ಯು. ಎಸ್. ಕೃಷ್ಣರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:K.Raojpg.Sm.jpg
*'ನಾಟ್ಯಾಚಾರ್ಯ, ಯು. ಎಸ್. ಕೃಷ್ಣರಾವ್'

ತಮಿಳುನಾಡಿನ ತಂಜಾವೂರಿನಲ್ಲಿ ೪ ಜನ ಸೋದರರಿಂದ ವಿಕಸಿತಗೊಂಡ ಭರತನಾಟ್ಯ ಪರಂಪರೆ, ೨೦ ನೆಯ ಶತಮಾನದ ಆರಂಭದಲ್ಲಿ ೧೯೪೦ ರಲ್ಲಿ, ರುಕ್ಮಿಣಿ ದೇವಿ ಅರುಂಡೇಲ್ ರವರು ತಮ್ಮ ನೃತ್ಯ ಶಾಲೆ 'ಕಲಾಕ್ಷೇತ್ರ' ಸ್ಥಾಪಿಸುವವರೆಗೆ ನೃತ್ಯ ಕಲೆಗೆ ಸಮಾಜದಲ್ಲಿ ಯಾವುದೇ ಗೌರವಯುತ ಸ್ಥಾನಮಾನಗಳಿರಲಿಲ್ಲ. ರಾಜರ ಆಸ್ಥಾನ, ಇಲ್ಲವೆ 'ಶ್ರೀಮಂತರ ವೈಯಕ್ತಿಕ ಕೋಠಿ' ಗಳಲ್ಲಿ ಅವರನ್ನು ರಂಜಿಸಲು, ಇಲ್ಲವೇ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ದೇವದಾಸಿಯರೆಂದು ಮೀಸಲಾಗಿಟ್ಟ ಹೆಂಗಸರು ಇದನ್ನು ನಿರ್ವಹಿಸುತ್ತಿದ್ದರು. ಮಹಿಳೆಯರೇ ಪ್ರಮುಖ ಕಲಾಕಾರರೆಂದು ನಿರ್ಧರಿಸಿ ಅವರಿಗೇ ಮೀಸಲಾಗಿದ್ದ ಈ ಕಲೆಯಲ್ಲಿ ಪುರುಷರ ಹೆಸರನ್ನು ಪ್ರಪ್ರಥಮವಾಗಿ ಆರಿಸಿಕೊಂಡಿದ್ದು ರುಕ್ಮಿಣಿದೇವಿ ಅರುಂಡೇಲ್ ರವರು ತಮ್ಮ ಕಲಾಕ್ಷೇತ್ರ ದಲ್ಲಿ. ಆದರೆ ಇದಕ್ಕೆ ಮೊದಲೇಕರ್ನಾಟಕದ ಕರಾವಳಿಯ ಪ್ರಗತಿಪರ ಮನಸ್ಸಿನ ಇಬ್ಬರು ಯುವಕರು ೨೦ ರ ದಶಕದಲ್ಲೇ ಈ ಕಲೆಯನ್ನು ಶಾಸ್ತ್ರೀಯವಾಗಿ ಗುರುಗಳಿಂದ ಕಲಿತು, ಅದರಲ್ಲಿ ಪ್ರಾವೀಣ್ಯತೆಗಳಿಸಿ ಭಾರತದ ಕಲಾ-ಪರಂಪರೆಯನ್ನು ದೇಶವಿದೇಶಗಳಲ್ಲಿ ಚಿರಸ್ಥಾಯಿಯಾಗಿ ಸ್ಥಾಪಿಸಿ, ಮೆರೆದ ಕನ್ನಡಿಗರಲ್ಲಿ ಯು.ಎಸ್.ಕೃಷ್ಣರಾವ್ ದ್ವಯರು, ಪ್ರಮುಖರು.

