಶ್ನಿಸಿದನೆಂದೂ ಆಗ ಅವನು ಯಮನಿಗೆ ಎಂದು ಸಿಟ್ಟಿನಿಂದ ಹೇಳಿದನೆಂದೂ,[] ಅನಂತರ ನಚಿಕೇತನು ಯಮನಿಂದ ಆಧ್ಯಾತ್ಮಿಕ ಉಪದೇಶ ಪಡೆದನೆಂದೂ ಇದೆ.

ಬೃಹದಾರಣ್ಯಕೋಪನಿಷತ್ತಿನಲ್ಲಿರುವಂತೆ ಜನಕನು ಬ್ರಹ್ಮಿಷ್ಠನಾದ ಯಾಜ್ಞವಲ್ಕ್ಯನಿಗೆ ವೇದಾಂತವಾದದಲ್ಲಿ ಜಯಿಸಿ ಪಡೆದ ಸಾವಿರಾರು ಗೋವುಗಳನ್ನು ಕೊಟ್ಟ.

ಗ್ರಹಣ ಸಮಯದಲ್ಲಿಯೂ, ಮರಣ ಸಮಯದಲ್ಲಿಯೂ, ಕ್ಷೇತ್ರದಲ್ಲಿಯೂ ಗೋದಾನ ಮಾಡುವ ಪದ್ಧತಿ ಹೆಚ್ಚಾಗಿ ಇದೆ. ಮರಣಾನಂತರ ಮೃತನ ಸದ್ಗತಿಗಾಗಿ ಗೋದಾನ ಮಾಡುವ ಪರಂಪರೆಯನ್ನು ಇಂದಿಗೂ ಕಾಣಬಹುದು. ಗೋದಾನ ಅತಿಶಯ ಪುಣ್ಯಪ್ರದವಾದ ದಾನವೆಂದೂ ಶಾಸ್ತ್ರಗಳು ಸಾರುತ್ತವೆ. ಗೋವುಗಳನ್ನು ಸಂತುಷ್ಟಿಗೊಳಿಸಿದರೆ, ಸಕಲ ಪಾಪ ಶಮನವಾಗುವುದೆಂದೂ, ದಾನಕೊಟ್ಟರೆ ಸ್ವರ್ಗ ಸಮಾನವಾದ ಸಂಪತ್ತು ಇನ್ನೊಂದಿಲ್ಲವೆಂದೂ ಸ್ಕಾಂದಪುರಾಣದಲ್ಲಿ ಹೇಳಿದೆ. ಬಹಳ ಹಾಲನ್ನು ಹಿಂಡುವ ಒಳ್ಳೆಯ ನಡತೆಯ ಲಕ್ಷಣವಾದ ಗೋವನ್ನು ಕರುವಿನೊಂದಿಗೆ ದಾನ ಮಾಡಬೇಕೆಂದೂ ಸ್ಮೃತಿಕಾರ ದೇವಲ ಹೇಳುತ್ತಾನೆ.

