ಅನಂತನಾಥಸ್ವಾಮಿ ದಿಗಂಬರ ಬಸದಿ, ಕೆಲ್ಲಪುತ್ತಿಗೆ, ದರೆಗುಡ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತನಾಥಸ್ವಾಮಿ ದಿಗಂಬರ ಬಸದಿ, ಕೆಲ್ಲಪುತ್ತಿಗೆ, ದರೆಗುಡ್ಡೆ

ಸ್ಥಳ[ಬದಲಾಯಿಸಿ]

ಕೆಲ್ಲಪುತ್ತಿಗೆ ಶ್ರೀ ಅನಂತನಾಥಸ್ವಾಮಿ ಬಸದಿ, ಮೂಲಸ್ವಾಮಿ 1008 ಅನಂತನಾಥಸ್ವಾಮಿ. ಮಂಗಳೂರು ತಾಲೂಕಿನ ದರೆಗುಡ್ಡೆ ಗ್ರಾಮದಲ್ಲಿದೆ. ಜೈನಪೇಟೆಯಲ್ಲಿದೆ. ಮೂಡುಬಿದಿರೆಯಿಂದ ಹದಿನಾರು ಕಿ.ಮೀ ದೂರದಲ್ಲಿದೆ. ಮೂಡುಬಿದಿರೆಯಿಂದ 16 ಕಿ.ಮೀ. ದೂರವಿದೆ. ಬೆಳುವಾಯಿ ಮುಖಾಂತರ ಅಳಿಯೂರು ಮಾರ್ಗವಾಗಿ 7 ಕಿ.ಮೀ ದೂರದಲ್ಲಿ ದರೆಗುಡ್ಡೆಯಲ್ಲಿ ಮುಖ್ಯ ಮಾರ್ಗಕ್ಕೆ ಕಾಣಿಸುತ್ತದೆ. [೧]

ವಿಗ್ರಹಗಳು/ ಶಿಲಾನ್ಯಾಸ[ಬದಲಾಯಿಸಿ]

ಬಸದಿಯಲ್ಲಿ ಮೂಲಸ್ವಾಮಿ ಶ್ರೀ ಅನಂತನಾಥಸ್ವಾಮಿ, ಭೈರವ ಪದ್ಮಾವತೀ, ಶ್ರುತದೇವಿ ಮೂರ್ತಿ, ಚವ್ವೀಷ ತೀರ್ಥಂಕರರ ಒಟ್ಟು ಇರುವ ಪ್ರಬಾಲೆ, 24 ತೀರ್ಥಂಕರರ ಪ್ರತ್ಯೇಕ 24 ಮೂರ್ತಿಗಳು, ಪಾಶ್ರ್ವನಾಥನ ಮೂರ್ತಿ ಮತ್ತು ಸರ್ವಾಣ್ಹ ಯಕ್ಷನ ಮೂರ್ತಿಗಳು ಇವೆ. ನಂದೀಶ್ವರದ ತೀರ್ಥಂಕರರ ಮೂರ್ತಿಗಳಿವೆ. ಬಸದಿಯಲ್ಲಿ ಮಾನಸ್ತಂಭವಿಲ್ಲ. ಆದರೆ ಬಸದಿಗೆ ದೇವಕೂಟ ಇರುತ್ತದೆ. ಮೂರು ಮುಗುಳಿಗಳಿವೆ.ಬಸದಿಯನ್ನು ಪ್ರವೇಶಿಸುವಾಗ ಎಡಬಲಗಳಲ್ಲಿ ಗೋಪುರವಿದೆ. ಆನೆ ಕಲ್ಲಿನ ಮಂಟಪದಲ್ಲಿ ದ್ವಾರಪಾಲಕನ ಚಿತ್ರವಿದೆ. ಹಿಂದೆ ಸಮವಸರಣ, ಷಡ್‍ಲೇಷ, ಪಂಚಪರಮೇಷ್ಟಿಗಳ ಚಿತ್ರಗಳಿದ್ದವು. ಈಗ ಅದನ್ನು ತೆಗೆದು ಗೋಡೆಗೆ ಗ್ರಾನೈಟ್ಸ್ ಹಾಕಿರುವುದರಿಂದ ಈಗ ಇಲ್ಲ. ಆನೆ ಕಲ್ಲಿನ(ಹೊರಗಿನ) ಮಂಟಪದ ಮುಂದೆ ನಾಲ್ಕು ಕಂಬಗಳ ಎರಡು ಪ್ರಾರ್ಥನಾ ಮಂಟಪಗಳಿವೆ.(ಮುಂದೆ ಮುಂದೆ) ಅಲ್ಲಿ ಜಯಗಂಟೆ, ಜಾಗಟೆ ತೂಗು ಹಾಕಲಾಗಿದೆ. ಎರಡೂ ಪ್ರಾರ್ಥನಾ ಮಂಟಪಗಳನ್ನು ದಾಟಿದಾಗ ತೀರ್ಥಂಕರ ಮಂಟಪವಿದೆ. ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲಿದೆ. ಅದಕ್ಕೆ ಮುಂದೆ ಇರುವ ಇನ್ನೊಂದು ಮಂಟಪವಿದೆ. ಅದನ್ನು ಗರ್ಭಗೃಹ ಎನ್ನುವರು. ಅದರಲ್ಲಿ ಮೂಲಸ್ವಾಮಿಯ ಮೂರ್ತಿ ಇದೆ. ಗಂಧಕುಟಿಯಲ್ಲಿ 24 ತೀರ್ಥಂಕರರ ಮೂರ್ತಿಗಳು, ಸರ್ವಾಹ್ಣ ಯಕ್ಷ, ನಂದೀಶ್ವರ, ಗಣದರ ಪಾದಗಳಿವೆ. ಅಲ್ಲದೆ ತೀರ್ಥಂಕರರ ಮಂಟಪದ ಎರಡೂ ಬದಿಗಳಲ್ಲಿ ಶ್ರುತದೇವಿ ಮಂಟಪ ಮತ್ತು ಪದ್ಮಾವತೀ ಅಮ್ಮನವರ ಮಂಟಪವಿದೆ. ಇದಕ್ಕೆ ನಿತ್ಯವೂ ಪೂಜೆ ಆಗುತ್ತದೆ. ಪದ್ಮಾವತೀ ದೇವಿಯ ಮೂರ್ತಿ ತೀರ್ಥಂಕರ ಮಂಟಪದ ಎಡಬದಿಯಲ್ಲಿದೆ. ದೇವಿಗೆ ಅಲಂಕಾರ ಪೂಜೆ ನಡೆಯುತ್ತದೆ. ಬಸದಿಯು ಪೂರ್ವಮುಖವಾಗಿದೆ. ಹಾಗೆಯೇ ಪದ್ಮಾವತೀ ಅಮ್ಮನವರ ಮೂರ್ತಿ ಕೂಡಾ ಪೂರ್ವ ದಿಕ್ಕಿಗಿದೆ. ಕಾಲಿನ ಬಳಿ ಕುಕ್ಕುಟ ಸರ್ಪ ಇದೆ. ಪುರಾತನ ಭೈರವ ಪದ್ಮಾವತೀ ಅಮ್ಮನವರ ಮೂರ್ತಿ ಇದೆ. ಶ್ರೀ ಅನಂತನಾಥಸ್ವಾಮಿ ಮೂರ್ತಿ ಬಿಳಿ ಶಿಲೆಯದು. ಸುಮಾರು 2 ಅಡಿ ಎತ್ತರ, ಖಡ್ಗಾಸನ, ಹಿಂದಿನಿಂದ 13 ತೀರ್ಥಂಕರರಿಂದ ಕೂಡಿದ ಪ್ರಭಾವಳಿಯಿದೆ. ಬಸದಿಯ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಅದರೊಟ್ಟಿಗೆ ನಾಗನ ಕಲ್ಲು ಕೂಡಾ ಇದೆ. ಇದನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತ ಸುಮಾರು 9 ಅಡಿ ಎತ್ತರದ ಕೋಟೆ ಇದೆ. ಅದರ ಕೆಳಗಿನ ಎರಡು ಅಡಿ ಕರ್ಗಲ್ಲಿನಿಂದಲೂ ಮೇಲೆ 7 ಅಡಿ ಮುರಕಲ್ಲಿನಿಂದಲೂ ನಿರ್ಮಿಸಲಾಗಿದೆ.