ಚಿತ್ರ:Kadri house (sm).jpg
'ಕದ್ರಿಯ ಮನೆಯೇ ನೃತ್ಯಶಾಲೆಯಾಗಿ'

ಇಬ್ಬರೂ ಯು.ಎಸ್.ಕೃಷ್ಣರಾಯರೇ[ಬದಲಾಯಿಸಿ]

ಉಡುಪಿಯ ಹತ್ತಿರದ ಉಚ್ಚಿಲದಲ್ಲಿ ಜನಿಸಿದ ಒಬ್ಬ ಕೃಷ್ಣರಾವ್.[೧] ಮತ್ತೊಬ್ಬ ಯು.ಎಸ್.ಕೃಷ್ಣರಾವ್, ಉತ್ತರ ಕನ್ನಡದಲ್ಲಿ ಜನಿಸಿದವರು. ರಸಾಯನ ಶಾಸ್ತ್ರದಲ್ಲಿ ಪದವಿಗಳಿಸಿ, ಭರತನಾಟ್ಯ ಪ್ರವೀಣೆ, ಚಂದ್ರಭಾಗಾದೇವಿಯವರನ್ನು ಲಗ್ನವಾಗಿ ಇಬ್ಬರೂ ಜೊತೆಯಾಗಿ, ಭರತನಾಟ್ಯ ದಿಗಂತದಲ್ಲಿ ಮೇರು ಸ್ಥಾನಕ್ಕೆ ಏರಿದವರು. ಭರತನಾಟ್ಯದ ಬಗ್ಗೆ ಹಲವು ಪುಸ್ತಕಗಳನ್ನು ರಚಿಸಿದವರು. ಇಬ್ಬರೂ ಕೃಷ್ಣರಾಯರೂ ಸಂಗೀತ-ನೃತ್ಯಗಳಲ್ಲಿ ಪರಮಾಸಕ್ತರು. ಸಮಕಾಲೀನರಾಗಿದ್ದ ಅವರಿಗೆ ಪಾಠಹೇಳಿಕೊಟ್ಟ ಗುರುಗಳೂ ಒಬ್ಬರೇ.

ಯು.ಎಸ್.ಕೃಷ್ಣರಾವ್(ಉಚ್ಚಿಲ)[ಬದಲಾಯಿಸಿ]

ನಾಟ್ಯಾಚಾರ್ಯ, ಕರ್ನಾಟಕ ಕಲಾತಿಲಕ ಪ್ರಶಸ್ತಿ ವಿಜೇತ, ಯು.ಎಸ್.ಕೃಷ್ಣರಾವ್,[೨] ಭರತನಾಟ್ಯಕ್ಕೆ ಕರಾವಳಿ ಪ್ರದೇಶದಲ್ಲಿ ಬಹು-ಮಾನ್ಯತೆ ತಂದುಕೊಟ್ಟ ಧೀಮಂತ ವ್ಯಕ್ತಿ. ಅವರ ತಂದೆ, ಸುಬ್ಬರಾಯರು, ಬ್ರಿಟಿಷರ ಕಾಲದಲ್ಲಿ ಶಿರಸ್ತೇದಾರರಾಗಿ ಕೆಲಸಮಾಡುತ್ತಿದ್ದರು. ಇಂತಹ ಸಂಪ್ರದಾಯಸ್ತ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣರಾವ್, ೧೯೧೪ ರ ನವೆಂಬರ್, ೧೯ ರಂದು, ಜನಿಸಿದವರು. ಮನೆಯಲ್ಲಿ ದೇವರ ಪೂಜೆ, ವ್ರತ, ನಿಯಮ, ಮತ್ತು ಶಿಸ್ತಿನ ವಾತಾವರಣವನ್ನು ಪಾಲನೆಮಾಡಬೇಕಿತ್ತು. ಸುಬ್ಬರಾಯರಿಗೆ ಮಂಗಳೂರುನಗರಕ್ಕೆ ವರ್ಗವಾಯಿತು. ಕೃಷ್ಣರಾವ್, ಅಲ್ಲಿನ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಣ ಆರಂಭಿಸಿದರು. ಶಾಲೆಯಲ್ಲಿ ಓದಿನ ಜೊತೆಗೆ ನಾಟಕ, ಹಾಡುಗಾರಿಕೆ, ಕ್ರಿಕೆಟ್ ಆಟ,(ಅವರೊಬ್ಬ ಸಮರ್ಥ ಕ್ರಿಕೆಟ್ ಬೋಲರ್) ಮೊದಲಾದವುಗಳಲ್ಲಿ ತಮ್ಮ ಪ್ರಬುದ್ಧತೆಯನ್ನು ತೋರಿಸುತ್ತಿದ್ದ, ಕೃಷ್ಣರಾವ್ ನ್ನು ಬಹಳ ಹತ್ತಿರದಿಂದ ಗಮನಿಸಿದ ಶಾಲೆಯ ಕನ್ನಡ ಉಪಾಧ್ಯಾಯ, ಎಮ್.ಎನ್.ಕಾಮತ್ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಅಂದಿನ ದಿನಗಳಲ್ಲಿ ರಾಷ್ಟ್ರದಾದ್ಯಂತ ಪ್ರಸಿದ್ದರಾಗಿದ್ದ 'ಉದಯ ಶಂಕ'ರ್ ರವರ ನೃತ್ಯದ ತಂಡದಲ್ಲಿದ್ದ, ಕೆ. ಕೆ .ಶೆಟ್ಟಿಯವರು ಮಂಗಳೂರಿಗೆ ಆಗಮಿಸಿದರು. ಅವರು ಒಬ್ಬ ನುರಿತ ನೃತ್ಯ ಲಾವಿದರಾಗಿದ್ದರು. ಶೆಟ್ಟಿಯವರ ಜೊತೆ ಸೇರಿದ ಕೃಷ್ಣರಾವ್ ಭರತನಾಟ್ಯ ನೃತ್ಯಕಲೆಯನ್ನು ಜನಪ್ರಿಯಗೊಳಿಸಲು ಬಹಳವಾಗಿ ಶ್ರಮಿಸಿದರು.