ಬ್ರಹ್ಮ ಪುರಾಣದಲ್ಲಿ ತನ್ನ ಮೊಲೆಯ ಹಾಲನ್ನು ತಾನೇ ಕುಡಿಯುವ, ಹೆಚ್ಚು ಆಹಾರ ಸೇವಿಸುವ, ಬಾಲ್ಯಾವಸ್ಥೆಯಲ್ಲಿಯೇ ಗರ್ಭಧರಿಸಿದ ಗೋವನ್ನು ದಾನ ಮಾಡಬಾರದು ಎಂದಿದೆ. ಗೋದಾನ ಮಾಡಿದರೆ ಸ್ವರ್ಗ ಲಭಿಸುವುದೆಂದೂ, ಹತ್ತು ಗೋದಾನ ಮಾಡಿದರೆ ಗೋಲೋಕ ಪ್ರಾಪ್ತಿಯೆಂದೂ, ನೂರು ಗೋದಾನ ಮಾಡಿದರೆ ಬ್ರಹ್ಮಲೋಕ ಪ್ರಾಪ್ತಿಯೆಂದೂ ಸ್ಮೃತಿಕಾರ ವಿಷ್ಣು ಹೇಳಿದ್ದಾನೆ. ಹೋಮಕ್ಕಾಗಿ ಅಗ್ನಿಹೋತ್ರಿಗೆ ಗೋವನ್ನು ಅವನು ಬೇಡದೇ ಕೊಟ್ಟದ್ದಾದರೆ ಸಕಲ ಭೂಮಂಡಲವನ್ನೇ ದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಜಾಬಾಲನ ಅಭಿಪ್ರಾಯ. ಅಪಾತ್ರನಿಗೆ ಗೋದಾನ ಮಾಡಿದರೆ ಕೊಟ್ಟವನು ನರಕಕ್ಕೆ ಹೋಗುತ್ತಾನೆಂದು ನಂದಿ ಪುರಾಣದಲ್ಲಿರುವುದು ಗಮನಾರ್ಹವಾಗಿದೆ. ಹೀನಾಂಗದ, ದುಷ್ಟ ಸ್ವಭಾವದ, ದುರ್ಬಲವಾದ, ಮುಪ್ಪಾದ, ವ್ಯಾಧಿ ಪೀಡಿತವಾದ, ಹಣ ಸಲ್ಲಿಸದೇ ಕೊಂಡುಕೊಂಡ, ಕೃಶವಾದ, ದುಷ್ಟ ಕರುವುಳ್ಳ, ಬಂಜೆಯಾದ, ಅಧಿಕಾಂಗದ ಗೋವುಗಳನ್ನು ದಾನ ಮಾಡಬಾರದೆಂದು ಶಾಸ್ತ್ರೋಕ್ತಿ, ಹಾಗೂ ಇಂಥಿಂಥ ಬಣ್ಣದ ಗೋವನ್ನು ಇಂಥಿಂತ ರೀತಿಯಲ್ಲಿ ದಾನ ಮಾಡಬೇಕೆಂದೂ, ಅದರಿಂದ ಈ ರೀತಿಯ ಫಲಪ್ರಾಪ್ತಿಯಾಗುತ್ತದೆಂದೂ ಸ್ಮೃತಿಕಾರರು ಹೇಳಿದ್ದುಂಟು.

ಗೋದಾನ ಕ್ರಮ

[ಬದಲಾಯಿಸಿ]

ಮೊದಲು ಗ್ರಾಸ ಕೊಟ್ಟು ಗೋವನ್ನು ತೃಪ್ತಿಪಡಿಸಬೇಕು. ಅನಂತರ ಗೋವಿನ ಕೊಂಬಿಗೆ ಸುವರ್ಣದಿಂದಲೂ, ಗೊರಸಿಗೆ ಬೆಳ್ಳಿಯಿಂದಲೂ ಅಲಂಕರಿಸಿ ಅದಕ್ಕೆ ರೇಷ್ಮೆ ವಸ್ತ್ರವನ್ನು ಹೊದಿಸಬೇಕು. ಅನಂತರ ಗಂಧಾಕ್ಷತಪುಷ್ಪಾದಿಗಳಿಂದ ಚೆನ್ನಾಗಿ ಪೂಜಿಸಿ ಪೂರ್ವಾಭಿಮುಖವಾಗಿರುವ ಗೋವಿನ ಬಾಲವನ್ನೂ, ಕರುವಿನ ಬಾಲವನ್ನೂ ತುಪ್ಪದ ಪಾತ್ರೆಯಲ್ಲಿಟ್ಟು ಉತ್ತರಾಭಿಮುಖನಾದ ಬ್ರಾಹ್ಮಣನಿಗೆ ಎಳ್ಳು ದರ್ಭೆಗಳೊಂದಿಗೆ ನೀರು ಬಿಟ್ಟು ದಾನ ಮಾಡಬೇಕು. ಆಗ ಯಜ್ಞ ಸಾಧನಭೂತಾಯ ... ಎಂಬ ಶ್ಲೋಕವನ್ನು ಉಚ್ಚರಿಸಬೇಕು. ಯಜ್ಞಕ್ಕೆ ಸಾಧನಭೂತವಾದ ಸಕಲ ಪಾಪಗಳೂ ಪರಿಹಾರ ಮಾಡುವ ಈ ಗೋದಾನದಿಂದ ವಿಶ್ವರೂಪಧರನಾದ ಪರಮಾತ್ಮ ಪ್ರೀತನಾಗಲಿ ಎಂದು ಅದರರ್ಥ.

