ವಿಷಯಕ್ಕೆ ಹೋಗು

ಗೋಖಲೆಯವರ ಶೈಕ್ಷಣಿಕ ಮಸೂದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಖಲೆಯವರ ಶೈಕ್ಷಣಿಕ ಮಸೂದೆ ಎನ್ನುವುದು 1912ರಲ್ಲಿ ಭಾರತದ ಕೇಂದ್ರ ಶಾಸನ ಸಭೆಯಲ್ಲಿ ಗೋಖಲೆಯವರು, ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಶಿಕ್ಷಣದ ತತ್ತ್ವವನ್ನು ಕ್ರಮಕ್ರಮವಾಗಿ ಆಚರಣೆಗೆ ತರಬೇಕೆಂದು ಸೂಚಿಸಿ ಮಂಡಿಸಿದ ಒಂದು ಮಸೂದೆ (ವಿಧಾಯಕ). ಅಂದಿನ ವೈಸರಾಯಾಗಿದ್ದ ಕರ್ಜ಼ನ್ 1905ರಿಂದ ಪ್ರಾಥಮಿಕ ಶಿಕ್ಷಣ ಸೌಲಭ್ಯವನ್ನು ಏಕಪ್ರಕಾರವಾಗಿ ವಿಸ್ತರಿಸುತ್ತ ಬಂದಿದ್ದರೂ, ಶಿಕ್ಷಣದ ಆಡಳಿತಾಧಿಕಾರಿಗಳು ಆ ಮಟ್ಟದ ಶಿಕ್ಷಣವನ್ನು ವಿಸ್ತರಿಸುವುದರ ಬದಲು ಅದರ ಗುಣಮಟ್ಟವನ್ನು ಉತ್ತಮಪಡಿಸುವ ಕಡೆ ಗಮನ ಕೊಡಬೇಕೆಂದು ಒತ್ತಿ ಹೇಳಲಾರಂಭಿಸಿದ್ದರು. ಆದರೆ ರಾಷ್ಟ್ರದ ನಾಯಕರು ಈ ಪ್ರವೃತ್ತಿಯನ್ನು ವಿರೋಧಿಸಿ, ರಾಷ್ಟ್ರದಲ್ಲಿ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರಲು ಒತ್ತಾಯ ಹಾಕುತ್ತಿದ್ದರು. ಈ ನಡುವೆ, ಎಂದರೆ 1906ರಲ್ಲಿ, ಬರೋಡದ ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಕಡ್ಡಾಯ ಶಿಕ್ಷಣವನ್ನು ಶಾಸನಬದ್ಧವಾಗಿ ಆಚರಣೆಗೆ ತಂದುಬಿಟ್ಟರು.[] ಆದ್ದರಿಂದ ಬ್ರಿಟಿಷರ ನೇರ ಆಡಳಿತದಲ್ಲಿದ್ದ ಪ್ರಾಂತ್ಯಗಳಲ್ಲಿ ಅದನ್ನು ಏಕೆ ಆಚರಣೆಗೆ ತರಬಾರದೆಂದು ಚಳವಳಿ ಆರಂಭವಾಯಿತು. ಈ ಚಳವಳಿಯ ಮುಖಂಡರಲ್ಲೊಬ್ಬರಾದ ಗೋಖಲೆಯವರು 1910ರಲ್ಲಿ ಕೇಂದ್ರ ಶಾಸನ ಸಭೆಯಲ್ಲಿ ದೇಶಾದ್ಯಂತ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರಲು ಆರಂಭಿಸಬೇಕೆಂದೂ, ಆ ಬಗ್ಗೆ ಅಗತ್ಯ ಸಲಹೆ ನೀಡಲು ಅಧಿಕಾರಿಗಳನ್ನೂ, ಇತರರನ್ನೂ ಒಳಗೊಂಡ ಆಯೋಗವೊಂದನ್ನು ರಚಿಸಬೇಕೆಂದೂ ಸೂಚಿಸಿ ಒಂಡು ಠರಾವನ್ನು ಮಂಡಿಸಿದ್ದರು. ಆದರೆ ಆ ಸಮಸ್ಯೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದಾಗಿ ಸರ್ಕಾರ ನೀಡಿದ ಆಶ್ವಾಸನೆಯ ಮೇಲೆ ಅದನ್ನು ಹಿಂದೆಗೆದುಕೊಂಡಿದ್ದರು. ಮತ್ತೆ 1911ರಲ್ಲಿ ತಮ್ಮ ಆ ಅಭಿಪ್ರಾಯವನ್ನೊಳಗೊಂಡಂತೆ ಪ್ರಾಥಮಿಕ ಸೌಲಭ್ಯವನ್ನು ವಿಸ್ತರಿಸಲು ಇನ್ನೂ ಉತ್ತಮ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಮಾಡುವ ಮಸೂದೆಯೊಂದನ್ನು ಮಂಡಿಸಿದರು. ಅಂದಿಗಾಗಲೆ ಪ್ರಚಾರಕ್ಕೆ ಇಂಗ್ಲೆಂಡಿನ 1907ರ ಕಡ್ಡಾಯ ಶಿಕ್ಷಣದ ಶಾಸನವನ್ನು ಆಧಾರ ಮಾಡಿಕೊಂಡು ತಮ್ಮ ಈ ಮಸೂದೆಯನ್ನು ಅವರು ರಚಿಸಿದ್ದರು. ಅದರ ಪ್ರತಿಯನ್ನು ಮೊದಲು ಸದಸ್ಯರ ಅಭಿಪ್ರಾಯಕ್ಕಾಗಿ ಹಂಚಲಾಯಿತು. ಅನಂತರ 1912ರ ಮಾರ್ಚ್ 17ರಂದು ಸಭೆಯಲ್ಲಿ ಅದು ಚರ್ಚೆಗೆ ಬಂತು. ಗೋಖಲೆಯವರು ಮಸೂದೆಯ ಅವಶ್ಯಕತೆಯನ್ನು ಕುರಿತು ಯುಕ್ತವಾಗಿ ವಾದಿಸಿದರು. ಅದನ್ನು ತಜ್ಞರ ಸಮಿತಿಗೆ ವರದಿಗಾಗಿ ಒಪ್ಪಿಸುವ ಬಗ್ಗೆ ಮತ ತೆಗೆದುಕೊಂಡಾಗ ಸಭೆಯಲ್ಲಿ ಅಧಿಕಾರಿ ಸದಸ್ಯರೇ ಹೆಚ್ಚಾಗಿದ್ದುದರಿಂದ ಅದಕ್ಕೆ ವಿರುದ್ಧವಾಗಿ ಹೆಚ್ಚು ಮತಗಳು ಬಂದು ಅದರ ಮುಂದಿನ ನಡವಳಿಕಗೆ ಅವಕಾಶವಾಗಲಿಲ್ಲ. ಆದರೂ ಗೋಖಲೆಯವರು ಉತ್ಸಾಹಗುಂದಲಿಲ್ಲ. ಮತ್ತೆ ಮತ್ತೆ ಅದಕ್ಕಾಗಿ ಶ್ರಮಿಸುವುದಾಗಿ ಪಣತೊಟ್ಟರು.