ಕದ್ರಿ ಕರ್ಮಭೂಮಿಯಾಯಿತು[ಬದಲಾಯಿಸಿ]

೧೯೩೪ ರಲ್ಲಿ ಕದ್ರಿಯ ವಿದ್ಯಾಬೋಧಿನಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿದರು. ಅಲ್ಲಿಗೆ, ಮಹಾಲಿಂಗಮ್ ಎಂಬ ಇನ್ಸ್ಪೆಕ್ಟರ್ ವರ್ಗವಾಗಿ ಬಂದರು. ಅವರು ಕಥಕ್ಕಳಿ ನೃತ್ಯದಲ್ಲಿ ಪರಿಣಿತರು. ಕೃಷ್ಣರಾಯರ ದೇಹಧಾರಢ್ಯ, ಮೈಕಟ್ಟು, ನಿಲವುಗಳನ್ನು ಗನಮಿಸಿ, ಅವರಿಗೆ ತಮಗೆ ತಿಳಿದ ಕಥಕ್ಕಳಿ ವಿದ್ಯೆಯನ್ನು ಕಲಿಸಿದರು. ಉತ್ತಮ ಶಿಕ್ಷಕರಾಗಿ ಎಲ್ಲರ ಮನಸ್ಸನ್ನು ಗೆದ್ದ ಕೃಷ್ಣರಾಯರು, ಶಾಲೆ ಮುಗಿದಬಳಿಕ, ಬೈಸಿಕಲ್ ಹತ್ತಿ, ಪ್ರತಿಮನೆಗಳಿಗೆ ಹೋಗಿ ಅಲ್ಲಿನ ಮಕ್ಕಳ ಮನಒಲಿಸಿ, ನೃತ್ಯವನ್ನು ಹೇಳಿಕೊಡುತ್ತಿದ್ದರು. ಕಾಲಕ್ರಮೇಣ ಅಲ್ಲಿನ ಜನರಿಗೆ ಅದರಲ್ಲಿ ಆಸಕ್ತಿಬಂತು. ತಮ್ಮ ಮನೆಯನ್ನೇ ನೃತ್ಯ ವಿದ್ಯಾಲಯವನ್ನಾಗಿ ಮಾಡಿಕೊಂಡು ತಮ್ಮ ನೃತ್ಯಕಲಿಕೆಯ ಅಭಿಯಾನವನ್ನು ಮುಂದುವರೆಸಿದರು. ನೂರಾರು ಪ್ರದರ್ಶನ ಬೇರೆ ಬೇರೆ ಊರುಗಳಲ್ಲಿ ಆಯೋಜಿಸಿದರು. ವಾರ್ಷಿಕೋತ್ಸವ ಆಚರಣೆಯನ್ನು ಮಾತ್ರ ನವರಾತ್ರಿಯ ಸಮಯದಲ್ಲಿ ಪ್ರತಿವರ್ಷವೂ ಮಂಗಳೂರಿನಲ್ಲೇ ಆಯೋಜಿಸುತ್ತಿದ್ದರು. ಭರತನಾಟ್ಯ ಕಥಕ್ಕಳಿ ಬಲ್ಲ ಕೇರಳದ ರಾಜನ್ ಐಯ್ಯರ್ ಬಂದಾಗಲೂ ಅವರ ಶಿಷ್ಯರಾಗಿ ಹೊಸ ವಿಷಯಗಳನ್ನು ಕಲಿತರು. ಇಂತಹ ಪ್ರದರ್ಶನಗಳಲ್ಲಿ ವೀಕ್ಷಿಸಿದ ಕ್ಯಾಪ್ಟನ್ ಸಿ.ಕೆ.ಮೆನನ್, ಜಿಲ್ಲಾಧಿಕಾರಿ ಕರ್ಮತುಲ್ಲಾ ಮೊದಲಾದ ಹಿರಿಯ ಅಧಿಕಾರಿಗಳು ಮೆಚ್ಚಿ ಬಹಳ ಪ್ರೋತ್ಸಾಹ ಕೊಟ್ಟರು. ಆ ಸಮಯದಲ್ಲಿ ಮಂಗಳೂರಿನಿಂದ ದೆಹಲಿಯವರೆಗೆ ಎಲ್ಲಾ ನಗರಗಳಲ್ಲೂ ನಾಟ್ಯ ಕಾರ್ಯಕ್ರಮಗಳು ನಿಯಮಿತವಾಗಿ ಜರುಗುತ್ತಲೇ ಇದ್ದವು. ಸಂಸ್ಥೆಯ ರಜತ ಮಹೋತ್ಸವವನ್ನು ಬೊಂಬಾಯಿನಲ್ಲಿ ಅದ್ಧೂರಿಯಾಗಿ ನೆರವೇರಿಸಿದರು. ನಂತರದ ಸ್ವರ್ಣ, ಮತ್ತು ವಜ್ರ ಮಹೋತ್ಸವಗಳನ್ನು ಮಂಗಳೂರಿನಲ್ಲಿ ನಡೆಸಲಾಯಿತು. ಅವರ ಭರತನಾಟ್ಯದ ಸಮಾರಂಭಗಳನ್ನು ವೀಕ್ಷಿಸಿದ ಮೈಸೂರು ದೊರೆ, ಜಯಚಾಮರಾಜವೊಡೆಯರ್, ಮದ್ರಾಸಿನ ಮುಖ್ಯಮಂತ್ರಿ, ಕಾಮರಾಜ ನಾಡರ್,ಧರ್ಮಸ್ಥಳದ, ಮಂಜಯ್ಯ ಹೆಗ್ಗಡೆ, ಪಂತ-ಪ್ರಧಾನಿ ನೆಹರು, ಬಹಳವಾಗಿ ಮೆಚ್ಚಿದ್ದರು.

ಮದುವೆ[ಬದಲಾಯಿಸಿ]