ಇನ್ನೊಂದು ಅರ್ಥದಲ್ಲಿ ಗೋದಾನವೆಂದರೆ ಗರ್ಭಾಧಾನಾದಿ ಷೋಡಶ ಸಂಸ್ಕಾರಗಳಲ್ಲೊಂದು. ಮಲ್ಲಿನಾಥನ ಹೇಳಿಕೆಯಂತೆ ಇಲ್ಲಿ ಗೋ ಎಂದರೆ ಕೂದಲು. ಅದನ್ನು ಕತ್ತರಿಸುವದೇ ದಾನ. ಈ ಸಂಸ್ಕಾರವನ್ನು ಬ್ರಾಹ್ಮಣನಿಗೆ 16ನೆಯ ವರ್ಷಕ್ಕೂ, ಕ್ಷತ್ರಿಯನಿಗೆ 22ನೆಯ ವರ್ಷಕ್ಕೂ, ವೈಶ್ಯನಿಗೆ 24 ವರ್ಷಕ್ಕೂ ಮಾಡಬೇಕೆಂದೂ ಮನುಧರ್ಮಶಾಸ್ತ್ರದಲ್ಲಿದೆ. ಕಾಳೀದಾಸನ ರಘುವಂಶ ಮಹಾಕಾವ್ಯದಲ್ಲಿ ರಘುವಿಗೆ ದಿಲೀಪ ಗೋದಾನ ವಿಧಿಯ ಅನಂತರ ವಿವಾಹ ವಿಧಿಯನ್ನು ನೆರವೇರಿಸಿದನೆಂದಿದೆ. ಈ ಸಂಸ್ಕಾರ ಕ್ರಮದಲ್ಲಿ ಹೋಮಾದಿಗಳ ಅನಂತರ ಒಂದು ಹಸುವಿಗೆ ಗ್ರಾಸ ಕೊಟ್ಟು ತೃಪ್ತಿಪಡಿಸಿ ಗುರುಗಳಿಗೆ ಅದನ್ನು ದಾನವಾಗಿಕೊಡಬೇಕೆಂದೂ ಇದೆ. ಇದು ವೇದವ್ರತಗಳಲ್ಲೊಂದು.

ಉಲ್ಲೇಖಗಳು

[ಬದಲಾಯಿಸಿ]
  1. Prinja, Nawal K. (24 August 2009). "Hindu weddings". BBC. Retrieved 25 August 2021.
  2. https://www.krishnayangauraksha.org/blog/everything-you-need-to-know-about-godan.html
  3. https://www.rudraksha-ratna.com/articles/cow_donation?srsltid=AfmBOorOTTXS_p1s_rpAwA66WEkuRztLxProzC1Yn75ZJpPFF2Fmgiqn
  4. Swami Prabhavananda and Frederick Manchester, Breath of the Eternal http://www.atmajyoti.org/up_katha_upanishad_text.asp Archived 29 April 2011 ವೇಬ್ಯಾಕ್ ಮೆಷಿನ್ ನಲ್ಲಿ.
  5. Mosher, Lucinda; Chander, Vineet (2019-10-21). Hindu Approaches to Spiritual Care: Chaplaincy in Theory and Practice (in ಇಂಗ್ಲಿಷ್). Jessica Kingsley Publishers. p. 127. ISBN 978-1-78592-606-8.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋದಾನ&oldid=1303423" ಇಂದ ಪಡೆಯಲ್ಪಟ್ಟಿದೆ