ಆಚರಣೆಗಳು[ಬದಲಾಯಿಸಿ]

ವಿಶೇಷ ದಿನಗಳಲ್ಲಿ ಅಭಿಷೇಕವಾಗುತ್ತದೆ. ದಿನಾಲೂ ಪೂಜೆ ಆಗುತ್ತದೆ. 24 ಮೂರ್ತಿಗಳ ಒಂದು ಪ್ರಭಾವಳಿಗೆ ಮತ್ತು ಪಾಶ್ರ್ವನಾಥರ ಚಿಕ್ಕಮೂರ್ತಿಗೆ ಗಂಧ, ಹಾಲು, ನೀರು ಅಭಿಷೇಕ ದಿನಾಲೂ ಆಗುತ್ತದೆ. ಬೆಳಿಗ್ಗೆ ಮಾತ್ರ ನೈವೇದ್ಯ ಇಟ್ಟು ಪೂಜೆ ನಡೆಯುತ್ತದೆ. ಸಂಜೆ ಮಂಗಳಾರತಿ ನಡೆಯುತ್ತದೆ. ಬಸದಿಯಲ್ಲಿ ಮುಖ್ಯವಾಗಿ ಮಹಾವೀರ ನಿರ್ವಾಣೋತ್ಸವ, ನೂಲ ಹುಣ್ಣಿಮೆ, ಯುಗಾದಿ, ನವರಾತ್ರಿ ಉತ್ಸವ, ಮಹಾವೀರ ಜಯಂತಿ ಉತ್ಸವಗಳು ನಡೆಯುತ್ತವೆ. ಅನಂತ ನೋಂಪಿ, ಶುಕ್ರವಾರ ನೋಂಪಿ ಮತ್ತು ಆದಿತ್ಯವಾರ ನೋಂಪಿ ಆಗುತ್ತಿರುತ್ತದೆ. ಪ್ರತಿದಿನ ಪೂಜೆ ನಡೆಯುತ್ತದೆ. ಸುತ್ತ ಅಷ್ಟದಿಕ್ಪಾಲಕರ ಕಲ್ಲು ಕೂಡಾ ಇದೆ. ಇದಕ್ಕೆ ಪ್ರತ್ಯೇಕ ಪೂಜೆ ಇಲ್ಲ. ಸಾಮೂಹಿಕ ಪೂಜೆ ನಡೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೨೮೫-೨೮೬.