೧೯೪೩ ರಲ್ಲಿ ಕೃಷ್ಣರಾಯರು ೧೪ ವರ್ಷ ಪ್ರಾಯದ ಸ್ಪುರದ್ರೂಪಿ, ಜಯಲಕ್ಷ್ಮಿ ಯವರನ್ನು ವಿವಾಹವಾದರು. ಹೆರಂಜಾಲಿನಲ್ಲಿ ವಾಸಿಸುತ್ತಿದ್ದ ನಾಗಪ್ಪಯ್ಯ, ಮತ್ತು ಕಾವೇರಿ ದಂಪತಿಗಳ ಮುದ್ದಿನ ಮಗಳು, ಜಯಲಕ್ಷ್ಮಿ ಕೃಷ್ಣರಾಯರ ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸಿದ್ದರು. ಕೃಷ್ಣರಾಯರು, ೧೯೪೩ ರಲ್ಲಿ ವಿಶ್ವಯುದ್ದಕ್ಕೆ 'ಸಹಾಯಧನ ಸಂಗ್ರಹಣೆಗಾಗಿ ಶೋ' ಆಯೋಜಿಸಿದ್ದರು. ರಾಷ್ಟ್ರ ಸೇವೆಗೆ ದೇಣಿಗೆ, ೧೯೪೮ ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಮಡಿದಾಗ ಶೋಕಸಭೆಯಲ್ಲಿ ಹಾಡಿದ್ದರು.

ಮಕ್ಕಳು[ಬದಲಾಯಿಸಿ]

ನಾಟ್ಯಾಚಾರ್ಯ ಯು. ಎಸ್. ಕೃಷ್ಣರಾವ್ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ ಒಟ್ಟು ೫ ಜನ ಮಕ್ಕಳು. ಎಲ್ಲರಿಗೂ ತಂದೆಯವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವಾಯಿತು. ಅವರುಗಳ ವಿವರಗಳು ಹೀಗಿವೆ :

  • ಕಲಾವಿದ, ಅರುಣ್ ರವರು, 'ಅರುಣ್ ಕಲಾವಿದ'ರೆಂದು ಬೆಂಗಳೂರಿನಲ್ಲಿ ಹೆಸರುವಾಸಿಯಾಗಿರುವ 'ನೃತ್ಯವಿದ್ಯಾ ನಿಕೇತನ' ವೆಂಬ ಶಾಲೆಯನ್ನು ಸ್ಥಾಪಿಸಿ, ದೇಶವಿದೇಶಗಳಲ್ಲಿ ಪ್ರದರ್ಶಗಳನ್ನುನೀಡಿದ್ದಾರೆ.
  • ವಿದುಷಿ. ನಿರ್ಮಲಾ ಮಂಜುನಾಥ್ ಮತ್ತು ವಿದುಷಿ. ಸಂಧ್ಯಾ ಕೇಶವರಾವ್ ಬೆಂಗಳೂರಿನಲ್ಲಿ ತಮ್ಮದೇ ಆದ ನೃತ್ಯಶಾಲೆಗಳನ್ನು ನಡೆಸುತ್ತಿದ್ದಾರೆ.
  • ವಿದುಷಿ. ಶೈಲಜಾ ಮಧುಸೂದನ್, ಮುಂಬೈನ ಭಾಂಡೂಪ್ ಉಪನಗರದಲ್ಲಿ ಸುಮಾರು ೨೫ ವರ್ಷಗಳಿಗೆ ಮೇಲ್ಪಟ್ಟು ನಡೆಸುತ್ತಿದ್ದಾರೆ.
  • ವಿದ್ವಾನ್ ಯು.ಕೆ ಪ್ರವೀಣ್ ಕದ್ರಿಯ ನೃತ್ಯ ವಿದ್ಯಾಲಯದಲ್ಲಿ ತಂದೆಯವರ ಸ್ಥಾನದಲ್ಲಿ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಚಿತ್ರ:Ssm (1).jpg
'ನಾಟ್ಯ ಪಿತಾಮಹನಿಗೆ ಶ್ರದ್ಧಾಂಜಲಿ'

ಕೆಲವು ಹೆಗ್ಗಳಿಕೆಗಳು[ಬದಲಾಯಿಸಿ]