ಭಾರತದ ಶಿಕ್ಷಣದ ಇತಿಹಾಸದಲ್ಲಿ ಗೋಖಲೆಯವರ ಈ ಮಸೂದೆ ವಿಶಿಷ್ಟ ಸ್ಥಾನ ಪಡೆದಿದೆ. ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಲ್ಲಿ ಅದೇ ಮೊದಲ ಯತ್ನವಾಯಿತು. ಅದು ಬಿದ್ದುಹೋದರೂ ಅವರ ಯತ್ನ ಪೂರ್ಣವಾಗಿ ವಿಫಲವಾಗಲಿಲ್ಲ. ಜನತೆಯ ಆಶೋತ್ತರವನ್ನು ಸರ್ಕಾರ ಅರಿತುಕೊಂಡಿತು; ಶಾಸನಬದ್ಧವಾಗಿ ಮುಂದುವರಿಯಲು ಅಂದು ಇದ್ದ ಅಡಚಣೆಗಳ ಕಡೆ ಬೆರಳು ತೋರಿದರೂ ಪ್ರಾಥಮಿಕ ಶಿಕ್ಷಣದ ವಿಸ್ತರಣಕ್ಕೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸಿತು. ಪ್ರಾಂತೀಯ ಸರ್ಕಾರಗಳನ್ನು ಆ ಬಗ್ಗೆ ವಿಚಾರಿಸಲಾಯಿತು. ವಿಸ್ತರಿಸುತ್ತಿದ್ದ ಆ ಕ್ಷೇತ್ರದ ಆಡಳಿತಕ್ಕಾಗಿ ಕೇಂದ್ರ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಲಾಯಿತು. 1912ರಿಂದ 1917ರ ವರೆಗೆ ಆ ಕ್ಷೇತ್ರದಲ್ಲಿ ಸರ್ಕಾರ ತೋರಿದ ಆಸಕ್ತಿಗೆ ಆ ಮಸೂದೆ ನೀಡಿದ ಪ್ರಚೋದನೆಯೇ ಕಾರಣವೆಂದು ಹೇಳಬಹುದು. 1913ರ ಫೆಬ್ರುವರಿ 21ರಂದು ಹೊರಡಿಸಿದ ಸರ್ಕಾರದ ಶೈಕ್ಷಣಿಕ ನೀತಿಯ ನಿರೂಪಣೆಯಲ್ಲೂ ಆ ಮಟ್ಟದ ಶಿಕ್ಷಣ ಸೌಲಭ್ಯವನ್ನು ಹೆಚ್ಚಿಸುವ ಬಗ್ಗೆ ಅಗತ್ಯ ಆಶ್ವಾಸನೆಯನ್ನು ನೀಡಲಾಯಿತೆಂಬುದು ಮುಖ್ಯ ಸಂಗತಿ.

ಉಲ್ಲೇಖಗಳು

[ಬದಲಾಯಿಸಿ]
  1. Lawson, Alastair (10 December 2011). "Indian maharajah's daring act of anti-colonial dissent". Bbc.co.uk. Retrieved 2011-12-10.