ಕುಂಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಂಭ ಒಂದು ಸಂಸ್ಕೃತ ಶಬ್ದ. ಇದು ಮಣ್ಣಿನ ಕೊಡ/ಮಡಕೆಯನ್ನು ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಪ್ರಜಾಪತಿಗಳು ಎಂದೂ ಕರೆಯಲ್ಪಡುವ ಕುಂಬಾರರು ತಯಾರಿಸುತ್ತಾರೆ. ಹಿಂದೂ ಪುರಾಣಗಳ ವಿಷಯದಲ್ಲಿ, ಕುಂಭವು ಗರ್ಭದ ಸಂಕೇತವಾಗಿದೆ. ಇದು ಫಲವತ್ತತೆ, ಜೀವನ, ಮಾನವರ ಉತ್ಪಾದಕ ಶಕ್ತಿ ಮತ್ತು ಪೋಷಣೆಯನ್ನು ಪ್ರತಿನಿಧಿಸುತ್ತದೆ ಮತ್ತು ಸಾಮಾನ್ಯವಾಗಿ ದೇವಿಯರೊಂದಿಗೆ ಸಂಬಂಧಿಸಲಾಗುತ್ತದೆ, ವಿಶೇಷವಾಗಿ ಗಂಗೆ. ಹಿಂದೂ ಪುರಾಣದ ಪ್ರಕಾರ, ಮೊದಲ ಕುಂಭವನ್ನು ಪ್ರಜಾಪತಿಯು ಶಿವನ ಮದುವೆಯ ಸಂದರ್ಭದಲ್ಲಿ ಸೃಷ್ಟಿಸಿದನು, ಹಾಗಾಗಿ ಅವನು ಮೊದಲ ಕುಂಭಾರ.[೧] ಮೊದಲ ಕುಂಭವನ್ನು ವಿಶ್ವಕರ್ಮನು ಸಮುದ್ರ ಮಂಥನದ ಸಂದರ್ಭದಲ್ಲಿ ಸೃಷ್ಟಿಸಿದನು ಎಂದು ಮತ್ತೊಂದು ಪುರಾಣಕಥೆ ಹೇಳುತ್ತದೆ. ಹಿಂದೂ ಪುರಾಣ ಮತ್ತು ಧರ್ಮಗ್ರಂಥಗಳಲ್ಲಿ, ಕುಂಭದಿಂದ ಜನಿಸಿದ ಮಾನವರ ಬಗ್ಗೆ ಹಲವು ಉಲ್ಲೇಖಗಳು ಕಂಡುಬರುತ್ತವೆ. ಋಷಿ ಅಗಸ್ತ್ಯನು ಕುಂಭದಿಂದ ಜನಿಸಿದನು ಎಂದು ಒಂದು ಕಥೆಯು ಹೇಳುತ್ತದೆ.

ಹಲವಾರು ಧಾರ್ಮಿಕ ಸಮಾರಂಭಗಳು ಮತ್ತು ಕ್ರಿಯಾವಿಧಿಗಳಲ್ಲಿ, ನೀರು ಮತ್ತು ಎಲೆಗಳಿಂದ ತುಂಬಿದ, ಮತ್ತು ಸಂಕೀರ್ಣವಾದ ಸಂಕೇತಗಳು, ಕೆಲವೊಮ್ಮೆ ಆಭರಣಗಳಿಂದ ಅಲಂಕೃತವಾದ ಕುಂಭಗಳು ಅಥವಾ ಕಲಶಗಳು ಪ್ರಾಚೀನ ಭಾರತದಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಕ್ರಿಯಾವಿಧಿಗಳು ಭಾರತದಲ್ಲಿ ಈಗಲೂ ಉಳಿದಿವೆ.

ಜ್ಯೋತಿಷದಲ್ಲಿ, ಕುಂಭ ಒಂದು ರಾಶಿಯ ಹೆಸರೂ ಆಗಿದೆ ಮತ್ತು ಶನಿ ಹಾಗೂ ರಾಹು ಇದರ ಅಧಿಪತಿಗಳು.

ಪುರಾಣೀತಿಹಾಸಗಳಲ್ಲಿ ಕುಂಭ ಎಂಬ ಹೆಸರಿನ ಮೂವರಿದ್ದಾರೆ. ಅವರಲ್ಲಿ ಕುಂಭಕರ್ಣ ಮತ್ತು ವೃತ್ರಜ್ವಾಲೆಯರ ಹಿರಿಯ ಮಗ ಒಬ್ಬ.  ಮಹಾ ಪರಾಕ್ರಮಶಾಲಿ. ರಾಮರಾವಣರ ಯುದ್ಧದಲ್ಲಿ ಭಯಂಕರ ರೀತಿಯಲ್ಲಿ ಕಾದು ವಾನರ ಸೇನೆಯನ್ನು ಕ್ಷೋಭೆಗೀಡುಮಾಡಿ ಸುಗ್ರೀವನಿಂದ ಹತನಾದನೆಂದು ರಾಮಾಯಣದಿಂದ ತಿಳಿದುಬರುತ್ತದೆ. ಮಹಾಭಾರತದ ಹೇಳಿಕೆಯ ಪ್ರಕಾರ ಎರಡನೆಯ ಕುಂಭ ಪ್ರಹ್ಲಾದನ ಮಗ.

ಮೂರನೆಯವ ಈಶ್ವರನ ಪ್ರಮಥಗಣದಲ್ಲಿ ಒಬ್ಬ. ಶಿವ ಪಾರ್ವತಿಯನ್ನು ಮದುವೆಯಾದ ಹೊಸದರಲ್ಲಿ ಮಾವನ ಮನೆಯಲ್ಲಿಯೇ ನಿಂತಾಗ ಅತ್ತೆ ಮೇನಾದೇವಿ ಶಿವನನ್ನು ಹುಟ್ಟುದರಿದ್ರನೆಂತಲೂ ನಿಲ್ಲಲು ಮನೆಯೂ ಗತಿಯಲ್ಲದವನಂತಲೂ ನಿಂದಿಸಿದಳು. ತಾಯಿಯ ಮಾತಿಗೆ ಇದನ್ನು ಶಿವನಿಗೆ ಹೇಳಿದಳು. ಶಿವ ತನ್ನ ಪರಿವಾರದಲ್ಲಿದ್ದ ಕುಂಭನನ್ನು ಕರೆದು ಏನಾದರೊಂದು ಉಪಾಯ ಹೂಡಿ ಕಾಶೀರಾಜ ದಿವೋದಾಸನನ್ನು ಕಾಶಿಯಿಂದ ಬಿಡಿಸಿದರೆ ನಾವು ಪರಿವಾರದೊಂದಿಗೆ ಅಲ್ಲಿರಬಹುದೆಂದು  ತಿಳಿಸಿದ. ಕುಂಭ ಕಾಶೀನಗರದ ನಿಕುಂಭನೆಂಬ ಬ್ರಾಹ್ಮಣನ ಕನಸಿನಲ್ಲಿ ಮೆಯ್ದೋರಿ ಶಿವನಿಗೆ ಒಂದು ಗುಡಿ  ಕಟ್ಟಿಸಿ, ಪೂಜಿಸೆಂದ. ಆ ಬ್ರಾಹ್ಮಣ ಕಾಶೀರಾಜನಿಗೆ ತನ್ನ ಕನಸಿನ ಮಾತನ್ನು ಹೇಳಲಾಗಿ ಆತ ಒಂದು ಶಿವಗುಡಿಯನ್ನು ಕಟ್ಟಿಸಿದ. ದಿನದಿನಕ್ಕೆ  ಆ ಗುಡಿಯ ಮಹಿಮೆ ಹೆಚ್ಚತೊಡಗಿತಾದರೂ ದಿವೋದಾಸನ ಒಂದು ಇಷ್ಟಾರ್ಥವೂ ಕೈಗೂಡಲಿಲ್ಲ. ಇದರಿಂದ ಬೇಸತ್ತ  ರಾಜ ಗುಡಿಯನ್ನು ಒಡೆಸಿದ. ಸಿಟ್ಟುಗೊಂಡ ಶಿವ ಕಾಶೀನಗರ ಹಾಳುಬೀಳಲೆಂದು ಶಾಪವಿತ್ತಾಗ ದಿವೋದಾಸ ಕಾಶೀನಗರ ತ್ಯಜಿಸಿದ. ಅನಂತರ ಶಿವ ಕಾಶೀಪಟ್ಟಣದಲ್ಲಿ ತನ್ನ ಪರಿವಾರದೊಂದಿಗೆ ನೆಲೆಯಾಗಿ ನಿಂತ. ಈ ಕಾರಣದಿಂದ ಕಾಶೀಪಟ್ಟಣ ಅವಿಮುಕ್ತ ಕ್ಷೇತ್ರವೆನಿಸಿತೆಂದು ಹರಿವಂಶದಿಂದ ತಿಳಿದುಬರುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕುಂಭ&oldid=1086625" ಇಂದ ಪಡೆಯಲ್ಪಟ್ಟಿದೆ