  • ಭರತನಾಟ್ಯ ರಂಗಪ್ರವೇಶ, ಇಲ್ಲವೇ 'ಆರಂ ಗೆಟ್ರಂ ಕಾರ್ಯಕ್ರಮ'ವನ್ನು ಮಂಗಳೂರಿನಲ್ಲಿ ಮೊಟ್ಟಮೊದಲು ನೀಡಿದ ಖ್ಯಾತಿ ವಿದ್ಯಾಲಯಕ್ಕೆ ಸಲ್ಲುತ್ತದೆ.
  • ನಾಟ್ಯದ ವಿದ್ವತ್ ಪರೀಕ್ಷೆಯಲ್ಲಿ ಹಲವರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ
  • ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ, ಜಾತ, ಉತ್ಸವ ಶುಭ ಸಮಾರಂಭಗಳಲ್ಲಿ ಕಾಲ ಬದಲಾದಂತೆ ಭರತನಾಟ್ಯದ ಪ್ರದರ್ಶನದ ಪರಂಪರೆಯೂ ಶುರುವಾಯಿತು.
  • ೧೯೬೫ ರಲ್ಲಿ ಭಾರತದ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷನ್ ಸಮ್ಮುಖದಲ್ಲಿ 'ರಾಷ್ಟ್ರಪತಿ ಭವನ'ದಲ್ಲಿ ನೀಡಿದ ಪ್ರದರ್ಶನಕ್ಕೆ ಪ್ರಶಸ್ತಿಪತ್ರ, ನಗದು ಬಹುಮಾನ ಮತ್ತು ಶುಭಹಾರೈಕೆಗಳೊಂದಿಗೆ,
  • ೧೯೭೧ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ
  • ೧೯೮೧ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಕರ್ನಾಟಕ ಕಲಾತಿಲಕ ಪ್ರಸಸ್ತಿ
  • ೧೯೯೧ ರಾಜ್ಯೋತ್ಸವ ಪ್ರಶಸ್ತಿ ನೃತ್ಯ ರಂಗದ ಸೇವೆಗಾಗಿ ಸರಕಾರ ನೀಡಿ ಗೌರವಿಸಿತು.
  • ೧೯೯೮ ಕರ್ನಾಟಕ ಸರ್ಕಾರ ನೃತ್ಯ ರಂಗದಸ್ ನಾಟ್ಯ ರಾಣಿ ಶಾಂತಲಾ ಪ್ರತಿಷ್ಠಿತ ಪ್ರಶಸ್ತಿ
  • ಪ್ರೌಢ ಶಿಕ್ಷಣ ಪರಿಕ್ಷಾ ಮಂಡಳಿಯು ನಡೆಸುವ ನೃತ್ಯ ಪರೀಕ್ಷೆಗಳ ಪರೀಕ್ಷಕರಾಗಿ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯಲ್ಲಿ ೨ ಅವಧಿಗಳಲ್ಲಿ ಸದಸ್ಯರಾಗಿ,
  • ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ
  • ಕರಾವಳಿಯ ಜನತೆಗೆ ಭರನಾಟ್ಯದ ಪರಂಪರೆಯನ್ನು ಪರಿಚಯಿಸಿ ಅದರಲ್ಲಿ ಅಭಿರುಚಿಬೆಳೆಸಲು ಅವರು ಅತ್ಯಂತ ಶ್ರಮವಹಿಸಿ ಅದರ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ತಮ್ಮ ಸಮಯದಲ್ಲಿ ಯಾರೂ ಗೌರವಿಸದ ವಿದ್ಯೆಯನ್ನು ತಾವು ಆದರಿಸಿ ಅದರಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿ ಸಾಮಾನ್ಯ ಜನರಿಗೆ ತಲುಪಿಸುವ ಮಹತ್ಕಾರ್ಯವನ್ನು ಮಾಡಿ ಅದೇ ಕಲೆಯಬದುಕಿನಲ್ಲಿ ತಾವೂ ಆತ್ಮತೃಪ್ತಿಯನ್ನು ಕಂಡುಕೊಂಡರು.

ಉಲ್ಲೇಖಗಳು[ಬದಲಾಯಿಸಿ]

  1. www.daijiworld.com Kadri Nrithya Vidya Nilaya – Celebrating 75 Years of Success[ಶಾಶ್ವತವಾಗಿ ಮಡಿದ ಕೊಂಡಿ]
  2. "Kanaja, ಯು.ಎಸ್. ಕೃಷ್ಣರಾವ್, ೧೧-೧೯೧೪-೧೦-೧-೨೦೦೭". Archived from the original on 2014-04-03. Retrieved 2014-02-04.

ಬಾಹ್ಯ ಸಂಪರ್ಕ: